“ತನ್ನ ಜಮೀನಿನ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದು ಆಗಿದ್ದಕ್ಕೆ ಮನನೊಂದು ಹಾವೇರಿಯ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ನಿನ್ನೆ (ನ.7) ಕನ್ನಡದ ಕೆಲ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿತ್ತು. ಈ ಸುದ್ದಿಯನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಎಕ್ಸ್ನಲ್ಲಿ ಹಂಚಿಕೊಂಡಿದ್ದರು. ಆದರೆ, ಅದು ಸುಳ್ಳು ಸುದ್ದಿ ಎಂದು ಹಾವೇರಿ ಪೊಲೀಸರು ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದ್ದಾರೆ.
ಕನ್ನಡ ಸುದ್ದಿ ವೆಬ್ಸೈಟ್ಗಳಾದ ‘ಕನ್ನಡ ನ್ಯೂಸ್ ನೌ, ಕನ್ನಡ ದುನಿಯಾ, ಪಬ್ಲಿಕ್ ಟಿವಿ‘ ಸೇರಿದಂತೆ ಕೆಲ ಮಾಧ್ಯಮಗಳು ‘ಜಮೀನಿನ ಪಹಣಿಯಲ್ಲಿ ‘ವಕ್ಫ್’ ಹೆಸರು ನಮೂದು, ಹಾವೇರಿಯಲ್ಲಿ ಮನನೊಂದು ರೈತ ಆತ್ಮಹತ್ಯೆ’ ಎಂಬ ಶೀರ್ಷಿಕೆಗಳಲ್ಲಿ ಸುಳ್ಳು ಸುದ್ದಿ ಪ್ರಕಟಿಸಿತ್ತು.

ಈ ಪೈಕಿ ಕನ್ನಡ ದುನಿಯಾ ಪ್ರಕಟಿಸಿದ್ದ ಸುದ್ದಿಯ ಸ್ಕ್ರೀನ್ ಶಾಟ್ ಅನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದ ಸಂಸದ ತೇಜಸ್ವಿ ಸೂರ್ಯ,”ತನ್ನ ಭೂಮಿಯನ್ನು ವಕ್ಫ್ ಕಬಳಿಸಿದೆ ಎಂದು ಗೊತ್ತಾಗಿ ಹಾವೇರಿಯಲ್ಲಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಝಮೀರ್ ಅಹ್ಮದ್ ಅವರ ಅಲ್ಪಸಂಖ್ಯಾತರನ್ನು ಓಲೈಸುವ ತರಾತುರಿಯಿಂದ ಕರ್ನಾಟಕ ಪ್ರತಿದಿನ ದುರಂತ ಪರಿಣಾಮಗಳನ್ನು ಎದುರಿಸುತ್ತಿದೆ” ಎಂದು ಬರೆದುಕೊಂಡಿದ್ದರು. ಪ್ರಸ್ತುತ ಈ ಪೋಸ್ಟ್ ಅನ್ನು ತೇಜಸ್ವಿ ಸೂರ್ಯ ಡಿಲಿಟ್ ಮಾಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರೂ ಕೂಡ ಇದೇ ಸುಳ್ಳು ಸುದ್ದಿಯನ್ನು ಹಂಚಿಕೊಂಡಿದ್ದರು ಎಂದು ವರದಿಯಾಗಿದೆ. ಆದರೆ, ಅವರ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ನಮಗೆ ಆ ರೀತಿಯ ಪೋಸ್ಟ್ಗಳು ಕಂಡು ಬಂದಿಲ್ಲ.
ಸುಳ್ಳು ಸುದ್ದಿ ಪೊಲೀಸರಿಂದ ಸ್ಪಷ್ಟನೆ
ಮಾಧ್ಯಮಗಳು ಪ್ರಕಟಿಸಿದ ಮತ್ತು ತೇಜಸ್ವಿ ಸೂರ್ಯ ಹಂಚಿಕೊಂಡಿದ್ದ ಸುದ್ದಿ ಸುಳ್ಳು ಎಂಬುವುದನ್ನು ಹಾವೇರಿ ಜಿಲ್ಲಾ ಪೊಲೀಸ್ ಫ್ಯಾಕ್ಟ್ಚೆಕ್ ಮೂಲಕ ಸ್ಪಷ್ಟಪಡಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಸ್ಪಿ, “07.11.2024 ರಂದು ಕನ್ನಡ ನ್ಯೂಸ್ ನೌ ಎಂಬ ಹೆಸರಿನ ಡಿಜಿಟಲ್ ನ್ಯೂಸ್ನಲ್ಲಿ ಹಾವೇರಿ ಜಿಲ್ಲೆಯ ಹರಣಗಿ ಗ್ರಾಮದ ರೈತ ಚನ್ನಪ್ಪ ಎಂಬುವವರ ಪುತ್ರ ರುದ್ರಪ್ಪ ಎಂಬ ರೈತ, 8 ವರ್ಷಗಳ ಹಿಂದೆ 4 ಎಕರೆ ಹೊಲದ ಪಹಣಿಯಲ್ಲಿ ವಕ್ಫ್ ಹೆಸರು ಬಂದಿರುವುದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವದಾಗಿ ಹಾವೇರಿ ರೈತರು ಆರೋಪಿಸಿದ್ದಾರೆಂದು ವರದಿ ಪ್ರಕಟ ಮಾಡಿರುತ್ತಾರೆ. ಆದರೆ, ಮೃತ ರುದ್ರಪ್ಪ ತಂದೆ ಚನ್ನಪ್ಪ ಬಾಳಿಕಾಯಿ ಇತನು ತಮ್ಮ ಆಸ್ತಿಯ ಪಹಣಿಯಲ್ಲಿ ವಕ್ಫ್ ಎಂದು ನಮೂದು ಆಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂದು ಯಾವುದೇ ರೀತಿ ಪ್ರಕರಣ ದಾಖಲಾಗಿರುವುದಿಲ್ಲ” ಎಂದು ತಿಳಿಸಿದ್ದಾರೆ.
#haveripolice #fakenews #factcheck @DgpKarnataka @igperdvg @anshu_ips @kspfactcheck @siddaramaiah @BZZameerAhmedK @DrParameshwara @DKShivakumar @Tejasvi_Surya @KarnatakaCops pic.twitter.com/o4SMx8OTTL
— SP Haveri (@sphaveri) November 7, 2024
“ದಿನಾಂಕ 06.01.2022 ರಂದು ಚನ್ನಪ್ಪ ಬಾಳಿಕಾಯಿ ಅವರ ಮಗ ರುದ್ರಪ್ಪ ಐಸಿಐಸಿಐ ಬ್ಯಾಂಕ್ ಹಾವೇರಿ ಶಾಖೆಯಲ್ಲಿ 3 ಲಕ್ಷ ಹಾಗೂ ಖಾಸಗಿಯಾಗಿ 4 ಲಕ್ಷ ರೂಪಾಯಿ ಕೈಸಾಲ ಮಾಡಿಕೊಂಡಿದ್ದು, ಅತೀ ಹೆಚ್ಚು ಮಳೆಯಾಗಿ ಬೆಳೆ ಹಾನಿಯಾಗಿದ್ದರಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂದು ಅವರ ತಂದೆ ಚನ್ನಪ್ಪ ಬಾಳಿಕಾಯಿ ದೂರು ನೀಡಿದ್ದು, ಆಡೂರ ಪೊಲೀಸ್ ಠಾಣೆ ಯುಡಿಆರ್ ಸಂಖ್ಯೆ: 03/2022, ಕಲಂ: 174 ಸಿಆರ್ಪಿಸಿ ಪ್ರಕಾರ ಯುಡಿಆರ್ ದಾಖಲಿಸಿಕೊಳ್ಳಲಾಗಿದೆ. ಅದರಲ್ಲಿ ತಮ್ಮ ಆಸ್ತಿಯಲ್ಲಿ ವಕ್ಫ್ ಎಂದು ನಮೂದಾಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂದು ಯಾವುದೇ ರೀತಿ ನಮೂದಿಸಿರುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
“ಮೃತರ ಬಗ್ಗೆ ಆಡೂರ ಪಿಎಸ್ಐ ರವರು ತನಿಖೆ ಕೈಗೊಂಡು, ಬೆಳೆ ಹಾನಿಯಾಗಿದ್ದರಿಂದ ಸಾಲ ಮಾಡಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂದು ಸಾಕ್ಷಾಧಾರಗಳನ್ನು ಸಂಗ್ರಹಿಸಿ, ಅಂತಿಮ ವರದಿಯನ್ನು ಹಾನಗಲ್ ತಹಶೀಲ್ದಾರ್ರಿಗೆ ಸಲ್ಲಿಸಿರುತ್ತಾರೆ. ಮೃತರ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ ಒದಗಿಸಲಾಗಿರುತ್ತದೆ” ಎಂದು ಫ್ಯಾಕ್ಟ್ ಚೆಕ್ ಪ್ರಕಟಣೆಯಲ್ಲಿ ಎಸ್ಪಿ ತಿಳಿಸಿದ್ದಾರೆ.
ಪೊಲೀಸರ ಈ ಪ್ರಕಟಣೆಯಿಂದ ಸಂಸದ ತೇಜಸ್ವಿ ಸೂರ್ಯ ಸುಳ್ಳು ಸುದ್ದಿ ಹಂಚಿಕೊಂಡಿರುವುದು ಖಚಿತವಾಗಿದೆ. ಹಾಗಾಗಿ, ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಸಾಗರ | ಆರ್ಎಸ್ಎಸ್ ಮುಖಂಡ ವನಶ್ರೀ ಮಂಜಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲು


