Homeಅಂತರಾಷ್ಟ್ರೀಯಭಾರತೀಯ ಗಣತಂತ್ರದ ಬಹುದೊಡ್ಡ ಹಬ್ಬಕ್ಕೆ ಸ್ತ್ರೀ ದ್ವೇಷಿ, ಮತಾಂಧ, ಸರ್ವಾಧಿಕಾರಿ ಪ್ರವೃತ್ತಿಯ ಮುಖ್ಯ ಅತಿಥಿ!

ಭಾರತೀಯ ಗಣತಂತ್ರದ ಬಹುದೊಡ್ಡ ಹಬ್ಬಕ್ಕೆ ಸ್ತ್ರೀ ದ್ವೇಷಿ, ಮತಾಂಧ, ಸರ್ವಾಧಿಕಾರಿ ಪ್ರವೃತ್ತಿಯ ಮುಖ್ಯ ಅತಿಥಿ!

"ಇವರನ್ನು ಹಿಟ್ಲರ್, ಮುಸ್ಸೋಲಿನಿ ಎಂದೆಲ್ಲಾ ಕರೆಯುತ್ತಾರೆ. ಭ್ರಷ್ಟ ಎಂದಲ್ಲ!" ಜನರಿಗೆ ಭ್ರಷ್ಟಾಚಾರಕ್ಕಿಂತ ಸರ್ವಾಧಿಕಾರ ಉತ್ತಮ ಅನಿಸಿತು; ಬೊಲ್ಸೊನಾರೊ ಗೆದ್ದರು

- Advertisement -
- Advertisement -

“ನಾನು ನಿನ್ನನ್ನು ಅತ್ಯಾಚಾರ ಮಾಡುವುದಿಲ್ಲ. ನೀನು ಅದಕ್ಕೂ ತಕ್ಕವಳಲ್ಲದ ಕುರೂಪಿ.” ಹೀಗೆಂದು ತನ್ನ ಸಹೋದ್ಯೋಗಿ ಮಹಿಳೆ, ಅದೂ ಸಂಸತ್ ಸದಸ್ಯೆಗೆ ಬಹಿರಂಗವಾಗಿ ಹೇಳಿದ ವ್ಯಕ್ತಿಯನ್ನು ಏನೆಂದು ಕರೆಯುತ್ತೀರಿ? ಸ್ತ್ರೀ ದ್ವೇಷಿ ಎಂದೇ? ವಿಕೃತನೆಂದೆ?

“ಪೊಲೀಸನೊಬ್ಬನಿಗೆ ಜನರನ್ನು ಕೊಲ್ಲಲು ಆಗದಿದ್ದರೆ, ಅವನು ಪೊಲೀಸನೇ ಅಲ್ಲ!” ಈ ರೀತಿಯಾಗಿ ಒಬ್ಬ ರಾಜಕಾರಣಿ, ರಾಷ್ಟ್ರ ನಾಯಕ ಹೇಳಿದರೆ ಏನೆಂದು ಕರೆಯುತ್ತೀರಿ? ಸರ್ವಾಧಿಕಾರಿ ಪ್ರವೃತ್ತಿಯ ನಿರ್ದಯಿ ಎಂದೇ?

“ಕರಿಯರು ಪ್ರಾಣಿಗಳಿಗೆ ಸಮ. ಅವರು ಮೃಗಾಲಯದಲ್ಲಿ ಇರಬೇಕಾದವರು. ಗುಲಾಮಿಗಷ್ಟೇ ಅರ್ಹರು” ಎಂದು ಯಾರಾದರೂ ಹೇಳಿದರೆ, ಬಹುತೇಕ ಕರಿಯರು ಅಥವಾ ಕಂದು ಬಣ್ಣದವರಾದ ನಾವು ಹೇಗೆ ಪ್ರತಿಕ್ರಿಯಿಸಬಹುದು? ಜನಾಂಗೀಯವಾದಿ ಎಂದೇ?

ಇದನ್ನು ಹೇಳಿದ್ದು ಬೇರಾರೂ ಅಲ್ಲ! ಭಾರತದಂತಹಾ ಮಹಾನ್ ಪ್ರಜಾಪ್ರಭುತ್ವದ ಅತಿದೊಡ್ಡ ಸಾರ್ವಜನಿಕ ಹಬ್ಬಗಳಲ್ಲಿ ಒಂದಾದ ಗಣರಾಜ್ಯೋತ್ಸವಕ್ಕೆ ನರೇಂದ್ರ ಮೋದಿ ಸರಕಾರ ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವ ಬ್ರೆಜಿಲ್‌ನ ಬಾಯಿಬಡುಕ, ತೀವ್ರ ಬಲಪಂಥೀಯ ಅಧ್ಯಕ್ಷ ಜೈರ್ ಬೊಲ್ಸೊನಾರೊ!

ಇದನ್ನೂ ಓದಿ: ಬ್ರೆಜಿಲ್ ಮೋದಿಯ ಕುರಿತ ಕಡೆಯ ಕಂತು

ಕಾಶ್ಮೀರದಲ್ಲಿ ನಡೆಯುತ್ತಿರುವ ದಮನವನ್ನು ಮುಚ್ಚಿಹಾಕುವ ಸಾರ್ವಜನಿಕ ಸಂಪರ್ಕ ಪ್ರಹಸನಕ್ಕೆ ತೆರಿಗೆದಾರರ ಖರ್ಚಿನಲ್ಲಿ ಐರೋಪ್ಯ ಒಕ್ಕೂಟದ ಬಲಪಂಥೀಯ ಸಂಸದರನ್ನು ಆಹ್ವಾನಿಸಿ, ಪ್ರಪಂಚದ ಕಣ್ಣಿಗೆ ತೆರೆ ಎಳೆಯಲು ಯತ್ನಿಸಿ, ಮೋದಿ ಸರಕಾರ ಟೀಕೆಗೆ ಗುರಿಯಾಗಿತ್ತು. ಅದು ಈಗ ಒಂದು ಹೆಜ್ಜೆ ಮುಂದೆ ಹೋಗಿ, ಭಾರತದ 71ನೇ ಗಣರಾಜ್ಯೋತ್ಸವಕ್ಕೆ ಈತನನ್ನು ಆಹ್ವಾನಿಸಿರುವುದು ಮತ್ತೊಮ್ಮೆ ಅರ್ಹವಾಗಿಯೇ ಟೀಕೆಗೆ ಕಾರಣವಾಗಿದೆ. ಜೊತೆಗೆ ಯುಎಸ್ಎಯ ಬಂಡವಾಳಿಗರ ಕೈಗೊಂಬೆಯಂತೆ ವರ್ತಿಸುತ್ತಿರುವ ಬ್ರೆಜಿಲ್‌ನ ಹಾದಿಯಲ್ಲಿಯೇ ಭಾರತವೂ ಸಾಗಲಿರುವ ಸೂಚನೆಯೇ ಇದು ಎಂಬ ಸಂಶಯವನ್ನೂ ಮೂಡಿಸಿದೆ.

ಮೇಲೆ ಮಾಡಲಾದ ಟೀಕೆಗಳಿಗೆ ಸ್ಪಷ್ಟ ಮತ್ತು ಬಹಿರಂಗವಾದ ಆಧಾರಗಳಿವೆ. 1999ರಲ್ಲಿ ಬೊಲ್ಸೊನಾರೊ, ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಫೆರ್ನಾಂಡೊ ಹೆನ್ರಿಕ್ ಕಾರ್ದೋಸೊ ಅವರ ಹತ್ಯೆಗೆ ಬಹಿರಂಗವಾಗಿ ಕರೆ ನೀಡಿದ್ದರು. 2002ರಲ್ಲಿ ಅವರು ಸಂಸದೆ ಮರಿಯಾ ದೊ ರೊಸಾರಿಯೊ ಅವರಿಗೆ, ತಾನವಳನ್ನು ಅತ್ಯಾಚಾರ ಮಾಡುವುದಿಲ್ಲ. ಆಕೆ ಅದಕ್ಕೂ ಅರ್ಹಳಲ್ಲದ ಕುರೂಪಿ ಎಂದು ಹೇಳಿದ್ದರು. 2011ರಲ್ಲಿ ತನ್ನ ಮಗ ಸಲಿಂಗಕಾಮಿ ಎಂದು ಕರೆಸಿಕೊಳ್ಳುವುದಕ್ಕಿಂತ ಅಪಘಾತದಲ್ಲಿ ಸಾಯುವುದು ಮೇಲು ಎಂದು ಸಲಿಂಗ ಕಾಮಿಗಳನ್ನು ಹೀಗೆಳೆದಿದ್ದರು. 2017ರಲ್ಲಿ ಜನರನ್ನು ಕೊಲ್ಲಲಾಗದ ಪೊಲೀಸ್, ಒಬ್ಬ ಪೊಲೀಸನೇ ಅಲ್ಲ ಎಂದಿದ್ದರು. ಇವೆಲ್ಲವೂ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಕಟ, ಪ್ರಚಾರವಾಗಿವೆ. ಇಂತಹಾ ವಿವಾದಾತ್ಮಕ, ತೀವ್ರವಾದಿ ಹೇಳಿಕೆಗಳಿಂದಲೇ ಅವರು ವಿಶ್ವದಾದ್ಯಂತದ ತೀವ್ರ ಬಲಪಂಥೀಯ ನಾಯಕರ ಪಟ್ಟಿಯಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಅವರು ಭಾರತದಲ್ಲಿ ಯದ್ವಾತದ್ವಾ, ಅಸಂಬದ್ಧ ಹೇಳಿಕೆಗಳನ್ನು ನೀಡುವ ಬಲಪಂಥೀಯ ಪುಢಾರಿ, ಸಾಧು, ಸಂತೆಗಳನ್ನು ನೆನೆಪಿಸುತ್ತಾರೆ!

ಇಲ್ಲಿ ಜೈರ್ ಬೊಲ್ಸೊನಾರೊ ಜೀವನ ಕಥನವನ್ನು ನೀಡುವುದು ಈ ಲೇಖನದ  ಉದ್ದೇಶವಲ್ಲ. ಪ್ರಪಂಚದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವೆನಿಸಿದ ನಾವು ನಮ್ಮ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ಹಬ್ಬಗಳಲ್ಲಿ ಒಂದಾದ ಗಣರಾಜ್ಯೋತ್ಸವಕ್ಕೆ ಹೋಗಿಹೋಗಿ ಎಂತವರನ್ನು ಮುಖ್ಯ ಅತಿಥಿಯನ್ನು ಆಹ್ವಾನಿಸಿ, ಜಗತ್ತಿನ ಕುಚೋದ್ಯದ ದೃಷ್ಟಿಗೆ ಬಿದ್ದಿದ್ದೇವೆ ಮತ್ತು ನಮ್ಮ ನಾಯಕರು ಯಾಕಾಗಿ ಹೀಗೆ ಮಾಡಿದ್ದಾರೆ; ಅವರ ಬ್ರೆಜಿಲ್ ಮತ್ತು ಬೊಲ್ಸೊನಾರೊ ಪ್ರೇಮಕ್ಕೆ ಕಾರಣವೇನೆಂದು ಓದುಗರ ಗಮನಕ್ಕೆ ತಂದು ಯೋಚಿಸಲು ಪ್ರೇರೇಪಿಸುವುದಷ್ಟೇ ಆಗಿದೆ.

ಬೊಲ್ಸೊನಾರೊ 1973ರಲ್ಲಿ ಸೈನ್ಯ ಸೇರಿ ಮೇಲಿನ ಹಂತಕ್ಕೆ ಏರಿದರು. ಆತನ ಕಮಾಂಡಿಂಗ್ ಆಫೀಸರ್ ಒಬ್ಬರು ಹೀಗೆ ಹೇಳಿದ್ದರು- “ಆತ ಅತಿಯಾದ ಹಣಕಾಸಿನ ಮಹತ್ವಾಕಾಂಕ್ಷೆ ಹೊಂದಿದ ಮನುಷ್ಯ… ಆತನಲ್ಲಿ ತರ್ಕ, ವಿವೇಚನಾಶೀಲತೆ ಮತ್ತು ಸಮತೋಲನವಿಲ್ಲ”. ಆದರೆ, ಆತ ಸಾಮಾನ್ಯ ಮನುಷ್ಯನಂತೆ ಚಿಂತಿಸುತ್ತಾರೆ ಎಂಬ ಜನರ ಭ್ರಮೆಯು ಆತನಿಗೆ ಅಪಾರ ರಾಜಕೀಯ ಲಾಭವನ್ನು ತಂದುಕೊಟ್ಟಿದೆ.

1986ರಲ್ಲಿ ಮಿಲಿಟರಿ ಸೇರಿ ಒಂದು ದಶಕದ ಬಳಿಕ ಆತ ಸೇನೆಯ ಕಡಿಮೆ ಸಂಬಳದ ಬಗ್ಗೆ ದೇಶದ ಪ್ರತಿಷ್ಟಿತ ಪತ್ರಿಕೆ “ವೆಜಾ’ದಲ್ಲಿ ಲೇಖನವೊಂದನ್ನು ಬರೆದರು. ಅದಕ್ಕಾಗಿ ಆತನಿಗೆ 15 ದಿನಗಳ ಸೆರೆವಾಸ ವಿಧಿಸಲಾಯಿತು. ಆದರೆ, ಅದು ಆತನಿಗೆ ದೇಶಪ್ರೇಮಿ ಎಂಬ ಹೆಸರು ತಂದು ಕೊಟ್ಟು, ಆತನ ರಾಜಕೀಯ ಪ್ರವೇಶಕ್ಕೆ ಭಾರೀ ಚಾಲನೆ ನೀಡಿತು.‌

1986ರಲ್ಲಿ ಈತ ರಾಜಧಾನಿ ರಿಯೋ ಡಿ’ಜನೈರೋದ ನಗರ ಸಭೆಯ ಸದಸ್ಯನಾಗಿ ಆಯ್ಕೆಯಾದರು. 1991ರ ಹೊತ್ತಿಗೆ ಸಂಸದರೂ ಆದರು. ನಂತರದ ಎರಡೂವರೆ ದಶಕಗಳ ಕಾಲ ರಾಜಕೀಯವಾಗಿ ಹಿನ್ನೆಲೆಯಲ್ಲಿಯೇ ಇದ್ದರು. ಆಗಾಗ, ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಲ್ಲಿದ್ದರೂ, ಬ್ರೆಜಿಲ್‌ನ ರಾಜಕೀಯದಲ್ಲಿ ನಗಣ್ಯರಾಗಿದ್ದರು.

2017ರಲ್ಲಷ್ಷೇ ಆತ ಬ್ರೆಜಿಲ್ ಸಂಸತ್ತಿನ ಕೆಳಮನೆಯ ಸ್ಪೀಕರ್ ಸ್ಥಾನಕ್ಕೆ ಸ್ಪರ್ಧಿಸಿದಾಗ ಕೇವಲ ನಾಲ್ಕೇ ನಾಲ್ಕು ಮತಗಳು ಬಿದ್ದಿದ್ದವು. ಆದರೆ, ಜನವರಿ 2019ರ ಚುನಾವಣೆಯಲ್ಲಿ ಏಕಾಏಕಿಯಾಗಿ ಉಲ್ಕೆಯಂತೆ ಬ್ರೆಜಿಲ್‌ನ ಅಧ್ಯಕ್ಷರಾಗಿ ಚುನಾಯಿತರಾದರು.

2008ರ ಆರ್ಥಿಕ ಬಿಕ್ಕಟ್ಟು ಎಲ್ಲಾ ದೇಶಗಳಂತೆ ಬ್ರೆಜಿಲನ್ನೂ ತಟ್ಟಿತ್ತು. 2014ರ ತೈಲ ದೈತ್ಯ ಪೆಟ್ರೋಬ್ರಾಸ್ ಕಂಪೆನಿಯನ್ನು ಒಳಗೊಂಡ ಭಾರೀ ಹಗರಣ ಬೊಲ್ಸೊನಾರೊಗೆ ಭಾರಿ ಲಾಭವನ್ನೇ ತಂದುಕೊಟ್ಟಿತ್ತು. ಹಣದುಬ್ಬರ ಏರಿ, ತಲಾದಾಯದಲ್ಲಿ ಭಾರೀ ಕುಸಿತವಾಗುವುದರ ಜೊತೆಗೆ, ಅಪರಾಧ ಪ್ರಮಾಣದಲ್ಲಿಯೂ ಭಾರೀ ಏರಿಕೆಯಾಯಿತು. ಅಪರಾಧ ಅತ್ಯಂತ ಹೆಚ್ಚಿರುವ ಪ್ರಪಂಚದ 50 ನಗರಗಳಲ್ಲಿ ಬ್ರೆಜಿಲ್‌ 19ನೇ ಸ್ಥಾನದಲ್ಲಿತ್ತು. ಪ್ರತೀ ವರ್ಷ ಸುಮಾರು 60,000 ಮಂದಿ ಆತ್ಮಹತ್ಯೆ ಮಾಡಿಕೊಂಡರು.

ತನಿಖೆ ನಡೆದು ಮಾಜಿ ಅಧ್ಯಕ್ಷ ದಿಲ್ಮಾ ರೌಸೆಫ್ ಸೇರಿದಂತೆ ಅನೇಕ ರಾಜಕಾರಣಿಗಳು, ಅಧಿಕಾರಿಗಳ ಭ್ರಷ್ಟಾಚಾರ ಬಯಲಾಗಿತ್ತು. ರೌಸೆಫ್ ನಂತರ ಬಂದ ಮೈಕೆಲ್ ಟರ್ನರ್‌ಗೂ ಅದೇ ಗತಿಯಾಯಿತು.  ಜನರು ರೋಸಿ ಹೋಗಿದ್ದರು. ಇಂತಹಾ ಸಂದರ್ಭದಲ್ಲಿ ತಾನು ಪ್ರಾಮಾಣಿಕನಾಗಿದ್ದು, ಭ್ರಷ್ಟಾಚಾರ ನಿಲ್ಲಿಸುವ ಭರವಸೆ ನೀಡಿದ ಬೊಲ್ಸೊನಾರೊರನ್ನು ಜನರು ಬೆಂಬಲಿಸಿದರು. ಆತನ ಪ್ರಚಾರದ ವೇಳೆ ಒಂದು ಪೋಸ್ಟರ್ ಹೀಗಿತ್ತು- ಬ್ರೆಜಿಲ್ ಧ್ವಜದ ಮುಂದೆ ಬೊಲ್ಸೊನಾರೊ ನಿಂತಿದ್ದಾರೆ; “ಇವರನ್ನು ಹಿಟ್ಲರ್, ಮುಸ್ಸೋಲಿನಿ ಎಂದೆಲ್ಲಾ ಕರೆಯುತ್ತಾರೆ. ಭ್ರಷ್ಟ ಎಂದಲ್ಲ!” ಜನರಿಗೆ ಭ್ರಷ್ಟಾಚಾರಕ್ಕಿಂತ ಸರ್ವಾಧಿಕಾರ ಉತ್ತಮ ಅನಿಸಿತು; ಬೊಲ್ಸೊನಾರೊ ಗೆದ್ದರು.

ಅಯ್ಕೆಯಾದ ಬಳಿಕ ಬೊಲ್ಸೊನಾರೊ, ಬಂಡವಾಳಶಾಹಿ ಮತ್ತು ಯುಎಸ್‌ಎ ನಿರ್ದೇಶಿತ ‘ಸುಧಾರಣಾ’ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಭಾರತದಲ್ಲಿ ಆಗುತ್ತಿರುವಂತೆಯೇ ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಗೆ ಮಾರುತ್ತಿದ್ದಾರೆ. ಅವರು ಕೂಡಾ ತಮ್ಮ ದೇಶದಲ್ಲಿ ಜನಾಂಗೀಯವಾಗಿ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ವಿವಿಧ ಸಾಮಾಜಿಕ ಗುಂಪುಗಳ ನಡುವೆ ಅಸ್ಮಿತೆಯ ರಾಜಕೀಯ ಮುಂದುವರಿಸಿದ್ದಾರೆ. ಜನಮರುಳು ಘೋಷಣೆಗಳನ್ನು ಹಾಕುತ್ತಿದ್ದಾರೆ. ಬ್ರೆಜಿಲ್‌ನ ಪರಿಸ್ಥಿತಿ, ಅದು ಹಿಡಿದಿರುವ ರಾಜಕೀಯ, ಆರ್ಥಿಕ ಹಾದಿ, ಅಲ್ಲಿನ ಮತ್ತು ಇಲ್ಲಿನ ರಾಜಕೀಯ ಹಿನ್ನೆಲೆ, ರಾಜಕಾರಣಿಗಳ ದಿಢೀರ್ ಜನಪ್ರಿಯತೆ, ಅವರ ಕಾರ್ಯತಂತ್ರ ಇತ್ಯಾದಿಗಳಲ್ಲಿ ಅನೇಕ ಸಾಮ್ಯಗಳಿದ್ದು, ಆ ಬಗ್ಗೆಯೇ ಒಂದು ಪ್ರತ್ಯೇಕ ಲೇಖನ ಬರೆಯಬಹುದು!

ಹೀಗಿದ್ದೂ, ಇಂತಹಾ ಆಕ್ಷೇಪಾರ್ಹ ಹಿನ್ನೆಲೆ ಇರುವ ಸರ್ವಾಧಿಕಾರಿ ಪ್ರವೃತ್ತಿಯ, ತೀವ್ರ ಬಲಪಂಥೀಯ ನಾಯಕನನ್ನು ನಮ್ಮ ದೇಶದ ನಾಯಕರು ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಯಾಕೆ ಆರಿಸಿ, ಆಹ್ವಾನಿಸಿದರು? ಅವರು ಬ್ರೆಜಿಲ್‌ನಲ್ಲಿ ತಮ್ಮ ಹಾದಿಯನ್ನು ಕಂಡರೇ, ಅಥವಾ ಅದುವೇ ತಮ್ಮ ಹಾದಿಯನ್ನು ಅನುಸರಿಸುತ್ತಿದೆ ಎಂಬ ಅಭಿಮಾನದಿಂದ ಕರೆದರೆ? ನಾವು ಈ ಕ್ರಮದ ಹಿನ್ನೆಲೆಯಲ್ಲಿ ಭಾರತ ಮುಂದೆ ಸಾಗಬಹುದಾದ ದಿಕ್ಕನ್ನು ಊಹಿಸಬಹುದಾಗಿದೆ. ಅಲ್ಲದೆ, ನಮ್ಮ ಮತ್ತು ಬ್ರೆಜಿಲ್‌ನ ಬಲಪಂಥೀಯ ನಡೆಗಳು, ಗುಲಾಮಿ ಬಂಡವಾಳಪರ ಆರ್ಥಿಕ ನಡೆಗಳನ್ನು ಒಟ್ಟಾಗಿಯೇ ಸೂಕ್ಷ್ಮವಾಗಿ ಗಮನಿಸಬೇಕಾಗಿದೆ.

(ಪೂರಕ ಮಾಹಿತಿ: ದಿ ಕ್ವಿಂಟ್ ಮತ್ತು ಇತರ ಸಾಮಾಜಿಕ ಜಾಲತಾಣಗಳು)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಹಿರೇಮಠ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ

0
ನೇಹಾ ಹಿರೇಮಠ್ ಕೊಲೆ ಅತ್ಯಂತ ದುರದೃಷ್ಟಕರ. ತ್ವರಿತ ವಿಚಾರಣೆಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಜೊತೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಿ, ಪ್ರತ್ಯೇಕ ವಿಚಾರಣೆ ಮಾಡಿ ಅಪರಾಧಿಗೆ ಕಠಿಣ ಶಿಕ್ಷೆ ಕೊಡಿಸಲು ಸರ್ಕಾರ ಬದ್ದವಾಗಿದೆ ಎಂದು...