ರಾಜ್ಯದ ಮಾಜಿ ಶಿಕ್ಷಣ ಸಚಿವ, ಬಿಎಸ್ಪಿಯ ಉಚ್ಚಾಟಿತ ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಅವರು ತಾನು ಆಗಸ್ಟ್ 5 ರಂದು ಬಿಜೆಪಿ ಸೇರಲಿದ್ದೇನೆ ಎಂದು ಹೇಳಿದ್ದಾರೆಂದು ವರದಿಯಾಗಿದೆ. ಅಂದು ಅವರು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಅಧಿಕೃತವಾಗಿ ಪಕ್ಷ ಸೇರ್ಪಡೆಯಾಗಲಿದ್ದಾರೆ.
ನಾನುಗೌರಿ.ಕಾಂ ಜೊತೆ ಮಾತನಾಡಿದ ಶಾಸಕ ಎನ್. ಮಹೇಶ್ ತಾನು ಬಿಜೆಪಿಗೆ ಸೇರುತ್ತಿರುವುದು ನಿಜ ಎಂದು ಸೋಮವಾರ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಸ್ಥಾನಮಾನ ಸಿಕ್ಕರೆ ಬಿಜೆಪಿ ಸೇರ್ಪಡೆ ಖಚಿತ: ಶಾಸಕ ಎನ್ ಮಹೇಶ್
ಈ ಹಿಂದೆಯೆ ಅವರು ತಾನು ಬಿಜೆಪಿ ಸೇರಲಿರುವ ಬಗ್ಗೆ ತಮ್ಮ ಬೆಂಬಲಿಗರು ಮತ್ತು ಮುಖಂಡರ ಅಭಿಪ್ರಾಯ ತಿಳಿಯಲು ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ವರದಿಯಾಗಿತ್ತು. ಆಗಲೆ ಅವರ ಒಡನಾಡಿಗಳು ಮಹೇಶ್ ಬಿಜೆಪಿ ಸೇರಲಿದ್ದಾರೆ ಎಂದು ನಾನುಗೌರಿ.ಕಾಂಗೆ ತಿಳಿಸಿದ್ದರು.
ರಾಜ್ಯದ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಬಸವರಾಜ್ ಬೊಮ್ಮಾಯಿ ಅವರು ಸಚಿವ ಸಂಪುಟ ರಚನೆಯ ಮಾತುಕತೆಗಾಗಿ ಬಿಜೆಪಿ ಕೇಂದ್ರ ನಾಯಕತ್ವದ ಜೊತೆ ಸಮಾಲೋಚನೆ ನಡೆಸಲು ಈಗಾಗಲೆ ದೆಹಲಿ ತಲುಪಿದ್ದಾರೆ.
ಭಾನುವಾರದಂದು ಪತ್ರಕರ್ತರೊಂದಿಗೆ ಮಾತನಾಡಿದ್ದ ಬೊಮ್ಮಾಯಿ, ಸಂಪುಟ ರಚನೆಯು ಒಂದು ವಾರದೊಳಗೆ ಆಗುತ್ತದೆ, ಸೋಮವಾರ ಕೇಂದ್ರ ನಾಯಕತ್ವದ ನಿರ್ದೇಶನ ಬರುವ ಸಾಧ್ಯತೆಯಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ಕರ್ನಾಟಕ ಸರ್ಕಾರದ ಈ ಕ್ರಮದಿಂದ ಧರ್ಮನಿರಪೇಕ್ಷತೆಗೆ ಕತ್ತರಿ – ಡಾ.ಬಿ.ಪಿ.ಮಹೇಶ್ ಚಂದ್ರ ಗುರು