Homeಅಂಕಣಗಳುಬಿಹಾರ ಚುನಾವಣೆ: ಅತ್ಯಂತ ಹಿಂದುಳಿದ ಸಮುದಾಯಗಳಿಂದ ಸ್ಪರ್ಧೆಗೆ ತಮ್ಮ ಪ್ರಾತಿನಿಧ್ಯದ  ಪ್ರಬಲ ಹಕ್ಕೊತ್ತಾಯ

ಬಿಹಾರ ಚುನಾವಣೆ: ಅತ್ಯಂತ ಹಿಂದುಳಿದ ಸಮುದಾಯಗಳಿಂದ ಸ್ಪರ್ಧೆಗೆ ತಮ್ಮ ಪ್ರಾತಿನಿಧ್ಯದ  ಪ್ರಬಲ ಹಕ್ಕೊತ್ತಾಯ

- Advertisement -
- Advertisement -

ಬಿಹಾರದಲ್ಲಿ, ಚುನಾವಣಾ ಋತುವು ಈಗಾಗಲೇ ಪ್ರಾರಂಭವಾಗಿದೆ. ಇದು ಕೇವಲ ರ‍್ಯಾಲಿಗಳು ಅಥವಾ ಪಕ್ಷದ ಸಭೆಗಳಲ್ಲಿ ಅಲ್ಲ, ಬದಲಾಗಿ ಜನರ ದೈನಂದಿನ ಸಂಭಾಷಣೆಗಳಲ್ಲಿ ಕಾಣಬಹುದಾಗಿದೆ. ಒಂದು ಟೀ ಅಂಗಡಿಯಲ್ಲಿ ಅಥವಾ ಹಳ್ಳಿಯ ಅರಳಿಕಟ್ಟೆಯಲ್ಲಿ ಕುಳಿತುಕೊಂಡರೆ, ನೀವು ಜನರು ತಮ್ಮ  ಸಮುದಾಯದ “ಸಂಖ್ಯೆಗಳ” ಬಗ್ಗೆ ಮಾತನಾಡುತ್ತಿರುವುದನ್ನು ಕೇಳಬಹುದು – ಅದು ಬೌರಿ, ಕಪರಿಯಾ, ಮಲ್ಲಾ ಅಥವಾ ಮೋಮಿನ್ ಆಗಿರಲಿ – ಪ್ರತಿಯೊಂದು ಸಮುದಾಯವು ತನ್ನ ಪಾಲಿನ ಸ್ಪರ್ಧೆ ಬಗ್ಗೆ ಮಾತನಾಡುತ್ತಿದೆ. ಜಾತಿ ಸಮೀಕ್ಷೆಯಿಂದ ಪ್ರಚೋದಿತವಾದ ಈ ಕೆಳಗಿನಿಂದ-ಮೇಲಿನವರೆಗೆ ನಡೆಯುತ್ತಿರುವ ಸಂಘರ್ಷವು ಅತ್ಯಂತ ಅಂಚಿನಲ್ಲಿರುವ ಸಮುದಾಯಗಳು ಸಹ ತಮ್ಮ ಅಸ್ತಿತ್ವವನ್ನು ಪ್ರತಿಪಾದಿಸಲು ಮುಂದೆ ಬರುತ್ತಿರುವುದನ್ನು ತೋರಿಸುತ್ತದೆ. ಇಲ್ಲಿ, ಸಮುದಾಯಗಳು ತಮ್ಮ ಪರವಾಗಿ ಯಾರೋ ಮಾತನಾಡಲು ನಿರಾಕರಿಸುತ್ತಿದ್ದಾರೆ; ಬದಲಾಗಿ, ಅವರು ತಮಗಾಗಿ ತಾವೇ ಮಾತನಾಡಲು ಒತ್ತಾಯಿಸುತ್ತಿದ್ದಾರೆ ಮತ್ತು ಈ ಹೊಸ ಸಂಖ್ಯೆಗಳ ಸಂಭಾಷಣೆಯೇ ಮುಂಬರುವ ಚುನಾವಣೆಗೆ ವೇದಿಕೆ ಸಿದ್ಧಪಡಿಸುತ್ತಿದೆ.

ಬಿಹಾರದಲ್ಲಿ ಜಾತಿಯ ಸ್ಪರ್ಧೆಯು ಯಾವಾಗಲೂ ಎರಡು ಅಂಚಿನ ಕತ್ತಿಯಂತೆ ಇದೆ. ಇದು ಸಬಲೀಕರಣ ಮತ್ತು ವಿಭಜನೆ ಎರಡನ್ನೂ ಪ್ರಚೋದಿಸಿದೆ; ಮತ್ತು ಈ ರಾಜ್ಯವು ಅದರ ಪ್ರಮುಖ ಪ್ರತಿಪಾದಕವಾಗಿದೆ. ಹಿಂದೆ, ಅಂಕಿಅಂಶಗಳನ್ನು ಒಣ ಮತ್ತು ತಾಂತ್ರಿಕ ರೀತಿಯಲ್ಲಿ ಪ್ರಸ್ತುತಪಡಿಸಲಾಗುತ್ತಿತ್ತು, ಆದರೆ ಇಂದು ಅವು ನಾಯಕರು ಮತ್ತು ಅವರ ಚಟುವಟಿಕೆಗಳ ಮೂಲಕ ಸಾರ್ವಜನಿಕ ಡೊಮೇನ್‌ಗೆ ಪ್ರಸಾರವಾಗುತ್ತಿವೆ. ಉದಾಹರಣೆಗೆ, ಅಖಿಲ ಭಾರತ ಪಾನ್ ಮಹಾಸಂಘದ ಅಧ್ಯಕ್ಷ ಐಪಿ ಗುಪ್ತಾ ಅವರ ನೇತೃತ್ವದಲ್ಲಿ ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಬೃಹತ್ ರ‍್ಯಾಲಿಯನ್ನು ತೆಗೆದುಕೊಳ್ಳಿ. ಇದು ರಾಷ್ಟ್ರೀಯ ಮುಖ್ಯಾಂಶಗಳಿಗೆ ಅರ್ಹವಾಗಿದ್ದರೂ ಸಹ, ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಇದು ಅಷ್ಟಾಗಿ ಗಮನ ಸೆಳೆಯಲಿಲ್ಲ.

ಅಥವಾ ಮಲ್ಲಾ ನಾಯಕ ಮುಕೇಶ್ ಸಹ್ನಿ ಅವರನ್ನು ಪರಿಗಣಿಸಿ. ಅವರು ತಮ್ಮ ಸಮುದಾಯದ ಜನಗಣತಿಯ ಶೇ. 2.6ರಷ್ಟು ಸಂಖ್ಯೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿ, ಶೇ. 9ರಷ್ಟು ಎಂದು ಪ್ರತಿಪಾದಿಸಿದರು. ಅವರ ಬೆಂಬಲಿಗರು ತಮ್ಮ ಸಂಖ್ಯೆಯನ್ನು ಪ್ರತಿಪಾದಿಸಲು ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ಸಹ ನೀಡಿದರು. ಅಂತಹ ಕ್ರಮಗಳು, ಸಂಖ್ಯೆಗಳು ಕೇವಲ ಸರ್ಕಾರಿ ದಾಖಲೆಗಳಲ್ಲಿನ ಅಂಕಿಅಂಶಗಳಾಗಿ ಉಳಿದಿಲ್ಲ, ಬದಲಾಗಿ ಜಾತಿ ಸ್ಪರ್ಧೆಯನ್ನು ಹೆಚ್ಚಿಸಲು ಮತ್ತು ಬಲವಾದ ಮತಬ್ಯಾಂಕ್ ಅನ್ನು ನಿರ್ಮಿಸಲು ನಾಯಕರು ಬಳಸುವ ರಾಜಕೀಯ ಅಸ್ತ್ರಗಳಾಗಿವೆ ಎಂಬುದನ್ನು ತೋರಿಸುತ್ತದೆ. ಈ ಪ್ರಕ್ರಿಯೆ ಬಿಹಾರದಾದ್ಯಂತ ವ್ಯಾಪಕವಾಗಿದೆ. ಸಮುದಾಯಗಳು ತಮ್ಮ ಸಂಖ್ಯೆಯನ್ನು ಕಡಿಮೆ ಅಂದಾಜು ಮಾಡಲಾಗಿದೆ ಎಂದು ಆರೋಪಿಸುತ್ತಿವೆ ಮತ್ತು ಈ ಆರೋಪವನ್ನು ತಮ್ಮ ಗುಂಪುಗಳೊಳಗೆ ಮಾತ್ರವಲ್ಲದೆ ಸಾರ್ವಜನಿಕ ವಲಯದಲ್ಲಿಯೂ ಮಾಡುತ್ತಿವೆ.

2023ರ ಜಾತಿ ಜನಗಣತಿಯು ಒಂದು ಮಹತ್ವದ ಕಾರ್ಯವಾಗಿತ್ತು, ಇದು 38 ಜಿಲ್ಲೆಗಳಲ್ಲಿ 25.8 ದಶಲಕ್ಷ ಕುಟುಂಬಗಳನ್ನು ಒಳಗೊಂಡಿತ್ತು ಮತ್ತು ಬಿಹಾರ ಸರ್ಕಾರದ ಪಟ್ಟಿಯಲ್ಲಿ 200ಕ್ಕೂ ಹೆಚ್ಚು ಜಾತಿಗಳನ್ನು ಗುರುತಿಸಿತು. ಫಲಿತಾಂಶಗಳು ಗಮನ ಸೆಳೆಯುವಂತಿವೆ: ಸುಮಾರು 184 ಜಾತಿಗಳು ಜನಸಂಖ್ಯೆಯ ಶೇ.1ಕ್ಕಿಂತ ಕಡಿಮೆ ಇರುವುದು ಕಂಡುಬಂದಿದೆ, ಆದರೆ ಸುಮಾರು 23 ಸಮುದಾಯಗಳು ಶೇ.1 ಮತ್ತು ಶೇ.5ರ ನಡುವೆ ಇದ್ದವು. ಕೇವಲ ಮೂರು ಗುಂಪುಗಳು ಶೇ.5ರ ಗಡಿಯನ್ನು ದಾಟಿದವು – ಚಮಾರ್‌ಗಳು (ಮೋಚಿ, ರಾಬಿದಾಸ್, ರವಿದಾಸ್, ರೋಹಿದಾಸ್, ಚರ್ಮಕರ್ ಉಪ-ವರ್ಗಗಳನ್ನು ಒಳಗೊಂಡಂತೆ) ಶೇ.5.25, ದುಸಾಧ್‌ಗಳು (ಧರಿ ಮತ್ತು ಧರಹಿ ಸೇರಿದಂತೆ) ಶೇ.5.31, ಮತ್ತು ಯಾದವರು, ಅತಿದೊಡ್ಡ ಏಕ ಜಾತಿ ಗುಂಪು, ಶೇ.14.26 (1931 ರಲ್ಲಿ ಸುಮಾರು ಶೇ. 12.8 ರಷ್ಟಿತ್ತು).

ಇದಕ್ಕೆ ವಿರುದ್ಧವಾಗಿ, ಸಾಂಪ್ರದಾಯಿಕವಾಗಿ ಮೇಲ್ಜಾತಿಗಳು ಜನಸಂಖ್ಯಾ ದೃಷ್ಟಿಯಿಂದ ಬಹಳ ಚಿಕ್ಕದಾಗಿ ಕಾಣಿಸುತ್ತವೆ. ಭೂಮಿಹಾರ್‌ಗಳು ಶೇ. 2.86, ಬ್ರಾಹ್ಮಣರು ಶೇ. 3.65, ಮತ್ತು ರಜಪೂತರು ಶೇ. 3.45 ರಷ್ಟಿದ್ದಾರೆ. ಈ ಗುಂಪುಗಳು ಒಟ್ಟಾಗಿ ರಾಜ್ಯದ ಜನಸಂಖ್ಯೆಯ ಶೇ. 10ಕ್ಕಿಂತ ಕಡಿಮೆ ಇವೆ. ಈ ಜನಸಂಖ್ಯಾ ವಾಸ್ತವವು ಯಾದವರು ಮತ್ತು ಇತರ ಹಿಂದುಳಿದ ಸಮುದಾಯಗಳ ಸಂಖ್ಯಾಬಲವನ್ನು ಒತ್ತಿಹೇಳುತ್ತದೆ ಮತ್ತು ಅಧಿಕಾರದ ಲೆಕ್ಕಾಚಾರದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗಿದೆ ಎಂದು ಭಾವಿಸುವ ಸಣ್ಣ ಗುಂಪುಗಳ ಬೇಡಿಕೆಗಳನ್ನು ತೀವ್ರಗೊಳಿಸುತ್ತದೆ.

2005ರ ನಂತರ ಒಬಿಸಿ ರಾಜಕೀಯದ ವಿಭಜನೆಯು ಅತ್ಯಂತ ಹಿಂದುಳಿದ ವರ್ಗಗಳನ್ನು (MBCs) ಬಿಹಾರದ ರಾಜಕೀಯ ವೇದಿಕೆಯ ಮುಂಚೂಣಿಗೆ ತಂದಿತು. ಅವರ ಏರಿಕೆಯು ಕೇವಲ ಸಿದ್ಧಾಂತಿಕವಾಗಿರಲಿಲ್ಲ. ಅದು ಅಧಿಕಾರದ ನಿರ್ದಿಷ್ಟ ಕ್ಷೇತ್ರಗಳ ಮೂಲಕ ಬಂದಿತು: ಅಂದರೆ ಪಂಚಾಯಿತಿಗಳ ಸಬಲೀಕರಣ ಮತ್ತು ಶಿಕ್ಷಕರ ನೇಮಕಾತಿಯಿಂದ ಬಂದಿದೆ. ಅಂದಿನಿಂದ, ಜನಗಣತಿಯು ರಾಜಕೀಯವನ್ನು ಹೆಚ್ಚು ಗಲಭೆಮಯ, ಹೆಚ್ಚು ಸ್ಪರ್ಧಾತ್ಮಕ ಮತ್ತು ಹೆಚ್ಚು ವಿಭಜಿತಗೊಳಿಸಿದೆ. ಆದರೂ, ವಿರೋಧಾಭಾಸವೆಂದರೆ, ಅದು ಪ್ರಜಾಪ್ರಭುತ್ವವನ್ನು ಇನ್ನಷ್ಟು ಆಳವಾಗಿಸಿದೆ. ಒಮ್ಮೆ ಶೂನ್ಯವೆಂದು ತಳ್ಳಿಹಾಕಲ್ಪಟ್ಟ ಅತ್ಯಂತ ಸಣ್ಣ ಜಾತಿ ಗುಂಪುಗಳು ಸಹ ಈಗ ತಮ್ಮನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಒತ್ತಾಯಿಸುತ್ತಿವೆ.

ಆದರೆ, ಜಾತಿ ಲೆಕ್ಕಾಚಾರವು ಅತಿ-ಸ್ಥಳೀಯ, ಮತ್ತು ವಿರೋಧಾತ್ಮಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಜನ್ಹಿತ್ ಅಭಿಯಾನ್‌ನ ಸಂಚಾಲಕ ರಾಜ್ ನಾರಾಯಣ್ ಅವರು ಸರಳವಾಗಿ ಹೇಳುತ್ತಾರೆ: “1% ಸೆ ಕಮ್ ಸಬ್ ಜಾತಿ ಹೈ, ತೋ ಮಿಲ್-ಬಾಂಟ್ ಕರ್ ಖಾನಾ ಹೋಗಾ ಹಿ” (ಪ್ರತಿಯೊಂದು ಜಾತಿಯೂ ಶೇ. 1ಕ್ಕಿಂತ ಕಡಿಮೆ ಇರುವಾಗ, ಹಂಚಿಕೊಳ್ಳುವುದು ಅನಿವಾರ್ಯವಾಗುತ್ತದೆ). ಇದೇ ವಿಭಜನೆಯ ತರ್ಕವು ಭಾಗವಹಿಸುವಿಕೆಯ ನೆಲೆಯನ್ನು ವಿಸ್ತರಿಸಿದೆ, ಆದರೆ ಇದು ರಾಜಕೀಯ ನಾಯಕತ್ವವನ್ನು ನಿರ್ಣಾಯಕ ಆದೇಶಗಳಿಗಿಂತ ಹೆಚ್ಚಾಗಿ ಸೂಕ್ಷ್ಮ ಸಮಾಲೋಚನೆಗಳ ಬಗ್ಗೆ ಮಾಡಿದೆ.

ನಿತೀಶ್ ಕುಮಾರ್ ಅವರ ದೀರ್ಘಕಾಲೀನ ಆಡಳಿತವು ಗಮನ ಸೆಳೆದಿದೆ. ಎರಡು ದಶಕಗಳ ಆಳ್ವಿಕೆಯ ನಂತರವೂ ಅವರು ಅಧಿಕಾರದಲ್ಲಿದ್ದಾಗ ಸಾಮಾನ್ಯವಾಗಿ ಎದುರಾಗುವ ಜನಬೆಂಬಲದ ಇಳಿಕೆ ಮತ್ತು ಆಡಳಿತ ಆಯಾಸವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಅವರ ಯಶಸ್ಸಿನ ರಹಸ್ಯವೆಂದರೆ, ಪ್ರಗತಿಪರ ಸುಧಾರಣೆಗಳು ಮತ್ತು ಎಚ್ಚರಿಕೆಯ ಸಾಮಾಜಿಕ ಸಮತೋಲನದ ಮೇಲಿನ ಅವಲಂಬನೆ. ಇದಕ್ಕೆ ಒಂದು ಸ್ಪಷ್ಟ ಉದಾಹರಣೆಯೆಂದರೆ, 2006ರಲ್ಲಿ ಜಾರಿಗೆ ತಂದ ‘ಬಿಹಾರ ಪಂಚಾಯತ್ ರಾಜ್ ಕಾಯಿದೆ’. ಈ ಕಾಯಿದೆಯಡಿಯಲ್ಲಿ, ಅತ್ಯಂತ ಹಿಂದುಳಿದ ವರ್ಗಗಳಿಗೆ (EBCs) ಪಂಚಾಯತ್‌ಗಳಲ್ಲಿ ಶೇ.18ರಷ್ಟು ಮೀಸಲಾತಿಯನ್ನು ಕಲ್ಪಿಸಲಾಯಿತು. ಈ ನಿರ್ಧಾರದ ಪರಿಣಾಮಗಳು ಕೇವಲ ಅಂಕಿಅಂಶಗಳಲ್ಲ. ಇಂದು ಬಿಹಾರದಲ್ಲಿರುವ 8,053 ಗ್ರಾಮ ಪಂಚಾಯತ್‌ಗಳು, 533 ಪಂಚಾಯತ್ ಸಮಿತಿಗಳು ಮತ್ತು 38 ಜಿಲ್ಲಾ ಪರಿಷತ್‌ಗಳ ಅಡಿಯಲ್ಲಿರುವ ಸುಮಾರು 1.15 ಲಕ್ಷ ವಾರ್ಡ್‌ಗಳಲ್ಲಿ, ಅತ್ಯಂತ ಹಿಂದುಳಿದ ವರ್ಗದ ಜನರು ನೇರವಾಗಿ ಅಧಿಕಾರ ರಚನೆ ಮತ್ತು ಸ್ಥಳೀಯ ಸ್ವ-ಆಡಳಿತದಲ್ಲಿ ಪಾಲ್ಗೊಳ್ಳಲು ಇದು ಅವಕಾಶ ನೀಡಿದೆ. ಇದು, ರಾಜಕೀಯವಾಗಿ ಹಿಂದುಳಿದಿದ್ದ ಒಂದು ದೊಡ್ಡ ಸಮುದಾಯವನ್ನು ಪ್ರಬಲ ರಾಜಕೀಯ ಶಕ್ತಿಯಾಗಿ ರೂಪಾಂತರಗೊಳಿಸಿದೆ.

ಕ್ಷೇತ್ರದಲ್ಲಿ, ಬಿಹಾರದ ನಿಜವಾದ ರಾಜಕೀಯ “ಏಜೆನ್ಸಿ” ಇಬ್ಬರು ವ್ಯಕ್ತಿಗಳಲ್ಲಿದೆ ಎಂದು ಜನರು ಸಾಮಾನ್ಯವಾಗಿ ಹೇಳುತ್ತಾರೆ: ಮುಖಿಯಾ (ಪಂಚಾಯತ್ ಮುಖ್ಯಸ್ಥ) ಮತ್ತು ಶಿಕ್ಷಕ. 2005ರ ನಂತರ, ಶಿಕ್ಷಕರ ನೇಮಕಾತಿಯ ಮೂಲಕ ಅತಿದೊಡ್ಡ ಪ್ರಯೋಜನಗಳು ಹರಿಯಿತು, ಅಲ್ಲಿ ಸುಮಾರು 4.5 ಲಕ್ಷ ಶಿಕ್ಷಕರನ್ನು ನೇಮಿಸಲಾಯಿತು – ಇದು ಇತ್ತೀಚಿನ ದಿನಗಳಲ್ಲಿ ಅತಿದೊಡ್ಡ ನೇಮಕಾತಿಯಾಗಿದ್ದು, ಅದರಲ್ಲಿ ಸುಮಾರು ಶೇ.18ರಷ್ಟು  ಅತ್ಯಂತ ಹಿಂದುಳಿದ ವರ್ಗಗಳಿಂದ ಬಂದವರು.

ಬಿಹಾರದ ರಾಜಕಾರಣ ಕೇವಲ ಚುನಾವಣಾ ಮೈತ್ರಿಗಳನ್ನು ಮೀರಿ, ಅತ್ಯಂತ ಹಿಂದುಳಿದ ವರ್ಗಗಳನ್ನು (EBC) ರಾಜಕೀಯ ವ್ಯವಸ್ಥೆಯ ದೈನಂದಿನ ರಚನೆಯಲ್ಲಿ ಭದ್ರವಾಗಿ ಬೇರೂರಿಸಿದೆ. ಇದು ಅಧಿಕಾರದ ಸಮೀಕರಣವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಈ ಪ್ರಕ್ರಿಯೆಯು ರಾಜಕೀಯ ರಂಗವನ್ನು ಸಂಘರ್ಷಮಯ ವಾತಾವರಣದಿಂದ ಚೌಕಾಸಿ ರಾಜಕೀಯಕ್ಕೆ ಪರಿವರ್ತಿಸಿದೆ. ಇಂದು, ರಾಜಕೀಯ ನಾಯಕರು ಕೇವಲ ಕೆಳಸ್ತರದಿಂದ ಬರುವ ಬೇಡಿಕೆಗಳಿಗೆ ಪ್ರತಿಕ್ರಿಯಿಸುವುದಷ್ಟೇ ಅಲ್ಲ, ಅವುಗಳನ್ನು ಸಕ್ರಿಯವಾಗಿ ತಮ್ಮ ರಾಜಕೀಯ ಕಾರ್ಯಸೂಚಿಯಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ.

ನಿಕೋಲಸ್ ಬಿ.ಡರ್ಕ್ಸ್ ತಮ್ಮ ಕೃತಿ ‘ಕಾಸ್ಟ್ಸ್ ಆಫ್ ಮೈಂಡ್’ ನಲ್ಲಿ ಒತ್ತಿ ಹೇಳುವಂತೆ, ಜನಗಣತಿ ಅಥವಾ ಸಮೀಕ್ಷೆಗಳು ಎಂದಿಗೂ ತಟಸ್ಥ ಪ್ರಕ್ರಿಯೆಗಳಾಗಿರುವುದಿಲ್ಲ. ಅವು ಕೇವಲ ವಾಸ್ತವಗಳನ್ನು ದಾಖಲಿಸುವುದಿಲ್ಲ, ಬದಲಿಗೆ ಹೊಸ ವಾಸ್ತವಗಳನ್ನು ಸೃಷ್ಟಿಸುತ್ತವೆ. ಬಿಹಾರದಲ್ಲಿ, ಈ ಪ್ರಕ್ರಿಯೆಯು ಗುಂಪುಗಳ ನಡುವೆ ಏಕತೆಯನ್ನು ಸೃಷ್ಟಿಸುವುದರ ಜೊತೆಗೆ, ಅವುಗಳ ನಡುವಿನ ವ್ಯತ್ಯಾಸಗಳನ್ನು ಮತ್ತಷ್ಟು ಸ್ಪಷ್ಟಪಡಿಸಿದೆ. ಇದಕ್ಕಾಗಿಯೇ, ಜಾತಿವಾರು ಸಮೀಕ್ಷೆಯ ಪಾಲು (stake) ಅತ್ಯಂತ ಹೆಚ್ಚಾಗಿದೆ. ಈಗ, ಸಂಖ್ಯೆಗಳು ಸೇತುವೆಗಳೂ ಹೌದು ಮತ್ತು ಶಸ್ತ್ರಾಸ್ತ್ರಗಳೂ ಹೌದು, ಎರಡೂ ಆಗಿ ಕಾರ್ಯನಿರ್ವಹಿಸುತ್ತಿವೆ.

ಇತಿಹಾಸವು ಒಂದು ನೆನಪನ್ನು ನೀಡುತ್ತದೆ. 2023ರ ಹಿಂದಿನ ಕೊನೆಯ ಜಾತಿ ಜನಗಣತಿಯು 1931ರಲ್ಲಿ ನಡೆದಿತ್ತು. ಮೂರು ವರ್ಷಗಳೊಳಗೆ, ಯಾದವರು, ಕೊಯರಿಗಳು ಮತ್ತು ಕುರ್ಮಿಗಳ ಒಕ್ಕೂಟವಾಗಿ ತ್ರಿವೇಣಿ ಸಂಘವು ಹೊರಹೊಮ್ಮಿತು, ಇದು ವಿಶೇಷವಾಗಿ ಸ್ವಾತಂತ್ರ್ಯ ಪೂರ್ವ ಬಿಹಾರದ ಶಾಹಾಬಾದ್ ಜಿಲ್ಲೆಯಲ್ಲಿ ಮೇಲ್ಜಾತಿ ಪ್ರಾಬಲ್ಯವನ್ನು ನೇರವಾಗಿ ಸವಾಲು ಮಾಡಿತು. ಈ ಪಕ್ಷವು, 1937ರ ಚುನಾವಣೆಗಳಲ್ಲಿ ಅರಾಹ್ ಮತ್ತು ಪಿರೋ ಮುಂತಾದ ಸ್ಥಳಗಳಲ್ಲಿ ಕೆಲವು ವಿಜಯಗಳನ್ನು ಗಳಿಸಿದರೂ, ಮೇಲ್ಜಾತಿಗಳ ಹಿಂಸಾತ್ಮಕ ಪ್ರತೀಕಾರ, ಮಿತ್ರರ ನಡುವಿನ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ಕಾಂಗ್ರೆಸ್‌ನ ಬಲವಾದ ಸಂಘಟನೆಯ ಭಾರದ ಅಡಿಯಲ್ಲಿ ಶೀಘ್ರದಲ್ಲೇ ಅವನತಿ ಹೊಂದಿತು.

ಮೂಲ: ಸಂಜಯ್ ಕುಮಾರ್, ದಿ ವೈರ್ 

                   ಮತ್ತು

           ಶ್ರುತಿ,  ದಿ ವೈರ್

(ಸಂಜಯ್ ಕುಮಾರ್ ಅವರು ದೇಶ್ಕಲ್ ಸೊಸೈಟಿಯ ಸಂಸ್ಥಾಪಕರು ಮತ್ತು ಸಹಸಂಪಾದಕರು, ಇಂಟರ್ರೊಗೇಟಿಂಗ್ ಡೆವಲಪ್ಮೆಂಟ್ಸ್: ಇನ್ಸೈಟ್ಸ್ ಫ್ರಮ್ ದಿ ಮಾರ್ಜಿನ್ಸ್ (ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್) ಶ್ರುತಿ ಸ್ವತಂತ್ರ ಸಂಶೋಧಕರು)

ಮೋದಿ-ಶಾ: ಮಣಿಪುರದಲ್ಲಿಯೂ ಕಾಶ್ಮೀರದಲ್ಲಿಯೂ ತಪ್ಪು ಹೆಜ್ಜೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ

ಈ ವರ್ಷದ ಬಜೆಟ್ ಅಧಿವೇಶನದಲ್ಲಿ ಬಹುಕಾಲದ ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಪರಿಶಿಷ್ಟ ಜಾತಿ (ಎಸ್‌ಸಿ) ಎಡಗೈ ಸಂಬಂಧಿತ ಜಾತಿ ಮುಖಂಡರು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳು ಮತ್ತು...

“ಇಲ್ಲಿ 60 ವರ್ಷ ವಾಸಿಸಿದ್ದೆವು, ಒಂದೇ ದಿನದಲ್ಲಿ ನಿರಾಶ್ರಿತರಾದೆವು”: ಅಜಿ ನದಿ ದಡದ ಅಕ್ರಮ ಅತಿಕ್ರಮಣ ತೆರವಿನಲ್ಲಿ ಮನೆ ಕಳೆದುಕೊಂಡವರ ಮಾತು

ಗುಜರಾತ್‌ನ ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್ (ಆರ್‌ಎಂಸಿ) ಜಂಗಲೇಶ್ವರದಲ್ಲಿ ನೂರಾರು ವಸತಿ ರಚನೆಗಳನ್ನು ನೆಲಸಮಗೊಳಿಸಿ ಹಲವಾರು ಕುಟುಂಬಗಳನ್ನು ನಿರಾಶ್ರಿತರನ್ನಾಗಿ ಮಾಡಿರುವ ಅಜಿ ನದಿಯ ದಡದಲ್ಲಿ ಅಕ್ರಮ ಅತಿಕ್ರಮಣಗಳನ್ನು ತೆಗೆದುಹಾಕಲು ದೊಡ್ಡ ಪ್ರಮಾಣದ ನೆಲಸಮ ಕಾರ್ಯಾಚರಣೆಯ...

ಇಂಡಿಯಾ ಬಣದ ಸಂಚಾಲಕರಾಗಲು ಸ್ಟಾಲಿನ್ ಸೂಕ್ತ: ಮಣಿಶಂಕರ್ ಅಯ್ಯರ್

"ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರು ಇಂಡಿಯಾ ಬಣದ ಸಂಚಾಲಕರಾಗಲು ಸೂಕ್ತ" ಎಂದು ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಪ್ರತಿಪಾದಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅಯ್ಯರ್, ತಮಿಳುನಾಡು ಮುಖ್ಯಮಂತ್ರಿ ಇಂಡಿಯಾ ಬಣದ ಸಂಚಾಲಕರಾಗಲು ಉತ್ತಮ...

ಬೆಂಗಳೂರು: ಮತ್ತು ಬೆರೆಸಿದ ಪಾನೀಯ ನೀಡಿ ಗೆಳೆಯ ಮತ್ತು ಆತನ ಸ್ನೇಹಿತನಿಂದ ಅತ್ಯಾಚಾರ, ಬೆದರಿಕೆ: ಕಾಲೇಜು ವಿದ್ಯಾರ್ಥಿನಿಯಿಂದ ದೂರು

19 ವರ್ಷದ ಖಾಸಗಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನ ಗೆಳೆಯ ಮತ್ತು ಅವನ ಸ್ನೇಹಿತನ ವಿರುದ್ಧ ಮಾದಕ ದ್ರವ್ಯ ಸೇವಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ದಾಖಲಿಸಿದ್ದಾಳೆ. ಜಕ್ಕೂರಿನಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಗೆ...

ಮಕ್ಕಳಲ್ಲಿ ಹಿಂಸಾತ್ಮಕ ಪ್ರವೃತ್ತಿ ತಡೆಯಲು ಮೀನು-ಮಾಂಸ ಮಾರಾಟ ನಿಷೇಧ: ಬಿಹಾರ ಉಪಮುಖ್ಯಮಂತ್ರಿ

ಮಕ್ಕಳಲ್ಲಿ 'ಹಿಂಸಾತ್ಮಕ ಪ್ರವೃತ್ತಿ'ಗಳನ್ನು ನಿಲ್ಲಿಸುವ ಪ್ರಯತ್ನದಲ್ಲಿ ಧಾರ್ಮಿಕ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಅಥವಾ ಜನದಟ್ಟಣೆಯ ಸ್ಥಳಗಳ ಬಳಿ ಮಾಂಸ ಮತ್ತು ಮೀನು ಮಾರಾಟವನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಬಿಹಾರ ಉಪಮುಖ್ಯಮಂತ್ರಿ ವಿಜಯ್...

ದೆಹಲಿಯಲ್ಲಿ ಅರುಣಾಚಲದ ಮಹಿಳೆಯರಿಗೆ ಜನಾಂಗೀಯ ನಿಂದನೆ : ಪ್ರಕರಣ ದಾಖಲು

ದೆಹಲಿಯ ಮಾಳವೀಯ ನಗರದಲ್ಲಿ ಅರುಣಾಚಲ ಪ್ರದೇಶದ ಮೂವರು ಮಹಿಳೆಯರಿಗೆ ಜನಾಂಗೀಯ ನಿಂದನೆ ಮಾಡಿ, ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಫೆಬ್ರವರಿ 20 ಎಸಿ ದುರಸ್ತಿ ಸಂದರ್ಭದಲ್ಲಿ ಉಂಟಾದ ಸಣ್ಣ ಜಗಳವೊಂದು ಜನಾಂಗೀಯ ನಿಂದನೆಗೆ...

ಹಿಂದುತ್ವ ಗುಂಪಿನಿಂದ ಮುಸ್ಲಿಂ ವ್ಯಕ್ತಿಯನ್ನು ರಕ್ಷಿಸಿದ್ದ ಜಿಮ್ ಟ್ರೈನರ್ ‘ಮೊಹಮ್ಮದ್ ದೀಪಕ್’ ಅವರನ್ನು ಭೇಟಿಯಾದ ರಾಹುಲ್ ಗಾಂಧಿ 

ನವದೆಹಲಿ: ಕಳೆದ ತಿಂಗಳು ಕೋಟ್ದ್ವಾರದಲ್ಲಿರುವ ಅಹ್ಮದ್ ಅವರ ಬಾಬಾ ಸ್ಕೂಲ್ ಡ್ರೆಸ್ & ಮ್ಯಾಚಿಂಗ್ ಸೆಂಟರ್‌ನ ರಕ್ಷಣೆಗೆ ಬಂದು ಸುದ್ದಿಯಲ್ಲಿದ್ದ ಜಿಮ್ ತರಬೇತುದಾರ ದೀಪಕ್ ಅವರನ್ನು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್...

‘ಸಂಘದವರ ಚಡ್ಡಿಗಳನ್ನು ತಲೆ ಮೇಲೆ ಹೊರುವುದು ದಲಿತತ್ವವಲ್ಲ..’; ಛಲವಾದಿಗೆ ಸಚಿವ ಪ್ರಿಯಾಂಕ್‌ ತಿರುಗೇಟು

"ಸಂವಿಧಾನ ವಿರೋಧಿಸಿ ಕರಡು ಪ್ರತಿಯನ್ನು ಸುಟ್ಟಿದ್ದ ಸಂಘದವರ ಚಡ್ಡಿಗಳನ್ನು ತಲೆ ಮೇಲೆ ಹೊರುವುದು ದಲಿತತ್ವವಲ್ಲ" ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ. ಈ ಬಗ್ಗೆ...

ಅಮೆರಿಕದಿಂದ ದಾಳಿ ಬೆದರಿಕೆ : ಇರಾನ್ ತೊರೆಯುವಂತೆ ಭಾರತೀಯ ಪ್ರಜೆಗಳಿಗೆ ಸೂಚನೆ

ಅಮೆರಿಕದ ದಾಳಿ ಬೆದರಿಕೆ ಹಾಗೂ ಮತ್ತೆ ಪ್ರತಿಭಟನೆಗಳು ಭುಗಿಲೆದ್ದಿರುವ ಕಾರಣ, ಇರಾನ್‌ನಲ್ಲಿರುವ ಎಲ್ಲಾ ಭಾರತೀಯರು ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಸಾರಿಗೆ ವ್ಯವಸ್ಥೆಯ ಮೂಲಕ ತಕ್ಷಣ ದೇಶ ತೊರೆಯುವಂತೆ ತೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ...

ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್

ಕೇಂದ್ರ ಅಪರಾಧ ಶಾಖೆ (ಸಿಸಿಬಿ) ವಶಕ್ಕೆ ಪಡೆದು ವಿಚಾರಣೆ ನಡೆಸಿದ ಕೆಲವು ದಿನಗಳ ನಂತರ, ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.  ಪವಿತ್ರಾ ಬಿ.ಎನ್ ಸಲ್ಲಿಸಿದ ದೂರಿನ ಆಧಾರದ ಮೇಲೆ...