Homeಮುಖಪುಟ’ಮೈ ಡಿಯರ್ ಮೀಡಿಯಾ’: ಸುದ್ದಿಮನೆಗಳು ಸ್ಥಿತ್ಯಂತರಗೊಂಡ ಬಗೆ - ರಾಜಾರಾಂ ತಲ್ಲೂರು

’ಮೈ ಡಿಯರ್ ಮೀಡಿಯಾ’: ಸುದ್ದಿಮನೆಗಳು ಸ್ಥಿತ್ಯಂತರಗೊಂಡ ಬಗೆ – ರಾಜಾರಾಂ ತಲ್ಲೂರು

ಒಂದು ಕ್ಷಣ ಕುಳಿತು ತಣ್ಣಗೆ ಯೋಚಿಸಿದರೆ ಸುಳ್ಳೆಂದು, ವಿಷವೆಂದು ಗೊತ್ತಾಗಿಬಿಡುವ ಸಂಗತಿಯನ್ನೂ ಕೂಡ ಅಡೆತಡೆಯಿಲ್ಲದೆ ನಿರಂತರವಾಗಿ ಹರಿಸುತ್ತಾ ಹೋದಾಗ, ಓದುಗನಿಗೆ ಆ ಒಂದು ಕ್ಷಣ ತಣ್ಣಗೆ ಕುಳಿತು ಯೋಚಿಸುವ ಸಮಯ ಉಳಿದಿರುವುದಿಲ್ಲ.

- Advertisement -
- Advertisement -

ಸಾಂಪ್ರದಾಯಿಕವಾಗಿ ಮೇಲು ಜಾತಿಗಳದೇ ಬಿಗಿಮುಷ್ಟಿಯಲ್ಲಿ ಬಹುತೇಕ ‘ಗುರುಶಿಷ್ಯ ಪರಂಪರೆ’ ಆಗಿಯೇ ಉಳಿದಿದ್ದ ಸುದ್ದಿಕೋಣೆಗಳಲ್ಲಿ ಸುದ್ದಿಗಾರರ ಸಂಚಲನದ ಮ್ಯಾಪಿಂಗ್ ಬಹಳ ಕುತೂಹಲಕರ ಸಂಗತಿಗಳನ್ನು ಹೊರಹಾಕಬಹುದು. ಇಲ್ಲಿ ನಾನು ಮಾಡಿರುವುದು ಕಣ್ಣಳತೆಯ ಮ್ಯಾಪಿಂಗೇ ಹೊರತು ಫೀಲ್ಡಿಗಿಳಿದು ಅಂಕಿಸಂಖ್ಯೆಗಳ ಆಧಾರದಲ್ಲಿ ಮಾಡಿದ್ದಲ್ಲ. ಆದರೆ ಮಾಧ್ಯಮ ಪರಿಣತರಿಗೆ ಇಲ್ಲೊಂದು ಚೆಂದದ ಸಂಶೋಧನಾವಕಾಶ ಇದೆ ಎಂದು ಧಾರಾಳವಾಗಿ ಹೇಳಬಲ್ಲೆ.

ಅಂದಾಜು 2000-2010 ಕನ್ನಡದ ಮುದ್ರಣ ಮಾಧ್ಯಮಗಳಲ್ಲಿ ಸ್ಥಿತ್ಯಂತರದ ಕಾಲ. ಈ ಅವಧಿಯಲ್ಲೇ (2000) ನಾನು ಉದ್ದೇಶಪೂರ್ವಕವಾಗಿ ನನ್ನ ಅನುಭವ ಇದ್ದ ಮುದ್ರಣ ಮಾಧ್ಯಮದ ಬದಲು ವೆಬ್ ಮಾಧ್ಯಮದ ಕಡೆ ಹೊರಳಿಕೊಂಡಿದ್ದರಿಂದ ನನಗೆ ಆದ ಲಾಭವೆಂದರೆ, ಒಳಗಿನವನಾಗಿದ್ದೂ ಹೊರಗಿನಿಂದ ಮುದ್ರಣ ಮಾಧ್ಯಮದ ಸುದ್ದಿಮನೆಗಳನ್ನು ನೋಡುವ ಅವಕಾಶ ಸಿಕ್ಕಿದ್ದು. ಈ ಅವಧಿಯಲ್ಲೇ ಕನ್ನಡ ಮುದ್ರಣ ಮಾಧ್ಯಮಗಳು ಮಾಲಕೀಯ ನಿಗಾದಿಂದ ‘ಕಾರ್ಪೋರೇಟ್ ನಿಗಾ ವ್ಯವಸ್ಥೆ’ಗೆ ಹೊರಳಿಕೊಂಡದ್ದು. ಅರ್ಥಾತ್ ಪತ್ರಿಕೆಯೊಂದರ ‘ಹೃದಯ’ದ ಜವಾಬ್ದಾರಿಯನ್ನು ‘ಕಿಡ್ನಿ’ ವಹಿಸಿಕೊಂಡದ್ದು. ಪುನರರ್ಥಾತ್, ಸುದ್ದಿಮನೆಗೆ ಸುದ್ದಿಗಾರರ ನೇಮಕ ಮಾಡುವ ಸುದ್ದಿಮನೆಯ ಹಿರಿಯರ ಜವಾಬ್ದಾರಿಯನ್ನು ಸಂಸ್ಥೆಯ ‘ಮಾನವ ಸಂಪನ್ಮೂಲ’ ವಿಭಾಗಗಳು ವಹಿಸಿಕೊಂಡದ್ದು!

ಈ ಸ್ಥಿತ್ಯಂತರದ ಮೊದಲ ಪರಿಣಾಮ -ಸುದ್ದಿಮನೆಯಲ್ಲಿರುವ ‘ಹಿರಿತಲೆ’ಗಳ ತಲೆದಂಡ. ಅದಕ್ಕೆ ಕೊಡಲಾದ ಕಾರ್ಪೋರೇಟ್ ಕಾರಣ ‘ಕನ್ನಡದ ಸುದ್ದಿಮನೆಯ ಸರಾಸರಿ ಪ್ರಾಯ 50+ ಇದೆ. ಉದಾರೀಕರಣದ-ನವಮಾರುಕಟ್ಟೆಗಳ ಪರ ಇದ್ದು ಆದಾಯ ಗಳಿಸಬೇಕಾಗಿರುವ ಪತ್ರಿಕೆಗಳು ಈ ನವ ಮಾರುಕಟ್ಟೆಯ ನಾಡಿಮಿಡಿತ ಅರಿಯಬೇಕಾದರೆ, ಸುದ್ದಿಮನೆಗಳ ಸರಾಸರಿ ಪ್ರಾಯ 30-35ರ ಆಸುಪಾಸು ಇರಬೇಕು ಎಂಬ ಕಾರ್ಪೋರೇಟ್ ತುಡಿತ. ಹೊಸದಾಗಿ ಬಂದಿದ್ದ ಈ ಕಾರ್ಪೋರೇಟೀಕರಣದ ವೃತ್ತಿಪರತೆಯ ವರಸೆಗಳು ಎಷ್ಟು ಬಲವಾಗಿದ್ದವೆಂದರೆ, ಅವರ ಅಂಕಿ-ಸಂಖ್ಯೆಗಳು, ಚಾರ್ಟುಗಳು, ಪಿಪಿಟಿ ಪ್ರೆಸಂಟೇಷನ್‍ಗಳು, ಉಳಿದವರನ್ನು ಬಿಡಿ – ಮಾಲಕ ವರ್ಗದ ಬಾಯಿಯನ್ನೇ ಕಟ್ಟಿಸಿಬಿಡುತ್ತಿದ್ದವು/ತ್ತಿವೆ.

ಈ ಸ್ಥಿತ್ಯಂತರದ ಆರಂಭದ ಹೊತ್ತಿಗೆ ಸುದ್ದಿಮನೆಗಳ ಪರಿಸ್ಥಿತಿ ಹೇಗಿತ್ತೆಂದರೆ ಬಹುತೇಕ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಅನುಭವೀ, ಇಗೊ ಧಿಮಾಕಿನ ಮುದುಕರೇ ತುಂಬಿದ್ದರು. ಸುದ್ದಿಮನೆಗಳಿಗೆ ಜಂಪಿಂಗ್ ಬೋರ್ಡ್‍ಗಳೆಂದೇ ಪ್ರಸಿದ್ಧವಾಗಿದ್ದ ಎರಡು ಪತ್ರಿಕೆಗಳು – ‘ಸಂಯುಕ್ತ ಕರ್ನಾಟಕ’ ಹಾಗೂ ‘ಹೊಸದಿಗಂತ’ ಬೇರೆ ಪತ್ರಿಕೆಗಳಿಗೆ ಹೋಲಿಸಿದರೆ ಸುದ್ದಿಮನೆಯ ಸರಾಸರಿ ಪ್ರಾಯದಲ್ಲಿ ಬಹಳ ತಗ್ಗಿನಲ್ಲಿದ್ದವು. ಅಂದರೆ, ಬೇರೆ ಸುದ್ದಿಮನೆಗಳಿಗೆ ಹೋಲಿಸಿದರೆ ಅಲ್ಲಿ ಎಳೆಯರ ಸಂಖ್ಯೆ ಜಾಸ್ತಿ ಇತ್ತು.

ಈಗ ನಾನು ಲೇಖನದ ಆರಂಭದಲ್ಲಿ ಹೇಳಿದ ಸುದ್ದಿಮನೆಯಲ್ಲಿ ಸಂಚಲನದ ಮ್ಯಾಪಿಂಗ್ ಮಾಡಿದರೆ, ನಿಮಗೆ ಕಾಣಬಹುದಾದ ಎರಡು ಹಾಟ್‍ಸ್ಪಾಟ್‍ಗಳೆಂದರೆ ‘ಸಂಯುಕ್ತ ಕರ್ನಾಟಕ’ ಹಾಗೂ ‘ಹೊಸದಿಗಂತ’. ಬಹುತೇಕ ಎಲ್ಲ ಸುದ್ದಿಮನೆಗಳಿಗೂ ಈ ಎರಡು ಪತ್ರಿಕೆಗಳಿಂದ ಅನುಭವೀ ಎಳೆಯರು ಹರಡಿ ಹೋದರು. ಈ ಹರಡುವಿಕೆ 1999ರಲ್ಲಿ ‘ವಿಜಯ ಕರ್ನಾಟಕ’ದ ಆರಂಭದೊಂದಿಗೆ ಟ್ರಿಗರ್ ಆಯಿತು. ಸುದ್ದಿಮನೆಯ ಮಂದಿ ಪತ್ರಿಕೆಯಿಂದ ಪತ್ರಿಕೆಗೆ ಹಿಂಡು ಕಟ್ಟಿಕೊಂಡು ತಿರುಗುವ ಸಂಪ್ರದಾಯಕ್ಕೂ ಇಲ್ಲೇ ನಾಂದಿ ಆಯಿತು. ಎಲ್ಲಕ್ಕಿಂತ ಮುಖ್ಯವಾಗಿ ಇವತ್ತಿನ ಕನ್ನಡ ಮುದ್ರಣ ಮಾಧ್ಯಮದ ಪರಿಸ್ಥಿತಿಗೆ ಈ ಬೆಳವಣಿಗೆ ಬೀಜ ಬಿತ್ತಿತು.

ಮೂಲದಲ್ಲೇ ಕಲುಷಿತ

‘ಸುದ್ದಿ ಸಂಸ್ಕರಣೆ’ ಎಂಬುದು ಕನ್ನಡದ ಮಟ್ಟಿಗೆ ‘ಗುರುಶಿಷ್ಯ’ ಪರಂಪರೆಯದೇ ಕೊಡುಗೆ. ಹಠಾತ್ ಆಗಿ ಹಿರಿಯ ತಲೆಮಾರಿನ ಪತ್ರಕರ್ತರ ಒಂದು ದೊಡ್ಡ ಬಳಗ ಕನ್ನಡ ಪತ್ರಿಕೆಗಳ ಸುದ್ದಿಮನೆಯಿಂದ ಹತ್ತು ವರ್ಷಗಳ ಅವಧಿಯಲ್ಲಿ ಹಂತಹಂತವಾಗಿ, ವಿವಿಧ ಕಾರಣಗಳ ಹೆಳೆಯಲ್ಲಿ ‘ಒಂದೇ ಉದ್ದೇಶ ಸಾಧನೆಗಾಗಿ (ಮಾರುಕಟ್ಟೆಯಲ್ಲಿ ಗೆಲ್ಲುವ ಉದ್ದೇಶ ಅದು!)’ ಹೊರದಬ್ಬಿಸಿಕೊಂಡಾಗ, ಸುದ್ದಿಮನೆಯಲ್ಲಿ ಏಕಾಏಕಿ ಸುದ್ದಿ ಸಂಸ್ಕರಣೆ ಕೌಶಲದ ಕೊರತೆ ಉಂಟಾಗತೊಡಗಿತು. ಅದರ ಫಲವಾಗಿ ನಿಧಾನಕ್ಕೆ ಸುದ್ದಿಗಳು ತಮ್ಮ ಸೂಕ್ಷ್ಮಜ್ಞತೆಯನ್ನು ಕಳೆದುಕೊಳ್ಳತೊಡಗಿದವು. ಭಾಷೆ, ವ್ಯಾಕರಣದಂತಹ ಒಣ ಪಾಂಡಿತ್ಯದಿಂದ ಆರಂಭಿಸಿ ಸುದ್ದಿ ವಿಶ್ಲೇಷಣೆ, ಸುದ್ದಿಯ ದರ್ಜೆ ನಿರ್ಧಾರಣೆಯಂತಹ ಎಲ್ಲ ಸುದ್ದಿ ಕೌಶಲಗಳೂ ಏಕಾಏಕಿ ಮೊಂಡಾಗಿ, ಮಾರ್ಕೇಟು ಮಂಗಾಟಗಳು ಮುನ್ನೆಲೆಗೆ ಬರತೊಡಗಿದವು. ಓದುಗರ ಕಜ್ಜಿ ಕೆರೆಯುವ ಮತ್ತು ಆ ಕೆರೆತದ ಆನಂದಕ್ಕೆ ಉಪ್ಪು ಸವರಿ ಮತ್ತಷ್ಟು ಹಾರ ಕೊಡುವ ಕೆಲಸಗಳು ಆರಂಭಗೊಂಡವು.

2010ರ ಹೊತ್ತಿಗೆ, ದೇಶದಾದ್ಯಂತ ಹೆಚ್ಚಿನಂಶ ಇಂತಹದೊಂದು ಟ್ರೆಂಡ್ ವಿವಿಧ ಸ್ಥಳೀಯ ಕಾರಣಗಳಿಗಾಗಿ ಹುಟ್ಟಿಕೊಂಡಿರಬೇಕು. ಅಂತೂ ಎಲ್ಲೆಡೆ ಇದೇಸ್ಥಿತಿ ಇರುವಾಗ ‘ಸುದ್ದಿಮೂಲ ಸಂಸ್ಥೆ’ಗಳು ಹಿಂದುಳಿಯಲಾದೀತೇ? ANI, PTI, UNI ಮತ್ತಿತರ ಸುದ್ದಿಮೂಲ ಸಂಸ್ಥೆಗಳೂ ಇಂತಹದೇ ಸ್ಥಿತ್ಯಂತರಕ್ಕೆ ಒಳಪಟ್ಟು ತಮ್ಮ ತಮ್ಮ ಮೂಗಿನ ನೇರಕ್ಕೆ ಸುದ್ದಿಗಳನ್ನು ಹಂಚಲಾರಂಭಿಸಿದವು. ಈ ರೀತಿ ಮೂಲದಿಂದ ಬಂದ ಸುದ್ದಿಗಳ ‘ಸಂಸ್ಕರಣೆ’ ಕೌಶಲ ಇಲ್ಲದ ಸುದ್ದಿಮನೆಗಳು (ಕನಿಷ್ಟ ಕನ್ನಡದ ಮಟ್ಟಿಗೆ) ಇದೇ ಸುದ್ದಿಗಳನ್ನು ತಮ್ಮ ಓದುಗರಿಗೆ ಬಡಿಸತೊಡಗಿದವು.

ಈ ವೇಳೆಗೆ, ದೇಶದ ರಾಜಕೀಯ ಸ್ಥಿತ್ಯಂತರಗಳು (1996 – 2004) ಮೊದಲ ಬಾರಿಗೆ ಕಾಂಗ್ರೆಸ್ಸೇತರ ಆಡಳಿತಕ್ಕೆ ಹಾದಿಮಾಡಿಕೊಡುವ ಹೊತ್ತಿಗೇ, ತನ್ನ ಯೋಜಿತ ಬದಲಾವಣೆಗಳನ್ನು ಮಾಧ್ಯಮ ರಂಗದಲ್ಲೂ ತಂದವು. ನಾನು ಗಮನಿಸಿದಂತೆ, ಸುದ್ದಿಮೂಲ ಸಂಸ್ಥೆಗಳು ಕಲುಷಿತಗೊಳ್ಳಲು ಆರಂಭವಾದದ್ದು ಈ ಹಂತದಲ್ಲಿ. ಇದರರ್ಥ, ಅದಕ್ಕಿಂತ ಮೊದಲು ಸುದ್ದಿಮೂಲ ಸಂಸ್ಥೆಗಳು ರಾಜಕೀಯ ಪ್ರಭಾವಕ್ಕೆ ಒಳಗಾಗಿರಲಿಲ್ಲ ಎಂದಲ್ಲ. ಅಲ್ಲಿಯ ತನಕ ಇದ್ದಂತಹ ಏಕಸ್ವಾಮ್ಯದ ಕಾಲ ಮುಗಿಯಿತು, ಅಷ್ಟೇ. ಆದರೆ, 2010ರ ಹೊತ್ತಿಗೆ ಸುದ್ದಿಮೂಲ ಸಂಸ್ಥೆಗಳ ಕಲುಷಿತಗೊಳ್ಳುವಿಕೆ ಎಷ್ಟು ತೀವ್ರಗೊಂಡಿತೆಂದರೆ ಸುದ್ದಿಗಳು ಸುದ್ದಿಮೂಲದಲ್ಲೇ ‘ಸೂಕ್ತ ಸಂಸ್ಕರಣೆಗೆ ಒಳಪಟ್ಟು’ ಸುದ್ದಿಮನೆಗಳಿಗೆ ತಲುಪತೊಡಗಿದವು.

2014 ಮತ್ತು 2019ರ ಮಹಾಚುನಾವಣೆಗಳಲ್ಲಿ ಮೈನ್ ಸ್ಟ್ರೀಮ್ ಮಾಧ್ಯಮಗಳಲ್ಲೇ ಯಾವ ಪ್ರಮಾಣದಲ್ಲಿ ಪರೋಕ್ಷ ಪ್ರಚಾರದ, ಸತ್ಯದ ಅಂಚಿನಲ್ಲಿರುವ ಅಥವಾ ಸುಳ್ಳು ಸುದ್ದಿಗಳು ಹೇಗೆ ಕೆಲಸ ಮಾಡಿದವು ಎಂಬುದು ಈಗ ಇತಿಹಾಸ. ಇದರಲ್ಲಿ ಎಲ್ಲ ತಪ್ಪೂ ಸುದ್ದಿಮನೆಗಳದಲ್ಲ. ಸುದ್ದಿಮನೆ ಪ್ರಕಟಿಸುವ ನೂರಕ್ಕೆ 60 ಸುದ್ದಿಗಳು (ಅಂದರೆ ಸ್ಥಳೀಯ ಸುದ್ದಿ ಹೊರತುಪಡಿಸಿ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮತ್ತು ರಾಜ್ಯ ಸುದ್ದಿಗಳು) ಸುದ್ದಿಮೂಲ ಸಂಸ್ಥೆಗಳನ್ನು ಆಧರಿಸಿದ ಸುದ್ದಿಗಳು. ಹಾಗಾಗಿ, ಮೂಲದಲ್ಲೇ ಅಂದರೆ ಸುದ್ದಿಮೂಲ ಸಂಸ್ಥೆಗಳಲ್ಲಿ ಸುದ್ದಿಯನ್ನು ತಮ್ಮ ಅನುಕೂಲಕ್ಕೆ ತಿರುಚಿಕೊಳ್ಳುವುದು ಸಾಧ್ಯವಾದರೆ, ಉಳಿದೆಡೆ ಅದು ತನ್ನಿಂತಾನೆ ಹರಿದುಬರುತ್ತದೆ ಎಂಬ ರಾಜಕೀಯ ಅರಿವು ಮೂಡಿದ್ದು ಈ ಹಂತದಲ್ಲಿ.

ಸುದ್ದಿಯು ಮೂಲದಲ್ಲೇ ಕಲುಷಿತಗೊಂಡಮೇಲೆ, ಸುದ್ದಿಮನೆಗಳಲ್ಲಿ ಅದು ರೋಗಿ ಬಯಸಿದ್ದೂ ಹಾಲು, ವೈದ್ಯ ಹೇಳಿದ್ದೂ ಹಾಲು ಎಂಬಂತಾಯಿತು. ತಿರುಚಲಾದ, ರಾಜಕೀಯ ಪ್ರೇರಿತವಾದ ಸುದ್ದಿಗಳು ಪೂರಕ ಸಂಸ್ಕರಣೆಯ ಜೊತೆ ಆಡಂಬರ, ಅಲಂಕಾರಗಳೊಂದಿಗೆ ಪ್ರಕಟಗೊಳ್ಳುವುದು ಈಗ ಎಗ್ಗಿಲ್ಲದೇ ನಡೆದಿದೆ. ಕನ್ನಡದ ಮಟ್ಟಿಗೆ ಯಾವುದೇ ದಿನದ ಯಾವುದೇ ಪತ್ರಿಕೆಯಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ಇಂತಹ ಕನಿಷ್ಠ ಒಂದು ಸುದ್ದಿಯನ್ನು ಗುರುತಿಸಲು ಇಂದು ಸಾಧ್ಯವಿದೆ.

ಸೋಷಿಯಲ್ ಮೀಡಿಯಾ ಟಾಪ್‍ಅಪ್

ಮೀಡಿಯಾ ಬಂದ ಆರಂಭದಲ್ಲಿ ಅದನ್ನು ಸಮಾನಾವಕಾಶಗಳನ್ನು ಒದಗಿಸುವ ಟೂಲ್ ಎಂದು ಪರಿಗಣಿಸಲಾಗಿತ್ತು. ಆದರೆ, ಅದು ಮೈಕ್ರೊಬ್ಲಾಗಿಂಗ್ ಬದಲು ಮ್ಯಾಕ್ರೊಫ್ಲಾಗಿಂಗ್ ಆರಂಭಿಸಿತು. ನವ ರಾಜಕಾರಣದ ತಂತ್ರಗಾರಿಕೆಯು ಕುತಂತ್ರಗಾರಿಕೆ ಆಗಿ ಬದಲಾಗುವಲ್ಲಿ ಸೋಷಿಯಲ್ ಮೀಡಿಯಾಗಳ ಕೊಡುಗೆ ಅಪಾರ.

ಕಲುಷಿತ ಸುದ್ದಿಯ ‘ಮಡ್ಡಿ’ ರೂಪ ಪ್ರಕಟಗೊಳ್ಳುವುದು ಸೋಷಿಯಲ್ ಮೀಡಿಯಾಗಳಲ್ಲಿ. ವಾಟ್ಸಾಪ್‍ನಂತಹ ವ್ಯಕ್ತಿಯಿಂದ ವ್ಯಕ್ತಿಗೆ ಸೋಂಕಬಲ್ಲ ‘ಎಂಡೆ-ಪ್ಯಾಂಡಮಿಕ್ (ಅರ್ಥಾತ್ ಎಂಡೆಮಿಕಲಿ ಪ್ಯಾಂಡಮಿಕ್)’ ಕ್ರಿಮಿನಲ್ ಮೀಡಿಯಾಗಳು ರಿಯಲ್‍ಟೈಮ್‍ನಲ್ಲೇ ಅದರ ಓದುಗರನ್ನು ತಲುಪಿ, ಅದಾಗಿ ಕೆಲವು ಗಂಟೆಗಳ ಬಳಿಕ ಟೆಲಿವಿಷನ್ ಚಾನೆಲ್ ಅಥವಾ ಮರುದಿನ ಪ್ರಿಂಟ್ ಮೀಡಿಯಾ ಮೂಲಕ ಅದೇ ಕಲುಷಿತ ಸುದ್ದಿ ತಲುಪಿದಾಗ, ಸಹಜವಾಗಿಯೇ ಓದುಗರು ಹಲವು ಮೂಲಗಳಿಂದ ದೊರೆತಿರುವ ಸುದ್ದಿ ನಿಜವಿರಬಹುದೆಂಬ ಅಭಿಪ್ರಾಯ ತಳೆಯುತ್ತಾರೆ. ಇದು ಇಂದು ಆಟದ ನಿಯಮವಾಗಿಬಿಟ್ಟಿದೆ. ಮೊದಲಿಗೇ ವಿಷಕಾರಿ ಸುಳ್ಳು (ಸೋಷಿಯಲ್ ಮೀಡಿಯಾ), ಬಳಿಕ ಅಬ್ಬರದ ಸುಳ್ಳು (ಟೆಲಿವಿಷನ್) ಮತ್ತು ಕೊನೆಗೆ ಸತ್ಯದಂಚಿನ ಸುಳ್ಳು (ಮುದ್ರಿತ ಮಾಧ್ಯಮ) ಸಿಗುವ ಕ್ರೊನಾಲಜಿ ಈವತ್ತು ಓದುಗರಿಗೆ ಸುದ್ದಿಯನ್ನು ಅರ್ಥೈಸಿಕೊಳ್ಳುವ ಕ್ರೊನಾಲಜಿಯೂ ಆಗಿಬಿಟ್ಟಿರುವುದು ನಮ್ಮ ಕಾಲದ ದುರಂತ.

ಒಂದು ಕ್ಷಣ ಕುಳಿತು ತಣ್ಣಗೆ ಯೋಚಿಸಿದರೆ ಸುಳ್ಳೆಂದು, ವಿಷವೆಂದು ಗೊತ್ತಾಗಿಬಿಡುವ ಸಂಗತಿಯನ್ನೂ ಕೂಡ ಅಡೆತಡೆಯಿಲ್ಲದೆ ನಿರಂತರವಾಗಿ ಹರಿಸುತ್ತಾ ಹೋದಾಗ, ಓದುಗನಿಗೆ ಆ ಒಂದು ಕ್ಷಣ ತಣ್ಣಗೆ ಕುಳಿತು ಯೋಚಿಸುವ ಸಮಯ ಉಳಿದಿರುವುದಿಲ್ಲ. ಈ ನಾನ್‍ಸ್ಟಾಪ್ ಕಾರ್ಪೆಟ್ ಬಾಂಬಿಂಗ್ ಇವತ್ತಿನ ವಿಷ ಸನ್ನಿವೇಶಕ್ಕೆ ಮೂಲ ಕಾರಣ. ಇದಕ್ಕೆ ವಿಷಹರ ಚಿಕಿತ್ಸೆ ಎಂದರೆ ಒಂದಿಷ್ಟು ಕಾಲ ಅವುಗಳಿಂದ ದೂರ ಉಳಿದುಬಿಡುವುದು. ನಿರಂತರ ಸುದ್ದಿಯನ್ನು ಕಳೆದುಕೊಂಡರೆ ಬದುಕಿನಲ್ಲಿ ಕಳೆದುಕೊಳ್ಳುವಂತಹದೇನೂ ಇಲ್ಲ ಎಂಬ ಸತ್ಯದ ಅರಿವು ಮೂಡಿಸಿಕೊಳ್ಳುವುದು.

(ಲೇಖಕರು ಮಾಜೀ ಪತ್ರಕರ್ತರು ಮತ್ತು ಹಾಲೀ ಭಾಷೋದ್ಯಮಿ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. Rajaram talureravarige shubharathri nimmaa mahiti nodi bahala anubhava ayitu hagu egina midiyagalu odugara mattu nodugarannu mosa hagu dikku tappisutive sarvajanikaru echhara vagabeku idu nanna manavi

LEAVE A REPLY

Please enter your comment!
Please enter your name here

- Advertisment -

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...