Homeಕರ್ನಾಟಕಶ್ರದ್ಧಾಂಜಲಿ; ಅಪವಾದಗಳೇ ನಿಯಮಗಳಾದಾಗ

ಶ್ರದ್ಧಾಂಜಲಿ; ಅಪವಾದಗಳೇ ನಿಯಮಗಳಾದಾಗ

- Advertisement -
- Advertisement -

ಮೊದಲ ದೃಶ್ಯ

ನಾಟಕ: ಬ್ರೆಕ್ಟ್‌ನ ’ಅಪವಾದ ಮತ್ತು ನಿಯಮ’; ಅದರಲ್ಲಿ ಅಪಾರವಾದ ಸಾಮಾನುಗಳನ್ನು ಹೊತ್ತ ಕೂಲಿಯೊಬ್ಬ “ಬಡವರು ಸತ್ತರೆ ಸುಡಲಿಕ್ಕೆ ಸೌದಿಲ್ಲೋ ಒಡಲ ಬೆಂಕೀಲಿ ಹೆಣ ಬೆಂದೋ! ದ್ಯಾವರೇ ಬಡವರಿಗೆ ಸಾವ ಕೊಡ ಬ್ಯಾಡೋ” ಎಂದು ಹಾಡುತ್ತಾ ಬರುತ್ತಾನೆ. ಹಾಡುವ ಕೂಲಿಯನ್ನು ಕಂಡು ಸಾಹುಕಾರ ಕಸಿವಿಸಿಗೊಳ್ಳುತ್ತಾನೆ. ನೀರಿಗಾಗಿ ಚಡಪಡಿಸುತ್ತಾನೆ. ಕೂಲಿ ತನ್ನ ಹತ್ತಿರ ಇರುವ ನೀರನ್ನು ಕೊಡಲು ಹೋದಾಗ ಸಾಹುಕಾರ ಅವನನ್ನು ಗುಂಡಿಟ್ಟು ಕೊಲ್ಲುತ್ತಾನೆ. ಮುಂದೆ ನ್ಯಾಯಾಲಯದಲ್ಲಿ ಬರುವ ತೀರ್ಪು “ಕೂಲಿಯೊಬ್ಬ ಸಾಹುಕಾರನ ಕಡೆ ನುಗ್ಗಿ ಬಂದರೆ, ನಿಯಮದಂತೆ ಆತ ಕೊಲ್ಲಲು ಬಂದಿದ್ದಾನೆಂದು ತೀರ್ಮಾನಿಸಬೇಕೇ ಹೊರತು ಸಹಾಯ ಮಾಡಲು ಬಂದ ಎಂದಲ್ಲ” ಎಂದು.

ಕೊನೆಯ ದೃಶ್ಯ

ನಾಟಕ: ’ಕರ್ಣಭಾರ’; ಕುಂದಾಪುರದ ಅತಿ ಸಣ್ಣ ಬುಡಕಟ್ಟು ನಾಯರಿ ಸಮುದಾಯದ ಎದುರು ನಾಟಕ ನಡೆಯುತ್ತಿದೆ. ಕ್ಷತ್ರಿಯನ ವೇಶದಲ್ಲಿ ಕರ್ಣನ ಪಾತ್ರಧಾರಿ ಪ್ರವೇಶಿಸಿ, ಮುಂದೆ ಬರುವ ಕಥೆಯಲ್ಲಿ ಕ್ಷತ್ರಿಯನಲ್ಲ ಎಂಬುದಕ್ಕೆ, ಪರಶುರಾಮನ ಶಾಪ ಪಡೆದ ಕಥೆಯನ್ನು ಹೇಳಿ, ಚಂಡೆ ಸದ್ದಿನ ಉನ್ಮಾದದಲ್ಲಿ ತನ್ನನ್ನೇ ಕೊಂದುಕೊಳ್ಳುವುದಕ್ಕೆ ಮುಂದಾಗುತ್ತಾನೆ. ಸಾಯುವುದೇ ನಿಜವೆಂದಾದರೂ, ಬ್ರಾಹ್ಮಣನ ವೇಷದಲ್ಲಿ ಬಂದ ಇಂದ್ರನಿಗೆ ಕವಚ ಕುಂಡಲಗಳನ್ನು ದಾನಕೊಟ್ಟು ಬೀಗುವ ಕರ್ಣ ನಿಷ್ಕ್ರಮಿಸುತ್ತಾನೆ.

ಈ ಎರಡು ವಿಭಿನ್ನ ರೀತಿಯ ದೃಶ್ಯಗಳಾದರೂ, ಅವುಗಳ ನಡುವೆ ಸಂಬಂಧದ ಪಯಣ ಬೆಳೆಸಿದವರು ಗೋಪಾಲಕೃಷ್ಣ ನಾಯರಿ. ಕುಂದಾಪುರ ತಾಲ್ಲೂಕಿನ ಸಾಲಿಗ್ರಾಮದ ಕಾರ್ಕಡ ಶಾಲೆಯ ಹಿಂದೆ ಇದ್ದ ಹಾಡಿಗಳ ಮಧ್ಯದ ಚಿಕ್ಕ ಬುಡಕಟ್ಟಿಗೆ ಸೇರಿದ ನಾಯರಿ ಅಲ್ಲಿನ ಅನೇಕಾನೇಕ ಮಾಣಿಗಳಂತೆ ಹದಿಹರೆಯದ ವಯಸ್ಸಿನಲ್ಲೇ ಬೆಂಗಳೂರಿಗೆ ಬಂದು ಹೋಟೆಲ್ ಕೆಲಸ ಮಾಡುತ್ತಾ ಸಂಜೆ ಕಾಲೇಜಿಗೆ ಸೇರಿಕೊಂಡರು. ಅಲ್ಲಿದ್ದ ಹೊಸಬಗೆಯ ನಾಟಕಗಳ ಹರಿಕಾರರಲ್ಲಿ ಒಬ್ಬರಾದ ಕ ವೆಂ ರಾಜಗೋಪಾಲರ ಪ್ರಭಾವದಲ್ಲಿ ಹೊಸ ಅಲೆಯ ನಾಟಕಗಳಲ್ಲಿ ಭಾಗವಹಿಸಿದರು. 1972- ಬೆಂಗಳೂರಿನಲ್ಲಿ ಕನ್ನಡ ರಂಗಭೂಮಿ ಹೊಸ ತಿರುವ ಪಡೆಯುತ್ತಿದ್ದ ಕಾಲ. ಆಗ ಆ ರಂಗಪ್ರವೇಶ ಮಾಡಿದ ನಾಯರಿ, ಮೇಲೆ ಹೇಳಿದ ’ಅಪವಾದ ಮತ್ತು ನಿಯಮ’ ನಾಟಕದ ಕೂಲಿ ಆಳಿನ ಪಾತ್ರ ಮಾಡಿದ್ದರು. ಅಲ್ಲಿ ಆ ಪಾತ್ರದ ದುರಂತತೆಯೇ, ಭಾಸನ ’ಕರ್ಣಭಾರ’ದ ದುರಂತ ಚಿತ್ರಣವಾಗಿ ಬೆಳೆದು ನಿಂತಿರುವುದು. ನಾಯರಿ ಮತ್ತು ಅವರಂತಹ ಕೆಲವೇ ಮಂದಿ ರಂಗ ಪ್ರತಿಭೆಗಳ ದುಃಖಪೂರಿತ ಚರಿತ್ರೆಯಾಗಿ ಕಾಣುತ್ತದೆ ನಮ್ಮ ಸಾಂಸ್ಕೃತಿಕ ಲೋಕದ ದುರಂತ.

ಯಾವ ಸಾಂಸ್ಥಿಕ ಬೆಂಬಲವೂ ಇಲ್ಲದ ನಾಯರಿ ಕೇವಲ ತಮ್ಮ ಪ್ರತಿಭೆಯಿಂದಲೇ ಶ್ರೀರಂಗರಂಥವರ ಗಮನ ಸೆಳೆದು ಎನ್‌ಎಸ್‌ಡಿಗೆ ಕಲಿಯುವುದಕ್ಕೆ ಹೋಗಲು ಸಾಧ್ಯವಾಯಿತು. ಅಲ್ಲಿ ಆಗ ಬಿ ವಿ ಕಾರಂತರು ನಿರ್ದೇಶಕರು; ಅವರ ನಿರ್ದೇಶನದ ನಾಟಕಗಳಲ್ಲಿ ಅವರ ಕಲ್ಪನೆಯನ್ನೂ ಮೀರಿ ಅಭಿನಯಿಸಿದ ನಾಯರಿ, ಒಂದು ವರ್ಷ ಎನ್‌ಎಸ್‌ಡಿಯ ರೆಪೆರ್ಟರಿಯಲ್ಲಿ ಸೇರಿದ್ದು ಅಭಿನಯದ ವಿಶೇಷ ತರಬೇತಿಯ ಫೆಲೋಶಿಪ್ ಅಡಿಯಲ್ಲಿ. ಆಗ ಎನ್ವಿರಾನ್ಮೆಂಟಲ್ ಥಿಯೇಟರ್ ಎಂದು ಹೊಸ ಮಾದರಿಯೊಂದು ಜನಪ್ರಿಯವಾಗತೊಡಗಿತ್ತು. ಅದನ್ನು ಪರಿಚಯಿಸಿದ್ದ ರಿಚರ್ಡ್ ಶೆಕ್ನರ್ ನಿರ್ದೇಶಿಸಿದ ’ಚೆರಿ ಅರ್ಚರ್ಡ್’ ನಾಟಕದಲ್ಲಿ ತೋಟದ ಮನೆಯ ಆಳಿನ ಪಾತ್ರ ಮಾಡಿ ಎಲ್ಲರ ಗಮನ ಸೆಳೆದರು ಗೋಪಾಲಕೃಷ್ಣ. ದೆಹಲಿಯಿಂದ ಬೆಂಗಳೂರಿಗೆ ಹಿಂದಿರುಗಿ ರಂಗಭೂಮಿಯ ಕಾಯಕದಲ್ಲಿ ತೊಡಗಿಸಿಕೊಂಡರು. ವಿಶೇಷವಾಗಿ ಎಮ್‌ಇಎಸ್ ಕಾಲೇಜಿನಲ್ಲಿ ’ದೂತವಾಕ್ಯದ ಪ್ರಯೋಗದಿಂದ ಹೊಸ ರೀತಿಯ ರಂಗಶೋಧ ಪ್ರಾರಂಭಿಸಿದರು. ಈ ಶೋಧದ ಮೂರು ಮುಖ್ಯ ಅಂಶಗಳು ಎಂದರೆ: 1. ಆಧುನಿಕ ಸಾಮಾಜಿಕ-ರಾಜಕೀಯ ಪ್ರಜ್ಞೆ 2. ತಮ್ಮ ಊರಿನ ಯಕ್ಷಗಾನವಷ್ಟೆ ಅಲ್ಲದೇ ಹಲವಾರು ಆರಾಧನಾ ರೀತಿಗಳ ಆಂತರ್ಯದ ಸೊಗಡಿನ ರೂಪಗಳನ್ನು ಬಳಸುವಿಕೆ 3. ಪಾರಂಪರಿಕ ಪಠ್ಯಗಳ ಹೊಸ ಅನುಸಂಧಾನ. ಇವೆಲ್ಲವನ್ನೂ ಪರಸ್ಪರ ವಿರುದ್ಧವೆಂದು ಕಾಣುತ್ತಿದ್ದವರಿಗೆ, ಅವುಗಳ ಪರಸ್ಪರ ಹೆಣಿಗೆಯನ್ನು ಮನಗಾಣಿಸತೊಡಗಿದರು. ಇದು ಅವರು ಮಾಡಿದ ಮುಖ್ಯ ಕೆಲಸ. ಇದೇನು ನೇರವಾಗಿ ಒಂದಷ್ಟು ಕಾಲದ ಅವಧಿಯಲ್ಲಾದದ್ದಲ್ಲ. ಇದು ಜೀವಮಾನದ ಕೆಲಸ. ಇದಕ್ಕೆ ಅವರು ನಲವತ್ತು ವರ್ಷ ಸವೆಸಿದ್ದು ಬೇರೆಯೇ ಕತೆ.

ಈ ಕತೆಗೆ ಹಲವು ಮಗ್ಗುಲುಗಳು. ಅನೇಕ ತಮ್ಮ ಒಡನಾಡಿಗಳಿಗೆ ಇವರು ವಕ್ರ ಎನಿಸಿದರು. ಬೇರೆಯವರ ದಾರಿ ತುಳಿಯದವರ ಬಗ್ಗೆ ಹೀಗೇ ತಾನೇ? ಜತೆಗೆ ಟಿ.ವಿ.ಗಳಿಗೆ ಹೋಗುವುದಿಲ್ಲವೆಂಬ ಅವರ ವೀರವ್ರತ ಬೇರೆ. ಹೊಟ್ಟೆ ಹೊರೆಯುವುದಕ್ಕೆಂದೇ ಹಲವು ಕೆಲಸಗಳನ್ನು ಹಿಡಿದರು. SCZCC (ಸೌತ್ ಸೆಂಟ್ರಲ್ ಜೋನ್ ಕಲ್ಚರಲ್ ಸೆಂಟರ್)ನ ದೊಡ್ಡ ಹುದ್ದೆಯಿಂದ ಹಿಡಿದು, ಫಿಲಿಂ ಇನ್ಸ್ಟಿಟ್ಯೂಟು ಸೇರಿದಂತೆ ಮಠದ ನಾಟಕಶಾಲೆಯವರೆಗೆ ಕೆಲಸ ಮಾಡಿ ಬಿಟ್ಟರು ಅಥವಾ ಬಿಡಿಸಲಾಯಿತು. ಸಾಕ್ಷರತೆ ಮೊದಲಾದ ಸರಕಾರಿ ಕಾರ್ಯಕ್ರಮಗಳಿಗೆ ನಾಟಕಗಳನ್ನು ಬರೆದು ಆಡಿಸಿದರು. ಹೀಗೆ ಒದ್ದಾಡಿ 10-15ವರ್ಷಗಳ ನಂತರ ತಾವೇ ಒಂದು ಸಂಸ್ಥೆಯನ್ನು ಹುಟ್ಟುಹಾಕಿದರು. ಬಹುಪಾಲು ತಮ್ಮಂತೆಯೇ ಅಥವಾ ತಮಗಿಂತ ಹೆಚ್ಚು ಅಂಚಿಗೆ ದೂಡಲ್ಪಟ್ಟ ಶಿಷ್ಯರನ್ನು ದೂರದೂರದ ಹಳ್ಳಿಗಳಲ್ಲಿ ಪಡೆದುಕೊಂಡರು. ತುಮಕೂರು, ಮೆಳೆಹಳ್ಳಿ, ಚಿತ್ರದುರ್ಗ, ಹರಪನಹಳ್ಳಿ ಹೀಗೆ ರಂಗ ಚಟುವಟಿಕೆಗಳ ಕೇಂದ್ರಗಳನ್ನು ಬೆಳೆಸಿದರು. ಅನೇಕ ಹಿರಿಯರಿಗೆ (ವಿ.ರಾಮಮೂರ್ತಿಯಂಥವರಿಗೆ) ಸಹಾಯಕ್ಕೆ ನಿಂತರು. ಕಿರಿಯರಿಗೆ ಉತ್ತೇಜನ ಕೊಟ್ಟರು.

ಆದರೆ ಅವರದ್ದು ಕರ್ಣನ ಕತೆಯೇ ಆಯಿತು. ತಮ್ಮ ಹಾಡಿಯಲ್ಲಿ ’ಕರ್ಣಭಾರ’ವನ್ನು ಹಾಡಿಯಾಟವನ್ನಾಗಿಯೇ ಮಾಡಿದರು. ಆ ನಾಟಕದ ಆಶಯವಾಗಿ ಮಾಟದ ಬಲಿಯ ಪ್ರತಿಮೆಗಳನ್ನು ದಾರಿಯುದ್ದಕ್ಕೂ ತೋರಿಸಿದ್ದರು. ಅಲ್ಲಿನ ಕತ್ತಲೆಯ ನಡುವಿನ ಹಣತೆಯ ಬೆಳಕಿನಲ್ಲಿ, ಜಾತಿ ದೊಡ್ಡಸ್ತಿಕೆಯಿಂದ ಯಾರಿಂದ ತುಳಿಯಲ್ಪಟ್ಟನೋ ಅವರನ್ನ ಮೀರಲು ದಾನಕೊಡುತ್ತಾ ಹೋಗಿ ಸಾಯಲು ಸಿದ್ಧವಾಗಿಯೇ ನಿಷ್ಕ್ರಮಿಸುವ ಕರ್ಣನ ಕತೆ; ತುಳಿತಕ್ಕೆ ಒಳಗಾದವರು ಪ್ರತಿಷ್ಠಿತ ಶಕ್ತಿಗಳ ಜತೆ ಸೇರಿ ದುರಂತ ನಾಯಕರಾಗುವುದು ಎಲ್ಲ ಕಾಲದ ರಾಜಕೀಯ ಕತೆಯಾಗಿದೆ. ಕರ್ಣನ ಕತೆ ನಾಯರಿ ಜನಾಂಗದ ಕತೆಯೆಂದು ತೋರಿಸುತ್ತಾ ಅದು ಗೋಪಾಲಕೃಷ್ಣನಾಯರಿ ಕತೆಯೇ ಆಯಿತು.

ಇಲ್ಲಿ ನಾವು ಚಿಂತಿಸಬೇಕಾದ್ದು ಒಬ್ಬಿಬ್ಬರ ಬಗ್ಗೆ ಅಷ್ಟೆ ಅಲ್ಲ. ಅಂಚಿಗೆ ತಳ್ಳಲ್ಪಟ್ಟವರನ್ನು ಹೊಸ ಅಧಿಕಾರ ಕೇಂದ್ರಗಳು ಹೇಗೆ ನುಂಗುತ್ತವೆ ಎನ್ನುವುದನ್ನು. ದೇಶಬದ್ಧವಾದ ರಂಗ ಪ್ರಯೋಗ ಮಾಡಿ; ಅದನ್ನು ಎಕ್ಸ್‌ಪೋರ್ಟ್ ಮಾಡಬೇಕಿಲ್ಲ ಎನ್ನುತ್ತಿದ್ದ ನಾಯರಿ, ವಿದೇಶಿ ಬಿಡಿ ದೇಶ ಪರ್ಯಟನೆಗೇ ನಾಟಕವನ್ನು ಕೊಡಲಿಲ್ಲ. ಒಂದೇ ನಾಟಕವನ್ನು ಎಲ್ಲೆಲ್ಲಿ ಹೋದರೆ ಅಲ್ಲಿನ ರೀತಿ-ರಿವಾಜು, ಸಂಸ್ಕೃತಿಗಳಲ್ಲಿ ಮಾಡಿಸುತ್ತಿದ್ದರು. ಆದರೆ ಆ ರಂಗಸ್ಥಳಗಳೇ ಕಳೆದು ಹೋಗುತ್ತಾ ಬಂದವು.

ಗೋಪಾಲಕೃಷ್ಣ ನಾಯರಿ ಜನವರಿ 6, 2023ರಂದು ಜೀವನ ನಾಟಕ ಮುಗಿಸಿದರು. ಕೆಲವು ಸಾವಿರವಷ್ಟೇ ಇರುವ ನಾಯರಿ ಜನಾಂಗದ ಯುವಕರಿಗೆ, ಹಾಗೇ ಮೂಲೆಮೂಲೆಯಲ್ಲಿರುವ ನತದೃಷ್ಟ ರಂಗಕರ್ಮಿಗಳನೇಕರಿಗೆ ಹೊಸ ಭರವಸೆಯಾಗಿದ್ದ ಗೋಪಾಲಕೃಷ್ಣ ಮುಂದೆ ಕೂಡ ತಮ್ಮ ಕೆಲಸಗಳಿಂದ ಸ್ಫೂರ್ತಿ ಸ್ಫುರಿಸುವ ಭರವಸೆಯಿದೆ. ಹೊಸಹೊಸ ಕಲ್ಪನೆಗಳಿಗೆ ನನ್ನಂಥ ನಗರದವರೂ ಮತ್ತು ಹಳ್ಳಿಯ ಜನರೂ ತೆರೆದುಕೊಳ್ಳುವಂತೆ ಮಾಡಿದ ಗೋಪಾಲಕೃಷ್ಣ ನಾಯರಿಯವರಿಗೆ ನಮೋ ನಮಃ.

ಜೆ ಶ್ರೀನಿವಾಸ ಮೂರ್ತಿ
ನಿವೃತ್ತ ಪ್ರಾಧ್ಯಾಪಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...