ಮೂರು ವರ್ಷಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ತಲುಪಿರುವ ದೆಹಲಿಯ ಮಾಲಿನ್ಯವನ್ನು ತಗ್ಗಿಸುವ ನಿಟ್ಟಿನಲ್ಲಿ ಇಂದಿನಿಂದ ದೆಹಲಿಯಲ್ಲಿ ಬೆಸ-ಸಮ ನಿಯಮ ಜಾರಿಗೆ ಬಂದಿದೆ. ಅಂದರೆ ನವೆಂಬರ್ 15ರವರೆಗೆ ದೆಹಲಿಯ ಕಾರು ಚಾಲಕರು ವಾರದಲ್ಲಿ ನಾಲ್ಕು ದಿನ ಮಾತ್ರ ತಮ್ಮ ಕಾರುಗಳನ್ನು ಬಳಸಲು ಸಾಧ್ಯವಿದ್ದು ಉಳಿದ ದಿನಗಳಲ್ಲಿ ಬಳಸುವಂತಿಲ್ಲ.
ಬೆಸ-ಸಮ ನಿಯಮಗಳ ಪ್ರಕಾರ, ದಿನಾಂಕ ನವೆಂಬರ್ 4, 6, 8, 12 ಮತ್ತು 14 ರಂದು 1, 3, 5, 7, 9 ರಂತಹ ಬೆಸ ಅಂಕೆಗಳೊಂದಿಗೆ ಕೊನೆಗೊಳ್ಳುವ ನೋಂದಣಿಯುಳ್ಳ ವಾಹನಗಳು ರಸ್ತೆಗಿಳಿಯುವಂತಿಲ್ಲ. ಅದೇ ರೀತಿ, ನವೆಂಬರ್ 5, 7, 9, 11, 13 ಮತ್ತು 15 ರಂದು 0, 2, 4, 6, 8 ಅಂಕೆಗಳೊಂದಿಗೆ ಕೊನೆಗೊಳ್ಳುವ ನೋಂದಣಿಯುಳ್ಳ ವಾಹನಗಳು ದೆಹಲಿಯ ರಸ್ತೆಗಿಳಿಯುವಂತಿಲ್ಲ. ನವೆಂಬರ್ 10ರ ಭಾನುವಾರ ಮಾತ್ರ ಎಲ್ಲಾ ಕಾರುಗಳು ಸಂಚರಿಸಬಹುದಾಗಿದೆ.
ಈ ನಿಯಮಗಳನ್ನು ಉಲ್ಲಂಘಿಸುವವರಿಗೆ ರೂ. 4,000 ದಂಡ ವಿಧಿಸಲಾಗುತ್ತದೆ. ಇದು ಬೆಸ-ಸಮ-ಯೋಜನೆಯ ಹಿಂದಿನ ಆವೃತ್ತಿಗಳಲ್ಲಿ ವಿಧಿಸಿದ ಮೊತ್ತಕ್ಕಿಂತ ದುಪ್ಪಟ್ಟಾಗಿದೆ.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಇಬ್ಬರು ಕ್ಯಾಬಿನೆಟ್ ಸಹೋದ್ಯೋಗಿಗಳೊಂದಿಗೆ ಕೆಲಸ ಮಾಡಲು ಅವರ ಕಾರಿನಲ್ಲಿ ತೆರಳಿದರು. “ಕಾರುಗಳನ್ನು ಹಂಚಿಕೊಳ್ಳಿ. ಇದು ಸ್ನೇಹವನ್ನು ಬೆಳೆಸುತ್ತದೆ, ಸಂಬಂಧಗಳನ್ನು ಬಲಪಡಿಸುತ್ತದೆ, ಪೆಟ್ರೋಲ್ ಅನ್ನು ಉಳಿಸುತ್ತದೆ ಮತ್ತು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ.” ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ತಮ್ಮ ಕಚೇರಿಗೆ ಸೈಕಲ್ನಲ್ಲಿ ತೆರಳಿದರು.
“ದೆಹಲಿಯಲ್ಲಿ ಪ್ರತಿದಿನ 30 ಲಕ್ಷ ಕಾರುಗಳು ರಸ್ತೆಗಿಳಿಯುತ್ತಿವೆ. ನಿಯಮದಂತೆ ಇಂದು 15 ಲಕ್ಷ ಕಾರುಗಳು ರಸ್ತೆಗಳಲ್ಲಿ ಇರುವುದಿಲ್ಲ. 15 ಲಕ್ಷ ಕಾರುಗಳಿಂದ ಹೊಗೆ ಕಡಿಮೆಯಾಗುತ್ತದೆ … ಎಂದು ಮುಖ್ಯಮಂತ್ರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನಿಯಮದಿಂದಾಗಿ ಇಂದು ಬೆಳಿಗ್ಗೆ ದೆಹಲಿ ಟ್ರಾಫಿಕ್ ಕಡಿಮೆಯಿತ್ತು ಮತ್ತು ಚಾಲಕರು ನಿಯಮವನ್ನು ಪಾಲಿಸುತ್ತಿರುವುದು ಕಂಡುಬಂತು. ನವೆಂಬರ್ 10 ರ ಭಾನುವಾರ ಈ ನಿಯಮವು ಜಾರಿಯಾಗುವುದಿಲ್ಲ. ಇತರ ರಾಜ್ಯಗಳ ನೋಂದಣಿ ಸಂಖ್ಯೆಗಳನ್ನು ಹೊಂದಿರುವ ವಾಹನಗಳಿಗೂ ಈ ನಿರ್ಬಂಧಗಳು ಅನ್ವಯವಾಗುತ್ತವೆ.
ಈ ಯೋಜನೆ ನವೆಂಬರ್ 15 ರಂದು ಕೊನೆಗೊಳ್ಳಲಿದೆ ಮತ್ತು ಮಾಲಿನ್ಯದ ಮಟ್ಟವು ಇದೇ ರೀತಿ ತೀವ್ರವಾಗಿ ಇದ್ದರೆ ಅದನ್ನು ವಿಸ್ತರಿಸುವ ಸಾಧ್ಯತೆಯಿದೆ.
ಪ್ರತಿಪಕ್ಷ ಬಿಜೆಪಿಯ ವಿಜಯ್ ಗೋಯೆಲ್ರವರು ಈ ನಿಯಮವನ್ನು ವಿರೋಧಿಸಿ ಸಾಂಕೇತಿಕ ಪ್ರತಿಭಟನೆಯನ್ನು ದಾಖಲಿಸಿದ್ದಾರೆ. ಇಂದು ಬೆಸ ಸಂಖ್ಯೆಯಿಂದ ಕೊನೆಗೊಳ್ಳುವ ವಾಹನಗಳಗೆ ನಿರ್ಭಂದವಿದ್ದರೂ ಸಹ ಅವರು ತಮ್ಮ ಬೆಸ ಸಂಖ್ಯೆಯ ವಾಹನವನ್ನು ಚಲಾಯಿಸಿದ್ದಾರೆ. ಅವರು ಈ ಯೋಜನೆಯನ್ನು “ಚುನಾವಣಾ ಗಿಮಿಕ್” ಮತ್ತು “ನಾಟಕ” ಎಂದು ಕರೆದಿದ್ದಾರೆ. ಆದರೆ ಇದಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದು ವಿಜಯ್ ಗೋಯೆಲ್ರವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಪರಿಸರ ಮಾಲಿನ್ಯ (ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಪ್ರಾಧಿಕಾರವು ಗಾಳಿಯ ಗುಣಮಟ್ಟ ಕುಸಿಯುತ್ತಿದ್ದಂತೆ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು ಘೋಷಿಸಿದ ನಂತರ ದೆಹಲಿ ಸರ್ಕಾರ ಶುಕ್ರವಾರ ಶಾಲೆಗಳಿಗೆ ನವೆಂಬರ್ 5ರವರೆಗೆ ರಜೆ ನೀಡಿದೆ. ಜೊತೆಗೆ ನಿರ್ಮಾಣ ಚಟುವಟಿಕೆಗಳನ್ನು ನಿಷೇಧಿಸಿದೆ.
ದ್ವಿಚಕ್ರ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ನಿರ್ಬಂಧಗಳಿಂದ ವಿನಾಯಿತಿ ನೀಡಲಾಗಿದೆ. ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗೆ ಬಳಸಲಾಗುವ ವಾಹನಗಳು ಮತ್ತು ಶಾಲಾ ಮಕ್ಕಳ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ. ವಿಐಪಿ ವಾಹನಗಳು, ಮಹಿಳೆಯರು, 12 ವರ್ಷ ವಯಸ್ಸಿನ ಮಕ್ಕಳು ಮತ್ತು ದೈಹಿಕವಾಗಿ ಅಂಗವಿಕಲರು ಹೊಂದಿರುವ ವಾಹನಗಳಿಗೆ ಮಾತ್ರ ವಿನಾಯಿತಿ ನೀಡಲಾಗುವುದು.
ನಿಯಮಪಾಲನೆಯನ್ನು ಖಚಿತಪಡಿಸಿಕೊಳ್ಳಲು ಸುಮಾರು 200 ಸಂಚಾರ ಸಂಚಾರ ಪೊಲೀಸರನ್ನು ನಿಯೋಜಿಸಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸಲು ಸುಮಾರು 5,000 ನಾಗರಿಕ ರಕ್ಷಣಾ ಸ್ವಯಂಸೇವಕರಿಗೆ ತರಬೇತಿ ನೀಡಲಾಗಿದೆ. ಬೆಸ-ಸಮ ಯೋಜನೆ ಜಾರಿಯಲ್ಲಿರುವಾಗ ದೆಹಲಿ ಮೆಟ್ರೋ 61 ಹೆಚ್ಚುವರಿ ಟ್ರಿಪ್ಗಳನ್ನು ನಿರ್ವಹಿಸಲಿದೆ. ಕ್ಯಾಬ್ ಅಗ್ರಿಗೇಟರ್ಗಳಾದ ಉಬರ್ ಮತ್ತು ಓಲಾ ಬೆಸ-ಸಮ-ಯೋಜನೆಯ ಅವಧಿಯಲ್ಲಿ ದರ ಹೆಚ್ಚಳಮಾಡದಂತೆ ನಿರ್ದೇಶನ ನೀಡಲಾಗಿದೆ.
ದೆಹಲಿಯಲ್ಲಿನ ವಾಯುಮಾಲಿನ್ಯ ಅತಿರೇಕಕ್ಕೆ ಹೋಗಲು ಪಕ್ಕದ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ರೈತರು ಭತ್ತ ಮತ್ತು ಗೋಧಿಯ ತ್ಯಾಜ್ಯವನ್ನು ಸುಡುತ್ತಾರೆ. ಮುಂದಿನ ಕೃಷಿಗಾಗಿ ಭೂಮಿಯನ್ನು ಸಿದ್ದಪಡಿಸಲು ಅಲ್ಲಿರುವ ತ್ಯಾಜ್ಯವನ್ನು ಸುಡುವುದು ಅವರ ವಾಡಿಕೆ. ಇದರಿಂದ ಹೊಮ್ಮುವ ಹೊಗೆಯು ದೆಹಲಿಯನ್ನು ಆವರಿಸುತ್ತಿದ್ದು ಮಾಲಿನ್ಯಕ್ಕೆ ಕಾರಣವಾಗಿದೆ. ಜೊತೆಗೆ ಪಟಾಕಿ ಮತ್ತು ವಾಹನಗಳು ಹೊಗೆಯೂ ಸೇರಿಕೊಂಡು ದೆಹಲಿಯಲ್ಲಿ ಮಾಲಿನ್ಯವನ್ನು ಹೆಚ್ಚು ಮಾಡಿವೆ.
ಮಾಹಿತಿ: ಎನ್ಡಿಟಿವಿ


