Homeಮುಖಪುಟವಿರೋಧಾಭಾಸಗಳ ಜಗತ್ತಿನಲ್ಲಿ ಧಿಕ್ಕರಿಸಬೇಕಿದೆ ಶ್ರೇಷ್ಠತೆಯ ವ್ಯಸನ : ನಟರಾಜು ವಿ.

ವಿರೋಧಾಭಾಸಗಳ ಜಗತ್ತಿನಲ್ಲಿ ಧಿಕ್ಕರಿಸಬೇಕಿದೆ ಶ್ರೇಷ್ಠತೆಯ ವ್ಯಸನ : ನಟರಾಜು ವಿ.

- Advertisement -
- Advertisement -

ಕನ್ನಡದ ಪ್ರತಿಭಾನ್ವಿತ ಪತ್ರಕರ್ತರು -ಅಂಕಣಕಾರರಲ್ಲೊಬ್ಬರಾದ ನಟರಾಜು.ವಿ ಅವರು ತಣ್ಣನೆಯ ಶೈಲಿಯಲ್ಲೇ ಕಟುಸತ್ಯಗಳನ್ನು ಬಿಡಿಸಿಡುವ ಬರಹಗಾರರು. ಸಾಮಾಜಿಕ ರಾಜಕೀಯ ವಿಶ್ಲೇಷಣೆ, ಸಮಕಾಲೀನ ವಿದ್ಯಮಾನಗಳ ಕುರಿತ ಅವರ ಅಂಕಣ ‘ಪಠ್ಯ – ಪ್ರಮಾಣ’ ಕನ್ನಡಪ್ರಭದಲ್ಲಿ ಪ್ರಕಟವಾಗಿತ್ತು. ಟೈಮ್ಸ್ ಆಫ್ ಇಂಡಿಯಾ, ವಿಜಯನೆಕ್ಸ್ಟ್ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕಳೆದ 15 ವರ್ಷಗಳಿಂದ ಕೆಲಸ ಮಾಡಿದ ಅನುಭವವಿರುವ ಇವರು ‘ದಿ ಸ್ಟೇಟ್’ ನಲ್ಲಿ ಸೀನಿಯರ್ ಅಸಿಸ್ಟೆಂಟ್ ಎಡಿಟರ್ ಆಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಟೆಕ್ ಕನ್ನಡ ವೆಬ್‍ಜಾಲದ ‘ತಂತ್ರ ತಾಂಡವ’ ಅಂಕಣದ ಜೊತೆಗೆ, ನಟರಾಜುರವರು ನ್ಯಾಯಪಥ ಪತ್ರಿಕೆಯಲ್ಲಿ ಪ್ರಮುಖ ವಿಶ್ಲೇಷಕ ಬರಹಗಳನ್ನು ಬರೆಯುತ್ತಿದ್ದಾರೆ.

ಈ ವಿಶೇಷ ಸಂಚಿಕೆಯನ್ನು ಕೈಯಲ್ಲಿ ಹಿಡಿದು ಕಣ್ಣಾಡಿಸುತ್ತಿರುವ ಈ ಹೊತ್ತಿನಲ್ಲಿ ಬಹುಶಃ ನಿಮಗೆ ಮೇಲುನೋಟಕ್ಕೇ ಸಮಕಾಲೀನ ಭಾರತೀಯ ಸಮಾಜ ಎದುರಿಸುತ್ತಿರುವ ಹತ್ತು ಹಲವು ತಲ್ಲಣಗಳು, ಪ್ರಜಾಪ್ರಭುತ್ವ, ಸಂವಿಧಾನಗಳಿಗೆ ಎದುರಾಗಿರುವ ಗಂಭೀರ ಸವಾಲುಗಳ ಕುರಿತಾದ ತೀವ್ರ ಕಾಳಜಿ ಈ ಬರಹಗಳಲ್ಲಿ ಕಾಣಬಹುದು. ಇದಾಗಲೇ ಜಾತಿವ್ಯವಸ್ಥೆಯಲ್ಲಿ ಸಿಲುಕಿ ಶತಶತಮಾನಗಳಿಂದ ಹೈರಾಣಾಗಿಹೋಗಿರುವ ಭಾರತೀಯ ಸಮಾಜದ ಸೂಕ್ಷ್ಮ ನೇಯ್ಗೆಗಳು ಇಂದು ಮೂಲಭೂತವಾದದ ತೀವ್ರ ಹೆಚ್ಚಳದೊಂದಿಗೆ ಮತ್ತೂ ಗಂಭೀರವಾಗಿ ಘಾಸಿಗೊಂಡಿವೆ. ನಮ್ಮ ಸುತ್ತಣ ಸಮಾಜದ ಆಲೋಚನೆಗಳನ್ನು ಮೂಲಭೂತವಾದವು ವ್ಯಾಪಿಸಿಕೊಳ್ಳುತ್ತಿರುವ ಪರಿ, ಪಡೆಯುತ್ತಿರುವ ರೂಪ, ಭಾಷೆ ಎಲ್ಲ ಪ್ರಜ್ಞಾವಂತರ ಆತಂಕಕ್ಕೆ ಕಾರಣವಾಗಿದೆ. ಇಲ್ಲಿನ ಬಹುತೇಕ ಲೇಖನಗಳು ವಿವಿಧ ಆಯಾಮಗಳಿಂದ ಈ ಸವಾಲುಗಳನ್ನು ಸಂಕೀರ್ಣವಾಗಿಯೂ, ಚಿಕಿತ್ಸಕವಾಗಿಯೂ ಎದುರುಗೊಂಡಿವೆ. ಪ್ರಸಕ್ತ ಲೇಖನ ಇದರಾಚೆಗಿನ ಕೆಲ ಸಂದಿಗ್ಧಗಳು, ಸವಾಲುಗಳ ಬಗ್ಗೆ ಗಮನ ಹರಿಸಲಿದೆ. ಆದರ್ಶ, ವಾಸ್ತವ, ಬೂಟಾಟಿಕೆ, ನೈತಿಕ ವಿರೋಧಾಭಾಸಗಳ ಗೋಜಲುಗಳ ಸುತ್ತಲಿನ ಚರ್ಚೆ ಈ ಲೇಖನದ ತಿರುಳು.

ಇಂದು ಸಾಮಾಜಿಕ ಕಾರ್ಯಕರ್ತರು, ಸಮಾಜಮುಖಿ ಚಿಂತಕರು, ಪ್ರಜ್ಞಾವಂತರು, ಪತ್ರಕರ್ತರೆಲ್ಲರನ್ನೂ ಒಂದಿಲ್ಲೊಂದು ಬಗೆಯಲ್ಲಿ ನೈತಿಕ ತಳಮಳಗಳು ಬಾಧಿಸುತ್ತಿವೆ. ಮೌಲ್ಯಗಳ ಹೆಸರಿನಲ್ಲಿ ತಾವು ಕಟ್ಟಿಕೊಂಡಿದ್ದ ಕೋಟೆ ಎಲ್ಲ ದಿಕ್ಕಿನಲ್ಲಿಯೂ ಕುಸಿದು ಬೀಳುತ್ತಿರುವುದು ಕಣ್ಣುಮುಚ್ಚಿದರೂ ಗೋಚರಿಸುತ್ತಿದೆ. ಈ ಸತ್ಯಕ್ಕೆ ಮುಖಾಮುಖಿಯಾಗುವುದೋ ಅಥವಾ ಕೋಟೆ ಕುಸಿದರೇನು ನಮ್ಮ ಸುತ್ತ ನಾವೇ ಒಂದು ಗೂಡು ಕಟ್ಟಿಕೊಂಡು ಚಿಟ್ಟೆಯಾಗಿ ಪರಿವರ್ತನೆ ಹೊಂದೋಣ, ಯಾರ ಜಪ್ತಿಗೂ ಸಿಗದೆ ಹಾರಿಬಿಡೋಣ ಎಂದು ರಮ್ಯವಾಗಿ ಉತ್ತರಿಸುವುದೋ ತಿಳಿಯುತ್ತಿಲ್ಲ. ನಾವು ನಿಂತಿರುವ ನೆಲದ ಮೇಲೆಯೇ ಸಂಶಯವೇಳುತ್ತಿರುವ ಈ ಹೊತ್ತಿನಲ್ಲಿ ತಲೆಯನ್ನು ನೆಲದಲ್ಲಿ ಹುದುಗಿಸಿಕೊಂಡು ಎಲ್ಲದಕ್ಕೂ ಕಣ್ಣುಮುಚ್ಚಿಕೊಂಡು ಬಿಡುವುದು ಸಂವೇದನಾಶೀಲರ ಆಯ್ಕೆಯೂ ಅಲ್ಲ.

ಕಪ್ಪುಬಿಳುಪು ಇವೆರಡನ್ನು ಮಾತ್ರವೇ ಗುರುತಿಸಲು, ಬೇರ್ಪಡಿಸಲಷ್ಟೇ ಕಲಿತಿರುವವರಿಗೆ ಜಗವೆಲ್ಲಾ ಕಂದು ಬಣ್ಣದಲ್ಲೇ ಇರುವಾಗ ಅದನ್ನು ಹೇಗೆ ವರ್ಗೀಕರಿಸುವುದು ತಿಳಿಯದಾಗಿದೆ. ಮಾಧ್ಯಮವೂ ಸೇರಿದಂತೆ ಇಂದು ಎಲ್ಲ ಉದ್ಯಮಗಳೂ ಬಂಡವಾಳಶಾಹಿಗಳ ಹಿಡಿತದಲ್ಲಿವೆ. ಒಂದಿಲ್ಲೊಂದು ರೀತಿಯಲ್ಲಿ ಸರ್ಕಾರ, ಅಧಿಕಾರಸ್ಥರ ಸಹಾಯ, ಸಹಕಾರಗಳನ್ನು ಅವಲಂಬಿಸಿವೆ. ಈ ಅವಲಂಬನೆ ಕೆಲವೆಡೆ ಅಲ್ಪವೇ ಇರಬಹುದು ಮತ್ತೆ ಹಲವೆಡೆ ಅವಕಾಶವಾದಿತನ, ವಶೀಲಿಬಾಜಿಗಾಗಿಯೇ ಈ ಉದ್ಯಮಗಳು ಆರಂಭವಾಗಿಯೂ ಇರಬಹುದು.

ಮೌಲ್ಯಗಳೆನ್ನುವುದು ಇಂದು ತುಲನಾತ್ಮಕವಾಗಿ ನೋಡಬಹುದಾದ ವಿಷಯವಾಗಿದೆಯೇ ಹೊರತು ಪಾವಿತ್ರ್ಯದ ವಿಷಯವಾಗಿ ಉಳಿದಿಲ್ಲ. ಅವರಿಗಿಂತ ಇವರು ಉತ್ತಮ, ಆ ಸಂಸ್ಥೆಗಿಂತ ಈ ಸಂಸ್ಥೆ ಉತ್ತಮ ಎನ್ನಬಹುದೇ ಹೊರತು ಪರಮಪವಿತ್ರವೂ, ಅಗ್ನಿದಿವ್ಯವೂ ಆದ ಸಾಂಸ್ಥಿಕ ರಚನೆಗಳು ಸಾರ್ವಜನಿಕವಾಗಿ ಕಾಣೆಯಾಗಿವೆ. ಇದಕ್ಕೆ ಸರ್ಕಾರಿ, ಖಾಸಗಿ ಎನ್ನುವ ಭೇದಭಾವವಿಲ್ಲ. ಪ್ರಾಮಾಣಿಕತೆಯಿಂದ, ಶ್ರದ್ಧೆಯಿಂದ ತಾನು ದುಡಿದು ತಿಂದಿರುವುದಾಗಿ ಯಾರೇ ಹೇಳಿದರೂ ಆ ದುಡಿಮೆಯನ್ನು ಬಳಸಿಕೊಂಡ ಸಂಸ್ಥೆಗಳು ಸಂಬಳಕ್ಕಾಗಿ ತೆತ್ತ ಹಣದ ಹರಿವು ಎಲ್ಲಿಯದು, ಆ ಸಂಸ್ಥೆಗಳ ವ್ಯಾವಹಾರಿಕ ಚೌಕಟ್ಟಿನ ಸ್ವರೂಪವೇನು ಎನ್ನುವುದನ್ನು ಅರಿತರೆ ಭ್ರಷ್ಟತೆ ಎನ್ನುವುದು ನಮ್ಮೆಲ್ಲರನ್ನೂ ಒಂದಿಲ್ಲೊಂದು ಹಂತದಲ್ಲಿ ತಾಕಿಯೂ ಅರಿವಿಗೇ ಬಾರದೆ ಉಳಿದಿರುವುದು ಗಮನಕ್ಕೆ ಬರುತ್ತದೆ.

ಮಾರುಕಟ್ಟೆ ಎನ್ನುವುದು ಸರ್ವವ್ಯಾಪಿಯಾಗಿರುವ ಈ ಯುಗದಲ್ಲಿ ಅರ್ಥವ್ಯವಸ್ಥೆಯ ಸ್ವರೂಪ ಸಂಕೀರ್ಣವೂ, ಪರಸ್ಪರ ವ್ಯಾಪಕವಾಗಿ ಅವಲಂಬಿತವೂ ಆಗಿರುವಂಥದ್ದು. ಮಾರುಕಟ್ಟೆ ಆಧರಿತ ಜೀವನ ವಿಧಾನದ ಈ ದಿನಗಳಲ್ಲಿ ಹಣವೆನ್ನುವುದು ಎಲ್ಲರ ಬದುಕಿನ ಕೇಂದ್ರದಲ್ಲಿದೆ. ಇದಕ್ಕೆ ನಗರ ಹಾಗೂ ಗ್ರಾಮೀಣ ಎನ್ನುವ ವ್ಯತ್ಯಾಸಗಳಿಲ್ಲ, ಪ್ರಮಾಣದಲ್ಲಿ ಕೊಂಚಮಟ್ಟಿಗಿನ ಅಂತರವಿರಬಹುದು ಅಷ್ಟೇ. ಹೀಗೆ ಹಣದ ಹರಿವು ಮತ್ತು ಅದರ ಅವಲಂಬನೆಗಳು ಹೆಚ್ಚಾದಂತೆಲ್ಲಾ ವ್ಯವಸ್ಥೆಯಲ್ಲಿ ಕಪ್ಪುಬಿಳುಪು ಎನ್ನುವ ವರ್ಗೀಕರಣವೇ ಕ್ರಮೇಣ ಅಪ್ರಸ್ತುತವೂ, ಗೊಂದಲಮಯವೂ ಆಗತೊಡಗುತ್ತದೆ. ಹಣದ ಮೌಲ್ಯವು ಪೂರ್ವನಿರ್ಧರಿತವಾಗಿದ್ದು ಅದು ತನ್ನ ಮೌಲ್ಯವನ್ನು ತನ್ನನ್ನು ಗಳಿಸಿದ, ದುಡಿದ ಮಾರ್ಗದಿಂದಾಗಿ ಪಡೆಯುವುದಿಲ್ಲ. ಶ್ರಮಿಕರು, ಜ್ಞಾನಿಗಳು, ಪ್ರತಿಭಾವಂತರು, ವಯೋವೃದ್ಧರು, ವಿಶೇಷಚೇತನರು ಕಷ್ಟಪಟ್ಟು ದುಡಿದ ಹಣಕ್ಕೂ, ಭ್ರಷ್ಟವೂ, ಅನೈತಿಕವೂ, ವಾಮಮಾರ್ಗದಿಂದಲೂ ಗಳಿಸಿದ ಹಣಕ್ಕೂ ಮೌಲ್ಯದಲ್ಲಿ ಯಾವುದೇ ವ್ಯತ್ಯಾಸಗಳಿರುವುದಿಲ್ಲ. ಇದು ಆಧುನಿಕ ಅರ್ಥವ್ಯವಸ್ಥೆಯಲ್ಲಿನ ದೊಡ್ಡ ನ್ಯೂನತೆ. ಹಣವೆನ್ನುವುದು ಗುಣಗ್ರಾಹಿಯಾಗಿಲ್ಲ. ಜಾತಿ, ಧರ್ಮ, ಜನಾಂಗ, ಬಣ್ಣಗಳ ಆಧಾರದಲ್ಲಿ ಶ್ರೇಷ್ಠತೆಯ ವ್ಯಸನ ಮೆರೆಯುವ ನಮ್ಮ ನಾಗರಿಕತೆಗಳು, ಇದಕ್ಕೆ ಬದಲಾಗಿ ಮೌಲ್ಯ, ನೈತಿಕತೆಯ ಹೆಸರಿನಲ್ಲಿ ಶ್ರೇಷ್ಠತೆಯ ವ್ಯಸನ ಬೆಳೆಸಿಕೊಂಡಿದ್ದರೆ ಹಣಕ್ಕೆ ಗುಣಗ್ರಾಹಿಯಾಗುವ ಅಗತ್ಯ ಖಂಡಿತ ಬರುತ್ತಿತ್ತು. ಆದರೆ, ವಾಸ್ತವ ಹಾಗಿಲ್ಲ. ಹಣ ಇಂದು ನಮ್ಮೆಲ್ಲರ ಬದುಕಿನ ಕೇಂದ್ರದಲ್ಲಿದೆ, ನಮ್ಮೆಲ್ಲರ ಜೀವನಾವಶ್ಯಕತೆಗಳನ್ನು, ಬದುಕು, ಭವಿಷ್ಯವನ್ನು ನಿರ್ಧರಿಸುವ ಪ್ರಖರ ಮಾಧ್ಯಮವಾಗಿದೆ. ಹೀಗೆ ನಮ್ಮೆಲ್ಲರ ಬದುಕನ್ನು ನಿಯಂತ್ರಿಸುವ, ನಿರ್ಧರಿಸುವ ಹಣಕ್ಕೆ ನ್ಯಾಯನೀತಿಯ ಪರಿವೆಯೇ ಇಲ್ಲ! ಗುಣಕ್ಕೆ, ಮೌಲ್ಯಗಳಿಗೆ ಕುರುಡಾಗಿರುವ ಇಂತಹ ಹಣವನ್ನು ಕೇಂದ್ರದಲ್ಲಿರಿಸಿಕೊಂಡೇ ನವ ನಾಗರಿಕತೆಗಳು ಅಸ್ತಿತ್ವ ಕಟ್ಟಿಕೊಂಡಿವೆ. ದೇಶ, ಮಾರುಕಟ್ಟೆಗಳು ಉಸಿರಾಡುತ್ತಿವೆ. ಇಂದು ಇಡೀ ಜಾಗತಿಕ ಅರ್ಥವ್ಯವಸ್ಥೆಯವೆನ್ನುವುದು ಹೃದಯಹೀನವೂ, ಅಮಾನವೀಯವೂ ಆಗಿ ಪರಿವರ್ತಿತವಾಗಲು ಈ ಲೋಪವೇ ಕಾರಣ. ಈ ಸಂಕೀರ್ಣತೆಗಳನ್ನು ಅರಿಯದೆ ಭ್ರಷ್ಟಾಚಾರದ ಬಗ್ಗೆ ತೆಳುಗ್ರಹಿಕೆಯಲ್ಲಿ ಮಾತನಾಡುವುದು ಯಾವತ್ತೂ ಅಪಾಯಕಾರಿ.

ಇಷ್ಟೆಲ್ಲಾ ಹೇಳಲು ಕಾರಣ, ಇಂದು ಮಾನವೀಯ, ಜನಪರ, ಜನಮುಖಿ ಚಿಂತನೆಗಳುಳ್ಳವರಲ್ಲಿ ಯಾವ ವಿಚಾರಗಳಲ್ಲಿ ಒಮ್ಮತ ಮೂಡಬೇಕಿತ್ತೋ ಅದು ಸಾಧ್ಯವಾಗದೆ ಹೋಗಿರುವುದರಿಂದಾಗಿ. ಬಹುತೇಕ ಸಂದರ್ಭಗಳಲ್ಲಿ ಹಣದ ವಿಚಾರದಲ್ಲಿ ಕೆಲವೊಂದು ಸೀಮಿತ ಕಲ್ಪನೆಗಳಿಂದ ನಾವು ವ್ಯವಹರಿಸುವುದು ಇದಕ್ಕೆಲ್ಲಾ ಕಾರಣವಾಗುತ್ತದೆ. ಇಂದು ಸಮಾಜದ ಕೇಂದ್ರಕ್ಕೆ ಮತ್ತೆ ಮಾನವೀಯ ಮೌಲ್ಯಗಳನ್ನು ತರಬೇಕೆಂದರೆ ಗುಣಗ್ರಾಹಿಯಾಗಿಲ್ಲದ ಹಣದ ವಿಚಾರವಾಗಿ ಅತಿ ಎನಿಸುವಷ್ಟು ಪ್ರಾಮಾಣಿಕವಾಗಿಯೂ, ಕಟುವಾಗಿಯೂ ವರ್ತಿಸುವಂತೆ ಮಾಡಿರುವ ಸ್ಥಾಪಿತ ಮೌಲ್ಯಗಳ ಬಗ್ಗೆಯೇ ನಾವು ಸಂಶಯವನ್ನಿರಿಸಿಕೊಳ್ಳಬೇಕಿದೆ. ಈ ವಿಚಾರದಲ್ಲಿ ನಮ್ಮ ಚಿಂತನೆಗಳು ಹೆಚ್ಚು ಉದಾರವಾಗಬೇಕಿದೆ. ಉತ್ತಮ ಉದ್ದೇಶಗಳು, ಕೆಲಸಕ್ಕಾಗಿ ಹಣ ಹಾಗೂ ಶ್ರಮವನ್ನು ಹೇಗೆ ಒಗ್ಗೂಡಬೇಕು ಎನ್ನುವ ವಿಚಾರದಲ್ಲಿ ಶ್ರೇಷ್ಠತೆಯ ವ್ಯಸನಗಳಿಂದ ನಾವಿಂದು ಹೊರಬರಬೇಕಿದೆ. ಉತ್ತಮ ಉದ್ದೇಶ, ದೂರದರ್ಶಿತ್ವ, ಸಮತೆಯಲ್ಲಿ ನಂಬಿಕೆಯಿಟ್ಟವರನ್ನು ಅಧಿಕಾರದ ಕೇಂದ್ರಕ್ಕೆ ತರಲು ಲಾಬಿ ಮಾಡುವುದು, ಉತ್ತಮ ಧ್ಯೇಯೋದ್ದೇಶಗಳ ಸಾಕಾರಕ್ಕಾಗಿ ಸಂಪನ್ಮೂಲ ಸಂಗ್ರಹದ ವಿಚಾರದಲ್ಲಿ ಅವಾಸ್ತವವೂ, ಅಪ್ರಾಯೋಗಿಕವೂ ಆಗಿರದೆ ಸಮಾಜಕಂಟಕವಲ್ಲದ ಮಾರ್ಗಗಳ ಬಗ್ಗೆ ಪುನರ್ ಪರಿಶೀಲಿಸುವುದು ಇಂದಿನ ಅಗತ್ಯವಾಗಿದೆ. ಒಳಿತನ್ನು ಕೆಟ್ಟದ್ದರಿಂದ ಗೆಲ್ಲಿಸಲು ಸಾಧ್ಯವಿಲ್ಲ ಎನ್ನುವುದು ದಿಟ. ಹಾಗೆಂದು, ಒಳಿತನ್ನು ಒಳಿತಿನಿಂದಲೇ ಸೋಲಿಸಬಾರದು ಕೂಡ. ವಿಚಾರಶೀಲರಿಗೆ ಇವೆರಡರ ನಡುವೆ ಸಮತೋಲನ ಸಾಧಿಸುವುದು ಕಷ್ಟವಾಗಲಾರದು.

ಒಳಿತಿನ ಬೇರುಗಳು ಸಮಾಜದಲ್ಲಿ ಆಳವಾಗಬೇಕೆಂದರೆ, ಮೊದಲು ಉತ್ತಮರ ಪರವಾಗಿ ಪ್ರಜ್ಞಾವಂತರೆಲ್ಲರೂ ಸಕಾರಾತ್ಮಕವಾಗಿ ಲಾಬಿ ಮಾಡಬೇಕಿದೆ. ಸಜ್ಜನರ ಒಳ್ಳೆಯತನಕ್ಕೆ ಪ್ರಾಮಾಣಿಕತೆಯ ಬೇಡಿ, ಸಲಾಕೆಗಳನ್ನು ಹಾಕಿ, ವಸ್ತುನಿಷ್ಠತೆಯ ಲಕ್ಷ್ಮಣರೇಖೆಯನ್ನೆಳೆದು ಪಂಜರದಲ್ಲಿರಿಸಿ ಆ ಮೂಲಕ ಅಧಿಕಾರ ಕೇಂದ್ರಗಳಿಗೆ, ಆಯಕಟ್ಟಿನ ಸ್ಥಳಗಳಿಗೆ ಒತ್ತರಿಸಿಕೊಳ್ಳುವ ದುಷ್ಟರು, ಧನದಾಹಿಗಳು, ಅಯೋಗ್ಯರನ್ನು ದೂರವಿರಿಸಬೇಕಿದೆ. ಉತ್ತಮರು, ಪ್ರತಿಭಾವಂತರು, ಮಾನವೀಯ ಮೌಲ್ಯಗಳುಳ್ಳವರನ್ನು ಅಧಿಕಾರ ಹಾಗೂ ಸಂಪನ್ಮೂಲಗಳಿರುವೆಡೆ ಕೂರಿಸಿ ರಚನಾತ್ಮಕ ಹಾಗೂ ಮಾನವೀಯ ಕೆಲಸಗಳಿಗೆ ಹೆಚ್ಚೆಚ್ಚು ಶಕ್ತಿ, ಸಂಪನ್ಮೂಲಗಳನ್ನು ಹರಿಸಬೇಕಿದೆ. ಇದು ಸಾಧ್ಯವಾಗಬೇಕೆಂದರೆ ನಾವುಗಳು ಅವಾಸ್ತವ ನೆಲೆಗಳಲ್ಲಿ ರೂಢಿಸಿಕೊಂಡಿರುವ ಶ್ರೇಷ್ಠತೆಯ ವ್ಯಸನವನ್ನು ಬದಿಗಿರಿಸಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗೋಮಾಂಸ ಸಾಗಣೆ ಆರೋಪದ ಮೇಲೆ ವಾಹನ ಮುಟ್ಟುಗೋಲು: ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಗೋಮಾಂಸ ಸಾಗಣೆ ಮಾಡುತ್ತಿದ್ದಾರೆ ಎಂದು ಕೇವಲ ಅನುಮಾನದ ಮೇಲೆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದು ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಅಂತಹ ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ವೈಜ್ಞಾನಿಕ ದೃಢೀಕರಣ ಅಗತ್ಯ...

ಎಕ್ಸಿಟ್‌ ಪೋಲ್ಸ್‌ಗಳು ‘ಹಣ-ಒತ್ತಡ’ದಿಂದ ಕೂಡಿವೆ; ಟಿಎಂಸಿ 226 ಸ್ಥಾನಗಳನ್ನು ಮೀರಲಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನದ ನಂತರ ಇತ್ತೀಚಿನ ಚುನಾವಣೋತ್ತರ ಸಮೀಕ್ಷೆಗಳ ವಿಶ್ವಾಸಾರ್ಹತೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಲವಾಗಿ ತಳ್ಳಿಹಾಕಿದ್ದಾರೆ. ಅವರ ಪಕ್ಷವಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) 294 ಸದಸ್ಯರ ವಿಧಾನಸಭೆಯಲ್ಲಿ 226...

ಗುಜರಾತ್‌| ರಾಮ ಮಂದಿರ ಕಾರ್ಯಕ್ರಮದಲ್ಲಿ ದಲಿತರಿಗೆ ಪ್ರತ್ಯೇಕ ಊಟದ ವ್ಯವಸ್ಥೆ; ಅಸ್ಪೃಶ್ಯತೆ ಆಚರಣೆ ಆರೋಪ

ಗುಜರಾತ್‌ನ ಜುನಾಗಢ್ ಜಿಲ್ಲೆಯಲ್ಲಿ ಜಾತಿ ತಾರತಮ್ಯದ ಆರೋಪ ಹೊರಿಸಲಾಗಿದ್ದು, ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ದೇವಾಲಯದ ಆಯೋಜಕರು ಅಸ್ಪೃಶ್ಯತೆ ಆಚರಿಸುತ್ತಿದ್ದಾರೆ ಎಂದು ದಲಿತ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ. ಭುಟ್ಡಿ ಗ್ರಾಮದ ನಿವಾಸಿ 25 ವರ್ಷದ ಅಜಯ್...

ಕೋಗಿಲು ಬಡಾವಣೆ ಮನೆಗಳ ನೆಲಸಮ: ಹದಿನೈದು ದಿನಗಳೊಳಗೆ ಪುನರ್ವಸತಿ ಕಲ್ಪಿಸದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ

ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಪ್ರದೇಶದ ಕೋಗಿಲು ಲೇಔಟ್‌ನ ಫಕೀರ್ ಕಾಲೋನಿ ಮತ್ತು ಮಹಾನಾಯಕ ಅಂಬೇಡ್ಕರ್ ನಗರ (ವಾಸಿಂ ಲೇಔಟ್‌) ಪ್ರದೇಶದ ಬಡ ನಿವಾಸಿಗಳ ಮನೆಗಳನ್ನು 2025 ಡಿಸೆಂಬರ್ 20ರಂದು ಬೆಳಿಗ್ಗೆ ಸುಮಾರು...

ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟ 95.20 ರೂ.ಗೆ ಕುಸಿತ ಕಂಡ ಭಾರತೀಯ ರೂಪಾಯಿ ಮೌಲ್ಯ 

ನವದೆಹಲಿ: ಏಪ್ರಿಲ್ 30ರಂದು ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 95.07 ಕ್ಕೆ ಕುಸಿದಿದೆ. ಕರೆನ್ಸಿ 0.4% ಕುಸಿತದೊಂದಿಗೆ 95.2325 ಕ್ಕೆ ಇಳಿದಿದೆ. ಇದು ಮಾರ್ಚ್...

ತಮಿಳುನಾಡು| ದಲಿತ ಯುವಕನ ಶವ ಪತ್ತೆ; ‘ಜಾತಿ ಕಾರಣಕ್ಕೆ ಹತ್ಯೆಯಾಗಿದೆ’ ಎಂದು ಕುಟುಂಬದ ಆರೋಪ

ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯ ಕ್ವಾರಿ ಕೆರೆಯ ಬಳಿ 20 ವರ್ಷದ ದಲಿತ ಯುವಕನ ಶವ ಪತ್ತೆಯಾಗಿದ್ದು, ಹಿಂದುಳಿದ ವರ್ಗದ ಯುವತಿಯೊಂದಿಗಿನ ಸಂಬಂಧದಿಂದಾಗಿ ಆತನನ್ನು ಕೊಲ್ಲಲಾಗಿದೆ ಎಂದು ಆತನ ಕುಟುಂಬ ಆರೋಪಿಸಿದೆ. ಆದರೆ, ಈ...

‘ಬಾಲ ಕಾರ್ಮಿಕ’ ಶಂಕೆಯ ಮೇಲೆ 155 ಮುಸ್ಲಿಂ ವಿದ್ಯಾರ್ಥಿಗಳ ಬಂಧನ: ಧಾರ್ಮಿಕ ಗುರುತಿನ ಕಾರಣಕ್ಕೆ ಬಂಧಿಸಿರುವುದಾಗಿ ಪೋಷಕರ ಆರೋಪ

ಮಧ್ಯಪ್ರದೇಶದ ಕಟ್ನಿಯಲ್ಲಿ ಸರ್ಕಾರಿ ರೈಲ್ವೆ ಪೊಲೀಸರು (GRP) 155 ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಎಂಟು ಶಿಕ್ಷಕರನ್ನು "ಬಾಲ ಕಾರ್ಮಿಕ" ಶಂಕೆಯ ಮೇಲೆ ಬಂಧಿಸಿದ ನಂತರ, ಪೋಷಕರು ಮುಸ್ಲಿಂ ವಿರೋಧಿ ಪಕ್ಷಪಾತವನ್ನು ಹೊಂದಿದ್ದಾರೆಂದು ಆರೋಪಿಸಿದ್ದಾರೆ....

ಜನಿವಾರದ ಹಿಂದೆ ಬಿದ್ದಿರುವ ವಿರೋಧ ಪಕ್ಷ ಮತ್ತು ಮಾಧ್ಯಮಗಳು

ಏಪ್ರಿಲ್ 23, 2026 ರಂದು ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ವೇಳೆ ಬೆಂಗಳೂರಿನ ಕೋರಮಂಗಲದಲ್ಲಿರುವ ಕೃಪಾನಿಧಿ ಪಿಯು ಕಾಲೇಜಿನಲ್ಲಿ ಐವರು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಘಟನೆ ರಾಜಕೀಯ...

ಒಡಿಶಾ| ಸಾವಿನ ದಾಖಲೆ ಕೇಳಿದ ಬ್ಯಾಂಕ್‌ ಸಿಬ್ಬಂದಿ; ಸಮಾದಿ ಅಗೆದು ಸಹೋದರಿಯ ಅಸ್ಥಿಪಂಜರ ತಂದ ಬುಡಕಟ್ಟು ವ್ಯಕ್ತಿ

ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ, ಬುಡಕಟ್ಟು ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಅಸ್ಥಿಪಂಜರವನ್ನು ಅಗೆದು ಗ್ರಾಮೀಣ ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿದ್ದಾನೆ. ಆಕೆಯ ಸಾವನ್ನು ಸಾಬೀತುಪಡಿಸುವ ಮೂಲಕ ಆಕೆಯ ಖಾತೆಯಲ್ಲಿ ಜಮಾ ಮಾಡಿದ ಹಣವನ್ನು ಪಡೆಯಲು...

ಜಾತಿ ಕಿರುಕುಳಕ್ಕೆ ದಲಿತ ವಿದ್ಯಾರ್ಥಿ ಸಾವು ಪ್ರಕರಣ: ಇಂದು ಸಂಜೆ 6 ರವರೆಗೆ ಕೇರಳ ಬಂದ್

ಜಾತಿ ಆಧಾರಿತ ಕಿರುಕುಳದಿಂದ ಮನನೊಂದಿದ್ದ ಕೇರಳದ ಅಂಚರಕಂಡಿಯ ಕಣ್ಣೂರು ದಂತ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿ ಆರ್.ಎಲ್. ನಿತಿನ್ ರಾಜ್ ಆತ್ಮಹತ್ಯೆಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ...