Homeಕರ್ನಾಟಕಶ್ರದ್ಧಾಂಜಲಿ; ಅಪವಾದಗಳೇ ನಿಯಮಗಳಾದಾಗ

ಶ್ರದ್ಧಾಂಜಲಿ; ಅಪವಾದಗಳೇ ನಿಯಮಗಳಾದಾಗ

- Advertisement -
- Advertisement -

ಮೊದಲ ದೃಶ್ಯ

ನಾಟಕ: ಬ್ರೆಕ್ಟ್‌ನ ’ಅಪವಾದ ಮತ್ತು ನಿಯಮ’; ಅದರಲ್ಲಿ ಅಪಾರವಾದ ಸಾಮಾನುಗಳನ್ನು ಹೊತ್ತ ಕೂಲಿಯೊಬ್ಬ “ಬಡವರು ಸತ್ತರೆ ಸುಡಲಿಕ್ಕೆ ಸೌದಿಲ್ಲೋ ಒಡಲ ಬೆಂಕೀಲಿ ಹೆಣ ಬೆಂದೋ! ದ್ಯಾವರೇ ಬಡವರಿಗೆ ಸಾವ ಕೊಡ ಬ್ಯಾಡೋ” ಎಂದು ಹಾಡುತ್ತಾ ಬರುತ್ತಾನೆ. ಹಾಡುವ ಕೂಲಿಯನ್ನು ಕಂಡು ಸಾಹುಕಾರ ಕಸಿವಿಸಿಗೊಳ್ಳುತ್ತಾನೆ. ನೀರಿಗಾಗಿ ಚಡಪಡಿಸುತ್ತಾನೆ. ಕೂಲಿ ತನ್ನ ಹತ್ತಿರ ಇರುವ ನೀರನ್ನು ಕೊಡಲು ಹೋದಾಗ ಸಾಹುಕಾರ ಅವನನ್ನು ಗುಂಡಿಟ್ಟು ಕೊಲ್ಲುತ್ತಾನೆ. ಮುಂದೆ ನ್ಯಾಯಾಲಯದಲ್ಲಿ ಬರುವ ತೀರ್ಪು “ಕೂಲಿಯೊಬ್ಬ ಸಾಹುಕಾರನ ಕಡೆ ನುಗ್ಗಿ ಬಂದರೆ, ನಿಯಮದಂತೆ ಆತ ಕೊಲ್ಲಲು ಬಂದಿದ್ದಾನೆಂದು ತೀರ್ಮಾನಿಸಬೇಕೇ ಹೊರತು ಸಹಾಯ ಮಾಡಲು ಬಂದ ಎಂದಲ್ಲ” ಎಂದು.

ಕೊನೆಯ ದೃಶ್ಯ

ನಾಟಕ: ’ಕರ್ಣಭಾರ’; ಕುಂದಾಪುರದ ಅತಿ ಸಣ್ಣ ಬುಡಕಟ್ಟು ನಾಯರಿ ಸಮುದಾಯದ ಎದುರು ನಾಟಕ ನಡೆಯುತ್ತಿದೆ. ಕ್ಷತ್ರಿಯನ ವೇಶದಲ್ಲಿ ಕರ್ಣನ ಪಾತ್ರಧಾರಿ ಪ್ರವೇಶಿಸಿ, ಮುಂದೆ ಬರುವ ಕಥೆಯಲ್ಲಿ ಕ್ಷತ್ರಿಯನಲ್ಲ ಎಂಬುದಕ್ಕೆ, ಪರಶುರಾಮನ ಶಾಪ ಪಡೆದ ಕಥೆಯನ್ನು ಹೇಳಿ, ಚಂಡೆ ಸದ್ದಿನ ಉನ್ಮಾದದಲ್ಲಿ ತನ್ನನ್ನೇ ಕೊಂದುಕೊಳ್ಳುವುದಕ್ಕೆ ಮುಂದಾಗುತ್ತಾನೆ. ಸಾಯುವುದೇ ನಿಜವೆಂದಾದರೂ, ಬ್ರಾಹ್ಮಣನ ವೇಷದಲ್ಲಿ ಬಂದ ಇಂದ್ರನಿಗೆ ಕವಚ ಕುಂಡಲಗಳನ್ನು ದಾನಕೊಟ್ಟು ಬೀಗುವ ಕರ್ಣ ನಿಷ್ಕ್ರಮಿಸುತ್ತಾನೆ.

ಈ ಎರಡು ವಿಭಿನ್ನ ರೀತಿಯ ದೃಶ್ಯಗಳಾದರೂ, ಅವುಗಳ ನಡುವೆ ಸಂಬಂಧದ ಪಯಣ ಬೆಳೆಸಿದವರು ಗೋಪಾಲಕೃಷ್ಣ ನಾಯರಿ. ಕುಂದಾಪುರ ತಾಲ್ಲೂಕಿನ ಸಾಲಿಗ್ರಾಮದ ಕಾರ್ಕಡ ಶಾಲೆಯ ಹಿಂದೆ ಇದ್ದ ಹಾಡಿಗಳ ಮಧ್ಯದ ಚಿಕ್ಕ ಬುಡಕಟ್ಟಿಗೆ ಸೇರಿದ ನಾಯರಿ ಅಲ್ಲಿನ ಅನೇಕಾನೇಕ ಮಾಣಿಗಳಂತೆ ಹದಿಹರೆಯದ ವಯಸ್ಸಿನಲ್ಲೇ ಬೆಂಗಳೂರಿಗೆ ಬಂದು ಹೋಟೆಲ್ ಕೆಲಸ ಮಾಡುತ್ತಾ ಸಂಜೆ ಕಾಲೇಜಿಗೆ ಸೇರಿಕೊಂಡರು. ಅಲ್ಲಿದ್ದ ಹೊಸಬಗೆಯ ನಾಟಕಗಳ ಹರಿಕಾರರಲ್ಲಿ ಒಬ್ಬರಾದ ಕ ವೆಂ ರಾಜಗೋಪಾಲರ ಪ್ರಭಾವದಲ್ಲಿ ಹೊಸ ಅಲೆಯ ನಾಟಕಗಳಲ್ಲಿ ಭಾಗವಹಿಸಿದರು. 1972- ಬೆಂಗಳೂರಿನಲ್ಲಿ ಕನ್ನಡ ರಂಗಭೂಮಿ ಹೊಸ ತಿರುವ ಪಡೆಯುತ್ತಿದ್ದ ಕಾಲ. ಆಗ ಆ ರಂಗಪ್ರವೇಶ ಮಾಡಿದ ನಾಯರಿ, ಮೇಲೆ ಹೇಳಿದ ’ಅಪವಾದ ಮತ್ತು ನಿಯಮ’ ನಾಟಕದ ಕೂಲಿ ಆಳಿನ ಪಾತ್ರ ಮಾಡಿದ್ದರು. ಅಲ್ಲಿ ಆ ಪಾತ್ರದ ದುರಂತತೆಯೇ, ಭಾಸನ ’ಕರ್ಣಭಾರ’ದ ದುರಂತ ಚಿತ್ರಣವಾಗಿ ಬೆಳೆದು ನಿಂತಿರುವುದು. ನಾಯರಿ ಮತ್ತು ಅವರಂತಹ ಕೆಲವೇ ಮಂದಿ ರಂಗ ಪ್ರತಿಭೆಗಳ ದುಃಖಪೂರಿತ ಚರಿತ್ರೆಯಾಗಿ ಕಾಣುತ್ತದೆ ನಮ್ಮ ಸಾಂಸ್ಕೃತಿಕ ಲೋಕದ ದುರಂತ.

ಯಾವ ಸಾಂಸ್ಥಿಕ ಬೆಂಬಲವೂ ಇಲ್ಲದ ನಾಯರಿ ಕೇವಲ ತಮ್ಮ ಪ್ರತಿಭೆಯಿಂದಲೇ ಶ್ರೀರಂಗರಂಥವರ ಗಮನ ಸೆಳೆದು ಎನ್‌ಎಸ್‌ಡಿಗೆ ಕಲಿಯುವುದಕ್ಕೆ ಹೋಗಲು ಸಾಧ್ಯವಾಯಿತು. ಅಲ್ಲಿ ಆಗ ಬಿ ವಿ ಕಾರಂತರು ನಿರ್ದೇಶಕರು; ಅವರ ನಿರ್ದೇಶನದ ನಾಟಕಗಳಲ್ಲಿ ಅವರ ಕಲ್ಪನೆಯನ್ನೂ ಮೀರಿ ಅಭಿನಯಿಸಿದ ನಾಯರಿ, ಒಂದು ವರ್ಷ ಎನ್‌ಎಸ್‌ಡಿಯ ರೆಪೆರ್ಟರಿಯಲ್ಲಿ ಸೇರಿದ್ದು ಅಭಿನಯದ ವಿಶೇಷ ತರಬೇತಿಯ ಫೆಲೋಶಿಪ್ ಅಡಿಯಲ್ಲಿ. ಆಗ ಎನ್ವಿರಾನ್ಮೆಂಟಲ್ ಥಿಯೇಟರ್ ಎಂದು ಹೊಸ ಮಾದರಿಯೊಂದು ಜನಪ್ರಿಯವಾಗತೊಡಗಿತ್ತು. ಅದನ್ನು ಪರಿಚಯಿಸಿದ್ದ ರಿಚರ್ಡ್ ಶೆಕ್ನರ್ ನಿರ್ದೇಶಿಸಿದ ’ಚೆರಿ ಅರ್ಚರ್ಡ್’ ನಾಟಕದಲ್ಲಿ ತೋಟದ ಮನೆಯ ಆಳಿನ ಪಾತ್ರ ಮಾಡಿ ಎಲ್ಲರ ಗಮನ ಸೆಳೆದರು ಗೋಪಾಲಕೃಷ್ಣ. ದೆಹಲಿಯಿಂದ ಬೆಂಗಳೂರಿಗೆ ಹಿಂದಿರುಗಿ ರಂಗಭೂಮಿಯ ಕಾಯಕದಲ್ಲಿ ತೊಡಗಿಸಿಕೊಂಡರು. ವಿಶೇಷವಾಗಿ ಎಮ್‌ಇಎಸ್ ಕಾಲೇಜಿನಲ್ಲಿ ’ದೂತವಾಕ್ಯದ ಪ್ರಯೋಗದಿಂದ ಹೊಸ ರೀತಿಯ ರಂಗಶೋಧ ಪ್ರಾರಂಭಿಸಿದರು. ಈ ಶೋಧದ ಮೂರು ಮುಖ್ಯ ಅಂಶಗಳು ಎಂದರೆ: 1. ಆಧುನಿಕ ಸಾಮಾಜಿಕ-ರಾಜಕೀಯ ಪ್ರಜ್ಞೆ 2. ತಮ್ಮ ಊರಿನ ಯಕ್ಷಗಾನವಷ್ಟೆ ಅಲ್ಲದೇ ಹಲವಾರು ಆರಾಧನಾ ರೀತಿಗಳ ಆಂತರ್ಯದ ಸೊಗಡಿನ ರೂಪಗಳನ್ನು ಬಳಸುವಿಕೆ 3. ಪಾರಂಪರಿಕ ಪಠ್ಯಗಳ ಹೊಸ ಅನುಸಂಧಾನ. ಇವೆಲ್ಲವನ್ನೂ ಪರಸ್ಪರ ವಿರುದ್ಧವೆಂದು ಕಾಣುತ್ತಿದ್ದವರಿಗೆ, ಅವುಗಳ ಪರಸ್ಪರ ಹೆಣಿಗೆಯನ್ನು ಮನಗಾಣಿಸತೊಡಗಿದರು. ಇದು ಅವರು ಮಾಡಿದ ಮುಖ್ಯ ಕೆಲಸ. ಇದೇನು ನೇರವಾಗಿ ಒಂದಷ್ಟು ಕಾಲದ ಅವಧಿಯಲ್ಲಾದದ್ದಲ್ಲ. ಇದು ಜೀವಮಾನದ ಕೆಲಸ. ಇದಕ್ಕೆ ಅವರು ನಲವತ್ತು ವರ್ಷ ಸವೆಸಿದ್ದು ಬೇರೆಯೇ ಕತೆ.

ಈ ಕತೆಗೆ ಹಲವು ಮಗ್ಗುಲುಗಳು. ಅನೇಕ ತಮ್ಮ ಒಡನಾಡಿಗಳಿಗೆ ಇವರು ವಕ್ರ ಎನಿಸಿದರು. ಬೇರೆಯವರ ದಾರಿ ತುಳಿಯದವರ ಬಗ್ಗೆ ಹೀಗೇ ತಾನೇ? ಜತೆಗೆ ಟಿ.ವಿ.ಗಳಿಗೆ ಹೋಗುವುದಿಲ್ಲವೆಂಬ ಅವರ ವೀರವ್ರತ ಬೇರೆ. ಹೊಟ್ಟೆ ಹೊರೆಯುವುದಕ್ಕೆಂದೇ ಹಲವು ಕೆಲಸಗಳನ್ನು ಹಿಡಿದರು. SCZCC (ಸೌತ್ ಸೆಂಟ್ರಲ್ ಜೋನ್ ಕಲ್ಚರಲ್ ಸೆಂಟರ್)ನ ದೊಡ್ಡ ಹುದ್ದೆಯಿಂದ ಹಿಡಿದು, ಫಿಲಿಂ ಇನ್ಸ್ಟಿಟ್ಯೂಟು ಸೇರಿದಂತೆ ಮಠದ ನಾಟಕಶಾಲೆಯವರೆಗೆ ಕೆಲಸ ಮಾಡಿ ಬಿಟ್ಟರು ಅಥವಾ ಬಿಡಿಸಲಾಯಿತು. ಸಾಕ್ಷರತೆ ಮೊದಲಾದ ಸರಕಾರಿ ಕಾರ್ಯಕ್ರಮಗಳಿಗೆ ನಾಟಕಗಳನ್ನು ಬರೆದು ಆಡಿಸಿದರು. ಹೀಗೆ ಒದ್ದಾಡಿ 10-15ವರ್ಷಗಳ ನಂತರ ತಾವೇ ಒಂದು ಸಂಸ್ಥೆಯನ್ನು ಹುಟ್ಟುಹಾಕಿದರು. ಬಹುಪಾಲು ತಮ್ಮಂತೆಯೇ ಅಥವಾ ತಮಗಿಂತ ಹೆಚ್ಚು ಅಂಚಿಗೆ ದೂಡಲ್ಪಟ್ಟ ಶಿಷ್ಯರನ್ನು ದೂರದೂರದ ಹಳ್ಳಿಗಳಲ್ಲಿ ಪಡೆದುಕೊಂಡರು. ತುಮಕೂರು, ಮೆಳೆಹಳ್ಳಿ, ಚಿತ್ರದುರ್ಗ, ಹರಪನಹಳ್ಳಿ ಹೀಗೆ ರಂಗ ಚಟುವಟಿಕೆಗಳ ಕೇಂದ್ರಗಳನ್ನು ಬೆಳೆಸಿದರು. ಅನೇಕ ಹಿರಿಯರಿಗೆ (ವಿ.ರಾಮಮೂರ್ತಿಯಂಥವರಿಗೆ) ಸಹಾಯಕ್ಕೆ ನಿಂತರು. ಕಿರಿಯರಿಗೆ ಉತ್ತೇಜನ ಕೊಟ್ಟರು.

ಆದರೆ ಅವರದ್ದು ಕರ್ಣನ ಕತೆಯೇ ಆಯಿತು. ತಮ್ಮ ಹಾಡಿಯಲ್ಲಿ ’ಕರ್ಣಭಾರ’ವನ್ನು ಹಾಡಿಯಾಟವನ್ನಾಗಿಯೇ ಮಾಡಿದರು. ಆ ನಾಟಕದ ಆಶಯವಾಗಿ ಮಾಟದ ಬಲಿಯ ಪ್ರತಿಮೆಗಳನ್ನು ದಾರಿಯುದ್ದಕ್ಕೂ ತೋರಿಸಿದ್ದರು. ಅಲ್ಲಿನ ಕತ್ತಲೆಯ ನಡುವಿನ ಹಣತೆಯ ಬೆಳಕಿನಲ್ಲಿ, ಜಾತಿ ದೊಡ್ಡಸ್ತಿಕೆಯಿಂದ ಯಾರಿಂದ ತುಳಿಯಲ್ಪಟ್ಟನೋ ಅವರನ್ನ ಮೀರಲು ದಾನಕೊಡುತ್ತಾ ಹೋಗಿ ಸಾಯಲು ಸಿದ್ಧವಾಗಿಯೇ ನಿಷ್ಕ್ರಮಿಸುವ ಕರ್ಣನ ಕತೆ; ತುಳಿತಕ್ಕೆ ಒಳಗಾದವರು ಪ್ರತಿಷ್ಠಿತ ಶಕ್ತಿಗಳ ಜತೆ ಸೇರಿ ದುರಂತ ನಾಯಕರಾಗುವುದು ಎಲ್ಲ ಕಾಲದ ರಾಜಕೀಯ ಕತೆಯಾಗಿದೆ. ಕರ್ಣನ ಕತೆ ನಾಯರಿ ಜನಾಂಗದ ಕತೆಯೆಂದು ತೋರಿಸುತ್ತಾ ಅದು ಗೋಪಾಲಕೃಷ್ಣನಾಯರಿ ಕತೆಯೇ ಆಯಿತು.

ಇಲ್ಲಿ ನಾವು ಚಿಂತಿಸಬೇಕಾದ್ದು ಒಬ್ಬಿಬ್ಬರ ಬಗ್ಗೆ ಅಷ್ಟೆ ಅಲ್ಲ. ಅಂಚಿಗೆ ತಳ್ಳಲ್ಪಟ್ಟವರನ್ನು ಹೊಸ ಅಧಿಕಾರ ಕೇಂದ್ರಗಳು ಹೇಗೆ ನುಂಗುತ್ತವೆ ಎನ್ನುವುದನ್ನು. ದೇಶಬದ್ಧವಾದ ರಂಗ ಪ್ರಯೋಗ ಮಾಡಿ; ಅದನ್ನು ಎಕ್ಸ್‌ಪೋರ್ಟ್ ಮಾಡಬೇಕಿಲ್ಲ ಎನ್ನುತ್ತಿದ್ದ ನಾಯರಿ, ವಿದೇಶಿ ಬಿಡಿ ದೇಶ ಪರ್ಯಟನೆಗೇ ನಾಟಕವನ್ನು ಕೊಡಲಿಲ್ಲ. ಒಂದೇ ನಾಟಕವನ್ನು ಎಲ್ಲೆಲ್ಲಿ ಹೋದರೆ ಅಲ್ಲಿನ ರೀತಿ-ರಿವಾಜು, ಸಂಸ್ಕೃತಿಗಳಲ್ಲಿ ಮಾಡಿಸುತ್ತಿದ್ದರು. ಆದರೆ ಆ ರಂಗಸ್ಥಳಗಳೇ ಕಳೆದು ಹೋಗುತ್ತಾ ಬಂದವು.

ಗೋಪಾಲಕೃಷ್ಣ ನಾಯರಿ ಜನವರಿ 6, 2023ರಂದು ಜೀವನ ನಾಟಕ ಮುಗಿಸಿದರು. ಕೆಲವು ಸಾವಿರವಷ್ಟೇ ಇರುವ ನಾಯರಿ ಜನಾಂಗದ ಯುವಕರಿಗೆ, ಹಾಗೇ ಮೂಲೆಮೂಲೆಯಲ್ಲಿರುವ ನತದೃಷ್ಟ ರಂಗಕರ್ಮಿಗಳನೇಕರಿಗೆ ಹೊಸ ಭರವಸೆಯಾಗಿದ್ದ ಗೋಪಾಲಕೃಷ್ಣ ಮುಂದೆ ಕೂಡ ತಮ್ಮ ಕೆಲಸಗಳಿಂದ ಸ್ಫೂರ್ತಿ ಸ್ಫುರಿಸುವ ಭರವಸೆಯಿದೆ. ಹೊಸಹೊಸ ಕಲ್ಪನೆಗಳಿಗೆ ನನ್ನಂಥ ನಗರದವರೂ ಮತ್ತು ಹಳ್ಳಿಯ ಜನರೂ ತೆರೆದುಕೊಳ್ಳುವಂತೆ ಮಾಡಿದ ಗೋಪಾಲಕೃಷ್ಣ ನಾಯರಿಯವರಿಗೆ ನಮೋ ನಮಃ.

ಜೆ ಶ್ರೀನಿವಾಸ ಮೂರ್ತಿ
ನಿವೃತ್ತ ಪ್ರಾಧ್ಯಾಪಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...