ಟೋಕಿಯೋ ಒಲಂಪಿಕ್ಸ್ನ ಜಾವಲಿನ್ ಎಸತ ಸ್ಪರ್ಧೆಯಲ್ಲಿ ಚಿನ್ನ ಗೆದ್ದು ಬಂದ ನೀರಜ್ ಚೋಪ್ರಾರ ಆರಂಭಿಕ ಗುರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಬನವಾಸಿ ಬಳಿಯ ಬೆಂಗಳೆಯ ಕಾಶೀನಾಥ್ ನಾಯ್ಕ್ರವರಿಗೆ ಕ್ರೀಡಾ ದಿನದಂದು ತವರೂರಲ್ಲಿ ಸನ್ಮಾನಿಸಲಾಗಿದೆ.
ರಾಷ್ಟ್ರಕ್ಕೆ ಹೆಮ್ಮೆ ತಂದ ಬಂಗಾರದ ಹುಡುಗನಿಗೆ ತರಬೇತಿ ನೀಡಿದ ಸಾಧನೆಗಾಗಿ ತಾಲೂಕಾಡಳಿತ ಕಾಶೀನಾಥ್ ನಾಯ್ಕ್ರವರನ್ನು ಊರಿಗೆ ಕರೆಸಿ ಗೌರವಿಸಿದೆ. ಶಿರಸಿಯ ಶಾಸಕರು ಮತ್ತು ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಮಾನದಿಂದ ಸನ್ಮಾನಿಸಿದ್ದಾರೆ.
2010ರಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್ ಜಾವಲಿನ್ ಥ್ರೋನಲ್ಲಿ ಕಾಶೀನಾಥ ನಾಯ್ಕ್ 74.29 ಮೀಟರ್ ದೂರ ಎಸೆದು ಕಂಚಿನ ಪದಕ ಪಡೆದಿದ್ದರು. ಸೈನ್ಯದಲ್ಲಿ ಸುಭೇದಾರ್ ಆಗಿರುವ ಅವರನ್ನು ಪಟಿಯಾಲಾದಲ್ಲಿ ಜಾವಲಿನ್ ಕೋಚ್ ಎಂದು ನೇಮಿಸಲಾಗಿತ್ತು. ಅಲ್ಲಿ ಅವರು ನೀರಜ್ಗೆ 2015 ರಿಂದ 2017ರವರೆಗೆ ನೀರಜ್ಗೆ ತರಬೇತಿ ಕೊಟ್ಟಿದ್ದರು.
ನೀರಜ್ ಚೋಪ್ರಾ ಚಿನ್ನದ ಪದಕ ತಂದಾಗ ರಾಜ್ಯ ಸರ್ಕಾರ ಅವರ ಗುರು ಕಾಶೀನಾಥ್ ನಾಯ್ಕ್ರವರಿಗೆ 10 ಲಕ್ಷ ರೂ ಬಹುಮಾನ ಘೋಷಿಸಿತ್ತು. ಆಗ ಅಸೂಯೆಯಿಂದ ಚಡಪಡಿಸಿದ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಅದಿಲ್ಲೆ ಸುಮರಿವಾಲಾ ಆಕ್ಷೇಪ ವ್ಯಕ್ತಪಡಿಸಿದ್ದರು. ನೀರಜ್ ಚೋಪ್ರಾಗೆ ಕಾಶೀನಾಥ್ ನಾಯ್ಕ್ ಎಂಬುವವರನ್ನು ಕೋಚ್ ಆಗಿ ನೇಮಿಸಿಲ್ಲ. ಕಾಶೀನಾಥ್ ಯಾರು ಎಂಬುದೇ ನಮಗೆ ಗೊತ್ತಿಲ್ಲ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಅನಾವಶ್ಯಕ ಮುಜುಗರಕ್ಕೀಡಾಗಿದ್ದ ಕಾಶೀನಾಥರ ಪುಣೆಯ ಮನೆಗೆ ಶಿಷ್ಯ ನೀರಜ್ ಚೋಪ್ರಾ ಖುದ್ದು ಭೇಟಿ ನೀಡಿ ಗುರುವಿಗೆ ಕೃತಜ್ಞತೆ ಅರ್ಪಿಸಿದಾಗ ಟೀಕಾಕಾರರ ಬಾಯಿ ಬಂದ್ ಆಗಿತ್ತು.
ಈಗ ಕಾಶೀನಾಥರಿಗೆ ಹುಟ್ಟೂರಲ್ಲಿ ಬಂಗಾರದಂತಹ ಶಿಷ್ಯನನನ್ನು ತರಬೇತುಗೊಳಿಸಿದ್ದಕ್ಕೆ ಸನ್ಮಾನ ಮಾಡಿರುವುದು ಅವರು ನೀರಜ್ಗೆ ತರಬೇತಿ ಕೊಟ್ಟಿರುವುದಕ್ಕೆ ಮತ್ತೊಂದು ಸಿಂಧುತ್ವ ಸಿಕ್ಕಾಂತಾಗಿದೆ.
ಶಿರಸಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತಾಡಿದ ಕಾಶೀನಾಥ ನಾಯ್ಕ್, “ಭಾರತದಲ್ಲಿ ವಿದೇಶಿ ಕೋಚ್ಗಳಿಗೆ ಕೊಡುವ ಸೌಲಭ್ಯಗಳು ದೇಶಿಯ ಕೋಚ್ಗಳಿಗೆ ಸಿಗುತ್ತಿಲ್ಲ. ಅಂತಹ ಸೌಲಭ್ಯ-ಸೌಕರ್ಯ-ಮಾನ್ಯತೆ-ಗೌರವ ನಮ್ಮ ತರಬೇತಿದಾರರಿಗೂ ಸಿಕ್ಕರೆ ದೇಶದ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಪತಾಕೆ ಹಾರಿಸುತ್ತಾರೆ. ದೇಶದ ಗೌರವ ಹೆಚ್ಚಿಸಲು ನಿಷ್ಠೆಯಿಂದ ಕೆಲಸಮಾಡುವ ತರಬೇತಿದಾರರಿಗೆ ಪ್ರೋತ್ಸಾಹ ಸಿಕ್ಕರೆ ಇನ್ನಷ್ಟು ಒಲಂಪಿಕ್ಸ್ ಮತ್ತಿತರ ಕ್ರೀಡಾಕೂಟದಲ್ಲಿ ದೇಶದ ಪ್ರತಿಭೆಗಳು ಪದಕ ಗೆಲ್ಲುವ ಸಾಮರ್ಥ್ಯ ತೋರಿಸುತ್ತಾರೆಂಬುದು ನನ್ನ ನಂಬಿಕೆ” ಎಂದರು.
ದೇಶದ ಕ್ರೀಡಾ ಕ್ಷೇತ್ರದ ವಾಸ್ತವ ಪರಿಸ್ಥಿತಿ ಕೆಟ್ಟದಾಗಿದ್ದರೂ ನಮ್ಮಲ್ಲಿನ ಕೋಚ್ಗಳು ದೇಶಾಭಿಮಾನದ ಬದ್ದತೆಯಿಂದ ತರಬೇತಿ ಕೊಡುತ್ತಿದ್ದಾರೆ. ಮುಂದಿನ ದಿನದಲ್ಲಾದರು ಕ್ರೀಡಾ ಕ್ಷೇತ್ರದತ್ತ ಸರ್ಕಾರ ಆಸಕ್ತಿ ವಹಿಸಿ ಪೂರಕ, ಪ್ರೋತ್ಸಾಹದಾಯಕ ವಾತವರಣ ಕಲ್ಪಿಸಬೇಕೆಂದು ನಾಯ್ಕ್ ಹೇಳಿದರು.
ಉತ್ತರ ಕನ್ನಡದಲ್ಲೂ ಬಹಳಷ್ಟು ಕ್ರೀಡಾ ಪ್ರತಿಭೆಗಳಿವೆ. ಅವರಿಗೆಲ್ಲ ಸರಿಯಾದ ಸೌಲಭ್ಯ ಒದಗಿಸಿ ಹರಿದುಂಬಿಸಬೇಕು. ಕೀಡಾ ಸಾಧಕನ ಹಿಂದಿರುವ ತರಬೇತಿದಾರನನ್ನು ತಾಯ್ನೆಲ ಗರುತಿಸಿರುವುದು ನನ್ನ ಬದುಕಲ್ಲಿ ಅಚ್ಚಳಿಯದ ನೆನಪಾಗಿ ಉಳಿಯಲಿದೆ. ನಾನು ಸೇನೆಯಿಂದ ನಿವೃತ್ತಿಯಾದ ಬಳಿಕ ತವರೂರು ಶಿರಸಿಯಲ್ಲೊಂದು ಕ್ರೀಡಾ ಅಕಾಡಮಿ ಸ್ಥಾಪಿಸು ಉದ್ದೇಶ ಹೊಂದಿದೇನೆ: ಖೇಲೋ ಇಂಡಿಯಾ ಇನ್ನಿತರ ಕ್ರೀಡಾ ಸೌಲಭ್ಯ- ಅವಕಾಶಗಳ ಕುರಿತು ತಿಳುವಳಿಕೆ, ಜಾಗೃತಿ ಮೂಡಿಸ ಬೇಕಾಗಿದೆ ಎಂದರು.
ಕಾಗೇರಿಯವರು ಮಾತನಾಡಿ, “ಶಿರಸಿ ಕ್ರೀಡಾಂಗಣದಲ್ಲಿ 3 ಕೋಟಿ ರೂ ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಮಾಡಿಸಬೇಕಿದೆ. ಕಾಶೀನಾಥ ನಾಯ್ಕ್ರವರ ಆಶಯದಂತೆ ದೇಶಿಯ ತರಬೇತಿದಾರರನ್ನೂ ಉತ್ತಮವಾಗಿ ಪರಿಗಣಿಸಲು ಸರ್ಕಾರದ ಗಮನ ಸೆಳೆಯುತ್ತೇನೆ” ಎಂದರು.
ಇದನ್ನೂ ಓದಿ: ಗುರು ಕಾಶೀನಾಥ್ ನಾಯ್ಕ್ ಮನೆಗೆ ನೀರಜ್ ಚೋಪ್ರಾ ಭೇಟಿ: ಕೋಚ್ ಅಲ್ಲ ಎಂದಿದ್ದವರ ಬಾಯಿ ಬಂದ್!