Homeಕರ್ನಾಟಕಶ್ರದ್ಧಾಂಜಲಿ; ಅಪವಾದಗಳೇ ನಿಯಮಗಳಾದಾಗ

ಶ್ರದ್ಧಾಂಜಲಿ; ಅಪವಾದಗಳೇ ನಿಯಮಗಳಾದಾಗ

- Advertisement -
- Advertisement -

ಮೊದಲ ದೃಶ್ಯ

ನಾಟಕ: ಬ್ರೆಕ್ಟ್‌ನ ’ಅಪವಾದ ಮತ್ತು ನಿಯಮ’; ಅದರಲ್ಲಿ ಅಪಾರವಾದ ಸಾಮಾನುಗಳನ್ನು ಹೊತ್ತ ಕೂಲಿಯೊಬ್ಬ “ಬಡವರು ಸತ್ತರೆ ಸುಡಲಿಕ್ಕೆ ಸೌದಿಲ್ಲೋ ಒಡಲ ಬೆಂಕೀಲಿ ಹೆಣ ಬೆಂದೋ! ದ್ಯಾವರೇ ಬಡವರಿಗೆ ಸಾವ ಕೊಡ ಬ್ಯಾಡೋ” ಎಂದು ಹಾಡುತ್ತಾ ಬರುತ್ತಾನೆ. ಹಾಡುವ ಕೂಲಿಯನ್ನು ಕಂಡು ಸಾಹುಕಾರ ಕಸಿವಿಸಿಗೊಳ್ಳುತ್ತಾನೆ. ನೀರಿಗಾಗಿ ಚಡಪಡಿಸುತ್ತಾನೆ. ಕೂಲಿ ತನ್ನ ಹತ್ತಿರ ಇರುವ ನೀರನ್ನು ಕೊಡಲು ಹೋದಾಗ ಸಾಹುಕಾರ ಅವನನ್ನು ಗುಂಡಿಟ್ಟು ಕೊಲ್ಲುತ್ತಾನೆ. ಮುಂದೆ ನ್ಯಾಯಾಲಯದಲ್ಲಿ ಬರುವ ತೀರ್ಪು “ಕೂಲಿಯೊಬ್ಬ ಸಾಹುಕಾರನ ಕಡೆ ನುಗ್ಗಿ ಬಂದರೆ, ನಿಯಮದಂತೆ ಆತ ಕೊಲ್ಲಲು ಬಂದಿದ್ದಾನೆಂದು ತೀರ್ಮಾನಿಸಬೇಕೇ ಹೊರತು ಸಹಾಯ ಮಾಡಲು ಬಂದ ಎಂದಲ್ಲ” ಎಂದು.

ಕೊನೆಯ ದೃಶ್ಯ

ನಾಟಕ: ’ಕರ್ಣಭಾರ’; ಕುಂದಾಪುರದ ಅತಿ ಸಣ್ಣ ಬುಡಕಟ್ಟು ನಾಯರಿ ಸಮುದಾಯದ ಎದುರು ನಾಟಕ ನಡೆಯುತ್ತಿದೆ. ಕ್ಷತ್ರಿಯನ ವೇಶದಲ್ಲಿ ಕರ್ಣನ ಪಾತ್ರಧಾರಿ ಪ್ರವೇಶಿಸಿ, ಮುಂದೆ ಬರುವ ಕಥೆಯಲ್ಲಿ ಕ್ಷತ್ರಿಯನಲ್ಲ ಎಂಬುದಕ್ಕೆ, ಪರಶುರಾಮನ ಶಾಪ ಪಡೆದ ಕಥೆಯನ್ನು ಹೇಳಿ, ಚಂಡೆ ಸದ್ದಿನ ಉನ್ಮಾದದಲ್ಲಿ ತನ್ನನ್ನೇ ಕೊಂದುಕೊಳ್ಳುವುದಕ್ಕೆ ಮುಂದಾಗುತ್ತಾನೆ. ಸಾಯುವುದೇ ನಿಜವೆಂದಾದರೂ, ಬ್ರಾಹ್ಮಣನ ವೇಷದಲ್ಲಿ ಬಂದ ಇಂದ್ರನಿಗೆ ಕವಚ ಕುಂಡಲಗಳನ್ನು ದಾನಕೊಟ್ಟು ಬೀಗುವ ಕರ್ಣ ನಿಷ್ಕ್ರಮಿಸುತ್ತಾನೆ.

ಈ ಎರಡು ವಿಭಿನ್ನ ರೀತಿಯ ದೃಶ್ಯಗಳಾದರೂ, ಅವುಗಳ ನಡುವೆ ಸಂಬಂಧದ ಪಯಣ ಬೆಳೆಸಿದವರು ಗೋಪಾಲಕೃಷ್ಣ ನಾಯರಿ. ಕುಂದಾಪುರ ತಾಲ್ಲೂಕಿನ ಸಾಲಿಗ್ರಾಮದ ಕಾರ್ಕಡ ಶಾಲೆಯ ಹಿಂದೆ ಇದ್ದ ಹಾಡಿಗಳ ಮಧ್ಯದ ಚಿಕ್ಕ ಬುಡಕಟ್ಟಿಗೆ ಸೇರಿದ ನಾಯರಿ ಅಲ್ಲಿನ ಅನೇಕಾನೇಕ ಮಾಣಿಗಳಂತೆ ಹದಿಹರೆಯದ ವಯಸ್ಸಿನಲ್ಲೇ ಬೆಂಗಳೂರಿಗೆ ಬಂದು ಹೋಟೆಲ್ ಕೆಲಸ ಮಾಡುತ್ತಾ ಸಂಜೆ ಕಾಲೇಜಿಗೆ ಸೇರಿಕೊಂಡರು. ಅಲ್ಲಿದ್ದ ಹೊಸಬಗೆಯ ನಾಟಕಗಳ ಹರಿಕಾರರಲ್ಲಿ ಒಬ್ಬರಾದ ಕ ವೆಂ ರಾಜಗೋಪಾಲರ ಪ್ರಭಾವದಲ್ಲಿ ಹೊಸ ಅಲೆಯ ನಾಟಕಗಳಲ್ಲಿ ಭಾಗವಹಿಸಿದರು. 1972- ಬೆಂಗಳೂರಿನಲ್ಲಿ ಕನ್ನಡ ರಂಗಭೂಮಿ ಹೊಸ ತಿರುವ ಪಡೆಯುತ್ತಿದ್ದ ಕಾಲ. ಆಗ ಆ ರಂಗಪ್ರವೇಶ ಮಾಡಿದ ನಾಯರಿ, ಮೇಲೆ ಹೇಳಿದ ’ಅಪವಾದ ಮತ್ತು ನಿಯಮ’ ನಾಟಕದ ಕೂಲಿ ಆಳಿನ ಪಾತ್ರ ಮಾಡಿದ್ದರು. ಅಲ್ಲಿ ಆ ಪಾತ್ರದ ದುರಂತತೆಯೇ, ಭಾಸನ ’ಕರ್ಣಭಾರ’ದ ದುರಂತ ಚಿತ್ರಣವಾಗಿ ಬೆಳೆದು ನಿಂತಿರುವುದು. ನಾಯರಿ ಮತ್ತು ಅವರಂತಹ ಕೆಲವೇ ಮಂದಿ ರಂಗ ಪ್ರತಿಭೆಗಳ ದುಃಖಪೂರಿತ ಚರಿತ್ರೆಯಾಗಿ ಕಾಣುತ್ತದೆ ನಮ್ಮ ಸಾಂಸ್ಕೃತಿಕ ಲೋಕದ ದುರಂತ.

ಯಾವ ಸಾಂಸ್ಥಿಕ ಬೆಂಬಲವೂ ಇಲ್ಲದ ನಾಯರಿ ಕೇವಲ ತಮ್ಮ ಪ್ರತಿಭೆಯಿಂದಲೇ ಶ್ರೀರಂಗರಂಥವರ ಗಮನ ಸೆಳೆದು ಎನ್‌ಎಸ್‌ಡಿಗೆ ಕಲಿಯುವುದಕ್ಕೆ ಹೋಗಲು ಸಾಧ್ಯವಾಯಿತು. ಅಲ್ಲಿ ಆಗ ಬಿ ವಿ ಕಾರಂತರು ನಿರ್ದೇಶಕರು; ಅವರ ನಿರ್ದೇಶನದ ನಾಟಕಗಳಲ್ಲಿ ಅವರ ಕಲ್ಪನೆಯನ್ನೂ ಮೀರಿ ಅಭಿನಯಿಸಿದ ನಾಯರಿ, ಒಂದು ವರ್ಷ ಎನ್‌ಎಸ್‌ಡಿಯ ರೆಪೆರ್ಟರಿಯಲ್ಲಿ ಸೇರಿದ್ದು ಅಭಿನಯದ ವಿಶೇಷ ತರಬೇತಿಯ ಫೆಲೋಶಿಪ್ ಅಡಿಯಲ್ಲಿ. ಆಗ ಎನ್ವಿರಾನ್ಮೆಂಟಲ್ ಥಿಯೇಟರ್ ಎಂದು ಹೊಸ ಮಾದರಿಯೊಂದು ಜನಪ್ರಿಯವಾಗತೊಡಗಿತ್ತು. ಅದನ್ನು ಪರಿಚಯಿಸಿದ್ದ ರಿಚರ್ಡ್ ಶೆಕ್ನರ್ ನಿರ್ದೇಶಿಸಿದ ’ಚೆರಿ ಅರ್ಚರ್ಡ್’ ನಾಟಕದಲ್ಲಿ ತೋಟದ ಮನೆಯ ಆಳಿನ ಪಾತ್ರ ಮಾಡಿ ಎಲ್ಲರ ಗಮನ ಸೆಳೆದರು ಗೋಪಾಲಕೃಷ್ಣ. ದೆಹಲಿಯಿಂದ ಬೆಂಗಳೂರಿಗೆ ಹಿಂದಿರುಗಿ ರಂಗಭೂಮಿಯ ಕಾಯಕದಲ್ಲಿ ತೊಡಗಿಸಿಕೊಂಡರು. ವಿಶೇಷವಾಗಿ ಎಮ್‌ಇಎಸ್ ಕಾಲೇಜಿನಲ್ಲಿ ’ದೂತವಾಕ್ಯದ ಪ್ರಯೋಗದಿಂದ ಹೊಸ ರೀತಿಯ ರಂಗಶೋಧ ಪ್ರಾರಂಭಿಸಿದರು. ಈ ಶೋಧದ ಮೂರು ಮುಖ್ಯ ಅಂಶಗಳು ಎಂದರೆ: 1. ಆಧುನಿಕ ಸಾಮಾಜಿಕ-ರಾಜಕೀಯ ಪ್ರಜ್ಞೆ 2. ತಮ್ಮ ಊರಿನ ಯಕ್ಷಗಾನವಷ್ಟೆ ಅಲ್ಲದೇ ಹಲವಾರು ಆರಾಧನಾ ರೀತಿಗಳ ಆಂತರ್ಯದ ಸೊಗಡಿನ ರೂಪಗಳನ್ನು ಬಳಸುವಿಕೆ 3. ಪಾರಂಪರಿಕ ಪಠ್ಯಗಳ ಹೊಸ ಅನುಸಂಧಾನ. ಇವೆಲ್ಲವನ್ನೂ ಪರಸ್ಪರ ವಿರುದ್ಧವೆಂದು ಕಾಣುತ್ತಿದ್ದವರಿಗೆ, ಅವುಗಳ ಪರಸ್ಪರ ಹೆಣಿಗೆಯನ್ನು ಮನಗಾಣಿಸತೊಡಗಿದರು. ಇದು ಅವರು ಮಾಡಿದ ಮುಖ್ಯ ಕೆಲಸ. ಇದೇನು ನೇರವಾಗಿ ಒಂದಷ್ಟು ಕಾಲದ ಅವಧಿಯಲ್ಲಾದದ್ದಲ್ಲ. ಇದು ಜೀವಮಾನದ ಕೆಲಸ. ಇದಕ್ಕೆ ಅವರು ನಲವತ್ತು ವರ್ಷ ಸವೆಸಿದ್ದು ಬೇರೆಯೇ ಕತೆ.

ಈ ಕತೆಗೆ ಹಲವು ಮಗ್ಗುಲುಗಳು. ಅನೇಕ ತಮ್ಮ ಒಡನಾಡಿಗಳಿಗೆ ಇವರು ವಕ್ರ ಎನಿಸಿದರು. ಬೇರೆಯವರ ದಾರಿ ತುಳಿಯದವರ ಬಗ್ಗೆ ಹೀಗೇ ತಾನೇ? ಜತೆಗೆ ಟಿ.ವಿ.ಗಳಿಗೆ ಹೋಗುವುದಿಲ್ಲವೆಂಬ ಅವರ ವೀರವ್ರತ ಬೇರೆ. ಹೊಟ್ಟೆ ಹೊರೆಯುವುದಕ್ಕೆಂದೇ ಹಲವು ಕೆಲಸಗಳನ್ನು ಹಿಡಿದರು. SCZCC (ಸೌತ್ ಸೆಂಟ್ರಲ್ ಜೋನ್ ಕಲ್ಚರಲ್ ಸೆಂಟರ್)ನ ದೊಡ್ಡ ಹುದ್ದೆಯಿಂದ ಹಿಡಿದು, ಫಿಲಿಂ ಇನ್ಸ್ಟಿಟ್ಯೂಟು ಸೇರಿದಂತೆ ಮಠದ ನಾಟಕಶಾಲೆಯವರೆಗೆ ಕೆಲಸ ಮಾಡಿ ಬಿಟ್ಟರು ಅಥವಾ ಬಿಡಿಸಲಾಯಿತು. ಸಾಕ್ಷರತೆ ಮೊದಲಾದ ಸರಕಾರಿ ಕಾರ್ಯಕ್ರಮಗಳಿಗೆ ನಾಟಕಗಳನ್ನು ಬರೆದು ಆಡಿಸಿದರು. ಹೀಗೆ ಒದ್ದಾಡಿ 10-15ವರ್ಷಗಳ ನಂತರ ತಾವೇ ಒಂದು ಸಂಸ್ಥೆಯನ್ನು ಹುಟ್ಟುಹಾಕಿದರು. ಬಹುಪಾಲು ತಮ್ಮಂತೆಯೇ ಅಥವಾ ತಮಗಿಂತ ಹೆಚ್ಚು ಅಂಚಿಗೆ ದೂಡಲ್ಪಟ್ಟ ಶಿಷ್ಯರನ್ನು ದೂರದೂರದ ಹಳ್ಳಿಗಳಲ್ಲಿ ಪಡೆದುಕೊಂಡರು. ತುಮಕೂರು, ಮೆಳೆಹಳ್ಳಿ, ಚಿತ್ರದುರ್ಗ, ಹರಪನಹಳ್ಳಿ ಹೀಗೆ ರಂಗ ಚಟುವಟಿಕೆಗಳ ಕೇಂದ್ರಗಳನ್ನು ಬೆಳೆಸಿದರು. ಅನೇಕ ಹಿರಿಯರಿಗೆ (ವಿ.ರಾಮಮೂರ್ತಿಯಂಥವರಿಗೆ) ಸಹಾಯಕ್ಕೆ ನಿಂತರು. ಕಿರಿಯರಿಗೆ ಉತ್ತೇಜನ ಕೊಟ್ಟರು.

ಆದರೆ ಅವರದ್ದು ಕರ್ಣನ ಕತೆಯೇ ಆಯಿತು. ತಮ್ಮ ಹಾಡಿಯಲ್ಲಿ ’ಕರ್ಣಭಾರ’ವನ್ನು ಹಾಡಿಯಾಟವನ್ನಾಗಿಯೇ ಮಾಡಿದರು. ಆ ನಾಟಕದ ಆಶಯವಾಗಿ ಮಾಟದ ಬಲಿಯ ಪ್ರತಿಮೆಗಳನ್ನು ದಾರಿಯುದ್ದಕ್ಕೂ ತೋರಿಸಿದ್ದರು. ಅಲ್ಲಿನ ಕತ್ತಲೆಯ ನಡುವಿನ ಹಣತೆಯ ಬೆಳಕಿನಲ್ಲಿ, ಜಾತಿ ದೊಡ್ಡಸ್ತಿಕೆಯಿಂದ ಯಾರಿಂದ ತುಳಿಯಲ್ಪಟ್ಟನೋ ಅವರನ್ನ ಮೀರಲು ದಾನಕೊಡುತ್ತಾ ಹೋಗಿ ಸಾಯಲು ಸಿದ್ಧವಾಗಿಯೇ ನಿಷ್ಕ್ರಮಿಸುವ ಕರ್ಣನ ಕತೆ; ತುಳಿತಕ್ಕೆ ಒಳಗಾದವರು ಪ್ರತಿಷ್ಠಿತ ಶಕ್ತಿಗಳ ಜತೆ ಸೇರಿ ದುರಂತ ನಾಯಕರಾಗುವುದು ಎಲ್ಲ ಕಾಲದ ರಾಜಕೀಯ ಕತೆಯಾಗಿದೆ. ಕರ್ಣನ ಕತೆ ನಾಯರಿ ಜನಾಂಗದ ಕತೆಯೆಂದು ತೋರಿಸುತ್ತಾ ಅದು ಗೋಪಾಲಕೃಷ್ಣನಾಯರಿ ಕತೆಯೇ ಆಯಿತು.

ಇಲ್ಲಿ ನಾವು ಚಿಂತಿಸಬೇಕಾದ್ದು ಒಬ್ಬಿಬ್ಬರ ಬಗ್ಗೆ ಅಷ್ಟೆ ಅಲ್ಲ. ಅಂಚಿಗೆ ತಳ್ಳಲ್ಪಟ್ಟವರನ್ನು ಹೊಸ ಅಧಿಕಾರ ಕೇಂದ್ರಗಳು ಹೇಗೆ ನುಂಗುತ್ತವೆ ಎನ್ನುವುದನ್ನು. ದೇಶಬದ್ಧವಾದ ರಂಗ ಪ್ರಯೋಗ ಮಾಡಿ; ಅದನ್ನು ಎಕ್ಸ್‌ಪೋರ್ಟ್ ಮಾಡಬೇಕಿಲ್ಲ ಎನ್ನುತ್ತಿದ್ದ ನಾಯರಿ, ವಿದೇಶಿ ಬಿಡಿ ದೇಶ ಪರ್ಯಟನೆಗೇ ನಾಟಕವನ್ನು ಕೊಡಲಿಲ್ಲ. ಒಂದೇ ನಾಟಕವನ್ನು ಎಲ್ಲೆಲ್ಲಿ ಹೋದರೆ ಅಲ್ಲಿನ ರೀತಿ-ರಿವಾಜು, ಸಂಸ್ಕೃತಿಗಳಲ್ಲಿ ಮಾಡಿಸುತ್ತಿದ್ದರು. ಆದರೆ ಆ ರಂಗಸ್ಥಳಗಳೇ ಕಳೆದು ಹೋಗುತ್ತಾ ಬಂದವು.

ಗೋಪಾಲಕೃಷ್ಣ ನಾಯರಿ ಜನವರಿ 6, 2023ರಂದು ಜೀವನ ನಾಟಕ ಮುಗಿಸಿದರು. ಕೆಲವು ಸಾವಿರವಷ್ಟೇ ಇರುವ ನಾಯರಿ ಜನಾಂಗದ ಯುವಕರಿಗೆ, ಹಾಗೇ ಮೂಲೆಮೂಲೆಯಲ್ಲಿರುವ ನತದೃಷ್ಟ ರಂಗಕರ್ಮಿಗಳನೇಕರಿಗೆ ಹೊಸ ಭರವಸೆಯಾಗಿದ್ದ ಗೋಪಾಲಕೃಷ್ಣ ಮುಂದೆ ಕೂಡ ತಮ್ಮ ಕೆಲಸಗಳಿಂದ ಸ್ಫೂರ್ತಿ ಸ್ಫುರಿಸುವ ಭರವಸೆಯಿದೆ. ಹೊಸಹೊಸ ಕಲ್ಪನೆಗಳಿಗೆ ನನ್ನಂಥ ನಗರದವರೂ ಮತ್ತು ಹಳ್ಳಿಯ ಜನರೂ ತೆರೆದುಕೊಳ್ಳುವಂತೆ ಮಾಡಿದ ಗೋಪಾಲಕೃಷ್ಣ ನಾಯರಿಯವರಿಗೆ ನಮೋ ನಮಃ.

ಜೆ ಶ್ರೀನಿವಾಸ ಮೂರ್ತಿ
ನಿವೃತ್ತ ಪ್ರಾಧ್ಯಾಪಕರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...