HomeಚಳವಳಿRTI ಕಾಯ್ದೆ ಮುಗಿಸಿದ ಮೋದಿ ಸರ್ಕಾರ: ಮಾರಣಾಂತಿಕ ತಿದ್ದುಪಡಿಗೆ ರಾಜ್ಯಸಭೆಯಲ್ಲಿಯೂ ಅನುಮೋದನೆ

RTI ಕಾಯ್ದೆ ಮುಗಿಸಿದ ಮೋದಿ ಸರ್ಕಾರ: ಮಾರಣಾಂತಿಕ ತಿದ್ದುಪಡಿಗೆ ರಾಜ್ಯಸಭೆಯಲ್ಲಿಯೂ ಅನುಮೋದನೆ

- Advertisement -
- Advertisement -

2005ರಿಂದ ಜನಸಾಮಾನ್ಯರು ತಮಗೆ ಬೇಕಾದ ಮಾಹಿತಿ ಪಡೆಯುವ ಮತ್ತು ಭ್ರಷ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ, ಹಗರಣಗಳನ್ನು ಬಯಲಿಗೆಳೆಯಲು ಸಹಾಯಕವಾಗಿದ್ದ ಮಾಹಿತಿ ಹಕ್ಕು ಕಾಯ್ದೆ-2005ಕ್ಕೆ ಮೋದಿ ಸರ್ಕಾರ ಮಾರಣಾಂತಿಕ ತಿದ್ದುಪಡಿ ತಂದಿದೆ. ಐದು ದಿನಗಳ ಹಿಂದಷ್ಟೇ ಲೋಕಸಭೆಯಲ್ಲಿ ಅನುಮೋಧನೆಯಾಗಿದ್ದ ತಿದ್ದುಪಡಿ ಮಸೂದೆಗೆ ಇಂದು ರಾಜ್ಯಸಭೆಯಲ್ಲಿಯೂ ಅನುಮೋಧನೆ ಸಿಕ್ಕಿದ್ದು ತಿದ್ದುಪಡಿ ಕಾನೂನು ಬದ್ಧವಾಗಿದೆ.

ಇನ್ನು ಮುಂದೆ ಯಾವುದೇ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತೋ ಆ ಪಕ್ಷದ ಎಂಜಲು ನಾಯಿಯಾಗಿ ಈ ಕಾಯ್ದೆ ಬಳಕೆಯಾಗಲಿದ್ದು ಇದರ ಸಂಪೂರ್ಣ ಸ್ವಾತಂತ್ರ್ಯ ನಶಿಸಿಹೋಗಲಿದೆ. ಆರ್.ಟಿ.ಐ ಕಾಯ್ದೆಯ ಸ್ವಾಯುತ್ತತೆ ಹಾಳಾಗುವುದರಿಂದ ಭ್ರಷ್ಟಾಚಾರ ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ.

ರಾಜ್ಯಸಭೆಯಲ್ಲಿ ಈ ಕಾಯ್ದೆಯನ್ನು ತಿದ್ದುಪಡಿ ಮಾಡಲು ಎನ್.ಡಿ.ಎ ಸರ್ಕಾರಕ್ಕೆ ಅಗತ್ಯ ಬಹುಮತವಿರಲಿಲ್ಲ. ಆದರೆ ಓರಿಸ್ಸಾದ ಬಿಜೆಡಿಯ ನವೀನ್ ಪಟ್ನಾಯಕ್ ಮತ್ತು ತೆಲಂಗಾಣದ ಟಿ.ಆರ್.ಎಸ್ ನ ಮುಖ್ಯಸ್ಥ ಕೆ.ಸಿ ಚಂದ್ರಶೇಖರ್ ರಾವ್ ಈ ಕಾಯ್ದೆಯ ತಿದ್ದುಪಡಿ ಪರವಾಗಿ ಇಂದು ರಾಜ್ಯಸಭೆಯಲ್ಲಿ ತಮ್ಮ ಸದಸ್ಯರಿಂದ ಮತ ಹಾಕಿಸಿದ್ದಾರೆ. ಹಾಗಾಗಿ ತಿದ್ದುಪಡಿ ಅನುಮೋಧನೆಯಾಗಿದೆ.

RTI ಕಾಯ್ದೆಯ ಮಹತ್ವವೇನು?

60 ವರ್ಷದ ಭ್ರಷ್ಟಾಚಾರವನ್ನು ಸಹಿಸಿಕೊಂಡಿದ್ದು ಸಾಕು, ಭ್ರಷ್ಟಾಚಾರ ಮುಕ್ತ ಭಾರತಕ್ಕಾಗಿ ಬಿಜೆಪಿ ಗೆಲ್ಲಿಸಿ, ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಿ ಎಂಬ ಪ್ರಚಾರವು 2014ರಲ್ಲಿ ಜನರಿಗೆ ಆಕರ್ಷಕವಾಗಿ ಕಾಣಲು ಕಾರಣವಿತ್ತು. ಯುಪಿಎ 1ರ ಅವಧಿಯ ಹಲವು ದೊಡ್ಡ ಹಗರಣಗಳು, ಯುಪಿಎ 2ರಲ್ಲಿ ಹೊರಬಂದಿದ್ದವು. ದೇಶದ ಹಲವಾರು ಭ್ರಷ್ಟಾಚಾರ ವಿರೋಧಿ ಹೋರಾಟಗಾರರು ಆ ಹಗರಣಗಳನ್ನು ಹೊರತೆಗೆದಿದ್ದರು. 2ಜಿ ಸ್ಪೆಕ್ಟ್ರಂ ಹಗರಣವು 1.75 ಲಕ್ಷ ಕೋಟಿಯದ್ದು ಎಂಬ ಉತ್ಪ್ರೇಕ್ಷಿತ ಅಂಕಿ-ಅಂಶಗಳನ್ನು ಬಿಟ್ಟರೆ, ನಿಜಕ್ಕೂ ಒಳ್ಳೆಯ ಕೆಲಸವನ್ನು ಈ ಹೋರಾಟಗಾರರು ಮಾಡಿದ್ದರು. ಇದಕ್ಕಿಂತಲೂ ದೊಡ್ಡ ಹಗರಣಗಳನ್ನು ಬಳ್ಳಾರಿಯಲ್ಲಿ ಗಣಿ ರೆಡ್ಡಿಗಳು ಮತ್ತು ಕೃಷ್ಣಾ ಗೋದಾವರಿ ಪ್ರದೇಶದಲ್ಲಿ ಅಂಬಾನಿಗಳು ಮಾಡಿದ್ದರು.

ಅಂಬಾನಿಗೆ ಯಾವ ತೊಂದರೆಯೂ ಆಗಲಿಲ್ಲ ಎನ್ನುವುದನ್ನು ಬಿಟ್ಟರೆ, ಮಿಕ್ಕ ಹಲವರು ಈ ಕಾಯ್ದೆಯಿಂದ ಜೈಲಿಗೆ ಹೋಗಬೇಕಾಯಿತು. ಕೆಲವು ಕಂಪೆನಿಗಳಿಗೆ ಪಿ.ಚಿದಂಬರಂರ ಪರೋಕ್ಷ ಅಭಯ ಇದ್ದರೆ, ಕೆಲವು ಕಂಪೆನಿಗಳಿಗೆ ಅರುಣ್ ಜೇಟ್ಲಿಯೇ ವಕೀಲರಾಗಿದ್ದರು. ಭ್ರಷ್ಟಾಚಾರ ವಿರುದ್ಧದ ಹೋರಾಟದ ಮೂಲಕವೇ ಅಧಿಕಾರಕ್ಕೆ ಬಂದ ಆಮ್‍ಆದ್ಮಿ ಪಕ್ಷವು, ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಅಂಬಾನಿಯ ಜೊತೆಗೆ, ಆತನ ಕಂಪೆನಿಗೆ ಸಹಾಯ ಮಾಡಿದ ಕೇಂದ್ರ ಮಂತ್ರಿ ವೀರಪ್ಪಮೊಯ್ಲಿಯನ್ನೂ ಆರೋಪಿಯನ್ನಾಗಿಸಿ ಎಫ್‍ಐಆರ್ ಮಾಡಿಸಿತು. ದೆಹಲಿಯ ಸರ್ಕಾರದ ಕೈಯ್ಯಲ್ಲಿದ್ದ ಭ್ರಷ್ಟಾಚಾರ ವಿರೋಧಿ ದಳವು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ಕೇಸುಗಳಲ್ಲಿ (ದೆಹಲಿಯಲ್ಲೇ ಭ್ರಷ್ಟಾಚಾರ ನಡೆದಿದ್ದರೂ ಸಹಾ) ಮಧ್ಯಪ್ರವೇಶ ಮಾಡುವಂತಿಲ್ಲ ಎಂಬ ಕಾನೂನನ್ನೇ ಕೇಂದ್ರವು ತಂದಿತು; ಆ ಮೂಲಕ ಮೊಯ್ಲಿ ಹಾಗೂ ಅಂಬಾನಿ ಬಚಾವಾದರು.

ಇಂತಹ ಹಲವಾರು ಹಗರಣಗಳು ಹೊರಬರಲು ಕಾರಣ, ಇದೇ ಯುಪಿಎ ಸರ್ಕಾರವೇ ತನ್ನ ಮೊದಲ ಅವಧಿಯಲ್ಲಿ ತಂದಿದ್ದ ಮಾಹಿತಿ ಹಕ್ಕು ಕಾಯ್ದೆ. ನಿಜಕ್ಕೂ ಭ್ರಷ್ಟಾಚಾರಿಗಳನ್ನು ಕಾಡಿದ ಕಾಯ್ದೆ ಇದಾಗಿತ್ತು. ಆದರೆ, ಇಷ್ಟೇ ಸಾಕಾಗದು ಎಂಬುದು ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಅನುಭವವಿದ್ದವರ ವಾದವಾಗಿತ್ತು. ಏಕೆಂದರೆ, ಹೊರಬಂದ ಹಗರಣಗಳನ್ನು ತನಿಖೆ ಮಾಡುವ ಮತ್ತು ಶಿಕ್ಷೆ ನೀಡುವ ಅಧಿಕಾರ ಇರುವ ಲೋಕಪಾಲ್ (ಲೋಕಾಯುಕ್ತ) ಸಹಾ ಪ್ರಬಲವಾಗಿರಬೇಕು. ವಾಸ್ತವದಲ್ಲಿ ದೆಹಲಿ ಕೇಂದ್ರಿತವಾಗಿ ದೇಶದೆಲ್ಲೆಡೆ ಹರಡಿದ ಈ ಚಳವಳಿಯ ಪ್ರಮುಖ ಹಕ್ಕೊತ್ತಾಯವೇ ಲೋಕಪಾಲ್ ಆಗಿತ್ತು.

ಇದರ ಜೊತೆಗೆ ದೇಶದೊಳಗಿನ ಕಪ್ಪುಹಣವು ಬೇರೆ ದೇಶಕ್ಕೆ ಹೋಗಿ ಮರಳಿ ನಮ್ಮ ದೇಶದೊಳಗೆ ವಿದೇಶೀ ಹೂಡಿಕೆಯಾಗಿ ವಾಪಸ್ಸು ಬರಲು ಬಳಕೆಯಾಗುತ್ತಿದ್ದ ವಿಧಾನವೆಂದರೆ ಪಿ ನೋಟ್ (ಪಾರ್ಟಿಸಿಪೇಟರಿ ನೋಟ್). ಇದನ್ನು ಪಾರದರ್ಶಕಗೊಳಿಸಬೇಕು ಎಂಬ ಒತ್ತಾಯಕ್ಕೆ ಮಣಿದಂತೆ ಕಂಡ ಯುಪಿಎ ಸರ್ಕಾರವು, ನಂತರ ಭ್ರಷ್ಟ ಹೂಡಿಕೆದಾರರ ‘ಸೆನ್ಸೆಕ್ಸ್ ಕುಸಿತ’ದ ಬೆದರಿಕೆಗೆ ಮಣಿದು ಸುಮ್ಮನಾಗಿಬಿಟ್ಟಿತು.

ವಾಸ್ತವದಲ್ಲಿ ಆರ್‍ಟಿಐ ಎಷ್ಟು ಪರಿಣಾಮಕಾರಿ ಅಸ್ತ್ರವಾಗಿತ್ತೆಂದರೆ, ಹಲವು ಆರ್‍ಟಿಐ ಕಾರ್ಯಕರ್ತರನ್ನು ಭ್ರಷ್ಟರು ಕೊಲೆಯನ್ನೇ ಮಾಡಿಸಿದ್ದಾರೆ. ಹೀಗಾಗಿ ‘ಭ್ರಷ್ಟಾಚಾರ ವಿರೋಧಿ ಹೋರಾಟಗಾರರನ್ನು ರಕ್ಷಿಸುವ ಕಾಯ್ದೆ (Whistleblower act)’ ತರಬೇಕೆಂಬ ಒತ್ತಾಯ ಕೇಳಿಬಂದಿತು. ಆದರೆ, ಇದೀಗ ಎಲ್ಲವೂ ಉಲ್ಟಾ ಆಗಲು ಶುರುವಾಗಿದೆ.

ತಿದ್ದುಪಡಿಯಲ್ಲಿ ಏನಿದೆ?

ಆರ್‍ಟಿಐ ಅರ್ಜಿ ಹಾಕಿದ ವ್ಯಕ್ತಿ ಸತ್ತರೆ, ಆ ಅರ್ಜಿಯನ್ನೂ ಕೈ ಬಿಡಬೇಕೆಂಬ ತಿದ್ದುಪಡಿ ಇದೆ. ಅಂದರೆ, ನಿಮ್ಮ ಭ್ರಷ್ಟಾಚಾರವನ್ನು ಬಯಲುಗೊಳಿಸಬಹುದಾದ ಅರ್ಜಿ ಬಂದರೆ, ಅರ್ಜಿದಾರನನ್ನೇ ಮುಗಿಸಿ ಎಂಬ ಸಂದೇಶ ಅದರಿಂದ ಹೊರಡುತ್ತಿದೆ. ಮೋದಿಯವರ ಅತ್ಯಾಪ್ತ, ಬಿಜೆಪಿಯ ಅಧ್ಯಕ್ಷ ಅಮಿತ್‍ಷಾ ಮೇಲೆ ಇರುವ ಕೊಲೆ ಆರೋಪದ ತನಿಖೆ ನಡೆಸುತ್ತಿದ್ದ ಜಸ್ಟೀಸ್ ಲೋಯಾರೇ ಮರಣ ಹೊಂದಿದರು ಮತ್ತು ಆ ಪ್ರಕರಣದ ಇನ್ನೊಬ್ಬ ವ್ಯಕ್ತಿಯೂ ಇತ್ತೀಚೆಗೆ ನಿಗೂಢವಾಗಿ ಸಾವನ್ನಿಪ್ಪಿದರು. ಬಿಜೆಪಿ ಅಧಿಕಾರದಲ್ಲಿರುವ ಮಧ್ಯಪ್ರದೇಶದಲ್ಲಿ ನಡೆದ ವ್ಯಾಪಂ (ವೃತ್ತಿಪರ ಕಾಲೇಜುಗಳ ಪ್ರವೇಶಾತಿಗೆ ಸಂಬಂಧಿಸಿದ) ಹಗರಣದ ಜೊತೆಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಂಬಂಧ ಹೊಂದಿದ 100ಕ್ಕೂ ಹೆಚ್ಚು ಜನರು ಇದುವರೆಗೂ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಹೀಗಾಗಿಯೇ, ಇಂದು ಆರ್‍ಟಿಐ ಕಾಯ್ದೆಯೇ ಇಲ್ಲವಾಗುವಂತೆ ಅಥವಾ ದುರ್ಬಲವಾಗುವಂತೆ ಮಾಡಲು ಈ ತಿದ್ದುಪಡಿ ಬಂದಿದೆ.  ಇನ್ನು ಮುಖ್ಯ ಮಾಹಿತಿ ಆಯುಕ್ತರ ಸಂಬಳ ನೀಡುವ ಅಧಿಕಾರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಈ ತಿದ್ದುಪಡಿ ನೀಡಿದೆ. ಇದರಿಂದ ಆಯೋಗದ ಸ್ವಾಯತ್ತತೆಗೆ ಧಕ್ಕೆ ಬರುವುದಲ್ಲದೇ ಅವರ ಸ್ವಾತಂತ್ರ್ಯವನ್ನು ನಿಯಂತ್ರಣದಲ್ಲಿಟ್ಟಂತಾಗುತ್ತದೆ. ಈಗಾಗಲೇ ರಾಷ್ಟ್ರೀಯ ಭದ್ರತೆ, ವೈಯಕ್ತಿಕ ಗೌಪ್ಯತೆ, ಕಾಪಿರೈಟ್, ಇತ್ಯಾದಿಗಳ ನೆಪದಲ್ಲಿ 2016-17 ಸಾಲಿನಲ್ಲಿ ಸಲ್ಲಿಕೆಯಾದ ಅರ್ಜಿಗಳಲ್ಲಿ ಶೇ.35ರಷ್ಟು ಅರ್ಜಿಗಳನ್ನು ಮಾಹಿತಿ ನೀಡದೇ ವಜಾ ಮಾಡಲಾಗಿದೆ. ಇದೇ ರೀತಿಯ ತಿದ್ದಪಡಿಗಳಾದಲ್ಲಿ ಶೇ.100ರಷ್ಟು ಅರ್ಜಿಗಳು ವಜಾಗೊಳ್ಳುವ ಕಾಲ ದೂರವಿಲ್ಲ.

ಮಾಹಿತಿ ಹಕ್ಕು ಕಾಯ್ದೆ ನಿಸ್ಸಂಶಯವಾಗಿ ದೇಶದ ಪ್ರತಿಯೊಬ್ಬ ಜನರ ಪ್ರಶ್ನಿಸುವ ಹಕ್ಕನ್ನು ಸಶಕ್ತಗೊಳಿಸುವ ಜನಪರ ಕಾಯ್ದೆಯಾಗಿತ್ತು. ಒಂದು ಅಂದಾಜಿನ ಪ್ರಕಾರ ಪ್ರತಿವರ್ಷ ಸುಮಾರು 6 ಮಿಲಿಯನ್ ಮಾಹಿತಿ ಹಕ್ಕು ಅರ್ಜಿಗಳು ಸಲ್ಲಿಕೆಯಾಗುತ್ತವೆ. ಪ್ರಪಂಚದಲ್ಲೇ ವ್ಯಾಪಕವಾದ ಪಾರದರ್ಶಕತೆಗೆ ಹೆಸರಾದ ಕಾಯ್ದೆ ಇದಾಗಿತ್ತು. ಬಡ ಗ್ರಾಮೀಣ ಮತ್ತು ನಗರ ನಿವಾಸಿಗಳು ತಮ್ಮ ಮೂಲಭೂತ ಅಧಿಕಾರವನ್ನು ತಿಳಿಯಲು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆರ್‍ಟಿಐ ಅರ್ಜಿ ಸಲ್ಲಿಸಿದ್ದಾರೆಂದು ರಾಷ್ಟ್ರೀಯ ಮೌಲ್ಯಮಾಪನ ಸರ್ವೇ ಗುರುತಿಸಿದೆ. ಗ್ರಾಮಪಂಚಾಯ್ತಿಯಿಂದ ಹಿಡಿದು ದೇಶದ ದೊಡ್ಡ ದೊಡ್ಡ ಸಂಸ್ಥೆಗಳನ್ನು ಪ್ರಶ್ನಿಸುವ, ಪಾರದರ್ಶಕತೆಯನ್ನು ಕೇಳುವ ಮತ್ತು ಯಾವುದೇ ಮಾಹಿತಿ ಪಡೆಯುವ ಅತ್ಯುತ್ತಮ ಕಾಯ್ದೆ ಇದಾಗಿತ್ತು.

ತಿದ್ದುಪಡಿ ಮಾಡಿದ್ದು ಏಕೆ?

ದೇಶವನ್ನು ಕೊಳ್ಳೆ ಹೊಡೆಯುತ್ತಿರುವ ಕಾರ್ಪೋರೇಟ್ ಕುಳಗಳ ದೊಡ್ಡ ದೊಡ್ಡ ಹಗರಣಗಳು ಬೆಳಕಿಗೆ ಬಾರದಂತೆ ತಡೆಯುವ ದುರುದ್ದೇಶದಿಂದಲೇ ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿ ತರಲಾಗಿದೆ.

ಉದ್ದೇಶಿತ ತಿದ್ದುಪಡಿಯನ್ನು ಕೈಬಿಡುವುದು ಮತ್ತು ವಿಶಲ್ ಬ್ಲೋಯರ್ಸ್ ಪ್ರೊಟೆಕ್ಷನ್ ಆಕ್ಟ್ ತಕ್ಷಣದಿಂದ ಜಾರಿಗೆ ತರುವುದು, ಚುನಾವಣಾ ಬಾಂಡ್ (ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವವರ ಮಾಹಿತಿಯನ್ನು ಸಾರ್ವಜನಿಕಗೊಳಿಸದಿರುವುದು) ಪದ್ದತಿಯನ್ನು ಕೈಬಿಡುವುದು ಮತ್ತು ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳಿಗೆ ಕೂಡಲೇ ಮುಖ್ಯಸ್ಥರನ್ನು ನೇಮಿಸುವಂತೆ ಹಕ್ಕೊತ್ತಾಯಗಳನ್ನು ಮುಂದಿಟ್ಟು ಬಹಳಷ್ಟು ಪ್ರಜ್ಞಾವಂತರು ಹೋರಾಟ ನಡೆಸಿದ್ದರು. ಈ ಹೋರಾಟದಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತರಾಗಿ ದುಡಿದು ಕೊಲೆಯಾದ ನೂರಾರು ಕುಟುಂಬಗಳ ಸದಸ್ಯರು ಭಾಗವಹಿಸುತ್ತಿದ್ದರು ಮಹತ್ವದ ಸಂಗತಿಯಾಗಿದೆ. ಇತ್ತೀಚೆಗೆ ಬಿಹಾರದಲ್ಲಿ ಭ್ರಷ್ಟಾಚಾರವನ್ನು ಬಯಲುಗೊಳಿಸಿದ್ದಕ್ಕಾಗಿ ಕೊಲೆಗೀಡಾದ ರಾಜೇಂದರ್ ಸಿಂಗ್ ಮತ್ತು ವಾಲ್ಮೀಕಿ ಯಾದವ್‍ರವರ ಕೂಡ ಆರ್.ಟಿ.ಐ ಬಲಪಡಿಸಲು ಒತ್ತಾಯಿಸಿದ್ದರು. ವ್ಯಾಪಂ ಹಗರಣವನ್ನು ಬೆಳಕಿಗೆ ತರುವಲ್ಲಿ ಮುಖ್ಯ ಪಾತ್ರ ವಹಿಸಿದ ಆಶಿಶ್ ಚರ್ತುವೇದಿ ಕೂಡ ಹೋರಾಟದಲ್ಲಿ ಭಾಗವಹಿಸಿದ್ದರು.

ಆದರೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅದೆಲ್ಲವನ್ನು ಕಡೆಗಣಿಸಿ ಆರ್.ಟಿ.ಐ ಅನ್ನು ದುರ್ಬಲಗೊಳಿಸಿ ಅದರ ಕತ್ತು ಹಿಸುಕುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...