ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಜೈಲುನಲ್ಲಿರುವ ಮಾಜಿ ವಿತ್ತ ಸಚಿವ ಪಿ.ಚಿದಂಬರಂಗೆ ಇಂದೂ ಸಹ ಜಾಮೀನು ಸಿಗಲಿಲ್ಲ. ಸುಮಾರು 25 ದಿನಗಳಿಂದ ತಿಹಾರ್ ಜೈಲಿನಲ್ಲಿರುವ ಪಿ.ಚಿದಂಬರಂರವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ವಾದ-ಪ್ರತಿವಾದ ಆಲಿಸಿದ ಜಾಮೀನು ನೀಡಲು ನಿರಾಕರಿಸಿತು. ಇನ್ನು ಹೈಕೋರ್ಟ್ ಸಮಯ ಮುಕ್ತಾಯವಾದ ಹಿನ್ನೆಲೆ ಅರ್ಜಿ ವಿಚಾರಣೆಯನ್ನು ಮಂಗಳವಾರ ಮಧ್ಯಾಹ್ನಕ್ಕೆ ಮುಂದೂಡಲಾಗಿದೆ.
ಪಿ.ಚಿದಂಬರಂ ಪರ ವಕೀಲ ಕಪಿಲ್ ಸಿಬಲ್ ಹಾಗೂ ಸಿಬಿಐ ಪರ ತುಷಾರ್ ಮೆಹ್ತಾ ವಾದ ಮಂಡಿಸಿದರು. ಆರೋಪಿ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಸಾಕ್ಷ್ಯ ನಾಶ ಮಾಡಲು ಅವಕಾಶವಿರದಿದ್ದರೂ ಸಹ ಸಾಕ್ಷಿದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳುವ ಮೂಲಕ ಕೋರ್ಟ್ ಜಾಮೀನು ನಿರಾಕರಿಸಿತು.
ಪಿ.ಚಿದಂಬರಂ ಪರ ವಾದ ಮಂಡಿಸಿದ ವಕೀಲ ಕಪಿಲ್ ಸಿಬಲ್, ದುಡ್ಡು ದೇಶಕ್ಕೆ ಹರಿದು ಬಂದರೆ ಅದರಿಂದ ಯಾರಿಗೆ ನಷ್ಟ? ಅಲ್ಲದೇ ಚಿದಂಬರಂ ವಿರುದ್ಧ 120 ಬಿ ಹಾಗೂ 420 ಕಲಂ ಹಾಕಿದ್ದೇಕೆ ಎಂದು ಪ್ರಶ್ನಿಸಿದರು. ಷೇರ್ ನ ಪ್ರೀಮಿಯಂ ಮೌಲ್ಯ, ಫೇಸ್ ಮೌಲ್ಯಕ್ಕಿಂತ ಹೆಚ್ಚಿಗಿರುವ ಸಾಧ್ಯತೆಯಿರುತ್ತದೆ ಇದರಲ್ಲಿ ತಪ್ಪೇನಿದೆ. ಎಲ್ಲವೂ ನಿಯಮಾನುಸಾರ ನಡೆದಿದೆ. ಈ ವಿಚಾರದಲ್ಲಿ ಸೆಬಿ ಅಥವಾ ರಿಜರ್ವ್ ಬ್ಯಾಂಕಿನಿಂದ ಯಾವುದೇ ನೋಟಿಸ್ ಕೂಡ ಬಂದಿಲ್ಲ ಎಂದು ಮನವರಿಕೆ ಮಾಡಿದರು.
2007ರಲ್ಲಿ ಪಿ.ಚಿದಂಬರಂ ವಿತ್ತ ಸಚಿವರಾಗಿದ್ದಾಗ ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಭಾಗಿಯಾಗಿದ್ದಾರೆ ಹಾಗೂ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಸುಮಾರು 40 ದಿನಗಳ ಹಿಂದೆ ಸಿಬಿಐ ತಂಡ ಪಿ.ಚಿದಂಬರಂ ಅವರನ್ನು ಕೇಸ್ ಗೆ ಸಂಬಂಧಪಟ್ಟಂತೆ ಬಂಧಿಸಿತ್ತು. ಐಎನ್ಎಕ್ಸ್ ಸಹ ಸಂಸ್ಥಾಪಕಿ ಇಂದ್ರಾಣಿ ಮುಖರ್ಜಿ ಚಿದಂಬರಂ ಕಿಕ್ ಬ್ಯಾಕ್ ಪಡೆದಿರುವ ಬಗ್ಗೆ ಸಾಕ್ಷಾಧಾರರಾಗಿದ್ದಾರೆ.