Homeಮುಖಪುಟರಿಹಾನ್ನಾಳ ಕೃಪೆ: ಮೋದಿ ಸರ್ಕಾರದ ಅಹಂ, ಭ್ರಮೆ, ಭಯ ಬಯಲಿಗೆ! -ರಾಮಚಂದ್ರ ಗುಹಾ

ರಿಹಾನ್ನಾಳ ಕೃಪೆ: ಮೋದಿ ಸರ್ಕಾರದ ಅಹಂ, ಭ್ರಮೆ, ಭಯ ಬಯಲಿಗೆ! -ರಾಮಚಂದ್ರ ಗುಹಾ

ಹೆಸರಾಂತ ಇತಿಹಾಸಕಾರರಾದ ರಾಮಚಂದ್ರ ಗುಹಾರವರು ಎನ್‌ಡಿಟಿವಿಗೆ ಬರೆದ ಲೇಖನವನ್ನು ಕನ್ನಡಕ್ಕೆ ಅನುವಾದಿಸಿ ನಾನುಗೌರಿ ಓದುಗರಿಗಾಗಿ ಪ್ರಕಟಿಸುತ್ತಿದ್ದೇವೆ.

- Advertisement -
- Advertisement -

ನನ್ನ ದೇಶ ‘ಮೇರಾ ಭಾರತ್ ಮಹಾನ್’ ಸದೃಢ, ಸುರಕ್ಷಿತ ಮತ್ತು ಸ್ವಾವಲಂಬಿ (ಒಂದು ಪದದಲ್ಲಿ ಆತ್ಮನಿರ್ಭರ್) ಎಂಬ ಅರಿವಿನಲ್ಲಿ ನಾನು ಫೆಬ್ರವರಿ 2 ರ ರಾತ್ರಿ ಸುರಕ್ಷಿತವಾಗಿ ನಿದ್ರೆಗೆ ಜಾರಿದೆ.

ಮರುದಿನ ಬೆಳಿಗ್ಗೆ ಎಚ್ಚರವಾದಾಗ, ನಮ್ಮ ಭದ್ರತೆ ಮತ್ತು ಸಾರ್ವಭೌಮತ್ವದ ಅಡಿಪಾಯವು, ಒಬ್ಬ ವಿದೇಶಿಯ ಒಂದು ಟ್ವೀಟ್ ಹೊಡೆತಕ್ಕೆ ಅಲುಗಾಡಿದೆ ಎಂದು ಗೊತ್ತಾಯಿತು. ಆದಾಗ್ಯೂ, ಸಂಜೆಯ ಹೊತ್ತಿಗೆ, ನನ್ನ ಭಯ ಮತ್ತು ಆತಂಕಗಳು ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದವು. ಸದಾ ‘ಸತ್ಯವನ್ನೆ’ ಪ್ರತಿಪಾದಿಸುವ ವಿದೇಶಾಂಗ ಸಚಿವಾಲಯದ ಹೇಳಿಕೆ, ಗೌರವಾನ್ವಿತ ಗೃಹ ಸಚಿವರ ಟ್ವೀಟ್, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಆ ಮಹಾನ್ ಮತ್ತು ದೂರದೃಷ್ಟಿಯ ರಾಜಕೀಯ ಸಿದ್ಧಾಂತಿಗಳಾದ ಅಕ್ಷಯ್ ಕುಮಾರ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಕೆಲವು ಆಳವಾದ ಆಲೋಚನೆಗಳು – ಇವೆಲ್ಲವು ಒಟ್ಟಾಗಿ ನನ್ನ ಮನಸ್ಸನ್ನು ಕದಲಿದವು. ಕಳೆದ ರಾತ್ರಿ (ಫೆ.3) ನಮ್ಮ ರಾಷ್ಟ್ರದ ಹೆಮ್ಮೆ ಮತ್ತು ಸ್ವಾವಲಂಬನೆ ಸಂಪೂರ್ಣ ಅಖಂಡವಾಗಿದೆ ಎಂಬ ವಿಶ್ವಾಸವಿದಿಂದ ಮಲಗಿದೆ.

ವಿಡಂಬನೆ ನನ್ನ ಸಹಜ ಶೈಲಿಯಲ್ಲ, ಮತ್ತು ನಾನು ಇನ್ನೊಂದೆರಡು ವಾಕ್ಯ ಬರೆದು ಆ ಶೈಲಿಯಿಂದ ನಿರ್ಗಮಿಸುತ್ತೇನೆ. ಆದರೆ ರಿಹಾನ್ನಾ ಎಂಬ ಹೆಸರಿನ ಮಹಿಳೆಯ ಒಂದು ಪುಟ್ಟ ಟ್ವೀಟ್‌ಗೆ ನಮ್ಮ ಸರ್ಕಾರ ಮತ್ತು ಅದರ ‘ಉಪಯುಕ್ತ’ ಮೂರ್ಖರು ಪ್ರತಿಕ್ರಿಯಿಸಿದ ರೀತಿಗೆ ಅಪಹಾಸ್ಯ ಮತ್ತು ವಿಡಂಬನೆ ಮಾತ್ರ ನ್ಯಾಯ ಒದಗಿಸಬಲ್ಲವು. ಅವರ ಪ್ರತಿಕ್ರಿಯೆಯು ಬೂಟಾಟಿಕೆ ಮತ್ತು ಅಪ್ರಾಮಾಣಿಕತೆಯಲ್ಲಿ ಮುಳುಗಿತ್ತು, ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಇದು ಯಾವ ಬಗೆಯಲ್ಲೂ ಸಮತೂಕದ ಪ್ರಜ್ಞೆಯನ್ನು ಹೊಂದಿರಲಿಲ್ಲ. ಆ ಸಾಮೂಹಿಕ, ಸಮನ್ವಯಿತ, ಹೆಮ್ಮೆಯ ಅಭಿವ್ಯಕ್ತಿಗಳು, ಒಗ್ಗಟ್ಟು ಇತ್ಯಾದಿ ಎಲ್ಲ ಒಳಗೊಂಡ ನಿರ್ಣಯವು ನಮ್ಮ ರಾಷ್ಟ್ರೀಯತೆ ಈಗ ನಿಂತಿರುವ ದುರ್ಬಲವಾದ ಅಡಿಪಾಯಗಳನ್ನು ಗಮನಾರ್ಹವಾಗಿ ಬಹಿರಂಗಪಡಿಸಿತು.

ಇದನ್ನೂ ಓದಿ: ’ಒಂದು ಟ್ವೀಟ್‌ನಿಂದ ನಿಮ್ಮ ಐಕ್ಯತೆ ಧಕ್ಕೆ ಆಗುವುದಾದರೆ…’ ಭಾರತೀಯ ಸಲೆಬ್ರಿಟಿಗಳ ಕಪಾಳಕ್ಕೆ ಬಾರಿಸಿದ ತಾಪ್ಸಿ ಪನ್ನು!

ಹದಿನೇಳನೇ ಶತಮಾನದ ಫ್ರೆಂಚ್ ಬರಹಗಾರ ಲಾ ರೋಚೆಫೌಕಾಲ್ಡ್ ಬೂಟಾಟಿಕೆಯನ್ನು ಸದ್ಗುಣಕ್ಕೆ ಪ್ರತಿಯಾಗಿ ನೀಡಿದ ಗೌರವ ಎಂದು ಪ್ರಸಿದ್ಧವಾಗಿ ವಿವರಿಸಿದ್ದಾನೆ. ಈ ಪೌರುಷವು ಈ ಸಂದರ್ಭದಲ್ಲಿ ವಿಶೇಷವಾಗಿ ಸೂಕ್ತವಾಗಿದೆ. ಏಕೆಂದರೆ 2020 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್‌ಗೆ ಮತ ಚಲಾಯಿಸುವಂತೆ ಭಾರತೀಯ ಮೂಲದ ಅಮೆರಿಕನ್ನರನ್ನು ಕೇಳುವ ಮೂಲಕ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅವರು ಮತ್ತೊಂದು ರಾಷ್ಟ್ರದ ರಾಜಕೀಯ ವ್ಯವಹಾರಗಳಲ್ಲಿ ಸಕ್ರಿಯವಾಗಿ ಮಧ್ಯಪ್ರವೇಶಿಸಿದರು ಎಂಬುದನ್ನು ನಾವು ಎಂದಿಗೂ ಮರೆಯಬಾರದು.

ಹಿಂದಿನ ದಶಕಗಳಿಂದ ತತ್ವಬದ್ಧ ದ್ವಿಪಕ್ಷೀಯತೆ ಕಾಪಾಡಿಕೊಂಡು ಬಂದಿದ್ದ ನಮ್ಮ ಹಿಂದಿನ ಪ್ರಧಾನಮಂತ್ರಿಗಳ ನಡೆ ಗಮನಿಸಿದಾಗ, ಮೋದಿಯವರ ಆ ಅನುಮೋದನೆಯು (ಮತ ಬೇಡುವಿಕೆ) ದೊಡ್ಡ ಮೂರ್ಖತನವಾಗಿತ್ತು. ಇದು ಕೌಂಟರ್ ಪ್ರಾಡಕ್ಟಿವ್ ಕೂಡ ಆಗಿತ್ತು. ಖಂಡಿತವಾಗಿಯೂ ಭಾರತದ ಪ್ರಧಾನ ಮಂತ್ರಿಯೊಬ್ಬರು ಅಮೆರಿಕನ್ನರನ್ನು ತಮ್ಮ ಅಧ್ಯಕ್ಷರನ್ನಾಗಿ ಯಾರನ್ನು ಆಯ್ಕೆ ಮಾಡಬೇಕೆಂದು ಸೂಚಿಸಿದ್ದು , ಭಾರತದಲ್ಲಿ ರೈತರ ಪ್ರತಿಭಟನೆಯ ಬಗ್ಗೆ ಕೆಲವು ಸಂಗತಿಗಳನ್ನು ವಿವರಿಸುವ ಸುದ್ದಿ ಲೇಖನವೊಂದರತ್ತ ಗಮನ ಸೆಳೆದ ಬಾರ್ಬಡಿಯನ್ ಗಾಯಕಿಯ ಪ್ರಯತ್ನಕ್ಕಿಂತ ಹೆಚ್ಚು ಅತಿಶಯವಾದ ಕಾರ್ಯವಾಗಿದೆ, ನಿಜಕ್ಕೂ, ಹೂಸ್ಟನ್‌ನಲ್ಲಿ ಡೊನಾಲ್ಡ್ ಟ್ರಂಪ್ ಜೊತೆ ನಿಂತು, ಟ್ರಂಪ್ ಆಯ್ಕೆಗೆ ಮನವಿ ಮಾಡಿದ ನಂತರ, ವಿದೇಶಿಯರಿಂದ ಭಾರತ ಸರ್ಕಾರದ ಬಗ್ಗೆ ಯಾವುದೇ ಟೀಕೆ ಬಂದರೂ ಅದನ್ನು ಟೀಕಿಸುವ ನೈತಿಕತೆಯನ್ನೇ ಸರ್ಕಾರ ಕಳೆದುಕೊಂಡಿದೆ.

ಗೃಹ ಸಚಿವರ ಟ್ವೀಟ್‌ನಲ್ಲಿ ಸರ್ಕಾರದ ಪ್ರತಿಕ್ರಿಯೆಯಲ್ಲಿನ ಬೂಟಾಟಿಕೆ ಕೂಡ ಸ್ಪಷ್ಟವಾಗಿದೆ. ಆಡಳಿತ ಪಕ್ಷದ ಐಟಿ ಸೆಲ್‌ನ ಆವಿಷ್ಕಾರಕ ಮತ್ತು ಮೇಲ್ವಿಚಾರಕ ಮತ್ತು ಈ ಅಸ್ಪಷ್ಟತೆಯ ಗ್ರ‍್ಯಾಂಡ್ ಮಾಸ್ಟರ್ (ಶಾ) ಇತರರನ್ನು ‘ಪ್ರೊಪಗಂಡಾ’ ಮಾಡುತ್ತಿದ್ದಾರೆ ಎಂದು ಆರೋಪಿಸುವುದು ಇದ್ದಿಲು ಮಸೆ ಅರಿವೆಗೆ (ಅಡುಗೆ ಮನೆಯಲ್ಲಿ ಕಟ್ಟೆ ಒರೆಸಲು, ಬಿಸಿ ಪಾತ್ರೆ ಹಿಡಿಯಲು ಬಳಸುವ ಬಟ್ಟೆ|) ಬುದ್ಧಿ ಹೇಳಿದಂತಿದೆ.

ಧರ್ಮ, ಜಾತಿ, ಭಾಷೆ ಮತ್ತು ಪ್ರದೇಶದ ವಿಭಜನೆಗಳನ್ನು ಹುಟ್ಟುಹಾಕುವಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ರಾಜಕಾರಣಿ, ದೇಶವನ್ನು ಒಗ್ಗಟ್ಟಾಗಿರಲು ಸೂಚಿಸುವ ಪರಿಯೇ ಹಾಸ್ಯಾಸ್ಪದ. ಭಾರತದಲ್ಲಿ, ಬೇರೆಡೆಗಿಂತಲೂ ಹೆಚ್ಚಾಗಿ, ಬೂಟಾಟಿಕೆ ಎನ್ನುವುದು ನಿಜಕ್ಕೂ ಸದ್ಗುಣಕ್ಕೆ ಪಾವತಿಸುವ ಬೆಲೆ.

ಏತನ್ಮಧ್ಯೆ, ವಿದೇಶಾಂಗ ಸಚಿವಾಲಯ ಅಥವಾ ಎಂಇಎ ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿತು, ಅದು ಸುಳ್ಳಿನಿಂದ ಪ್ರಾರಂಭವಾಯಿತು. ಕೃಷಿ ಕಾನೂನುಗಳನ್ನು ಸಂಸತ್ತಿನಲ್ಲಿ ‘ಪೂರ್ಣ ಚರ್ಚೆಯ ನಂತರ’ ಅಂಗೀಕರಿಸಲಾಗಿದೆ ಎಂದು ಅದು ಹೇಳಿದೆ. ವಾಸ್ತವವಾಗಿ, ಕೃಷಿ ಕ್ಷೇತ್ರದಲ್ಲಿ ಇಂತಹ ದೂರಗಾಮಿ ಬದಲಾವಣೆಗಳನ್ನು ಪ್ರಸ್ತಾಪಿಸುವ ಕಾನೂನುಗಳನ್ನು ಮೊದಲು ರಾಜ್ಯಗಳೊಂದಿಗೆ ಚರ್ಚಿಸಬೇಕಾಗಿತ್ತು. ಅದನ್ನು ಮಾಡಲೇ ಇಲ್ಲ. ಕಾನೂನುಗಳನ್ನು ಸಂಸದೀಯ ಸಮಿತಿಗೆ ಉಲ್ಲೇಖಿಸಬೇಕಾಗಿತ್ತು; ಅದನ್ನೂ ಮಾಡಲಿಲ್ಲ. ಈ ಕಾರ್ಯವಿಧಾನಗಳನ್ನು ಬೈಪಾಸ್ ಮಾಡಿದ ನಂತರ, ರಾಜ್ಯಸಭೆಯಲ್ಲಿ ವಿಭಾಗ ಮತ್ತು ಮತಗಳನ್ನು (ಡಿವಿಜನ್ & ವೋಟ್ಸ್) ಔಪಚಾರಿಕವಾಗಿ ಎಣಿಸಲು ಸಹ ಅವಕಾಶ ನೀಡದೆ ಮೋದಿ ಸರ್ಕಾರ ಧಾರ್ಷ್ಟ್ಯದಿಂದ ವರ್ತಿಸಿತು. ಆ ಸಮಯದಲ್ಲಿ ಪ್ರತಾಪ್ ಭಾನು ಮೆಹ್ತಾ ಬರೆದಂತೆ, “ಇದು ಸಂಸತ್ತಿನ ಅಪಹಾಸ್ಯ. ಇದು ಮಸೂದೆಯನ್ನು ರೈಲ್‌ರೋಡಿಂಗ್ ಮಾಡುತ್ತಿದೆ, ಅದರ ಉದ್ದೇಶಪೂರ್ವಕ ಅರ್ಹತೆಗಳ ಮೇಲೆ ಅಲ್ಲ, ಆದರೆ ಅಧಿಕಾರದ ಗರ್ವದ ಮೇಲೆ…..’

ಕೃಷಿ ಪ್ರತಿಭಟನೆಗಳನ್ನು ಸರ್ಕಾರ ನಿಭಾಯಿಸುತ್ತಿರುವ ರೀತಿ, “ಭಾರತದ ಪ್ರಜಾಪ್ರಭುತ್ವ ನೀತಿ ಮತ್ತು ರಾಜಕೀಯ”ದ ಪುರಾವೆಯಾಗಿದೆ ಎಂದು ಎಂಇಎ ಹೇಳಿಕೊಂಡಿದೆ. ಸತ್ಯದಲ್ಲಿ, ಮೋದಿ ಸರ್ಕಾರವು ಸಂಸತ್ತಿನ ಒಳಗೆ ಮತ್ತು ಹೊರಗೆ ಅಪನಂಬುಗೆಯಿಂದ ವರ್ತಿಸಿದೆ. ಕಾನೂನುಗಳನ್ನು ಅಂತಹ ಅನಾಹುತ ಮತ್ತು ಮೋಸದ ರೀತಿಯಲ್ಲಿ ಅಂಗೀಕರಿಸದಿದ್ದಲ್ಲಿ, ಪ್ರತಿಭಟನೆಗಳು ಅಂತಿಮವಾಗಿ ಈ ದೊಡ್ಡ ಆಕಾರವನ್ನು ತೆಗೆದುಕೊಳ್ಳುತ್ತಿರಲಿಲ್ಲ.

ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಖಲಿಸ್ತಾನಿಗಳು ಎಂದು ಕರೆದು, ದೇಶದ ರಾಜಧಾನಿಯಾದ್ಯಂತ ಮೊಳೆಗಳು ಮತ್ತು ಬೇಲಿಗಳನ್ನು ನೆಟ್ಟು ಸಿಮೆಂಟ್ ಗೋಡೆಗಳ ಬ್ಯಾರಿಕೇಡಿಂಗ್ ಮಾಡಿ, ಜಿಲ್ಲೆಯ ನಂತರ ಜಿಲ್ಲೆಯಲ್ಲಿ ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಿ, ಪತ್ರಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಿ, ಟ್ವಿಟರ್‌ನಲ್ಲಿ ಹೋರಾಟದ ಖಾತೆಗಳನ್ನು ನಿರ್ಬಂಧಿಸಲು ಒತ್ತಡ ಹೇರಿದ ನಂತರವೂ “ಭಾರತದ ಪ್ರಜಾಪ್ರಭುತ್ವದ ನೀತಿಗಳನ್ನು” ಎತ್ತಿ ಹಿಡಿಯಲು ಮೋದಿ ಸರ್ಕಾರ ಬದ್ಧವಾಗಿದೆ ಎಂಬ ಹೇಳಿಕೆಗೆ ವಿಶ್ವಾಸಾರ್ಹತೆಯೇ ಉಳಿದಿಲ್ಲ.

ಇದನ್ನೂ ಓದಿ: ರಿಹಾನ್ನಾ, ಗ್ರೇಟಾ ಯಾರೆಂದು ಗೊತ್ತಿಲ್ಲ, ಅವರು ಹೋರಾಟ ಬೆಂಬಲಿಸಿದರೆ ತಪ್ಪೇನಿದೆ-ಟಿಕಾಯತ್‌

ನಿನ್ನೆಗೆ ಮೊದಲು, ರಿಹಾನ್ನಾ ಯಾರೆಂದು ನನಗೆ ತಿಳಿದಿರಲಿಲ್ಲ. ನಮ್ಮ ಗೃಹ ಸಚಿವ ಅಥವಾ ನಮ್ಮ ವಿದೇಶಾಂಗ ಸಚಿವರಿಗೂ ಗೊತ್ತಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ಆಕೆಯ 100 ಮಿಲಿಯನ್ ಟ್ವಿಟರ್ ಫಾಲೋವರ್ಸ್‌ಗಳಿಗೆ ಸಮಗೊಳಿಸಲು ಇಲ್ಲಿನ ಎಲ್ಲ ಸೆಲೆಬ್ರಿಟಿಗಳ ಫಾಲೋವರ್ಸ್ ಸಂಖ್ಯೆಯನ್ನು ಒಟ್ಟುಗೂಡಿಸಲು ಅವರು ಯತ್ನಿಸಿದರು. ಚಲನಚಿತ್ರ ತಾರೆಯರು ಮತ್ತು ಕ್ರೀಡಾಪಟುಗಳು ಸರ್ಕಾರಿ ಮಾರ್ಗವನ್ನು ಉತ್ತೇಜಿಸಲು ಅದೇ ವಾಕ್ಯಗಳನ್ನು, ಅದೇ ಹ್ಯಾಷ್‌ಟ್ಯಾಗ್‌ಗಳನ್ನು ಬಳಸಿದ್ದು ನಗೆಪಾಟಲು ವಿಷಯವಾಗಿದೆ.

ವಿದೇಶಿಯರೊಬ್ಬರ ಆರು ಪದಗಳ ಟ್ವೀಟ್‌ಗೆ ಸರ್ಕಾರದ ಪ್ರತಿಕ್ರಿಯೆ ಅಸಹ್ಯಕರ, ಅಪ್ರಾಮಾಣಿಕ ಮತ್ತು ಸಂಪೂರ್ಣವಾಗಿ ಜಾಳುಜಾಳಾಗಿದೆ. ವಿದೇಶಾಂಗ ಸಚಿವರು ತಮ್ಮದೇ ಆದ ಟ್ವೀಟ್‌ನಲ್ಲಿ ಹೀಗೆ ಹೇಳಿದ್ದಾರೆ: “ಭಾರತವನ್ನು ಗುರಿಯಾಗಿಸಿಕೊಂಡ ಪ್ರಚೋದಿತ ಅಭಿಯಾನಗಳು ಎಂದಿಗೂ ಯಶಸ್ವಿಯಾಗುವುದಿಲ್ಲ. ನಮ್ಮದನ್ನು ಕಾಪಾಡಿಕೊಳ್ಳಲು ನಮಗೆ ಇಂದು ಆತ್ಮವಿಶ್ವಾಸವಿದೆ. ಈ ಭಾರತ ಪುಟಿದೇಳುತ್ತದೆ”. ಈ ಟ್ವೀಟ್‌ನ ಮಾತುಗಳು ಅದರಲ್ಲಿ ಮಾಡಿದ ಹೆಗ್ಗಳಿಕೆಯ ಶೂನ್ಯತೆಯನ್ನು ತೋರಿಸಿದೆ. ತಮ್ಮ ಸಹೋದ್ಯೋಗಿಗಳೊಂದಿಗೆ ವಿದೇಶಾಂಗ ಸಚಿವರು ನಮ್ಮ ಸಾಮೂಹಿಕ ರಾಷ್ಟ್ರೀಯ ಅಹಂನ ದುರ್ಬಲತೆ ಮತ್ತು ಅಭದ್ರತೆಯನ್ನು ಜಗತ್ತಿಗೆ ಬಹಿರಂಗಪಡಿಸಿದರು. ಏಕೆಂದರೆ, ಸರ್ಕಾರದ ಪ್ರಭಾವಕ್ಕೆ ಒಳಗಾಗಿ ನಮ್ಮ ‘ಸೆಲೆಬ್ರಿಟಿ’ಗಳು ಮಾತನಾಡಿದರೆ, ಬಾರ್ಬಡಿಯನ್ ಗಾಯಕಿ ಯಾರ ಹಂಗೂ ಇಲ್ಲದೇ ಸ್ವತಂತ್ರ ಯೋಚನೆಯನ್ನು ಹರಿಬಿಟ್ಟಿದ್ದಾರೆ. ಆತ್ಮವಿಶ್ವಾಸವಿದ್ದಿದ್ದರೆ ಸರ್ಕಾರ ಗಾಯಕಿಯ ಟ್ವೀಟ್ ಅನ್ನು ನಿರ್ಲಕ್ಷ್ಯ ಮಾಡಬೇಕಿತ್ತು.

ಮೋದಿಯವರ ಭಾರತದಲ್ಲಿ ಪ್ರಚಲಿತಕ್ಕೆ ಬಂದಿರುವ ಈ ದೇಶಭಕ್ತಿಯ ಮಾದರಿಗೆ ಗಾಂಧೀಜಿ ಹೇಗೆ ಪ್ರತಿಕ್ರಿಯಿಸುತ್ತಿದ್ದರು? 1938 ರಲ್ಲಿ ಗಾಂಧಿಯವರು ಮಾಡಿದ ಕೆಲವು ಟೀಕೆಗಳು ಒಂದು ಸುಳಿವನ್ನು ನೀಡುತ್ತವೆ: “ಈ ಯುಗದಲ್ಲಿ, ದೂರವನ್ನು ಅಳಿಸಿ ಹಾಕಿದಾಗ, (ಜಗತ್ತಿನ ವಿವಿದ ಭಾಗಗಳ ಸಂಪರ್ಕ ಸುಲಭವಾದಾಗ) ಬಾವಿಯಲ್ಲಿರುವ ಕಪ್ಪೆಯನ್ನು ಅನುಕರಿಸಲು ಯಾವುದೇ ರಾಷ್ಟ್ರವು ಶಕ್ತವಾಗಿಲ್ಲ. ಕೆಲವೊಮ್ಮೆ ಇತರರು ನಮ್ಮನ್ನು ನೋಡುವಂತೆ ನಮ್ಮನ್ನು ನಾವೇ ನೋಡುವುದು ಉಲ್ಲಾಸಕರವಾಗಿರುತ್ತದೆ.”

  • ರಾಮಚಂದ್ರ ಗುಹಾ

(ಬೆಂಗಳೂರಿನಲ್ಲಿ ವಾಸವಾಗಿರುವ ರಾಮಚಂದ್ರ ಗುಹಾ ಹೆಸರಾಂತ ಇತಿಹಾಸಕಾರರು. ಕ್ರಿಕೆಟ್ ಬಗ್ಗೆಯೂ ಅಪಾರ ಒಲವು ಇರುವ ಅವರು ಕ್ರಿಕೆಟ್ ಕುರಿತು ಹಲವು ಪುಸ್ತಕ ಬರೆದಿದ್ದಾರೆ. ಲೇಖನದ ಅಭಿಪ್ರಾಯಗಳು ಅವರ ಸ್ವತಂತ್ರ ಅಭಿಪ್ರಾಯಗಳು)
ಲೇಖನ ಕೃಪೆ: ಎನ್‌ಡಿಟಿವಿ.ಕಾಂ


ಇದನ್ನೂ ಓದಿ: ಹಸ್ತಕ್ಷೇಪವಲ್ಲ, ಮನುಷ್ಯರಿಗಾಗಿ ಮನುಷ್ಯ ನಿಲ್ಲುವ ಮಾನವೀಯತೆ: ಸೋನಾಕ್ಷಿ ಸಿನ್ಹಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...