Homeನ್ಯಾಯ ಪಥಬಹುಜನ ಭಾರತ: ಕೃಷ್ಣನ ಮೋಹಿಸಿದ ಕಮ್ಯೂನಿಸ್ಟ್ ಮೌಲಾನಾ! - ಡಿ.ಉಮಾಪತಿ

ಬಹುಜನ ಭಾರತ: ಕೃಷ್ಣನ ಮೋಹಿಸಿದ ಕಮ್ಯೂನಿಸ್ಟ್ ಮೌಲಾನಾ! – ಡಿ.ಉಮಾಪತಿ

ಕಾವ್ಯದಲ್ಲಿ ರಮ್ಯವಾದಿಯೂ ರಾಜಕಾರಣದಲ್ಲಿ ಕ್ರಾಂತಿವಾದಿಯೂ ಆಗಿದ್ದರು ಮೋಹಾನಿ

- Advertisement -
- Advertisement -

ಈ ಅಂಕಣ ಬರೆಯಲು ಕುಳಿತಿರುವ ಹೊತ್ತಿನಲ್ಲಿ ಜನಸಮುದಾಯಗಳ ಕವಿ ರಾಹತ್ ಇಂದೋರಿ ತೀರಿ ಹೋಗಿದ್ದಾರೆ. ಆಳುವವರು ಕಾರುತ್ತಿರುವ ಕೋಮುದ್ವೇಷಕ್ಕೆ ಸಿಡಿಲಿನಂತಹ ಕಾವ್ಯದ ಜವಾಬು ನೀಡಿ ಸೆಡ್ಡು ಹೊಡೆದಿದ್ದವರು. ಪೌರತ್ವ ಕಸಿಯುವ ಹುನ್ನಾರದ ವಿರುದ್ಧ ಕೆರಳಿದ್ದರು. ಎಲ್ಲರ ನೆತ್ತರು ಕಲೆತು ಬೆರೆತಿದೆ ಈ ಮಣ್ಣಿನಲಿ, ಹಿಂದುಸ್ತಾನ ಯಾರಪ್ಪನ ಮನೆಯ ಆಸ್ತಿಯಲ್ಲ ಎಂದು ಸಿಡಿದಿದ್ದರು. ಉಸಿರು ನಿಂತ ಮೇಲೆ ಪಕ್ಕಾ ಪ್ರತ್ಯೇಕ ಗುರುತನೊಂದ ಬರೆಯಿರಿ, ನನ್ನ ಕಳೇಬರದ ಮೇಲೆ ನೆತ್ತರಿನಿಂದ ಹಿಂದುಸ್ತಾನಿಯೆಂದು ಬರೆಯಿರಿ ಎಂದು ದುಗುಡ ದುಮ್ಮಾನದಿಂದ ಪ್ರತಿರೋಧದ ಕಿಡಿ ಹಾರಿಸಿ ಹಾಡಿದ್ದರು. ಪ್ರತಿಭಟನೆಯ ಸಶಕ್ತ ದನಿಯಾಗಿದ್ದರು. ಮಣ್ಣು ಗಾಳಿ ಮಾತು ಅನ್ನ ಅರಿವೆ ಎಲ್ಲವನ್ನೂ ಹಿಂದು-ಮುಸ್ಲಿಮ್ ಆಗಿಸಿ ವಿಷ ಹಿಂಡುತ್ತಿರುವ ಫ್ಯಾಸಿಸಮ್‌ನ ದುಷ್ಟ ಕಳೆ ದೇಶವನ್ನೆಲ್ಲ ಸುತ್ತಿ ಆವರಿಸಿಕೊಂಡಿರುವ ಈ ದುರಿತ ದಿನಗಳಲ್ಲಿ ಇಂದೂರಿಯಂತಹ ದನಿ ನಮ್ಮ ನಡುವೆ ಇರುವುದು ಕಾಲದ ಅಗತ್ಯವಾಗಿತ್ತು. ಆದರೆ ಮರಣಕ್ಕೆ ಅಡ್ಡ ನಿಲ್ಲಲಹುದೇ? ಗತಿಸಿರುವ ಇಂದೋರಿ ಜೀವಿಸಿರುವ ಇಂದೋರಿಗಿಂತ ಪ್ರಭಾವಿ ಎಂದು ಬಗೆದು ಮುಂದೆ ಸಾಗಬೇಕಿದೆ.

ರಾಹತ್ ಇಂದೋರಿ

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರಕ್ಕೆ ಅಡಿಗಲ್ಲಿರಿಸಲಾಗಿದೆ. ‘…ಮಥುರಾ ಕಾಶೀ ಬಾಕಿ ಹೈ…’ ಎಂದಿದ್ದವರು ಇನ್ನು ಕೃಷ್ಣನ ಮಥುರೆಗೆ ಮತ್ತು ವಿಶ್ವನಾಥನ ವಾರಾಣಸಿಯತ್ತ ಮುಖ ಮಾಡಲಿದ್ದಾರೆ. ದ್ವೇಷ ವಿಧ್ವಂಸ ಇನ್ನು ಅತ್ತ ಮೈವೆತ್ತಿ ಪಯಣಿಸಲಿದೆ.


ಇದನ್ನೂ ಓದಿ; ಉರ್ದು ಭಾಷೆಯ ಖ್ಯಾತ ಕವಿ ’ರಾಹತ್ ಇಂದೋರಿ’ ನಿಧನ


ಬಾಬಾಸಾಹೇಬ ಅಂಬೇಡ್ಕರ್ ಅವರು ಕೇಳಿದ ರಾಮ-ಕೃಷ್ಣರ ಒಗಟುಗಳಿಗೆ ಉತ್ತರ ಹೇಳುವವರು ಇನ್ನೂ ಮುಂದೆ ಬರಬೇಕಿದೆ. ಈ ಸಂದರ್ಭದ ಕೃಷ್ಣ ಜನ್ಮಾಷ್ಟಮಿಯಲ್ಲಿ ಹಜರತ್ ಮೋಹಾನಿ ಎಂಬ ಕುತೂಹಲಕರ ಸಮರಸವಾದಿಯ ನೆನೆಯಬೇಕಿದೆ.

ಮಥುರಾದ ಶ್ರೀಕೃಷ್ಣ, ಲೆನಿನ್ನನ ಕಮ್ಯೂನಿಸ್ಟ್ ರಷ್ಯಾ ಹಾಗೂ ತಾನು ನಂಬಿದ್ದ ಇಸ್ಲಾಮ್ ಧರ್ಮವನ್ನು ಒಟ್ಟೊಟ್ಟಿಗೆ ಇಟ್ಟರೆ ಈ ಮೂರೂ ಸಂಗತಿಗಳ ನಡುವೆ ವಿರಸ ವೈರುಧ್ಯವನ್ನು ಕಲ್ಪಿಸುತ್ತದೆ ಇಂದು ನಾವು ಬದುಕಿರುವ ವಿಷಮ ಸಮಾಜ. ಆದರೆ ಇವುಗಳ ನಡುವೆ ಸರಸ ಸಮರಸವನ್ನು ಕಂಡ ವಿಚಿತ್ರ ನಿಷ್ಠುರ ವ್ಯಕ್ತಿ ಮೋಹಾನಿ. ಕೃಷ್ಣ, ಕಮ್ಯೂನಿಸಮ್ ಹಾಗೂ ಇಸ್ಲಾಮನ್ನು ಒಟ್ಟೊಟ್ಟಿಗೆ ಆರಾಧಿಸಿದವರು. ಹಜರತ್ ಮೋಹಾನಿ ಎಂದೇ ಹೆಸರಾಗಿದ್ದ ಇವರ ಅಸಲಿ ಹೆಸರು ಸೈಯದ್ ಫಜಲುಲ್ ಹಸನ್. ಉತ್ತರ ಪ್ರದೇಶದ ಉನ್ನಾವ ಜಿಲ್ಲೆಯ ಮೋಹನದಲ್ಲಿ ಹುಟ್ಟಿದ ಕಾರಣ ಮೋಹಾನಿ ಎಂದು ಕರೆದುಕೊಂಡರು.

1875ರಿಂದ 1951 ರ ನಡುವೆ ಜೀವಿಸಿದ್ದ ಈತ ಸ್ವಾತಂತ್ರ‍್ಯ ಹೋರಾಟಗಾರರು ಉತ್ಕೃಷ್ಟ ಉರ್ದು ಕವಿಯೂ ಆಗಿದ್ದರು. ಮೋಹಾನಿಯವರ ಕಾವ್ಯಪ್ರತಿಭೆಯನ್ನು ವಿಮರ್ಶಕರು- ಬರೆಹಗಾರರು ಪ್ರಶಂಸಿಸಿದ್ದಾರೆ. ತನ್ನ ಕಾಲಘಟ್ಟ ಎಬ್ಬಿಸಿದ್ದ ರಾಜಕೀಯ ತರಂಗಗಳಿಗೆ ಕಾವ್ಯ, ಪತ್ರಿಕೋದ್ಯಮ, ಕ್ರಾಂತಿ ಪಥಗಳ ಮೂಲಕ ಪ್ರತಿಕ್ರಿಯಿಸಿದ್ದರು ಮೋಹಾನಿ. ಕಾವ್ಯದಲ್ಲಿ ರಮ್ಯವಾದಿಯೂ ರಾಜಕಾರಣದಲ್ಲಿ ಕ್ರಾಂತಿವಾದಿಯೂ ಆಗಿದ್ದರು. ಅವರು ಬರೆದ ಮತ್ತು ಅವರ ಕುರಿತು ಬರೆದ ಪುಸ್ತಕಗಳು ನೂರಾರು.

ಮೋಹಾನಿಯವರು ಬಂಡುಕೋರರು. ಒಪ್ಪಿತ ಮೌಲ್ಯಗಳು ಮತ್ತು ಸಂಪ್ರದಾಯಗಳ ಚೌಕಟ್ಟನ್ನು ಮುರಿದು ಬದುಕಿದವರು. ರಾಜಕೀಯ ಮತ್ತು ಸಾಮಾಜಿಕ ವಾಸ್ತವಗಳನ್ನು ತಮ್ಮ ಕಾಲದ ಕಾವ್ಯಕ್ಕೆ ಎಳೆದುತಂದು ಅಳವಡಿಸಿಕೊಂಡಿದ್ದವರು. ಕಡು ನಿಷ್ಠುರಿಯಾಗಿದ್ದವರು. ರಾಜಿ ಮಾಡಿಕೊಳ್ಳುವುದು ಅವರ ಜಾಯಮಾನಕ್ಕೆ ಒಗ್ಗುತ್ತಿರಲಿಲ್ಲ. ಲೋಕಮಾನ್ಯ ಬಾಲಗಂಗಾಧರ ತಿಲಕರು ಹೋಮ್ ರೂಲ್ ಬೇಕು ಎಂದಾಗ ಸಂಪೂರ್ಣ ಸ್ವರಾಜ್ಯವೇ ಆಗಬೇಕು ಎಂದಿದ್ದ ಹಠವಾದಿ. ಆದರೆ ತಿಲಕರನ್ನು ಮೆಚ್ಚಿ ತಮ್ಮ ಪತ್ರಿಕೆಯಲ್ಲಿ ಕವಿತೆಗಳನ್ನು ಬರೆದಿದ್ದರು. ಗಾಂಧೀ ಮತ್ತು ಜಿನ್ನಾ ಇಬ್ಬರನ್ನೂ ವಿರೋಧಿಸುತ್ತಿದ್ದವರು. ದೇಶವಿಭಜನೆಯ ಕಡುವಿರೋಧಿ.

ಮಹಾತ್ಮಾ ಗಾಂಧೀಜಿ ಪ್ರತಿಪಾದಿಸಿದ ಸ್ವಾವಲಂಬನೆಯ ಸಿದ್ಧಾಂತದ ಕಟು ವಿಮರ್ಶಕರಾಗಿದ್ದರು. ಬಡಜನರ ವಿಮುಕ್ತಿಯು ಚರಕ ಸುತ್ತಿ ನೂಲು ತೆಗೆಯುವುದರಲ್ಲಿ ಅಡಗಿಲ್ಲ ಎಂದು ವಾದಿಸಿದ್ದರು. ವ್ಲಾದಿಮಿರ್ ಲೆನಿನ್ ನೇತೃತ್ವದ 1917ರ ರಷ್ಯನ್ ಕ್ರಾಂತಿಯಿಂದ ಪ್ರೇರಣೆ ಪಡೆದಿದ್ದರು. ಅವರು ಲೆನಿನ್‌ರನ್ನು ಭೇಟಿಯಾಗಿದ್ದಾಗಿ ಹೇಳಲಾಗುತ್ತದೆ. ಆದರೆ ಅದಕ್ಕೆ ಪುರಾವೆಗಳಿಲ್ಲ. ಆದರೆ ಸ್ಟಾಲಿನ್‌ರನ್ನು ಭೇಟಿಯಾಗಿ ಗೆರಿಲ್ಲಾ ಕದನ ತಂತ್ರಗಳ ಕುರಿತು ವಿಚಾರವಿನಿಮಯ ನಡೆಸಿದ್ದು ಖಚಿತಪಟ್ಟಿದೆ.

ಅವರು ಸಂವಿಧಾನ ರಚನಾ ಸಭೆಯ ಸದಸ್ಯರಾಗಿದ್ದರು ಕೂಡ. ಬಾಬಾಸಾಹೇಬ ಅಂಬೇಡ್ಕರ್ ಅವರೊಡನೆ ಒಡನಾಡಿದ್ದವರು. ಸಂವಿಧಾನದ ಅಂತಿಮ ಕರಡಿಗೆ ಸಹಿ ಹಾಕದೆ ಉಳಿದ ಏಕೈಕ ಸದಸ್ಯರಿವರು. ದೇಶವಿಭಜನೆಯ ಕುರಿತ ತಮ್ಮ ಅಸಮ್ಮತಿ ದಾಖಲಿಸಲು ತಮ್ಮ ಅಂಕಿತ ಹಾಕಲಿಲ್ಲ ಎಂದು ಕೆಲವರು ಹೇಳಿದರೆ ಮುಸಲ್ಮಾನರ ಹಿತ ಕಡೆಗಣಿಸಲಾಗಿದೆ ಎಂಬ ಕಾರಣಕ್ಕಾಗಿ ಸಹಿ ಹಾಕಲಿಲ್ಲ ಎಂಬ ಎರಡು ಬಗೆಯ ಅಭಿಪ್ರಾಯಗಳಿವೆ.

ಇಸ್ಲಾಮಿಕ್ ಚಿಂತನೆಯ ಪ್ರಕಾಂಡ ಪಂಡಿತರೂ ಗಾಢ ಧಾರ್ಮಿಕರೂ ಆಗಿದ್ದ ಮೋಹಾನಿ ಅಗಾಧ ರೊಮ್ಯಾಂಟಿಕ್ ಕವಿಯಾಗಿ ಹೊಮ್ಮಿದ್ದು ವಿಚಿತ್ರ ವಿದ್ಯಮಾನ. ಉರ್ದು ಸಾಹಿತ್ಯ ವಿಮರ್ಶಕ ಅಖ್ತರ್ ಪಯ್ಯಾಮಿ ಅವರ ಅಭಿಮತವಿದು. ಮೋಹಾನಿ ಜೀವನಶೈಲಿ ಅತಿ ಸರಳ. ಸಮಾಜವಾದೀ ತತ್ವಗಳಿಂದ ಪ್ರೇರಿತರಾಗಿದ್ದರು. ಮೋಹಾನಿ ಉರ್ದು ಪತ್ರಿಕೆ ನಡೆಸುತ್ತಿದ್ದರು. ಈಜಿಪ್ಟ್ನಲ್ಲಿ ಶಿಕ್ಷಣ ಕುರಿತು ಬ್ರಿಟಿಷರ ವಸಾಹತು ನೀತಿಯನ್ನು ಪ್ರಶ್ನಿಸಿದ ಲೇಖನವೊಂದನ್ನು ಅಚ್ಚು ಮಾಡಿದ್ದರು. ಭಾರೀ ಒತ್ತಡದ ನಡುವೆಯೂ ಲೇಖನ ಬರೆದವರ ಹೆಸರನ್ನು ಮೋಹಾನಿ ಬಿಟ್ಟುಕೊಡಲಿಲ್ಲ. ಲೇಖನದ ಎಲ್ಲ ಜವಾಬ್ದಾರಿಯನ್ನು ತಾವೇ ಹೊತ್ತರು. ಅವರ ಮೇಲೆ ಬ್ರಿಟಿಷ್ ಸರ್ಕಾರ ರಾಜದ್ರೋಹದ ಆಪಾದನೆ ಹೊರಿಸಿತು. ಕಠಿಣ ಕಾರಾಗಾರ ಸಜೆ ವಿಧಿಸಿತು. ದಿನಕ್ಕೊಂದು ಮಣ (37.3ಕೆ.ಜಿ) ಗೋಧಿ ಬೀಸಿ ಹಿಟ್ಟು ಮಾಡುವ ದೈಹಿಕ ಶ್ರಮದ ಕಠಿಣ ಶಿಕ್ಷೆ.

1920ರ ದಶಕ. ಕಾನ್ಪುರದಲ್ಲಿ ಭಾರತೀಯ ಕಮ್ಯೂನಿಸ್ಟ್ ಪಕ್ಷದ ಮೊಟ್ಟಮೊದಲ ಸಮ್ಮೇಳನ ಜರುಗಿತ್ತು. ಅದರ ಸಂಘಟಕ ಮತ್ತು ಸ್ವಾಗತ ಸಮಿತಿಯ ಅಧ್ಯಕ್ಷ ಖುದ್ದು ಮೋಹಾನಿಯೇ ಆಗಿದ್ದರು. ಇಂಕ್ವಿಲಾಬ್ ಜಿಂದಾಬಾದ್ (ಕ್ರಾಂತಿ ಚಿರಾಯುವಾಗಲಿ) ಎಂಬ ಘೋಷಣೆಯನ್ನು ಮೋಹಾನಿ ರೂಪಿಸಿದ್ದು ಇದೇ ಸಮ್ಮೇಳನದ ಸಂದರ್ಭದಲ್ಲಿ ಎನ್ನುವವರಿದ್ದಾರೆ. ಸೂಫೀ ವಿಶ್ವಾಸಿ ಮತ್ತು ಕಮ್ಯೂನಿಸ್ಟ್ ಮುಸ್ಲಿಮ್ ಎಂಬುದಾಗಿ ತಮ್ಮನ್ನು ಮೋಹಾನಿ ಬಣ್ಣಿಸಿಕೊಂಡಿದ್ದಾರೆ.

ಮುಸಲ್ಮಾನರ ಪವಿತ್ರ ಹಜ್ ಯಾತ್ರೆಯನ್ನು ಮೋಹಾನಿ ಹನ್ನೊಂದು ಬಾರಿ ಕೈಗೊಂಡಿದ್ದವರು. ಆದರೆ ಹಿಂದೂ ದೈವ ಕೃಷ್ಣನ ಕುರಿತು ಆಳದ ಆರಾಧನೆ ಪ್ರಕಟಿಸುವ ಪದ್ಯಗಳನ್ನು ಬರೆದಿದ್ದಾರೆ. ಕೃಷ್ಣ ಜನ್ಮಾಷ್ಟಮಿ ಆಚರಿಸಲು ಮಥುರೆಗೆ ಹೋಗುತ್ತಿದ್ದರು. ಜೈಲಿನಲ್ಲಿ ಗೋಧಿ ಬೀಸುತ್ತಲೇ ರಚಿಸಿದ ಕವಿತೆಗಳನ್ನು ಕಂಠಪಾಠ ಮಾಡಿ, ಬಿಡುಗಡೆಯ ನಂತರ ಬರೆದಿಡುತ್ತಿದ್ದ ಕವಿ ಇವರು. ರಾಜದ್ರೋಹದ ಅಪರಾಧಕ್ಕೆ ಸಜೆಯಾಗಿ ಪುಣೆಯ ಯರವಾಡ ಜೈಲಿನಲ್ಲಿ ಬಂಧಿಯಾಗಿ ಜನ್ಮಾಷ್ಟಮಿಯಂದು ಮಥುರೆಗೆ ಹೋಗಲು ಹಂಬಲಿಸುತ್ತ ಬರೆದ ಕವಿತೆಗಳೂ ಉಂಟು.

ಮೋಹಾನಿಯವರ ಕೃಷ್ಣಭಕ್ತಿಯ ಕೆಲ ಉರ್ದು ಮತ್ತು ಅವಧಿ ಭಾಷೆಯ ಕವಿತೆಗಳ ಸ್ಥೂಲ ಅನುವಾದ ಹೀಗಿದೆ:
1
ಎಂದೂ ಕಳೆಯದ ಇರುಳಿನ ವಿರಹ, ಬೆಟ್ಟದಷ್ಟು ಭಾರ
ಹತಭಾಗ್ಯರಾದ ಎಮ್ಮನು ತೊರೆದು ತೆರಳಿಹನು
ನಿರ್ದಯೀ ಶ್ಯಾಮ ಮತ್ತೊಂದು ಸೀಮೆಗೆ,
ನಾಡು ನಿರ್ಜನ. ಸರ್ವಸ್ವವನು ಕಿತ್ತೆಸೆದು ಕದವಿಟ್ಟು,
ಚಿಲಕವಿಕ್ಕಿ ಉಳಿಯಬಾರದೇಕೆ ಹಜರತ್ ನಾವು ಮನೆಯೊಳಗೆ?
2
ಬನವಾರಿಯ ವಿನಾ ನಿದ್ದೆ ನೆಮ್ಮದಿಗಳಿಲ್ಲ ಎನಗೆ ಎಂದು
ಯಾರಿಗೆ ಹೇಳಲಿ?
ಮುರಾರಿಯಿಲ್ಲದೆ ಕಂಬನಿಯ ಧಾರೆಗಳು ಎನ್ನ ಇರುಳುಗಳು.
ಏನ ಮಾಡಿದರೇನು, ಇನ್ನೂ ಶೂನ್ಯವೆನ್ನ ಮನ.
ಗಿರಿಧಾರಿಯಿಲ್ಲದೆ ಇಳಿಯಲೊಲ್ಲದು ನಿದಿರೆ ಕಣ್ಣುಗಳಿಗೆ.
ನೋಡು ಗೆಳೆಯಾ ಯಾರೂ ಗುರುತು ಹಿಡಿಯರು ಎಮ್ಮನು,
ಬಲುವಾಗಿ ಬಣ್ಣಗೆಟ್ಟಿದ್ದೇವೆ ಹಜರತ್,
ಬನವಾರಿಯ ಕಾಣದೆ.


ಇದನ್ನೂ ಓದಿ: ಹಿಂದೂಸ್ಥಾನ ಯಾರಪ್ಪನದೂ ಅಲ್ಲ: ರಾಹತ್ ಇಂದೋರಿ ಅವರ ಒಂದು ಗಜಲ್ ಓದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...