Homeಆರೋಗ್ಯಗೋರಖ್‍ಪುರ ಮತ್ತು ಮುಜಾಫರ್‍ ಪುರ ದುರಂತಗಳು ಏಕೆ ಮರುಕಳಿಸುತ್ತಲೇ ಇರಲಿವೆ?

ಗೋರಖ್‍ಪುರ ಮತ್ತು ಮುಜಾಫರ್‍ ಪುರ ದುರಂತಗಳು ಏಕೆ ಮರುಕಳಿಸುತ್ತಲೇ ಇರಲಿವೆ?

- Advertisement -
- Advertisement -

| ಡಾ. ಸ್ವಾತಿ ಶುಕ್ಲಾ |ಅನುವಾದ: ನಿಖಿಲ್ ಕೋಲ್ಪೆ

ಬಿಹಾರದಲ್ಲಿ ಎನ್ಸೆಸೆಫಲೈಟಿಸ್‍ನಿಂದ ಸಾವಿಗೀಡಾದ ಮಕ್ಕಳ ಸಂಖ್ಯೆ 150ಕ್ಕೆ ಹತ್ತಿರವಾಗಿದೆ. ಈ ದೇಶದ ಒಳನಾಡುಗಳ ಪರಿಚಯ ಇರುವವರಿಗೆ ಮುಜಾಫರ್‍ಪುರದ ದುರಂತ ಸಂಭವಿಸಲೆಂದೇ ಕಾಯುತ್ತಿತ್ತು ಎಂದು ಸುಲಭದಲ್ಲಿ ಅರಿವಾಗುತ್ತದೆ. ಗ್ರಾಮೀಣ ಸಮುದಾಯವು ಇಲ್ಲಿ ಜಾತಿ, ಬಡತನ, ಅಪೌಷ್ಠಿಕತೆ ಮತ್ತು ಕಳಪೆ ಆರೋಗ್ಯ ಆಡಳಿತಗಳ ಜಾಲದಲ್ಲಿ ಸಿಕ್ಕಿಬಿದ್ದಿದೆ.

ಮೊದಲ ವರದಿಗಳು ಲಿಚಿ ಕಾಯಿಗಳಲ್ಲಿ ಇರುವ, ದೇಹದಲ್ಲಿ ಗ್ಲೂಕೋಸ್ ಅಂಶವನ್ನು ತೀರಾ ಕೆಳಕ್ಕಿಳಿಸುವ ವಿಷಕಾರಕ ಪದಾರ್ಥಗಳನ್ನು ದೂರಿದ್ದವು. ಆದರೆ, ನಂತರದ ಕೆಲವೇ ದಿನಗಳಲ್ಲಿ ಹೊಟ್ಟೆಗಿಲ್ಲದೆ ಹಸಿವಿನಿಂದ ಕಾಯಿ ಲಿಚಿಯನ್ನು ತಿನ್ನುತ್ತಿದ್ದ ಮಕ್ಕಳು ಈ ರೋಗದಿಂದ ಬಾಧಿತರಾಗುತ್ತಿದ್ದಾರೆ ಎಂಬುದು ಸ್ಪಷ್ಟವಾಯಿತು. ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಹೆಚ್ಚಿನವು ಒಂದೇ ಆಸ್ಪತ್ರೆ- ಶ್ರೀಕೃಷ್ಣ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮೇಲೆ ಗಮನ ಕೇಂದ್ರೀಕರಿಸಿವೆ. ಮೂರನೇ ಹಂತದ ಘಟಕವಾಗಿರುವ ಅದು ಕೇಸುಗಳ ಸಂಖ್ಯೆಯನ್ನು ನಿಭಾಯಿಸಲು ಒದ್ದಾಡುತ್ತಿದೆ. ಮುಖ್ಯ ಗಮನವು ಆಸ್ಪತ್ರೆಯ ಸ್ವಚ್ಛತೆ, ಸಾಕಷ್ಟು ಸಂಖ್ಯೆಯ ಹಾಸಿಗೆಗಳು ಇಲ್ಲದೇ ಇರುವುದು, ರೋಗಿಗಳು ಮತ್ತು ಹೆತ್ತವರು ನೆಲದ ಮೇಲೆಯೇ ಮಲಗುತ್ತಿರುವುದು, ವೈದ್ಯರ ಕೊರತೆ ಇತ್ಯಾದಿಗಳ ಕುರಿತೇ ಇತ್ತು. ಇವೆಲ್ಲವೂ ನಿಜ.

ಆದರೆ, ಈ ತಪ್ಪಿಸಬಹುದಾಗಿದ್ದ ದುರಂತಕ್ಕೆ ಇತರ ಕಾರಣಗಳೂ ಇವೆ. ಈ ದುರಂತದ ಉತ್ತುಂಗದಲ್ಲಿ ನಾವು ಕೇಂದ್ರ ಮತ್ತು ರಾಜ್ಯ ಸರಕಾರಗಳ ಬಳಿ, ಅದರಲ್ಲೂ ಮುಖ್ಯವಾಗಿ ನಮ್ಮಲ್ಲಿಯೇ ಕೇಳಬೇಕಾದ ಕೆಲವು ಪ್ರಶ್ನೆಗಳಿವೆ. ಅವುಗಳಲ್ಲಿ ಮುಖ್ಯವಾಗಿರುವುದು ಎಂದರೆ ಎಷ್ಟರತನಕ ನಾವು ಈ ದುರಂತ ಪರಿಸ್ಥಿತಿಯನ್ನು ಮುಂದುವರಿಯಲು ಬಿಡಲಿದ್ದೇವೆ ಎಂಬುದು. ಆದರೆ, ಈ ಕೆಳಗಿನ ಪ್ರಶ್ನೆಗಳನ್ನು ಬಹುಶಃ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಎಂದಿಗೂ ಕೇಳಲಾರವು.

1. ಹಲವು ಮಕ್ಕಳು ಹಳ್ಳಿಗಳಿಂದ ಆಸ್ಪತ್ರೆಗೆ ಬರುವ ದೂರದ ಪ್ರಯಾಣದ ವೇಳೆ ಸಾವಿಗೀಡಾದವು. ಮಕ್ಕಳನ್ನು ಸಾಗಿಸಲು ನೆರವಾದ ಹಲವು ಸ್ಥಳೀಯ ವರದಿಗಾರರು ಮತ್ತು ಸ್ವಯಂಸೇವಕರು, ಮುಚ್ಚಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಎತ್ತಿಹೇಳಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗ್ಲೂಕೋಸ್ ಅಥವಾ ಕನಿಷ್ಟ ಓಆರ್‍ಎಸ್ ನೀಡುವುದರಿಂದ ಪ್ರಾಥಮಿಕ ರೋಗಲಕ್ಷಣಗಳನ್ನು ಗುಣಪಡಿಸಬಹುದಾಗಿದ್ದರೂ, ತೃತೀಯ ಹಂತದ ಆಸ್ಪತ್ರೆಗೆ ಮಕ್ಕಳನ್ನು ಸಾಗಿಸಬೇಕಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಏಕೆ ಮುಚ್ಚಿದ್ದವು ಮತ್ತು ಆಶಾ ಕಾರ್ಯಕರ್ತೆಯರು ಏನು ಮಾಡುತ್ತಿದ್ದರು? ಈಗಿರುವ ಆರೋಗ್ಯ ಕೇಂದ್ರಗಳ ದಯನೀಯ ಸ್ಥಿತಿಗೆ ಯಾರು ಕಾರಣರು?

2. ಬಿಹಾರದಲ್ಲಿ ಹೆಚ್ಚುಕಡಿಮೆ 44 ಶೇಕಡಾ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಇದು ರೋಗವನ್ನು ಎದುರಿಸುವ ಶಕ್ತಿಯನ್ನು ಕಡಿಮೆ ಮಾಡುತ್ತದೆ. ದುರ್ಬಲ ಪ್ರಕೃತಿಯ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಎಇಎಸ್ ಗುಣಲಕ್ಷಣಗಳು ಹೆಚ್ಚಾಗಿ ಉಲ್ಭಣಿಸಿವೆ ಎಂದು ಅಮೆರಿಕದ ಸಂಸ್ಥೆ- ಇನ್‍ಸ್ಟಿಟ್ಯೂಟ್ ಫಾರ್ ಡಿಸೀಸ್ ಕಂಟ್ರೋಲ್ ಮತ್ತು ಅದರ ಭಾರತೀಯ ಸಹಯೋಗಿಗಳು ನಡೆಸಿದ ವೈಜ್ಞಾನಿಕ ಅಧ್ಯಯನಗಳು ತೋರಿಸಿಕೊಟ್ಟಿವೆ. ಬಿಹಾರದಲ್ಲಿ ಎಇಎಸ್ ಪತ್ತೆಯಾದ ಎಲ್ಲಾ ಮಕ್ಕಳು ಬಡ ಕೆಳಜಾತಿ ಕುಟುಂಬಗಳ ಮಕ್ಕಳಾಗಿದ್ದು, ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಯಾವುದೇ ಎಇಎಸ್ ಪ್ರಕರಣ ಪತ್ತೆಯಾಗಿಲ್ಲ. ಹಲವು ಜಿಲ್ಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮವನ್ನು ನಿಲ್ಲಿಸಲಾಗಿದೆ ಎಂದು ತಳಮಟ್ಟದ ವರದಿಗಳು ಹೇಳುತ್ತವೆ. ಅರ್ಧದಷ್ಟು ಮಕ್ಕಳು ಅಪೌಷ್ಠಿಕತೆಯಿಂದ ನರಳುತ್ತಿರುವಾಗ ಸರಕಾರ ಅವರ ಪರಿಸ್ಥಿತಿಯನ್ನು ಸುಧಾರಿಸಲು ಏನು ಮಾಡುತ್ತಿದೆ?

3. ರಾಜ್ಯವು ಈ ಪ್ರದೇಶದಲ್ಲಿ 1995ರಿಂದಲೂ ಎಇಎಸ್ ಪ್ರಕರಣಗಳನ್ನು ಕಾಣುತ್ತಿದೆ. ಈ ರೋಗವನ್ನು ನಿಯಂತ್ರಿಸಲು ಒಂದು ಸಾಮಾನ್ಯ ಕಾರ್ಯಾಚರಣಾ ಪ್ರಕ್ರಿಯೆ (ಎಸ್‍ಓಪಿ)ಯನ್ನು ರೂಪಿಸಲು ಆರೋಗ್ಯ ಇಲಾಖೆಗೆ 17 ವರ್ಷಗಳು ಬೇಕಾದವು. ಆ ಬಳಿಕ ಈ ರೋಗ ನಿಯಂತ್ರಣದಲ್ಲಿ ಸರಕಾರವು ಸಮಾಧಾನಕರ ಯಶಸ್ಸು ಕಂಡಿದ್ದು, ಸಾವಿನ ಸಂಖ್ಯೆಯನ್ನು ತಹಬಂದಿಗೆ ತರುವಲ್ಲಿ ಯಶಸ್ವಿಯಾಗಿತ್ತು. ಈ ಬಾರಿ ಸಾವಿನ ಸಂಖ್ಯೆ ನೂರು ದಾಟಿದ ಬಳಿಕವಷ್ಟೇ ರಾಜ್ಯ ಮತ್ತು ಕೇಂದ್ರ ಮಂತ್ರಿಗಳು ಈ ಪ್ರದೇಶಗಳಲ್ಲಿ ಸುತ್ತಾಟ ಆರಂಭಿಸಿದ್ದಾರೆ. ಆಡಳಿತ, ಆರೋಗ್ಯ ಅಧಿಕಾರಿಗಳು ಮತ್ತು ಮಂತ್ರಿಗಳ ಅಸಡ್ಡೆಯ ಮನೋಭಾವವನ್ನು ಕ್ಯಾಮೆರಾಗಳು ಸೆರೆಹಿಡಿದಿವೆ. ಆದರೂ, “ಈ ತಿಂಗಳಲ್ಲಿ ಮಕ್ಕಳು ಸಾಯುವುದು ಸಾಮಾನ್ಯ” ಎಂದು ತಿಪ್ಪೆಸಾರಿಸಿದರೂ ಏನೂ ಆಗದೆ ಬಚಾವಾಗುವಂತಹ ಉಡಾಫೆಗೆ ಕಾರಣವಾಗುವುದು ಏನು ಎಂದು ಕೇಳಲು ನಾವು ವಿಫಲರಾಗಿದ್ದೇವೆ.

4. ಚುನಾವಣೆಯ ಕಾರಣದಿಂದ ಈ ಬಾರಿ ಜಾಗೃತಿ ಕಾರ್ಯಕ್ರಮಗಳು ಸರಿಯಾಗಿ ನಡೆದಿಲ್ಲ ಎಂದು ಆರೋಗ್ಯ ಖಾತೆಯ ರಾಜ್ಯ ಸಚಿವ ಅಶ್ವಿನಿ ಚೌಬೆ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಒಪ್ಪಿಕೊಂಡಿದ್ದಾರೆ. ಜಾಗೃತಿ ಕಾರ್ಯಕ್ರಮಗಳು ಮೇಲೆ ಹೇಳಿರುವ ಎಸ್‍ಓಪಿಯ ಪ್ರಮುಖ ಭಾಗ. ಜನರಿಗಾಗಿ ಬಳಸಬೇಕಾಗಿದ್ದ ಸಂಪನ್ಮೂಲ ಮತ್ತು ಜನಶಕ್ತಿಯನ್ನು ಚುನಾವಣೆಗೆ ತಿರುಗಿಸಲಾಯಿತು. ಹೌದು, ಚುನಾವಣೆಗಳು ಮುಖ್ಯ. ಆದರೆ, ಮುಂದಿನ ಐದು ವರ್ಷಗಳ ಕಾಲ ನಮ್ಮನ್ನು ಯಾರು ಆಳಲಿದ್ದಾರೆ ಎಂದು ನಿರ್ಧರಿಸುವುದು ಬೇರೆಲ್ಲದ್ದಕ್ಕಿಂತಲೂ ಮುಖ್ಯವಾಗಬೇಕೆ?

5. ಸರಕಾರವು 21 ಜೂನ್ 2013ರಲ್ಲಿ ಆಚರಿಸಿದ ಮೊದಲ ಯೋಗ ದಿನಾಚರಣೆಗೆ ಹತ್ತಿರಹತ್ತಿರ 32 ಕೋಟಿ ರೂ.ಗಳನ್ನು ಖರ್ಚು ಮಾಡಿತು. ಹೆಚ್ಚಿನ ಹಣ ಪ್ರಚಾರ, ಯೋಗ ದಿನ ಆಚರಿಸಲು ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳಿಗೆ ನೀಡಿದ ನಿಧಿಗೆ ಖರ್ಚಾಯಿತು. ಸುಮಾರು 300-400 ಕೋಟಿ ರೂ.ಗಳನ್ನು ಯೋಗ ದಿನದ ಕಾರ್ಯಕ್ರಮಕ್ಕೆ ಪ್ರತೀವರ್ಷ ಬೇರೆಬೇರೆ ರಾಜ್ಯಗಳಲ್ಲಿ ಜಲನಿರೋಧಕ ಗೋಪುರ ನಿರ್ಮಿಸಲು ಖರ್ಚು ಮಾಡಲಾಯಿತು.

ಉತ್ತರ ಪ್ರದೇಶದಲ್ಲಿ ಸರಕಾರವು ಕುಂಭಮೇಳ ಆಚರಿಸುವುದಕ್ಕೆ ಸಾವಿರಾರು ರೂ.ಗಳನ್ನು ಖರ್ಚು ಮಾಡುತ್ತದೆ. ಯಾತ್ರಿಕರಿಗಾಗಿ ಕಳೆದ ವರ್ಷ ನೂರು ಹಾಸಿಗೆಗಳ ಒಂದು ತಾತ್ಕಾಲಿಕ ಹೈಟೆಕ್ ಆಸ್ಪತ್ರೆಯನ್ನು ಕಟ್ಟಲಾಯಿತು. ಕಳೆದ ಆಗಸ್ಟ್‍ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶದ ಮೇರೆಗೆ ಕನ್ವರಿಯಾಗಳ ಮೇಲೆ ಹೂವಿನ ದಳಗಳನ್ನು ಸುರಿಸಲು 14 ಲಕ್ಷ ರೂ.ಗಳನ್ನು ಸುರಿಯಲಾಯಿತು. ಆದರೆ ಎಇಎಸ್‍ನಿಂದ ಸಾಯುತ್ತಿರುವ ಮಕ್ಕಳಿಗಾಗಿ ಒಂದು ತಾತ್ಕಾಲಿಕ ಆಸ್ಪತ್ರೆ ಕಟ್ಟಲು ಸರಕಾರಕ್ಕೆ ಏಕೆ ಸಾಧ್ಯವಾಗಲಿಲ್ಲ?

ಮಾಧ್ಯಮಗಳು ಈ ಪ್ರಶ್ನೆಗಳನ್ನು ಸರಕಾರಗಳಿಗೆ ಯಾಕೆ ಕೇಳುತ್ತಿಲ್ಲ?
ಸರಕಾರದ ಚಾಕರಿಯವರಂತೆ ಮಾಧ್ಯಮದವರು, ವೈದ್ಯರು, ದಾದಿಯರು, ಕಂಗೆಟ್ಟ ಹೆತ್ತವರ ಬೆನ್ನುಹತ್ತುತ್ತಾ, ಬೈಯ್ಯುತ್ತಾ ಅವರ ಗಂಟಲೊಳಗೇ ಮೈಕುಗಳನ್ನು ತುರುಕುತ್ತಿದ್ದಾರೆ. ‘ಬ್ರೇಕಿಂಗ್ ನ್ಯೂಸ್’’ ಮತ್ತು “ಎಲ್ಲರಿಗಿಂತಲೂ ಮೊದಲು” ಹುಚ್ಚಿನಲ್ಲಿ ಅವರು ಹೆಚ್ಚು ಟಿಆರ್‍ಪಿಗಾಗಿ ಜನರ ಸಂಕಷ್ಟವನ್ನು ‘ತಮಾಷಾ’ದಂತೆ ಮಾರುವ ಮಾನಗೇಡಿಗಳಾಗಿದ್ದಾರೆ. ಇವೆಲ್ಲವೂ ಪ್ರತಿಪಕ್ಷಗಳು ಏನು ಮಾಡುತ್ತಿವೆ ಎಂದು ಕೇಳುವುದರ ಜೊತೆಗೆ ನಡೆಯುತ್ತಿವೆ. ಬಿಹಾರದಲ್ಲಿ ಪ್ರತಿಪಕ್ಷಗಳು ಕಳೆದ ಹತ್ತು ವರ್ಷಗಳಿಂದ ಮತ್ತು ಕೇಂದ್ರದಲ್ಲಿ ಐದು ವರ್ಷಗಳಿಂದ ಅಧಿಕಾರದಲ್ಲಿಲ್ಲ ಎಂಬುದನ್ನು ಅವರು ಮರೆತಂತಿದೆ.

ಗೋರಖ್‍ಪುರದಲ್ಲೂ ಮಾಧ್ಯಮಗಳು ಇದೇ ರೀತಿಯ ವರಸೆ ತೋರಿದ್ದವು. ಅಲ್ಲಿ ಜಪಾನೀಸ್ ಎನ್ಸೆಫಲೈಟಿಸ್‍ನಿಂದ ನರಳುತ್ತಿದ್ದ ಸಾವಿರಕ್ಕೂ ಹೆಚ್ಚು ಮಕ್ಕಳು ಆಮ್ಲಜನಕದ ಕೊರತೆಯಿಂದ ಸಾವಿಗೀಡಾಗಿದ್ದರು. ಸರಕಾರವನ್ನು ರಕ್ಷಿಸುವ ಯತ್ನದಲ್ಲಿ ಒಂದು ಆಸ್ಪತ್ರೆ ಮತ್ತದರ ವೈದ್ಯರ ಮೇಲೆ ಗೂಬೆಕೂರಿಸಲಾಯತು. ಮಕ್ಕಳ ಸಾವಿಗೆ ಹೊಣೆಗಾರರೆಂದು ಅನ್ಯಾಯವಾಗಿ ಆರೋಪಕ್ಕೆ ಗುರಿಯಾಗಿ ಅಮಾನತುಗೊಂಡಿದ್ದ ಮಕ್ಕಳ ತಜ್ಞ ಡಾ. ಕಫೀಲ್ ಖಾನ್ ಅವರು ಇದೀಗ ಎಇಎಸ್ ಕುರಿತು ಹಳ್ಳಿಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಾ, ಆರೋಗ್ಯ ಶಿಬಿರಗಳನ್ನು ಸ್ಥಾಪಿಸುತ್ತಾ ಮುಜಾಫರ್‍ಪುರದಲ್ಲಿ ಎಡೆಬಿಡದೆ ದುಡಿಯುತ್ತಿದ್ದಾರೆ. ಯಾವುದೇ ಮಾಧ್ಯಮಗಳು ಇದನ್ನು ವರದಿಯೇ ಮಾಡಿಲ್ಲ.

ಕೆಲವು ಸುದ್ದಿ ಚಾನೆಲ್‍ಗಳಂತೂ, ಸಾಯುತ್ತಿರುವ ಹೆಚ್ಚಿನ ಮಕ್ಕಳು ಬಡ ದಲಿತ ಮತ್ತು ಓಬಿಸಿ ಸಮುದಾಯವರೆಂಬ ಸತ್ಯದತ್ತ ಗಮನಸೆಳೆದ ಲಾಲೂ ಪ್ರಸಾದ್ ಯಾದವ್ ಅವರ ಆರ್‍ಜೆಡಿ ಪಕ್ಷವು ಜಾತಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದವು.
ಯಾಕೆ ಬಹುತೇಕ ಎಲ್ಲಾ ಸಾವುಗಳು ದಲಿತ ಮತ್ತು ಓಬಿಸಿ ಸಮುದಾಯಗಳಲ್ಲಿ ಸಂಭವಿಸಿವೆ ಎಂಬುದು ಅತ್ಯಂತ ಪ್ರಸ್ತುತವಾದ ಪ್ರಶ್ನೆಯಾಗಿದ್ದು, ಅದನ್ನು ಚಾಪೆಯ ಕೆಳಗೆ ತಳ್ಳಲಾಗುತ್ತಿದೆ. ವಾಸ್ತವ ಎಂದರೆ ಅದು ಜಾತಿ, ಬಡತನ, ಅಪೌಷ್ಠಿಕತೆ ಮತ್ತು ಸರಕಾರಿ ಅಸಡ್ಡೆಗಳ ನಡುವಣ ಸಂಬಂಧವನ್ನು ತೋರಿಸುವುದರಿಂದ ಮಾಧ್ಯಮಗಳು ಅದನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿವೆ.

ಅಪೌಷ್ಠಿಕತೆ ಮತ್ತು ಮೋದಿ ಅಂಟೋಯ್ನೆಟ್!

ಕಳೆದ ವರ್ಷ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು 119 ದೇಶಗಳ ಪೈಕಿ 103ನೇ ಸ್ಥಾನದಲ್ಲಿತ್ತು. ಅಂಕಿಅಂಶಗಳ ಪ್ರಕಾರ ಪ್ರತೀ ಐವರು ಮಕ್ಕಳಲ್ಲಿ ನಾಲ್ಲರು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಮೊನ್ನೆ ಪ್ರಧಾನಿ ಮೋದಿ ಮುಜಾಫರ್‍ಪುರದಿಂದ 400 ಕಿ.ಮೀ. ದೂರವಿರುವ ರಾಂಚಿಯಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಿ, “ನಾವು ಯೋಗವನ್ನು ಹಳ್ಳಿಗಳಿಗೆ ಕೊಂಡೊಯ್ಯಬೇಕು”ಎಂದರು. 2012ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಇದೇ ಮೋದಿ, ತನ್ನ ರಾಜ್ಯದಲ್ಲಿ ಅಪೌಷ್ಠಿಕತೆಯ ಪ್ರಮಾಣ ದೊಡ್ಡದಾಗಿರುವುದಕ್ಕೆ ಸಸ್ಯಾಹಾರ ಪದ್ಧತಿ ಮತ್ತು ‘ಪಿಗರ್ ಕಾನ್ಷಿಯಸ್’ ಹೆಣ್ಣುಮಕ್ಕಳು ಕಡಿಮೆ ತಿನ್ನುವುದು ಕಾರಣ ಎಂದು ಸಬೂಬು ನೀಡಿದ್ದರು.

150ರಷ್ಟು ಮಕ್ಕಳ ಸಾವಿನಿಂದ ಇಡೀ ದೇಶವೇ ಮರುಗುತ್ತಿರುವಾಗ, ಈ ವಿಷಯದ ಕುರಿತು ಪ್ರಧಾನಿಯ ಮೌನ ಕಿವಿಗಡಚಿಕ್ಕುವಂತಿದೆ. ಇದೇ ಹೊತ್ತಿಗೆಗೆ ಅವರು ಕ್ರಿಕೆಟಿಗ ಶಿಖರ್ ಧವನ್ ಹೆಬ್ಬೆರಳಿಗಾದ ಗಾಯದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅದೇ ಹೊತ್ತಿಗೆ ಅವರು ರಾಜಸ್ಥಾನದಲ್ಲಿ ಕಟ್ಟಡ ಕುಸಿದು 14 ಮಂದಿ ಸಾವಿಗೀಡಾದ ಬಗ್ಗೆಯೂ ಟ್ವೀಟ್ ಮಾಡಿದ್ದಾರೆ. ಅವರೆಲ್ಲರೂ ರಾಮಕಥಾ ಕೇಳುತ್ತಿದ್ದರು. ಇಲ್ಲಿ ಅದಕ್ಕೆ ಆದ್ಯತೆ! ಸರಿತಾನೆ?

ಮಕ್ಕಳು ಬಡತನ ಮತ್ತು ಅಪೌಷ್ಠಿಕತೆಯಿಂದ ಸಾಯುತ್ತಿರುವುದು ಆಕಸ್ಮಿಕವೇನಲ್ಲ. ಅದು ಕ್ರಿಮಿನಲ್ ನಿರ್ಲಕ್ಷ್ಯ. ಇದು ಚೆನ್ನಾಗಿ ಯೋಜಿಸಲಾಗಿರುವ ಕಾರ್ಯತಂತ್ರವೊಂದರ ಭಾಗ. ಇಲ್ಲಿ ಆಹಾರ, ಆರೋಗ್ಯ ಮತ್ತು ಶಿಕ್ಷಣ ಪಡೆಯಲು ತಾಕತ್ತಿಲ್ಲದ ಬಡವರು ತೊಲಗಬೇಕು. ಯಾಕೆಂದರೆ ಅವರು, ನಾವು ಬದುಕುತ್ತಿರುವ ‘ಹೊಳೆಯುತ್ತಿರುವ ಭಾರತ’ದ ಭ್ರಮೆಗೆ ಸರಿಹೊಂದುವುದಿಲ್ಲ.

ಸರಕಾರವು ಸಾರ್ವಜನಿಕ ಮೂಲಸೌಕರ್ಯಕ್ಕಿಂತ ಖಾಸಗಿ ಆರೋಗ್ಯ ರಕ್ಷಣಾ ವ್ಯವಸ್ಥೆಗೆ ಆದ್ಯತೆ ನೀಡುತ್ತಿದೆ ಎಂದರೆ, ನಾವು ಒಂದು ದೇಶವಾಗಿ ವಿಫಲರಾಗಿದ್ದೇವೆ. ಭಾರತವು ಒಂದು ತೃತೀಯ ಜಗತ್ತಿನ ದೇಶ. ಇಂತಹ ದೇಶದಲ್ಲಿ ‘ನೆರವು’ ಎಂದು ಕರೆಯಲಾಗುವಂತದ್ದು ಒಂದು ರಾಜಕೀಯ ಅಗತ್ಯವಲ್ಲ; ಅದೊಂದು ಮಾನವೀಯ ಅಗತ್ಯ. ಸಂವಿಧಾನವು ನಿರ್ದೇಶಿಸಿರುವ ಆಹಾರ, ಆರೋಗ್ಯ ಮತ್ತು ಶಿಕ್ಷಣದ ಮೂಲಭೂತ ಸೇವೆಗಳನ್ನು ಒದಗಿಸಲು ಸರಕಾರಗಳು ವಿಫಲವಾಗುತ್ತಿರುವ ತನಕ ಗೋರಖ್‍ಪುರ ಮತ್ತು ಮುಜಾಫರ್‍ಪುರಗಳಂತವು ನಿಲ್ಲಲಾರವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...