Homeಮುಖಪುಟವಿರೋಧಾಭಾಸಗಳ ಜಗತ್ತಿನಲ್ಲಿ ಧಿಕ್ಕರಿಸಬೇಕಿದೆ ಶ್ರೇಷ್ಠತೆಯ ವ್ಯಸನ : ನಟರಾಜು ವಿ.

ವಿರೋಧಾಭಾಸಗಳ ಜಗತ್ತಿನಲ್ಲಿ ಧಿಕ್ಕರಿಸಬೇಕಿದೆ ಶ್ರೇಷ್ಠತೆಯ ವ್ಯಸನ : ನಟರಾಜು ವಿ.

- Advertisement -
- Advertisement -

ಕನ್ನಡದ ಪ್ರತಿಭಾನ್ವಿತ ಪತ್ರಕರ್ತರು -ಅಂಕಣಕಾರರಲ್ಲೊಬ್ಬರಾದ ನಟರಾಜು.ವಿ ಅವರು ತಣ್ಣನೆಯ ಶೈಲಿಯಲ್ಲೇ ಕಟುಸತ್ಯಗಳನ್ನು ಬಿಡಿಸಿಡುವ ಬರಹಗಾರರು. ಸಾಮಾಜಿಕ ರಾಜಕೀಯ ವಿಶ್ಲೇಷಣೆ, ಸಮಕಾಲೀನ ವಿದ್ಯಮಾನಗಳ ಕುರಿತ ಅವರ ಅಂಕಣ ‘ಪಠ್ಯ – ಪ್ರಮಾಣ’ ಕನ್ನಡಪ್ರಭದಲ್ಲಿ ಪ್ರಕಟವಾಗಿತ್ತು. ಟೈಮ್ಸ್ ಆಫ್ ಇಂಡಿಯಾ, ವಿಜಯನೆಕ್ಸ್ಟ್ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕಳೆದ 15 ವರ್ಷಗಳಿಂದ ಕೆಲಸ ಮಾಡಿದ ಅನುಭವವಿರುವ ಇವರು ‘ದಿ ಸ್ಟೇಟ್’ ನಲ್ಲಿ ಸೀನಿಯರ್ ಅಸಿಸ್ಟೆಂಟ್ ಎಡಿಟರ್ ಆಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಟೆಕ್ ಕನ್ನಡ ವೆಬ್‍ಜಾಲದ ‘ತಂತ್ರ ತಾಂಡವ’ ಅಂಕಣದ ಜೊತೆಗೆ, ನಟರಾಜುರವರು ನ್ಯಾಯಪಥ ಪತ್ರಿಕೆಯಲ್ಲಿ ಪ್ರಮುಖ ವಿಶ್ಲೇಷಕ ಬರಹಗಳನ್ನು ಬರೆಯುತ್ತಿದ್ದಾರೆ.

ಈ ವಿಶೇಷ ಸಂಚಿಕೆಯನ್ನು ಕೈಯಲ್ಲಿ ಹಿಡಿದು ಕಣ್ಣಾಡಿಸುತ್ತಿರುವ ಈ ಹೊತ್ತಿನಲ್ಲಿ ಬಹುಶಃ ನಿಮಗೆ ಮೇಲುನೋಟಕ್ಕೇ ಸಮಕಾಲೀನ ಭಾರತೀಯ ಸಮಾಜ ಎದುರಿಸುತ್ತಿರುವ ಹತ್ತು ಹಲವು ತಲ್ಲಣಗಳು, ಪ್ರಜಾಪ್ರಭುತ್ವ, ಸಂವಿಧಾನಗಳಿಗೆ ಎದುರಾಗಿರುವ ಗಂಭೀರ ಸವಾಲುಗಳ ಕುರಿತಾದ ತೀವ್ರ ಕಾಳಜಿ ಈ ಬರಹಗಳಲ್ಲಿ ಕಾಣಬಹುದು. ಇದಾಗಲೇ ಜಾತಿವ್ಯವಸ್ಥೆಯಲ್ಲಿ ಸಿಲುಕಿ ಶತಶತಮಾನಗಳಿಂದ ಹೈರಾಣಾಗಿಹೋಗಿರುವ ಭಾರತೀಯ ಸಮಾಜದ ಸೂಕ್ಷ್ಮ ನೇಯ್ಗೆಗಳು ಇಂದು ಮೂಲಭೂತವಾದದ ತೀವ್ರ ಹೆಚ್ಚಳದೊಂದಿಗೆ ಮತ್ತೂ ಗಂಭೀರವಾಗಿ ಘಾಸಿಗೊಂಡಿವೆ. ನಮ್ಮ ಸುತ್ತಣ ಸಮಾಜದ ಆಲೋಚನೆಗಳನ್ನು ಮೂಲಭೂತವಾದವು ವ್ಯಾಪಿಸಿಕೊಳ್ಳುತ್ತಿರುವ ಪರಿ, ಪಡೆಯುತ್ತಿರುವ ರೂಪ, ಭಾಷೆ ಎಲ್ಲ ಪ್ರಜ್ಞಾವಂತರ ಆತಂಕಕ್ಕೆ ಕಾರಣವಾಗಿದೆ. ಇಲ್ಲಿನ ಬಹುತೇಕ ಲೇಖನಗಳು ವಿವಿಧ ಆಯಾಮಗಳಿಂದ ಈ ಸವಾಲುಗಳನ್ನು ಸಂಕೀರ್ಣವಾಗಿಯೂ, ಚಿಕಿತ್ಸಕವಾಗಿಯೂ ಎದುರುಗೊಂಡಿವೆ. ಪ್ರಸಕ್ತ ಲೇಖನ ಇದರಾಚೆಗಿನ ಕೆಲ ಸಂದಿಗ್ಧಗಳು, ಸವಾಲುಗಳ ಬಗ್ಗೆ ಗಮನ ಹರಿಸಲಿದೆ. ಆದರ್ಶ, ವಾಸ್ತವ, ಬೂಟಾಟಿಕೆ, ನೈತಿಕ ವಿರೋಧಾಭಾಸಗಳ ಗೋಜಲುಗಳ ಸುತ್ತಲಿನ ಚರ್ಚೆ ಈ ಲೇಖನದ ತಿರುಳು.

ಇಂದು ಸಾಮಾಜಿಕ ಕಾರ್ಯಕರ್ತರು, ಸಮಾಜಮುಖಿ ಚಿಂತಕರು, ಪ್ರಜ್ಞಾವಂತರು, ಪತ್ರಕರ್ತರೆಲ್ಲರನ್ನೂ ಒಂದಿಲ್ಲೊಂದು ಬಗೆಯಲ್ಲಿ ನೈತಿಕ ತಳಮಳಗಳು ಬಾಧಿಸುತ್ತಿವೆ. ಮೌಲ್ಯಗಳ ಹೆಸರಿನಲ್ಲಿ ತಾವು ಕಟ್ಟಿಕೊಂಡಿದ್ದ ಕೋಟೆ ಎಲ್ಲ ದಿಕ್ಕಿನಲ್ಲಿಯೂ ಕುಸಿದು ಬೀಳುತ್ತಿರುವುದು ಕಣ್ಣುಮುಚ್ಚಿದರೂ ಗೋಚರಿಸುತ್ತಿದೆ. ಈ ಸತ್ಯಕ್ಕೆ ಮುಖಾಮುಖಿಯಾಗುವುದೋ ಅಥವಾ ಕೋಟೆ ಕುಸಿದರೇನು ನಮ್ಮ ಸುತ್ತ ನಾವೇ ಒಂದು ಗೂಡು ಕಟ್ಟಿಕೊಂಡು ಚಿಟ್ಟೆಯಾಗಿ ಪರಿವರ್ತನೆ ಹೊಂದೋಣ, ಯಾರ ಜಪ್ತಿಗೂ ಸಿಗದೆ ಹಾರಿಬಿಡೋಣ ಎಂದು ರಮ್ಯವಾಗಿ ಉತ್ತರಿಸುವುದೋ ತಿಳಿಯುತ್ತಿಲ್ಲ. ನಾವು ನಿಂತಿರುವ ನೆಲದ ಮೇಲೆಯೇ ಸಂಶಯವೇಳುತ್ತಿರುವ ಈ ಹೊತ್ತಿನಲ್ಲಿ ತಲೆಯನ್ನು ನೆಲದಲ್ಲಿ ಹುದುಗಿಸಿಕೊಂಡು ಎಲ್ಲದಕ್ಕೂ ಕಣ್ಣುಮುಚ್ಚಿಕೊಂಡು ಬಿಡುವುದು ಸಂವೇದನಾಶೀಲರ ಆಯ್ಕೆಯೂ ಅಲ್ಲ.

ಕಪ್ಪುಬಿಳುಪು ಇವೆರಡನ್ನು ಮಾತ್ರವೇ ಗುರುತಿಸಲು, ಬೇರ್ಪಡಿಸಲಷ್ಟೇ ಕಲಿತಿರುವವರಿಗೆ ಜಗವೆಲ್ಲಾ ಕಂದು ಬಣ್ಣದಲ್ಲೇ ಇರುವಾಗ ಅದನ್ನು ಹೇಗೆ ವರ್ಗೀಕರಿಸುವುದು ತಿಳಿಯದಾಗಿದೆ. ಮಾಧ್ಯಮವೂ ಸೇರಿದಂತೆ ಇಂದು ಎಲ್ಲ ಉದ್ಯಮಗಳೂ ಬಂಡವಾಳಶಾಹಿಗಳ ಹಿಡಿತದಲ್ಲಿವೆ. ಒಂದಿಲ್ಲೊಂದು ರೀತಿಯಲ್ಲಿ ಸರ್ಕಾರ, ಅಧಿಕಾರಸ್ಥರ ಸಹಾಯ, ಸಹಕಾರಗಳನ್ನು ಅವಲಂಬಿಸಿವೆ. ಈ ಅವಲಂಬನೆ ಕೆಲವೆಡೆ ಅಲ್ಪವೇ ಇರಬಹುದು ಮತ್ತೆ ಹಲವೆಡೆ ಅವಕಾಶವಾದಿತನ, ವಶೀಲಿಬಾಜಿಗಾಗಿಯೇ ಈ ಉದ್ಯಮಗಳು ಆರಂಭವಾಗಿಯೂ ಇರಬಹುದು.

ಮೌಲ್ಯಗಳೆನ್ನುವುದು ಇಂದು ತುಲನಾತ್ಮಕವಾಗಿ ನೋಡಬಹುದಾದ ವಿಷಯವಾಗಿದೆಯೇ ಹೊರತು ಪಾವಿತ್ರ್ಯದ ವಿಷಯವಾಗಿ ಉಳಿದಿಲ್ಲ. ಅವರಿಗಿಂತ ಇವರು ಉತ್ತಮ, ಆ ಸಂಸ್ಥೆಗಿಂತ ಈ ಸಂಸ್ಥೆ ಉತ್ತಮ ಎನ್ನಬಹುದೇ ಹೊರತು ಪರಮಪವಿತ್ರವೂ, ಅಗ್ನಿದಿವ್ಯವೂ ಆದ ಸಾಂಸ್ಥಿಕ ರಚನೆಗಳು ಸಾರ್ವಜನಿಕವಾಗಿ ಕಾಣೆಯಾಗಿವೆ. ಇದಕ್ಕೆ ಸರ್ಕಾರಿ, ಖಾಸಗಿ ಎನ್ನುವ ಭೇದಭಾವವಿಲ್ಲ. ಪ್ರಾಮಾಣಿಕತೆಯಿಂದ, ಶ್ರದ್ಧೆಯಿಂದ ತಾನು ದುಡಿದು ತಿಂದಿರುವುದಾಗಿ ಯಾರೇ ಹೇಳಿದರೂ ಆ ದುಡಿಮೆಯನ್ನು ಬಳಸಿಕೊಂಡ ಸಂಸ್ಥೆಗಳು ಸಂಬಳಕ್ಕಾಗಿ ತೆತ್ತ ಹಣದ ಹರಿವು ಎಲ್ಲಿಯದು, ಆ ಸಂಸ್ಥೆಗಳ ವ್ಯಾವಹಾರಿಕ ಚೌಕಟ್ಟಿನ ಸ್ವರೂಪವೇನು ಎನ್ನುವುದನ್ನು ಅರಿತರೆ ಭ್ರಷ್ಟತೆ ಎನ್ನುವುದು ನಮ್ಮೆಲ್ಲರನ್ನೂ ಒಂದಿಲ್ಲೊಂದು ಹಂತದಲ್ಲಿ ತಾಕಿಯೂ ಅರಿವಿಗೇ ಬಾರದೆ ಉಳಿದಿರುವುದು ಗಮನಕ್ಕೆ ಬರುತ್ತದೆ.

ಮಾರುಕಟ್ಟೆ ಎನ್ನುವುದು ಸರ್ವವ್ಯಾಪಿಯಾಗಿರುವ ಈ ಯುಗದಲ್ಲಿ ಅರ್ಥವ್ಯವಸ್ಥೆಯ ಸ್ವರೂಪ ಸಂಕೀರ್ಣವೂ, ಪರಸ್ಪರ ವ್ಯಾಪಕವಾಗಿ ಅವಲಂಬಿತವೂ ಆಗಿರುವಂಥದ್ದು. ಮಾರುಕಟ್ಟೆ ಆಧರಿತ ಜೀವನ ವಿಧಾನದ ಈ ದಿನಗಳಲ್ಲಿ ಹಣವೆನ್ನುವುದು ಎಲ್ಲರ ಬದುಕಿನ ಕೇಂದ್ರದಲ್ಲಿದೆ. ಇದಕ್ಕೆ ನಗರ ಹಾಗೂ ಗ್ರಾಮೀಣ ಎನ್ನುವ ವ್ಯತ್ಯಾಸಗಳಿಲ್ಲ, ಪ್ರಮಾಣದಲ್ಲಿ ಕೊಂಚಮಟ್ಟಿಗಿನ ಅಂತರವಿರಬಹುದು ಅಷ್ಟೇ. ಹೀಗೆ ಹಣದ ಹರಿವು ಮತ್ತು ಅದರ ಅವಲಂಬನೆಗಳು ಹೆಚ್ಚಾದಂತೆಲ್ಲಾ ವ್ಯವಸ್ಥೆಯಲ್ಲಿ ಕಪ್ಪುಬಿಳುಪು ಎನ್ನುವ ವರ್ಗೀಕರಣವೇ ಕ್ರಮೇಣ ಅಪ್ರಸ್ತುತವೂ, ಗೊಂದಲಮಯವೂ ಆಗತೊಡಗುತ್ತದೆ. ಹಣದ ಮೌಲ್ಯವು ಪೂರ್ವನಿರ್ಧರಿತವಾಗಿದ್ದು ಅದು ತನ್ನ ಮೌಲ್ಯವನ್ನು ತನ್ನನ್ನು ಗಳಿಸಿದ, ದುಡಿದ ಮಾರ್ಗದಿಂದಾಗಿ ಪಡೆಯುವುದಿಲ್ಲ. ಶ್ರಮಿಕರು, ಜ್ಞಾನಿಗಳು, ಪ್ರತಿಭಾವಂತರು, ವಯೋವೃದ್ಧರು, ವಿಶೇಷಚೇತನರು ಕಷ್ಟಪಟ್ಟು ದುಡಿದ ಹಣಕ್ಕೂ, ಭ್ರಷ್ಟವೂ, ಅನೈತಿಕವೂ, ವಾಮಮಾರ್ಗದಿಂದಲೂ ಗಳಿಸಿದ ಹಣಕ್ಕೂ ಮೌಲ್ಯದಲ್ಲಿ ಯಾವುದೇ ವ್ಯತ್ಯಾಸಗಳಿರುವುದಿಲ್ಲ. ಇದು ಆಧುನಿಕ ಅರ್ಥವ್ಯವಸ್ಥೆಯಲ್ಲಿನ ದೊಡ್ಡ ನ್ಯೂನತೆ. ಹಣವೆನ್ನುವುದು ಗುಣಗ್ರಾಹಿಯಾಗಿಲ್ಲ. ಜಾತಿ, ಧರ್ಮ, ಜನಾಂಗ, ಬಣ್ಣಗಳ ಆಧಾರದಲ್ಲಿ ಶ್ರೇಷ್ಠತೆಯ ವ್ಯಸನ ಮೆರೆಯುವ ನಮ್ಮ ನಾಗರಿಕತೆಗಳು, ಇದಕ್ಕೆ ಬದಲಾಗಿ ಮೌಲ್ಯ, ನೈತಿಕತೆಯ ಹೆಸರಿನಲ್ಲಿ ಶ್ರೇಷ್ಠತೆಯ ವ್ಯಸನ ಬೆಳೆಸಿಕೊಂಡಿದ್ದರೆ ಹಣಕ್ಕೆ ಗುಣಗ್ರಾಹಿಯಾಗುವ ಅಗತ್ಯ ಖಂಡಿತ ಬರುತ್ತಿತ್ತು. ಆದರೆ, ವಾಸ್ತವ ಹಾಗಿಲ್ಲ. ಹಣ ಇಂದು ನಮ್ಮೆಲ್ಲರ ಬದುಕಿನ ಕೇಂದ್ರದಲ್ಲಿದೆ, ನಮ್ಮೆಲ್ಲರ ಜೀವನಾವಶ್ಯಕತೆಗಳನ್ನು, ಬದುಕು, ಭವಿಷ್ಯವನ್ನು ನಿರ್ಧರಿಸುವ ಪ್ರಖರ ಮಾಧ್ಯಮವಾಗಿದೆ. ಹೀಗೆ ನಮ್ಮೆಲ್ಲರ ಬದುಕನ್ನು ನಿಯಂತ್ರಿಸುವ, ನಿರ್ಧರಿಸುವ ಹಣಕ್ಕೆ ನ್ಯಾಯನೀತಿಯ ಪರಿವೆಯೇ ಇಲ್ಲ! ಗುಣಕ್ಕೆ, ಮೌಲ್ಯಗಳಿಗೆ ಕುರುಡಾಗಿರುವ ಇಂತಹ ಹಣವನ್ನು ಕೇಂದ್ರದಲ್ಲಿರಿಸಿಕೊಂಡೇ ನವ ನಾಗರಿಕತೆಗಳು ಅಸ್ತಿತ್ವ ಕಟ್ಟಿಕೊಂಡಿವೆ. ದೇಶ, ಮಾರುಕಟ್ಟೆಗಳು ಉಸಿರಾಡುತ್ತಿವೆ. ಇಂದು ಇಡೀ ಜಾಗತಿಕ ಅರ್ಥವ್ಯವಸ್ಥೆಯವೆನ್ನುವುದು ಹೃದಯಹೀನವೂ, ಅಮಾನವೀಯವೂ ಆಗಿ ಪರಿವರ್ತಿತವಾಗಲು ಈ ಲೋಪವೇ ಕಾರಣ. ಈ ಸಂಕೀರ್ಣತೆಗಳನ್ನು ಅರಿಯದೆ ಭ್ರಷ್ಟಾಚಾರದ ಬಗ್ಗೆ ತೆಳುಗ್ರಹಿಕೆಯಲ್ಲಿ ಮಾತನಾಡುವುದು ಯಾವತ್ತೂ ಅಪಾಯಕಾರಿ.

ಇಷ್ಟೆಲ್ಲಾ ಹೇಳಲು ಕಾರಣ, ಇಂದು ಮಾನವೀಯ, ಜನಪರ, ಜನಮುಖಿ ಚಿಂತನೆಗಳುಳ್ಳವರಲ್ಲಿ ಯಾವ ವಿಚಾರಗಳಲ್ಲಿ ಒಮ್ಮತ ಮೂಡಬೇಕಿತ್ತೋ ಅದು ಸಾಧ್ಯವಾಗದೆ ಹೋಗಿರುವುದರಿಂದಾಗಿ. ಬಹುತೇಕ ಸಂದರ್ಭಗಳಲ್ಲಿ ಹಣದ ವಿಚಾರದಲ್ಲಿ ಕೆಲವೊಂದು ಸೀಮಿತ ಕಲ್ಪನೆಗಳಿಂದ ನಾವು ವ್ಯವಹರಿಸುವುದು ಇದಕ್ಕೆಲ್ಲಾ ಕಾರಣವಾಗುತ್ತದೆ. ಇಂದು ಸಮಾಜದ ಕೇಂದ್ರಕ್ಕೆ ಮತ್ತೆ ಮಾನವೀಯ ಮೌಲ್ಯಗಳನ್ನು ತರಬೇಕೆಂದರೆ ಗುಣಗ್ರಾಹಿಯಾಗಿಲ್ಲದ ಹಣದ ವಿಚಾರವಾಗಿ ಅತಿ ಎನಿಸುವಷ್ಟು ಪ್ರಾಮಾಣಿಕವಾಗಿಯೂ, ಕಟುವಾಗಿಯೂ ವರ್ತಿಸುವಂತೆ ಮಾಡಿರುವ ಸ್ಥಾಪಿತ ಮೌಲ್ಯಗಳ ಬಗ್ಗೆಯೇ ನಾವು ಸಂಶಯವನ್ನಿರಿಸಿಕೊಳ್ಳಬೇಕಿದೆ. ಈ ವಿಚಾರದಲ್ಲಿ ನಮ್ಮ ಚಿಂತನೆಗಳು ಹೆಚ್ಚು ಉದಾರವಾಗಬೇಕಿದೆ. ಉತ್ತಮ ಉದ್ದೇಶಗಳು, ಕೆಲಸಕ್ಕಾಗಿ ಹಣ ಹಾಗೂ ಶ್ರಮವನ್ನು ಹೇಗೆ ಒಗ್ಗೂಡಬೇಕು ಎನ್ನುವ ವಿಚಾರದಲ್ಲಿ ಶ್ರೇಷ್ಠತೆಯ ವ್ಯಸನಗಳಿಂದ ನಾವಿಂದು ಹೊರಬರಬೇಕಿದೆ. ಉತ್ತಮ ಉದ್ದೇಶ, ದೂರದರ್ಶಿತ್ವ, ಸಮತೆಯಲ್ಲಿ ನಂಬಿಕೆಯಿಟ್ಟವರನ್ನು ಅಧಿಕಾರದ ಕೇಂದ್ರಕ್ಕೆ ತರಲು ಲಾಬಿ ಮಾಡುವುದು, ಉತ್ತಮ ಧ್ಯೇಯೋದ್ದೇಶಗಳ ಸಾಕಾರಕ್ಕಾಗಿ ಸಂಪನ್ಮೂಲ ಸಂಗ್ರಹದ ವಿಚಾರದಲ್ಲಿ ಅವಾಸ್ತವವೂ, ಅಪ್ರಾಯೋಗಿಕವೂ ಆಗಿರದೆ ಸಮಾಜಕಂಟಕವಲ್ಲದ ಮಾರ್ಗಗಳ ಬಗ್ಗೆ ಪುನರ್ ಪರಿಶೀಲಿಸುವುದು ಇಂದಿನ ಅಗತ್ಯವಾಗಿದೆ. ಒಳಿತನ್ನು ಕೆಟ್ಟದ್ದರಿಂದ ಗೆಲ್ಲಿಸಲು ಸಾಧ್ಯವಿಲ್ಲ ಎನ್ನುವುದು ದಿಟ. ಹಾಗೆಂದು, ಒಳಿತನ್ನು ಒಳಿತಿನಿಂದಲೇ ಸೋಲಿಸಬಾರದು ಕೂಡ. ವಿಚಾರಶೀಲರಿಗೆ ಇವೆರಡರ ನಡುವೆ ಸಮತೋಲನ ಸಾಧಿಸುವುದು ಕಷ್ಟವಾಗಲಾರದು.

ಒಳಿತಿನ ಬೇರುಗಳು ಸಮಾಜದಲ್ಲಿ ಆಳವಾಗಬೇಕೆಂದರೆ, ಮೊದಲು ಉತ್ತಮರ ಪರವಾಗಿ ಪ್ರಜ್ಞಾವಂತರೆಲ್ಲರೂ ಸಕಾರಾತ್ಮಕವಾಗಿ ಲಾಬಿ ಮಾಡಬೇಕಿದೆ. ಸಜ್ಜನರ ಒಳ್ಳೆಯತನಕ್ಕೆ ಪ್ರಾಮಾಣಿಕತೆಯ ಬೇಡಿ, ಸಲಾಕೆಗಳನ್ನು ಹಾಕಿ, ವಸ್ತುನಿಷ್ಠತೆಯ ಲಕ್ಷ್ಮಣರೇಖೆಯನ್ನೆಳೆದು ಪಂಜರದಲ್ಲಿರಿಸಿ ಆ ಮೂಲಕ ಅಧಿಕಾರ ಕೇಂದ್ರಗಳಿಗೆ, ಆಯಕಟ್ಟಿನ ಸ್ಥಳಗಳಿಗೆ ಒತ್ತರಿಸಿಕೊಳ್ಳುವ ದುಷ್ಟರು, ಧನದಾಹಿಗಳು, ಅಯೋಗ್ಯರನ್ನು ದೂರವಿರಿಸಬೇಕಿದೆ. ಉತ್ತಮರು, ಪ್ರತಿಭಾವಂತರು, ಮಾನವೀಯ ಮೌಲ್ಯಗಳುಳ್ಳವರನ್ನು ಅಧಿಕಾರ ಹಾಗೂ ಸಂಪನ್ಮೂಲಗಳಿರುವೆಡೆ ಕೂರಿಸಿ ರಚನಾತ್ಮಕ ಹಾಗೂ ಮಾನವೀಯ ಕೆಲಸಗಳಿಗೆ ಹೆಚ್ಚೆಚ್ಚು ಶಕ್ತಿ, ಸಂಪನ್ಮೂಲಗಳನ್ನು ಹರಿಸಬೇಕಿದೆ. ಇದು ಸಾಧ್ಯವಾಗಬೇಕೆಂದರೆ ನಾವುಗಳು ಅವಾಸ್ತವ ನೆಲೆಗಳಲ್ಲಿ ರೂಢಿಸಿಕೊಂಡಿರುವ ಶ್ರೇಷ್ಠತೆಯ ವ್ಯಸನವನ್ನು ಬದಿಗಿರಿಸಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿವಾದಿತ ಎನ್‌ಸಿಇಆರ್‌ಟಿ ಪಠ್ಯಪುಸ್ತಕ ನಿಷೇಧಿಸಿದ ಸುಪ್ರೀಂ ಕೋರ್ಟ್

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಸಿದ್ದಪಡಿಸಿದ 8 ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿರುವ 'ನ್ಯಾಯಾಂಗದಲ್ಲಿನ ಭ್ರಷ್ಟಾಚಾರ' ಎಂಬ ಅಧ್ಯಾಯದ ಕುರಿತು ಸುಪ್ರೀಂ ಕೋರ್ಟ್ ಗುರುವಾರ (ಫೆ.26) ತೀವ್ರ ಅಸಮಾಧಾನ...

ಕ್ಯೂಬಾ ಜಲಪ್ರದೇಶ ಪ್ರವೇಶಿಸಿದ ಅಮೆರಿಕಾ ಮೂಲದ ಸ್ಪೀಡ್‌ಬೋಟ್ ಮೇಲೆ ಕ್ಯೂಬಾ ಪಡೆಗಳಿಂದ ಗುಂಡಿನದಾಳಿ, ನಾಲ್ವರು ಸಾವು 

ಕ್ಯೂಬಾ: ಬುಧವಾರ ಕ್ಯೂಬಾದ ಪ್ರಾದೇಶಿಕ ಜಲಪ್ರದೇಶವನ್ನು ಪ್ರವೇಶಿಸಿದ ಫ್ಲೋರಿಡಾ-ನೋಂದಾಯಿತ ಸ್ಪೀಡ್‌ಬೋಟ್‌ನ ಮೇಲೆ ಕ್ಯೂಬಾ ಭದ್ರತಾ ಪಡೆಗಳು ಗುಂಡು ಹಾರಿಸಿವೆ. ಈ ವೇಳೆ ಬೋಟ್ ನಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದು, ಆರು ಜನರು ಗಾಯಗೊಂಡರುವುದಾಗಿ ವರದಿಯಾಗಿದೆ....

ಬಾಲಕಿಯೊಂದಿಗೆ ಅನುಚಿತ ವರ್ತನೆ : ಸ್ವಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪ್ರಕರಣ ದಾಖಲು

ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪ ಮೇಲೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಮಹಲ್ ರೋಝಾದ ಸ್ವಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪ್ರಕರಣ ದಾಖಲಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಶಹಾಪುರ...

ಎಐ ಶೃಂಗಸಭೆ ಪ್ರತಿಭಟನೆ | ಆರೋಪಿಗಳ ಬಂಧನ ವೇಳೆ ಭಾರೀ ಹೈಡ್ರಾಮ : ದೆಹಲಿ ಪೊಲೀಸರನ್ನೇ ವಶಕ್ಕೆ ಪಡೆದ ಶಿಮ್ಲಾ ಪೊಲೀಸರು

ದೆಹಲಿಯ ಎಐ ಶೃಂಗಸಭೆಯಲ್ಲಿ ಅರೆಬೆತ್ತಲೆಯಾಗಿ ಪ್ರತಿಭಟಿಸಿದ ಯುವ ಕಾಂಗ್ರೆಸ್‌ ಕಾರ್ಯಕರ್ತರ ಬಂಧನ ವೇಳೆ ಭಾರೀ ಹೈಡ್ರಾಮ ನಡೆದಿದೆ. ಆರೋಪಿಗಳನ್ನು ಬಂಧಿಸಿ ಕರೆತರಲು ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಗೆ ತೆರಳಿದ್ದ ದೆಹಲಿ ಪೊಲೀಸರನ್ನು ಅಲ್ಲಿನ...

ಉತ್ತರ ಪ್ರದೇಶ| ಪೊಲೀಸರಿಂದ ಬೈಕ್ ಸೀಝ್‌; ಠಾಣೆ ಮುಂದೆ ಬೆಂಕಿ ಹಚ್ಚಿಕೊಂಡ ‘ಗಿಗ್’ ಕಾರ್ಮಿಕ

ಪೊಲೀಸರು ತನ್ನ ಬೈಕ್‌ ವಶಪಡಿಸಿಕೊಂಡ ನಂತರ 32 ವರ್ಷದ ಗಿಗ್ ಕಾರ್ಮಿಕನೊಬ್ಬ ಠಾಣೆಯ ಹೊರಗೆ ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಅಕ್ಷಯ್ ಕಶ್ಯಪ್ ಎಂದು ಗುರುತಿಸಲ್ಪಟ್ಟ ಯುವಕನಿಗೆ ದೇಹದ...

ಎಪ್‌ಸ್ಟೀನ್ ಫೈಲ್ಸ್ ನಲ್ಲಿ ಹೆಸರು ಪ್ರಸ್ತಾಪ; ಗೇಟ್ಸ್ ಫೌಂಡೇಶನ್ ಸಿಬ್ಬಂದಿಗೆ ಕ್ಷಮೆಯಾಚಿಸಿದ ಬಿಲ್ ಗೇಟ್ಸ್: ವರದಿ 

ನ್ಯೂಯಾರ್ಕ್: ಅಮೆರಿಕದ ತಂತ್ರಜ್ಞಾನ ಉದ್ಯಮಿ ಬಿಲ್ ಗೇಟ್ಸ್, ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೈನ್‌ನೊಂದಿಗಿನ ಹಳೆಯ ಸಂಪರ್ಕಕ್ಕಾಗಿ ಗೇಟ್ಸ್ ಫೌಂಡೇಶನ್ ಸಿಬ್ಬಂದಿಗೆ ಕ್ಷಮೆಯಾಚಿಸಿದ್ದಾರೆ ಎಂದು ವರದಿಯಾಗಿದೆ. ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಫೌಂಡೇಶನ್‌ನ ಟೌನ್...

ಕೆಎಸ್‌ಯು-ಐಯುಎಂಎಲ್ ಪ್ರತಿಭಟನೆಯಲ್ಲಿ ಘರ್ಷಣೆ; ಗಾಯಗೊಂಡ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್

ಕಣ್ಣೂರು ರೈಲ್ವೆ ನಿಲ್ದಾಣದಲ್ಲಿ ಬುಧವಾರ ಪೊಲೀಸರು ಮತ್ತು ಕೇರಳ ವಿದ್ಯಾರ್ಥಿ ಸಂಘ (ಕೆಎಸ್‌ಯು)-ಐಯುಎಂಎಲ್ ಯುವ ಘಟಕದ ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯಲ್ಲಿ ಆರೋಗ್ಯ ಸಚಿವೆ ವೀಣಾ ಜಾರ್ಜ್ ಕುತ್ತಿಗೆ ಮತ್ತು ಕೈಗೆ ಗಾಯಗಳಾಗಿದೆ. ಕಾಂಗ್ರೆಸ್-ಕೆಎಸ್‌ಯು...

ಉತ್ತರಾಖಂಡ| ದೇವಸ್ಥಾನದ ಸಮೀಪ ಖಾಲಿ ಜಾಗದಲ್ಲಿ ನಮಾಜ್; ವೃದ್ಧ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ

ಉತ್ತರಾಖಂಡದ ಜಗತ್ಪುರದ ಅತ್ರಿಯ ದೇವಸ್ಥಾನದ ಮುಂಭಾಗದಲ್ಲಿರುವ ಖಾಲಿ ಜಾಗದಲ್ಲಿ ನಮಾಜ್ ಮಾಡಿದ ನಂತರ ಶಾಹಿದ್ ಎಂದು ಗುರುತಿಸಲಾದ ವೃದ್ಧ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಧಾರ್ಮಿಕ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು...

ಮುಝಫ್ಫರ್‌ನಗರ ಗಲಭೆ ಪ್ರಕರಣ : 37 ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

ಉತ್ತರ ಪ್ರದೇಶದ ಮುಝಫ್ಫರ್‌ನಗರದ ನ್ಯಾಯಾಲಯ 2013ರ ಕೋಮು ಗಲಭೆಗೆ ಸಂಬಂಧಿಸಿದ ಎಂಟು ಜನರ ಹತ್ಯೆ ಪ್ರಕರಣದಲ್ಲಿ ಸಾಕ್ಷ್ಯಗಳ ಕೊರತೆಯನ್ನು ಉಲ್ಲೇಖಿಸಿ 37 ಆರೋಪಿಗಳನ್ನು ಮಂಗಳವಾರ (ಫೆ.25) ಖುಲಾಸೆಗೊಳಿಸಿದೆ ಎಂದು ವರದಿಯಾಗಿದೆ. ತೀರ್ಪು ಪ್ರಕಟಿಸಿದ ಹೆಚ್ಚುವರಿ...

ಇಸ್ರೇಲ್ ಸಂಸತ್ತಿನಲ್ಲಿ ಭಾಷಣದ ವೇಳೆ ಪ್ರಧಾನಿ ಮೋದಿ ಗಾಝಾ ನರಮೇಧ ಉಲ್ಲೇಖಿಸಲಿ : ಪ್ರಿಯಾಂಕಾ ಗಾಂಧಿ ಆಗ್ರಹ

ಇಸ್ರೇಲ್‌ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿನ ಸಂಸತ್ತಾದ ನೆಸೆಟ್ ಅನ್ನು ಉದ್ದೇಶಿಸಿ ಮಾತನಾಡುವಾಗ ಗಾಝಾ ನರಮೇಧವನ್ನು ಉಲ್ಲೇಖಿಸಿ ನ್ಯಾಯಕ್ಕಾಗಿ ಆಗ್ರಹಿಸಬೇಕು ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ವಯನಾಡ್ ಸಂಸದೆ ಪ್ರಿಯಾಂಕಾ...