ರಂಝಾನ್ ಉಪವಾಸ ನಿರತ ಮುಸ್ಲಿಂ ಮಹಿಳೆಯೊಬ್ಬರನ್ನು ಕಂಬಕ್ಕೆ ಕಟ್ಟಿ ಭೀಕರವಾಗಿ ಥಳಿಸಿ, ಆಕೆ ನೀರು ಕೇಳಿದಾಗ ಮದ್ಯ ಮಿಶ್ರಿತ ಮೂತ್ರ ಕುಡಿಸಿದ ಅಮಾನವೀಯ, ಅನಾಗರಿಕ ಮತ್ತು ಆಘಾತಕಾರಿ ಘಟನೆ ಬಿಹಾರದ ಮಧುಬನಿ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಮಾರ್ಚ್ 1ರಂದು ಪಾಟ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ ಎಂದು maktoobmedia.com ವರದಿ ಮಾಡಿದೆ.
ವರದಿಯ ಪ್ರಕಾರ, ಮಧುಬನಿಯ ಘೋಷರ್ದಿಹಾ ಪೊಲೀಸ್ ಠಾಣೆ ವ್ಯಾಪ್ತಿಯ ಅಮ್ಹಿ ಗ್ರಾಮದ ರೋಷನ್ ಖಾತೂನ್ ಮೃತ ಮಹಿಳೆ. ಈಕೆ ಫೆಬ್ರವರಿ 28ರಂದು ಸ್ಥಳೀಯ ವಿವಾದವೊಂದನ್ನು ಬಗೆಹರಿಸಲು ಸಹಾಯ ಕೋರಿ ಗ್ರಾಮದ ಮುಖ್ಯಸ್ಥೆಯ ಬಳಿ ಹೋಗಿದ್ದರು. ಈ ವೇಳೆ ಮುಖ್ಯಸ್ಥೆಯ ಮಗನ ನೇತೃತ್ವದಲ್ಲಿ ಗುಂಪು ಹಲ್ಲೆ ನಡೆಸಲಾಗಿದೆ.
ಸ್ಥಳೀಯರ ಪ್ರಕಾರ, 40 ವರ್ಷದ ರೋಷನ್ ಖಾತೂನ್ ಅವರು ಭೂ ವಿವಾದಕ್ಕೆ ಸಂಬಂಧಿಸಿದಂತೆ ದೂರು ನೀಡಲು ಗ್ರಾಮದ ಮುಖ್ಯಸ್ಥೆ ಮುಖಿಯಾ ಕುಮಾರಿ ದೇವಿ ಅವರ ಮನೆಗೆ ಹೋಗಿದ್ದರು. ಈ ವೇಳೆ ಮುಖಿಯಾ ಕುಮಾರಿಯ ಮಗನ ನೇತೃತ್ವದ ಗುಂಪು ಖಾತೂನ್ ಅವರನ್ನು ಕಂಬಕ್ಕೆ ಕಟ್ಟಿ ತೀವ್ರವಾಗಿ ಥಳಿಸಿದೆ. ಈ ಸಂದರ್ಭದಲ್ಲಿ ಸ್ಥಳದಲ್ಲಿ ನೆರೆದಿದ್ದವರು ಕೂಡ ಆಕೆಯನ್ನು ನಿಂದಿಸಿದ್ದಾರೆ.
ಖಾತೂನ್ ಅವರ ಪತಿಯನ್ನು ಗ್ರಾಮದ ಮುಖ್ಯಸ್ಥೆಯ ಮಗ ಬಲವಂತವಾಗಿ ಕರೆದೊಯ್ದಿದ್ದ. ಈ ಬಗ್ಗೆ ಮಾಹಿತಿ ತಿಳಿದು ವಿಚಾರಿಸಲು ಹೋದ ವೇಳೆ, ಖಾತೂನ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಸಾಮಾಜಿಕ ಜಾಲತಾಣದ ಪೋಸ್ಟ್ ಒಂದು ಹೇಳುತ್ತಿದೆ.
ಹಲ್ಲೆಯ ಸಮಯದಲ್ಲಿ ಖಾತೂನ್ ಅವರು ರಂಝಾನ್ ಉಪವಾಸದಲ್ಲಿದ್ದರು. ತೀವ್ರ ದಾಳಿಯಿಂದ ಬಾಯಾರಿಕೆಯಾದಾಗ ಅವರು ನೀರು ಕೇಳಿದ್ದರು. ಈ ವೇಳೆ ಆರೋಪಿಗಳು ಅವರಿಗೆ ಬಲವಂತವಾಗಿ ಮದ್ಯ ಮಿಶ್ರಿತ ಮೂತ್ರ ಕುಡಿಸಿದ್ದಾರೆ ಎಂದು ಕುಟುಂಬ ಸದಸ್ಯರು ಮತ್ತು ಪ್ರತ್ಯಕ್ಷದರ್ಶಿಗಳು ಗಂಭೀರ ಆರೋಪ ಮಾಡಿದ್ದಾರೆ.
ಅನೇಕ ಜನರ ಸಮ್ಮುಖದಲ್ಲೇ ಖಾತೂನ್ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಈ ವೇಳೆ ಅವರೆಲ್ಲರೂ ಮೂಕ ಪ್ರೇಕ್ಷರಾಗಿ ನಿಂತಿದ್ದರು. ಖಾತೂನ್ ತೀವ್ರ ಅಸಹಾಯಕರಾಗಿದ್ದರು. ಹಲ್ಲೆಯನ್ನು ನಿಲ್ಲಿಸುವಂತೆ ಪದೇ ಪದೇ ಬೇಡಿಕೊಳ್ಳುತ್ತಿದ್ದರು ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿರುವುದಾಗಿ maktoobmedia.com ಉಲ್ಲೇಖಿಸಿದೆ.
ಆರೋಪಗಳನ್ನು ದೃಢಪಡಿಸದ ಪೊಲೀಸರು
ಆದಾಗ್ಯೂ, ಪೊಲೀಸ್ ಅಧಿಕಾರಿಗಳು ಈ ಆರೋಪಗಳನ್ನು ಇನ್ನೂ ದೃಢಪಡಿಸಿಲ್ಲ ಎಂದು ತಿಳಿಸಿದ್ದಾರೆ. ತನಿಖೆಯಲ್ಲಿ ತೊಡಗಿರುವ ಅಧಿಕಾರಿಯೊಬ್ಬರು, “ಸಂತ್ರಸ್ತೆ ಉಪವಾಸವಿದ್ದ ಬಗ್ಗೆ ಮತ್ತು ನೀರು ಕೇಳಿದ ಬಗ್ಗೆ ಕೆಲವು ವರದಿಗಳನ್ನು ನಾವು ನೋಡಿದ್ದೇವೆ. ಆದರೆ ಈ ಹಂತದಲ್ಲಿ ನಾವು ಈ ವಿವರಗಳನ್ನು ಖಚಿತಪಡಿಸಲು ಸಾಧ್ಯವಿಲ್ಲ. ತನಿಖೆ ಮುಂದುವರಿಯುತ್ತಿದ್ದು, ಎಲ್ಲಾ ಆಯಾಮಗಳನ್ನು ಪರಿಶೀಲಿಸಲಾಗುತ್ತಿದೆ” ಎಂದು ಹೇಳಿರುವುದಾಗಿ maktoobmedia.com ತಿಳಿಸಿದೆ.
ಎಫ್ಐಆರ್ ದಾಖಲು, ಪ್ರಮುಖ ಆರೋಪಿಯ ಬಂಧನ
ಪ್ರಕರಣದ ಮುಖ್ಯ ಆರೋಪಿ, ಗ್ರಾಮದ ಮುಖ್ಯಸ್ಥೆಯ ಮಗ ಮಂಗನು ಸಿಂಗ್ (ಮನು ಸಿಂಗ್) ನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಒಟ್ಟು 17 ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ವರದಿಯಾಗಿದೆ.
ಮನ್ಸೂರಿ ಸಮುದಾಯದ ರಾಜ್ಯಾಧ್ಯಕ್ಷ ಅಜಯ್ ಮನ್ಸೂರಿ ಅವರು, “ಮೃತ ಮಹಿಳೆಗೆ ನ್ಯಾಯ ಒದಗಿಸಲು ನಾವು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ. ಅಪರಾಧಿಗಳನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿದ್ದಾರೆ.
ರೋಷನ್ ಅವರ ಪತಿ ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮುನ್ನೆಚ್ಚರಿಕ ಕ್ರಮವಾಗಿ ಗ್ರಾಮದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
“ರೋಷನ್ ಖಾತೂನ್ ಒಬ್ಬಳು ಬಡ ಮಹಿಳೆ. ಸಹಾಯ ಯಾಚಿಸಲು ಹೋದ ಆಕೆಯನ್ನು ಥಳಿಸಿ ಕೊಂದಿರುವುದು ನಮಗೆ ತೀವ್ರ ನೋವುಂಟು ಮಾಡಿದೆ. ಆಕೆಗೆ ನ್ಯಾಯ ಮತ್ತು ಎಲ್ಲಾ ನಾಗರಿಕರಿಗೆ ಸುರಕ್ಷತೆಯನ್ನು ನಾವು ಬಯಸುತ್ತೇವೆ” ಎಂದು ಸಮುದಾಯದ ಹಿರಿಯರೊಬ್ಬರು ಸ್ಥಳೀಯ ಮಾಧ್ಯಮ ಮಿಥ್ಲಾ ಸಮಾಚಾರ್ಗೆ ಹೇಳಿದ್ದಾರೆ.


