Homeಮುಖಪುಟಎನ್‌ಡಿಟಿವಿ: ಬಂಡವಾಳಶಾಹಿ ಪಿತೂರಿಗೆ ಬಾಗಿದ ಬಿರುಗಾಳಿ

ಎನ್‌ಡಿಟಿವಿ: ಬಂಡವಾಳಶಾಹಿ ಪಿತೂರಿಗೆ ಬಾಗಿದ ಬಿರುಗಾಳಿ

- Advertisement -
- Advertisement -

’ನಗುವವರ ಮುಂದೆ ಎಡವಿ ಬೀಳಬಾರದು’ ಎಂಬ ಮಾತೊಂದಿದೆ. ನಮ್ಮ ಪತನವನ್ನು ಬಯಸುವವರು, ಏಳಿಗೆಯನ್ನು ಸಹಿಸದವರ ಮುಂದೆ ಸಣ್ಣ ತಪ್ಪು ಮಾಡಬಾರದು; ಸುಮ್ಮನೆ ನಗುವವರಿಗೆ, ಕಾರಣ ನೀಡಿದಂತಾಗುತ್ತದೆ ಎಂಬುದು ಈ ಮಾತಿನ ಹಿನ್ನೆಲೆ.

ಎನ್‌ಡಿಟಿವಿಯ ಕತೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಎಡವಿ ಬೀಳುವಂತೆ ಮಾಡಿ ನಗುತ್ತಿರುವಂತೆ ಆಗಿದೆ. ಎನ್‌ಡಿಟಿವಿ ತನ್ನ ವಿಶಿಷ್ಟವಾದ ಪತ್ರಿಕೋದ್ಯೋಗದಿಂದ ದೇಶದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಯಾಗಿ ಬೆಳೆದು ನಿಂತಿತ್ತು. ರಾಜಿಯಾಗದ, ಸತ್ಯಪರವಾದ ಪತ್ರಿಕೋದ್ಯೋಗಕ್ಕೆ ಬದ್ಧವಾಗಿತ್ತು. ಅಧಿಕಾರದಲ್ಲಿರುವವರನ್ನು ಪ್ರಶ್ನಿಸಿ ನಿರ್ಭೀತ ಪತ್ರಿಕೋದ್ಯೋಗಕ್ಕೆ ಮಾದರಿಯಾಗಿತ್ತು. ಆದರೆ ಈ ನಡೆಯನ್ನು ಪ್ರಸ್ತುತ ಇರುವ ಸರ್ಕಾರವಾಗಲಿ, ಸರ್ಕಾರದೊಂದಿಗೆ ಕೈ ಜೋಡಿಸಿರುವ ಬಂಡವಾಳಶಾಹಿಗಳು ಹೇಗೆ ಸಹಿಸಲು ಸಾಧ್ಯ? ಹೇಗಾದರೂ ಎನ್‌ಡಿಟಿವಿಯನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಲು ಈ ಶಕ್ತಿಗಳು ಪ್ರಯತ್ನಿಸಲಾರಂಭಿಸಿದವು.

2017ರ ಸಿಬಿಐ ದಾಳಿಯ ಪ್ರಕರಣವನ್ನೇ ನೆನಪಿಸಿಕೊಳ್ಳಿ. ಬಂಡವಾಳ ದುರುಪಯೋಗದ ಆರೋಪದ ಮೇಲೆ ಸಿಬಿಐ ಮತ್ತು ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದರು. ಎನ್‌ಡಿಟಿವಿಯ ಮೇಲೆ ಇಂತಹದ್ದೊಂದು ಬಲಪ್ರಯೋಗದ ಮೂಲಕ ಬೆದರಿಸಬಹುದು ಎಂದು ಭಾವಿಸಿತ್ತು. ಆದರೆ ಎನ್‌ಡಿಟಿವಿಗೆ ದೇಶದೆಲ್ಲೆಡೆಯಿಂದ ಬೆಂಬಲ ವ್ಯಕ್ತವಾಯಿತು. ಪ್ರತಿಭಟನೆಗಳು ನಡೆದವು. ದೇಶದೆಲ್ಲೆಡೆ ಬಹುತೇಕ ಮುಖ್ಯವಾಹಿನಿ ಮಾಧ್ಯಮವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿರುವಾಗ, ಇದೊಂದು ಮಾಧ್ಯಮ ಸಂಸ್ಥೆಯನ್ನು ಸುಮ್ಮನೆ ಹೇಗೆ ಬಿಟ್ಟಾರು? ಸರಿಯಾದ ಸಮಯಕ್ಕೆ, ಅಂದರೆ ತಪ್ಪು ಮಾಡುವುದಕ್ಕಾಗಿ ಕಾಯುತ್ತಿದ್ದರು!

*****

ಎಂಬತ್ತರ ದಶಕದ ಮಧ್ಯ ಭಾಗ. ದೂರದರ್ಶನವೊಂದೇ ಇದ್ದ ಕಾಲ. ಆಗ ಈ ಸರ್ಕಾರಿ ವಾಹಿನಿ ದಿನಕ್ಕೊಂದು ಬಾರಿ ಬಿತ್ತರಿಸಿದ್ದೇ ಸುದ್ದಿ. ಇಪ್ಪತ್ತ ನಾಲ್ಕು ತಾಸು ಸುದ್ದಿ ಬಿತ್ತರಿಸಬಹುದು ಎಂದು ಈ ದೇಶದ ಯಾವ ಪತ್ರಕರ್ತನೂ ಕಲ್ಪಿಸಿಕೊಂಡಿರಲಿಲ್ಲ. ಅಂತಹ ಕಲ್ಪನೆಯನ್ನು ದೇಶಕ್ಕೆ ರುಚಿಕಟ್ಟಾಗಿ ಕೊಟ್ಟವರು ಪ್ರಣಯ್ ರಾಯ್. ದೆಹಲಿಯ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಪಾಠ ಮಾಡಿಕೊಂಡಿದ್ದ ಪ್ರಣಯ್‌ರಾಯ್ ಚುನಾವಣಾ ವಿಶ್ಲೇಷಣೆಯ ಸೆಳೆತಕ್ಕೆ ಬಿದ್ದಿದ್ದರು. ಸಹವರ್ತಿ ಅರ್ಥಶಾಸ್ತ್ರಜ್ಞ ಅಶೋಕ್ ಲಾಹಿರಿ, ಮಾರುಕಟ್ಟೆ ತಜ್ಞರಾದ ಅಹಲುವಾಲಿಯಾ ಮತ್ತು ದೊರಬ್ ಸೊಪಾರಿವಾಲಾ ಅವರ ಜೊತೆಗೆ ಕೂತು ಚುನಾವಣೆಗಳ ಆಳ ಅಗಲಗಳನ್ನು ಅಳೆದು, ಚುನಾವಣಾ ರಾಜಕೀಯ, ಪಕ್ಷಗಳ ಬಲಾಬಲಗಳನ್ನು ವಿಶ್ಲೇಷಿಸುವ ಹೊಸ ಸಾಹಸಕ್ಕೆ ಕೈ ಹಾಕಿದ್ದರು. ಆ ಸಾಹಸ ಅವರನ್ನು ಮಾಧ್ಯಮ ಲೋಕಕ್ಕೆ ಎಳೆದು ತಂದಿತ್ತು.

ಇದೇ ಹೊತ್ತಲ್ಲಿ ದೂರದರ್ಶನ ತನ್ನ ವರ್ಚಸ್ಸು ಹೆಚ್ಚಿಸಿಕೊಳ್ಳುವುದಕ್ಕೆ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲು ಸಿದ್ಧವಾಗಿತ್ತು . ಅದಕ್ಕಾಗಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ಹೊಸ ಪ್ರತಿಭೆಗಳನ್ನು ದೂರದರ್ಶನದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಸೂಚಿಸಿದ್ದರು. ಆಗ ದೂರದರ್ಶನದ ಪ್ರಧಾನ ನಿರ್ದೇಶಕರಾಗಿ ನೇಮಕಗೊಂಡಿದ್ದ ಭಾಸ್ಕರ್ ಘೋಷ್ ಕೂಡ ಹೊಸ ಉತ್ಸಾಹಿಗಳನ್ನು ಹುಡುಕುತ್ತಿದ್ದರು. ಈ ಹೊಸ ಪ್ರತಿಭೆಗಳಿಗೆ ಇದ್ದ ಅವಕಾಶ ಒಲಿದು ಬಂದಿದ್ದು ಪ್ರಣಯ್‌ರಾಯ್ ಅವರಿಗೆ. ಪತ್ನಿ ರಾಧಿಕಾ ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ಇಂಡಿಯಾ ಟುಡೆಯಲ್ಲಿ ಪತ್ರಕರ್ತೆಯಾಗಿ ದುಡಿದ ಅನುಭವವಿತ್ತು. ಈ ಇಬ್ಬರು ಸೇರಿ ನ್ಯೂ ಡೆಲ್ಲಿ ಟೆಲಿವಿಷನ್ ಲಿಮಿಟೆಡ್ ಆರಂಭಿಸಿ, ಅದರ ಮೂಲಕ ದೂರದರ್ಶನಕ್ಕಾಗಿ ಕಾರ್ಯಕ್ರಮಗಳನ್ನು ನಿರ್ಮಿಸಿಕೊಡಲಾರಂಭಿಸಿದರು.

ಗಂಭೀರ ಆಡಳಿತಾತ್ಮಕ ಭಾಷೆ, ಗತ್ತುಗಳಲ್ಲೇ ಮುಳುಗಿದ್ದ ದೂರದರ್ಶನಕ್ಕೆ ಸಹಜ, ಆಡುಭಾಷೆಯ ಸರಳವಾದ ಮಾದರಿಯನ್ನು ಪರಿಚಯಿಸಿದರು. ದೂರದರ್ಶನಕ್ಕೆ ’ವರ್ಲ್ಡ್ ದಿಸ್ ವೀಕ್’ ನಿರ್ಮಿಸಿಕೊಟ್ಟರು. ಆದರೆ ಮಾಧ್ಯಮ ಲೋಕದೊಳಗೆ ರಾಯ್ ಅವರಿಗೆ ಮಹಾ ಜಿಗಿತವೊಂದಕ್ಕೆ ಕಾರಣವಾಗಿದ್ದು, 1989ರ ನವೆಂಬರ್ 22ರಿಂದ 26ರವರೆಗೆ ಚುನಾವಣೆ ಫಲಿತಾಂಶ; ಫಲಿತಾಂಶಕ್ಕಾಗಿ ಜನರು ಎದುರು ನೋಡುತ್ತಿದ್ದಾಗ ಬಿತ್ತರವಾದ ಚುನಾವಣಾ ವಿಶ್ಲೇಷಣೆ. ಇಂದು ನಾವು ಎಲ್ಲ ಸುದ್ದಿವಾಹಿನಿಗಳಲ್ಲಿ ನೋಡುವ ಚುನಾವಣೆಯ ಕವರೇಜ್ ಕಲ್ಪನೆ, ಭಾರತದ ಮಾಧ್ಯಮ ಲೋಕಕ್ಕೆ ಪರಿಚಯವಾದ ದಿನವದು. ರಾಯ್ ಮತ್ತು ಅವರ ತಂಡ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್‌ಗೆ ಹಿನ್ನಡೆಯಾಗುವುದನ್ನು ಗ್ರಹಿಸಿದ್ದರು. ಆದರೆ, ಅಂದು ಟಿವಿ ಪರದೆ ಮೇಲೆ ಬಿತ್ತರವಾದ ವಿಶ್ಲೇಷಣೆಯ ಹಿಂದೆ ಎಂತಹ ಸಾಹಸ ನಡೆದಿತ್ತು ಎಂಬುದನ್ನು ಇಂಡಿಯಾ ಟುಡೆ ತನ್ನ ವರದಿಯೊಂದರಲ್ಲಿ ಹೀಗೆ ದಾಖಲಿಸಿದೆ: “ದೂರದರ್ಶನದ ಸ್ಟುಡಿಯೋದಿಂದ ದೆಹಲಿ ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿಗೆ 97 ಹಾಟ್‌ಲೈನ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ಲೈನ್ ದೇಶದ ಬಹುಮುಖ್ಯವಾದ ಕ್ಷೇತ್ರದ ಫಲಿತಾಂಶದ ವಿವರಗಳನ್ನು ನೀಡುವುದಕ್ಕೆ ಮೀಸಲಿರಿಸಲಾಗಿತ್ತು. ದೇಶದ ವಿವಿಧ ಭಾಗಗಳಲ್ಲಿ 15 ಒಬಿ ವ್ಯಾನ್‌ಗಳನ್ನು ನಿಲ್ಲಿಸಲಾಗಿತ್ತು.”

ಇದನ್ನೂ ಓದಿ: NDTV ರಾಜೀನಾಮೆ ಬೆನ್ನಲ್ಲೆ ಯೂಟ್ಯೂಬ್ ಚಾನೆಲ್ ತೆರೆದ ರವೀಶ್ ಕುಮಾರ್: ಈಗಾಗಲೇ 10 ಲಕ್ಷದಷ್ಟು ಚಂದಾದಾರರು!

ಕ್ಷಣಕ್ಷಣದ ಚುನಾವಣಾ ಮಾಹಿತಿಯನ್ನು ಬಿತ್ತರಿಸುವ ಈ ಹೊಸ ಸಾಹಸ ದೂರದರ್ಶನದ ಪಾಲಿಗಷ್ಟೇ ಅಲ್ಲ, ವೀಕ್ಷಕರು, ರಾಜಕಾರಣಿಗಳು- ಹೀಗೆ ಎಲ್ಲರಿಗೂ ಒಂದು ರೋಚಕ ಅನುಭವವೇ ಆಗಿತ್ತು. ಅವತ್ತಿನ ಮಟ್ಟಿಗೆ ಈ ಸಾಹಸಕ್ಕೆ ದೂರದರ್ಶನ 2.5 ಕೋಟಿ ರೂ.ಗಳನ್ನು ವೆಚ್ಚ ಮಾಡಿತ್ತಂತೆ. ಇದು ರಾಯ್, ಎನ್‌ಡಿಟಿವಿ ಮತ್ತು ದೇಶದ ಮಾಧ್ಯಮದ ಲೋಕದ ಮಹತ್ತರ ಮೈಲುಗಲ್ಲು. ರಾಯ್ ಇಲ್ಲಿಂದ ಮುಂದೆ ಮಾಧ್ಯಮದ ಲೋಕದ ಬೇಡಿಕೆಯ ವ್ಯಕ್ತಿಯಾಗಿ ಬೆಳೆದರು. ತೊಂಭತ್ತರ ದಶಕದ ಆರಂಭ, ಮಾಧ್ಯಮ ಮಾರುಕಟ್ಟೆ ನಿಧಾನವಾಗಿ ವ್ಯಾಪಿಸಿಕೊಳ್ಳಲಾರಂಭಿಸಿತ್ತು. ಹೊಸ ಪ್ರಯೋಗಗಳ ಮೂಲಕ ಬಿರುಗಾಳಿ ಎಬ್ಬಿಸಿದ ರಾಯ್ ಅವರನ್ನು ಸ್ಟಾರ್ ಸಮೂಹವು ತನ್ನ ಸುದ್ದಿವಾಹಿನಿಗೆ ನಿರ್ಮಾಣ ಜವಾಬ್ದಾರಿ ವಹಿಸಿಕೊಳ್ಳಲು ಒಪ್ಪಿಕೊಳ್ಳುವಂತೆ ಕೇಳಿಕೊಂಡಿತು. 1998ರಿಂದ 2003ರವರಗೆ, ಅಂದರೆ ಎನ್‌ಡಿಟಿವಿ ಸಂಸ್ಥೆ ಸ್ವತಂತ್ರವಾಗಿ ತನ್ನದೇ ಸುದ್ದಿವಾಹಿನಿ ಆರಂಭಿಸುವವರೆಗೂ ಸ್ಟಾರ್ ನ್ಯೂಸ್‌ಗೆ ಸುದ್ದಿ ನಿರ್ಮಾಣದ ಜವಾಬ್ದಾರಿಯನ್ನು ರಾಯ್ ಹೊತ್ತುಕೊಂಡಿತು.

ಸ್ಟಾರ್ ಜೊತೆಗೆ ಐದು ವರ್ಷದ ಒಪ್ಪಂದ ಮುಗಿಯುತ್ತಿದ್ದಂತೆ, ಎನ್‌ಡಿಟಿವಿ ತನ್ನದೇ ಇಂಗ್ಲಿಷ್ ಮತ್ತು ಹಿಂದಿ ಚಾನೆಲ್‌ಗಳನ್ನು ಆರಂಭಿಸಿತು. ಎನ್‌ಡಿಟಿವಿ ಹೊಸ ಸಾಹಸಕ್ಕೆ ಸ್ಟಾರ್ ಸಮೂಹದ್ದೇ ಹಣ ಹೂಡಿಕೆಯಾಗಿತ್ತು. ಇದು ಮಾಧ್ಯಮದ ಲೋಕದ ಹೊಸ ಅಧ್ಯಾಯ. ಎನ್‌ಡಿಟಿವಿ ಎಂತೆಂತಹ ಪತ್ರಕರ್ತರನ್ನು ಬೆಳೆಸಿತು ಎಂಬುದನ್ನು ಕಳೆದ 19 ವರ್ಷಗಳಲ್ಲಿ ಆ ವಾಹಿನಿಯನ್ನು ಗಮನಿಸಿದವರಿಗೆಲ್ಲಾ ಗೊತ್ತು. ’ರಾಯ್ ಬಾಯ್ಸ್’ ಎಂದು ಕರೆಸಿಕೊಂಡ ಬಹುತೇಕರು ಇಂದು ಬೇರೆಬೇರೆ ಚಾನೆಲ್‌ಗಳಲ್ಲಿ ಮುಖ್ಯ ಸ್ಥಾನದಲ್ಲಿದ್ದಾರೆ. ರಾಯ್ ಗರಡಿಯಲ್ಲಿ ಪಳಗಿದ ಪತ್ರಕರ್ತರು ಒಂದು ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದ್ದಾರೆ. ಸೋನಿಯಾ ಸಿಂಗ್, ವಿಕ್ರಮ್ ಚಂದ್ರ, ಬರ್ಕಾ ದತ್, ರಾಜ್‌ದೀಪ್ ಸರ್‌ದೇಸಾಯಿ, ಶ್ರೀನಿವಾಸನ್ ಜೈನ್, ವಿಷ್ಣು ಸೋಮ್, ಮಾಯಾ ಮಿರ್ಚಂದಾನಿ, ಅರ್ನಬ್ ಗೋಸ್ವಾಮಿ, ಸಾಗರಿಕಾ ಘೋಷ್, ನಿಧಿ ರಾಜ್‌ದಾನ್, ಸುನೇತ್ರ ಚೌಧರಿ, ರವೀಶ್ ಕುಮಾರ್ ಪತ್ರಕರ್ತರಾಗಿ ಮಿಂಚಿದವರು.

’ವೀ ದಿ ಪೀಪಲ್’, ’ಪ್ರೈಮ್ ಟೈಮ್’, ’ಲೆಫ್ಟ್ ರೈಟ್’ ಸೆಂಟರ್ನಂತಹ ಶೋಗಳ ಜೊತೆಗೆ ರಾಜಕೀಯ ಸುದ್ದಿ, ವಿಶ್ಲೇಷಣೆ, ಚುನಾವಣಾ ಪೋಲ್‌ಗಳ ಕಾರಣಕ್ಕೆ ಎನ್‌ಡಿಟಿವಿ ಗಳಿಸಿದ ವಿಶ್ವಾಸಾರ್ಹತೆ, ಜನಪ್ರಿಯತೆ ನಿಜಕ್ಕೂ ಬಿರುಗಾಳಿಯ ವೇಗದ್ದು. ಎನ್‌ಡಿಟಿವಿ ಜನಪ್ರಿಯತೆಯನ್ನು ನೋಡಿದ ಅನೇಕರು ಹೊಸಹೊಸ ಚಾನೆಲ್‌ಗಳನ್ನು ಆರಂಭಿಸಿದರು. ಸಿಎನ್‌ಎನ್‌ಐಬಿಎನ್ ಬಂತು. ಟೈಮ್ಸ್ ಸಂಸ್ಥೆಯ ಟೈಮ್ಸ್ ನೌ ಬಂತು. ರಾಜಕೀಯ ತುರುಸು, ಮಾಧ್ಯಮಗಳಲ್ಲಿ ಬಂಡವಾಳಶಾಹಿ-ರಾಜಕಾರಣಿ ಶಕ್ತಿಗಳ ಹಿತಾಸಕ್ತಿ-ಪ್ರಭಾವದ ಕಾರಣಕ್ಕೆ, ರಿಪಬ್ಲಿಕ್, ಆಜ್‌ತಕ್ ತರದ ಚಾನೆಲ್‌ಗಳ ಅಬ್ಬರವೂ ಜೋರಾಯ್ತು. ಎನ್‌ಡಿಟಿವಿಯಲ್ಲಿ ಪಳಗಿದವರೇ ಈ ಹೊಸ ಚಾನೆಲ್‌ಗಳ ಸಾರಥ್ಯ ವಹಿಸಿಕೊಂಡು ಎನ್‌ಡಿಟಿವಿಗೆ ಪ್ರತಿಸ್ಪರ್ಧೆ ಒಡ್ಡಲು ಶುರುಮಾಡಿದರು.

2015ರಲ್ಲಿ ಎರಡು ಪ್ರಮಾದಗಳಾದವು. ಅವು ಎನ್‌ಡಿಟಿವಿ ಮತ್ತು ರಾಯ್ ವೃತ್ತಿ ಇತಿಹಾಸದಲ್ಲಿ ಆದ ಪ್ರಮುಖ ಪ್ರಮಾದಗಳೆಂದು ಪತ್ರಕರ್ತರೂ ಚುನಾವಣಾ ತಜ್ಞರೂ ಗುರುತಿಸುತ್ತಾರೆ. ಅದು ಬಿಹಾರ ವಿಧಾನಸಭಾ ಚುನಾವಣೆ ಸಂದರ್ಭ. ಚುನಾವಣೋತ್ತರ ಸಮೀಕ್ಷೆಗಳಲ್ಲಿ ಪರಿಣಿತ ಎನಿಸಿಕೊಂಡ ಪ್ರಣಯ್ ರಾಯ್ ಬಿಜೆಪಿಯ ನೇತೃತ್ವದ ಮೈತ್ರಿಕೂಟ ಅಧಿಕಾರ ಹಿಡಿಯಲಿದೆ ಎಂದು ಭವಿಷ್ಯ ನುಡಿದರು. ಫಲಿತಾಂಶ ವ್ಯತಿರಿಕ್ತವಾಯಿತು. ಎರಡನೆಯದು, ಫಲಿತಾಂಶದ ದಿನ ಬೆಳಗಿನ ಟ್ರೆಂಡ್ ನೋಡಿದ ರಾಯ್ ಬಿಜೆಪಿಯ ಮೈತ್ರಿ ಗೆದ್ದಿದೆ ಎಂದರು. 140 ಸೀಟ್‌ಗಳೆಂದು ಸ್ಥಾನಗಳ ಸಹಿತ ಫಲಿತಾಂಶವನ್ನು ಘೋಷಿಸಿದ್ದರು. ಇದಾಗಿ ಒಂದು ತಾಸಿನಲ್ಲಿ ಚಿತ್ರಣವೇ ಬದಲಾಗಿತ್ತು. ಆರ್‌ಜೆಡಿ, ಜೆಡಿಯು, ಕಾಂಗ್ರೆಸ್‌ನ ಮಹಾ ಮೈತ್ರಿ ಗೆಲುವು ಸಾಧಿಸಿತ್ತು. ವಿಶ್ವಾಸಾರ್ಹತೆಯೆ ಎನ್‌ಡಿಟಿವಿಯ ಲಾಂಛನವಾಗಿಸಿಕೊಂಡಿದ್ದ ರಾಯ್ ಈ ತಪ್ಪಿನಿಂದ ಸಾವರಿಸಿಕೊಂಡರು. ಪರದೆಯ ಮೇಲಿನ ಈ ತಪ್ಪನ್ನು ಅರಗಿಸಿಕೊಂಡು, ತಮ್ಮ ಬದ್ಧತೆಯನ್ನು ಮತ್ತೆಮತ್ತೆ ಸಾಬೀತು ಮಾಡುವ ಪ್ರಯತ್ನ ಮಾಡಿದರು. ಆದರೆ ಪರದೆಯ ಹಿಂದೆ ಮಾಡಿದ್ದ ತಪ್ಪೊಂದು ಎನ್‌ಡಿಟಿವಿಯನ್ನೇ ಕಸಿದುಕೊಂಡುಬಿಟ್ಟಿತು.

ಮೊದಲಿಗೆ ಅಂಬಾನಿ, ನಂತರ ಅಂಬಾನಿಯಿಂದ ಅದಾನಿ ಕಸಿಯುವುದಕ್ಕೂ ಕಾರಣವಾಯ್ತು!

ಪ್ರತಿಸ್ಪರ್ಧೆ ಚಾನೆಲ್‌ಗಳ ಅಬ್ಬರದ ನಡುವೆ ಎನ್‌ಡಿಟಿವಿ ಯಾವುದೇ ರೀತಿ ಹಿಂದೆ ಉಳಿಯಬಾರದು ಎಂಬ ಒತ್ತಡ ಒಂದೆಡೆ ಇತ್ತು. ಇನ್ನೊಂದೆಡೆ ಸಾಲದ ಸುಳಿಯಲ್ಲಿತ್ತು. ಇಂಡಿಯಾ ಬುಲ್ಸ್‌ನಿಂದ 540 ಕೋಟಿ ರೂ.ಗಳ ಸಾಲ ತೆಗೆದುಕೊಂಡಿದ್ದ ಎನ್‌ಡಿಟಿವಿ ಅದನ್ನು ತೀರಿಸಲು ಐಸಿಐಸಿಐನಿಂದ 370 ಕೋಟಿ ರೂ.ಗಳ ಸಾಲ ಪಡೆದಿತ್ತು. ಅದೂ 19% ವಾರ್ಷಿಕ ಬಡ್ಡಿಗೆ. ಐಸಿಐಸಿಐನಿಂದ ಪಡೆದ ಸಾಲ ದೊಡ್ಡ ಗದ್ದಲಕ್ಕೆ ಕಾರಣವಾಗಿ, ಎನ್‌ಡಿಟಿವಿ ವಂಚನೆಯ ಆರೋಪವನ್ನು ಎದುರಿಸುವಂತಾಯಿತು. ಈ ಸಾಲ ತೀರಿಸುವುದಕ್ಕೆ ರಾಯ್ ದಂಪತಿಗಳು 2009ರಲ್ಲಿ ವಿಶ್ವಪ್ರಧಾನ್ ಕಮರ್ಷಿಲ್ ಪ್ರೈವೇಟ್ ಲಿಮಿಟೆಡ್‌ನಿಂದ 403.5 ಕೋಟಿ ರೂ. ಸಾಲ ಪಡೆದರು. ವಿಪರ್ಯಾಸವೆಂದರೆ ವಿಪಿಸಿಎಲ್‌ಗೆ ಹಣ ಹರಿದುಬರುತ್ತಿದ್ದು ಮುಕೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರಿಯಿಂದ (ಈ ಕುರಿತು ದಿ ಕಾರಾವಾನ್ ಪತ್ರಿಕೆ ವಿಸ್ತೃತವಾಗಿ 2015ರಲ್ಲೇ ವರದಿ ಮಾಡಿದೆ). ಅಂಬಾನಿಯ ಸಹವರ್ತಿಗಳೇ ನಡೆಸುತ್ತಿದ್ದ ವಿಸಿಪಿಎಲ್‌ಗೆ ಪರೋಕ್ಷವಾಗಿ ರಿಲಯನ್ಸ್‌ನ ಹಣವೇ ಹರಿದುಬರುತ್ತಿತ್ತು. ಹಣಕ್ಕಾಗಿ ರಾಯ್ ದಂಪತಿಗಳು ಮಾಡಿಕೊಂಡ ಒಪ್ಪಂದದಲ್ಲಿ ಎನ್‌ಡಿಟಿವಿಯ 29.18%ರಷ್ಟು ಶೇರ್‌ಗಳನ್ನು ನೀಡುವುದಾಗಿ ಸಹಿ ಹಾಕಿದ್ದರು. ಬಡ್ಡಿಯನ್ನೇ ಕೇಳದೆ ನೀಡಿದ ಈ ಸಾಲದ ಒಪ್ಪಂದದ ಷರತ್ತುಗಳಲ್ಲಿ ಒಂದು ಸಾಲದ ಅವಧಿಯಲ್ಲಿ ಸೂಕ್ತ ಖರೀದಿದಾರರ ಬಂದರೆ ಮಾಲೀಕರ ಒಪ್ಪಿಗೆಯೇ ಇಲ್ಲದೆ ಶೇರುಗಳನ್ನು ಮಾರಾಟ ಮಾಡುವುದಾಗಿತ್ತು. ಈ ಮೂಲಕ ಎನ್‌ಡಿಟಿವಿಯಲ್ಲಿ ರಾಯ್ ದಂಪತಿಗಳ ಒಟ್ಟು ಶೇರ್ ಪ್ರಮಾಣ 32%ಗೆ ಇಳಿದಿತ್ತು. ಪರೋಕ್ಷವಾಗಿ ರಿಲಯನ್ಸ್ ಇಂಡಸ್ಟ್ರೀಸ್ ಎನ್‌ಡಿಟಿವಿಯ ಮಹತ್ವದ ಪಾಲನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು. ಆದರೆ ರಿಲಯನ್ಸ್ ಈ ಕುರಿತು ಎಲ್ಲೂ ಯಾವುದೇ ಹೇಳಿಕೆ ನೀಡಲಿಲ್ಲ.

ಇದನ್ನೂ ಓದಿ: ನಿರ್ದೇಶಕ ಸ್ಥಾನಕ್ಕೆ ರಾಧಿಕಾ ರಾಯ್, ಪ್ರಣಯ್ ರಾಯ್ ರಾಜೀನಾಮೆ: RIP, ಅನ್‌ಫಾಲೋ NDTV ಎಂದ ಪ್ರಮುಖರು

ತನ್ನದೇ ವರ್ತುಲದಲ್ಲಿರುವ ಉದ್ಯಮಿಗಳಿಂದ, ಬೇರೆಬೇರೆ ಉದ್ಯಮಿಗಳ ಉದ್ದೇಶಗಳಿಗೆ ವರ್ಗಾವಣೆಯಾಗುತ್ತಾ ಬಂದ ವಿಸಿಪಿಎಲ್‌ಅನ್ನು ಕಡೆಗೆ ಆಗಸ್ಟ್ 2022ರಲ್ಲಿ 113 ಕೋಟಿ ರೂ.ಗಳಿಗೆ ಅದಾನಿ ಗ್ರೂಪ್ ಖರೀದಿಸಿತು. ಈ ಮೂಲಕ ಅದಾನಿ ಗ್ರೂಪ್ ವಿಸಿಪಿಎಲ್ ಎಲ್ಲ ವಹಿವಾಟುಗಳ ಹಕ್ಕುದಾರ ಸಂಸ್ಥೆಯಾಯಿತು. ಈ ಯಾವ ಬೆಳವಣಿಗೆಯ ಸುಳಿವೂ ಇಲ್ಲದೆ ಇದ್ದ ರಾಯ್ ದಂಪತಿಗಳಿಗೆ ಇದೊಂದು ಆಘಾತವಾಗಿತ್ತು. ಸೆಬಿಯ ನಿಯಮಗಳು ಹಾಗೂ ತಾವೇ ಮಾಡಿಕೊಂಡ ಒಪ್ಪಂದದಂತೆ ಸಾಲದ ಅವಧಿಯಲ್ಲಿ ಸೂಕ್ತ ಖರೀದಿದಾರರರಿಗೆ ತಮ್ಮ ಶೇರನ್ನು ಮಾರುವ ಹಕ್ಕನ್ನು ವಿಸಿಪಿಎಲ್ ಉಳಿಸಿಕೊಂಡಿತ್ತು. ಅದಾನಿ ಈ ಅವಕಾಶ ಬಳಸಿಕೊಂಡು ವಿಸಿಪಿಎಲ್ ಖರೀದಿಸಿದ್ದೂ ಅಲ್ಲದೆ ಸೆಬಿಯ ನಿಯಮದಂತೆ 25%ಕ್ಕೂ ಹೆಚ್ಚು ಶೇರ್ ಹೊಂದಿದ್ದು, ಕಂಪನಿಯ ಹೆಚ್ಚುವರಿ 26% ಶೇರ್ ಖರೀದಿಸಲು ಮುಕ್ತ ಆಹ್ವಾನವನ್ನು ನೀಡಿದರು.

ಒಂದು ದಶಕದ ಅವಧಿಯಲ್ಲಿ ಅಂಬಾನಿಯ ನೆರಳಿದ್ದ ಸಂಸ್ಥೆಯಿಂದ ಅದಾನಿ ನೆರಳಿಗೆ ಬಂದ ವಿಸಿಪಿಎಲ್ ಕಂಪನಿ ದೇಶದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಯನ್ನು ಖೆಡ್ಡಾಕ್ಕೆ ಕೆಡವಿಬಿಟ್ಟಿತ್ತು. ದೇಶದ ಬಹುತೇಕ ಮುಖ್ಯವಾಹಿನಿ ಮಾಧ್ಯಮ ಸಂಸ್ಥೆಗಳು ಆಡಳಿತದ ಮತ್ತು ಅಂಬಾನಿ-ಅದಾನಿಗಳ ಮಡಿಲಿನಲ್ಲಿ ಕೂತಿರುವಾಗ, ಎನ್‌ಡಿಟಿವಿ ಅಂತಹ ಎಲ್ಲ ಪ್ರಭಾವಗಳಿಂದ ದೂರ ಉಳಿದು ವೃತ್ತಿಗೆ ಬದ್ಧವಾಗಿ ಉಳಿದಿತ್ತು. ಆದರೆ ವ್ಯಾವಹಾರಿಕ ಪ್ರಮಾದವೊಂದು, ಮಾದರಿ ಮಾಧ್ಯಮ ಸಂಸ್ಥೆಯೊಂದನ್ನು ಕಳೆದುಕೊಳ್ಳುವಂತೆ ಮಾಡಿಬಿಟ್ಟಿತು. ರಾಯ್ ಚುನಾವಣೆಯ ಲೆಕ್ಕಾಚಾರಗಳಲ್ಲಿ ನಿಖರತೆ, ಸ್ಪಷ್ಟತೆಯನ್ನು ಪ್ರದರ್ಶಿಸಿ ದೇಶದ ಜನರ ವಿಶ್ವಾಸ ಗೆದ್ದಿದ್ದರು. ಹಣವಂತರ ಈ ಲೆಕ್ಕಾಚಾರವನ್ನು ಗ್ರಹಿಸದೆ, ಎನ್‌ಡಿಟಿವಿಯನ್ನು ಕಳೆದುಕೊಂಡರು. ಸುರುಳಿ ಸುತ್ತಿಕೊಂಡು ಬಾನೆತ್ತರಕ್ಕೆ ಏರಿ ನಿಂತಿದ್ದ ಎನ್‌ಡಿಟಿವಿ, ಬಂಡವಾಳಶಾಹಿಗಳ ಕುತಂತ್ರದ ಸುಳಿಗೆ ಸಿಲುಕಿದ್ದು ದುರಂತ. ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿ ಹಿಡಿಯುವ ಮಾಧ್ಯಮ ಸಂಸ್ಥೆ ಎಂಬ ಆಶಾಭಾವನೆ, ಭರವಸೆ, ನಂಬಿಕೆಗಳನ್ನು ಜೀವಂತವಾಗಿರಿಸಿದ ಎನ್‌ಡಿಟಿವಿಯನ್ನು ಕಳೆದುಕೊಂಡಿದ್ದೇವೆ ಎಂಬ ಭಾವನೆ ಎಲ್ಲರನ್ನೂ ಕಾಡುತ್ತಿದೆ.

ಲೋಕಸಭೆ ಚುನಾವಣೆಗೆ ಪಕ್ಷಗಳು ಸಿದ್ಧವಾಗುತ್ತಿವೆ. ಇನ್ನೇನಿದ್ದರು ಮುಂದಿನದು ತಯ್ಯಾರಿಯ ಕಾಲ. ಇಂತಹ ಹೊತ್ತಲ್ಲಿ ದೇಶದಾದ್ಯಂತ ಅಭಿಪ್ರಾಯ ರೂಪಿಸುವ ಶಕ್ತಿ ಇದ್ದ ಮಾಧ್ಯಮ ಸಂಸ್ಥೆ ಎನ್‌ಡಿಟಿವಿ ಈಗ ಇದ್ದೂ ಇಲ್ಲವಾಗಿರುವುದನ್ನು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರು ಯಾರಿಗೂ ಅರಗಿಸಿಕೊಳ್ಳಲಾಗದ ಸಂಗತಿ. ಡಿಜಿಟಲ್ ಮಾಧ್ಯಮದ ಈ ಕಾಲದಲ್ಲಿ ರಾಯ್ ಹೊಸ ಅವತಾರದಲ್ಲಿ ಮತ್ತೊಮ್ಮೆ ಬಿರುಗಾಳಿಯಾಗಿ ಕಾಣಿಸಿಕೊಳ್ಳುತ್ತಾರಾ ಎಂಬ ನಿರೀಕ್ಷೆಯಿಂದ ಕಾಯುವಂತಾಗಿದೆ.

ಎಸ್ ಕುಮಾರ್

ಎಸ್ ಕುಮಾರ್
ಹಿರಿಯ ಪತ್ರಕರ್ತರು, ಈದಿನ.ಕಾಂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...