Homeನ್ಯಾಯ ಪಥಬಹುಜನ ಭಾರತ: ಕೃಷ್ಣನ ಮೋಹಿಸಿದ ಕಮ್ಯೂನಿಸ್ಟ್ ಮೌಲಾನಾ! - ಡಿ.ಉಮಾಪತಿ

ಬಹುಜನ ಭಾರತ: ಕೃಷ್ಣನ ಮೋಹಿಸಿದ ಕಮ್ಯೂನಿಸ್ಟ್ ಮೌಲಾನಾ! – ಡಿ.ಉಮಾಪತಿ

ಕಾವ್ಯದಲ್ಲಿ ರಮ್ಯವಾದಿಯೂ ರಾಜಕಾರಣದಲ್ಲಿ ಕ್ರಾಂತಿವಾದಿಯೂ ಆಗಿದ್ದರು ಮೋಹಾನಿ

- Advertisement -
- Advertisement -

ಈ ಅಂಕಣ ಬರೆಯಲು ಕುಳಿತಿರುವ ಹೊತ್ತಿನಲ್ಲಿ ಜನಸಮುದಾಯಗಳ ಕವಿ ರಾಹತ್ ಇಂದೋರಿ ತೀರಿ ಹೋಗಿದ್ದಾರೆ. ಆಳುವವರು ಕಾರುತ್ತಿರುವ ಕೋಮುದ್ವೇಷಕ್ಕೆ ಸಿಡಿಲಿನಂತಹ ಕಾವ್ಯದ ಜವಾಬು ನೀಡಿ ಸೆಡ್ಡು ಹೊಡೆದಿದ್ದವರು. ಪೌರತ್ವ ಕಸಿಯುವ ಹುನ್ನಾರದ ವಿರುದ್ಧ ಕೆರಳಿದ್ದರು. ಎಲ್ಲರ ನೆತ್ತರು ಕಲೆತು ಬೆರೆತಿದೆ ಈ ಮಣ್ಣಿನಲಿ, ಹಿಂದುಸ್ತಾನ ಯಾರಪ್ಪನ ಮನೆಯ ಆಸ್ತಿಯಲ್ಲ ಎಂದು ಸಿಡಿದಿದ್ದರು. ಉಸಿರು ನಿಂತ ಮೇಲೆ ಪಕ್ಕಾ ಪ್ರತ್ಯೇಕ ಗುರುತನೊಂದ ಬರೆಯಿರಿ, ನನ್ನ ಕಳೇಬರದ ಮೇಲೆ ನೆತ್ತರಿನಿಂದ ಹಿಂದುಸ್ತಾನಿಯೆಂದು ಬರೆಯಿರಿ ಎಂದು ದುಗುಡ ದುಮ್ಮಾನದಿಂದ ಪ್ರತಿರೋಧದ ಕಿಡಿ ಹಾರಿಸಿ ಹಾಡಿದ್ದರು. ಪ್ರತಿಭಟನೆಯ ಸಶಕ್ತ ದನಿಯಾಗಿದ್ದರು. ಮಣ್ಣು ಗಾಳಿ ಮಾತು ಅನ್ನ ಅರಿವೆ ಎಲ್ಲವನ್ನೂ ಹಿಂದು-ಮುಸ್ಲಿಮ್ ಆಗಿಸಿ ವಿಷ ಹಿಂಡುತ್ತಿರುವ ಫ್ಯಾಸಿಸಮ್‌ನ ದುಷ್ಟ ಕಳೆ ದೇಶವನ್ನೆಲ್ಲ ಸುತ್ತಿ ಆವರಿಸಿಕೊಂಡಿರುವ ಈ ದುರಿತ ದಿನಗಳಲ್ಲಿ ಇಂದೂರಿಯಂತಹ ದನಿ ನಮ್ಮ ನಡುವೆ ಇರುವುದು ಕಾಲದ ಅಗತ್ಯವಾಗಿತ್ತು. ಆದರೆ ಮರಣಕ್ಕೆ ಅಡ್ಡ ನಿಲ್ಲಲಹುದೇ? ಗತಿಸಿರುವ ಇಂದೋರಿ ಜೀವಿಸಿರುವ ಇಂದೋರಿಗಿಂತ ಪ್ರಭಾವಿ ಎಂದು ಬಗೆದು ಮುಂದೆ ಸಾಗಬೇಕಿದೆ.

ರಾಹತ್ ಇಂದೋರಿ

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರಕ್ಕೆ ಅಡಿಗಲ್ಲಿರಿಸಲಾಗಿದೆ. ‘…ಮಥುರಾ ಕಾಶೀ ಬಾಕಿ ಹೈ…’ ಎಂದಿದ್ದವರು ಇನ್ನು ಕೃಷ್ಣನ ಮಥುರೆಗೆ ಮತ್ತು ವಿಶ್ವನಾಥನ ವಾರಾಣಸಿಯತ್ತ ಮುಖ ಮಾಡಲಿದ್ದಾರೆ. ದ್ವೇಷ ವಿಧ್ವಂಸ ಇನ್ನು ಅತ್ತ ಮೈವೆತ್ತಿ ಪಯಣಿಸಲಿದೆ.


ಇದನ್ನೂ ಓದಿ; ಉರ್ದು ಭಾಷೆಯ ಖ್ಯಾತ ಕವಿ ’ರಾಹತ್ ಇಂದೋರಿ’ ನಿಧನ


ಬಾಬಾಸಾಹೇಬ ಅಂಬೇಡ್ಕರ್ ಅವರು ಕೇಳಿದ ರಾಮ-ಕೃಷ್ಣರ ಒಗಟುಗಳಿಗೆ ಉತ್ತರ ಹೇಳುವವರು ಇನ್ನೂ ಮುಂದೆ ಬರಬೇಕಿದೆ. ಈ ಸಂದರ್ಭದ ಕೃಷ್ಣ ಜನ್ಮಾಷ್ಟಮಿಯಲ್ಲಿ ಹಜರತ್ ಮೋಹಾನಿ ಎಂಬ ಕುತೂಹಲಕರ ಸಮರಸವಾದಿಯ ನೆನೆಯಬೇಕಿದೆ.

ಮಥುರಾದ ಶ್ರೀಕೃಷ್ಣ, ಲೆನಿನ್ನನ ಕಮ್ಯೂನಿಸ್ಟ್ ರಷ್ಯಾ ಹಾಗೂ ತಾನು ನಂಬಿದ್ದ ಇಸ್ಲಾಮ್ ಧರ್ಮವನ್ನು ಒಟ್ಟೊಟ್ಟಿಗೆ ಇಟ್ಟರೆ ಈ ಮೂರೂ ಸಂಗತಿಗಳ ನಡುವೆ ವಿರಸ ವೈರುಧ್ಯವನ್ನು ಕಲ್ಪಿಸುತ್ತದೆ ಇಂದು ನಾವು ಬದುಕಿರುವ ವಿಷಮ ಸಮಾಜ. ಆದರೆ ಇವುಗಳ ನಡುವೆ ಸರಸ ಸಮರಸವನ್ನು ಕಂಡ ವಿಚಿತ್ರ ನಿಷ್ಠುರ ವ್ಯಕ್ತಿ ಮೋಹಾನಿ. ಕೃಷ್ಣ, ಕಮ್ಯೂನಿಸಮ್ ಹಾಗೂ ಇಸ್ಲಾಮನ್ನು ಒಟ್ಟೊಟ್ಟಿಗೆ ಆರಾಧಿಸಿದವರು. ಹಜರತ್ ಮೋಹಾನಿ ಎಂದೇ ಹೆಸರಾಗಿದ್ದ ಇವರ ಅಸಲಿ ಹೆಸರು ಸೈಯದ್ ಫಜಲುಲ್ ಹಸನ್. ಉತ್ತರ ಪ್ರದೇಶದ ಉನ್ನಾವ ಜಿಲ್ಲೆಯ ಮೋಹನದಲ್ಲಿ ಹುಟ್ಟಿದ ಕಾರಣ ಮೋಹಾನಿ ಎಂದು ಕರೆದುಕೊಂಡರು.

1875ರಿಂದ 1951 ರ ನಡುವೆ ಜೀವಿಸಿದ್ದ ಈತ ಸ್ವಾತಂತ್ರ‍್ಯ ಹೋರಾಟಗಾರರು ಉತ್ಕೃಷ್ಟ ಉರ್ದು ಕವಿಯೂ ಆಗಿದ್ದರು. ಮೋಹಾನಿಯವರ ಕಾವ್ಯಪ್ರತಿಭೆಯನ್ನು ವಿಮರ್ಶಕರು- ಬರೆಹಗಾರರು ಪ್ರಶಂಸಿಸಿದ್ದಾರೆ. ತನ್ನ ಕಾಲಘಟ್ಟ ಎಬ್ಬಿಸಿದ್ದ ರಾಜಕೀಯ ತರಂಗಗಳಿಗೆ ಕಾವ್ಯ, ಪತ್ರಿಕೋದ್ಯಮ, ಕ್ರಾಂತಿ ಪಥಗಳ ಮೂಲಕ ಪ್ರತಿಕ್ರಿಯಿಸಿದ್ದರು ಮೋಹಾನಿ. ಕಾವ್ಯದಲ್ಲಿ ರಮ್ಯವಾದಿಯೂ ರಾಜಕಾರಣದಲ್ಲಿ ಕ್ರಾಂತಿವಾದಿಯೂ ಆಗಿದ್ದರು. ಅವರು ಬರೆದ ಮತ್ತು ಅವರ ಕುರಿತು ಬರೆದ ಪುಸ್ತಕಗಳು ನೂರಾರು.

ಮೋಹಾನಿಯವರು ಬಂಡುಕೋರರು. ಒಪ್ಪಿತ ಮೌಲ್ಯಗಳು ಮತ್ತು ಸಂಪ್ರದಾಯಗಳ ಚೌಕಟ್ಟನ್ನು ಮುರಿದು ಬದುಕಿದವರು. ರಾಜಕೀಯ ಮತ್ತು ಸಾಮಾಜಿಕ ವಾಸ್ತವಗಳನ್ನು ತಮ್ಮ ಕಾಲದ ಕಾವ್ಯಕ್ಕೆ ಎಳೆದುತಂದು ಅಳವಡಿಸಿಕೊಂಡಿದ್ದವರು. ಕಡು ನಿಷ್ಠುರಿಯಾಗಿದ್ದವರು. ರಾಜಿ ಮಾಡಿಕೊಳ್ಳುವುದು ಅವರ ಜಾಯಮಾನಕ್ಕೆ ಒಗ್ಗುತ್ತಿರಲಿಲ್ಲ. ಲೋಕಮಾನ್ಯ ಬಾಲಗಂಗಾಧರ ತಿಲಕರು ಹೋಮ್ ರೂಲ್ ಬೇಕು ಎಂದಾಗ ಸಂಪೂರ್ಣ ಸ್ವರಾಜ್ಯವೇ ಆಗಬೇಕು ಎಂದಿದ್ದ ಹಠವಾದಿ. ಆದರೆ ತಿಲಕರನ್ನು ಮೆಚ್ಚಿ ತಮ್ಮ ಪತ್ರಿಕೆಯಲ್ಲಿ ಕವಿತೆಗಳನ್ನು ಬರೆದಿದ್ದರು. ಗಾಂಧೀ ಮತ್ತು ಜಿನ್ನಾ ಇಬ್ಬರನ್ನೂ ವಿರೋಧಿಸುತ್ತಿದ್ದವರು. ದೇಶವಿಭಜನೆಯ ಕಡುವಿರೋಧಿ.

ಮಹಾತ್ಮಾ ಗಾಂಧೀಜಿ ಪ್ರತಿಪಾದಿಸಿದ ಸ್ವಾವಲಂಬನೆಯ ಸಿದ್ಧಾಂತದ ಕಟು ವಿಮರ್ಶಕರಾಗಿದ್ದರು. ಬಡಜನರ ವಿಮುಕ್ತಿಯು ಚರಕ ಸುತ್ತಿ ನೂಲು ತೆಗೆಯುವುದರಲ್ಲಿ ಅಡಗಿಲ್ಲ ಎಂದು ವಾದಿಸಿದ್ದರು. ವ್ಲಾದಿಮಿರ್ ಲೆನಿನ್ ನೇತೃತ್ವದ 1917ರ ರಷ್ಯನ್ ಕ್ರಾಂತಿಯಿಂದ ಪ್ರೇರಣೆ ಪಡೆದಿದ್ದರು. ಅವರು ಲೆನಿನ್‌ರನ್ನು ಭೇಟಿಯಾಗಿದ್ದಾಗಿ ಹೇಳಲಾಗುತ್ತದೆ. ಆದರೆ ಅದಕ್ಕೆ ಪುರಾವೆಗಳಿಲ್ಲ. ಆದರೆ ಸ್ಟಾಲಿನ್‌ರನ್ನು ಭೇಟಿಯಾಗಿ ಗೆರಿಲ್ಲಾ ಕದನ ತಂತ್ರಗಳ ಕುರಿತು ವಿಚಾರವಿನಿಮಯ ನಡೆಸಿದ್ದು ಖಚಿತಪಟ್ಟಿದೆ.

ಅವರು ಸಂವಿಧಾನ ರಚನಾ ಸಭೆಯ ಸದಸ್ಯರಾಗಿದ್ದರು ಕೂಡ. ಬಾಬಾಸಾಹೇಬ ಅಂಬೇಡ್ಕರ್ ಅವರೊಡನೆ ಒಡನಾಡಿದ್ದವರು. ಸಂವಿಧಾನದ ಅಂತಿಮ ಕರಡಿಗೆ ಸಹಿ ಹಾಕದೆ ಉಳಿದ ಏಕೈಕ ಸದಸ್ಯರಿವರು. ದೇಶವಿಭಜನೆಯ ಕುರಿತ ತಮ್ಮ ಅಸಮ್ಮತಿ ದಾಖಲಿಸಲು ತಮ್ಮ ಅಂಕಿತ ಹಾಕಲಿಲ್ಲ ಎಂದು ಕೆಲವರು ಹೇಳಿದರೆ ಮುಸಲ್ಮಾನರ ಹಿತ ಕಡೆಗಣಿಸಲಾಗಿದೆ ಎಂಬ ಕಾರಣಕ್ಕಾಗಿ ಸಹಿ ಹಾಕಲಿಲ್ಲ ಎಂಬ ಎರಡು ಬಗೆಯ ಅಭಿಪ್ರಾಯಗಳಿವೆ.

ಇಸ್ಲಾಮಿಕ್ ಚಿಂತನೆಯ ಪ್ರಕಾಂಡ ಪಂಡಿತರೂ ಗಾಢ ಧಾರ್ಮಿಕರೂ ಆಗಿದ್ದ ಮೋಹಾನಿ ಅಗಾಧ ರೊಮ್ಯಾಂಟಿಕ್ ಕವಿಯಾಗಿ ಹೊಮ್ಮಿದ್ದು ವಿಚಿತ್ರ ವಿದ್ಯಮಾನ. ಉರ್ದು ಸಾಹಿತ್ಯ ವಿಮರ್ಶಕ ಅಖ್ತರ್ ಪಯ್ಯಾಮಿ ಅವರ ಅಭಿಮತವಿದು. ಮೋಹಾನಿ ಜೀವನಶೈಲಿ ಅತಿ ಸರಳ. ಸಮಾಜವಾದೀ ತತ್ವಗಳಿಂದ ಪ್ರೇರಿತರಾಗಿದ್ದರು. ಮೋಹಾನಿ ಉರ್ದು ಪತ್ರಿಕೆ ನಡೆಸುತ್ತಿದ್ದರು. ಈಜಿಪ್ಟ್ನಲ್ಲಿ ಶಿಕ್ಷಣ ಕುರಿತು ಬ್ರಿಟಿಷರ ವಸಾಹತು ನೀತಿಯನ್ನು ಪ್ರಶ್ನಿಸಿದ ಲೇಖನವೊಂದನ್ನು ಅಚ್ಚು ಮಾಡಿದ್ದರು. ಭಾರೀ ಒತ್ತಡದ ನಡುವೆಯೂ ಲೇಖನ ಬರೆದವರ ಹೆಸರನ್ನು ಮೋಹಾನಿ ಬಿಟ್ಟುಕೊಡಲಿಲ್ಲ. ಲೇಖನದ ಎಲ್ಲ ಜವಾಬ್ದಾರಿಯನ್ನು ತಾವೇ ಹೊತ್ತರು. ಅವರ ಮೇಲೆ ಬ್ರಿಟಿಷ್ ಸರ್ಕಾರ ರಾಜದ್ರೋಹದ ಆಪಾದನೆ ಹೊರಿಸಿತು. ಕಠಿಣ ಕಾರಾಗಾರ ಸಜೆ ವಿಧಿಸಿತು. ದಿನಕ್ಕೊಂದು ಮಣ (37.3ಕೆ.ಜಿ) ಗೋಧಿ ಬೀಸಿ ಹಿಟ್ಟು ಮಾಡುವ ದೈಹಿಕ ಶ್ರಮದ ಕಠಿಣ ಶಿಕ್ಷೆ.

1920ರ ದಶಕ. ಕಾನ್ಪುರದಲ್ಲಿ ಭಾರತೀಯ ಕಮ್ಯೂನಿಸ್ಟ್ ಪಕ್ಷದ ಮೊಟ್ಟಮೊದಲ ಸಮ್ಮೇಳನ ಜರುಗಿತ್ತು. ಅದರ ಸಂಘಟಕ ಮತ್ತು ಸ್ವಾಗತ ಸಮಿತಿಯ ಅಧ್ಯಕ್ಷ ಖುದ್ದು ಮೋಹಾನಿಯೇ ಆಗಿದ್ದರು. ಇಂಕ್ವಿಲಾಬ್ ಜಿಂದಾಬಾದ್ (ಕ್ರಾಂತಿ ಚಿರಾಯುವಾಗಲಿ) ಎಂಬ ಘೋಷಣೆಯನ್ನು ಮೋಹಾನಿ ರೂಪಿಸಿದ್ದು ಇದೇ ಸಮ್ಮೇಳನದ ಸಂದರ್ಭದಲ್ಲಿ ಎನ್ನುವವರಿದ್ದಾರೆ. ಸೂಫೀ ವಿಶ್ವಾಸಿ ಮತ್ತು ಕಮ್ಯೂನಿಸ್ಟ್ ಮುಸ್ಲಿಮ್ ಎಂಬುದಾಗಿ ತಮ್ಮನ್ನು ಮೋಹಾನಿ ಬಣ್ಣಿಸಿಕೊಂಡಿದ್ದಾರೆ.

ಮುಸಲ್ಮಾನರ ಪವಿತ್ರ ಹಜ್ ಯಾತ್ರೆಯನ್ನು ಮೋಹಾನಿ ಹನ್ನೊಂದು ಬಾರಿ ಕೈಗೊಂಡಿದ್ದವರು. ಆದರೆ ಹಿಂದೂ ದೈವ ಕೃಷ್ಣನ ಕುರಿತು ಆಳದ ಆರಾಧನೆ ಪ್ರಕಟಿಸುವ ಪದ್ಯಗಳನ್ನು ಬರೆದಿದ್ದಾರೆ. ಕೃಷ್ಣ ಜನ್ಮಾಷ್ಟಮಿ ಆಚರಿಸಲು ಮಥುರೆಗೆ ಹೋಗುತ್ತಿದ್ದರು. ಜೈಲಿನಲ್ಲಿ ಗೋಧಿ ಬೀಸುತ್ತಲೇ ರಚಿಸಿದ ಕವಿತೆಗಳನ್ನು ಕಂಠಪಾಠ ಮಾಡಿ, ಬಿಡುಗಡೆಯ ನಂತರ ಬರೆದಿಡುತ್ತಿದ್ದ ಕವಿ ಇವರು. ರಾಜದ್ರೋಹದ ಅಪರಾಧಕ್ಕೆ ಸಜೆಯಾಗಿ ಪುಣೆಯ ಯರವಾಡ ಜೈಲಿನಲ್ಲಿ ಬಂಧಿಯಾಗಿ ಜನ್ಮಾಷ್ಟಮಿಯಂದು ಮಥುರೆಗೆ ಹೋಗಲು ಹಂಬಲಿಸುತ್ತ ಬರೆದ ಕವಿತೆಗಳೂ ಉಂಟು.

ಮೋಹಾನಿಯವರ ಕೃಷ್ಣಭಕ್ತಿಯ ಕೆಲ ಉರ್ದು ಮತ್ತು ಅವಧಿ ಭಾಷೆಯ ಕವಿತೆಗಳ ಸ್ಥೂಲ ಅನುವಾದ ಹೀಗಿದೆ:
1
ಎಂದೂ ಕಳೆಯದ ಇರುಳಿನ ವಿರಹ, ಬೆಟ್ಟದಷ್ಟು ಭಾರ
ಹತಭಾಗ್ಯರಾದ ಎಮ್ಮನು ತೊರೆದು ತೆರಳಿಹನು
ನಿರ್ದಯೀ ಶ್ಯಾಮ ಮತ್ತೊಂದು ಸೀಮೆಗೆ,
ನಾಡು ನಿರ್ಜನ. ಸರ್ವಸ್ವವನು ಕಿತ್ತೆಸೆದು ಕದವಿಟ್ಟು,
ಚಿಲಕವಿಕ್ಕಿ ಉಳಿಯಬಾರದೇಕೆ ಹಜರತ್ ನಾವು ಮನೆಯೊಳಗೆ?
2
ಬನವಾರಿಯ ವಿನಾ ನಿದ್ದೆ ನೆಮ್ಮದಿಗಳಿಲ್ಲ ಎನಗೆ ಎಂದು
ಯಾರಿಗೆ ಹೇಳಲಿ?
ಮುರಾರಿಯಿಲ್ಲದೆ ಕಂಬನಿಯ ಧಾರೆಗಳು ಎನ್ನ ಇರುಳುಗಳು.
ಏನ ಮಾಡಿದರೇನು, ಇನ್ನೂ ಶೂನ್ಯವೆನ್ನ ಮನ.
ಗಿರಿಧಾರಿಯಿಲ್ಲದೆ ಇಳಿಯಲೊಲ್ಲದು ನಿದಿರೆ ಕಣ್ಣುಗಳಿಗೆ.
ನೋಡು ಗೆಳೆಯಾ ಯಾರೂ ಗುರುತು ಹಿಡಿಯರು ಎಮ್ಮನು,
ಬಲುವಾಗಿ ಬಣ್ಣಗೆಟ್ಟಿದ್ದೇವೆ ಹಜರತ್,
ಬನವಾರಿಯ ಕಾಣದೆ.


ಇದನ್ನೂ ಓದಿ: ಹಿಂದೂಸ್ಥಾನ ಯಾರಪ್ಪನದೂ ಅಲ್ಲ: ರಾಹತ್ ಇಂದೋರಿ ಅವರ ಒಂದು ಗಜಲ್ ಓದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...