Homeಕರ್ನಾಟಕಶ್ರದ್ಧಾಂಜಲಿ; ಅಪವಾದಗಳೇ ನಿಯಮಗಳಾದಾಗ

ಶ್ರದ್ಧಾಂಜಲಿ; ಅಪವಾದಗಳೇ ನಿಯಮಗಳಾದಾಗ

- Advertisement -
- Advertisement -

ಮೊದಲ ದೃಶ್ಯ

ನಾಟಕ: ಬ್ರೆಕ್ಟ್‌ನ ’ಅಪವಾದ ಮತ್ತು ನಿಯಮ’; ಅದರಲ್ಲಿ ಅಪಾರವಾದ ಸಾಮಾನುಗಳನ್ನು ಹೊತ್ತ ಕೂಲಿಯೊಬ್ಬ “ಬಡವರು ಸತ್ತರೆ ಸುಡಲಿಕ್ಕೆ ಸೌದಿಲ್ಲೋ ಒಡಲ ಬೆಂಕೀಲಿ ಹೆಣ ಬೆಂದೋ! ದ್ಯಾವರೇ ಬಡವರಿಗೆ ಸಾವ ಕೊಡ ಬ್ಯಾಡೋ” ಎಂದು ಹಾಡುತ್ತಾ ಬರುತ್ತಾನೆ. ಹಾಡುವ ಕೂಲಿಯನ್ನು ಕಂಡು ಸಾಹುಕಾರ ಕಸಿವಿಸಿಗೊಳ್ಳುತ್ತಾನೆ. ನೀರಿಗಾಗಿ ಚಡಪಡಿಸುತ್ತಾನೆ. ಕೂಲಿ ತನ್ನ ಹತ್ತಿರ ಇರುವ ನೀರನ್ನು ಕೊಡಲು ಹೋದಾಗ ಸಾಹುಕಾರ ಅವನನ್ನು ಗುಂಡಿಟ್ಟು ಕೊಲ್ಲುತ್ತಾನೆ. ಮುಂದೆ ನ್ಯಾಯಾಲಯದಲ್ಲಿ ಬರುವ ತೀರ್ಪು “ಕೂಲಿಯೊಬ್ಬ ಸಾಹುಕಾರನ ಕಡೆ ನುಗ್ಗಿ ಬಂದರೆ, ನಿಯಮದಂತೆ ಆತ ಕೊಲ್ಲಲು ಬಂದಿದ್ದಾನೆಂದು ತೀರ್ಮಾನಿಸಬೇಕೇ ಹೊರತು ಸಹಾಯ ಮಾಡಲು ಬಂದ ಎಂದಲ್ಲ” ಎಂದು.

ಕೊನೆಯ ದೃಶ್ಯ

ನಾಟಕ: ’ಕರ್ಣಭಾರ’; ಕುಂದಾಪುರದ ಅತಿ ಸಣ್ಣ ಬುಡಕಟ್ಟು ನಾಯರಿ ಸಮುದಾಯದ ಎದುರು ನಾಟಕ ನಡೆಯುತ್ತಿದೆ. ಕ್ಷತ್ರಿಯನ ವೇಶದಲ್ಲಿ ಕರ್ಣನ ಪಾತ್ರಧಾರಿ ಪ್ರವೇಶಿಸಿ, ಮುಂದೆ ಬರುವ ಕಥೆಯಲ್ಲಿ ಕ್ಷತ್ರಿಯನಲ್ಲ ಎಂಬುದಕ್ಕೆ, ಪರಶುರಾಮನ ಶಾಪ ಪಡೆದ ಕಥೆಯನ್ನು ಹೇಳಿ, ಚಂಡೆ ಸದ್ದಿನ ಉನ್ಮಾದದಲ್ಲಿ ತನ್ನನ್ನೇ ಕೊಂದುಕೊಳ್ಳುವುದಕ್ಕೆ ಮುಂದಾಗುತ್ತಾನೆ. ಸಾಯುವುದೇ ನಿಜವೆಂದಾದರೂ, ಬ್ರಾಹ್ಮಣನ ವೇಷದಲ್ಲಿ ಬಂದ ಇಂದ್ರನಿಗೆ ಕವಚ ಕುಂಡಲಗಳನ್ನು ದಾನಕೊಟ್ಟು ಬೀಗುವ ಕರ್ಣ ನಿಷ್ಕ್ರಮಿಸುತ್ತಾನೆ.

ಈ ಎರಡು ವಿಭಿನ್ನ ರೀತಿಯ ದೃಶ್ಯಗಳಾದರೂ, ಅವುಗಳ ನಡುವೆ ಸಂಬಂಧದ ಪಯಣ ಬೆಳೆಸಿದವರು ಗೋಪಾಲಕೃಷ್ಣ ನಾಯರಿ. ಕುಂದಾಪುರ ತಾಲ್ಲೂಕಿನ ಸಾಲಿಗ್ರಾಮದ ಕಾರ್ಕಡ ಶಾಲೆಯ ಹಿಂದೆ ಇದ್ದ ಹಾಡಿಗಳ ಮಧ್ಯದ ಚಿಕ್ಕ ಬುಡಕಟ್ಟಿಗೆ ಸೇರಿದ ನಾಯರಿ ಅಲ್ಲಿನ ಅನೇಕಾನೇಕ ಮಾಣಿಗಳಂತೆ ಹದಿಹರೆಯದ ವಯಸ್ಸಿನಲ್ಲೇ ಬೆಂಗಳೂರಿಗೆ ಬಂದು ಹೋಟೆಲ್ ಕೆಲಸ ಮಾಡುತ್ತಾ ಸಂಜೆ ಕಾಲೇಜಿಗೆ ಸೇರಿಕೊಂಡರು. ಅಲ್ಲಿದ್ದ ಹೊಸಬಗೆಯ ನಾಟಕಗಳ ಹರಿಕಾರರಲ್ಲಿ ಒಬ್ಬರಾದ ಕ ವೆಂ ರಾಜಗೋಪಾಲರ ಪ್ರಭಾವದಲ್ಲಿ ಹೊಸ ಅಲೆಯ ನಾಟಕಗಳಲ್ಲಿ ಭಾಗವಹಿಸಿದರು. 1972- ಬೆಂಗಳೂರಿನಲ್ಲಿ ಕನ್ನಡ ರಂಗಭೂಮಿ ಹೊಸ ತಿರುವ ಪಡೆಯುತ್ತಿದ್ದ ಕಾಲ. ಆಗ ಆ ರಂಗಪ್ರವೇಶ ಮಾಡಿದ ನಾಯರಿ, ಮೇಲೆ ಹೇಳಿದ ’ಅಪವಾದ ಮತ್ತು ನಿಯಮ’ ನಾಟಕದ ಕೂಲಿ ಆಳಿನ ಪಾತ್ರ ಮಾಡಿದ್ದರು. ಅಲ್ಲಿ ಆ ಪಾತ್ರದ ದುರಂತತೆಯೇ, ಭಾಸನ ’ಕರ್ಣಭಾರ’ದ ದುರಂತ ಚಿತ್ರಣವಾಗಿ ಬೆಳೆದು ನಿಂತಿರುವುದು. ನಾಯರಿ ಮತ್ತು ಅವರಂತಹ ಕೆಲವೇ ಮಂದಿ ರಂಗ ಪ್ರತಿಭೆಗಳ ದುಃಖಪೂರಿತ ಚರಿತ್ರೆಯಾಗಿ ಕಾಣುತ್ತದೆ ನಮ್ಮ ಸಾಂಸ್ಕೃತಿಕ ಲೋಕದ ದುರಂತ.

ಯಾವ ಸಾಂಸ್ಥಿಕ ಬೆಂಬಲವೂ ಇಲ್ಲದ ನಾಯರಿ ಕೇವಲ ತಮ್ಮ ಪ್ರತಿಭೆಯಿಂದಲೇ ಶ್ರೀರಂಗರಂಥವರ ಗಮನ ಸೆಳೆದು ಎನ್‌ಎಸ್‌ಡಿಗೆ ಕಲಿಯುವುದಕ್ಕೆ ಹೋಗಲು ಸಾಧ್ಯವಾಯಿತು. ಅಲ್ಲಿ ಆಗ ಬಿ ವಿ ಕಾರಂತರು ನಿರ್ದೇಶಕರು; ಅವರ ನಿರ್ದೇಶನದ ನಾಟಕಗಳಲ್ಲಿ ಅವರ ಕಲ್ಪನೆಯನ್ನೂ ಮೀರಿ ಅಭಿನಯಿಸಿದ ನಾಯರಿ, ಒಂದು ವರ್ಷ ಎನ್‌ಎಸ್‌ಡಿಯ ರೆಪೆರ್ಟರಿಯಲ್ಲಿ ಸೇರಿದ್ದು ಅಭಿನಯದ ವಿಶೇಷ ತರಬೇತಿಯ ಫೆಲೋಶಿಪ್ ಅಡಿಯಲ್ಲಿ. ಆಗ ಎನ್ವಿರಾನ್ಮೆಂಟಲ್ ಥಿಯೇಟರ್ ಎಂದು ಹೊಸ ಮಾದರಿಯೊಂದು ಜನಪ್ರಿಯವಾಗತೊಡಗಿತ್ತು. ಅದನ್ನು ಪರಿಚಯಿಸಿದ್ದ ರಿಚರ್ಡ್ ಶೆಕ್ನರ್ ನಿರ್ದೇಶಿಸಿದ ’ಚೆರಿ ಅರ್ಚರ್ಡ್’ ನಾಟಕದಲ್ಲಿ ತೋಟದ ಮನೆಯ ಆಳಿನ ಪಾತ್ರ ಮಾಡಿ ಎಲ್ಲರ ಗಮನ ಸೆಳೆದರು ಗೋಪಾಲಕೃಷ್ಣ. ದೆಹಲಿಯಿಂದ ಬೆಂಗಳೂರಿಗೆ ಹಿಂದಿರುಗಿ ರಂಗಭೂಮಿಯ ಕಾಯಕದಲ್ಲಿ ತೊಡಗಿಸಿಕೊಂಡರು. ವಿಶೇಷವಾಗಿ ಎಮ್‌ಇಎಸ್ ಕಾಲೇಜಿನಲ್ಲಿ ’ದೂತವಾಕ್ಯದ ಪ್ರಯೋಗದಿಂದ ಹೊಸ ರೀತಿಯ ರಂಗಶೋಧ ಪ್ರಾರಂಭಿಸಿದರು. ಈ ಶೋಧದ ಮೂರು ಮುಖ್ಯ ಅಂಶಗಳು ಎಂದರೆ: 1. ಆಧುನಿಕ ಸಾಮಾಜಿಕ-ರಾಜಕೀಯ ಪ್ರಜ್ಞೆ 2. ತಮ್ಮ ಊರಿನ ಯಕ್ಷಗಾನವಷ್ಟೆ ಅಲ್ಲದೇ ಹಲವಾರು ಆರಾಧನಾ ರೀತಿಗಳ ಆಂತರ್ಯದ ಸೊಗಡಿನ ರೂಪಗಳನ್ನು ಬಳಸುವಿಕೆ 3. ಪಾರಂಪರಿಕ ಪಠ್ಯಗಳ ಹೊಸ ಅನುಸಂಧಾನ. ಇವೆಲ್ಲವನ್ನೂ ಪರಸ್ಪರ ವಿರುದ್ಧವೆಂದು ಕಾಣುತ್ತಿದ್ದವರಿಗೆ, ಅವುಗಳ ಪರಸ್ಪರ ಹೆಣಿಗೆಯನ್ನು ಮನಗಾಣಿಸತೊಡಗಿದರು. ಇದು ಅವರು ಮಾಡಿದ ಮುಖ್ಯ ಕೆಲಸ. ಇದೇನು ನೇರವಾಗಿ ಒಂದಷ್ಟು ಕಾಲದ ಅವಧಿಯಲ್ಲಾದದ್ದಲ್ಲ. ಇದು ಜೀವಮಾನದ ಕೆಲಸ. ಇದಕ್ಕೆ ಅವರು ನಲವತ್ತು ವರ್ಷ ಸವೆಸಿದ್ದು ಬೇರೆಯೇ ಕತೆ.

ಈ ಕತೆಗೆ ಹಲವು ಮಗ್ಗುಲುಗಳು. ಅನೇಕ ತಮ್ಮ ಒಡನಾಡಿಗಳಿಗೆ ಇವರು ವಕ್ರ ಎನಿಸಿದರು. ಬೇರೆಯವರ ದಾರಿ ತುಳಿಯದವರ ಬಗ್ಗೆ ಹೀಗೇ ತಾನೇ? ಜತೆಗೆ ಟಿ.ವಿ.ಗಳಿಗೆ ಹೋಗುವುದಿಲ್ಲವೆಂಬ ಅವರ ವೀರವ್ರತ ಬೇರೆ. ಹೊಟ್ಟೆ ಹೊರೆಯುವುದಕ್ಕೆಂದೇ ಹಲವು ಕೆಲಸಗಳನ್ನು ಹಿಡಿದರು. SCZCC (ಸೌತ್ ಸೆಂಟ್ರಲ್ ಜೋನ್ ಕಲ್ಚರಲ್ ಸೆಂಟರ್)ನ ದೊಡ್ಡ ಹುದ್ದೆಯಿಂದ ಹಿಡಿದು, ಫಿಲಿಂ ಇನ್ಸ್ಟಿಟ್ಯೂಟು ಸೇರಿದಂತೆ ಮಠದ ನಾಟಕಶಾಲೆಯವರೆಗೆ ಕೆಲಸ ಮಾಡಿ ಬಿಟ್ಟರು ಅಥವಾ ಬಿಡಿಸಲಾಯಿತು. ಸಾಕ್ಷರತೆ ಮೊದಲಾದ ಸರಕಾರಿ ಕಾರ್ಯಕ್ರಮಗಳಿಗೆ ನಾಟಕಗಳನ್ನು ಬರೆದು ಆಡಿಸಿದರು. ಹೀಗೆ ಒದ್ದಾಡಿ 10-15ವರ್ಷಗಳ ನಂತರ ತಾವೇ ಒಂದು ಸಂಸ್ಥೆಯನ್ನು ಹುಟ್ಟುಹಾಕಿದರು. ಬಹುಪಾಲು ತಮ್ಮಂತೆಯೇ ಅಥವಾ ತಮಗಿಂತ ಹೆಚ್ಚು ಅಂಚಿಗೆ ದೂಡಲ್ಪಟ್ಟ ಶಿಷ್ಯರನ್ನು ದೂರದೂರದ ಹಳ್ಳಿಗಳಲ್ಲಿ ಪಡೆದುಕೊಂಡರು. ತುಮಕೂರು, ಮೆಳೆಹಳ್ಳಿ, ಚಿತ್ರದುರ್ಗ, ಹರಪನಹಳ್ಳಿ ಹೀಗೆ ರಂಗ ಚಟುವಟಿಕೆಗಳ ಕೇಂದ್ರಗಳನ್ನು ಬೆಳೆಸಿದರು. ಅನೇಕ ಹಿರಿಯರಿಗೆ (ವಿ.ರಾಮಮೂರ್ತಿಯಂಥವರಿಗೆ) ಸಹಾಯಕ್ಕೆ ನಿಂತರು. ಕಿರಿಯರಿಗೆ ಉತ್ತೇಜನ ಕೊಟ್ಟರು.

ಆದರೆ ಅವರದ್ದು ಕರ್ಣನ ಕತೆಯೇ ಆಯಿತು. ತಮ್ಮ ಹಾಡಿಯಲ್ಲಿ ’ಕರ್ಣಭಾರ’ವನ್ನು ಹಾಡಿಯಾಟವನ್ನಾಗಿಯೇ ಮಾಡಿದರು. ಆ ನಾಟಕದ ಆಶಯವಾಗಿ ಮಾಟದ ಬಲಿಯ ಪ್ರತಿಮೆಗಳನ್ನು ದಾರಿಯುದ್ದಕ್ಕೂ ತೋರಿಸಿದ್ದರು. ಅಲ್ಲಿನ ಕತ್ತಲೆಯ ನಡುವಿನ ಹಣತೆಯ ಬೆಳಕಿನಲ್ಲಿ, ಜಾತಿ ದೊಡ್ಡಸ್ತಿಕೆಯಿಂದ ಯಾರಿಂದ ತುಳಿಯಲ್ಪಟ್ಟನೋ ಅವರನ್ನ ಮೀರಲು ದಾನಕೊಡುತ್ತಾ ಹೋಗಿ ಸಾಯಲು ಸಿದ್ಧವಾಗಿಯೇ ನಿಷ್ಕ್ರಮಿಸುವ ಕರ್ಣನ ಕತೆ; ತುಳಿತಕ್ಕೆ ಒಳಗಾದವರು ಪ್ರತಿಷ್ಠಿತ ಶಕ್ತಿಗಳ ಜತೆ ಸೇರಿ ದುರಂತ ನಾಯಕರಾಗುವುದು ಎಲ್ಲ ಕಾಲದ ರಾಜಕೀಯ ಕತೆಯಾಗಿದೆ. ಕರ್ಣನ ಕತೆ ನಾಯರಿ ಜನಾಂಗದ ಕತೆಯೆಂದು ತೋರಿಸುತ್ತಾ ಅದು ಗೋಪಾಲಕೃಷ್ಣನಾಯರಿ ಕತೆಯೇ ಆಯಿತು.

ಇಲ್ಲಿ ನಾವು ಚಿಂತಿಸಬೇಕಾದ್ದು ಒಬ್ಬಿಬ್ಬರ ಬಗ್ಗೆ ಅಷ್ಟೆ ಅಲ್ಲ. ಅಂಚಿಗೆ ತಳ್ಳಲ್ಪಟ್ಟವರನ್ನು ಹೊಸ ಅಧಿಕಾರ ಕೇಂದ್ರಗಳು ಹೇಗೆ ನುಂಗುತ್ತವೆ ಎನ್ನುವುದನ್ನು. ದೇಶಬದ್ಧವಾದ ರಂಗ ಪ್ರಯೋಗ ಮಾಡಿ; ಅದನ್ನು ಎಕ್ಸ್‌ಪೋರ್ಟ್ ಮಾಡಬೇಕಿಲ್ಲ ಎನ್ನುತ್ತಿದ್ದ ನಾಯರಿ, ವಿದೇಶಿ ಬಿಡಿ ದೇಶ ಪರ್ಯಟನೆಗೇ ನಾಟಕವನ್ನು ಕೊಡಲಿಲ್ಲ. ಒಂದೇ ನಾಟಕವನ್ನು ಎಲ್ಲೆಲ್ಲಿ ಹೋದರೆ ಅಲ್ಲಿನ ರೀತಿ-ರಿವಾಜು, ಸಂಸ್ಕೃತಿಗಳಲ್ಲಿ ಮಾಡಿಸುತ್ತಿದ್ದರು. ಆದರೆ ಆ ರಂಗಸ್ಥಳಗಳೇ ಕಳೆದು ಹೋಗುತ್ತಾ ಬಂದವು.

ಗೋಪಾಲಕೃಷ್ಣ ನಾಯರಿ ಜನವರಿ 6, 2023ರಂದು ಜೀವನ ನಾಟಕ ಮುಗಿಸಿದರು. ಕೆಲವು ಸಾವಿರವಷ್ಟೇ ಇರುವ ನಾಯರಿ ಜನಾಂಗದ ಯುವಕರಿಗೆ, ಹಾಗೇ ಮೂಲೆಮೂಲೆಯಲ್ಲಿರುವ ನತದೃಷ್ಟ ರಂಗಕರ್ಮಿಗಳನೇಕರಿಗೆ ಹೊಸ ಭರವಸೆಯಾಗಿದ್ದ ಗೋಪಾಲಕೃಷ್ಣ ಮುಂದೆ ಕೂಡ ತಮ್ಮ ಕೆಲಸಗಳಿಂದ ಸ್ಫೂರ್ತಿ ಸ್ಫುರಿಸುವ ಭರವಸೆಯಿದೆ. ಹೊಸಹೊಸ ಕಲ್ಪನೆಗಳಿಗೆ ನನ್ನಂಥ ನಗರದವರೂ ಮತ್ತು ಹಳ್ಳಿಯ ಜನರೂ ತೆರೆದುಕೊಳ್ಳುವಂತೆ ಮಾಡಿದ ಗೋಪಾಲಕೃಷ್ಣ ನಾಯರಿಯವರಿಗೆ ನಮೋ ನಮಃ.

ಜೆ ಶ್ರೀನಿವಾಸ ಮೂರ್ತಿ
ನಿವೃತ್ತ ಪ್ರಾಧ್ಯಾಪಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...