Homeಕರ್ನಾಟಕಶ್ರದ್ಧಾಂಜಲಿ; ಅಪವಾದಗಳೇ ನಿಯಮಗಳಾದಾಗ

ಶ್ರದ್ಧಾಂಜಲಿ; ಅಪವಾದಗಳೇ ನಿಯಮಗಳಾದಾಗ

- Advertisement -
- Advertisement -

ಮೊದಲ ದೃಶ್ಯ

ನಾಟಕ: ಬ್ರೆಕ್ಟ್‌ನ ’ಅಪವಾದ ಮತ್ತು ನಿಯಮ’; ಅದರಲ್ಲಿ ಅಪಾರವಾದ ಸಾಮಾನುಗಳನ್ನು ಹೊತ್ತ ಕೂಲಿಯೊಬ್ಬ “ಬಡವರು ಸತ್ತರೆ ಸುಡಲಿಕ್ಕೆ ಸೌದಿಲ್ಲೋ ಒಡಲ ಬೆಂಕೀಲಿ ಹೆಣ ಬೆಂದೋ! ದ್ಯಾವರೇ ಬಡವರಿಗೆ ಸಾವ ಕೊಡ ಬ್ಯಾಡೋ” ಎಂದು ಹಾಡುತ್ತಾ ಬರುತ್ತಾನೆ. ಹಾಡುವ ಕೂಲಿಯನ್ನು ಕಂಡು ಸಾಹುಕಾರ ಕಸಿವಿಸಿಗೊಳ್ಳುತ್ತಾನೆ. ನೀರಿಗಾಗಿ ಚಡಪಡಿಸುತ್ತಾನೆ. ಕೂಲಿ ತನ್ನ ಹತ್ತಿರ ಇರುವ ನೀರನ್ನು ಕೊಡಲು ಹೋದಾಗ ಸಾಹುಕಾರ ಅವನನ್ನು ಗುಂಡಿಟ್ಟು ಕೊಲ್ಲುತ್ತಾನೆ. ಮುಂದೆ ನ್ಯಾಯಾಲಯದಲ್ಲಿ ಬರುವ ತೀರ್ಪು “ಕೂಲಿಯೊಬ್ಬ ಸಾಹುಕಾರನ ಕಡೆ ನುಗ್ಗಿ ಬಂದರೆ, ನಿಯಮದಂತೆ ಆತ ಕೊಲ್ಲಲು ಬಂದಿದ್ದಾನೆಂದು ತೀರ್ಮಾನಿಸಬೇಕೇ ಹೊರತು ಸಹಾಯ ಮಾಡಲು ಬಂದ ಎಂದಲ್ಲ” ಎಂದು.

ಕೊನೆಯ ದೃಶ್ಯ

ನಾಟಕ: ’ಕರ್ಣಭಾರ’; ಕುಂದಾಪುರದ ಅತಿ ಸಣ್ಣ ಬುಡಕಟ್ಟು ನಾಯರಿ ಸಮುದಾಯದ ಎದುರು ನಾಟಕ ನಡೆಯುತ್ತಿದೆ. ಕ್ಷತ್ರಿಯನ ವೇಶದಲ್ಲಿ ಕರ್ಣನ ಪಾತ್ರಧಾರಿ ಪ್ರವೇಶಿಸಿ, ಮುಂದೆ ಬರುವ ಕಥೆಯಲ್ಲಿ ಕ್ಷತ್ರಿಯನಲ್ಲ ಎಂಬುದಕ್ಕೆ, ಪರಶುರಾಮನ ಶಾಪ ಪಡೆದ ಕಥೆಯನ್ನು ಹೇಳಿ, ಚಂಡೆ ಸದ್ದಿನ ಉನ್ಮಾದದಲ್ಲಿ ತನ್ನನ್ನೇ ಕೊಂದುಕೊಳ್ಳುವುದಕ್ಕೆ ಮುಂದಾಗುತ್ತಾನೆ. ಸಾಯುವುದೇ ನಿಜವೆಂದಾದರೂ, ಬ್ರಾಹ್ಮಣನ ವೇಷದಲ್ಲಿ ಬಂದ ಇಂದ್ರನಿಗೆ ಕವಚ ಕುಂಡಲಗಳನ್ನು ದಾನಕೊಟ್ಟು ಬೀಗುವ ಕರ್ಣ ನಿಷ್ಕ್ರಮಿಸುತ್ತಾನೆ.

ಈ ಎರಡು ವಿಭಿನ್ನ ರೀತಿಯ ದೃಶ್ಯಗಳಾದರೂ, ಅವುಗಳ ನಡುವೆ ಸಂಬಂಧದ ಪಯಣ ಬೆಳೆಸಿದವರು ಗೋಪಾಲಕೃಷ್ಣ ನಾಯರಿ. ಕುಂದಾಪುರ ತಾಲ್ಲೂಕಿನ ಸಾಲಿಗ್ರಾಮದ ಕಾರ್ಕಡ ಶಾಲೆಯ ಹಿಂದೆ ಇದ್ದ ಹಾಡಿಗಳ ಮಧ್ಯದ ಚಿಕ್ಕ ಬುಡಕಟ್ಟಿಗೆ ಸೇರಿದ ನಾಯರಿ ಅಲ್ಲಿನ ಅನೇಕಾನೇಕ ಮಾಣಿಗಳಂತೆ ಹದಿಹರೆಯದ ವಯಸ್ಸಿನಲ್ಲೇ ಬೆಂಗಳೂರಿಗೆ ಬಂದು ಹೋಟೆಲ್ ಕೆಲಸ ಮಾಡುತ್ತಾ ಸಂಜೆ ಕಾಲೇಜಿಗೆ ಸೇರಿಕೊಂಡರು. ಅಲ್ಲಿದ್ದ ಹೊಸಬಗೆಯ ನಾಟಕಗಳ ಹರಿಕಾರರಲ್ಲಿ ಒಬ್ಬರಾದ ಕ ವೆಂ ರಾಜಗೋಪಾಲರ ಪ್ರಭಾವದಲ್ಲಿ ಹೊಸ ಅಲೆಯ ನಾಟಕಗಳಲ್ಲಿ ಭಾಗವಹಿಸಿದರು. 1972- ಬೆಂಗಳೂರಿನಲ್ಲಿ ಕನ್ನಡ ರಂಗಭೂಮಿ ಹೊಸ ತಿರುವ ಪಡೆಯುತ್ತಿದ್ದ ಕಾಲ. ಆಗ ಆ ರಂಗಪ್ರವೇಶ ಮಾಡಿದ ನಾಯರಿ, ಮೇಲೆ ಹೇಳಿದ ’ಅಪವಾದ ಮತ್ತು ನಿಯಮ’ ನಾಟಕದ ಕೂಲಿ ಆಳಿನ ಪಾತ್ರ ಮಾಡಿದ್ದರು. ಅಲ್ಲಿ ಆ ಪಾತ್ರದ ದುರಂತತೆಯೇ, ಭಾಸನ ’ಕರ್ಣಭಾರ’ದ ದುರಂತ ಚಿತ್ರಣವಾಗಿ ಬೆಳೆದು ನಿಂತಿರುವುದು. ನಾಯರಿ ಮತ್ತು ಅವರಂತಹ ಕೆಲವೇ ಮಂದಿ ರಂಗ ಪ್ರತಿಭೆಗಳ ದುಃಖಪೂರಿತ ಚರಿತ್ರೆಯಾಗಿ ಕಾಣುತ್ತದೆ ನಮ್ಮ ಸಾಂಸ್ಕೃತಿಕ ಲೋಕದ ದುರಂತ.

ಯಾವ ಸಾಂಸ್ಥಿಕ ಬೆಂಬಲವೂ ಇಲ್ಲದ ನಾಯರಿ ಕೇವಲ ತಮ್ಮ ಪ್ರತಿಭೆಯಿಂದಲೇ ಶ್ರೀರಂಗರಂಥವರ ಗಮನ ಸೆಳೆದು ಎನ್‌ಎಸ್‌ಡಿಗೆ ಕಲಿಯುವುದಕ್ಕೆ ಹೋಗಲು ಸಾಧ್ಯವಾಯಿತು. ಅಲ್ಲಿ ಆಗ ಬಿ ವಿ ಕಾರಂತರು ನಿರ್ದೇಶಕರು; ಅವರ ನಿರ್ದೇಶನದ ನಾಟಕಗಳಲ್ಲಿ ಅವರ ಕಲ್ಪನೆಯನ್ನೂ ಮೀರಿ ಅಭಿನಯಿಸಿದ ನಾಯರಿ, ಒಂದು ವರ್ಷ ಎನ್‌ಎಸ್‌ಡಿಯ ರೆಪೆರ್ಟರಿಯಲ್ಲಿ ಸೇರಿದ್ದು ಅಭಿನಯದ ವಿಶೇಷ ತರಬೇತಿಯ ಫೆಲೋಶಿಪ್ ಅಡಿಯಲ್ಲಿ. ಆಗ ಎನ್ವಿರಾನ್ಮೆಂಟಲ್ ಥಿಯೇಟರ್ ಎಂದು ಹೊಸ ಮಾದರಿಯೊಂದು ಜನಪ್ರಿಯವಾಗತೊಡಗಿತ್ತು. ಅದನ್ನು ಪರಿಚಯಿಸಿದ್ದ ರಿಚರ್ಡ್ ಶೆಕ್ನರ್ ನಿರ್ದೇಶಿಸಿದ ’ಚೆರಿ ಅರ್ಚರ್ಡ್’ ನಾಟಕದಲ್ಲಿ ತೋಟದ ಮನೆಯ ಆಳಿನ ಪಾತ್ರ ಮಾಡಿ ಎಲ್ಲರ ಗಮನ ಸೆಳೆದರು ಗೋಪಾಲಕೃಷ್ಣ. ದೆಹಲಿಯಿಂದ ಬೆಂಗಳೂರಿಗೆ ಹಿಂದಿರುಗಿ ರಂಗಭೂಮಿಯ ಕಾಯಕದಲ್ಲಿ ತೊಡಗಿಸಿಕೊಂಡರು. ವಿಶೇಷವಾಗಿ ಎಮ್‌ಇಎಸ್ ಕಾಲೇಜಿನಲ್ಲಿ ’ದೂತವಾಕ್ಯದ ಪ್ರಯೋಗದಿಂದ ಹೊಸ ರೀತಿಯ ರಂಗಶೋಧ ಪ್ರಾರಂಭಿಸಿದರು. ಈ ಶೋಧದ ಮೂರು ಮುಖ್ಯ ಅಂಶಗಳು ಎಂದರೆ: 1. ಆಧುನಿಕ ಸಾಮಾಜಿಕ-ರಾಜಕೀಯ ಪ್ರಜ್ಞೆ 2. ತಮ್ಮ ಊರಿನ ಯಕ್ಷಗಾನವಷ್ಟೆ ಅಲ್ಲದೇ ಹಲವಾರು ಆರಾಧನಾ ರೀತಿಗಳ ಆಂತರ್ಯದ ಸೊಗಡಿನ ರೂಪಗಳನ್ನು ಬಳಸುವಿಕೆ 3. ಪಾರಂಪರಿಕ ಪಠ್ಯಗಳ ಹೊಸ ಅನುಸಂಧಾನ. ಇವೆಲ್ಲವನ್ನೂ ಪರಸ್ಪರ ವಿರುದ್ಧವೆಂದು ಕಾಣುತ್ತಿದ್ದವರಿಗೆ, ಅವುಗಳ ಪರಸ್ಪರ ಹೆಣಿಗೆಯನ್ನು ಮನಗಾಣಿಸತೊಡಗಿದರು. ಇದು ಅವರು ಮಾಡಿದ ಮುಖ್ಯ ಕೆಲಸ. ಇದೇನು ನೇರವಾಗಿ ಒಂದಷ್ಟು ಕಾಲದ ಅವಧಿಯಲ್ಲಾದದ್ದಲ್ಲ. ಇದು ಜೀವಮಾನದ ಕೆಲಸ. ಇದಕ್ಕೆ ಅವರು ನಲವತ್ತು ವರ್ಷ ಸವೆಸಿದ್ದು ಬೇರೆಯೇ ಕತೆ.

ಈ ಕತೆಗೆ ಹಲವು ಮಗ್ಗುಲುಗಳು. ಅನೇಕ ತಮ್ಮ ಒಡನಾಡಿಗಳಿಗೆ ಇವರು ವಕ್ರ ಎನಿಸಿದರು. ಬೇರೆಯವರ ದಾರಿ ತುಳಿಯದವರ ಬಗ್ಗೆ ಹೀಗೇ ತಾನೇ? ಜತೆಗೆ ಟಿ.ವಿ.ಗಳಿಗೆ ಹೋಗುವುದಿಲ್ಲವೆಂಬ ಅವರ ವೀರವ್ರತ ಬೇರೆ. ಹೊಟ್ಟೆ ಹೊರೆಯುವುದಕ್ಕೆಂದೇ ಹಲವು ಕೆಲಸಗಳನ್ನು ಹಿಡಿದರು. SCZCC (ಸೌತ್ ಸೆಂಟ್ರಲ್ ಜೋನ್ ಕಲ್ಚರಲ್ ಸೆಂಟರ್)ನ ದೊಡ್ಡ ಹುದ್ದೆಯಿಂದ ಹಿಡಿದು, ಫಿಲಿಂ ಇನ್ಸ್ಟಿಟ್ಯೂಟು ಸೇರಿದಂತೆ ಮಠದ ನಾಟಕಶಾಲೆಯವರೆಗೆ ಕೆಲಸ ಮಾಡಿ ಬಿಟ್ಟರು ಅಥವಾ ಬಿಡಿಸಲಾಯಿತು. ಸಾಕ್ಷರತೆ ಮೊದಲಾದ ಸರಕಾರಿ ಕಾರ್ಯಕ್ರಮಗಳಿಗೆ ನಾಟಕಗಳನ್ನು ಬರೆದು ಆಡಿಸಿದರು. ಹೀಗೆ ಒದ್ದಾಡಿ 10-15ವರ್ಷಗಳ ನಂತರ ತಾವೇ ಒಂದು ಸಂಸ್ಥೆಯನ್ನು ಹುಟ್ಟುಹಾಕಿದರು. ಬಹುಪಾಲು ತಮ್ಮಂತೆಯೇ ಅಥವಾ ತಮಗಿಂತ ಹೆಚ್ಚು ಅಂಚಿಗೆ ದೂಡಲ್ಪಟ್ಟ ಶಿಷ್ಯರನ್ನು ದೂರದೂರದ ಹಳ್ಳಿಗಳಲ್ಲಿ ಪಡೆದುಕೊಂಡರು. ತುಮಕೂರು, ಮೆಳೆಹಳ್ಳಿ, ಚಿತ್ರದುರ್ಗ, ಹರಪನಹಳ್ಳಿ ಹೀಗೆ ರಂಗ ಚಟುವಟಿಕೆಗಳ ಕೇಂದ್ರಗಳನ್ನು ಬೆಳೆಸಿದರು. ಅನೇಕ ಹಿರಿಯರಿಗೆ (ವಿ.ರಾಮಮೂರ್ತಿಯಂಥವರಿಗೆ) ಸಹಾಯಕ್ಕೆ ನಿಂತರು. ಕಿರಿಯರಿಗೆ ಉತ್ತೇಜನ ಕೊಟ್ಟರು.

ಆದರೆ ಅವರದ್ದು ಕರ್ಣನ ಕತೆಯೇ ಆಯಿತು. ತಮ್ಮ ಹಾಡಿಯಲ್ಲಿ ’ಕರ್ಣಭಾರ’ವನ್ನು ಹಾಡಿಯಾಟವನ್ನಾಗಿಯೇ ಮಾಡಿದರು. ಆ ನಾಟಕದ ಆಶಯವಾಗಿ ಮಾಟದ ಬಲಿಯ ಪ್ರತಿಮೆಗಳನ್ನು ದಾರಿಯುದ್ದಕ್ಕೂ ತೋರಿಸಿದ್ದರು. ಅಲ್ಲಿನ ಕತ್ತಲೆಯ ನಡುವಿನ ಹಣತೆಯ ಬೆಳಕಿನಲ್ಲಿ, ಜಾತಿ ದೊಡ್ಡಸ್ತಿಕೆಯಿಂದ ಯಾರಿಂದ ತುಳಿಯಲ್ಪಟ್ಟನೋ ಅವರನ್ನ ಮೀರಲು ದಾನಕೊಡುತ್ತಾ ಹೋಗಿ ಸಾಯಲು ಸಿದ್ಧವಾಗಿಯೇ ನಿಷ್ಕ್ರಮಿಸುವ ಕರ್ಣನ ಕತೆ; ತುಳಿತಕ್ಕೆ ಒಳಗಾದವರು ಪ್ರತಿಷ್ಠಿತ ಶಕ್ತಿಗಳ ಜತೆ ಸೇರಿ ದುರಂತ ನಾಯಕರಾಗುವುದು ಎಲ್ಲ ಕಾಲದ ರಾಜಕೀಯ ಕತೆಯಾಗಿದೆ. ಕರ್ಣನ ಕತೆ ನಾಯರಿ ಜನಾಂಗದ ಕತೆಯೆಂದು ತೋರಿಸುತ್ತಾ ಅದು ಗೋಪಾಲಕೃಷ್ಣನಾಯರಿ ಕತೆಯೇ ಆಯಿತು.

ಇಲ್ಲಿ ನಾವು ಚಿಂತಿಸಬೇಕಾದ್ದು ಒಬ್ಬಿಬ್ಬರ ಬಗ್ಗೆ ಅಷ್ಟೆ ಅಲ್ಲ. ಅಂಚಿಗೆ ತಳ್ಳಲ್ಪಟ್ಟವರನ್ನು ಹೊಸ ಅಧಿಕಾರ ಕೇಂದ್ರಗಳು ಹೇಗೆ ನುಂಗುತ್ತವೆ ಎನ್ನುವುದನ್ನು. ದೇಶಬದ್ಧವಾದ ರಂಗ ಪ್ರಯೋಗ ಮಾಡಿ; ಅದನ್ನು ಎಕ್ಸ್‌ಪೋರ್ಟ್ ಮಾಡಬೇಕಿಲ್ಲ ಎನ್ನುತ್ತಿದ್ದ ನಾಯರಿ, ವಿದೇಶಿ ಬಿಡಿ ದೇಶ ಪರ್ಯಟನೆಗೇ ನಾಟಕವನ್ನು ಕೊಡಲಿಲ್ಲ. ಒಂದೇ ನಾಟಕವನ್ನು ಎಲ್ಲೆಲ್ಲಿ ಹೋದರೆ ಅಲ್ಲಿನ ರೀತಿ-ರಿವಾಜು, ಸಂಸ್ಕೃತಿಗಳಲ್ಲಿ ಮಾಡಿಸುತ್ತಿದ್ದರು. ಆದರೆ ಆ ರಂಗಸ್ಥಳಗಳೇ ಕಳೆದು ಹೋಗುತ್ತಾ ಬಂದವು.

ಗೋಪಾಲಕೃಷ್ಣ ನಾಯರಿ ಜನವರಿ 6, 2023ರಂದು ಜೀವನ ನಾಟಕ ಮುಗಿಸಿದರು. ಕೆಲವು ಸಾವಿರವಷ್ಟೇ ಇರುವ ನಾಯರಿ ಜನಾಂಗದ ಯುವಕರಿಗೆ, ಹಾಗೇ ಮೂಲೆಮೂಲೆಯಲ್ಲಿರುವ ನತದೃಷ್ಟ ರಂಗಕರ್ಮಿಗಳನೇಕರಿಗೆ ಹೊಸ ಭರವಸೆಯಾಗಿದ್ದ ಗೋಪಾಲಕೃಷ್ಣ ಮುಂದೆ ಕೂಡ ತಮ್ಮ ಕೆಲಸಗಳಿಂದ ಸ್ಫೂರ್ತಿ ಸ್ಫುರಿಸುವ ಭರವಸೆಯಿದೆ. ಹೊಸಹೊಸ ಕಲ್ಪನೆಗಳಿಗೆ ನನ್ನಂಥ ನಗರದವರೂ ಮತ್ತು ಹಳ್ಳಿಯ ಜನರೂ ತೆರೆದುಕೊಳ್ಳುವಂತೆ ಮಾಡಿದ ಗೋಪಾಲಕೃಷ್ಣ ನಾಯರಿಯವರಿಗೆ ನಮೋ ನಮಃ.

ಜೆ ಶ್ರೀನಿವಾಸ ಮೂರ್ತಿ
ನಿವೃತ್ತ ಪ್ರಾಧ್ಯಾಪಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....