ನಾಗಾ ರಾಜಕೀಯ ಸಂವಾದದಲ್ಲಿ ಒಕ್ಕೂಟ ಸರ್ಕಾರದೊಂದಿಗೆ ಪ್ರಮುಖ ಸಮಾಲೋಚಕರಾಗಿರುವ, “ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್-ಇಸಾಕ್ ಮುಯಿವಾ”( NSCN-IM) “AFSPA ‘ನೆರಳಿನಲ್ಲಿ’ ಯಾವುದೇ ಶಾಂತಿ ಮಾತುಕತೆ ಸಾಧ್ಯವಿಲ್ಲ” ಎಂದು ಬುಧವಾರ ಹೇಳಿದೆ. ಮಾಜಿ ಬಂಡುಕೋರ ಗುಂಪು ಕೂಡಾ ಅಗಿರುವ NSCN-IM, ಸಂಸತ್ತಿನಲ್ಲಿ ಅಮಿತ್ ಶಾ ಅವರು ಬಂಡಾಯ ನಿಗ್ರಹ ಕಾರ್ಯಾಚರಣೆಯ ಬಗ್ಗೆ ನೀಡಿದ ಹೇಳಿಕೆಯನ್ನು “ಬೇಜವಾಬ್ದಾರಿ” ಎಂದು ಬಣ್ಣಿಸಿದೆ.
“AFSPA ನೆರಳಿನಲ್ಲಿ ಯಾವುದೇ ರಾಜಕೀಯ ಮಾತುಕತೆಗಳು ಅರ್ಥಪೂರ್ಣವಾಗುವುದಿಲ್ಲ. ಮಾನವ ಘನತೆಯನ್ನು ಉಳಿಸಿಕೊಳ್ಳಲಿ, ನಂತರ ನಾಗಾ ರಾಜಕೀಯ ಶಾಂತಿ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಲಿ” ಎಂದು NSCN-IM ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಇರೋಮ್ ಶರ್ಮಿಳಾರ ಉಪವಾಸ, Indian Army Rape us ಎಂಬ ಮಹಿಳೆಯರ ಬೆತ್ತಲೆ ಪ್ರತಿಭಟನೆ ಮತ್ತು ಕರಾಳ AFSPA
ಡಿಸೆಂಬರ್ 4 ರಂದು ಮೋನ್ ಜಿಲ್ಲೆಯ ಓಟಿಂಗ್ ಗ್ರಾಮದಲ್ಲಿ ಕನಿಷ್ಠ 14 ಕಲ್ಲಿದ್ದಲು ಗಣಿ ಕಾರ್ಮಿಕರ ಹತ್ಯೆಯ ಕುರಿತು ಸಂಸತ್ತಿನಲ್ಲಿ ಒಕ್ಕೂಟ ಸರ್ಕಾರದ ಗೃಹ ಸಚಿವ ಅಮಿತ್ ಶಾ ಅವರು ನೀಡಿದ ಹೇಳಿಕೆಯನ್ನು NSCN-IM ತೀವ್ರವಾಗಿ ಖಂಡಿಸಿದೆ.
“ಇಂತಹ ಪರಿಸ್ಥಿತಿಯಲ್ಲಿ ಅಮಿತ್ ಶಾ ಅವರು ಸಾಮಾಜಿಕ-ರಾಜಕೀಯ ಏರುಪೇರುಗಳನ್ನು ತಣ್ಣಗಾಗಿಸಲು ರಾಜಕೀಯ ಪ್ರಬುದ್ಧತೆ ಮತ್ತು ಪ್ರಾಯೋಗಿಕ ರಾಜನೀತಿಯನ್ನು ತೋರಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ವಿಪರ್ಯಾಸವೆಂದರೆ, ಅವರು ಪ್ಯಾರಾ ಕಮಾಂಡೋಗಳ ಹಿಂದೆ ನಿಂತು ಜ್ವಲಂತ ಸಮಸ್ಯೆಗೆ ಇಂಧನವನ್ನು ಸುರಿದರು” ಎಂದು ಮಾಜಿ ಬಂಡಾಯ ಗುಂಪು ಹೇಳಿದೆ.
ಅಮಿತ್ ಶಾ ಅವರ ಹೇಳಿಕೆಯನ್ನು “ನಾಗ ಜನಾಂಗದ ಗಾಯಗಳಿಗೆ ಉಪ್ಪು ಮತ್ತು ಮೆಣಸಿನಕಾಯಿಯನ್ನು ಉಜ್ಜಿದಂತೆ” ಎಂದು NSCN-IM ಬಣ್ಣಿಸಿದ್ದು, ಕೊಲ್ಲುವ ಉದ್ದೇಶದಿಂದಲೇ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂಬ ಸತ್ಯವನ್ನು ಯಾರಿಂದಲೂ ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದು ಹೇಳಿದೆ.
ಇದನ್ನೂ ಓದಿ:‘ಒಂದು ವಾರ ಓಡಾಡದಿರಿ; ಓಡಾಡಿದರೆ ಮುಂದಾಗುವ ಅಪಾಯಕ್ಕೆ ಅವರೇ ಹೊಣೆ’: ಸಶಸ್ತ್ರ ಪಡೆಗಳಿಗೆ ‘ಕೊನ್ಯಾಕ್’ ಎಚ್ಚರಿಕೆ
ಭಾರತ ಸರ್ಕಾರವು ನಾಗಾ ಜನರಿಗೆ ನ್ಯಾಯವನ್ನು ಮಾಡಲು ಬಯಸಿದರೆ, AFSPA ಅನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ತಪ್ಪಿತಸ್ಥರ ವಿರುದ್ದ ಸರಿಯಾದ ಕಾನೂನು ಕ್ರಮಕ್ಕಾಗಿ ತನಿಖೆಯನ್ನು ತಕ್ಷಣವೇ ಪ್ರಾರಂಭಿಸಬೇಕು ಎಂದು NSCN-IM ವಾದಿಸಿದೆ.
ಮಾಧ್ಯಮಗಳ ದೃಷ್ಟಿಯಲ್ಲಿ ಮೃತಪಟ್ಟವರು ಉಗ್ರಗಾಮಿಗಳು ಎಂಬ ಭಾವನೆಯನ್ನು ಮೂಡಿಸಲು ಮೃತಪಟ್ಟ ನಾಗಾ ಜನರ ಮೃತದೇಹಕ್ಕೆ ಮಿಲಿಟರಿ ಉಡುಗೆಯನ್ನು ಸೇನೆಯು ಧರಿಸುವಲ್ಲಿ ಹೊರಟಿತ್ತು, ಅದೃಷ್ಟವಶಾತ್, ಅವರು ತಮ್ಮ ಯೋಜನೆಯಲ್ಲಿ ಯಶಸ್ವಿಯಾಗುವ ಮೊದಲು ಗ್ರಾಮಸ್ಥರಿಂದ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು ಎಂದು NSCN-IM ಹೇಳಿಕೆ ನೀಡಿದೆ.
ನಾಗಾ ರಾಜಕೀಯ ಸಮಸ್ಯೆಯ ಪರಿಹಾರಕ್ಕಾಗಿ 1997 ರಿಂದ NSCN-IM ಒಕ್ಕೂಟ ಸರ್ಕಾರದೊಂದಿಗೆ ಮಾತುಕತೆಯಲ್ಲಿ ತೊಡಗಿದೆ. ಆಗಸ್ಟ್ 2015 ರಲ್ಲಿ ಅವುಗಳ ಸಮಸ್ಯೆಯ ಪರಿಹಾರ ಕಾರ್ಯದ ಒಪ್ಪಂದವೊಂದಕ್ಕೆ ಸಹಿ ಹಾಕಲಾಗಿತ್ತು. ಆದಾಗ್ಯೂ, ನಾಗಾಗಳಿಗೆ ಪ್ರತ್ಯೇಕ ಧ್ವಜ ಮತ್ತು ಸಂವಿಧಾನದ ಬೇಡಿಕೆಯನ್ನು ಈಡೇರಿಸುವಲ್ಲಿ ಯಾವುದೇ ಪರಿಹಾರ ಸಾಧ್ಯವಾಗಿಲ್ಲ.
ಇದನ್ನೂ ಓದಿ: ಮುಗ್ಧ ನಾಗರಿಕರ ಮೇಲೆ ಯೋಜಿತ ದಾಳಿ ಮಾಡಲಾಗಿದೆ: ಈಶಾನ್ಯ ಭಾರತದ ಪ್ರಭಾವಿ ಬುಡಕಟ್ಟು ಒಕ್ಕೂಟ ಆರೋಪ