Homeನ್ಯಾಯ ಪಥಬಹುಜನ ಭಾರತ: ಕೃಷ್ಣನ ಮೋಹಿಸಿದ ಕಮ್ಯೂನಿಸ್ಟ್ ಮೌಲಾನಾ! - ಡಿ.ಉಮಾಪತಿ

ಬಹುಜನ ಭಾರತ: ಕೃಷ್ಣನ ಮೋಹಿಸಿದ ಕಮ್ಯೂನಿಸ್ಟ್ ಮೌಲಾನಾ! – ಡಿ.ಉಮಾಪತಿ

ಕಾವ್ಯದಲ್ಲಿ ರಮ್ಯವಾದಿಯೂ ರಾಜಕಾರಣದಲ್ಲಿ ಕ್ರಾಂತಿವಾದಿಯೂ ಆಗಿದ್ದರು ಮೋಹಾನಿ

- Advertisement -
- Advertisement -

ಈ ಅಂಕಣ ಬರೆಯಲು ಕುಳಿತಿರುವ ಹೊತ್ತಿನಲ್ಲಿ ಜನಸಮುದಾಯಗಳ ಕವಿ ರಾಹತ್ ಇಂದೋರಿ ತೀರಿ ಹೋಗಿದ್ದಾರೆ. ಆಳುವವರು ಕಾರುತ್ತಿರುವ ಕೋಮುದ್ವೇಷಕ್ಕೆ ಸಿಡಿಲಿನಂತಹ ಕಾವ್ಯದ ಜವಾಬು ನೀಡಿ ಸೆಡ್ಡು ಹೊಡೆದಿದ್ದವರು. ಪೌರತ್ವ ಕಸಿಯುವ ಹುನ್ನಾರದ ವಿರುದ್ಧ ಕೆರಳಿದ್ದರು. ಎಲ್ಲರ ನೆತ್ತರು ಕಲೆತು ಬೆರೆತಿದೆ ಈ ಮಣ್ಣಿನಲಿ, ಹಿಂದುಸ್ತಾನ ಯಾರಪ್ಪನ ಮನೆಯ ಆಸ್ತಿಯಲ್ಲ ಎಂದು ಸಿಡಿದಿದ್ದರು. ಉಸಿರು ನಿಂತ ಮೇಲೆ ಪಕ್ಕಾ ಪ್ರತ್ಯೇಕ ಗುರುತನೊಂದ ಬರೆಯಿರಿ, ನನ್ನ ಕಳೇಬರದ ಮೇಲೆ ನೆತ್ತರಿನಿಂದ ಹಿಂದುಸ್ತಾನಿಯೆಂದು ಬರೆಯಿರಿ ಎಂದು ದುಗುಡ ದುಮ್ಮಾನದಿಂದ ಪ್ರತಿರೋಧದ ಕಿಡಿ ಹಾರಿಸಿ ಹಾಡಿದ್ದರು. ಪ್ರತಿಭಟನೆಯ ಸಶಕ್ತ ದನಿಯಾಗಿದ್ದರು. ಮಣ್ಣು ಗಾಳಿ ಮಾತು ಅನ್ನ ಅರಿವೆ ಎಲ್ಲವನ್ನೂ ಹಿಂದು-ಮುಸ್ಲಿಮ್ ಆಗಿಸಿ ವಿಷ ಹಿಂಡುತ್ತಿರುವ ಫ್ಯಾಸಿಸಮ್‌ನ ದುಷ್ಟ ಕಳೆ ದೇಶವನ್ನೆಲ್ಲ ಸುತ್ತಿ ಆವರಿಸಿಕೊಂಡಿರುವ ಈ ದುರಿತ ದಿನಗಳಲ್ಲಿ ಇಂದೂರಿಯಂತಹ ದನಿ ನಮ್ಮ ನಡುವೆ ಇರುವುದು ಕಾಲದ ಅಗತ್ಯವಾಗಿತ್ತು. ಆದರೆ ಮರಣಕ್ಕೆ ಅಡ್ಡ ನಿಲ್ಲಲಹುದೇ? ಗತಿಸಿರುವ ಇಂದೋರಿ ಜೀವಿಸಿರುವ ಇಂದೋರಿಗಿಂತ ಪ್ರಭಾವಿ ಎಂದು ಬಗೆದು ಮುಂದೆ ಸಾಗಬೇಕಿದೆ.

ರಾಹತ್ ಇಂದೋರಿ

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರಕ್ಕೆ ಅಡಿಗಲ್ಲಿರಿಸಲಾಗಿದೆ. ‘…ಮಥುರಾ ಕಾಶೀ ಬಾಕಿ ಹೈ…’ ಎಂದಿದ್ದವರು ಇನ್ನು ಕೃಷ್ಣನ ಮಥುರೆಗೆ ಮತ್ತು ವಿಶ್ವನಾಥನ ವಾರಾಣಸಿಯತ್ತ ಮುಖ ಮಾಡಲಿದ್ದಾರೆ. ದ್ವೇಷ ವಿಧ್ವಂಸ ಇನ್ನು ಅತ್ತ ಮೈವೆತ್ತಿ ಪಯಣಿಸಲಿದೆ.


ಇದನ್ನೂ ಓದಿ; ಉರ್ದು ಭಾಷೆಯ ಖ್ಯಾತ ಕವಿ ’ರಾಹತ್ ಇಂದೋರಿ’ ನಿಧನ


ಬಾಬಾಸಾಹೇಬ ಅಂಬೇಡ್ಕರ್ ಅವರು ಕೇಳಿದ ರಾಮ-ಕೃಷ್ಣರ ಒಗಟುಗಳಿಗೆ ಉತ್ತರ ಹೇಳುವವರು ಇನ್ನೂ ಮುಂದೆ ಬರಬೇಕಿದೆ. ಈ ಸಂದರ್ಭದ ಕೃಷ್ಣ ಜನ್ಮಾಷ್ಟಮಿಯಲ್ಲಿ ಹಜರತ್ ಮೋಹಾನಿ ಎಂಬ ಕುತೂಹಲಕರ ಸಮರಸವಾದಿಯ ನೆನೆಯಬೇಕಿದೆ.

ಮಥುರಾದ ಶ್ರೀಕೃಷ್ಣ, ಲೆನಿನ್ನನ ಕಮ್ಯೂನಿಸ್ಟ್ ರಷ್ಯಾ ಹಾಗೂ ತಾನು ನಂಬಿದ್ದ ಇಸ್ಲಾಮ್ ಧರ್ಮವನ್ನು ಒಟ್ಟೊಟ್ಟಿಗೆ ಇಟ್ಟರೆ ಈ ಮೂರೂ ಸಂಗತಿಗಳ ನಡುವೆ ವಿರಸ ವೈರುಧ್ಯವನ್ನು ಕಲ್ಪಿಸುತ್ತದೆ ಇಂದು ನಾವು ಬದುಕಿರುವ ವಿಷಮ ಸಮಾಜ. ಆದರೆ ಇವುಗಳ ನಡುವೆ ಸರಸ ಸಮರಸವನ್ನು ಕಂಡ ವಿಚಿತ್ರ ನಿಷ್ಠುರ ವ್ಯಕ್ತಿ ಮೋಹಾನಿ. ಕೃಷ್ಣ, ಕಮ್ಯೂನಿಸಮ್ ಹಾಗೂ ಇಸ್ಲಾಮನ್ನು ಒಟ್ಟೊಟ್ಟಿಗೆ ಆರಾಧಿಸಿದವರು. ಹಜರತ್ ಮೋಹಾನಿ ಎಂದೇ ಹೆಸರಾಗಿದ್ದ ಇವರ ಅಸಲಿ ಹೆಸರು ಸೈಯದ್ ಫಜಲುಲ್ ಹಸನ್. ಉತ್ತರ ಪ್ರದೇಶದ ಉನ್ನಾವ ಜಿಲ್ಲೆಯ ಮೋಹನದಲ್ಲಿ ಹುಟ್ಟಿದ ಕಾರಣ ಮೋಹಾನಿ ಎಂದು ಕರೆದುಕೊಂಡರು.

1875ರಿಂದ 1951 ರ ನಡುವೆ ಜೀವಿಸಿದ್ದ ಈತ ಸ್ವಾತಂತ್ರ‍್ಯ ಹೋರಾಟಗಾರರು ಉತ್ಕೃಷ್ಟ ಉರ್ದು ಕವಿಯೂ ಆಗಿದ್ದರು. ಮೋಹಾನಿಯವರ ಕಾವ್ಯಪ್ರತಿಭೆಯನ್ನು ವಿಮರ್ಶಕರು- ಬರೆಹಗಾರರು ಪ್ರಶಂಸಿಸಿದ್ದಾರೆ. ತನ್ನ ಕಾಲಘಟ್ಟ ಎಬ್ಬಿಸಿದ್ದ ರಾಜಕೀಯ ತರಂಗಗಳಿಗೆ ಕಾವ್ಯ, ಪತ್ರಿಕೋದ್ಯಮ, ಕ್ರಾಂತಿ ಪಥಗಳ ಮೂಲಕ ಪ್ರತಿಕ್ರಿಯಿಸಿದ್ದರು ಮೋಹಾನಿ. ಕಾವ್ಯದಲ್ಲಿ ರಮ್ಯವಾದಿಯೂ ರಾಜಕಾರಣದಲ್ಲಿ ಕ್ರಾಂತಿವಾದಿಯೂ ಆಗಿದ್ದರು. ಅವರು ಬರೆದ ಮತ್ತು ಅವರ ಕುರಿತು ಬರೆದ ಪುಸ್ತಕಗಳು ನೂರಾರು.

ಮೋಹಾನಿಯವರು ಬಂಡುಕೋರರು. ಒಪ್ಪಿತ ಮೌಲ್ಯಗಳು ಮತ್ತು ಸಂಪ್ರದಾಯಗಳ ಚೌಕಟ್ಟನ್ನು ಮುರಿದು ಬದುಕಿದವರು. ರಾಜಕೀಯ ಮತ್ತು ಸಾಮಾಜಿಕ ವಾಸ್ತವಗಳನ್ನು ತಮ್ಮ ಕಾಲದ ಕಾವ್ಯಕ್ಕೆ ಎಳೆದುತಂದು ಅಳವಡಿಸಿಕೊಂಡಿದ್ದವರು. ಕಡು ನಿಷ್ಠುರಿಯಾಗಿದ್ದವರು. ರಾಜಿ ಮಾಡಿಕೊಳ್ಳುವುದು ಅವರ ಜಾಯಮಾನಕ್ಕೆ ಒಗ್ಗುತ್ತಿರಲಿಲ್ಲ. ಲೋಕಮಾನ್ಯ ಬಾಲಗಂಗಾಧರ ತಿಲಕರು ಹೋಮ್ ರೂಲ್ ಬೇಕು ಎಂದಾಗ ಸಂಪೂರ್ಣ ಸ್ವರಾಜ್ಯವೇ ಆಗಬೇಕು ಎಂದಿದ್ದ ಹಠವಾದಿ. ಆದರೆ ತಿಲಕರನ್ನು ಮೆಚ್ಚಿ ತಮ್ಮ ಪತ್ರಿಕೆಯಲ್ಲಿ ಕವಿತೆಗಳನ್ನು ಬರೆದಿದ್ದರು. ಗಾಂಧೀ ಮತ್ತು ಜಿನ್ನಾ ಇಬ್ಬರನ್ನೂ ವಿರೋಧಿಸುತ್ತಿದ್ದವರು. ದೇಶವಿಭಜನೆಯ ಕಡುವಿರೋಧಿ.

ಮಹಾತ್ಮಾ ಗಾಂಧೀಜಿ ಪ್ರತಿಪಾದಿಸಿದ ಸ್ವಾವಲಂಬನೆಯ ಸಿದ್ಧಾಂತದ ಕಟು ವಿಮರ್ಶಕರಾಗಿದ್ದರು. ಬಡಜನರ ವಿಮುಕ್ತಿಯು ಚರಕ ಸುತ್ತಿ ನೂಲು ತೆಗೆಯುವುದರಲ್ಲಿ ಅಡಗಿಲ್ಲ ಎಂದು ವಾದಿಸಿದ್ದರು. ವ್ಲಾದಿಮಿರ್ ಲೆನಿನ್ ನೇತೃತ್ವದ 1917ರ ರಷ್ಯನ್ ಕ್ರಾಂತಿಯಿಂದ ಪ್ರೇರಣೆ ಪಡೆದಿದ್ದರು. ಅವರು ಲೆನಿನ್‌ರನ್ನು ಭೇಟಿಯಾಗಿದ್ದಾಗಿ ಹೇಳಲಾಗುತ್ತದೆ. ಆದರೆ ಅದಕ್ಕೆ ಪುರಾವೆಗಳಿಲ್ಲ. ಆದರೆ ಸ್ಟಾಲಿನ್‌ರನ್ನು ಭೇಟಿಯಾಗಿ ಗೆರಿಲ್ಲಾ ಕದನ ತಂತ್ರಗಳ ಕುರಿತು ವಿಚಾರವಿನಿಮಯ ನಡೆಸಿದ್ದು ಖಚಿತಪಟ್ಟಿದೆ.

ಅವರು ಸಂವಿಧಾನ ರಚನಾ ಸಭೆಯ ಸದಸ್ಯರಾಗಿದ್ದರು ಕೂಡ. ಬಾಬಾಸಾಹೇಬ ಅಂಬೇಡ್ಕರ್ ಅವರೊಡನೆ ಒಡನಾಡಿದ್ದವರು. ಸಂವಿಧಾನದ ಅಂತಿಮ ಕರಡಿಗೆ ಸಹಿ ಹಾಕದೆ ಉಳಿದ ಏಕೈಕ ಸದಸ್ಯರಿವರು. ದೇಶವಿಭಜನೆಯ ಕುರಿತ ತಮ್ಮ ಅಸಮ್ಮತಿ ದಾಖಲಿಸಲು ತಮ್ಮ ಅಂಕಿತ ಹಾಕಲಿಲ್ಲ ಎಂದು ಕೆಲವರು ಹೇಳಿದರೆ ಮುಸಲ್ಮಾನರ ಹಿತ ಕಡೆಗಣಿಸಲಾಗಿದೆ ಎಂಬ ಕಾರಣಕ್ಕಾಗಿ ಸಹಿ ಹಾಕಲಿಲ್ಲ ಎಂಬ ಎರಡು ಬಗೆಯ ಅಭಿಪ್ರಾಯಗಳಿವೆ.

ಇಸ್ಲಾಮಿಕ್ ಚಿಂತನೆಯ ಪ್ರಕಾಂಡ ಪಂಡಿತರೂ ಗಾಢ ಧಾರ್ಮಿಕರೂ ಆಗಿದ್ದ ಮೋಹಾನಿ ಅಗಾಧ ರೊಮ್ಯಾಂಟಿಕ್ ಕವಿಯಾಗಿ ಹೊಮ್ಮಿದ್ದು ವಿಚಿತ್ರ ವಿದ್ಯಮಾನ. ಉರ್ದು ಸಾಹಿತ್ಯ ವಿಮರ್ಶಕ ಅಖ್ತರ್ ಪಯ್ಯಾಮಿ ಅವರ ಅಭಿಮತವಿದು. ಮೋಹಾನಿ ಜೀವನಶೈಲಿ ಅತಿ ಸರಳ. ಸಮಾಜವಾದೀ ತತ್ವಗಳಿಂದ ಪ್ರೇರಿತರಾಗಿದ್ದರು. ಮೋಹಾನಿ ಉರ್ದು ಪತ್ರಿಕೆ ನಡೆಸುತ್ತಿದ್ದರು. ಈಜಿಪ್ಟ್ನಲ್ಲಿ ಶಿಕ್ಷಣ ಕುರಿತು ಬ್ರಿಟಿಷರ ವಸಾಹತು ನೀತಿಯನ್ನು ಪ್ರಶ್ನಿಸಿದ ಲೇಖನವೊಂದನ್ನು ಅಚ್ಚು ಮಾಡಿದ್ದರು. ಭಾರೀ ಒತ್ತಡದ ನಡುವೆಯೂ ಲೇಖನ ಬರೆದವರ ಹೆಸರನ್ನು ಮೋಹಾನಿ ಬಿಟ್ಟುಕೊಡಲಿಲ್ಲ. ಲೇಖನದ ಎಲ್ಲ ಜವಾಬ್ದಾರಿಯನ್ನು ತಾವೇ ಹೊತ್ತರು. ಅವರ ಮೇಲೆ ಬ್ರಿಟಿಷ್ ಸರ್ಕಾರ ರಾಜದ್ರೋಹದ ಆಪಾದನೆ ಹೊರಿಸಿತು. ಕಠಿಣ ಕಾರಾಗಾರ ಸಜೆ ವಿಧಿಸಿತು. ದಿನಕ್ಕೊಂದು ಮಣ (37.3ಕೆ.ಜಿ) ಗೋಧಿ ಬೀಸಿ ಹಿಟ್ಟು ಮಾಡುವ ದೈಹಿಕ ಶ್ರಮದ ಕಠಿಣ ಶಿಕ್ಷೆ.

1920ರ ದಶಕ. ಕಾನ್ಪುರದಲ್ಲಿ ಭಾರತೀಯ ಕಮ್ಯೂನಿಸ್ಟ್ ಪಕ್ಷದ ಮೊಟ್ಟಮೊದಲ ಸಮ್ಮೇಳನ ಜರುಗಿತ್ತು. ಅದರ ಸಂಘಟಕ ಮತ್ತು ಸ್ವಾಗತ ಸಮಿತಿಯ ಅಧ್ಯಕ್ಷ ಖುದ್ದು ಮೋಹಾನಿಯೇ ಆಗಿದ್ದರು. ಇಂಕ್ವಿಲಾಬ್ ಜಿಂದಾಬಾದ್ (ಕ್ರಾಂತಿ ಚಿರಾಯುವಾಗಲಿ) ಎಂಬ ಘೋಷಣೆಯನ್ನು ಮೋಹಾನಿ ರೂಪಿಸಿದ್ದು ಇದೇ ಸಮ್ಮೇಳನದ ಸಂದರ್ಭದಲ್ಲಿ ಎನ್ನುವವರಿದ್ದಾರೆ. ಸೂಫೀ ವಿಶ್ವಾಸಿ ಮತ್ತು ಕಮ್ಯೂನಿಸ್ಟ್ ಮುಸ್ಲಿಮ್ ಎಂಬುದಾಗಿ ತಮ್ಮನ್ನು ಮೋಹಾನಿ ಬಣ್ಣಿಸಿಕೊಂಡಿದ್ದಾರೆ.

ಮುಸಲ್ಮಾನರ ಪವಿತ್ರ ಹಜ್ ಯಾತ್ರೆಯನ್ನು ಮೋಹಾನಿ ಹನ್ನೊಂದು ಬಾರಿ ಕೈಗೊಂಡಿದ್ದವರು. ಆದರೆ ಹಿಂದೂ ದೈವ ಕೃಷ್ಣನ ಕುರಿತು ಆಳದ ಆರಾಧನೆ ಪ್ರಕಟಿಸುವ ಪದ್ಯಗಳನ್ನು ಬರೆದಿದ್ದಾರೆ. ಕೃಷ್ಣ ಜನ್ಮಾಷ್ಟಮಿ ಆಚರಿಸಲು ಮಥುರೆಗೆ ಹೋಗುತ್ತಿದ್ದರು. ಜೈಲಿನಲ್ಲಿ ಗೋಧಿ ಬೀಸುತ್ತಲೇ ರಚಿಸಿದ ಕವಿತೆಗಳನ್ನು ಕಂಠಪಾಠ ಮಾಡಿ, ಬಿಡುಗಡೆಯ ನಂತರ ಬರೆದಿಡುತ್ತಿದ್ದ ಕವಿ ಇವರು. ರಾಜದ್ರೋಹದ ಅಪರಾಧಕ್ಕೆ ಸಜೆಯಾಗಿ ಪುಣೆಯ ಯರವಾಡ ಜೈಲಿನಲ್ಲಿ ಬಂಧಿಯಾಗಿ ಜನ್ಮಾಷ್ಟಮಿಯಂದು ಮಥುರೆಗೆ ಹೋಗಲು ಹಂಬಲಿಸುತ್ತ ಬರೆದ ಕವಿತೆಗಳೂ ಉಂಟು.

ಮೋಹಾನಿಯವರ ಕೃಷ್ಣಭಕ್ತಿಯ ಕೆಲ ಉರ್ದು ಮತ್ತು ಅವಧಿ ಭಾಷೆಯ ಕವಿತೆಗಳ ಸ್ಥೂಲ ಅನುವಾದ ಹೀಗಿದೆ:
1
ಎಂದೂ ಕಳೆಯದ ಇರುಳಿನ ವಿರಹ, ಬೆಟ್ಟದಷ್ಟು ಭಾರ
ಹತಭಾಗ್ಯರಾದ ಎಮ್ಮನು ತೊರೆದು ತೆರಳಿಹನು
ನಿರ್ದಯೀ ಶ್ಯಾಮ ಮತ್ತೊಂದು ಸೀಮೆಗೆ,
ನಾಡು ನಿರ್ಜನ. ಸರ್ವಸ್ವವನು ಕಿತ್ತೆಸೆದು ಕದವಿಟ್ಟು,
ಚಿಲಕವಿಕ್ಕಿ ಉಳಿಯಬಾರದೇಕೆ ಹಜರತ್ ನಾವು ಮನೆಯೊಳಗೆ?
2
ಬನವಾರಿಯ ವಿನಾ ನಿದ್ದೆ ನೆಮ್ಮದಿಗಳಿಲ್ಲ ಎನಗೆ ಎಂದು
ಯಾರಿಗೆ ಹೇಳಲಿ?
ಮುರಾರಿಯಿಲ್ಲದೆ ಕಂಬನಿಯ ಧಾರೆಗಳು ಎನ್ನ ಇರುಳುಗಳು.
ಏನ ಮಾಡಿದರೇನು, ಇನ್ನೂ ಶೂನ್ಯವೆನ್ನ ಮನ.
ಗಿರಿಧಾರಿಯಿಲ್ಲದೆ ಇಳಿಯಲೊಲ್ಲದು ನಿದಿರೆ ಕಣ್ಣುಗಳಿಗೆ.
ನೋಡು ಗೆಳೆಯಾ ಯಾರೂ ಗುರುತು ಹಿಡಿಯರು ಎಮ್ಮನು,
ಬಲುವಾಗಿ ಬಣ್ಣಗೆಟ್ಟಿದ್ದೇವೆ ಹಜರತ್,
ಬನವಾರಿಯ ಕಾಣದೆ.


ಇದನ್ನೂ ಓದಿ: ಹಿಂದೂಸ್ಥಾನ ಯಾರಪ್ಪನದೂ ಅಲ್ಲ: ರಾಹತ್ ಇಂದೋರಿ ಅವರ ಒಂದು ಗಜಲ್ ಓದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...