ಬಡ ಬನ್ ವ್ಯಾಪಾರಿಯೊಬ್ಬರಿಗೆ ಯೂಟ್ಯೂಬ್ ಚಾನೆಲ್ ತಂಡದ ಹೆಸರಿನಲ್ಲಿ ಗುಂಪೊಂದು ಕಿರುಕುಳ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತೆಲಂಗಾಣದ ಮುಲುಗು ಜಿಲ್ಲೆಯ ಪ್ರಮುಖ ಬುಡಕಟ್ಟು ಹಬ್ಬವಾದ ಸಮಕ್ಕ ಸಾರಲಮ್ಮ ಜಾತ್ರೆಯಲ್ಲಿ ಕೋವಾ ಬನ್ಗಳನ್ನು ಮಾರಾಟ ಮಾಡುತ್ತಿದ್ದ ಮುಸ್ಲಿಂ ವ್ಯಕ್ತಿಗೆ ಯೂಟ್ಯೂಬ್ ಚಾನೆಲ್ ತಂಡ ‘ಫುಡ್ ಜಿಹಾದ್’ ಎಂದು ಆರೋಪಿಸಿ ಕಿರುಕುಳ ನೀಡಿದೆ ಎಂದು ವೈರಲ್ ವಿಡಿಯೋ ಕುರಿತು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಜುಲೈ 2025ರಲ್ಲಿ ಕ್ರಿಯೇಟ್ ಮಾಡಲಾದ ಮತ್ತು ಸುಮಾರು 7.82 ಸಾವಿರ ಚಂದಾದಾರರನ್ನು ಹೊಂದಿರುವ ‘ತೇಜಸ್ವಿ ನ್ಯೂಸ್’ ಎಂಬ ಯೂಟ್ಯೂಬ್ ಚಾನೆಲ್, ಕಳೆದ 10 ದಿನಗಳಲ್ಲಿ ಮುಸ್ಲಿಂ ಮಾರಾಟಗಾರರು ಜಾತ್ರೆಯಲ್ಲಿ ‘ಕಲಬೆರಕೆ’ ಕೋವಾ ಬನ್ಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸರಣಿ ವಿಡಿಯೋಗಳನ್ನು ಮಾಡಿದೆ ಎಂದು ವರದಿ ಉಲ್ಲೇಖಿಸಿದೆ.
ಫೆಬ್ರವರಿ 13, ಶುಕ್ರವಾರದಂದು ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾದ 53 ನಿಮಿಷಗಳ ವಿವರಣಾತ್ಮಕ ವಿಡಿಯೋದಲ್ಲಿ ಕಾರ್ಯಕ್ರಮದ ನಿರೂಪಕ ಬಾಲು ಬಾಲಾಜಿ ಗೌಡ್, ಜಾತ್ರೆಗೆ ಬಂದವರು ಅಲ್ಲಿ ಮಾರಾಟ ಮಾಡಿದ್ದ ಬನ್ಗಳನ್ನು ಸೇವಿಸಿದ ನಂತರ ಅಸ್ವಸ್ಥರಾಗಿದ್ದಾರೆಂದು ದೂರುಗಳು ಬಂದಿರುವುದಾಗಿ ಹೇಳಿಕೊಂಡಿದ್ದಾನೆ.
ಯೂಟ್ಯೂಬ್ ಚಾನೆಲ್ನಲ್ಲಿ ಪ್ರಕಟಿಸಿದ ಎರಡು ವಿಡಿಯೋಗಳಲ್ಲಿ ಬಾಲಾಜಿ ಗೌಡ್ ಜಾತ್ರೆಯಲ್ಲಿ ಮುಸ್ಲಿಂ ಮಾರಾಟಗಾರರನ್ನು ಬೆದರಿಸಿ ಪ್ರಶ್ನಿಸುತ್ತಿರುವುದನ್ನು ತೋರಿಸಲಾಗಿದೆ.
ಒಂದು ವಿಡಿಯೋದಲ್ಲಿ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಜಾವೆದ್ ಎಂಬ ಬಡ ಬನ್ ಮಾರಾಟಗಾರನನ್ನು ಬಾಲಾಜಿ ಗೌಡ್ ಬೆದರಿಸುತ್ತಿರುವುದು ಇದೆ. ಜಾವೆದ್ ಅವರ ತಳ್ಳು ಗಾಡಿಯಲ್ಲಿದ್ದ ಬನ್ಗಳ ಪ್ಯಾಕ್ ಮೇಲೆ ಅದನ್ನು ತಯಾರಿಸಿದ ದಿನಾಂಕ ಏಕಿಲ್ಲ? ಎಂದು ಬಾಲಾಜಿ ಒಂದು ರೀತಿ ಗದರಿಸಿ ಕೇಳಿದ್ದಾನೆ. ಇದಕ್ಕೆ ಜಾವೆದ್, ಬನ್ಗಳನ್ನು ಸ್ಥಳೀಯವಾಗಿ ಖರೀದಿಸಲಾಗಿದೆ, ಅವುಗಳು ಆರು ದಿನಗಳಲ್ಲಿ ಮಾರಾಟ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದ್ದಾರೆ. ಇದರಿಂದ ನಿರಾಶೆಗೊಂಡ ಬಾಲಾಜಿ ಕ್ಯಾಮಾರ ಕಡೆ ಮಾತನಾಡಲು ಶುರು ಮಾಡಿರುವುದನ್ನು ನೋಡಬಹುದು.
ಮುಂದುವರಿದು, “ಹೈದರಾಬಾದ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನೇಕ ರೋಹಿಂಗ್ಯಾ ಮುಸ್ಲಿಮರು ನೆಲೆಸಿದ್ದಾರೆ. ಅವರು ಯಾವುದರಲ್ಲಿ ಭಾಗಿಯಾಗಿದ್ದಾರೆ ಎಂಬುದು ನಮಗೆ ತಿಳಿಯುತ್ತಿಲ್ಲ. ಯಾರಾದರೂ ಕೇವಲ 10 ರೂಪಾಯಿಗೆ ಕೋವಾ ಬನ್ ಮಾರಾಟ ಮಾಡಲು ಸಾಧ್ಯವೇ? ಹಿಂದೂ ಹಬ್ಬಗಳು ಮತ್ತು ಮೆರವಣಿಗೆಗಳಲ್ಲಿ ಇಂತಹ ಕಲಬೆರಕೆ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವುದು ಅಸಹ್ಯಕರವಾಗಿದೆ,” ಎಂದು ಗೌಡ್ ಹೇಳಿದ್ದಾನೆ. ಅಲ್ಲದೆ, ವ್ಯಾಪಾರಿಯನ್ನು ಎಕ್ಸ್ಪೈರಿ ದಿನಾಂಕದ ಬಗ್ಗೆ ಪದೇ ಪದೇ ಪ್ರಶ್ನಿಸುತ್ತಾ, ಇವರ ವಿರುದ್ಧ ಪೊಲೀಸ್ ಕೇಸ್ ದಾಖಲಿಸಬೇಕು ಎಂದು ಆತ ಒತ್ತಾಯಿಸಿದ್ದಾನೆ.
ಈ ವೇಳೆ ಮಹಿಳೆಯೊಬ್ಬರು ಕೂಡ ಮೈಕ್ ಹಿಡಿದು ಜಾವೆದ್ ಅವರಿಗೆ ಪ್ರಶ್ನೆಗಳನ್ನು ಹಾಕಿರುವುದು ಹಾಗೂ ಇತರ ಪುರುಷರು ಮತ್ತು ಮಹಿಳೆಯರು ಸುತ್ತುವರಿದು ಪ್ರಶ್ನೆಗಳನ್ನು ಹಾಕಿ ಬೆದರಿಸಿರುವುದು ವಿಡಿಯೋದಲ್ಲಿ ಇದೆ.
ಜಾವೆದ್ ಅವರು ಗೌಡ್ ಬಳಿ, ಆಂಧ್ರ ಪ್ರದೇಶದಿಂದ ತೆಲಂಗಾಣಕ್ಕೆ ಬದುಕಿನ ಬಂಡಿ ಸಾಗಿಸಲು ಮಾತ್ರ ಬಂದಿದ್ದೇನೆ ಎಂದು ಅಸಹಾಯಕರಾಗಿ ಬೇಡಿಕೊಳ್ಳುವುದನ್ನು ಮತ್ತು ಬನ್ನ ಚೆನ್ನಾಗಿದೆ ಎಂದು ನಿರೂಪಿಸಲು ಅದನ್ನು ತಿಂದು ತೋರಿಸುವುದನ್ನು ವಿಡಿಯೋದಲ್ಲಿ ನೋಡಬಹುದು.
ಮತ್ತೊಂದು ವಿಡಿಯೋದಲ್ಲಿ, ಬನ್ಗಳ ಮೇಲೆ ಉತ್ಪಾದನಾ ದಿನಾಂಕ ಅಥವಾ ಮುಕ್ತಾಯ ದಿನಾಂಕ ಇಲ್ಲದಿರುವ ಬಗ್ಗೆ ಕರ್ನೂಲ್ನವರೇ ಆದ ಶಾವಲಿ ಎಂಬ ಮತ್ತೊಬ್ಬ ಮಾರಾಟಗಾರನನ್ನು ಬಾಲು ಬಾಲಾಜಿ ಪ್ರಶ್ನಿಸುತ್ತಿರುವುದು ಇದೆ. ನಂತರ ಆತ ಪಕ್ಕದಲ್ಲಿದ್ದ ಪ್ರೇಕ್ಷಕನ ಕಡೆಗೆ ತಿರುಗಿ, ಕೋವಾವನ್ನು ಅಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲವಾದ್ದರಿಂದ ಅದು ಅಸಲಿಯಾಗಿರಲು ಸಾಧ್ಯವಿಲ್ಲ ಎಂದು ಹೇಳಿರುವದುನ್ನು ನೋಡಬಹುದು.
ಜಾತ್ರಾ ಸಂದರ್ಶಕರ ಗುಂಪಿನಿಂದ ಸುತ್ತುವರೆದಿರುವ ತೇಜಸ್ವಿ ನ್ಯೂಸ್ನ ಮತ್ತೊಬ್ಬ ನಿರೂಪಕ, ಶಾವಲಿಯಲ್ಲಿ ಬನ್ ಕಲಬೆರಕೆಯಾಗಿಲ್ಲ ಅಥವಾ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂದು ಸಾಬೀತುಪಡಿಸಲು ಅದನ್ನು ತಿನ್ನಲು ಕೇಳುತ್ತಿರುವುದು ವಿಡಿಯೋದಲ್ಲಿ ಇದೆ.
ಈ ವಿಡಿಯೋಗಳು ಆನ್ಲೈನ್ನಲ್ಲಿ ಟೀಕೆಗೆ ಗುರಿಯಾಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಬಳಕೆದಾರರು ಚಾನೆಲ್ ಅನ್ನು ಸಮರ್ಥಿಸಿಕೊಂಡಿದ್ದಾರೆ. ಬಾಲಾಜಿ ಗೌಡ್ ವರದಿಯು ಆಹಾರ ಸುರಕ್ಷತೆ ಮತ್ತು ಕಲಬೆರಕೆಯ ಮೇಲೆ ಕೇಂದ್ರೀಕೃತವಾಗಿದೆಯೇ ಹೊರತು, ಧರ್ಮದ ಮೇಲೆ ಅಲ್ಲ ಎಂದು ಹೇಳಿಕೊಂಡಿದ್ದಾರೆ.
ಆದಾಗ್ಯೂ, ಕಳೆದ 10 ದಿನಗಳಲ್ಲಿ ಪ್ರಕಟವಾದ ಬಹು ವಿಡಿಯೋಗಳಲ್ಲಿ ಬಾಲಾಜಿ ಗೌಡ್ ‘ಫುಡ್ ಜಿಹಾದ್’ ಅನ್ನು ಪದೇ ಪದೇ ಪ್ರಚೋದಿಸಿದ್ದಾನೆ. ಆಹಾರ ಜಿಹಾದ್ ಎಂಬುವುದು ಹಿಂದೂ ಬಲಪಂಥೀಯರು ಪ್ರಚಾರ ಮಾಡಿದ ಕಟ್ಟು ಕಥೆಯಾಗಿದ್ದು, ಮುಸ್ಲಿಮರು ಹಿಂದೂಗಳಿಗೆ ಮಾರಾಟ ಮಾಡುವ ಆಹಾರವನ್ನು ಉದ್ದೇಶಪೂರ್ವಕವಾಗಿ ಕಲುಷಿತಗೊಳಿಸುತ್ತಾರೆ ಎಂಬ ಸುಳ್ಳು ಆರೋಪವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಈ ರೀತಿಯ ಆರೋಪಗಳು ಸಾರ್ವಜನಿಕ ಚರ್ಚೆಗಳಲ್ಲಿ ‘ಉಗುಳು ಜಿಹಾದ್’ ಎಂಬ ಹೆಸರಿನಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. ಯಾವುದೇ ಬಲವಾದ ಪುರಾವೆಗಳಿಲ್ಲದಿದ್ದರೂ, ಹಿಂದುತ್ವವಾದಿ ಸಂಘಟನೆಗಳು ಈ ವಿಷಯವನ್ನು ವ್ಯಾಪಕವಾಗಿ ಪ್ರಚೋದಿಸುತ್ತಿವೆ. ಆಹಾರದಲ್ಲಿ ಉಗುಳುವುದು ಅಥವಾ ಕಲಬೆರಕೆ ಮಾಡುವುದಕ್ಕೆ ಸಂಬಂಧಿಸಿದ ವೈರಲ್ ವಿಡಿಯೋಗಳು ಸಾರ್ವಜನಿಕರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗುತ್ತಿವೆ.
ಉತ್ತರ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ದೆಹಲಿಯಂತಹ ರಾಜ್ಯಗಳಲ್ಲಿ ಇಂತಹ ವಿಡಿಯೋಗಳ ಹಿನ್ನೆಲೆಯಲ್ಲಿ ಪೊಲೀಸ್ ದೂರುಗಳು ಮತ್ತು ಕಠಿಣ ಕ್ರಮಗಳು ಜರುಗುತ್ತಿವೆ. ಉತ್ತರಾಖಂಡ ಸರ್ಕಾರ ಆಹಾರದಲ್ಲಿ ಉಗುಳುವ ಅಪರಾಧಕ್ಕಾಗಿ ರೂ. 1 ಲಕ್ಷದವರೆಗೆ ದಂಡ ವಿಧಿಸುವ ಮಾರ್ಗಸೂಚಿಗಳನ್ನು ಹೊರಡಿಸಿದೆ. ಉತ್ತರ ಪ್ರದೇಶ ಸರ್ಕಾರ ಇಂತಹ ಕೃತ್ಯಗಳನ್ನು ತಡೆಯಲು ಹೊಸ ಸುಗ್ರೀವಾಜ್ಞೆ ತರಲು ಮುಂದಾಗಿದೆ.
ಇಂತಹ ಅನೇಕ ಆರೋಪಗಳನ್ನು ಮತ್ತು ವೈರಲ್ ವಿಡಿಯೋಗಳನ್ನು ಫ್ಯಾಕ್ಟ್-ಚೆಕ್ (ಸತ್ಯಶೋಧನೆ) ಮೂಲಕ ಪರಿಶೀಲಿಸಿದಾಗ, ಅವುಗಳಲ್ಲಿ ಹೆಚ್ಚಿನವು ಸುಳ್ಳು ಅಥವಾ ತಪ್ಪುದಾರಿಗೆಳೆಯುವಂತವು ಎಂದು ಸಾಬೀತಾಗಿದೆ. ಇಂತಹ ಪಿತೂರಿ ಸಿದ್ಧಾಂತಗಳು ಮುಸ್ಲಿಂ ಸಣ್ಣ ವ್ಯಾಪಾರಿಗಳ ಜೀವನೋಪಾಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿವೆ ಎಂದು ಹಲವು ಮಾನವ ಹಕ್ಕುಗಳ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ.
ತೇಜಸ್ವಿ ನ್ಯೂಸ್ನ ಕೋಮುವಾದಿ ವರದಿಗಾರಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ನಿರೂಪಕ ಬಾಲು ಬಾಲಾಜಿ ಗೌಡ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂದುತ್ವ ಪರ ರಾಜಕೀಯದೊಂದಿಗೆ ಇರುವ ನಿಕಟ ಸಂಬಂಧವನ್ನು ಎಕ್ಸ್ ಬಳಕೆದಾರರು ಬಹಿರಂಗಪಡಿಸಿದ್ದಾರೆ.
ಈ ಹಿಂದೆ ಸುಮನ್ ಟಿವಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ಬಾಲಾಜಿ ಗೌಡ್, ತೆಲಂಗಾಣದ ಬಿಜೆಪಿ ಸ್ಥಳೀಯ ನಾಯಕರೊಂದಿಗೆ ಸಂವಹನ ನಡೆಸುತ್ತಿರುವ ಮತ್ತು ಪಕ್ಷವನ್ನು ಬೆಂಬಲಿಸುವ ವಿಡಿಯೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ತೆಲಂಗಾಣದ ಕಾಂಗ್ರೆಸ್ ಮತ್ತು ಎಐಎಂಐಎಂ ಪಕ್ಷಗಳು ರಾಜ್ಯದಲ್ಲಿರುವ ರೋಹಿಂಗ್ಯಾ ನಿರಾಶ್ರಿತರ ವಿರುದ್ಧ ಧ್ವನಿ ಎತ್ತುತ್ತಿಲ್ಲ ಎಂದು ಟೀಕಿಸುವ ಪೋಸ್ಟ್ಗಳನ್ನು ಕೂಡ ಆತ ಹಂಚಿಕೊಂಡಿದ್ದಾನೆ.
ಪತ್ರಕರ್ತರೊಬ್ಬರು ಒಂದು ನಿರ್ದಿಷ್ಟ ರಾಜಕೀಯ ಸಿದ್ಧಾಂತಕ್ಕೆ ಅಂಟಿಕೊಂಡಿರುವುದು ಅವರ ವರದಿಗಾರಿಕೆಯ ನಿಷ್ಪಕ್ಷಪಾತತೆಯನ್ನು ಪ್ರಶ್ನಿಸುವಂತೆ ಮಾಡಿದೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದಾರೆ.
ಹೈದರಾಬಾದ್ನ ಬಾಲಾಪುರದಲ್ಲಿ ಆರ್ಎಸ್ಎಸ್ ಅಂಗಸಂಸ್ಥೆಯು ಸಂಘಟಿಸಿದ್ದ ಧರ್ಮ ರಕ್ಷಣಾ ಸಭೆ ನಡೆದ ಕೇವಲ ಒಂದು ವಾರದ ನಂತರ ಈ ಕೋವಾ ಬನ್ ವಿವಾದವು ತೀವ್ರರೂಪ ಪಡೆದುಕೊಂಡಿದೆ. ಈ ಸಭೆಯ ಮುಖ್ಯ ಉದ್ದೇಶ “ಧರ್ಮ ರಕ್ಷಣೆ” ಮತ್ತು ರೋಹಿಂಗ್ಯಾ ಹಾಗೂ ಬಾಂಗ್ಲಾದೇಶಿ ವಲಸಿಗರನ್ನು ವಿರೋಧಿಸುವುದಾಗಿತ್ತು ಎಂದು ನ್ಯೂಸ್ ಮಿನಿಟ್ ವರದಿ ಉಲ್ಲೇಖಿಸಿದೆ.
ಬಾಲಾಪುರದಲ್ಲಿ ನಡೆದ ಈ ಸಭೆಯಲ್ಲಿ ರಾಷ್ಟ್ರೀಯ ಭದ್ರತೆ ಮತ್ತು “ಲವ್ ಜಿಹಾದ್” ಬಗ್ಗೆ ಪ್ರಸ್ತಾಪಿಸಲಾಗಿತ್ತು. ಕೆಲವು ಭಾಷಣಗಳು ಮುಸ್ಲಿಂ ಸಮುದಾಯದ ವಿರುದ್ಧ ನೇರ ಪ್ರಚೋದನೆ ನೀಡುವಂತಿದ್ದವು ಎಂದಿದೆ.
ಈ ಕೋವಾ ಬನ್ ವಿವಾದಕ್ಕೆ ವಿಶ್ವ ಹಿಂದೂ ಪರಿಷತ್ ಕೂಡ ಬೆಂಬಲ ವ್ಯಕ್ತಪಡಿಸಿದೆ. ಹೈದರಾಬಾದ್ನ ವಿಎಚ್ಪಿ ರಾಷ್ಟ್ರೀಯ ವಕ್ತಾರರು, ಮುಸ್ಲಿಂ ವ್ಯಾಪಾರಿಗಳನ್ನು ಬೆಂಬಲಿಸುವವರನ್ನು “ತುಕ್ಡೆ ತುಕ್ಡೆ ಗ್ಯಾಂಗ್” ಎಂದು ಕರೆದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಕೋಮುವಾದಿ ವರದಿಗಾರಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಇದು ಕೇವಲ ವೀವ್ಸ್ಗೋಸ್ಕರ ಮಾಡುತ್ತಿರುವ ಸಂಚು ಎಂದು ಅನೇಕರು ಟೀಕಿಸಿದ್ದಾರೆ.
ತೆಲಂಗಾಣದ ಹಲವು ಸಾಮಾಜಿಕ ಕಾರ್ಯಕರ್ತರು ಮತ್ತು ರಾಜಕಾರಣಿಗಳು ಬಾಲಾಜಿ ಗೌಡ್ ವಿಡಿಯೋ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೇಜಸ್ವಿ ನ್ಯೂಸ್ ಮತ್ತು ಅದರ ನಿರೂಪಕ ಒಂದು ಸಣ್ಣ ವಿಷಯವನ್ನು ಹಿಡಿದುಕೊಂಡು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷಪೂರಿತ ವರದಿಗಾರಿಕೆ ಮಾಡುತ್ತಿದ್ದಾರೆ ಎಂದು ಅವರು ಖಂಡಿಸಿದ್ದಾರೆ. ಬಡ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡು ಸಮಾಜದಲ್ಲಿ ಕೋಮು ದ್ವೇಷ ಬಿತ್ತಲು ಇಂತಹ ವಿಡಿಯೋಗಳನ್ನು ಬಳಸಲಾಗುತ್ತಿದೆ ಎಂದು ಟೀಕಿಸಿದ್ದಾರೆ. ಈ ವಿಚಾರದಲ್ಲಿ ಪಾರದರ್ಶಕ ತನಿಖೆಗೆ ಒತ್ತಾಯಿಸಿದ್ದಾರೆ.
ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಪರಿಟಾಲ ಶ್ರೀರಾಮ್ ಅವರು ಈ ವಿಷಯದ ಬಗ್ಗೆ ಪ್ರತಿಕ್ರಿಯಿಸುತ್ತಾ, “ಕೇವಲ ಒಂದು ರೊಟ್ಟಿ (ಬನ್) ಮಾರುವ ಬಡ ಸಣ್ಣ ವ್ಯಾಪಾರಿಯ ಬದುಕನ್ನು ಈ ರೀತಿ ಬೀದಿಗೆ ಎಳೆಯುವುದು ಅತ್ಯಂತ ಕ್ರೂರವಾದದ್ದು” ಎಂದು ಕಿಡಿಕಾರಿದ್ದಾರೆ.
ಯೂಟ್ಯೂಬ್ನಲ್ಲಿ ಕೇವಲ ವೀವ್ಸ್ ಮತ್ತು ಲೈಕ್ಸ್ ಪಡೆಯುವ ಉದ್ದೇಶದಿಂದ ಕೆಲವರು ಇಂತಹ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸಾಧ್ಯವಾದರೆ ನಾವು ಬಡವರ ಪರವಾಗಿ ನಿಲ್ಲಬೇಕು, ಆದರೆ ಈ ರೀತಿಯಾಗಿ ಅವರ ಧ್ವನಿಯನ್ನು ಹತ್ತಿಕ್ಕುವುದು ಸರಿಯಲ್ಲ” ಎಂದು ಅವರು ಹೇಳಿದ್ದಾರೆ.


