Homeಮುಖಪುಟಪಶ್ಚಿಮ ಬಂಗಾಳ ಚುನಾವಣೆಯ ಕೇಂದ್ರಬಿಂದುವಾಗಿರುವ ನಂದಿಗ್ರಾಮ ಕ್ಷೇತ್ರ

ಪಶ್ಚಿಮ ಬಂಗಾಳ ಚುನಾವಣೆಯ ಕೇಂದ್ರಬಿಂದುವಾಗಿರುವ ನಂದಿಗ್ರಾಮ ಕ್ಷೇತ್ರ

- Advertisement -
- Advertisement -

ಏಪ್ರಿಲ್ 1ರಂದು ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನ 30 ಸ್ಥಾನಗಳಿಗಾಗಿ ನಡೆಯಿತು. ನಂದಿಗ್ರಾಮ, ಕೇಶ್‌ಪುರ ಕ್ಷೇತ್ರಗಳಲ್ಲಿ ಕೆಲವು ಹಿಂಸಾಚಾರದ ಘಟನೆಗಳ ನಡುವೆಯೇ ಸುಮಾರು 82% ಮತದಾನ ದಾಖಲೆಯಾಯಿತು. ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ಎರಡೂ ಪಕ್ಷಗಳು ಮತಗಟ್ಟೆಗಳನ್ನು ಜಾಮ್ ಮಾಡಿದ, ಮತದಾನದಲ್ಲಿ ಅವ್ಯವಹಾರ ನಡೆದ ಮತ್ತು ತಮ್ಮ ಮತಗಟ್ಟೆಗಳ ಏಜೆಂಟ್‌ರನ್ನು ಹೆದರಿಸಲಾಗಿದೆ ಎಂದು ಆರೋಪಗಳು ಕೇಳಿಬಂದವು. ಬಿಜೆಪಿ ಪಕ್ಷವು ಟಿಎಂಸಿಯನ್ನು ದೂರಿದರೆ, ಟಿಎಂಸಿ ಪಕ್ಷವು ಬಿಜೆಪಿಯನ್ನು ಈ ಅವ್ಯವಹಾರಗಳಿಗೆ ಹೊಣೆ ಎಂದು ದೂರಿದೆ. ಮತಗಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ದೂರುಗಳಿಗೆ ಸ್ಪಂದಿಸಿಲ್ಲ ಎಂದು ಚುನಾವಣಾ ಆಯೋಗವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಟೀಕಿಸಿದ್ದಾರೆ ಹಾಗೂ ಅಮಿತ್ ಶಾ ಅವರ ನಿರ್ದೇಶನದ ಮೇರೆಗೆ ಆಯೋಗ ಕೆಲಸ ಮಾಡುತ್ತಿದೆ ಎಂದಿದ್ದಾರೆ. ನಂದಿಗ್ರಾಮದಲ್ಲಿ ಟಿಎಂಸಿಯಿಂದ ಮಮತಾ ಬ್ಯಾನರ್ಜಿ ಕಣಕ್ಕಿಳಿದಿದ್ದರೆ, ಟಿಎಂಸಿಯ ಮಾಜಿ ಸಚಿವ ಸುವೇಂದು ಅಧಿಕಾರಿ ಈಗ ಬಿಜೆಪಿ ಸೇರಿಕೊಂಡು ಮಮತ ಅವರ ವಿರುದ್ಧ ಸ್ಪರ್ಧಿಸುತ್ತಿದ್ದಾರೆ ಹಾಗೂ ಇಬ್ಬರೂ ಭಾರಿ ಅಂತರದಿಂದ ತಮ್ಮ ಎದುರಾಳಿಯನ್ನು ಸೋಲಿಸುವುದಾಗಿ ಹೇಳಿಕೊಂಡಿದ್ದಾರೆ.

ಸುವೇಂದು ಅಧಿಕಾರಿಯ ತಂದೆ ಸಿಸಿರ್ ಅಧಿಕಾರಿ ಮತ್ತು ತಮ್ಮ ದೀಪ್ಯೆಂದು ಅಧಿಕಾರಿ ಇಬ್ಬರೂ ಪೂರ್ವ ಮಿದ್ನಾಪುರ ಪ್ರದೇಶದ ಎಂಪಿಗಳಾಗಿದ್ದಾರೆ. ಮೊದಲು ಟಿಎಂಸಿಯಲ್ಲಿದ್ದ ಇವರು ಈಗ ಪಕ್ಷವನ್ನು ತ್ಯಜಿಸಿದ್ದಾರೆ. ’ಅಧಿಕಾರಿ ಫ್ಯಾಮಿಲಿ’ ಎಂದೇ ಗುರುತಿಸಿಕೊಂಡ ಇವರು ಇಡೀ ಜಿಲ್ಲೆಯಲ್ಲಿ ಗಣನೀಯ ಪ್ರಭಾವವನ್ನು ಉಳ್ಳವರಾಗಿದ್ದಾರೆ. ಸುವೆಂದು ಅಧಿಕಾರಿ ಚುನಾವಣೆಗೆ ಕೆಲವೇ ತಿಂಗಳ ಮುನ್ನ ಟಿಎಂಸಿ ತೊರೆದು, ಈಗ ಸಂಘಪರಿವಾರ ಮತ್ತು ಬಿಜೆಪಿಯ ಧಾರ್ಮಿಕ ಧ್ರುವೀಕರಣದ ಭಾಷೆಯನ್ನು ಬಳಸಿಕೊಳ್ಳುತ್ತಿದ್ದಾರೆ; ಹಿಂದೂ ಸಮುದಾದಯದ ಮತಗಳನ್ನು ಸೆಳೆಯಲು ಟಿಎಂಸಿಯು ಅಲ್ಪಸಂಖ್ಯಾತರ ಓಲೈಕೆಯ ರಾಜಕೀಯ ಮಾಡುತ್ತಿದೆ ಎಂಬ ನಿರಾಧಾರದ ಅರೋಪಗಳನ್ನು ಮಾಡುತ್ತಿದ್ದಾರೆ.

ಸ್ಥಳೀಯ ಟಿಎಂಸಿ ನಾಯಕರ ವಿರುದ್ಧ ಜನರಿಗೆ ಇರುವ ಅಸಮಧಾನ ಸರಿಯಾಗಿಯೇ ಇದೆ. ಹಲವಾರು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಅವರು ಶಾಮೀಲಾಗಿದ್ದಾರೆ, ಸುಲಿಗೆಯಲ್ಲಿ ನಿರತರಾಗಿದ್ದಾರೆ ಎಂಬ ಆರೋಪಗಳಿವೆ. ಅಂಫನ್ ಚಂಡಮಾರುತ ಅಪ್ಪಳಿಸಿದ ನಂತರ ಅವರುಗಳು ಪರಿಹಾರದ ಧನವನ್ನು ವಿತರಿಸುವಲ್ಲಿ ವಿಫಲವಾಗಿದ್ದಾರೆ ಎಂಬ ಆರೋಪಗಳು ಸ್ಥಳೀಯ ಟಿಎಂಸಿ ನಾಯಕರ ಮೇಲಿವೆ. ಆದರೆ, ಮಮತಾ ಬ್ಯಾನರ್ಜಿ ಅವರನ್ನು ’ಬೇಗಂ’ ಎಂದು ಕರೆದು, ಟಿಎಂಸಿಗೆ ಮತ ಹಾಕುವುದು, ಪಾಕಿಸ್ತಾನಕ್ಕೆ ಮತ ಹಾಕಿದ್ದಕ್ಕೆ ಸಮ ಎಂಬ ವಿಷಕಾರಿ ಪ್ರಚಾರವು ನಂದಿಗ್ರಾಮದ ಸಾಮಾಜಿಕ ಡೈನಾಮಿಕ್ಸ್ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ.

2011ರ ಜನಗಣತಿಯ ಪ್ರಕಾರ, ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟಾರೆ 3,31,064 ಜನಸಂಖ್ಯೆ ಇದ್ದು, ಅದರಲ್ಲಿ 73.96% (2,44,867) ಹಿಂದೂಗಳಾಗಿದ್ದು, 25.88% ಜನರು ಮುಸ್ಲಿಮ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಪರಿಶಿಷ್ಟ ಜಾತಿಗಳ ಜನರ ಪ್ರಮಾಣ 16.46 ರಷ್ಟಿದೆ. ಯೋಗಿ ಆದಿತ್ಯನಾಥ, ಸ್ಮೃತಿ ಇರಾನಿಯಂತಹ ವ್ಯಕ್ತಿಗಳು ಪದೇಪದೇ ಬಂಗಾಳಕ್ಕೆ ಬಂದು ಹಿಂದುತ್ವದ ದ್ವೇಷ ಸಿದ್ಧಾಂತ ಮತ್ತು ಕಾರ್ಪೊರೇಟ್ ಪರ ನೀತಿಗಳ ಪ್ರಚಾರವನ್ನು ಮುಂದುವರೆಸುತ್ತಿರುವುದರೊಂದಿಗೆ, ಈ ಭಾಗದಲ್ಲಿ ಹಿಂದೂ ಮುಸ್ಲಿಂ ಸಮುದಾಯಗಳ ಸಹಬಾಳ್ವೆ ಮತ್ತು ಜೊತೆಯಲ್ಲಿ ಮಾಡಿದ ಹೋರಾಟದ ಇತಿಹಾಸವನ್ನು ಅಳಿಸಿಹಾಕುವ ಪ್ರಯತ್ನವನ್ನು ಮಾಡಲಾಗುತ್ತಿದೆ. ತಮ್ಮನ್ನು ’ಪಾಕಿಸ್ತಾನಿಗಳು’ ಎಂದು ಕರೆಯುತ್ತಿರುವುದರಿಂದ ಮುಸ್ಲಿಂ ಸಮುದಾಯದವರು ನೋವನ್ನು ವ್ಯಕ್ತಪಡಿಸಿದ್ದಾರೆ. ಇವರೆಲ್ಲರೂ ದಶಕಗಳಿಂದ ಶಾಂತಿಯುತವಾಗಿ ನೆಲೆಸಿದ್ದರಿಂದ ಇಂತಹ ಉಗ್ರ ಕೋಮುವಾದಿ ರಾಜಕೀಯ ಪರಿಚಯ ಇಲ್ಲಿಯ ಜನರಿಗೆ ಆಗಿದ್ದು ಇದೇ ಮೊದಲು.

ನಂದಿಗ್ರಾಮದಲ್ಲಿ ಇಬ್ಬರು ಹೆವಿವೇಟ್ ಅಭ್ಯರ್ಥಿಗಳಿರುವುದರಿಂದ ಹಾಗೂ ಕೋಮುದ್ವೇಷ ಹೊಗೆಯಾಡುತ್ತಿರುವ ಕಾರಣದಿಂದ ಮಾಧ್ಯಮಗಳಲ್ಲಿ ಬಹಳಷ್ಟು ಚರ್ಚೆಯಾಗುತ್ತಿದೆ. ಇದೇ ನಂದಿಗ್ರಾಮವು 2007ರಲ್ಲಿ ಒಂದು ಪ್ರಬಲ ಹೋರಾಟವನ್ನು ಕಂಡಿತ್ತು. ಇಂಡೋನೇಷಿಯಾದ ಸಲೀಮ್ ಗ್ರೂಪ್‌ನ ಕೆಮಿಕಲ್ ಹಬ್‌ಗಾಗಿ ಆಗಿನ ಸಿಪಿಐ(ಎಂ) ಸರಕಾರದ ಬಲವಂತದ ಭೂಸ್ವಾಧೀನಕ್ಕೆ ಮುಂದಾಗಿತ್ತು. ಈ ಕ್ರಮದ ವಿರುದ್ಧ ದೊಡ್ಡ ಹೋರಾಟ ನಡೆದಿತ್ತು. ಆ ಹೋರಾಟದಲ್ಲಿ ಸರಕಾರದ ಕ್ರಮಗಳಿಗೆ ಹಿಂದೂ ಮತ್ತು ಮುಸ್ಲಿಂ ಎರಡೂ ಸಮುದಾಯದ ಜನರು ಜೀವ ಕಳೆದುಕೊಂಡಿದ್ದರು ಮತ್ತು ಒಟ್ಟಿಗೆ ಗಟ್ಟಿಯಾಗಿ ನಿಂತು ಹೋರಾಟ ಮಾಡಿದ್ದರು.

ಆದರೆ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಈ ರೈತ ಹೋರಾಟದ ಕಥಾನಕ ಸಂಪೂರ್ಣವಾಗಿ ಕಾಣೆಯಾಗಿದೆ. ಮಮತಾ ಬ್ಯಾನರ್ಜಿ ಮತ್ತು ಸುವೇಂದು ಅಧಿಕಾರಿಯ ನಡುವಿನ ಜಗಳಗಳನ್ನೇ ತೋರಿಸುತ್ತಿದ್ದಾರೆ. ಚುನಾವಣೆಗೆ ಕೆಲವೇ ದಿನಗಳ ಮುನ್ನ ಮಮತಾ ಬ್ಯಾನರ್ಜಿ ಅವರು 2007ರಲ್ಲಿ ನಂದಿಗ್ರಾಮದಲ್ಲಿ ಆದ ಹಿಂಸಾಚಾರಕ್ಕೆ (ರೈತರ ಮೇಲೆ ಪೊಲೀಸರಿಂದ ಆದ ಗೋಲಿಬಾರ್) ಆಗಿನ ಸರಕಾರದೊಂದಿಗೆ ಸುವೇಂದು ಅಧಿಕಾರಿ ಕೂಡ ಜವಾಬ್ದಾರರಾಗಿದ್ದಾರೆ ಎಂದು ಆರೋಪಿಸಿದರು. ಇದನ್ನೇ ಸಿಪಿಐಎಂ ಕಾರ್ಯಕರ್ತರು ಮತ್ತು ಎಡ ಪಕ್ಷದೊಂದಿಗೆ ಸಹಾನುಭೂತಿ ಹೊಂದಿದವರು ಉಪಯೋಗಿಸಿಕೊಂಡು, ಆ ಇಡೀ ಆಂದೋಲನ ಸರಕಾರದ ವಿರುದ್ಧ ಒಂದು ಪಿತೂರಿಯಾಗಿತ್ತು ಎಂದು ಹೇಳುತ್ತಿದ್ದಾರೆ. ಆಗ ತಾವು ಕೈಗೊಂಡಿದ್ದ ತಪ್ಪಿನ ಕ್ರಮಗಳು ಹಾಗೂ ಜನರ ಮೇಲೆ ತಮ್ಮ ಕಾರ್ಯಕರ್ತರು ನಡೆಸಿದ್ದ ಹಿಂಸಾಚಾರದ ಆರೋಪಗಳಿಂದ ಮುಕ್ತರಾಗಲು ಪ್ರಯತ್ನಿಸುತ್ತಿದ್ದಾರೆ. 2007ರಲ್ಲಿ ಅಲ್ಲಿನ ಹಳ್ಳಿಗಳ ಜನರು ಭೂಮಿ ಉಚ್ಛೇಡ್ ಪ್ರತಿರೋಧ್ ಕಮಿಟಿ (ಕಮಿಟಿ ಅಗೇನ್ಸ್ಟ್ ಲ್ಯಾಂಡ್ ಎವಿಕ್ಷನ್ಸ್) ಎಂಬ ಸಮಿತಿಯನ್ನು ಸ್ಥಾಪಿಸಿದ್ದರು. ಅದರಲ್ಲಿ, ಅನೇಕ ಎಡ ಪಂಥೀಯ ಗುಂಪುಗಳಿಗೆ ಸೇರಿದ ಜನರೂ ಇದ್ದರು. ಅವರೆಲ್ಲಾ ಒಗ್ಗೂಡಿ ತಮ್ಮ ಕೃಷಿ ಭೂಮಿಯನ್ನು ಉಳಿಸಿಕೊಳ್ಳುವ ಸಲುವಾಗಿ ಕಾರ್ಪೊರೆಟ್ ವಿರೋಧಿ ಹೋರಾಟವನ್ನು ಹಮ್ಮಿಕೊಂಡಿದ್ದರು, 2007ರ ಮಾರ್ಚ್ 14 ರಂದು ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ 14 ಜನರು ಪ್ರಾಣತೆತ್ತರು ಹಾಗೂ ಅನೇಕ ಮಹಿಳೆಯರ ಮೇಲೆ ಬಲಾತ್ಕಾರದ ಮತ್ತು ಅನೇಕರು ಕಾಣೆಯಾದ ಸುದ್ದಿಗಳೂ ಇವೆ.

ನಂದಿಗ್ರಾಮದ ಪ್ರತಿರೋಧ ಶುರುವಾಗುವುದಕ್ಕೂ ಮುನ್ನ 2006ರಲ್ಲಿ ಟಾಟಾದ ನ್ಯಾನೊ ಕಾರಿನ ಕಾರ್ಖಾನೆಯ ಸಲುವಾಗಿ ಕೃಷಿಭೂಮಿಯನ್ನು ಸ್ವಾಧೀನಗೊಳಿಸುವ ವಿರುದ್ಧ ಸಿಂಗೂರಿನಲ್ಲಿಯೂ ರೈತರ ಆಂದೋಲನ ನಡೆದಿತ್ತು. ರಾಜ್ಯದ ಆರ್ಥಿಕತೆಯನ್ನು ಕೈಗಾರೀಕರಣಗೊಳಿಸಲು ಹಾಗೂ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಎಸ್‌ಈಜೆಡ್‌ಗಳನ್ನು ಸೃಷ್ಟಿಸಬೇಕೆಂದು ತೀರ್ಮಾನಿಸಿತ್ತು. ಎಸ್‌ಈಜೆಡ್ ಎಂದರೆ ವಿದೇಶಿ ವ್ಯಾಪಾರವನ್ನು ಪ್ರೋತ್ಸಾಹಿಸಲು ಮತ್ತು ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಸ್ಥಾಪಿಸಲಾದ ಒಂದು ಕಮರ್ಷಿಯಲ್ ಪ್ರದೇಶ. ಈ ಎಸ್‌ಈಜೆಡ್‌ಗಳು ಕೈಗಾರಿಕೋದ್ಯಮಿಗಳಿಗೆ 100% ತೆರಿಗೆ ವಿನಾಯಿತಿ, ಕಟ್ಟುನಿಟ್ಟಿನ ಕಾರ್ಮಿಕ ಕಾನೂನುಗಳ ಸಡಿಲಿಕೆ ಮತ್ತು ರಾಜ್ಯ ಸರಕಾರಗಳ ಹಸ್ತಕ್ಷೇಪ ಇಲ್ಲದಿರುವುದನ್ನು ಖಾತ್ರಿಪಡಿಸುತ್ತವೆ. 1991ರಲ್ಲಿ ಪಿ.ವಿ. ನರಸಿಂಹರಾವ್ ಸರಕಾರವು ಬಂದ ನಂತರ ನವ ಉದಾರವಾದಿ ಆರ್ಥಿಕ ನೀತಿಗಳನ್ನು ಅಳವಡಿಸಿಕೊಳ್ಳಲಾಯಿತು. ಸಾರ್ವಜನಿಕ ವಲಯವನ್ನು ಖಾಸಗೀಕರಣಗೊಳಿಸುವುದು, ತೆರಿಗೆ ಕಡಿತ, ಮಾರುಕಟ್ಟೆಯ ಮೇಲಿದ್ದ ನಿಯಂತ್ರಣವನ್ನು ಸಡಿಲಗೊಳಿಸುವುದು ಹಾಗೂ ಮುಕ್ತ ವ್ಯಾಪಾರವನ್ನು ಖಾತ್ರಿಪಡಿಸುವುದು ಈ ಹೊಸ ನೀತಿಯ ಭಾಗವಿದ್ದವು. ಈ ನವ ಉದಾರವಾದಿ ಬಂಡವಾಳಶಾಹಿ ವ್ಯವಸ್ಥೆ ಮತ್ತು ವಸಾಹತುಶಾಹಿ ಜಾಗತೀಕರಣದ ನೇರ ಪರಿಣಾಮವೇ ಎಸ್‌ಈಜೆಡ್.

ಬಂಗಾಳದಲ್ಲಷ್ಟೇ ಅಲ್ಲದೇ, ಒರಿಸ್ಸಾದ ಕಳಿಂಗನಗರ್, ಮಹಾರಾಷ್ಟ್ರದ ರಾಯಗಢ, ಗೋವಾ ಹಾಗೂ ಆಂಧ್ರಪ್ರದೇಶದಲ್ಲೂ ಸರಕಾರಗಳು ಎಸ್‌ಈಜೆಡ್‌ಗಳನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಿದಾಗ ತಮ್ಮ ಭೂಮಿ, ನೀರು, ಅರಣ್ಯ ಮತ್ತು ಜೀವನೋಪಾಯವನ್ನು ಉಳಿಸಿಕೊಂಡು ರಕ್ಷಿಸಿಕೊಳ್ಳಲು ಜನರು ತೀವ್ರವಾಗಿ ಪ್ರತಿಭಟಿಸಿದ್ದರು. ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸಲು ವಿಫಲಗೊಂಡದ್ದಲ್ಲದೆ, ತಮ್ಮ ಫಲವತ್ತಾದ ಭೂಮಿಯನ್ನು ಕಳೆದುಕೊಳ್ಳುವಂತೆ ಮಾಡಿ, ಕಾರ್ಮಿಕರನ್ನು ಶೋಷಣೆಗೊಳಪಡಿಸುವ ಅಭಿವೃದ್ಧಿಯ ನವ ಉದಾರವಾದಿ ಮಾದರಿಯನ್ನು ಅಳವಡಿಸಿಕೊಂಡಿತ್ತು ಎಂಬ ಕಾರಣಕ್ಕಾಗಿ ಸಿಪಿಐಎಂ ಅನ್ನು ಟೀಕಿಸಲಾಗಿದೆ. 2011ರಲ್ಲಿ ಸಿಪಿಐಎಂನ ಐತಿಹಾಸಿಕ ಸೋಲಿನಲ್ಲಿ ಟಿಎಂಸಿ ಮೊದಲ ಬಾರಿ ಮತಗಳನ್ನು ತನ್ನೆಡೆ ಸೆಳೆಯಲು ಸಫಲವಾಗಿತ್ತು. ಈ ನಿಟ್ಟಿನಲ್ಲಿ 14 ಜನರು ಹುತಾತ್ಮರಾಗಿದ್ದನ್ನು ಮತ್ತು ರೈತರ ಪ್ರತಿರೋಧವನ್ನು ಒಂದು ’ಪಿತೂರಿ’ ಎಂದು ಕರೆಯುವುದು ತಪ್ಪು.

ಹಾಗಾಗಿ, ಈಗ ಕಾರ್ಪೊರೆಟ್ ಪರ ಕೃಷಿ ಕಾನೂನುಗಳ ವಿರುದ್ಧ ಹೋರಾಟ ನಡೆಸುತ್ತಿರುವ ಜಂಟಿ ವೇದಿಕೆಯಾದ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರು ಬಂಗಾಳಕ್ಕೆ ಬಂದು ನಂದಿಗ್ರಾಮಕ್ಕೆ ಭೇಟಿ ನೀಡಿರುವುದು ಅತ್ಯಂತ ಗಮನಾರ್ಹವಾಗಿದೆ. ನಂದಿಗ್ರಾಮದ ಆಂದೋಲನದ ಭಾಗವಾಗಿದ್ದ ಮೇಧಾ ಪಾಟ್ಕರ್ ಮತ್ತು ರೈತ ಹೋರಾಟಗಾರ ರಾಕೇಶ್ ಟಿಕಾಯತ್ ಅವರುಗಳು ನಂದಿಗ್ರಾಮದಲ್ಲಿ ನಡೆದ ಮಹಾಪಂಚಾಯತ್‌ನಲ್ಲಿ ಭಾಗವಹಿಸಿ ಬಿಜೆಪಿಗೆ ಒಂದೂ ಮತವನ್ನೂ ನೀಡಬಾರದು ಎಂದು ಮನವಿ ಮಾಡಿದ್ದಾರೆ. ಮೇಧಾ ಪಾಟ್ಕರ್ ಅವರು ಸುವೇಂದು ಅಧಿಕಾರಿಯ ಸ್ವಕೇಂದ್ರಿತ ರಾಜಕೀಯವನ್ನು ಕಟುವಾಗಿ ಟೀಕಿಸಿದ್ದಾರೆ ಹಾಗೂ ಬಿಜೆಪಿಯ ಕೋಮುವಾದಿ ರಾಜಕೀಯದ ವಿರುದ್ಧ ಒಗ್ಗೂಡಿ 2007ರಲ್ಲಿ ಹೇಗೆ ಒಂದು ಭ್ರಾತೃತ್ವವನ್ನು ರಚಿಸಿದ್ದರೋ, ಅದೇ ರೀತಿ ಒಗ್ಗಟ್ಟಾಗಬೇಕೆಂದು ಕರೆ ನೀಡಿದ್ದಾರೆ.

ಈ ನಿಟ್ಟಿನಲ್ಲಿ ನಂದಿಗ್ರಾಮದ ಚುನಾವಣೆ ಪಶ್ಚಿಮ ಬಂಗಾಳದ ಚುನಾವಣೆಯ ಕೇಂದ್ರಬಿಂದುವಾಗಿದೆ ಎಂದರೂ ತಪ್ಪಾಗಲಾರದು. ಇವೆಲ್ಲವಕ್ಕೂ ಮೇ 2ರಂದು ಉತ್ತರ ಸಿಗಲಿದೆ.

(ಕನ್ನಡಕ್ಕೆ): ರಾಜಶೇಖರ್ ಅಕ್ಕಿ

ಇಂದ್ರಾಣಿ ಪಾಲ್

ಇಂದ್ರಾಣಿ ಪಾಲ್
ಪಶ್ಚಿಮ ಬಂಗಾಳದ ಯುವ ಪತ್ರಕರ್ತೆ. ಬೆಂಗಾಳದ ಎಡಪಂಥೀಯ ವಿದ್ಯಾರ್ಥಿ ಸಂಘಟನೆಯ ಭಾಗವೂ ಆಗಿದ್ದಾರೆ.


ಇದನ್ನೂ ಓದಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ: ಹಳೆಯ ವರಸೆ; ಹೊಸ ಪಾತ್ರಧಾರಿಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...