ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಪೆದ್ದನಹಳ್ಳಿ ಗ್ರಾಮದಲ್ಲಿ ಇಬ್ಬರು ದಲಿತ ಯುವಕರು ಭೀಕರವಾಗಿ ಕೊಲೆಯಾಗಿ ಹತ್ತು ದಿನಗಳೇ ಕಳೆದವು. ಗಿರೀಶ್ ಎಂಬ ಹೆಸರಿನ ಇಬ್ಬರು ಯುವಕರು ಏ.21ರ ರಾತ್ರಿ ಪೆದ್ದನಹಳ್ಳಿಯಲ್ಲಿ ಹತ್ಯೆಯಾದರು. ಈ ಘಟನೆಗೆ ರಾಜ್ಯದ ವಿವಿಧ ದಲಿತ ಸಂಘಟನೆಗಳು, ಹೋರಾಟಗಾರರು, ಅನೇಕ ರಾಜಕೀಯ ಮುಖಂಡರು ಪ್ರತಿಕ್ರಿಯಿಸಿ, ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಸಂತ್ವಾನ ಹೇಳಿದ್ದಾರೆ. ಆದರೆ ಇಷ್ಟೆಲ್ಲ ಬೆಳವಣಿಗೆಗಳಾದರೂ ಜಿಲ್ಲೆಯ ತಿಪಟೂರು ಕ್ಷೇತ್ರದ ಶಾಸಕ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಪೆದ್ದನಹಳ್ಳಿಯ ಘಟನೆಯ ಕುರಿತು ಮಾಹಿತಿ ಇಲ್ಲವಂತೆ!
ಶಾಲಾ ಪಠ್ಯದಲ್ಲಿ ಕೋಮುರಾಜಕಾರಣ, ಹಿಜಾಬ್ ಹೆಸರಲ್ಲಿ ಗೊಂದಲ ಸೃಷ್ಟಿಗೆ ಥಟ್ ಅಂತ ಸ್ಪಂದಿಸುವ ಸಚಿವರು ದಲಿತ ಯುವಕರ ಹತ್ಯೆ ವಿಚಾರದಲ್ಲಿ ಬಹಳ ಉಢಾಪೆಯಾಗಿ ಹೇಳಿಕೆ ನೀಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಏಪ್ರಿಲ್ 21ರ ರಾತ್ರಿ ಪೆದ್ದನಹಳ್ಳಿಯಲ್ಲಿ ಇಬ್ಬರು ಯುವಕರ ಕೊಲೆಯಾಗುತ್ತದೆ. ಅಂದು ಗ್ರಾಮದಲ್ಲಿ ಕೊಲ್ಲಾಪುರದಮ್ಮನ ಜಾತ್ರೆಯನ್ನು ತಿಗಳ ಸಮುದಾಯದವರು ಹಮ್ಮಿಕೊಂಡಿರುತ್ತಾರೆ. ಅಂದು ಪೆದ್ದನಹಳ್ಳಿಯ ಮಾದಿಗ ಕುಟುಂಬದ ಗಿರೀಶ್ ಮನೆಗೆ ಗುಬ್ಬಿ ತಾಲ್ಲೂಕು ಹಾಗಲವಾಡಿ ಹೋಬಳಿಯ ಮಂಚಲದೊರೆ ನಿವಾಸಿ, ನಾಯಕ ಸಮುದಾಯದ ಗಿರೀಶ್ ಬಂದಿರುತ್ತಾರೆ. ಅಂದು ರಾತ್ರಿ ಲಿಂಗಾಯತ ಸಮುದಾಯದ ನಂದೀಶ್ ಎಂಬಾತ ಪೆದ್ದನಹಳ್ಳಿಯ ಗಿರೀಶ್ ಅವರನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗುತ್ತಾನೆ. ಮಂಚಲದೊರೆಯಿಂದ ಬಂದಿದ್ದ ಗಿರೀಶ್ ಕೂಡ ಗೆಳೆಯನನ್ನು ಹಿಂಬಾಲಿಸುತ್ತಾನೆ. ಆದರೆ ಬೆಳಿಗ್ಗೆ ನೋಡಿದರೆ ನೆಲ್ಲಿಗೆರೆ- ಸಿರಾ ರಸ್ತೆಯ ಪಕ್ಕದಲ್ಲಿನ ಹೊಂಡದ ಬಳಿ ಇಬ್ಬರು ಗಿರೀಶರೂ ಶವವಾಗಿ ಪತ್ತೆಯಾಗುತ್ತಾರೆ.
ಜಾತಿ ದೌರ್ಜನ್ಯ ಪ್ರಕರಣ ದಾಖಲಾಗುತ್ತದೆ. ಪೆದ್ದನಹಳ್ಳಿ ಗ್ರಾಮಕ್ಕೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ವಿಚಾರಿಸಿದ್ದಾರೆ. ತನಿಖೆ ಕೂಡ ಬಿರುಸಿನಿಂದ ಸಾಗಿದೆ. ಇಪ್ಪತ್ತಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇಷ್ಟೆಲ್ಲ ಬೆಳವಣಿಗೆಗಳಾದರೂ ಸಚಿವ ನಾಗೇಶ್ ಅವರ ಗಮನಕ್ಕೆ ಬಂದಿಲ್ಲ ಎಂದರೆ ನಂಬುವುದು ಹೇಗೆ? ಎಂಬುದು ಸದ್ಯದ ಪ್ರಶ್ನೆ
“ಪೆದ್ದನಹಳ್ಳಿಯಲ್ಲಿ ನಡೆದಿರುವ ದಲಿತ ಯುವಕರ ಕೊಲೆ ಪ್ರಕರಣದ ಘಟನೆ ನನ್ನ ಗಮನಕ್ಕೆ ಬಂದಿಲ್ಲ. ಮಾಹಿತಿ ಸಂಗ್ರಹಿಸಿ ಅಲ್ಲಿಗೆ ಭೇಟಿ ನೀಡುತ್ತೇನೆ” ಎಂದು ಬಿ.ಸಿ.ನಾಗೇಶ್ ಹೇಳಿರುವುದಾಗಿ ತುಮಕೂರಿನ ಪ್ರಾದೇಶಿಕ ಪತ್ರಿಕೆ ಪ್ರಜಾಪ್ರಗತಿ ವರದಿ ಮಾಡಿದೆ.
ಶನಿವಾರದಂದು ಪೆದ್ದನಹಳ್ಳಿಗೆ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ (ವಾಸು), ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಂತ್ವಾನ ಹೇಳಿದ್ದರು.
ಆ ಸಂದರ್ಭದಲ್ಲಿ ಡಾ.ಜಿ.ಪರಮೇಶ್ವರ್ ಮಾತನಾಡಿ, “ಜಿಲ್ಲೆಯಲ್ಲಿ ಮೂವರು ಸಚಿವರಿದ್ದರೂ ಪೆದ್ದನಹಳ್ಳಿ ಗ್ರಾಮಕ್ಕೆ ಭೇಟಿ ಕೊಟ್ಟಿಲ್ಲ’’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕುರಿತು ಸಿರಾದಲ್ಲಿ ಪ್ರತಿಕ್ರಿಯೆ ನೀಡಿರುವ ನಾಗೇಶ್ ಉಡಾಫೆಯಾಗಿ ಮಾತನಾಡಿದ್ದಾರೆ.

“ನಾನು ಪ್ರವಾಸದಲ್ಲಿದ್ದೆ. ಅದು ಜಿಲ್ಲಾ ಮಟ್ಟದ ಸುದ್ದಿಯಾಗಿದೆ. ಮಾಹಿತಿ ಪಡೆದು ಭೇಟಿ ನೀಡುತ್ತೇನೆ” ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಶಿಕ್ಷಣದಲ್ಲಿ ಭಗವದ್ಗೀತೆ ಅಳವಡಿಸುವ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, “ಶಾಲಾ ಪಠ್ಯದಲ್ಲಿ ನೈತಿಕ ಶಿಕ್ಷಣ ಕೊಡಬೇಕೆಂದು ಈಗಾಗಲೇ ತಿರ್ಮಾನ ಮಾಡಲಾಗಿದೆ. ಅದಕ್ಕೊಂದು ಸಮಿತಿ ರಚನೆ ಮಾಡಲಾಗಿತ್ತು. ಅದನು ಏನೇನು ಇರಬೇಕೆಂದು ತೀರ್ಮಾನಿಸುತ್ತದೆ. ಭಗವದ್ಗೀತೆ ಜೊತೆಗೆ ಬೈಬಲ್, ಕುರಾನ್ ಇರಬೇಕೆಂದು ಕೆಲವರು ವಾದ ಮಾಡುತ್ತಾರೆ. ವಾದ ಮಾಡುವ ಗುಂಪು 60 ವರ್ಷದಲ್ಲಿ ನೈತಿಕ ಶಿಕ್ಷಣ ನೀಡುವ ಕೆಲಸ ಮಾಡಿದ್ದಿದ್ದರೆ ನಮಗೆ ಕೆಲಸ ಮಾಡುವಂತಹ ಅವಕಾಶನೇ ಇರ್ತಿರಲಿಲ್ಲ. ಮಾರಲ್ ಸೈನ್ಸ್ ಅನ್ನು ಯಾವ ಸರ್ಕಾರ ತೆಗೆದು ಹಾಕಿತ್ತು ಅನ್ನೋದನ್ನು ಅವರು ಆತ್ಮಾವಲೋಕನ ಮಾಡಿಕೊಳ್ಳಲಿ. ಎಲ್ಲವೂ ರಾಜಕೀಯ ಪ್ರೇರಿತ ನಿರ್ಧಾರಗಳಾಗಿರುವುದರಿಂದ ಶಿಕ್ಷಣ ಈ ಮಟ್ಟಕ್ಕೆ ಕುಸಿದಿದೆ” ಎಂದಿದ್ದಾರೆ.

ಧರ್ಮರಾಜಕಾರಣ, ಪಠ್ಯದ ಕೇಸರೀಕರಣದ ಕುರಿತು ಸದಾ ಧ್ಯಾನಿಸುವ ನಾಗೇಶ್ ಅವರಿಗೆ ತಮ್ಮ ಪಕ್ಕದ ಕ್ಷೇತ್ರವಾದ ತುರುವೇಕೆರೆಗೆ ಸೇರಿದ ಗ್ರಾಮವೊಂದರಲ್ಲಿ ನಡೆದಿರುವ ದುಷ್ಕೃತ್ಯವೊಂದು ತಿಳಿಯದೇ ಇರುವುದಕ್ಕೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿಗಳು ಪ್ರಬಲ ಜಾತಿಗಳಿಗೆ ಸೇರಿದ್ದು, ದಲಿತರ ಮೇಲೆ ಸಚಿವರಿಗೆ ನಿಜವಾದ ಕಾಳಜಿ ಇಲ್ಲ ಎಂಬುದನ್ನು ಅವರು ಮಾತುಗಳು ಸೂಚಿಸುತ್ತಿವೆ ಎಂಬ ಅಭಿಪ್ರಾಯಗಳು ಬಂದಿವೆ.
ಇದನ್ನೂ ಓದಿರಿ: ಪೆದ್ದನಹಳ್ಳಿ ಪ್ರಕರಣ: ಇಬ್ಬರು ದಲಿತ ಯುವಕರ ಹತ್ಯೆಯ ಸುತ್ತ ಎಷ್ಟೊಂದು ಸಂಕಟ!
ದಲಿತ ಹೋರಾಟಗಾರ ಕೊಟ್ಟ ಶಂಕರ್ ಹಾಕಿರುವ ಪೋಸ್ಟ್ಗೆ ಅನೇಕರು ಕಮೆಂಟ್ ಮಾಡಿ ನಾಗೇಶ್ ಅವರ ಹೇಳಿಕೆಯನ್ನು ಕಟುವಾಗಿ ಟೀಕಿಸಿದ್ದಾರೆ.
“ಕೊಲೆ ಮಾಡಿದೋರು ಯಾರು ಅನ್ನೋದರ ಮೇಲೆ ಅವರಿಗೆ ಮಾಹಿತಿ ಹೋಗುತ್ತೆ. ಬಾಕಿ ಎಲ್ಲ ವಜಾ” ಎಂದು ಟೀನಾ ಶಶಿಕಾಂತ್ ಪ್ರತಿಕ್ರಿಯೆ ನೀಡಿದ್ದಾರೆ.
“ರಾಜ್ಯ ಮತ್ತು ದೇಶದಾದ್ಯಂತ ಪೆದ್ದನಹಳ್ಳಿ ಘಟನೆ ಬಗ್ಗೆ ಸುದ್ದಿಯಾಗಿದೆ. ಆದರೆ ಸಚಿವ ನಾಗೇಶ್ ಅವರಿಗೆ ಮಾತ್ರ ಗೊತ್ತಿಲ್ಲ ಅಂದ್ರೆ ಈ ಸಚಿವರು ನಿಷ್ಕ್ರಿಯರಾಗಿದ್ದಾರೆ. ಇವರಿಗೆ ಹಳ್ಳಿಗಳ ಮಕ್ಕಳ ವಿಷಯಗಳು ತಲುಪಲು ಸಾಧ್ಯವೆ ಇಲ್ಲ ಅಂದರೆ ಇವರು ಸಚಿವರಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲವೆ? ಎಲ್ಲಿದ್ದೀರಿ ಸಚಿವರೆ? ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ವ್ಯಾಪ್ತಿಯ ಪೆದ್ದನಹಳ್ಳಿಯಲ್ಲಿ ಘಟನೆ ನಡೆದಿದೆ. ನಿಮಗೆ ಮಾಹಿತಿ ಅಗತ್ಯವಿದ್ದರೆ ನಾವೇ ತಿಳಿಸುತ್ತೇವೆ” ಓಬಳೇಶ್ ಕೆ.ಬಿ. ತಿಳಿಸಿದ್ದಾರೆ.
“ಆರೆಸ್ಸೆಸ್ ಹಿಂದೂ ಸಂಘಟನೆಯ ಮುಖಂಡರುಗಳಿಗೆ ಚಿಕ್ಕ ಗಾಯ, ಚಿಕ್ಕ ಘಟನೆಯಾದರೂ ಓಡಿ ಓಡಿ ಅವರ ಬಳಿಗೆ ಹೋಗುತ್ತಾರೆ” ಎಂದು ರಾಮಯ್ಯ ಪಿ.ಎನ್.ಪ್ರತಿಕ್ರಿಯಿಸಿದ್ದಾರೆ.



ಪಾಪ ಈ ಮನುಷ್ಯ ಪ್ರಾಥಮಿಕ ಶಾಲೆಯ ಪಠ್ಯ ಪುಸ್ತಕ ಬರೀತಾ ಕೂತಿದ್ದಾನೆ. ಡಿಸ್ಟರ್ಬ್ ಮಾಡಬೇಡಿ….!!!