ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯ ಸಮಿತಿಯು ಮಹಾತ್ಮ ಗಾಂಧಿ, ಬಾಬಾ ಸಾಹೇಬ್ ಅಂಬೇಡ್ಕರ್, ಮೈಸೂರು ಮಹಾರಾಜರು, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕ, ಮದಕರಿ ನಾಯಕ, ಕುವೆಂಪು ಮುಂತಾದ ಮಹನೀಯರ ಪಾಠಗಳನ್ನು ಕೈ ಬಿಟ್ಟಿತ್ತು ಎಂಬ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಆರೋಪಕ್ಕೆ ಹಿರಿಯ ಸಾಹಿತಿ, ಶಿಕ್ಷಣ ತಜ್ಞ ಬರಗೂರು ರಾಮಚಂದ್ರಪ್ಪ ಅವರು ಪ್ರತಿಕ್ರಿಯೆ ನೀಡಿದ್ದು, “ಸಚಿವರು ತಪ್ಪು ಮಾಹಿತಿ ನೀಡಿದ್ದಾರೆ. ಸಚಿವರು ವಾದಕ್ಕೆ ಇಳಿಯುವ ಬದಲು ವಿವಾದವನ್ನು ಬಗೆಹರಿಸಿ ಶೈಕ್ಷಣಿಕ ಕ್ಷೇತ್ರದ ಘನತೆಯನ್ನು ಕಾಪಾಡಲಿ” ಎಂದು ಮಂಗಳವಾರ ಹೇಳಿದ್ದಾರೆ.
ಈ ಬಗ್ಗೆ ಪತ್ರ ಬರೆದಿರುವ ಬರಗೂರು, “ನನ್ನ ಸವಾಧ್ಯಕ್ಷತೆಯಲ್ಲಿ ಪಠ್ಯಪುಸ್ತಕಗಳ ಪರಿಷ್ಕರಣೆ ನಡೆದಾಗ ಕುವೆಂಪು, ಗಾಂಧಿ, ಅಂಬೇಡ್ಕರ್, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕ ಮದಕರಿ ನಾಯಕ, ಕೆಂಪೇಗೌಡರ ಪಠ್ಯವಿಷಯಗಳನ್ನು ಕೈಬಿಟ್ಟಿರುವುದಾಗಿ ಮಾನ್ಯ ಶಿಕ್ಷಣ ಸಚಿವರಾದ ಶ್ರೀ ಬಿ.ಸಿ.ನಾಗೇಶ್ ಅವರು ಹೇಳಿದ್ದಾರೆ. ಸಚಿವರು ಹೇಳಿರುವುದು ಅಪ್ಪಟ ತಪ್ಪು ಮಾಹಿತಿ” ಎಂದು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಕುವೆಂಪು ಅವರ ರಚನೆಗಳು 10 ಮತ್ತು 7ನೇ ತರಗತಿಯ ಕನ್ನಡ ಪಠ್ಯಪುಸ್ತಕಗಳಲ್ಲಿ ಇವೆ. ಖಂಡಿತ ಕೈ ಬಿಟ್ಟಿಲ್ಲ. ಪ್ರೌಢಶಾಲೆ ಹಂತದಲ್ಲಿ ಇದ್ದ ಕುವೆಂಪು ಅವರ “ಭರತ ಭೂಮಿ ನಮ್ಮ ತಾಯಿ” ಎಂಬ ಪದ್ಯವನ್ನು ಚಿಕ್ಕಂದಿನಲ್ಲೇ ದೇಶಪ್ರೇಮದ ಭಾವನೆ ಬೆಳೆಯಲಿ ಎಂಬ ದೃಷ್ಟಿಯಿಂದ 7ನೇ ತರಗತಿಗೆ ಅಳವಡಿಸಲು ನಾವು ಸೂಚಿಸಿದ್ದೆವು ಅಷ್ಟೇ” ಎಂದು ಬರಗೂರು ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: RSS, ಬಿಜೆಪಿಯ ಪಠ್ಯ ಪರಿಷ್ಕರಣೆಗೆ ವಿರೋಧ: ತನ್ನ ಪಠ್ಯ ಕೈಬಿಡಲು ದೇವನೂರ ಮಹಾದೇವ ಪತ್ರ
“ಇನ್ನು, 7ನೇ ತರಗತಿಯ 2ನೇ ಭಾಗ ಮತ್ತು 10ನೇ ತರಗತಿಯ 2ನೇ ಭಾಗದ ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಗಾಂಧಿ ಕುರಿತು ಸಾಕಷ್ಟು ವಿವರಗಳಿವೆ. ಸಮಾಜ ವಿಜ್ಞಾನದ 8ನೇ ತರಗತಿಯ ಭಾಗ-1 ಮತ್ತು 10ನೇ ತರಗತಿಯ ಭಾಗ-2ರಲ್ಲಿ ಡಾ.ಅಂಬೇಡ್ಕರ್ ಪಾಠಗಳಿವೆ. 9ನೇ ತರಗತಿಯ ಪಠ್ಯದಲ್ಲಿ ‘ನಮ್ಮ ಸಂವಿಧಾನ’ ಎ೦ಬ ಪಾಠವಿದ್ದು ಅಲ್ಲಿಯೂ ಡಾ.ಅಂಬೇಡ್ಕರ್ ಅವರನ್ನು ಕುರಿತ ವಿವರಗಳಿವೆ” ಎಂದು ಅವರು ಸೂಚಿಸಿದ್ದಾರೆ.
“ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅವರ ಬಗ್ಗೆ ಸಮಾಜ ವಿಜ್ಞಾನದ 6ನೇ ತರಗತಿಯ ಭಾಗ-2 ಮತ್ತು 10ನೇ ತರಗತಿಯ ಭಾಗ-1ರಲ್ಲಿ ಪಾಠಗಳಿವೆ. ಜೊತೆಗೆ ಸಂಗೊಳ್ಳಿ ರಾಯಣ್ಣ ಅವರ ಬಗ್ಗೆ 5ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಹೊಸದಾಗಿ ಒಂದು ಪಾಠವನ್ನು ಸೇರಿಸಲಾಗಿದೆ” ಎಂದು ಬರಗೂರು ಅವರು ತಿಳಿಸಿದ್ದಾರೆ.
“ಮದಕರಿನಾಯಕರ ಬಗ್ಗೆ ಪಾಠವನ್ನು ಕೈಬಿಟ್ಟಲ್ಲ. ಮದಕರಿ ನಾಯಕರ ಜೊತೆಗೆ ಸುರಪುರ ಸಂಸ್ಥಾನದ
ಬಗ್ಗೆಯೂ ಬರೆಸಿ ಸೇರಿಸಲಾಗಿದೆ. ಬೆಂಗಳೂರು ನಿರ್ಮಾಪಕ ಕೆಂಪೇಗೌಡರ ಬಗ್ಗೆ ವಿವರಗಳಿಲ್ಲ ಎನ್ನುವುದು ಕೂಡ ತಪ್ಪು ಮಾಹಿತಿ. ಯಲಹಂಕ ನಾಡಪ್ರಭುಗಳ ಬಗ್ಗೆ ಪ್ರತ್ಯೇಕ ವಿವರಗಳಿದ್ದು ಬೆಂಗಳೂರು ನಿರ್ಮಾತೃ ಇಮ್ಮಡಿ ಕೆಂಪೇಗೌಡರ ಬಗ್ಗೆ ಪ್ರತ್ಯೇಕ ಮಾಹಿತಿ ನೀಡಲಾಗಿದೆ. ಇದಿಷ್ಟು ಪಾಠಗಳು ಸಮಾಜ ವಿಜ್ಞಾನದ 7ನೇ ತರಗತಿಯ ಭಾಗ-1ನೇ ಪಠ್ಯಪಸ್ತಕದಲ್ಲಿವೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: 1% ಕಮಿಷನ್ ಲಂಚ ಆರೋಪ: ಆರೋಗ್ಯ ಸಚಿವನನ್ನು ವಜಾಗೊಳಿಸಿದ ಪಂಜಾಬ್ ಸಿಎಂ!
“7ನೇ ತರಗತಿಯ ಭಾಗ-2ರ ಸಮಾಜ ವಿಜ್ಞಾನ ಪಠ್ಯದಲ್ಲಿ ರಾಣಿ ಅಬ್ಬಕ್ಕ ಕುರಿತ ವಿವರಗಳಿವೆ. 7ನೇ ತರಗತಿಯ ಭಾಗ-1ರ ಸಮಾಜ ವಿಜ್ಞಾನ ಪಠ್ಯದಲ್ಲಿ ‘ಮೈಸೂರು ಒಡೆಯರು’ ಎಂಬ ಪ್ರತ್ಯೇಕ ಅಧ್ಯಾಯವೇ ಇದೆ. ಸಚಿವರು ಹೇಳಿದಂತೆ ಇಲ್ಲಿನ ವಿವರಗಳು ಕಡಿಮೆ ಎನ್ನಿಸಿದರೆ ‘ಮರುಪರಿಷ್ಕರಣೆ’ಯಲ್ಲಿ ವಿಸ್ತರಿಸಬಹುದಿತ್ತಲ್ಲ” ಎಂದು ಬರಗೂರು ಪ್ರಶ್ನಿಸಿದ್ದಾರೆ.
“ಟಿಪ್ಪುವನ್ನೂ ಒಳಗೊಂಡಂತೆ ಯಾರ ಬಗ್ಗೆಯೂ ನಮ್ಮ ಸಮಾಜ ವಿಜ್ಞಾನ ಪಠ್ಯಪುಸ್ತಕ ಸಮಿತಿಯವರು ಆಧಾರವಿಲ್ಲದೆ ಏನನ್ನೂ ಸೇರಿಸಿಲ್ಲ, ಟಿಪ್ಪು, ಸಾವರ್ಕರ್ ಒಳಗೊಂಡಂತೆ ಯಾರ ಬಗ್ಗೆಯೂ ನಕಾರಾತ್ಮಕ ವಿಷಯಗಳನ್ನು ಹೇಳದೆ ನಡೆದ ಘಟನೆಗಳ ವಾಸ್ತವದ ಮಾಹಿತಿಯನ್ನಷ್ಟೇ ಕೊಡಲಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆ ಹಂತದ ಮಕ್ಕಳಿಗೆ ಪರ ಮತ್ತು ವಿರೋಧದ ಚರ್ಚೆಗಳ ಬದಲು ಮಾಹಿತಿ ಒದಗಿಸುವ ಉದ್ದೇಶವೇ ಮುಖ್ಯವೆಂದು ಭಾವಿಸಲಾಗಿದೆ” ಎಂದು ತಿಳಿಸಿದ್ದಾರೆ.
“ಇಷ್ಟಕ್ಕೂ ಎಲ್ಲ ಪಠ್ಯಪುಸ್ತಕಗಳನ್ನು ನಾನೊಬ್ಬನೇ ಬರೆದಂತೆ ಬಿಂಬಿಸಿ ವೈಯಕ್ತಿಕ ಟೀಕೆ ಮಾಡಲಾಗುತ್ತಿದೆ. ವಾಸ್ತವವಾಗಿ ಆಗ 27 ಸಮಿತಿಗಳಿದ್ದವು. 172 ಜನ ತಜ್ಞರು, ಅಧ್ಯಾಪಕರು ಈ ಸಮಿತಿಗಳಲ್ಲಿದ್ದರು. 27 ಸಮಿತಿಗಳಿಗೂ ಒಬ್ಬೊಬ್ಬರು ಅಧ್ಯಕ್ಷರಿದ್ದರು. ಈ ಸಮಿತಿಗಳಾಚೆಗೂ ನಾವು ಅಧ್ಯಾಪಕರ ಸಂಘಗಳ ಜೊತೆ, ಡಯಟ್ ಪ್ರಾಂಶುಪಾಲರು, ವಿಷಯ ಪರೀಕ್ಷಕರು ಮತ್ತು ಎಲ್ಲ ಪಠ್ಯವಿಷಯ ಪರಿಣಿತರ ಜೊತೆ ಮೂವತ್ತಕ್ಕೂ ಹೆಚ್ಚು ಸಮಾಲೋಚನೆ ಸಭೆ ನಡೆಸಿ ಸಲಹೆ ಪಡೆದಿದ್ದೇನೆ. ಆನಂತರವೇ ಪರಿಷ್ಕರಣೆ ಮಾಡಲಾಗಿದೆ. ಇಷ್ಟಾಗಿಯೂ ಅರಿವಿಲ್ಲದೇ ಮಾಹಿತಿ ಕೊರತೆ ಮತ್ತು ದೋಷಗಳು ಉಳಿದಿದ್ದರೆ, ಮುಂದೆ ಪರಿಷ್ಕರಿಸಬಹುದೆಂದು ಮೊದಲಿನಿಂದಲೂ ನಾನು ಹೇಳುತ್ತಾ ಬಂದಿದ್ದೇನೆ” ಎಂದು ಅವರು ಪುನರುಚ್ಚರಿಸಿದ್ದಾರೆ.
ಇದನ್ನೂ ಓದಿ: ರೋಹಿತ್ ಚಕ್ರತೀರ್ಥ ‘ಐಐಟಿ-ಸಿಇಟಿ’ ಪ್ರೊಫೆಸರ್ ಹೌದೆ? ‘ಐಐಟಿ-ಸಿಇಟಿ’ ಎಂದರೇನು?
“ನಮಗಿಂತ ಹಿಂದೆ ಪಠ್ಯಪುಸ್ತಕ ರಚನೆ ಮಾಡಿದವರ ಬಗ್ಗೆ ಒಂದೇ ಒಂದು ಟೀಕೆಯನ್ನೂ ಮಾಡಿಲ್ಲ. ವೈಯಕ್ತಿಕ ನಿಂದನೆಯನ್ನು ಕನ್ನಡ ಸಂವೇದನೆ ನನಗೆ ಕಲಿಸಿಲ್ಲ. ಮಾನ್ಯ ಸಚಿವರು ವಾದಕ್ಕೆ ಇಳಿಯುವ ಬದಲು ವಿವಾದವನ್ನು ಬಗೆಹರಿಸಿ ಶೈಕ್ಷಣಿಕ ಕ್ಷೇತ್ರದ ಘನತೆಯನ್ನು ಕಾಪಾಡಲಿ” ಎಂದು ಅವರು ಸಚಿವ ಬಿಸಿ ನಾಗೇಶ್ ಅವರಿಗೆ ಕಿವಿಮಾತು ಹೇಳಿದ್ದಾರೆ.
ಪತ್ರವನ್ನು ಕೆಳಗೆ ನೋಡಬಹುದು.




ಬರಗೂರು ಸರ್. ಈ ವ್ಯೆಕ್ತಿಗೆ ತಾವು ಉತ್ತರ ಕೊಟ್ಟು ತಮ್ಮ ಘನತೆಗೆ ಕುಂದು ತಂದುಕೊಳ್ಳಬೇಡಿ… ಅರ್ಧ ಜ್ನಾನಿಗಳಿಗೆ ಉತ್ತರ ಕೊಡದೇ ಇರೂದೇ ಲೇಸು…