Homeನ್ಯಾಯ ಪಥಬಹುಜನ ಭಾರತ: ಕೃಷ್ಣನ ಮೋಹಿಸಿದ ಕಮ್ಯೂನಿಸ್ಟ್ ಮೌಲಾನಾ! - ಡಿ.ಉಮಾಪತಿ

ಬಹುಜನ ಭಾರತ: ಕೃಷ್ಣನ ಮೋಹಿಸಿದ ಕಮ್ಯೂನಿಸ್ಟ್ ಮೌಲಾನಾ! – ಡಿ.ಉಮಾಪತಿ

ಕಾವ್ಯದಲ್ಲಿ ರಮ್ಯವಾದಿಯೂ ರಾಜಕಾರಣದಲ್ಲಿ ಕ್ರಾಂತಿವಾದಿಯೂ ಆಗಿದ್ದರು ಮೋಹಾನಿ

- Advertisement -
- Advertisement -

ಈ ಅಂಕಣ ಬರೆಯಲು ಕುಳಿತಿರುವ ಹೊತ್ತಿನಲ್ಲಿ ಜನಸಮುದಾಯಗಳ ಕವಿ ರಾಹತ್ ಇಂದೋರಿ ತೀರಿ ಹೋಗಿದ್ದಾರೆ. ಆಳುವವರು ಕಾರುತ್ತಿರುವ ಕೋಮುದ್ವೇಷಕ್ಕೆ ಸಿಡಿಲಿನಂತಹ ಕಾವ್ಯದ ಜವಾಬು ನೀಡಿ ಸೆಡ್ಡು ಹೊಡೆದಿದ್ದವರು. ಪೌರತ್ವ ಕಸಿಯುವ ಹುನ್ನಾರದ ವಿರುದ್ಧ ಕೆರಳಿದ್ದರು. ಎಲ್ಲರ ನೆತ್ತರು ಕಲೆತು ಬೆರೆತಿದೆ ಈ ಮಣ್ಣಿನಲಿ, ಹಿಂದುಸ್ತಾನ ಯಾರಪ್ಪನ ಮನೆಯ ಆಸ್ತಿಯಲ್ಲ ಎಂದು ಸಿಡಿದಿದ್ದರು. ಉಸಿರು ನಿಂತ ಮೇಲೆ ಪಕ್ಕಾ ಪ್ರತ್ಯೇಕ ಗುರುತನೊಂದ ಬರೆಯಿರಿ, ನನ್ನ ಕಳೇಬರದ ಮೇಲೆ ನೆತ್ತರಿನಿಂದ ಹಿಂದುಸ್ತಾನಿಯೆಂದು ಬರೆಯಿರಿ ಎಂದು ದುಗುಡ ದುಮ್ಮಾನದಿಂದ ಪ್ರತಿರೋಧದ ಕಿಡಿ ಹಾರಿಸಿ ಹಾಡಿದ್ದರು. ಪ್ರತಿಭಟನೆಯ ಸಶಕ್ತ ದನಿಯಾಗಿದ್ದರು. ಮಣ್ಣು ಗಾಳಿ ಮಾತು ಅನ್ನ ಅರಿವೆ ಎಲ್ಲವನ್ನೂ ಹಿಂದು-ಮುಸ್ಲಿಮ್ ಆಗಿಸಿ ವಿಷ ಹಿಂಡುತ್ತಿರುವ ಫ್ಯಾಸಿಸಮ್‌ನ ದುಷ್ಟ ಕಳೆ ದೇಶವನ್ನೆಲ್ಲ ಸುತ್ತಿ ಆವರಿಸಿಕೊಂಡಿರುವ ಈ ದುರಿತ ದಿನಗಳಲ್ಲಿ ಇಂದೂರಿಯಂತಹ ದನಿ ನಮ್ಮ ನಡುವೆ ಇರುವುದು ಕಾಲದ ಅಗತ್ಯವಾಗಿತ್ತು. ಆದರೆ ಮರಣಕ್ಕೆ ಅಡ್ಡ ನಿಲ್ಲಲಹುದೇ? ಗತಿಸಿರುವ ಇಂದೋರಿ ಜೀವಿಸಿರುವ ಇಂದೋರಿಗಿಂತ ಪ್ರಭಾವಿ ಎಂದು ಬಗೆದು ಮುಂದೆ ಸಾಗಬೇಕಿದೆ.

ರಾಹತ್ ಇಂದೋರಿ

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರಕ್ಕೆ ಅಡಿಗಲ್ಲಿರಿಸಲಾಗಿದೆ. ‘…ಮಥುರಾ ಕಾಶೀ ಬಾಕಿ ಹೈ…’ ಎಂದಿದ್ದವರು ಇನ್ನು ಕೃಷ್ಣನ ಮಥುರೆಗೆ ಮತ್ತು ವಿಶ್ವನಾಥನ ವಾರಾಣಸಿಯತ್ತ ಮುಖ ಮಾಡಲಿದ್ದಾರೆ. ದ್ವೇಷ ವಿಧ್ವಂಸ ಇನ್ನು ಅತ್ತ ಮೈವೆತ್ತಿ ಪಯಣಿಸಲಿದೆ.


ಇದನ್ನೂ ಓದಿ; ಉರ್ದು ಭಾಷೆಯ ಖ್ಯಾತ ಕವಿ ’ರಾಹತ್ ಇಂದೋರಿ’ ನಿಧನ


ಬಾಬಾಸಾಹೇಬ ಅಂಬೇಡ್ಕರ್ ಅವರು ಕೇಳಿದ ರಾಮ-ಕೃಷ್ಣರ ಒಗಟುಗಳಿಗೆ ಉತ್ತರ ಹೇಳುವವರು ಇನ್ನೂ ಮುಂದೆ ಬರಬೇಕಿದೆ. ಈ ಸಂದರ್ಭದ ಕೃಷ್ಣ ಜನ್ಮಾಷ್ಟಮಿಯಲ್ಲಿ ಹಜರತ್ ಮೋಹಾನಿ ಎಂಬ ಕುತೂಹಲಕರ ಸಮರಸವಾದಿಯ ನೆನೆಯಬೇಕಿದೆ.

ಮಥುರಾದ ಶ್ರೀಕೃಷ್ಣ, ಲೆನಿನ್ನನ ಕಮ್ಯೂನಿಸ್ಟ್ ರಷ್ಯಾ ಹಾಗೂ ತಾನು ನಂಬಿದ್ದ ಇಸ್ಲಾಮ್ ಧರ್ಮವನ್ನು ಒಟ್ಟೊಟ್ಟಿಗೆ ಇಟ್ಟರೆ ಈ ಮೂರೂ ಸಂಗತಿಗಳ ನಡುವೆ ವಿರಸ ವೈರುಧ್ಯವನ್ನು ಕಲ್ಪಿಸುತ್ತದೆ ಇಂದು ನಾವು ಬದುಕಿರುವ ವಿಷಮ ಸಮಾಜ. ಆದರೆ ಇವುಗಳ ನಡುವೆ ಸರಸ ಸಮರಸವನ್ನು ಕಂಡ ವಿಚಿತ್ರ ನಿಷ್ಠುರ ವ್ಯಕ್ತಿ ಮೋಹಾನಿ. ಕೃಷ್ಣ, ಕಮ್ಯೂನಿಸಮ್ ಹಾಗೂ ಇಸ್ಲಾಮನ್ನು ಒಟ್ಟೊಟ್ಟಿಗೆ ಆರಾಧಿಸಿದವರು. ಹಜರತ್ ಮೋಹಾನಿ ಎಂದೇ ಹೆಸರಾಗಿದ್ದ ಇವರ ಅಸಲಿ ಹೆಸರು ಸೈಯದ್ ಫಜಲುಲ್ ಹಸನ್. ಉತ್ತರ ಪ್ರದೇಶದ ಉನ್ನಾವ ಜಿಲ್ಲೆಯ ಮೋಹನದಲ್ಲಿ ಹುಟ್ಟಿದ ಕಾರಣ ಮೋಹಾನಿ ಎಂದು ಕರೆದುಕೊಂಡರು.

1875ರಿಂದ 1951 ರ ನಡುವೆ ಜೀವಿಸಿದ್ದ ಈತ ಸ್ವಾತಂತ್ರ‍್ಯ ಹೋರಾಟಗಾರರು ಉತ್ಕೃಷ್ಟ ಉರ್ದು ಕವಿಯೂ ಆಗಿದ್ದರು. ಮೋಹಾನಿಯವರ ಕಾವ್ಯಪ್ರತಿಭೆಯನ್ನು ವಿಮರ್ಶಕರು- ಬರೆಹಗಾರರು ಪ್ರಶಂಸಿಸಿದ್ದಾರೆ. ತನ್ನ ಕಾಲಘಟ್ಟ ಎಬ್ಬಿಸಿದ್ದ ರಾಜಕೀಯ ತರಂಗಗಳಿಗೆ ಕಾವ್ಯ, ಪತ್ರಿಕೋದ್ಯಮ, ಕ್ರಾಂತಿ ಪಥಗಳ ಮೂಲಕ ಪ್ರತಿಕ್ರಿಯಿಸಿದ್ದರು ಮೋಹಾನಿ. ಕಾವ್ಯದಲ್ಲಿ ರಮ್ಯವಾದಿಯೂ ರಾಜಕಾರಣದಲ್ಲಿ ಕ್ರಾಂತಿವಾದಿಯೂ ಆಗಿದ್ದರು. ಅವರು ಬರೆದ ಮತ್ತು ಅವರ ಕುರಿತು ಬರೆದ ಪುಸ್ತಕಗಳು ನೂರಾರು.

ಮೋಹಾನಿಯವರು ಬಂಡುಕೋರರು. ಒಪ್ಪಿತ ಮೌಲ್ಯಗಳು ಮತ್ತು ಸಂಪ್ರದಾಯಗಳ ಚೌಕಟ್ಟನ್ನು ಮುರಿದು ಬದುಕಿದವರು. ರಾಜಕೀಯ ಮತ್ತು ಸಾಮಾಜಿಕ ವಾಸ್ತವಗಳನ್ನು ತಮ್ಮ ಕಾಲದ ಕಾವ್ಯಕ್ಕೆ ಎಳೆದುತಂದು ಅಳವಡಿಸಿಕೊಂಡಿದ್ದವರು. ಕಡು ನಿಷ್ಠುರಿಯಾಗಿದ್ದವರು. ರಾಜಿ ಮಾಡಿಕೊಳ್ಳುವುದು ಅವರ ಜಾಯಮಾನಕ್ಕೆ ಒಗ್ಗುತ್ತಿರಲಿಲ್ಲ. ಲೋಕಮಾನ್ಯ ಬಾಲಗಂಗಾಧರ ತಿಲಕರು ಹೋಮ್ ರೂಲ್ ಬೇಕು ಎಂದಾಗ ಸಂಪೂರ್ಣ ಸ್ವರಾಜ್ಯವೇ ಆಗಬೇಕು ಎಂದಿದ್ದ ಹಠವಾದಿ. ಆದರೆ ತಿಲಕರನ್ನು ಮೆಚ್ಚಿ ತಮ್ಮ ಪತ್ರಿಕೆಯಲ್ಲಿ ಕವಿತೆಗಳನ್ನು ಬರೆದಿದ್ದರು. ಗಾಂಧೀ ಮತ್ತು ಜಿನ್ನಾ ಇಬ್ಬರನ್ನೂ ವಿರೋಧಿಸುತ್ತಿದ್ದವರು. ದೇಶವಿಭಜನೆಯ ಕಡುವಿರೋಧಿ.

ಮಹಾತ್ಮಾ ಗಾಂಧೀಜಿ ಪ್ರತಿಪಾದಿಸಿದ ಸ್ವಾವಲಂಬನೆಯ ಸಿದ್ಧಾಂತದ ಕಟು ವಿಮರ್ಶಕರಾಗಿದ್ದರು. ಬಡಜನರ ವಿಮುಕ್ತಿಯು ಚರಕ ಸುತ್ತಿ ನೂಲು ತೆಗೆಯುವುದರಲ್ಲಿ ಅಡಗಿಲ್ಲ ಎಂದು ವಾದಿಸಿದ್ದರು. ವ್ಲಾದಿಮಿರ್ ಲೆನಿನ್ ನೇತೃತ್ವದ 1917ರ ರಷ್ಯನ್ ಕ್ರಾಂತಿಯಿಂದ ಪ್ರೇರಣೆ ಪಡೆದಿದ್ದರು. ಅವರು ಲೆನಿನ್‌ರನ್ನು ಭೇಟಿಯಾಗಿದ್ದಾಗಿ ಹೇಳಲಾಗುತ್ತದೆ. ಆದರೆ ಅದಕ್ಕೆ ಪುರಾವೆಗಳಿಲ್ಲ. ಆದರೆ ಸ್ಟಾಲಿನ್‌ರನ್ನು ಭೇಟಿಯಾಗಿ ಗೆರಿಲ್ಲಾ ಕದನ ತಂತ್ರಗಳ ಕುರಿತು ವಿಚಾರವಿನಿಮಯ ನಡೆಸಿದ್ದು ಖಚಿತಪಟ್ಟಿದೆ.

ಅವರು ಸಂವಿಧಾನ ರಚನಾ ಸಭೆಯ ಸದಸ್ಯರಾಗಿದ್ದರು ಕೂಡ. ಬಾಬಾಸಾಹೇಬ ಅಂಬೇಡ್ಕರ್ ಅವರೊಡನೆ ಒಡನಾಡಿದ್ದವರು. ಸಂವಿಧಾನದ ಅಂತಿಮ ಕರಡಿಗೆ ಸಹಿ ಹಾಕದೆ ಉಳಿದ ಏಕೈಕ ಸದಸ್ಯರಿವರು. ದೇಶವಿಭಜನೆಯ ಕುರಿತ ತಮ್ಮ ಅಸಮ್ಮತಿ ದಾಖಲಿಸಲು ತಮ್ಮ ಅಂಕಿತ ಹಾಕಲಿಲ್ಲ ಎಂದು ಕೆಲವರು ಹೇಳಿದರೆ ಮುಸಲ್ಮಾನರ ಹಿತ ಕಡೆಗಣಿಸಲಾಗಿದೆ ಎಂಬ ಕಾರಣಕ್ಕಾಗಿ ಸಹಿ ಹಾಕಲಿಲ್ಲ ಎಂಬ ಎರಡು ಬಗೆಯ ಅಭಿಪ್ರಾಯಗಳಿವೆ.

ಇಸ್ಲಾಮಿಕ್ ಚಿಂತನೆಯ ಪ್ರಕಾಂಡ ಪಂಡಿತರೂ ಗಾಢ ಧಾರ್ಮಿಕರೂ ಆಗಿದ್ದ ಮೋಹಾನಿ ಅಗಾಧ ರೊಮ್ಯಾಂಟಿಕ್ ಕವಿಯಾಗಿ ಹೊಮ್ಮಿದ್ದು ವಿಚಿತ್ರ ವಿದ್ಯಮಾನ. ಉರ್ದು ಸಾಹಿತ್ಯ ವಿಮರ್ಶಕ ಅಖ್ತರ್ ಪಯ್ಯಾಮಿ ಅವರ ಅಭಿಮತವಿದು. ಮೋಹಾನಿ ಜೀವನಶೈಲಿ ಅತಿ ಸರಳ. ಸಮಾಜವಾದೀ ತತ್ವಗಳಿಂದ ಪ್ರೇರಿತರಾಗಿದ್ದರು. ಮೋಹಾನಿ ಉರ್ದು ಪತ್ರಿಕೆ ನಡೆಸುತ್ತಿದ್ದರು. ಈಜಿಪ್ಟ್ನಲ್ಲಿ ಶಿಕ್ಷಣ ಕುರಿತು ಬ್ರಿಟಿಷರ ವಸಾಹತು ನೀತಿಯನ್ನು ಪ್ರಶ್ನಿಸಿದ ಲೇಖನವೊಂದನ್ನು ಅಚ್ಚು ಮಾಡಿದ್ದರು. ಭಾರೀ ಒತ್ತಡದ ನಡುವೆಯೂ ಲೇಖನ ಬರೆದವರ ಹೆಸರನ್ನು ಮೋಹಾನಿ ಬಿಟ್ಟುಕೊಡಲಿಲ್ಲ. ಲೇಖನದ ಎಲ್ಲ ಜವಾಬ್ದಾರಿಯನ್ನು ತಾವೇ ಹೊತ್ತರು. ಅವರ ಮೇಲೆ ಬ್ರಿಟಿಷ್ ಸರ್ಕಾರ ರಾಜದ್ರೋಹದ ಆಪಾದನೆ ಹೊರಿಸಿತು. ಕಠಿಣ ಕಾರಾಗಾರ ಸಜೆ ವಿಧಿಸಿತು. ದಿನಕ್ಕೊಂದು ಮಣ (37.3ಕೆ.ಜಿ) ಗೋಧಿ ಬೀಸಿ ಹಿಟ್ಟು ಮಾಡುವ ದೈಹಿಕ ಶ್ರಮದ ಕಠಿಣ ಶಿಕ್ಷೆ.

1920ರ ದಶಕ. ಕಾನ್ಪುರದಲ್ಲಿ ಭಾರತೀಯ ಕಮ್ಯೂನಿಸ್ಟ್ ಪಕ್ಷದ ಮೊಟ್ಟಮೊದಲ ಸಮ್ಮೇಳನ ಜರುಗಿತ್ತು. ಅದರ ಸಂಘಟಕ ಮತ್ತು ಸ್ವಾಗತ ಸಮಿತಿಯ ಅಧ್ಯಕ್ಷ ಖುದ್ದು ಮೋಹಾನಿಯೇ ಆಗಿದ್ದರು. ಇಂಕ್ವಿಲಾಬ್ ಜಿಂದಾಬಾದ್ (ಕ್ರಾಂತಿ ಚಿರಾಯುವಾಗಲಿ) ಎಂಬ ಘೋಷಣೆಯನ್ನು ಮೋಹಾನಿ ರೂಪಿಸಿದ್ದು ಇದೇ ಸಮ್ಮೇಳನದ ಸಂದರ್ಭದಲ್ಲಿ ಎನ್ನುವವರಿದ್ದಾರೆ. ಸೂಫೀ ವಿಶ್ವಾಸಿ ಮತ್ತು ಕಮ್ಯೂನಿಸ್ಟ್ ಮುಸ್ಲಿಮ್ ಎಂಬುದಾಗಿ ತಮ್ಮನ್ನು ಮೋಹಾನಿ ಬಣ್ಣಿಸಿಕೊಂಡಿದ್ದಾರೆ.

ಮುಸಲ್ಮಾನರ ಪವಿತ್ರ ಹಜ್ ಯಾತ್ರೆಯನ್ನು ಮೋಹಾನಿ ಹನ್ನೊಂದು ಬಾರಿ ಕೈಗೊಂಡಿದ್ದವರು. ಆದರೆ ಹಿಂದೂ ದೈವ ಕೃಷ್ಣನ ಕುರಿತು ಆಳದ ಆರಾಧನೆ ಪ್ರಕಟಿಸುವ ಪದ್ಯಗಳನ್ನು ಬರೆದಿದ್ದಾರೆ. ಕೃಷ್ಣ ಜನ್ಮಾಷ್ಟಮಿ ಆಚರಿಸಲು ಮಥುರೆಗೆ ಹೋಗುತ್ತಿದ್ದರು. ಜೈಲಿನಲ್ಲಿ ಗೋಧಿ ಬೀಸುತ್ತಲೇ ರಚಿಸಿದ ಕವಿತೆಗಳನ್ನು ಕಂಠಪಾಠ ಮಾಡಿ, ಬಿಡುಗಡೆಯ ನಂತರ ಬರೆದಿಡುತ್ತಿದ್ದ ಕವಿ ಇವರು. ರಾಜದ್ರೋಹದ ಅಪರಾಧಕ್ಕೆ ಸಜೆಯಾಗಿ ಪುಣೆಯ ಯರವಾಡ ಜೈಲಿನಲ್ಲಿ ಬಂಧಿಯಾಗಿ ಜನ್ಮಾಷ್ಟಮಿಯಂದು ಮಥುರೆಗೆ ಹೋಗಲು ಹಂಬಲಿಸುತ್ತ ಬರೆದ ಕವಿತೆಗಳೂ ಉಂಟು.

ಮೋಹಾನಿಯವರ ಕೃಷ್ಣಭಕ್ತಿಯ ಕೆಲ ಉರ್ದು ಮತ್ತು ಅವಧಿ ಭಾಷೆಯ ಕವಿತೆಗಳ ಸ್ಥೂಲ ಅನುವಾದ ಹೀಗಿದೆ:
1
ಎಂದೂ ಕಳೆಯದ ಇರುಳಿನ ವಿರಹ, ಬೆಟ್ಟದಷ್ಟು ಭಾರ
ಹತಭಾಗ್ಯರಾದ ಎಮ್ಮನು ತೊರೆದು ತೆರಳಿಹನು
ನಿರ್ದಯೀ ಶ್ಯಾಮ ಮತ್ತೊಂದು ಸೀಮೆಗೆ,
ನಾಡು ನಿರ್ಜನ. ಸರ್ವಸ್ವವನು ಕಿತ್ತೆಸೆದು ಕದವಿಟ್ಟು,
ಚಿಲಕವಿಕ್ಕಿ ಉಳಿಯಬಾರದೇಕೆ ಹಜರತ್ ನಾವು ಮನೆಯೊಳಗೆ?
2
ಬನವಾರಿಯ ವಿನಾ ನಿದ್ದೆ ನೆಮ್ಮದಿಗಳಿಲ್ಲ ಎನಗೆ ಎಂದು
ಯಾರಿಗೆ ಹೇಳಲಿ?
ಮುರಾರಿಯಿಲ್ಲದೆ ಕಂಬನಿಯ ಧಾರೆಗಳು ಎನ್ನ ಇರುಳುಗಳು.
ಏನ ಮಾಡಿದರೇನು, ಇನ್ನೂ ಶೂನ್ಯವೆನ್ನ ಮನ.
ಗಿರಿಧಾರಿಯಿಲ್ಲದೆ ಇಳಿಯಲೊಲ್ಲದು ನಿದಿರೆ ಕಣ್ಣುಗಳಿಗೆ.
ನೋಡು ಗೆಳೆಯಾ ಯಾರೂ ಗುರುತು ಹಿಡಿಯರು ಎಮ್ಮನು,
ಬಲುವಾಗಿ ಬಣ್ಣಗೆಟ್ಟಿದ್ದೇವೆ ಹಜರತ್,
ಬನವಾರಿಯ ಕಾಣದೆ.


ಇದನ್ನೂ ಓದಿ: ಹಿಂದೂಸ್ಥಾನ ಯಾರಪ್ಪನದೂ ಅಲ್ಲ: ರಾಹತ್ ಇಂದೋರಿ ಅವರ ಒಂದು ಗಜಲ್ ಓದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ರೈತರ ವಿಚಾರದಲ್ಲಿ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಆದರೆ.., ಸಂಯುಕ್ತ ಹೋರಾಟ ಸಮಿತಿಯ ಎಚ್ಚರಿಕೆಯ ಮಾತು

ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಬಲವಂತವಾಗಿ ಯಾವುದೇ ರೈತರ ಭೂಮಿ ಕಿತ್ತುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುತ್ತಿರುವುದು ಕೇವಲ ಮಾತಿನ ಜಾಣ್ಮೆಯಷ್ಟೇ. ಬಿಡದಿ ಭಾಗದ ಮೂರು ಗ್ರಾಮಗಳಿಗೆ ಹೊರಡಿಸಲಾಗಿರುವ ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು ಸಂಪೂರ್ಣವಾಗಿ...

“8.5 ಕೆಜಿ ತೂಕ ಇಳಿಸಿಕೊಂಡ ಸೋನಮ್ ವಾಂಗ್‌ಚುಕ್ ಜೀವಕ್ಕೆ ಅಪಾಯ: ಬಲವಂತ ಆಹಾರ ನೀಡುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್”

ದೇಶದ ಶೈಕ್ಷಣಿಕ ವ್ಯವಸ್ಥೆಯ ಭವಿಷ್ಯವನ್ನು ಗಾಳಿಗೆ ತೂರಿರುವ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಾಲು ಸಾಲು ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು, ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರಖ್ಯಾತ ಹವಾಮಾನ ಮತ್ತು...

ಇನ್‌ಸ್ಟಾಮಾರ್ಟ್‌ನಲ್ಲಿ ಸಿಗಲಿದೆ ಎಲ್‌ಪಿಜಿ ಸಿಲಿಂಡರ್: ಬೆಂಗಳೂರಿನಲ್ಲಿ ಹೊಸ ಸೇವೆ ಆರಂಭ!

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಗ್ರಾಹಕರು ಇನ್ನು ಮುಂದೆ ಪ್ರಮುಖ ಕ್ವಿಕ್ ಕಾಮರ್ಸ್ ಸಂಸ್ಥೆಯಾದ 'ಇನ್‌ಸ್ಟಾಮಾರ್ಟ್' (Instamart) ಆ್ಯಪ್ ಮೂಲಕವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್...

ಬಿಡದಿ ರೈತರ ಹೋರಾಟಕ್ಕೆ ಜಯ: ಬಲವಂತವಾಗಿ ಒಬ್ಬೇ ಒಬ್ಬ ರೈತರ ಜಮೀನನ್ನೂ ಪಡೆಯಲ್ಲ ಸಿಎಂ ಡಿ.ಕೆ.ಶಿವಕುಮಾರ್

"ಬಿಡದಿ ಸ್ಮಾರ್ಟ್ ಸಿಟಿ/ಟೌನ್ ಶಿಪ್ ಯೋಜನೆಯ ಹೆಸರಿನಲ್ಲಿ ಬಲವಂತವಾಗಿ ಒಬ್ಬೇ ಒಬ್ಬ ರೈತರ ಅಥವಾ ರೈತ ಮಹಿಳೆಯರ ಜಮೀನನ್ನು ನಮ್ಮ ಸರ್ಕಾರ ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ," ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬಿಡದಿ ಟೌನ್‌ಶಿಪ್...

ಪಶ್ಚಿಮ ಬಂಗಾಳ: TMC ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿಗೆ ವಿಪಕ್ಷ ಸ್ಥಾನ ನೀಡಿದ್ದಕ್ಕೆ ನ್ಯಾಯಾಧೀಶರ ತೀವ್ರ ಆಕ್ಷೇಪ

ತೃಣಮೂಲ ಕಾಂಗ್ರೆಸ್‌ನ ಬಂಡಾಯ ಬಣದ ಮುಖ್ಯಸ್ಥ ರಿತಬ್ರತ ಬ್ಯಾನರ್ಜಿ ಅವರನ್ನು ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡುವಲ್ಲಿ ಸ್ಪೀಕರ್ ರತೀಂದ್ರ ಬೋಸ್ ತೋರಿರುವ "ತರಾತುರಿ"ಯನ್ನು ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ...

ಎರಡು ವರ್ಷಗಳಲ್ಲಿ 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ; ಇವರಲ್ಲಿ 193 ಮಂದಿ ವಿದೇಶಿಯರೆಂದು ಘೋಷಿತರು: ಅಸ್ಸಾಂ ಸರ್ಕಾರ

ಗುವಾಹಟಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಗಡೀಪಾರು, ಗಡಿಯಿಂದ ಆಚೆಗೆ ತಳ್ಳುವಿಕೆ (ಪುಶ್‌ಬ್ಯಾಕ್) ಅಥವಾ ಉಚ್ಚಾಟನೆ ಪ್ರಕ್ರಿಯೆಯ ಮೂಲಕ ಒಟ್ಟು 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಅಸ್ಸಾಂ ಸರ್ಕಾರ ರಾಜ್ಯ ವಿಧಾನಸಭೆಗೆ...

17 ದಿನ, 9 ಕೆಜಿ ತೂಕ ಇಳಿಕೆ, ಸೋನಮ್ ವಾಂಗ್‌ಚುಕ್ ಆರೋಗ್ಯ ಸ್ಥಿತಿ ಗಂಭೀರ: ಉಪವಾಸ ಕೈಬಿಡುವಂತೆ ಅಖಿಲೇಶ್-ಕೇಜ್ರಿವಾಲ್ ಮನವಿ

ದೇಶದ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಖ್ಯಾತ ಪರಿಸರ ಕಾರ್ಯಕರ್ತ ಸೋನಮ್...

ಎನ್‌ಸಿಪಿಯ ಎರಡೂ ಬಣಗಳಲ್ಲೂ ಬಿರುಸಿನ ಬೆಳವಣಿಗೆ : ಬಿಜೆಪಿ ತೆಕ್ಕೆಗೆ ಮತ್ತೊಂದು ಪಕ್ಷ?

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಎನ್‌ಸಿಪಿ) ಎರಡೂ ಬಣಗಳ ಮುಖ್ಯ ನಾಯಕರು ಮಂಗಳವಾರ (ಜು.14) ರಾತ್ರಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಸಭೆಯು ಶರದ್ ಪವಾರ್ ಅವರ...

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...