Homeಚಳವಳಿಆನ್‌ಲೈನ್ ತರಗತಿ ಮುಂದುವರಿಕೆ: ಸನ್ಮಾನ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್‌ರವರಿಗೊಂದು ಬಹಿರಂಗ ಪತ್ರ

ಆನ್‌ಲೈನ್ ತರಗತಿ ಮುಂದುವರಿಕೆ: ಸನ್ಮಾನ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್‌ರವರಿಗೊಂದು ಬಹಿರಂಗ ಪತ್ರ

- Advertisement -
- Advertisement -

ಸನ್ಮಾನ್ಯ ಸಜ್ಜನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೇ,

ನೀವು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಿರಿ. ಆನ್ ಲೈನ್ ಶಿಕ್ಷಣ ಮುಂದುವರಿಸುವುದಾಗಿ ಹೇಳಿದಿರಿ. ಆನ್ ಲೈನ್ ಕುರಿತು ಎರಡು ಭಿನ್ನ ಅಭಿಪ್ರಾಯಗಳು ಇವೆ. ಆನ್ ಲೈನ್ ಮಾಡಬೇಕು-ಮಾಡಬಾರದೆಂಬ ಎರಡೂ ವಾದಗಳು ಇವೆ. ಇದು ಗೊಂದಲಕ್ಕೆ ಕಾರಣ ಎಂದು ಹೇಳಿದಿರಿ. ಆದರೆ ನೀವು ಸ್ಪಷ್ಟನಿರ್ಧಾರಕ್ಕೆ ಬರಲು ಕ್ರಮ ವಹಿಸಿದಂತೆ ಕಾಣುತ್ತಿಲ್ಲ.

ಆನ್ ಲೈನ್ ಶಿಕ್ಷಣ ಮುಂದುವರಿಸುವ ತೀರ್ಮಾನ ಏಕೆ ಮಾಡಿದ್ದೀರಿ ಎಂಬುದೇ ತಿಳಿಯುತ್ತಿಲ್ಲ. ಸಾಮಾಜಿಕ ಅಂತರದಂತೆ ಶಿಕ್ಷಣದ ಅಂತರ, ತಾರತಮ್ಯ ಹೆಚ್ಚುತ್ತದೆ. ಹೀಗೆ ಸೃಷ್ಟಿಯಾಗುವ ಕಂದಕವನ್ನು ಮುಚ್ಚಲು ಕಷ್ಟಸಾಧ್ಯ. ನಗರ ಮತ್ತು ಗ್ರಾಮೀಣ ಭಾಗದ ನಡುವಿನ ವಿದ್ಯಾರ್ಥಿಗಳ ಜ್ಞಾನ ವಿಸ್ತರಣೆಯಲ್ಲಿ ಸಾಕಷ್ಟು ಅಂತರ ಉಂಟಾಗುತ್ತದೆ ಎಂಬ ಬಗ್ಗೆ ನೀವು ಯಾಕೆ ಯೋಚಿಸುತ್ತಿಲ್ಲ?

ಆನ್ ಲೈನ್ ಶಿಕ್ಷಣ ನೀಡುವುದನ್ನು ಮುಂದುವರಿಸಿದರೆ ಎಲ್ಲರ ಬಳಿ ಮೊಬೈಲ್ ಇರಬೇಕು ಅಲ್ಲವೇ? ಈಗ ನಗರ ಪ್ರದೇಶ ಮತ್ತು ಗ್ರಾಮೀಣ ಪ್ರದೇಶದ ಮಕ್ಕಳು ಮತ್ತು ಪೋಷಕರ ಬಳಿ ಎಷ್ಟು ಆಂಡ್ರಾಯಿಡ್ ಮೊಬೈಲ್ ಗಳು ಇವೆ? ಎಲ್ಲರೂ ಮೊಬೈಲ್ ಹೊಂದಿದ್ದಾರೆಯೇ? ಈ ಬಗ್ಗೆ ಸರ್ವೇ ನಡೆಸಿದ್ದೀರಾ?

ಗ್ರಾಮೀಣ ಭಾಗದಲ್ಲಿ ಶಾಲೆಗೆ ಮಕ್ಕಳು ಬರುವುದೇ ದುಸ್ಥರ. ಪರಿಸ್ಥಿತಿ ಹೀಗಿದ್ದಾಗ ಆ ಮಕ್ಕಳು ಮತ್ತು ಪೋಷಕರು ಮೊಬೈಲ್ ಗಳನ್ನು ಎಲ್ಲಿಂದ ಖರೀದಿಸಬೇಕು. ನಿಮ್ಮದೇ ಪಕ್ಷದ ಸರ್ಕಾರವೇ ಮಾಡಿದ ಅವೈಜ್ಞಾನಿಕ ನೀತಿಗಳು ಗ್ರಾಮೀಣ ಜನರು ಹಣಕ್ಕೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಂಥದ್ದರಲ್ಲಿ ತಮ್ಮ ಮಕ್ಕಳಿಗೆ ಕನಿಷ್ಟ ಏಳೆಂಟು ಸಾವಿರ ರೂಪಾಯಿ ಮೌಲ್ಯದ ಅಂಡ್ರಾಯಿಡ್ ಮೊಬೈಲ್ ಕೊಡಿಸುವ ಶಕ್ತಿ ಎಲ್ಲಿಂದ ಬರುತ್ತದೆ. ಹೋಗಲಿ ಕೆಲವರ ಬಳಿ ಮೊಬೈಲ್ ಗಳು ಇವೆ ಎಂದರೂ ಅದಕ್ಕೆ ಡೇಟಾ, ನೆಟ್ ವರ್ಕ್ ಸಿಗಬೇಕು ಅಲ್ಲವೇ? 5ಜಿ ಯತ್ತ ದೇಶ ಮುಖ ಮಾಡಿದ್ದರೂ ಗ್ರಾಮೀಣ ಭಾಗ ಸಿಗ್ನಲ್, ನೆಟ್ ವೆರ್ಕ್ ಸಿಗದೆ ಬಳಲುತ್ತಿದೆ.
ಸಿಗ್ನಲ್ ಅಥವಾ ನೆಟ್ ವರ್ಕ್ ಸಿಗಬೇಕು ಅಂದರೆ ಮರಗಳನ್ನು ಹತ್ತಿ ಕುಳಿತುಕೊಳ್ಳಬೇಕು. ಮಕ್ಕಳು ಆ ಕೆಲಸವನ್ನು ಮಾಡಬಹುದು. ಅಲ್ಲಿ ಅನಾಹುತ ಸಂಭವಿಸಿದರೆ ಜೀವಹಾನಿ ಆಗುತ್ತದೆ. ಅದಕ್ಕೆ ಹೊಣೆ ಯಾರು? ಆನ್ ಲೈನ್ ಶಿಕ್ಷಣ ಬಡ ವಿದ್ಯಾರ್ಥಿಗಳಿಗೆ ಸುಲಭವಾಗಿ ದೊರೆಯುವುದಿಲ್ಲ. ದುಡ್ಡಿದ್ದವರು ದುಭಾರಿ ಬೆಲೆಯ ಮೊಬೈಲ್ ಖರೀದಿ ಮಾಡಿ ಆನ್ ಲೈನ್ ಶಿಕ್ಷಣಕ್ಕೆ ಹೊಂದಿಕೊಳ್ಳಬಹುದು.

ಆನ್ ಲೈನ್ ಶಿಕ್ಷಣ ಅಂದರೆ ಖಾಸಗಿ ಶಾಲೆಗಳು ದುಡ್ಡು ಸುಲಿಯಲು ಹೆಚ್ಚು ಅವಕಾಶ ಮಾಡಿಕೊಡುತ್ತದೆ. ಮನೆ ಪಾಠದ ನೆಪದಲ್ಲಿ ಕ್ಯಾಪಿಟೇಶನ್ ಶುಲ್ಕ ವಸೂಲಿಗೂ ಅವಕಾಶ ಮಾಡಿಕೊಡುವ ಖಾಸಗಿ ಆಡಳಿತ ಮಂಡಳಿಗಳ ಜೊತೆಗೆ ನೀವು ಶಾಮೀಲಾಗಿದ್ದೀರಿ ಎಂಬ ಅನುಮಾನ ಮೂಡುತ್ತದೆ.

ಗ್ರಾಮೀಣ ಭಾಗದಲ್ಲಿರುವ ಖಾಸಗಿ ಮತ್ತು ಸರ್ಕಾರಿ ಪ್ರೌಢಶಿಕ್ಷಣ ಸಂಸ್ಥೆಗಳಿಗೆ ದಾಖಲಾಗುವ ಮಕ್ಕಳು ಬಡವರೇ ಆಗಿರುತ್ತಾರೆ. ಆ ಮಕ್ಕಳು ಸರ್ಕಾರ ವಿಧಿಸಿರುವ ಶುಲ್ಕ ಕಟ್ಟಲು ಕೂಡ ಕಷ್ಟಪಡುತ್ತಾರೆ. ಇದೇ ಕಾರಣಕ್ಕಾಗಿಯೇ ಗ್ರಾಮಾಂತರ ಪ್ರದೇಶದಲ್ಲಿರುವ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಆನ್ ಲೈನ್ ಶಿಕ್ಷಣ ಬೇಡವೆಂದು ಮನವಿಗಳ ಮೇಲೆ ಮನವಿಗಳನ್ನು ಸಲ್ಲಿಸಿದವು. ನಮ್ಮ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಕೊಡಲು ಸಾಧ್ಯವಿಲ್ಲ. ನಮ್ಮ ವಿದ್ಯಾರ್ಥಿಗಳು ಮೊಬೈಲ್ ಕೊಳ್ಳುವಷ್ಟು ಶಕ್ತಿ ಇಲ್ಲ. ಹಾಗಾಗಿ ಆನ್ ಲೈನ್ ಶಿಕ್ಷಣ ಕಡಾಖಂಡಿತವಾಗಿ ಬೇಡವೆಂದರು. ಈ ಮನವಿಗಳು ಸಜ್ಜನ ಶಿಕ್ಷಣ ಸಚಿವರ ಕಿವಿಗೆ ಹೋಗಲೇ ಇಲ್ಲ ಅನ್ನಿಸುತ್ತದೆ.
ನಗರ ಪ್ರದೇಶದಲ್ಲಿ ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿರುವ ಎಲ್ಲ ಮಕ್ಕಳ ಬಳಿಯೂ ಮೊಬೈಲ್ ಇದೆ ಎಂದು ಭಾವಿಸುವುದೂ ಕೂಡ ತಪ್ಪು. ಯಾಕೆಂದರೆ ಗ್ರಾಮೀಣ ಪ್ರದೇಶದಿಂದ ನಗರಕ್ಕೆ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಬಂದ ಬಡ ಕುಟುಂಬಗಳು ಮನೆ ಬಾಡಿಗೆ, ಕುಟುಂಬ ನಿರ್ವಹಣೆ ಮಾಡುವುದು ದುಸ್ಥರ. ಬಡ ತಂದೆತಾಯಿಗಳು ತಮ್ಮ ಮಕ್ಕಳನ್ನು ಹಗಲಿರುಳು ದುಡಿದು ಗುಣಮಟ್ಟದ ಶಿಕ್ಷಣ ಕೊಡಿಸುವುದಕ್ಕೆ ಪಡಿಪಾಟಲು ಬೀಳುತ್ತಿರುವುದು ಶಿಕ್ಷಣ ಸಚಿವರಿಗೆ ತಿಳಿದಿಲ್ಲವೇ?

ನಿಮ್ಮ ನಿಲುವುಗಳು ಯಾರ ಪರವಾಗಿವೆ ಎಂಬುದು ಆನ್ ಲೈನ್ ಶಿಕ್ಷಣ ಮುಂದುವರಿಸುವುದರಿಂದಲೇ ಗೊತ್ತಾಗುತ್ತದೆ. ನೇರ ಶಿಕ್ಷಣ ಕೊಡುವಾಗಲೇ ಕಲಿಕೆಯಲ್ಲಿ ಹಿಂದೆ ಬೀಳುವ ಮಕ್ಕಳು ಇರುವಾಗ, ತರಗತಿಯಲ್ಲಿ ಕುಳಿತ ಮಕ್ಕಳೇ ಪಾಠ ಮಾಡುವುದನ್ನು ಗಮನ ಕೊಟ್ಟು ಆಲಿಸದೇ ಇರುವಾಗ ಪದೇ ಪದೇ ಮಕ್ಕಳನ್ನು ಪಾಠದ ಕಡೆ ಗಮನ ಸೆಳಯಲು ಉಪ ಕತೆಗಳನ್ನು ಹೇಳುವುದು ನೇರ ಬೋಧನೆಯಲ್ಲಿ ನಾವು ಕಾಣಬಹುದು. ಆದರೂ ಹಲ ಮಕ್ಕಳ ಮನಸ್ಸು ಮರ್ಕಟನಂತೆ. ಹೀಗಿದ್ದಾಗ ಎಲ್ಲೋ ಕುಳಿತು ಪಾಠ ಮಾಡುವ ಶಿಕ್ಷಕರು ಮಕ್ಕಳ ಮನಸ್ಸನ್ನು ಕೇಂದ್ರೀಕರಿಸುವಂತೆ ಮಾಡಲು ಹೇಗೆ ಸಾಧ್ಯ? ಮನೆಯಲ್ಲಿ ಯಾರ ಅಂಕೆಯೂ ಇಲ್ಲದೆ ಒಂದೆಡೆ ಕೂರದ ಸದಾ ಓಡಾಡುತ್ತಲೇ ಇರುವ ಮಕ್ಕಳನ್ನು ಒಂದೆಡೆ ಕೂರಿಸಿ ಪಾಠ ಕೇಳುವಂತೆ ಮಾಡುವುದು ಕಷ್ಟದ ಕೆಲಸ. ತಂದೆತಾಯಿಗಳ ಭಯಕ್ಕೆ ಮೊಬೈಲ್ ನಲ್ಲಿ ಆನ್ ಲೈನ್ ತರಗತಿಗಳನ್ನು ಕೇಳಿದರೂ ಮಕ್ಕಳು ಪಾಠವನ್ನು ಸರಿಯಾಗಿ ಗ್ರಹಿಸಿದ್ದಾರೆಂಬುದನ್ನು ಹೇಗೆ ಹೇಳಲು ಸಾಧ್ಯ.

ಪೋಷಕರು ಮತ್ತು ವಿದ್ಯಾರ್ಥಿಗಳ ಸಂಕಟವನ್ನು ಅರ್ಥ ಮಾಡಿಕೊಳ್ಳದ ಪ್ರಾಥಮಿಕ ಶಿಕ್ಷಣ ಸಚಿವರು ಯಾರೋ ಪ್ರಚಾರಕ್ಕಾಗಿ ಒಬ್ಬ ತರಕಾರಿ, ಹಣ್ಣು ಮಾರುತ್ತಿದ್ದ ವಿದ್ಯಾರ್ಥಿನಿಗೆ ಮೊಬೈಲ್ ಕೊಡಿಸಿದ್ದಾರೆ. ಅದು ಪತ್ರಿಕೆಯಲ್ಲಿ ಬಂದಿದೆ ಎಂದು ಹೆಮ್ಮೆಯಿಂದ ಹೇಳಿದರೆ ಲಕ್ಷಾಂತರ ತಂದೆತಾಯಿಗಳು ಇನ್ನೂ ಬೇಸಿಕ್ ಸೆಟ್ ಗಳನ್ನು ಇಟ್ಟುಕೊಂಡು 50 ರೂಪಾಯಿ ಕರೆನ್ಸಿ ಹಾಕಿಸಿ ತಿಂಗಳವರೆಗೆ ದಿನದೂಡುತ್ತಿರುವುದು ನಿಮ್ಮ ಕಣ್ಣಿಗೆ ಬೀಳುತ್ತಿಲ್ಲವೇ?

  • ಕೆ.ಈ.ಸಿದ್ದಯ್ಯ

ಇದನ್ನೂ ಓದಿ: SSLC ಪರೀಕ್ಷೆಗಳು: ವೇಳಾಪಟ್ಟಿಯಲ್ಲಿ ಬದಲಾವಣೆಯಿಲ್ಲ ಎಂದ ಶಿಕ್ಷಣ ಸಚಿವ ಸುರೇಶ್ ಕುಮಾರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...