Homeಮುಖಪುಟಖ್ಯಾತ ಪತ್ರಕರ್ತ ರವೀಶ್ ಕುಮಾರ್‌ಗೆ ಕೊಲೆ ಬೆದರಿಕೆ: ಆರೋಪಿಯ ಹಿಂದಿದೆ ಹಿಂಸಾವಾದಿ ಹಿಂದುತ್ವ ಪರಿವಾರ

ಖ್ಯಾತ ಪತ್ರಕರ್ತ ರವೀಶ್ ಕುಮಾರ್‌ಗೆ ಕೊಲೆ ಬೆದರಿಕೆ: ಆರೋಪಿಯ ಹಿಂದಿದೆ ಹಿಂಸಾವಾದಿ ಹಿಂದುತ್ವ ಪರಿವಾರ

‘ದಾಸ್ನಾ ದೇವಸ್ಥಾನ ಈ ಗುಂಪುಗಳ ಪ್ರಧಾನ ಕಚೇರಿ, ದೇವಸ್ಥಾನದ ಮುಖ್ಯಸ್ಥ ಯತಿ ನರಸಿಂಗಾನಂದ್ ಈ ಗುಂಪುಗಳ ನಾಯಕ, ಪೋಷಕ...’

- Advertisement -
- Advertisement -

ಖ್ಯಾತ ಪತ್ರಕರ್ತ ರವೀಶ್ ಕುಮಾರ್‌ಗೆ ಕೊಲೆ ಬೆದರಿಕೆ ಹಾಕಿದ ಆರೋಪಿಯ ಹಿನ್ನೆಲೆ ಕುರಿತು ಸ್ವತಂತ್ರ ಪತ್ರಕರ್ತ ಅಲಿಶಾನ್‍ ಜಾಫ್ರಿ ಶೋಧ ನಡೆಸಿ ದಿ ವೈರ್‌ನಲ್ಲಿ ಲೇಖನ ಬರೆದಿದ್ದಾರೆ. ಯತಿ ನರಸಿಂಗಾನಂದ ನೇತೃತ್ವದಲ್ಲಿ ಹಲವು ಹಿಂಸಾವಾದಿ ಗುಂಪುಗಳು ಕಾರ್ಯಾಚರಣೆ ನಡೆಸುತ್ತಿದ್ದು, ಇವು ಹಿಂಸಾಚಾರಕ್ಕೆ ಪ್ರಚೋದನೆ  ನೀಡುತ್ತಿವೆ ಎಂಬುದು ಲೇಖನದಲ್ಲಿ ಸ್ಪಷ್ಟವಾಗಿದೆ. ದೆಹಲಿ ಗಲಭೆಗಳಲ್ಲೂ ಅವರ ಪಾತ್ರವಿದೆ. ದಿ ವೈರ್ ಪ್ರಕಟಿಸಿದ ತನಿಖಾ ವರದಿಯನ್ನು ಅನುವಾದಿಸಿ ಪ್ರಕಟಿಸುತ್ತಿದ್ದೇವೆ.

ಜೂನ್ 5ರಂದು ಮಲಿಕ್ ಸೆಹ್ರಾವತ್ (ನಿಜವಾದ ಹೆಸರು ವಿಕಾಸ್‍ ಸೆಹ್ರಾವತ್) ಮಾಡಿದ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಮೂಲತಃ ಏಪ್ರಿಲ್ 11, 2021 ರಂದು ತನ್ನ ಫೇಸ್‌ಬುಕ್ ಪುಟದಲ್ಲಿ ಮಲಿಕ್‍ ಸೆಹ್ರಾವತ್ ಇದನ್ನು ಪ್ರಕಟಿಸಿದ್ದ. ಆ ವಿಡಿಯೋದಲ್ಲಿ, ಎನ್‍ಡಿಟಿವಿ ಹಿಂದಿಯ ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅಮಾನತುಲ್ಲಾ ಖಾನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಏಪ್ರಿಲ್ 10 ರಂದು ದಾಸ್ನಾ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಒಂದು ದಿನದ ನಂತರ ಆತ ಈ ವಿಡಿಯೋ ಮಾಡಿದ್ದಾನೆ. ಈ ಹಿಂದೆ ಕಾಂಗ್ರೆಸ್‍ ನಾಯಕಿ ಅಲ್ಕಾ ಲಾಂಬಾ ಅವರನ್ನು ನಿಂದಿಸಿದ, ಕೊಲೆ ಬೆದರಿಕೆ ಹಾಕಿದ  ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಕ್ಕಾಗಿ ಮತ್ತು ಗಾಜಿಯಾಬಾದ್‌ನಲ್ಲಿ ಮುಸ್ಲಿಂ ವಿರೋಧಿ ಹಿಂಸಾಚಾರಕ್ಕೆ ಕರೆ ನೀಡಿದ್ದಕ್ಕಾಗಿ ಆತ ಬಂಧಿತನಾಗಿದ್ದ.

‘ಆ ವೇಶ್ಯೆ ಟಿವಿ ಪತ್ರಕರ್ತ ಇದ್ದಾನಲ್ಲ, ರವೀಶ್‍ ಕುಮಾರ್. ನಾನು ಅವನನ್ನೂ ಕೊಲ್ಲುತ್ತೇನೆ. ನಾನು ಅವನಿಗೆ ಗುಂಡು ಹಾರಿಸುತ್ತೇನೆ.. ಇದು ಪಕ್ಕಾ, ಅವನನ್ನು ಶೂಟ್ ಮಾಡುತ್ತೇನೆ. ಘಾಜಿಯಾಬಾದ್‌ನ ಪಿಂಕಿ ಚೌಧರಿ ಅವರು ಅಮಾನತುಲ್ಲಾ ಖಾನ್ ತಲೆಯ ಮೇಲೆ 51 ಲಕ್ಷ ರೂ.ಗಳನ್ನು ಘೋಷಿಸಿದ್ದಾರೆ. ನಾನು ಅವನನ್ನೂ ಕೊಲ್ಲುತ್ತೇನೆ, ಐದು ಲಕ್ಷ ರೂ. ಮಾತ್ರ ಕೊಡಿ ಸಾಕು” ಎಂದು ಸೆಹ್ರಾವತ್ ವೀಡಿಯೊದಲ್ಲಿ ಹೇಳುತ್ತಾನೆ.

ಜನವರಿ 2020ರ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ದಾಳಿಯ ಹೊಣೆ ಹೊತ್ತಿರುವ ಮತ್ತು ಇತ್ತೀಚೆಗೆ ಮುಸ್ಲಿಮರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುವ ವಿಡಿಯೋಗಳನ್ನು ಮಾಡಿದ ವ್ಯಕ್ತಿ ಪಿಂಕಿ ಚೌಧರಿ. ಈತ ಹಿಂದೂ ರಕ್ಷಾ ದಳದ ಮುಖ್ಯಸ್ಥನಾಗಿದ್ದು, ಎಎಪಿ ನಾಯಕ ಅಮಾನತುಲ್ಲಾ ಖಾನ್‍ ಹತ್ಯೆಗೆ 51 ಲಕ್ಷ ರೂ. ಬಹುಮಾನ ಘೋಷಿಸಿದ್ದಾನೆ.

ಸೆಹ್ರಾವತ್ ಒಂಟಿ ತೋಳ ಅಲ್ಲ, ಹಾಗೆಯೇ ಯಾರನ್ನಾದರೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದು ಇದೇ ಮೊದಲಲ್ಲ. ಪುರುಷರು ಮತ್ತು ಮಹಿಳೆಯರನ್ನು ಒಳಗೊಂಡ ಹಿಂಸಾವಾದಿ ಗುಂಪಿನ ಪ್ರಮುಖ ಭಾಗವಾಗಿದ್ದು, ಈ ಗುಂಪಿನ ಸದಸ್ಯರು ದಿನನಿತ್ಯದ ಆಧಾರದ ಮೇಲೆ ದ್ವೇಷವನ್ನು ಹರಡುತ್ತಾರೆ. ಮುಸ್ಲಿಂ ವಿರೋಧಿ ಹಿಂಸಾಚಾರದ ಹಲವಾರು ಘಟನೆಗಳಿಗೆ ಸಂಬಂಧಿಸಿದಂತೆ ಅವರ ಹೆಸರುಗಳನ್ನು ಎತ್ತಿ ತೋರಿಸಲಾಗಿದೆ. ಉದಾಹರಣೆಗೆ 2020ರ ದೆಹಲಿ ಹಿಂಸಾಚಾರದ ಕುರಿತು ಏಪ್ರಿಲ್ 2021ರಲ್ಲಿ, ದಿ ವೈರ್ ಈ ಕುರಿತಂತೆ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಮಾಡುವ ಹಿಂಸಾಚಾರದ ಕರೆಗಳ ಬಗ್ಗೆ ವಿವರವಾದ ತನಿಖಾ ವರದಿಗಳನ್ನು ಪ್ರಕಟಿಸಿತು.

ಇದನ್ನೂ ಓದಿ: ದೆಹಲಿ ಹಿಂಸಾಚಾರದ ಅಸಲಿ ಪಿತೂರಿಗಾರರು ಯಾರು? ದೆಹಲಿ ಪೊಲೀಸ್ ನೋಡಲೊಲ್ಲದ ಭೀಕರ ಸತ್ಯಗಳನ್ನು ತೆರೆದಿಟ್ಟ ದಿ ವೈರ್ ವರದಿ

ಸೆಹ್ರಾವತ್ ಜನರನ್ನು ಬಹಿರಂಗವಾಗಿ ಪ್ರಚೋದಿಸುತ್ತಾನೆ. ಈತ, ಮುಸ್ಲಿಮರನ್ನು ಅಥವಾ ಸರ್ಕಾರವನ್ನು ಟೀಕಿಸುವವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುವ ಹಲವಾರು ವೀಡಿಯೊಗಳಿವೆ. ಪ್ರಶಾಂತ್ ಭೂಷಣ್ ಅವರಂತಹ “ರಾಷ್ಟ್ರ ವಿರೋಧಿಗಳು” ಎಂದಾದರೂ ಕಂಡರೆ ಅವರನ್ನು ನರಕಕ್ಕೆ ಕಳುಹಿಸುವುದಾಗಿ ಈ ಸೆಹ್ರಾವತ್‍ ಪ್ರತಿಜ್ಞೆ ಮಾಡಿದ್ದಾನೆ.

ಸೆಹ್ರಾವತ್ ಹಿಂಸಾವಾದಿ ‘ಮಹಾಕಾಲ್‍’ ತಂಡದ ನಾಯಕ. ಭಜರಂಗದಳದ ಜೊತೆ ಸಂಬಂಧ ಹೊಂದಿರುವೆನೆಂದು ಹೇಳಿಕೊಳ್ಳುತ್ತಾನೆ ಮತ್ತು ಹಿಂಸಾವಾದಿ ಹಿಂದುತ್ವದ ಬೋಧಕ ಯತಿ ನರಸಿಂಗಾನಂದ್ ಸರಸ್ವತಿಯವರ ಪ್ರೋತ್ಸಾಹವೂ ಈತನಿಗಿದೆ. ಸೆಹ್ರಾವತ್‌ನನ್ನು ಬಂಧಿಸಿದಾಗ, ನರಸಿಂಗಾನಂದ್ ಅವರು ಸೆಹ್ರಾವತ್‌ನ ಸಹಚರರೊಂದಿಗೆ ಒಂದು ವೀಡಿಯೊವನ್ನು ಬಿಡುಗಡೆ ಮಾಡಿದರು. ‘ಸೆಹ್ರಾವತ್‍ ಶೀಘ್ರದಲ್ಲೇ ಹೊರ ಬರುತ್ತಾರೆ. ಅವರು ಹೊಸ ಶಕ್ತಿಯೊಂದಿಗೆ ಕೆಲಸಕ್ಕೆ ಮರಳುತ್ತಾರೆ” ಎಂದು ಹೇಳಿದರು.

ಯತಿ ಸರಸಿಂಗಾನಂದರ ದಾಸ್ನಾ ದೇವಸ್ಥಾನದಲ್ಲಿ ಗುಂಪೊಂದು ಸೇರಿತ್ತು. ಆ ಸಂದರ್ಭದಲ್ಲಿ ದೇವಸ್ಥಾನದಲ್ಲಿ ನೀರು ಕುಡಿದ ಎಂಬ ಕಾರಣಕ್ಕೆ ಅಪ್ರಾಪ್ತ ಮುಸ್ಲಿಂ ಹುಡುಗನನ್ನು ಅಮಾನುಷವಾಗಿ ಥಳಿಸಲಾಗಿತ್ತು. ನಂತರದಲ್ಲಿ ಅಪ್‌ಲೋಡ್ ಮಾಡಿದ ಲೈವ್ ವಿಡಿಯೋದಲ್ಲಿ, ಸೆಹ್ರಾವತ್ ಮತ್ತು ಅವನ ಸಹಚರರು, ಮುಸ್ಲಿಮರನ್ನು ಕೊಲ್ಲುವ ಮತ್ತು ದಾಸ್ನಾದಿಂದ ಹೊರಹಾಕುವ ಬೆದರಿಕೆ ಹಾಕಿದ್ದರು.

ಕಾಂಗ್ರೆಸ್ ನಾಯಕಿ ಅಲ್ಕಾ ಲಾಂಬಾ ಅವರನ್ನೂ ಸೆಹ್ರಾವತ್ ನಿಂದಿಸಿ ಯುಪಿಗೆ ಪ್ರವೇಶಿಸದಂತೆ ಎಚ್ಚರಿಕೆ ನೀಡಿದ್ದ. ಲಾಂಬಾ ದೂರು ನೀಡಿದ ನಂತರ ಅವನನ್ನು ತಾತ್ಕಾಲಿಕವಾಗಿ ಬಂಧಿಸಲಾಯಿತು. ಆದರೆ, ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ರವೀಶ್ ಕುಮಾರ್ ವಿರುದ್ಧ ಮಾರಣಾಂತಿಕ ಬೆದರಿಕೆ ಹಾಕುವ ವೀಡಿಯೊದ ಕೊನೆಯಲ್ಲಿ, ದಾಸ್ನಾ ಜೈಲಿನಲ್ಲಿದ್ದಾಗ ಯುಪಿ ಪೊಲೀಸರು ಮತ್ತು ಯೋಗಿ ಆದಿತ್ಯನಾಥ್ ತನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಕ್ಕಾಗಿ ಅಭಿನಂದಿಸಿದ್ದಾನೆ.

ಇದಕ್ಕೂ ಮೊದಲು ಸೆಹ್ರಾವತ್ ಮತ್ತು ಅವನ ಸಹವರ್ತಿ ಸುರೇಶ್ ರಜಪೂತ್ ಅಲಿಯಾಸ್‍ ‘ಹಿಂದೂ ಶೇರ್ ಬಾಯ್’ (ಯೂಟ್ಯೂಬ್‌ನಲ್ಲಿ 4.6 ಲಕ್ಷ ಅನುಯಾಯಿಗಳು) ವಿಡಿಯೋವೊಂದನ್ನು ಅಪ್‌ಲೋಡ್ ಮಾಡಿದ್ದು, ಅದರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಗುಂಡಿಕ್ಕಿ ಕೊಲ್ಲುವುದಾಗಿ ಮತ್ತು ಮಂಗೋಲ್‌ಪುರಿಯಲ್ಲಿನ ಮುಸ್ಲಿಮರನ್ನು ಕೊಲ್ಲುವ ಮತ್ತು ಆ ಪ್ರದೇಶದಿಂದ ಎತ್ತಂಗಡಿ ಮಾಡುವ ಬೆದರಿಕೆ ಹಾಕಲಾಗಿದೆ. ತೀವ್ರಗಾಮಿ ಹಿಂದುತ್ವ ನಾಯಕಿ ರಾಗಿಣಿ ತಿವಾರಿ ಅವರೊಂದಿಗೆ ಸುರೇಶ್ ರಜಪೂತ್ ದೆಹಲಿಯಲ್ಲಿ ‘ಲವ್ ಜಿಹಾದ್’ ವಿರುದ್ಧದ ರ್ಯಾಲಿಯಲ್ಲಿ ಭಾಗವಹಿಸಿ ಮುನ್ನಡೆಸಿದ್ದ. ಅಲ್ಲಿ ಮಾತಾಡಿದವರೆಲ್ಲ, “ಮುಸ್ಲಿಮರನ್ನು ಶೂಟ್ ಮಾಡಿ” ಮತ್ತು ಮುಸ್ಲಿಮರು ಕೊಲ್ಲಲ್ಪಟ್ಟಾಗ, ನಾವು ರಾಮ್ ರಾಮ್ ಎಂದು ಕೂಗುತ್ತೇವೆ’ ಎಂದು ದೆಹಲಿ ಪೊಲೀಸರ ಸಮ್ಮುಖದಲ್ಲೇ ಹೇಳಿದ್ದರು.

ಇಂಡಿಯಾ ಗೇಟ್ ಮತ್ತು ಜಂತರ್ ಮಂತರ್‌ನಲ್ಲಿ ನಡೆದ ಈ “ಲವ್ ಜಿಹಾದ್” ವಿರೋಧಿ ಪ್ರತಿಭಟನೆಯಲ್ಲಿ ಮುಸ್ಲಿಮರ ವಿರುದ್ಧ ಹಿಂಸೆಗೆ ಕರೆ ಕೊಡುವ  ಹಲವಾರು ದ್ವೇಷ ಭಾಷಣಗಳನ್ನು ದಿ ವೈರ್ ದಾಖಲಿಸಿದೆ. “ಹಿಂದೂ ಪರಿವಾರ್” ಎಂಬ ಪೇಜ್‍ ಇಂತಹ ಸಭೆ, ಪ್ರತಿಭಟನೆಗಳನ್ನು ಲೈವ್‍ ಪ್ರಸಾರ ಮಾಡುತ್ತದೆ. ತನ್ನ ದ್ವೇಷ ಭಾಷಣ ನೀತಿಯನ್ನು ಉಲ್ಲಂಘಿಸಿರುವುದು ಕಂಡುಬಂದ ನಂತರ ಈ ಪುಟವನ್ನು ಯೂಟ್ಯೂಬ್ ಪ್ರಕಟಿಸಲಿಲ್ಲ. ಆದರೆ ಇದು ಇದೀಗ ಚಾನೆಲ್‌ ರೂಪದಲ್ಲಿ ಆನ್‌ಲೈನ್‌ಗೆ ಮರಳಿದೆ. ಈ ಪ್ರಚೋದನಾಕಾರಿ ವೀಡಿಯೊಗಳ ಥಂಬ್‍ನೇಲ್‍ಗಳು ಸಾವಿನ ಬೆದರಿಕೆ ಮತ್ತು ಅತ್ಯಾಚಾರ ಬೆದರಿಕೆಗಳನ್ನು ಉಚ್ಚರಿಸುತ್ತವೆ.

ಸೆಹ್ರಾವತ್ ಜೈಲಿನಿಂದ ಬಿಡುಗಡೆಯಾದ ನಂತರ, ಅಲ್ಕಾ ಲಾಂಬಾರನ್ನು ಅವಾಚ್ಯ ಭಾಷೆಯಲ್ಲಿ ನಿಂದಿಸುವ ಮತ್ತು ಲಾಂಬಾರ ದೇಹದ ಬಗ್ಗೆ ಲೈಂಗಿಕ ಪದಗಳನ್ನು ಬಳಸಿ ನಿಂದಿಸುವ ಮತ್ತೊಂದು ವೀಡಿಯೊವನ್ನು ಪ್ರಸಾರ ಮಾಡಿದ್ದ. ಸೆಹ್ರಾವತ್ ಚಾನೆಲ್‌ನಲ್ಲಿ ಇರುವ ಗಾಂಧಿ ಕುಟುಂಬದ ವಿರುದ್ಧದ ವೀಡಿಯೊದಲ್ಲಿನ ಥಂಬ್‍ನೇಲ್‍ಗಳು, ಕಾಂಗ್ರೆಸ್ ನಾಯಕರಾದ ಪ್ರಿಯಾಂಕಾ ಗಾಂಧಿ ಮತ್ತು ಸೋನಿಯಾ ಗಾಂಧಿ ವಿರುದ್ಧ ಅತ್ಯಾಚಾರದ ಬೆದರಿಕೆ ಹಾಕುತ್ತವೆ.

ಯಾವುದೋ ಕಾರಣಕ್ಕಾಗಿ, ಯೂಟ್ಯೂಬ್ ಮತ್ತು ಫೇಸ್‌ಬುಕ್ ತಮ್ಮ ಸಮುದಾಯ ಮಾನದಂಡಗಳನ್ನು ನಿಯಮಿತವಾಗಿ ಉಲ್ಲಂಘಿಸುವ ಈ ಸರಣಿ ಅಪರಾಧಿಗಳ ವಿರುದ್ಧ ತ್ವರಿತ ಅಥವಾ ಗಂಭೀರ ಕ್ರಮ ತೆಗೆದುಕೊಳ್ಳುವುದಿಲ್ಲ. ಜುಮಾ ಮಸೀದಿಯ ಶಾಹಿ ಇಮಾಮ್ ಅವರು ತಮ್ಮ ಶುಕ್ರವಾರದ ಉಪದೇಶದಲ್ಲಿ ನರಸಿಂಗಾನಂದ್ ಅವರನ್ನು ಬಂಧಿಸುವಂತೆ ಕರೆ ನೀಡಿದ ನಂತರ, ನರಸಿಂಗಾನಂದ್ ಅವರ ಇಬ್ಬರು ಶಿಷ್ಯರಾದ ರಾಹುಲ್ ವರ್ಮಾ (ದಾಸ್ನಾದ ಯತಿ ನರಸಿಂಗಾನಂದರ ದೇವಸ್ಥಾನದ ಆವರಣದಿಂದ ಸೆಹ್ರಾವತ್ ಮಾಡಿದ ಪ್ರಚೋದನಾತ್ಮಕ ವೈರಲ್ ವೀಡಿಯೊದಲ್ಲಿ ಸಹ ಇವನಿದ್ದಾನೆ) ಮತ್ತು ಸುರೇಶ್ ರಜಪೂತ್ ತಡರಾತ್ರಿ ಜುಮಾ ಮಸೀದಿಗೆ ತೆರಳಿ, ಮಸೀದಿ ಆವರಣದ ಗೇಟ್‍ ಬಳಿ ನಿಂತು, ಮತ್ತೊಂದು ಹಿಂಸಾವಾದಿ ವಿಡಿಯೊವನ್ನು ಅಪ್ಲೋಡ್ ಮಾಡಿದರು. ವೀಡಿಯೊ ಪ್ರಸಾರವಾದ ನಂತರ ಯೂಟ್ಯೂಬ್  ಆ ಚಾನೆಲ್‍  ಅನ್ನು ಡಿಲೀಟ್‍ ಮಾಡಿತು. ಆದರೆ ವೀಡಿಯೊ ಮತ್ತು ಚಾನೆಲ್ ಈಗ ಆನ್‌ಲೈನ್‌ಗೆ ಮರಳಿವೆ.

ತನ್ನ ಗುರು ನರಸಿಂಗಾನಂದ್ ಅವರಂತೆ, ಸೆಹ್ರಾವತ್ ನಿರಂತರವಾಗಿ ಜನರನ್ನು ಪ್ರಚೋದಿಸುತ್ತಾನೆ ಮತ್ತು ಹಿಂಸಾಚಾರಕ್ಕೆ ಪ್ರೇರೇಪಿಸುತ್ತಾನೆ. ಆಶ್ಚರ್ಯಕರವೆಂದರೆ, ಮುಸ್ಲಿಮರ ವಿರುದ್ಧ ಭಯೋತ್ಪಾದಕ ದಾಳಿ ನಡೆಸುವುದಾಗಿ ಬೆದರಿಕೆ ಹಾಕುವ ಸೆಹ್ರಾವತ್‌ನ ವೀಡಿಯೊಗಳು ಶುಕ್ರವಾರವೇ ಅವನ ಚಾನೆಲ್‍ನಲ್ಲಿ ಲೈವ್‍ ಪ್ರಸಾರವಾಗುತ್ತವೆ! “ನಾಳೆ ನಾನು ಇತಿಹಾಸ ನಿರ್ಮಿಸಲಿದ್ದೇನೆ. ಎಲ್ಲಾ ಹಿಂದೂಗಳು ಇದೇ ರೀತಿ ಮಾಡಬೇಕೆಂದು ನಾನು ವಿನಂತಿಸುತ್ತೇನೆ. ‘ಪಾಲ್ವಾಲ್‌ನಲ್ಲಿ ಶುಕ್ರವಾರ ನಮಾಜ್ ನಂತರ ಮಧ್ಯಾಹ್ನ 1,30ಕ್ಕೆ ಏನಾಗುತ್ತದೆ ಎಂಬುದನ್ನು ನೋಡಿ. ಅವರು ನಮ್ಮ ಗುರುಗಳಿಗೆ (ನರಸಿಂಗಾನಂದ್) ಅಗೌರವ ತೋರಿದ್ದಾರೆ. ನಾವು ನಮ್ಮ ಪಾದಗಳ ಅಡಿ ಅವರನ್ನು ಪುಡಿ ಪುಡಿ ಮಾಡುತ್ತೇವೆ. ನಮ್ಮ ಕತ್ತಿಗಳನ್ನು ಝಳಪಿಸಿ ಜೀವ ತೆಗೆಯುತ್ತೇವೆ. ಅಂದು ಏನಾಗಲಿದೆ ಎಂದು ಮುಸ್ಲಿಮರಿಗೆ ಊಹಿಸಲೂ ಸಾಧ್ಯವಿಲ್ಲ … ಮುಲ್ಲಾಗಳೇ ಕೇಳಿ, ಪಲ್ವಾಲ್ ನಂತರ ನಾವು ಭಿಲ್ವಾರಾಗೆ ಬರುತ್ತೇವೆ. ನಿಮಗೆ ಬೇಕಾದಷ್ಟು ಮದ್ದುಗುಂಡುಗಳನ್ನು ಇಟ್ಟುಕೊಳ್ಳಿ, ನಾವು ಬರುತ್ತಿದ್ದೇವೆ… ಯುದ್ಧ ಘೋಷಿಸಲಾಗಿದೆ. ಕೊಲ್ಲುವುದು ಅಥವಾ ಸಾಯುವುದು….(ಕಿಲ್‍ ಆರ್ ಡೈ)….

ಇದನ್ನೂ ಓದಿ: ‘ಧರ್ಮಯುದ್ಧ ಮಾಡಲು ನನಗೆ ಆಯುಧ ಹಿಡಿದಿರುವವರು ಬೇಕಿದೆ’: ಬಹಿರಂಗ ಭಯೋತ್ಪಾದನೆಗೆ ಕರೆ ನೀಡಿದ ಯತಿ ನರಸಿಂಗಾನಂದ?

ಮತ್ತೊಂದು ವೀಡಿಯೊದಲ್ಲಿ ಈ ವರ್ಷ ಎರಡು ಗುರಿಗಳನ್ನು ನಿಗದಿಪಡಿಸಿದ್ದಾಗಿ ಸೇಹ್ರಾವತ್‍ ಹೇಳಿದ್ದಾನೆ. ‘ಈ ವರ್ಷ ಎರಡು ವಿಕೆಟ್‌ಗಳು ಬೀಳಲಿವೆ. ಜೈಲಿನಲ್ಲಿರುವ ಕೆಲವು ಮಿತ್ರರು ಹೊರಬರುವುದನ್ನು ಕಾಯುತ್ತಿದ್ದೇವೆ.… ಪಾಕಿಸ್ತಾನ ಕೂಡ ಗೌರವ (ಶ್ರದ್ದಾಂಜಲಿ) ಸಲ್ಲಿಸುತ್ತದೆ’ ಎಂದು  ಹೇಳಿದ್ದಾನೆ. ಈ ಕೆಲವು ವೀಡಿಯೊಗಳನ್ನು ಅಳಿಸಲಾಗಿದ್ದರೂ, ದಿ ವೈರ್ ಅವನ ಪರ್ಯಾಯ ಖಾತೆಗಳಿಂದ ಅವುಗಳನ್ನು ಡೌನ್‌ಲೋಡ್ ಮಾಡಿದೆ. ಒಂದು ವೇಳೆ ಪೊಲೀಸರು ಈ ಗುಂಪಿನ ವಿರುದ್ಧ ಕ್ರಮ ಕೈಗೊಳ್ಳಲು ಬಯಸಿದರೆ ಅದಕ್ಕೆ ಬೇಕಾದ ಸಾಕ್ಷ್ಯಗಳೆಲ್ಲ ದಿ ವೈರ್ ಬಳಿಯಿವೆ.

ಬರಹಗಾರ ಮತ್ತು ವಿದ್ವಾಂಸ ಶುದ್ಧಭ್ರತ ಸೇನ್‌ಗುಪ್ತಾ ಈ ವ್ಯವಸ್ಥೆಯ ಕಾರ್ಯವಿಧಾನವನ್ನು (ಮೋಡಸ್‍ ಆಪರೆಂಡಿ) ಸೂಕ್ತವಾಗಿ ವಿವರಿಸುತ್ತಾರೆ. ‘ದಾಸ್ನಾ ದೇವಸ್ಥಾನ ಈ ಗುಂಪುಗಳ ಪ್ರಧಾನ ಕಚೇರಿ, ದೇವಸ್ಥಾನದ ಮುಖ್ಯಸ್ಥ ಯತಿ ನರಸಿಂಗಾನಂದ್ ಈ ಗುಂಪುಗಳ ನಾಯಕ, ಪೋಷಕ…’ ಎನ್ನುತ್ತಾರೆ.

“ಅವರ ಕಾರ್ಯತಂತ್ರ ದುರ್ಬಲ ಮುಸ್ಲಿಮರ ಮೇಲೆ ಕುಂಟು ನೆಪಗಳ ಮೇಲೆ ದಾಳಿಗಳನ್ನು ಪ್ರಚೋದಿಸುವುದು, ಈ ದಾಳಿಯ ಸುದ್ದಿಗಳನ್ನು ವೈರಲ್‍ ಮಾಡುವುದು, ಪೋಲಿಸ್ ಮತ್ತು ಆಡಳಿತದಿಂದ ಜರುಗುವ ನಾಮಕಾವಸ್ತೆ ಕ್ರಮಗಳನ್ನು ಎದುರಿಸುವುದು ಮತ್ತು ತಾವು ‘ಜಿಹಾದಿ ಭಯೋತ್ಪಾದನೆ’ಯ ಬಲಿಪಶುಗಳೆಂದು ನಿರೂಪಿಸುವುದು (ಇದು ಕೇವಲ ಮುಸ್ಲಿಮರ ಉಪಸ್ಥಿತಿಯನ್ನು ಸೂಚಿಸುವ ಅವರ ಆದ್ಯತೆಯ ವಿಧಾನವಾಗಿದೆ) ಹಾಗೂ ‘ಎಡಪಂಥೀಯ’ ಪಿತೂರಿ ಎಂದೂ ಪ್ರಚಾರ ಮಾಡುವುದು…..’

‘ಈ ಕಾರ್ಯತಂತ್ರದ ತರ್ಕವು, ಲಜ್ಜೆಗೆಟ್ಟ ದಾಳಿ ಬೆದರಿಕೆಯ ಸರಣಿ ಪ್ರದರ್ಶನಗಳನ್ನು (ವೈರಲ್‍ ವಿಡಿಯೊಗಳು)  ಪ್ರಚಾರ ಮಾಡುವುದು ಮತ್ತು ಅಸಂಬದ್ಧವಾಗಿ ಇದನ್ನು ಸಮರ್ಥಿ‍ಸಿಕೊಳ್ಳುವುದು. ವಾದ, ಸಮರ್ಥನೆ ಹೆಚ್ಚು ಅತಿರೇಕದಿಂದ ಕೂಡಿದಷ್ಟೂ ಅದು ಹೆಚ್ಚು ಬೆಂಬಲವನ್ನು  ಪಡೆಯುತ್ತದೆ. ಸಾಮಾನ್ಯವಾಗಿ, ವ್ಯವಸ್ಥಿತ ಭಯೋತ್ಪಾದನೆಗೆ ನೆಲವನ್ನು ಹದಗೊಳಿಸುವ ತರ್ಕ ಇದರ ಹಿಂದಿದೆ’ ಎನ್ನುತ್ತಾರೆ ಸೇನ್‍ ಗುಪ್ತ.

ಕಳೆದ ಕೆಲವು ವಾರಗಳಲ್ಲಿ, ಭಾರತದಲ್ಲಿ, ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಮುಸ್ಲಿಮರ ವಿರುದ್ಧ ಹಲವಾರು ದ್ವೇಷದ ಅಪರಾಧಗಳು ನಡೆದಿವೆ. ಕಾನೂನು ಜಾರಿ ಸಂಸ್ಥೆಗಳ ಯಾವುದೇ ಬಲವಾದ ಪರಿಶೀಲನೆಯ ಅನುಪಸ್ಥಿತಿಯಲ್ಲಿ, ಸೆಹ್ರಾವತ್, ನರಸಿಂಗಾನಂದ ಮತ್ತು ಇತರರು ಬೆಂಕಿಯಿಡುವ ಮತ್ತು ದ್ವೇಷದ ಸಂದೇಶಗಳನ್ನು ಆನ್‌ಲೈನ್‌ನಲ್ಲಿ ಪ್ರಸಾರ ಮಾಡುವುದನ್ನು ಮುಂದುವರೆಸಿದ್ದಾರೆ. ಇದು ವ್ಯಾಪಕ ಪ್ರೇಕ್ಷಕರನ್ನು ತಲುಪುತ್ತಿದೆ..

(ಈ ಗುಂಪುಗಳು ಬಳಸಿರುವ ಅವಾಚ್ಯ, ಅಸಹ್ಯ ಪದಗಳನ್ನು ತೆಗೆದು ಹಾಕಿದ್ದೇವೆ)

(ಅಲಿಶಾನ್‍ ಜಾಫ್ರಿ ಫ್ರೀ ಲ್ಯಾನ್ಸ್ ಪತ್ರಕರ್ತರು)

ಕನ್ನಡಕ್ಕೆ: ಪಿ.ಕೆ. ಮಲ್ಲನಗೌಡರ್


ಇದನ್ನೂ ಓದಿ; ಜಿಹಾದಿ ಎಂದು ಶಿರಡಿ ಸಾಯಿಬಾಬಾ ಮೂರ್ತಿ ಧ್ವಂಸಗೈದ ಸಂಘಪರಿವಾರದ ಕಾರ್ಯಕರ್ತರು- ದೂರು ದಾಖಲು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...