ನನಗೂ ಒಬ್ಬ ಹಿರಿಯ ಕವಯತ್ರಿ ಪ್ರಶ್ನೆ ಕೇಳಿದರು. ನೀವು ಮೋದಿ ಪರವೋ? ವಿರೋಧವೋ? ನಾನು ಹೇಳಿದೆ ಅವರ ಪರವೂ ಅಲ್ಲ ವಿರೋಧವೂ ಅಲ್ಲ. ನಾನು ನನ್ನಂಥವರು ಸಂವಿಧಾನದ ಪರ. ಆದರೆ ಮೋದಿಯವರ ಬಗ್ಗೆ ಗೌರವವಿದೆ. ಏಕೆಂದರೆ ಅವರು ಬಿಜೆಪಿ ಪ್ರಧಾನಿಯಲ್ಲ-ದೇಶದ ಪ್ರಧಾನಿ. ಹಾಗಂತ ಅವರು ತರುವ ಕಾಯ್ದೆ ತಿದ್ದುಪಡಿಗಳನ್ನೆಲ್ಲಾ ಒಪ್ಪಿಕೊಳ್ಳಬೇಕಿಲ್ಲ. ರಾಷ್ಟ್ರೀಯತೆಯ ಸೋಗಿನಲ್ಲಿ ಹುಸಿದೇಶಭಕ್ತಿ ತೋರುವ ಬಹುಮತವಿದೆ ಎಂಬ ಅಹಂಕಾರದಲ್ಲಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಬೇರನ್ನೇ ಅಲ್ಲಾಡಿಸಬಹುದೆ.
ಪೌರತ್ವ ಕಾಯ್ದೆ ತಿದ್ದುಪಡಿ ಮೂಲಕ ಸಿಎಎ ಮತ್ತು ಎನ್ಆರ್ಸಿ ತರುವ ತುರ್ತು ಏನಿತು? ಇದು ಸಂವಿಧಾನದ 14, 15ರ ನಿಯಮದ ಉಲ್ಲಂಘನೆಯಲ್ಲವೆ. ಪಾಕಿಸ್ತಾನ, ಬಾಂಗ್ಲಾ, ಆಫ್ಘಾನಿಸ್ಥಾನದಿಂದ ಧರ್ಮದ ಹಿಂಸೆಗೆ ಒಳಗಾಗಿ ಬಂದ ಹಿಂದೂ, ಜೈನ್, ಬೌದ್ಧ, ಸಿಖ್, ಪಾರ್ಸಿ, ಕ್ರೈಸ್ತ ಎಲ್ಲರಿಗೂ ಪೌರತ್ವ ಕೊಡುತ್ತದೆ. ಮುಸ್ಲಿಮರನ್ನು ಬಿಟ್ಟು. ಇದು ಧರ್ಮಾಧಾರಿತ ತಾರತಮ್ಯ ಹಾಗೂ ಅಸಂವಿಧಾನಿಕ. ದೇಶದ ಸ್ವಾತಂತ್ರ್ಯಕ್ಕಾಗಿ ಹಿಂದೂಗಳ ಜೊತೆ ಮುಸಲ್ಮಾನರೂ ಹೋರಾಟ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ, ಜೈಲು ಸೇರಿದರೂ ಕ್ಷಮಾಪಣೆ ಕೇಳಿ ಆಚೆ ಬಂದವರಿಗೆಲ್ಲಾ ದೇಶದಲ್ಲಿ ಜಾಗವಿದೆ. ಇವರಿಗಿಲ್ಲವೆ?
ಈ ದೇಶದ ಮುಸ್ಲಿಮರಿಗೆ ಇದು ಅನ್ವಯಿಸಿಲ್ಲವಂತೆ 1987 ರ ಮೊದಲು ಹುಟ್ಟಿದವರೆಲ್ಲಾ ಭಾರತೀಯರು, ಉಳಿದವರು ದಾಖಲೆ ಕೊಡಬೇಕೆಂಬುದಾದರೂ ಎಷ್ಟು ಸರಿ? ದುಡ್ಡಿರುವ ಮಂದಿ ಎಂತಹ ದಾಖಲೆಗಳನ್ನೂ ಕೊಂಡುಕೊಡಬಲ್ಲರು. ಬದುಕಿರುವವರಿಗೂ ದುಡ್ಡು ಕೊಟ್ಟರೆ ಸಾವಿನ ಪ್ರಮಾಣಪತ್ರ ಸಿಗುವಂತಹ ದುಷ್ಟ ವ್ಯವಸ್ಥೆಯಲ್ಲಿ ಬಡಬಗ್ಗರು, ಅನಕ್ಷರಸ್ಥರು, ಆದಿವಾಸಿಗಳು, ಬುಡಕಟ್ಟು ಜನರ ಪಾಡೇನು? ಹೊರಗಿನಿಂದ ಬಂದವರಿಗೆ ಪೌರತ್ವ ಕೊಡುತ್ತಾರೆ. ದೇಶವಾಸಿಗಳಿಗೆ ದಾಖಲೆ ಬೇಕಂತೆ! ಹೊರಗಿನಿಂದ ಬಂದವರಿಗೆಲ್ಲಾ ಪೌರತ್ವ ದಯಪಾಲಿಸಿದರೆ ಅವರಿಗೆಲ್ಲಾ ಊಟ, ವಸತಿ, ಉದ್ಯೋಗ, ಜಮೀನು ಜಹಗೀರು ಕೊಡುವಷ್ಟು ದೇಶ ಶಕ್ತವೆ.
ದೇಶದ ಒಳಿತಿಗಾಗಿ ಕಾಯ್ದೆಯನ್ನು ಜಾರಿಗೆ ತರುವುದಾಗಿ ಜನರಲ್ಲಿ ಭ್ರಮೆ ಹುಟ್ಟಿಸುತ್ತಿರುವವರ ಅಂತರಂಗದಲ್ಲಿ ಒಳಿತು ಕಾಣುತ್ತಿಲ್ಲ. ಒಡೆದು ಆಳುವ ನೀತಿ ಗೋಚರವಾಗುತ್ತಿದೆ. ಪ್ರತಿವರ್ಷ 2 ಕೋಟಿ ಉದ್ಯೋಗವೆಂದರು. ಎಲ್ಲರ ಅಕೌಂಟಿಗೆ 15 ಲಕ್ಷವೆಂದರು. ನೋಟ್ಬ್ಯಾನ್ ಮಾಡಿ ಕಪ್ಪುಹಣ ಕೋಟಿ ಕೋಟಿ ತರುತ್ತೇವೆಂದರು. ಆದರೆ ದೇಶದ ಆರ್ಥಿಕ ಪರಿಸ್ಥಿತಿಯೇ ದಿವಾಳಿ ಎದ್ದಿದೆ. ಆರ್ಥಿಕ ಕಾರ್ಯದರ್ಶಿ ಸುಬ್ರಹ್ಮಣ್ಯ ಅವರೇ ವಿಷಾದಿಸಿದ್ದಾಯಿತು. ಆರ್ಬಿಐನಿಂದ ಕೋಟಿಗಟ್ಟಲೆ ಹಣ ಪಡೆದಿದ್ದಾಯಿತು. ಜಿಡಿಪಿ ದರ ಕುಸಿಯುತ್ತಿದೆ. ದಲಿತರ ಮೇಲಿನ ದೌರ್ಜನ್ಯ, ಮಹಿಳೆಯರ ಮೇಲಿನ ಅತ್ಯಾಚಾರ ಏರುತ್ತಿದೆ. ರೈತರಿಗೆ ದುಪ್ಪಟ್ಟು ಆದಾಯವೆಂದರು. ರೈತರ ಆತ್ಮಹತ್ಯೆಗಳು ನಡೆದೇ ಇವೆ. ಇದಕ್ಕೆಲ್ಲ ಪರಿಹಾರ ಹುಡುಕುವುದುನ್ನು ಬಿಟ್ಟು “ಎಲ್ಲಾ ಬಿಟ್ಟು ಮಗ ಭಂಗಿ ನೆಟ್ಟ” ಎಂಬಂತೆ ಸಿಎಎ ಎನ್ಸಿಆರ್ ತರುವ ತುರ್ತು ಅಗತ್ಯವೇನಿತ್ತು?
ನಡೆಯುತ್ತಿರುವ ಗಲಭೆಗಳಿಗೆ ಕಾಂಗ್ರೆಸಿಗರ ಕುಮ್ಮಕ್ಕಿದೆಯೆಂದರೆ ನಂಬಬಹುದೆ. ಕಾಂಗ್ರೆಸ್ ಎಲ್ಲಾ ಕಡೆ ಸೋತು ಅರ್ಧ ಸತ್ತಿದೆ. ಸಾವಿರಾರು ಯುವಕಯುವತಿಯರನ್ನು ಒಂದೆಡೆ ಸೇರಿಸುವ, ಹೋರಾಟ ರೂಪಿಸುವ ಶಕ್ತಿ ಅವರಿಗೆಲ್ಲಿಂದ ಬಂದೀತು. ಪ್ರಧಾನಿಯ ಹೆಸರಿಡಿದು ಸ್ಲೋಗನ್ ಹಾಕುತ್ತಿದ್ದ ಅದೇ ಯುವಶಕ್ತಿಯೇ ಇಂದು ನ್ಯಾಯಕ್ಕಾಗಿ ಬೀದಿಗಿಳಿದಿದೆ. ಅವರಿಗೆಲ್ಲಾ ಹುಸಿ ದೇಶಭಕ್ತಿ, ರಾಷ್ಟ್ರೀಯತೆ ನೆಪದಲ್ಲಿ ಕವಿದಿದ್ದ ಮಂಜು ಕರಗಿದಂತಿದೆ. ದೇಶದ ವಿಭಜನೆಯ ಕಾರ್ಯ ನೆಹರು ಕಾಲದಲ್ಲೇ ನಡೆದಿತ್ತು ಎಂದರೆ ನಂಬಬೇಕೆ. ಇತಿಹಾಸ ಓದಿದವರಿಗೆ ಗೊತ್ತಿದೆ. ಹಿಂದುತ್ವದ ಆರಾಧಕ ಸಾವರ್ಕರ್ ಮತ್ತು ಮುಸ್ಲಿಂ ಲೀಗಿನ ಜಿನ್ನಾ ಇದರ ರೂವಾರಿಗಳೆಂಬುದು ಗೊತ್ತಿದ್ದೂ ಜಾಣ ಮರವೆ?
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ವಿಶ್ವಾಸ್ ಅನ್ನುವವರು ಉತ್ತರ ಪ್ರದೇಶ, ದೆಹಲಿ ಇತ್ಯಾದಿ ಕಡೆಗಳಲ್ಲಿ ವೃತ್ತ, ಬೀದಿಗಳಿಗೆ ಇಟ್ಟ ಮುಸ್ಲಿಂ ನಾಯಕರ ಹೆಸರನ್ನು ಬದಲಿಸೋದು, ಮುಸ್ಲಿಮರಿಗೆ ಸೀಟು ಕೊಡದಿರೋದು. ಮುಸಲ್ಮಾನರ ಓಟಿಲ್ಲದೇ ಗೆಲ್ಲುತ್ತೇವೆಂದು ಬೀಗುವುದು. ಅದೆಂತಹ ವಿಶ್ವಾಸ! ಸಂವಿಧಾನ ಬದಲಿಸುತ್ತೇವೆಂದು ಹೂಂಕರಿಸೋದು. ಅದನ್ನೇ ದೆಹಲಿಯಂತಹ ಸ್ಥಳದಲ್ಲೇ ಸುಡೋದು. ಗಾಂಧೀಜಿಯನ್ನು ಕೊಂದವನಿಗೆ ಗುಡಿಕಟ್ಟಲು ಹೊರಡೋದು ಎಂತಹ ವಿಕಾಸ?
ಪೌರತ್ವ ಕಾಯ್ದೆ ತಿದ್ದುಪಡಿ ಗದ್ದಲದಲ್ಲಿ ಅಗತ್ಯ ದಾಖಲೆಗಳಿಲ್ಲದ ಭಾರತೀಯರೂ ಅಕ್ರಮ ವಲಸಿಗರಾಗಿಬಿಡುವ ಸಾಧ್ಯತೆಯಿದೆ. ಎನ್ಆರ್ಸಿ ಪೂರಕವಾಗಿಯೇ ಎನ್ಪಿಆರ್ ತರಲು ಸಿದ್ಧತೆಗಳು ನಡೆದಿವೆ. ಹೀಗಾಗಿಯೇ ಬಿಜೆಪಿಯನ್ನು ಬೆಂಬಲಿಸುವ ಪಾಸ್ವಾನ್, ನಿತೀಶ್ಕುಮಾರ್, ಜಗನ್ ಮೋಹನ್ರೆಡ್ಡಿ ಅಂಥವರು ಕಾಯ್ದೆ ವಿರೋಧವಾಗಿದ್ದಾರೆ. ಹತ್ತು ರಾಜ್ಯಗಳೇಕೆ ವಿರೋಧಿಸಿವೆ? ಕರ್ನಾಟಕ ಒಂದೇ ಹೊತ್ತಿ ಉರಿಯುತ್ತಿಲ್ಲ. ದೆಹಲಿ, ಜಾಮಿಯ, ಗುಜರಾತ್, ಉತ್ತರ ಪ್ರದೇಶ, ಬಿಹಾರ್, ಚೆನ್ನೈ, ಮಧ್ಯ ಪ್ರದೇಶ ಅನೇಕ ರಾಜ್ಯಗಳಲ್ಲಿ ಯುವಕ ಯುವತಿಯರು ಬೀದಿಗಿಳಿದು ದಂಗೆ ಎಂದಿದ್ದಾರೆ. ವಿರೋಧಿಸಿದವರನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತೇವೆಂದರೆ ಭಾರತವೇನು ಇವರಪ್ಪನ ಪಿತ್ರಾರ್ಜಿತ ಆಸ್ತಿಯೇ?
ಇಂತಹ ಸಂಘರ್ಷದ ದಿನಗಳಲ್ಲಿ ಲೋಕ ಕಲ್ಯಾಣ ಮಾಡಲೆಂದೇ ಕಾವಿತೊಟ್ಟ ಮಹಾಸ್ವಾಮಿಗಳೇಕೋ ಮೌನಕ್ಕೆ ಶರಣಾಗಿದ್ದಾರೆ. ಮಠಗಳಿಗೆ ಹೆಚ್ಚು ಅನುದಾನ ಬೇಡುವ, ತಮ್ಮ ಜಾತಿಗಳಿಗೆ ಹೆಚ್ಚು ಮೀಸಲಾತಿ ನೀಡಬೇಕೆಂದು ರಾಜಕಾರಣಿಗಳೆದುರು ಬಾಯಿ ಬಾಯಿ ಬಿಡುವ ಇವರೇಕೋ ಬಾಯೇ ಬಿಡುತ್ತಿಲ್ಲ! ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗ ಬಿಟ್ಟರೆ ವಿರೋಧ ಪಕ್ಷವಾಗಿ ಪ್ರಶ್ನೆ ಮಾಡಬೇಕಾದ ಅನೇಕ ಮಾಧ್ಯಮಗಳು ಆಡಳಿತದ ಪರವಾಗಿ ಪುಂಗಿ ಊದುತ್ತಿವೆ. ಮಾರಿಕೊಂಡಿರಲೂಬಹುದು. ನ್ಯಾಯಾಂಗವನ್ನು ಅನುಮಾನಿಸುವಂತಾಗಿದೆ. ಬಾಬ್ರಿ ಮಸೀದಿ ಕೆಡವಿದ್ದು ಅಪರಾಧವೆನ್ನುವ ನ್ಯಾಯಾಂಗ ಶಿಕ್ಷೆ ಬಗ್ಗೆ ಚಕಾರವೆತ್ತೋಲ್ಲ. ಅನರ್ಹ ಶಾಸಕರ ಅನರ್ಹತೆ ಒಪ್ಪಿಕೊಂಡರೂ ಶಿಕ್ಷೆಯಿಂದ ಮಾಫಿ! ಸರ್ಕಾರದ ವಿರುದ್ಧ ತೀರ್ಪು ನೀಡದಿರೆ ದೇಶದ್ರೋಹಿಗಳಾಗಿ ಬಿಡುತ್ತೇವೆಂಬ ಅಧೀರತೆ ಇದ್ದೀತೆ!
ಇಂದಿನ ಸಂದಿಗ್ಧದಲ್ಲಿ ಯುವಜನತೆ ಜಾಗೃತರಾಗಿರೋದು ಸಂತೋಷವೆನಿಸಿದರೂ ಪ್ರತಿಭಟನೆಗಳು ಶಾಂತಿಯುತವಾಗಿರಲಿ. ಜೀವತೆತ್ತ 20 ಜನರಲ್ಲಿ ಯಾರೊಬ್ಬರೂ ಯಾವ ಪಕ್ಷದ ಲೀಡರ್ಗಳಲ್ಲ ಅಮಾಯಕರು. ಇಡೀ ದೇಶ ಗಲಭೆಯ ಗೂಡಾಗೋದು ಶ್ರೇಯಸ್ಸಲ್ಲ. ದ್ವೇಷ ಅಳಿಸಿ, ದೇಶ ಉಳಿಸಬೇಕಿದೆ. ಜಾತಿಕಳೆಯ ಕಿತ್ತು ಪ್ರೀತಿಯ ಬೆಳೆ ತೆಗೆಯಬೇಕಿದೆ, ಹಾಗಾಗಲಿ ಎಂಬುದಷ್ಟೇ ನನ್ನ ಲೇಖನದ ಉದ್ದೇಶ.