ತಮ್ಮ 5 ವರ್ಷದ ಮಗಳು ಅತ್ಯಾಚಾರಕ್ಕೆ ಒಳಗಾಗಿ ಸಾವನ್ನಪ್ಪಿದ್ದಾಳೆ. ಮಗಳಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ದಂಪತಿಯೊಂದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಒಡಿಶಾ ಅಸೆಂಬ್ಲಿ ಆವರಣದ ಹೊರಗೆ ಹೈ-ಸೆಕ್ಯೂರಿಟಿ ಝೋನ್ನಲ್ಲಿ ನಡೆದಿದೆ.
ಒಡಿಶಾದಲ್ಲಿ ರಾಜ್ಯ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದು, ದಂಪತಿ ತಮ್ಮ ಮಗಳಿಗೆ ನ್ಯಾಯಕ್ಕಾಗಿ, ತಮ್ಮ ಅಳಲು ತೊಡಿಕೊಳ್ಳಲು ಇಲ್ಲಿಗೆ ಬಂದಿದ್ದರು ಎನ್ನಲಾಗಿದೆ.
ದಂಪತಿಯನ್ನು ನಾಯಗಢ ಜಿಲ್ಲೆಯ ಜದುಪುರ ಗ್ರಾಮದ ಸೌದಾಮಿನಿ ಸಾಹು ಮತ್ತು ಅಶೋಕ್ ಸಾಹು ಎಂದು ಗುರುತಿಸಲಾಗಿದೆ. ಈ ವರ್ಷದ ಜುಲೈನಲ್ಲಿ ಅವರ ಐದು ವರ್ಷದ ಮಗಳು ಪರಿ ಎಂಬ ಬಾಲಕಿಯನ್ನು ಅಪಹರಿಸಲಾಗಿತ್ತು. ಕೆಲ ದಿನಗಳ ನಂತರ ಮಗುವಿನ ಅಸ್ಥಿಪಂಜರದ ಅವಶೇಷಗಳು ಅವರ ಮನೆಯ ಹಿತ್ತಲಿನಲ್ಲಿ ಪತ್ತೆಯಾಗಿದ್ದವು.
ಅರ್ಧ ಕೊಳೆತ ಸ್ಥಿತಿಯಲ್ಲಿ ಮಗಳ ಮೃತದೇಹವನ್ನು ಕಂಡ ದಂಪತಿ, ಅತ್ಯಾಚಾರ ಮತ್ತು ಕೊಲೆ ಎಂದು ಶಂಕಿಸಿ, ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು. ಆದರೆ ಇಲ್ಲಿ ಅವರಿಗೆ ನ್ಯಾಯ ದೊರೆತಿಲ್ಲ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ನಾಸಾ ಹ್ಯೂಮನ್ ಎಕ್ಸ್ಪ್ಲೋರೇಶನ್ ರೋವರ್ ಚಾಲೆಂಜ್ಗೆ ಒಡಿಶಾ ಶಾಲಾ ವಿದ್ಯಾರ್ಥಿಗಳ ತಂಡ!
Bhubaneswar: Woman attempts self-immolation outside #Odisha Assembly. Police took her to a hospital.
The woman & her husband say police didn't take action over the alleged rape & killing of their 5-year-old daughter in July.
State Assembly session is currently underway. pic.twitter.com/36kbd2tSZ8
— ANI (@ANI) November 24, 2020
ವರದಿಗಳ ಪ್ರಕಾರ, ವಿಧಾನಸಭೆ ಅಧಿವೇಶನ ನಡೆಯುತ್ತಿದ್ದಾಗ ದಂಪತಿ ತಮ್ಮ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವ ಮೂಲಕ ಆತ್ಮಹತ್ಯೆಗೆ ಪ್ರಯತ್ನಿಸಿದರು. ತಕ್ಷಣ ಅಲ್ಲೇ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸೀಮೆಎಣ್ಣೆ ಬಾಟಲಿ ಮತ್ತು ಬೆಂಕಿಕಡ್ಡಿ ಪೆಟ್ಟಿಗೆಯನ್ನು ವಶಪಡಿಸಿಕೊಂಡಿದ್ದಾರೆ.
“ನಾವು ಸರ್ಕಾರದ ಗಮನ ಸೆಳೆಯಲು ಇಂತಹ ಒಂದು ಕೆಲಸಕ್ಕೆ ಕೈಹಾಕಿದ್ದು, ಆರೋಪಿಗಳ ಬಂಧನಕ್ಕೆ, ತಮ್ಮ ಮಗಳಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಎಲ್ಲಾ ಕಡೆ ಅಲೆದಾಡಿದ್ದೇವೆ. ಆದರೆ, ನಾಯಗಢ ಎಸ್ಪಿ ಮತ್ತು ಜಿಲ್ಲಾಧಿಕಾರಿಗಳು ನಾವು ಸಲ್ಲಿಸಿದ್ದ ಮನವಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ” ಎಂದು ದಂಪತಿಗಳು ಆರೋಪಿಸಿದ್ದಾರೆ.
ಪೊಲೀಸ್ ಇಲಾಖೆ, ಸರ್ಕಾರವಲ್ಲದೇ, ಈ ದಂಪತಿಗಳು ಹಲವಾರು ರಾಜಕೀಯ ಮುಖಂಡರು, ಶಾಸಕರು ಮತ್ತು ಮಂತ್ರಿಗಳ ಮನೆ ಬಾಗಿಲು ಬಡಿದು ಮಗಳಿಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ.
ಮೃತ ಬಾಲಕಿಯ ತಾಯಿ ‘ಸಚಿವ ಅರುಣ್ ಸಾಹು ಮುರ್ದಾಬಾದ್’ ಎಂಬ ಘೋಷಣೆಗಳನ್ನು ಕೂಗಿದರು. “ನಮ್ಮ ಮಗಳನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ಬಾಬುಲಿ ನಾಯಕ್ ಮತ್ತು ಅವನ ಸಹಚರರು ಅವಳನ್ನು ಕೊಂದಿದ್ದಾರೆ. ಘಟನೆ ನಡೆದು ತಿಂಗಳುಗಳು ಕಳೆದರೂ, ಆರೋಪಿಗಳು ಆರಾಮಾವಾಗಿ ಓಡಾಡುತ್ತಿದ್ದಾರೆ. ನಾವು ಹಲವಾರು ಬಾರಿ ಸಚಿವ ಅರುಣ್ ಸಾಹು ಅವರಲ್ಲಿ ಸಹಾಯ ಕೇಳಿ ಹೋದೆವು, ಆದರೆ ಅವರು ನಮಗೆ ಸಹಾಯ ಮಾಡಿಲ್ಲ” ಎಂದಿದ್ದಾರೆ. ಸಚಿವ ಅರುಣ್ ಸಾಹು ಘಟನೆಯಲ್ಲಿ ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ದಂಪತಿ ಆರೋಪಿಸಿದ್ದಾರೆ.