Homeಮುಖಪುಟ'ಗುಪ್ತಾಂಗಕ್ಕೆ ಪೆಟ್ರೋಲ್ ಸುರಿದರು, ಪ್ರಾಣಿಯಂತೆ ಥಳಿಸಿದರು' : ಪೊಲೀಸರ ವಿರುದ್ಧ ಚಿತ್ರಹಿಂಸೆ ಆರೋಪ ಮಾಡಿದ ಪತ್ರಕರ್ತ

‘ಗುಪ್ತಾಂಗಕ್ಕೆ ಪೆಟ್ರೋಲ್ ಸುರಿದರು, ಪ್ರಾಣಿಯಂತೆ ಥಳಿಸಿದರು’ : ಪೊಲೀಸರ ವಿರುದ್ಧ ಚಿತ್ರಹಿಂಸೆ ಆರೋಪ ಮಾಡಿದ ಪತ್ರಕರ್ತ

- Advertisement -
- Advertisement -

ಗುಜರಾತ್‌ನ ರಾಜ್‌ಕೋಟ್‌ನ ಸ್ಥಳೀಯ ಪತ್ರಕರ್ತ ಸುದೇಶ್ ವಡೇಚಾ ಎಂಬವರು, ಪೊಲೀಸ್ ಕಸ್ಟಡಿಯಲ್ಲಿ ತನಗೆ ತೀವ್ರ ಚಿತ್ರ ಹಿಂಸೆ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

‘ಖಬರ್ ರಾಜ್‌ಕೋಟ್ ಕಿ ನ್ಯೂಸ್’ ಎಂಬ ಆನ್‌ಲೈನ್ ಮಾಧ್ಯಮವನ್ನು ನಡೆಸುತ್ತಿರುವ ವಡೇಚಾ, ರಾಜ್‌ಕೋಟ್ ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಜಗದೀಶ್ ಬಂಗದ್ವಾ ಮತ್ತು ಅವರ ತಂಡ ತನ್ನನ್ನು ಕ್ರೂರವಾಗಿ ಥಳಿಸಿ ಅಮಾನವೀಯವಾಗಿ ನಡೆಸಿಕೊಂಡಿದೆ ಎಂದು ಹೇಳಿದ್ದಾರೆ.

ಪೊಲೀಸರು ಈ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದು, ಇದು ‘ನಾಟಕ’ ಎಂದು ಕರೆದಿದ್ದಾರೆ.

ಸುದ್ದಿ ಸಂಸ್ಥೆ ‘ದಿ ವೈರ್’ ಜೊತೆ ದೂರವಾಣಿಯಲ್ಲಿ ಮಾತನಾಡಿರುವ ವಡೇಚಾ, “ಮನೆಯಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಸ್ಥಳದಿಂದ ಮಾರ್ಚ್ 22ರಂದು ಪೊಲೀಸರು ನನ್ನನ್ನು ಬಂಧಿಸಿದ್ದರು” ಎಂದು ತಿಳಿಸಿದ್ದಾರೆ.

“ಅಪರಾಧ ವಿಭಾಗದ ಸಿಬ್ಬಂದಿ ಯಾವುದೇ ವಿವರಣೆಯನ್ನು ನೀಡದೆ ನನ್ನನ್ನು ಕರೆದೊಯ್ದರು. ನಂತರ ಸುಲಿಗೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ಹಲ್ಲೆ ನಡೆಸಿದರು. ನನ್ನ ಬಟ್ಟೆಗಳನ್ನು ಬಿಚ್ಚಿ ಜನನಾಂಗಕ್ಕೆ ಪೆಟ್ರೋಲ್ ಸುರಿದಿದ್ದಾರೆ. ತಲೆಕೆಳಗಾಗಿ ನೇತುಹಾಕಿ ಪ್ರಾಣಿಯಂತೆ ಥಳಿಸಿದ್ದಾರೆ, ಇದರಿಂದಾಗಿ ಕಿವಿಯ ತಮಟೆ ಹರಿದಿದೆ, ಕಾಲು ಮುರಿದಿದೆ ಮತ್ತು ಬೆನ್ನು ಹಾಗೂ ತಲೆಗೆ ತೀವ್ರ ಗಾಯಗಳಾಗಿವೆ” ಎಂದು ಹೇಳಿಕೊಂಡಿದ್ದಾರೆ.

ವಡೇಚಾ ಅವರ ಪ್ರಕಾರ, ಮಾರ್ಚ್ 23ರಂದು ಅವರನ್ನು ರಾಜ್‌ಕೋಟ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

“ಬಂಧನದಿಂದ 24 ಗಂಟೆಗಳ ನಂತರ ನಾನು ಬಿಡುಗಡೆಯಾದಾಗ, ನನ್ನ ಸ್ಥಿತಿ ಮತ್ತಷ್ಟು ಹದಗೆಟ್ಟಿತು. ನಾನು 108 ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ತೆರಳಿದ್ದೆ, ಆದರೆ ಅಲ್ಲೂ ಸಹ ನನ್ನನ್ನು ದಾಖಲಿಸಿಕೊಳ್ಳದಂತೆ ಪೊಲೀಸ್ ಅಧಿಕಾರಿಗಳು ವೈದ್ಯರ ಮೇಲೆ ಒತ್ತಡ ಹೇರುತ್ತಿದ್ದರು. ನನ್ನ ಮೇಲೆ ಸುಳ್ಳು ಮೊಕದ್ದಮೆಗಳನ್ನು ಹೂಡುವುದಾಗಿ ಮತ್ತು ನನ್ನ ಮನೆಯನ್ನು ಕೆಡವುವುದಾಗಿ ನನಗೆ ಬೆದರಿಕೆ ಹಾಕಿದ್ದಾರೆ” ಎಂದು ವಡೇಚಾ ತಿಳಿಸಿದ್ದಾರೆ.

ಈ ಸಂಪೂರ್ಣ ಪ್ರಕರಣವು ಅಸಿಮ್ ಆಗಮ್ ಎಂಬ ಬಿಲ್ಡರ್‌ಗೆ ಸಂಬಂಧಿಸಿದೆ ಎಂದು ವಡೇಚಾ ಹೇಳಿದ್ದಾರೆ. ಅಸಿಮ್ ಅವರ ಅಕ್ರಮ ನಿರ್ಮಾಣ ಚಟುವಟಿಕೆಗಳ ಬಗ್ಗೆ ವಡೇಚಾ ಈ ಹಿಂದೆ ವರದಿ ಮಾಡಿದ್ದರು ಎನ್ನಲಾಗಿದೆ.

“ನನ್ನ ವಿರುದ್ಧ ಯಾವುದೇ ಗಂಭೀರವಾದ ದೂರು ಇರಲಿಲ್ಲ, ಆದರೂ ಅವರ (ಬಿಲ್ಡರ್ ಅಸಿಮ್) ಸೂಚನೆಯ ಮೇರೆಗೆ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಿ, ಈ ರೀತಿ ಹಲ್ಲೆ ನಡೆಸಲಾಗಿದೆ” ಎಂದು ವಡೇಚಾ ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿದ ರಾಜ್‌ಕೋಟ್ ಕ್ರೈಂ ಬ್ರಾಂಚ್ ಡಿಸಿಪಿ ಬಂಗದ್ವಾ, ವಡೇಚಾ ಅವರ ಆರೋಪಗಳನ್ನು ತಳ್ಳಿಹಾಕಿದ್ದಾರೆ ಎಂದು ದಿ ವೈರ್ ವರದಿ ತಿಳಿಸಿದೆ.

“ನಾವು ಅವರ ಮೇಲೆ ಯಾವುದೇ ದೈಹಿಕ ಹಲ್ಲೆ ನಡೆಸಿಲ್ಲ. ಅವರು ಒಬ್ಬ ಅಪರಾಧಿಯಾಗಿದ್ದು, ಅವರ ವಿರುದ್ಧ ಈಗಾಗಲೇ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ” ಎಂದು ಬಂಗದ್ವಾ ಹೇಳಿದ್ದಾರೆ.

ಡಿಸಿಪಿ ಕೆಲವು ದಾಖಲೆಗಳನ್ನು ಹಂಚಿಕೊಂಡಿದ್ದು, ಅವುಗಳ ಪ್ರಕಾರ 2020ಮತ್ತು 2025ರ ನಡುವೆ ವಡೇಚಾ ವಿರುದ್ಧ ಎಂಟು ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಹೆಚ್ಚಿನವು ಶಾಂತಿ ಭಂಗ ಮತ್ತು ಸ್ಥಳೀಯ ವಿವಾದಗಳಿಗೆ ಸಂಬಂಧಿಸಿವೆ. ಕೆಲವು ಪ್ರಕರಣಗಳಲ್ಲಿ ದೂರುದಾರರೇ ತದನಂತರ ಅವುಗಳನ್ನು ವಜಾಗೊಳಿಸುವಂತೆ ಶಿಫಾರಸು ಮಾಡಿದ್ದಾರೆ ಎಂದು ದಿ ವೈರ್ ಉಲ್ಲೇಖಿಸಿದೆ.

ತೀರಾ ಇತ್ತೀಚಿನ ಪ್ರಕರಣವು 2026ರ ಮಾರ್ಚ್ 10ಕ್ಕೆ ಸಂಬಂಧಿಸಿದ್ದಾಗಿದ್ದು, ‘ಭಾಗ್ಯಲಕ್ಷ್ಮಿ ಸ್ಕ್ರ್ಯಾಪ್’ ಎಂಬ ಸಂಸ್ಥೆಯ ಮಾಲೀಕ ಭರತ್‌ಭಾಯಿ ವೀರ್‌ಜಿಭಾಯಿ ಸಾಗರ್ ಎಂಬವರು ವಡೇಚಾ ತಮ್ಮ ವ್ಯವಹಾರದ ಸ್ಥಳದ ವಿಡಿಯೋ ಚಿತ್ರೀಕರಿಸಿ ದೊಡ್ಡ ಮೊತ್ತದ ಹಣ ಸುಲಿಗೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ವರದಿ ವಿವರಿಸಿದೆ.

ಸಾಗರ್ ಅವರಿಗೆ ಆ ವಿಡಿಯೋದಲ್ಲಿದ್ದ ವಿಷಯದ ಬಗ್ಗೆ ನಿಖರವಾಗಿ ಏನನ್ನೂ ಹೇಳಲು ಸಾಧ್ಯವಾಗಿಲ್ಲ. ಪೊಲೀಸರಂತೆಯೇ ಅವರು ಕೂಡ ದೈಹಿಕ ಹಲ್ಲೆಯ ಆರೋಪಗಳನ್ನು ‘ನಾಟಕ’ ಎಂದು ಕರೆದಿದ್ದಾರೆ.

ಆದಾಗ್ಯೂ, ವಡೇಚಾ ಅವರ ವಿರುದ್ಧ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕೃತ ಎಫ್‌ಐಆರ್ ದಾಖಲಾಗಿಲ್ಲ. ಬದಲಿಗೆ ಕೇವಲ ಸಾಗರ್ ಅವರು ಡಿಸಿಪಿ ಕಚೇರಿಗೆ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ. ಇದು ಗಮನಾರ್ಹ ಸಂಗತಿ ಎಂದು ದಿ ವೈರ್ ವರದಿ ಹೇಳಿದೆ.

ದಿ ವೈರ್ ಹಿಂದಿ ಜೊತೆ ಮಾತನಾಡಿದ ವಡೇಚಾ, ಸುಲಿಗೆ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ಈ ನಡುವೆ, ಮಾರ್ಚ್ 27ರಂದು ವಡ್ಗಾಮ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಅವರು ರಾಜ್‌ಕೋಟ್ ಸಿವಿಲ್ ಆಸ್ಪತ್ರೆಯಲ್ಲಿ ವಡೇಚಾ ಅವರನ್ನು ಭೇಟಿ ಮಾಡಿದ್ದು, ಈ ಕುರಿತ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಸುದ್ದಿ ಸಂಸ್ಥೆ ಪಿಟಿಐ ವರದಿ ಪ್ರಕಾರ, ಮೇವಾನಿ ಅವರು ಗುಜರಾತ್‌ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಡಿಸಿಪಿ ವಿರುದ್ಧ ಎಫ್‌ಐಆರ್ ದಾಖಲಿಸಲು ಹಾಗೂ ಅವರ ಬಂಧನ ಮತ್ತು ವಜಾಕ್ಕೆ ಒತ್ತಾಯಿಸಿದ್ದಾರೆ.

ಪಿಟಿಐ ಜೊತೆ ಮಾತನಾಡಿದ ಡಿಸಿಪಿ ಬಂಗದ್ವಾ, “ಅವರ (ವಡೇಚಾ) ವಿರುದ್ಧ ಕ್ರಿಮಿನಲ್ ದೂರು ಬಾಕಿ ಇದೆ. ತನಿಖೆಯಿಂದ ತಪ್ಪಿಸಿಕೊಳ್ಳಲು ಅವರು ಇದೆಲ್ಲವನ್ನೂ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ. ಶಾಸಕ ಮೇವಾನಿ ‘ವೈಯಕ್ತಿಕ ಹಿತಾಸಕ್ತಿಗಾಗಿ’ ಈ ವಿಷಯವನ್ನು ಮುನ್ನಲೆಗೆ ತರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಗುಜರಾತ್‌ನ ಮಾಜಿ ಐಪಿಎಸ್ ಅಧಿಕಾರಿ ರಮೇಶ್ ಸವಾನಿ ಕೂಡ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಫೇಸ್‌ಬುಕ್ ಪೋಸ್ಟ್‌ನಲ್ಲಿ ಅವರು, ವಡೇಚಾ ಪೊಲೀಸರ ವಿರುದ್ದ ಮಾಡಿರುವ ಆರೋಪಗಳನ್ನು ಅತ್ಯಂತ ಗಂಭೀರವೆಂದು ಬಣ್ಣಿಸಿದ್ದು, “ನ್ಯಾಯಾಲಯ ಕೂಡ ಇಂತಹ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

“ಒಂದು ವೇಳೆ ಆರೋಪಗಳು ನಿಜವಾಗಿದ್ದರೆ, ಇಂತಹ ಕ್ರೌರ್ಯವನ್ನು ಎಸಗಲು ಪೊಲೀಸರು ಕಾನೂನಿನ ಮಿತಿಗಳನ್ನು ಯಾಕೆ ಮೀರಿದರು?” ಎಂದು ಅವರು ಪ್ರಶ್ನಿಸಿದ್ದಾರೆ.

“ವಡೇಚಾ ವಿರುದ್ಧ ಯಾವುದೇ ಗಂಭೀರ ಕ್ರಿಮಿನಲ್ ಪ್ರಕರಣಗಳು ಬಾಕಿ ಇಲ್ಲ; ಆದರೂ, ಅವರ ಮೇಲೆ ಇಂತಹ ದೌರ್ಜನ್ಯ ನಡೆದಿದ್ದರೆ, ಅದು ಗಂಭೀರ ಕಳವಳದ ವಿಷಯ. ಇಂತಹ ಕ್ರೌರ್ಯವನ್ನು ಸಾಮಾನ್ಯವಾಗಿ ದುರ್ಬಲ ಮತ್ತು ಅಂಚಿನಲ್ಲಿರುವ ಸಮುದಾಯಗಳಿಗೆ ಸೇರಿದ ವ್ಯಕ್ತಿಗಳ ಮೇಲೆ ಎಸಗಲಾಗುತ್ತದೆ” ಎಂದು ಸವಾನಿ ಹೇಳಿದ್ದಾರೆ.

ಪ್ರಸ್ತುತ, ಈ ಪ್ರಕರಣದಲ್ಲಿ ಎರಡೂ ಕಡೆಯವರು ಮಾಡಿರುವ ಆರೋಪಗಳು ಮತ್ತು ಸಮರ್ಥನೆಗಳು ಸಂಪೂರ್ಣವಾಗಿ ತದ್ವಿರುದ್ದವಾಗಿವೆ. ಒಂದು ಕಡೆ ಪತ್ರಕರ್ತ ಗಂಭೀರ ಆರೋಪಗಳನ್ನು ಮಾಡುತ್ತಿದ್ದರೆ, ಮತ್ತೊಂದು ಕಡೆ ಪೊಲೀಸರು ಅವುಗಳನ್ನು ನಿರಾಕರಿಸುತ್ತಿದ್ದಾರೆ.





ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮಾವಿನ ಮರ’ ಕಂಡ ಕನಸು

ಪುಸ್ತಕ ಪರಿಚಯ ಸವಾಲಿನ ವಿಷಯ. ಅದರಲ್ಲೂ ಕವಿತೆಗಳ ಕುರಿತು ಮಾತನಾಡುವುದು ಇನ್ನೂ ಸವಾಲು. ಪ್ರತಿಯೊಂದು ಕವಿತೆಯೂ ತನ್ನ ಓದುಗರೊಂದಿಗೆ ಸಂವಾದಿಸುವ ಬಗೆ ವಿಭಿನ್ನವಾಗಿರುತ್ತದೆ. ಅದನ್ನು ಏಕರೂಪೀ ಪರಿಭಾಷೆಯಲ್ಲಿ ಮಂಡಿಸುವುದು ಸರಿಯಲ್ಲ. ’ಮಿಥಿಲೆಯ ಮಾವಿನ...

NEET ರದ್ದು : ಖಿನ್ನತೆ, ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು; ನಾಲ್ಕು ದಿನದಲ್ಲಿ ನಾಲ್ವರು ಸಾವಿಗೆ ಶರಣು

ಈ ವರ್ಷದ (2026) ನೀಟ್-ಯುಜಿ (NEET-UG) ಪರೀಕ್ಷೆ ರದ್ದಾದ ಬಳಿಕ ದೇಶದಾದ್ಯಂತ ಕನಿಷ್ಠ ನಾಲ್ವರು ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡ ಹಾಗೂ ಹತಾಶೆಯಿಂದ ಸಾವಿಗೆ ಶರಣಾಗಿದ್ದಾರೆ. ರಾಜಸ್ಥಾನದ ಝುಂಜುನು ಜಿಲ್ಲೆಯ 23 ವರ್ಷದ ಪ್ರದೀಪ್...

ಪ್ಯಾಲೆಸ್ಟೀನಿಯನ್ ಕೈದಿಗಳ ಮೇಲೆ ಲೈಂಗಿಕ ದೌರ್ಜನ್ಯ ವರದಿ: ನ್ಯೂಯಾರ್ಕ್ ಟೈಮ್ ವಿರುದ್ಧ ಮೊಕದ್ದಮೆ ದಾಖಲಿಸಿದ ಇಸ್ರೇಲ್ ಕ್ರಮಕ್ಕೆ ಆರ್‌ಎಸ್‌ಎಫ್ ಖಂಡನೆ

ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಗುರಿಯಾಗಿಸಿಕೊಂಡು ವ್ಯಾಪಕವಾದ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ ನಿಕೋಲಸ್ ಕ್ರಿಸ್ಟೋಫ್ ಅವರ  ಅಭಿಪ್ರಾಯ ಅಂಕಣವನ್ನು ಪ್ರಕಟಿಸಿದ ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಇಸ್ರೇಲಿ ಸರ್ಕಾರದ ನಿರ್ಧಾರವನ್ನು ರಿಪೋರ್ಟರ್ಸ್ ವಿದೌಟ್...

“ಮುಸ್ಲಿಮರಿಗೆ ಯಾವುದೇ ಕೆಲಸ ಮಾಡಲ್ಲ” ಎಂದು ವಿವಾದಾತ್ಮಕ ಶಪಥ ಮಾಡಿದ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ರಿತೇಶ್ ತಿವಾರಿ

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿ ತನ್ನ ಮೊದಲ ಸರ್ಕಾರವನ್ನು ರಚಿಸಿದ ಕೆಲವೇ ದಿನಗಳಲ್ಲಿ, ಪಕ್ಷದ ಶಾಸಕ ರಿತೇಶ್ ತಿವಾರಿ ಅವರು ಮಾಡಿರುವ ಭಾಷಣವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. "ಪಶ್ಚಿಮ...

’ಎಸ್‌ಐಆರ್’ ವಿರುದ್ಧ ಜನಪರ ಸಂಘಟನೆಗಳಿಂದ ಜನಾಂದೋಲನ ಬಂಗಾಳದ ಜನರ ಜೊತೆಗೆ ನಿಂತ ಕರ್ನಾಟಕ

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ವಿರೋಧ ಪಕ್ಷಗಳ ಮತದಾರರು ಮತ್ತು ಅಲ್ಪಸಂಖ್ಯಾತ ಸಮುದಾಯದ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕುತಂತ್ರ ಈಗಾಗಲೇ ಬಿಹಾರದಲ್ಲಿ ಜಗಜ್ಜಾಹೀರಾಗಿದೆ....

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದ ಸಿಜೆಐ: ಇದೆಂತಾ ಮಾತು ನ್ಯಾಯಮೂರ್ತಿಗಳೇ!

‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಸಮಾಜವನ್ನು ಕಾಡುತ್ತಾರೆ. ಉದ್ಯೋಗ, ಸ್ಥಾನಮಾನ ಸಿಗದೆ ಇದ್ದಾಗ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ’ ಇದು ಯಾವುದೋ ರಾಜಕೀಯ ರ‍್ಯಾಲಿಯ ಭಾಷಣವಲ್ಲ ಅಥವಾ ಟಿವಿ ಚಾನೆಲ್‌ಗಳ ಜಗಳವಲ್ಲ,...

ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ..ಹಕ್ಕುಗಳನ್ನು ಕೇಳಬಾರದಾ?: ಕಾಂಗ್ರೆಸ್‌ಗೆ ಮುಸ್ಲಿಂ ಸಮಾವೇಶ ಪ್ರಶ್ನೆ

"ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ? ಯಾವ ಹಕ್ಕನ್ನೂ ಕೇಳಬಾರದು ಎಂದು ನೀವು (ಕಾಂಗ್ರೆಸ್‌ನವರು) ಬಯಸುತ್ತಿದ್ದೀರಾ?" ಎಂದು ಕರ್ನಾಟಕ ಮುಸ್ಲಿಂ ಸಮಾವೇಶ ಖಾರವಾಗಿ ಪ್ರಶ್ನಿಸಿತು. ಬೆಂಗಳೂರಿನ ಪುರಭವನದಲ್ಲಿ ಇಂದು (ಮೇ 16, ಶನಿವಾರ) ನಡೆದ...

“ಸನಾತನ ಬೇರುಗಳಲ್ಲಿರುವ ಅಸಮಾನತೆಗೆ ದ್ರಾವಿಡ ನೆಲದ ಪ್ರತಿರೋಧ”: ಉದಯನಿಧಿ ಹೇಳಿಕೆ ವಿವಾದವಾಗಿದ್ದೇಗೆ..?

ಸನಾತನ ಸಂಸ್ಥೆಗಳನ್ನು ಮತ್ತು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳು ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿವೆ.  ತಮಿಳುನಾಡು ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಅವರು ಅಧಿಕಾರ...

ನೇತ್ರಾವತಿ ತೀರದಲ್ಲಿ ‘ಅಂತರಗಂಗೆ’ಯಂತೆ ಹರಿಯುತ್ತಿರುವ ಪ್ರತಿರೋಧ: ವೇದವಲ್ಲಿಯಿಂದ ಸೌಜನ್ಯಳವರೆಗೆ ಪ್ರತಿಧ್ವನಿಸುತ್ತಿರುವ ಪ್ರಶ್ನೆ-‘ಕೊಂದವರು ಯಾರು?’

ಪ್ರಪಂಚದಾದ್ಯಂತ ಪಿತೃಪ್ರಧಾನ ವ್ಯವಸ್ಥೆ ಮತ್ತು ಪ್ರಭುತ್ವಗಳು ಹಲವು ರೀತಿಗಳಲ್ಲಿ ಮಹಿಳೆಯರನ್ನು ದಮನಿಸುವ ವಿಧಾನಗಳನ್ನು ಕಂಡುಕೊಂಡು ಕರಗತ ಮಾಡಿಕೊಂಡಿವೆ. ಅದರಲ್ಲಿ ಅತ್ಯಂತ ಪರಿಣಾಮಕಾರಿಯಾದುದು, ದೇವರು, ಭಕ್ತಿ ಮತ್ತು ಧರ್ಮದ ಹೆಸರಿನಲ್ಲಿ ಮಹಿಳೆಯರನ್ನು ದಮನಕ್ಕೊಳಪಡಿಸುವ ತಂತ್ರ....

ರೂ. 170 ಕೋಟಿ ದಂಡ ಪಾವತಿಸಲು ಮುಂದಾದ ಅದಾನಿ : ಏನಿದು ಪ್ರಕರಣ?

ಅಮೆರಿಕದ ನ್ಯಾಯಾಲಯದಲ್ಲಿ ದಾಖಲಾಗಿದ್ದ ವಂಚನೆ ಮತ್ತು ಲಂಚದ ಪ್ರಕರಣಕ್ಕೆ ಸಂಬಂಧಿಸಿದಂತೆ, ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಟ್ಟು 18 ಮಿಲಿಯನ್ ಡಾಲರ್ (ಸುಮಾರು 170 ಕೋಟಿ ರೂಪಾಯಿ) ದಂಡ ಪಾವತಿಸಲು ಒಪ್ಪಿಕೊಳ್ಳುವ ಮೂಲಕ...