ಎರಡು ತಿಂಗಳಿನಿಂದಲೂ ನಡೆಯುತ್ತಿರುವ ರೈತ ಪ್ರತಿಭಟನೆ ಮತ್ತು ಅದನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಭಾರತ ಸರ್ಕಾರದ ವಿರುದ್ಧ ಅಂತರರಾಷ್ಟ್ರೀಯ ಟೀಕೆಗಳು ಕೇಳಿಬಂದಿವೆ. ಆದರೆ ಅವುಗಳ ವಿರುದ್ಧ ಇಲ್ಲಿನ ಸೆಲೆಬ್ರಿಟಿಗಳು ಟ್ವೀಟ್ ಮಾಡಿದ್ದಾರೆ. ಆದರೆ ನಟಿ ಸೋನಾಕ್ಷಿ ಸಿನ್ಹಾ ಈ ಸಂಘಟಿತ ಅಭಿಯಾನದ ವಿರುದ್ಧ ಮಾತನಾಡಿದ ಸಾರ್ವಜನಿಕ ವ್ಯಕ್ತಿಗಳೊಂದಿಗೆ ಸೇರಿಕೊಂಡಿದ್ದಾರೆ.
‘ಹಸ್ತಕ್ಷೇಪ ಎನ್ನುತ್ತೀರಿ ಏಕೆ? ಮನುಷ್ಯರಿಗಾಗಿ ಮನುಷ್ಯ ನಿಲ್ಲುವ ಮಾನವೀಯತೆ ಇದು’ ಎಂದಿರುವ ಸೋನಾಕ್ಷಿ, ರಿಹಾನ್ನ, ಗ್ರೇಟಾ ಅವರ ನಿಲುವನ್ನು ಸಮರ್ಥಿಸಿದ್ದಾರೆ.
“ಮಾನವ ಹಕ್ಕುಗಳ ಉಲ್ಲಂಘನೆ, ಇಂಟರ್ನೆಟ್ ಸ್ಥಗಿತ ಮತ್ತು ಅಭಿವ್ಯಕ್ತಿಯ ನಿಗ್ರಹಗಳು, ಪ್ರಭುತ್ವದ ಪ್ರೊಪಗಂಡಾ, ದ್ವೇಷದ ಮಾತು ಮತ್ತು ಅಧಿಕಾರ ದುರುಪಯೋಗದ ವಿರುದ್ಧ ಈ ಧ್ವನಿಗಳು ವ್ಯಕ್ತವಾಗಿವೆ” ಎಂದು ಸೋನಾಕ್ಷಿ ಸಿನ್ಹಾ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದಾರೆ.
ನಮ್ಮ ದೇಶದ ಕಾರ್ಯಚಟುವಟಿಕೆಗಳನ್ನು ಹೊರಗಿನ ಶಕ್ತಿಗಳು ನಿಯಂತ್ರಿಸಲು ಪ್ರಯತ್ನಿಸುತ್ತಿವೆ ಎಂದು ನಿಮ್ಮನ್ನು ನಂಬಿಸಲು ಸುದ್ದಿ ಮಾಧ್ಯಮಗಳು ಪ್ರಯತ್ನಿಸುತ್ತಿವೆ. ಆದರೆ ನೀವು ನೆನಪಿಡಿ ಟೀಕಿಸಿದವರ್ಯಾರೂ ಅನ್ಯಗ್ರಹ ಜೀವಿಗಳಲ್ಲ. ಮತ್ತೊಬ್ಬರ ಹಕ್ಕುಗಳಿಗಾಗಿ ಧ್ವನಿ ಎತ್ತಿರುವ ಸಹಜೀವಿ ಮನುಷ್ಯರು ಅವರು. ಇವೆರಡು ಭಿನ್ನ ಚರ್ಚೆಗಳು. ನೀತಿ, ಕಾಯ್ದೆ, ಕಾನೂನು ಮತ್ತು ಅವುಗಳ ಪರಿಣಾಮದ ಮೇಲೆ ನಿಮಗೆ ಭಿನ್ನ ಅಭಿಪ್ರಾಯಗಳು ಇರಬಹುದು. ಆದರೆ ಆ ಭಿನ್ನಾಭಿಪ್ರಾಯವನ್ನು “ಅನ್ಯ” ವಾದಕ್ಕೆ ಬಳಸಿಕೊಳ್ಳಲು ಅವಕಾಶ ಕೊಡಬೇಡಿ. ಟೀಕೆ ಇರುವುದು ಮಾನವ ಹಕ್ಕುಗಳ ಮತ್ತು ಸ್ವಾತಂತ್ರ್ಯದ ಹರಣದ ಬಗ್ಗೆ.. ಎಂದು ಸೋನಾಕ್ಷಿ ಬರೆದಿದ್ದಾರೆ.
“ಪತ್ರಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ. ಅಂತರ್ಜಾಲವನ್ನು ನಿಷೇಧಿಸಲಾಗಿದೆ. ಪ್ರಭುತ್ವ ಮತ್ತು ಮಾಧ್ಯಮಗಳ ಪ್ರೊಪಗಂಡಾ ಮೂಲಕ ಪ್ರತಿಭಟನಾಕಾರರನ್ನು ಕೆಣಕಲಾಗುತ್ತಿದೆ. ದ್ವೇಷದ ಮಾತು (ದೇಶ್ ಕೆ ಗದ್ದಾರೊಂ ಕೊ, ಗೋಲಿ ಮಾರೊ ಸರ್ದಾರೊ ಕೊ ಈಗ ಚಾಲ್ತಿಗೆ ಬಂದಿದೆ) ಪ್ರವರ್ಧಮಾನಕ್ಕೆ ಬರುತ್ತಿದೆ. ಈ ವಿಷಯವೆ ಜಾಗತಿಕ ಮಟ್ಟದಲ್ಲಿ ಟೀಕೆಗೆ ಒಳಗಾಗಿದೆ” ಎಂದು ಅವರು ಬರೆದಿದ್ದಾರೆ.
ಇದನ್ನೂ ಓದಿ: ’ಒಂದು ಟ್ವೀಟ್ನಿಂದ ನಿಮ್ಮ ಐಕ್ಯತೆ ಧಕ್ಕೆ ಆಗುವುದಾದರೆ…’ ಭಾರತೀಯ ಸಲೆಬ್ರಿಟಿಗಳ ಕಪಾಳಕ್ಕೆ ಬಾರಿಸಿದ ತಾಪ್ಸಿ ಪನ್ನು!
ನಟರು, ಕ್ರಿಕೆಟಿಗರು, ಮಂತ್ರಿಗಳು, ವಿದೇಶದಲ್ಲಿರುವ ಭಾರತೀಯ ನಿಯೋಗಗಳು ಮತ್ತು ಆಡಳಿತರೂಢ ಬಿಜೆಪಿಯ ನಾಯಕರು ಮತ್ತು ಬೆಂಬಲಿಗರು ಮಾಡಿದ ಟ್ವೀಟ್ಗಳ ಹಿಮಪಾತಕ್ಕೆ ಪ್ರತಿಕ್ರಿಯೆಯಾಗಿ ಸೋನಾಕ್ಷಿ ಅವರು ತಮ್ಮ ಪೋಸ್ಟ್ ಹಾಕಿದ್ದಾರೆ.
ಇಂಟರ್ನೆಟ್ ಸ್ಥಗಿತಗೊಳಿಸುವಿಕೆ, ಮುಳ್ಳುತಂತಿ, ಕಾಂಕ್ರೀಟ್ ಗೋಡೆಗಳು ಮತ್ತು ಮಾಧ್ಯಮ ದಿಗ್ಬಂಧನದೊಂದಿಗೆ ರೈತರ ಪ್ರತಿಭಟನೆಯನ್ನು ನಿಲ್ಲಿಸುವ ಸರ್ಕಾರದ ಪ್ರಯತ್ನಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಒಳಗಾದ ನಂತರ ಸರ್ಕಾರವನ್ನು ಬೆಂಬಲಿಸುವ ಟ್ವೀಟ್ ಅಭಿಯಾನ ಶುರುವಾಗಿದೆ. ಈ ಅಭಿಯಾನವು ಪ್ರಮುಖವಾಗಿ ಪಾಪ್ ತಾರೆ ರಿಹಾನ್ನಾ ಅವರ ಟ್ವೀಟ್ಗೆ ಪ್ರತಿಕ್ರಿಯೆಯಾಗಿ ನಡೆದಿದೆ.
ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ ಸಾವಿರಾರು ರೈತರು, ಹೆಚ್ಚಾಗಿ ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ರೈತರು ಎರಡು ತಿಂಗಳಿನಿಂದ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಸರ್ಕಾರವು ಈ ಪ್ರತಿಭಟನೆಯನ್ನು ಮುರಿಯಲು ವಾಮಮಾರ್ಗಗಳನ್ನು, ದೌರ್ಜನ್ಯದ ಕ್ರಮಗಳನ್ನು ಅನುಸರಿಸುತ್ತಿದೆ ಎಂಬ ಟೀಕೆಗಳು ವ್ಯಾಪಕವಾಗಿ ವ್ಯಕ್ತವಾಗಿವೆ.
ಭಾರತದ ಅಧಿಕಾರಸ್ಥರ ಕ್ರಮ, ಸಾಮಾಜಿಕ ಮಾಧ್ಯಮಗಳಲ್ಲಿ ಬೆದರಿಕೆಗಳು ಮತ್ತು ಅಶ್ಲೀಲತೆಗಳಿಗೆ ಗುರಿಯಾಗುವ ಸಾಧ್ಯತೆ, ಸರ್ಕಾರದ ಮತಾಂಧ ಬೆಂಬಲಿಗರ ಪ್ರತೀಕಾರದ ನಿಲುವಿನ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದ ಗಣ್ಯರು ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ವಿರುದ್ಧ ನಿಲುವು ಪ್ರಕಟಿಸದೇ ಎಚ್ಚರಿಕೆಯಿಂದ ನಡೆದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತಾಪ್ಸಿ ಪನ್ನು, ಸೋನಾಕ್ಷಿ ಸಿನ್ಹಾ ಧೈರ್ಯ ಮೆರೆದಿದ್ದಾರೆ.
ಇದನ್ನೂ ಓದಿ; ತನಿಖೆ ಥನ್ಬರ್ಗ್ ವಿರುದ್ಧವಲ್ಲ, ಟೂಲ್ಕಿಟ್ ರೂಪಿಸಿದವರ ವಿರುದ್ಧ: ದೆಹಲಿ ಪೊಲೀಸ್