ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ನಿಧಿ ದುರ್ಬಳಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಬುಧವಾರ ಪ್ರಾಸಿಕ್ಯೂಷನ್ ದೂರು ಅಥವಾ ಆರೋಪ ಪಟ್ಟಿಯನ್ನು ಸಲ್ಲಿಸಿದೆ.
ನ್ಯಾಯಾಲಯ ಆರೋಪ ಪಟ್ಟಿ ಪರಿಗಣಿಸಿ ದೂರು ದಾಖಲಿಸಿಕೊಂಡಿದೆ ಎಂದು ಇಡಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ತಿಳಿಸಿದೆ.
ED, Bengaluru has filed a Prosecution Complaint (PC) before the Hon’ble Special Court for MPs and MLAs in Bangalore in relation to the Karnataka Maharishi Valmiki ST Development Corporation Scam. The Hon’ble Court has taken cognizance of the PC.
— ED (@dir_ed) October 9, 2024
ವರದಿಗಳ ಪ್ರಕಾರ, ವಾಲ್ಮೀಕಿ ನಿಗಮದ ನಿಧಿ ದುರ್ಬಳಕೆ ಪ್ರಕರಣ ಅಥವಾ ಬಹುಕೋಟಿ ಹಗರಣದ ಸೂತ್ರದಾರ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಎಂದು ಇಡಿ ದೂರಿನಲ್ಲಿ ವಿವರಿಸಿದೆ.
ನಿಗಮವು ಬೇರೆ ಬೇರೆ ಬ್ಯಾಂಕ್ ಖಾತೆಗಳಲ್ಲಿ ಹೊಂದಿದ್ದ ಠೇವಣಿಯನ್ನು ಅನಧಿಕೃತವಾಗಿ ಬೆಂಗಳೂರಿನ ಎಂ.ಜಿ ರಸ್ತೆಯ ಬ್ಯಾಂಕ್ ಖಾತೆಯೊಂದಕ್ಕೆ ವರ್ಗಾಯಿಸಲಾಗಿದೆ. ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಿಸಿದ 43.33 ಕೋಟಿ ರೂಪಾಯಿಯನ್ನು ಖಜಾನೆಯಿಂದ ಅಕ್ರಮವಾಗಿ ವರ್ಗಾಯಿಸಿಕೊಳ್ಳಲಾಗಿದೆ ಎಂದು ಆರೋಪಿಸಿದೆ.
ಅಕ್ರಮವಾಗಿ ವರ್ಗಾವಣೆ ಮಾಡಲಾದ ರೂ. 89.62 ಕೋಟಿಯಲ್ಲಿ, ರೂ.20.19 ಕೋಟಿಯನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಬಳಸಿಕೊಳ್ಳಲಾಗಿದೆ. ಇದಕ್ಕೆ ನಾಗೇಂದ್ರ ಅವರ ಆಪ್ತ ವಿಜಯ್ ಕುಮಾರ್ ಅವರ ಮೊಬೈಲ್ನಲ್ಲಿ ಸಾಕ್ಷ್ಯಗಳು ಲಭ್ಯವಾಗಿದೆ ಎಂದು ವಿವರಿಸಿದೆ.
ಶಾಸಕ ನಾಗೇಂದ್ರ ಜೊತೆ ಸತ್ಯನಾರಾಯಣ ವರ್ಮ, ಎಟಕಾರಿ ಸತ್ಯನಾರಾಯಣ, ಜೆಜಿ ಪದ್ಮನಾಭ, ನಾಗೇಶ್ವರ್ ರಾವ್, ನೆಕ್ಕಂಟಿ ನಾಗರಾಜ್, ವಿಜಯ್ ಕುಮಾರ್ ಗೌಡ ಹಾಗೂ ಇನ್ನೂ 18 ಆರೋಪಿಗಳ ಹೆಸರನ್ನು ಇಡಿ ತನ್ನ ದೂರಿನಲ್ಲಿ ಉಲ್ಲೇಖಿಸಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಇಬ್ಬರು ಮಾಜಿ ಸಿಎಂಗಳಿಗೆ ಹನಿಟ್ರ್ಯಾಪ್ ಮಾಡಿ ಸಚಿವ ಸ್ಥಾನ ಪಡೆದಿದ್ದ ಮುನಿರತ್ನ : ಸಂತ್ರಸ್ತ ಮಹಿಳೆ ಗಂಭೀರ ಆರೋಪ


