ಪಹಲ್ಗಾಮ್ ದಾಳಿಯ ವಿರುದ್ಧ ನಡೆದ ಆಪರೇಷನ್ ಸಿಂಧೂರ ಬಗ್ಗೆ ವಿವರಣೆ ನೀಡಲು ನಡೆಸಲಾದ ಪತ್ರಿಕಾಗೋಷ್ಠಿಯಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ಭಾಗವಹಿಸಿದ್ದರು. ಆಪರೇಷನ್ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಭಾರತೀಯ ಸೇನೆ ಗಡಿಯಾಚೆಗಿನ ಭಯೋತ್ಪಾದಕರಿಗೂ, ಗಡಿಯೊಳಗಿನ ಕೋಮುವಾದಿಗಳಿಗೂ ಸರಿಯಾಗಿ ಉತ್ತರಿಸಿದೆ. ಗಡಿಯಾಚೆಗಿನ ಭಯೋತ್ಪಾದಕರು
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮೂಲಕ ಭಯೋತ್ಪಾದಕರು ಜಮ್ಮು ಕಾಶ್ಮೀರದಲ್ಲಿ ಶಾಂತಿ, ಅಭಿವೃದ್ಧಿ ಮತ್ತು ಕೋಮು ಸಾಮರಸ್ಯವನ್ನು ಭಂಗಗೊಳಲು ಬಯಸಿದ್ದರು ಎಂದು ಹೇಳಿದ್ದಾರೆ. ಅಂದರೆ, ಶಾಂತಿ, ಅಭಿವೃದ್ಧಿ ಜೊತೆಗೆ ಕೋಮು ಸಾಮರಸ್ಯವನ್ನು ಭಂಗಗೊಳಿಸಬೇಕು ಎಂಬುವುದು ಭಯೋತ್ಪಾದಕರ ಉದ್ದೇಶ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಒಂದು ಕ್ಷಣ ಆಲೋಚಿಸಿ, ಪಹಲ್ಗಾಮ್ ದಾಳಿಯ ನಂತರ ಈ ದೇಶದ ಕೋಮು ಸಾಮರಸ್ಯವನ್ನು ಹಾಳು ಮಾಡಲು ಪ್ರಯತ್ನಿಸಿ ಭಯೋತ್ಪಾದಕರ ಉದ್ದೇಶವನ್ನು ಈಡೇರಿಸಲು ಪ್ರಯತ್ನಿಸಿದವರು ಯಾರು? ಅಭಿವೃದ್ಧಿ ಹೊಂದುತ್ತಿರುವ ಕಾಶ್ಮೀರದ ಪ್ರವಾಸೋದ್ಯಮಕ್ಕೆ ಪೆಟ್ಟು ನೀಡಲು ಕರೆ ನೀಡದವರು ಯಾರು? ಅಲ್ಲಿಗೆ ಪ್ರವಾಸ ಹೋಗದಂತೆ ಕಾಶ್ಮೀರವನ್ನು ಬಹಿಷ್ಕರಿಸಲು ಕರೆ ನೀಡಿದವರು ಯಾರು? ದೇಶದ ಹಲವು ರಾಜ್ಯಗಳಲ್ಲಿರುವ ಕಾಶ್ಮೀರಿ ವಿದ್ಯಾರ್ಥಿಗಳ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡಿದವರು ಯಾರು?
ಮೇಲಿನ ನನ್ನ ”ಯಾರು” ಎಂಬ ಪ್ರಶ್ನೆಗೆ ಉತ್ತರ ”ಯಾರು” ಎಂಬುವುದು ಇಡೀ ದೇಶಕ್ಕೆ ಗೊತ್ತಿದೆ. ಈ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ವ್ಯಕ್ತಿಗಳ ವಾರಗಳ ಹಿಂದಿನ ಪೋಸ್ಟ್ಗಳನ್ನು ಕೆದಕಿದರೆ, ಭಯೋತ್ಪಾದಕರ ಉದ್ದೇಶವನ್ನು ಸಫಲಗೊಳಿಸಲು ಪ್ರಯತ್ನಿಸಿದವರ ದುಷ್ಕರ್ಮಗಳು ನಮ್ಮ ಕಣ್ಣ ಮುಂದೆಯೆ ಬರುತ್ತದೆ.
ಪಹಲ್ಗಾಮ್ ದಾಳಿ ನಡೆದಾಗ ದೇಶ ಒಗ್ಗಟ್ಟಾಗಿರಬೇಕು ಎಂದು, ಅದು ಭಯೋತ್ಪಾದಕರ ಉದ್ದೇಶ ಇಲ್ಲಿನ ಸೌಹಾರ್ದ ಹಾಳು ಮಾಡುವುದೆ ಆಗಿದೆ ಎಂದು ಸಾರಿ ಸಾರಿ ಹೇಳಿದವರ ಮೇಲೆ ದಾಳಿ ಮಾಡಲಾಯಿತು. ಸ್ವತಃ ಸಂತ್ರಸ್ತ ಸೈನಿಕರೊಬ್ಬರ ಪತ್ನಿಯ ಮೇಲೆ ಕೂಡಾ ಅಶ್ಲೀಲವಾಗಿ ದಾಳಿ ಮಾಡಲಾಯಿತು. ನಮ್ಮ ಸರ್ಕಾರ ಅದರ ಬಗ್ಗೆ ಇನ್ನೂ ಚಕಾರ ಎತ್ತದೆ ಮೌನಪಾಲಿಸಿದೆ.
ಆದರೆ, ಇಂದು ಆಪರೇಷನ್ ಸಿಂಧೂರದ ಬಗ್ಗೆ ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಸೇನೆ ಈ ಎಲ್ಲಾ ದುಷ್ಕರ್ಮಿಗಳಿಗೆ ಸರಿಯಾಗಿ ಉತ್ತರಿಸಿದೆ.
ಯಾವುದೇ ಮಿಲಿಟರಿ ಕಾರ್ಯಾಚರಣೆಗಳು ನಡೆದರೆ ಅವುಗಳ ಸುದ್ದಿಗಳನ್ನು ಸಾಂಪ್ರದಾಯಿಕವಾಗಿ ನೀಡುತ್ತಾ ಬಂದಿರುವುದು ಭಾರತ ಸರ್ಕಾರದ ರಕ್ಷಣಾ ಇಲಾಖೆ (MoD) ಮತ್ತು ಸೇನೆಯ ವಕ್ತಾರರು. ಆದರೆ, ಭಾರತೀಯ ಸೇನೆ ಈ ಬಾರಿ, ಬದಲಾವಣೆ ಮಾಡಿ, ಗಡಿಯಾಚೆಗಿನ ಭಯೋತ್ಪಾದಕರಿಗೆ ಮತ್ತು ಗಡಿಯೊಳಗಿನ ಕೋಮುವಾದಿಗಳಿಗೆ ಉತ್ತರ ನೀಡಿದೆ.
ಪಹಲ್ಗಾಮ್ ದಾಳಿಯ ನಂತರ ಅದರ ಪಾಪವನ್ನು ಭಾರತ ಸರ್ವ ಮುಸ್ಲಿಮರು ಹೊರಬೇಕು ಎಂಬಂತೆ ಪ್ರಚಾರ ಮಾಡಿದ ಕೋಮುವಾದಿಗಳಿಗೆ ಉತ್ತರವಾಗಿ ಸೇನೆ ಒಬ್ಬ ಮುಸ್ಲಿಂ ಮಹಿಳಾ ಸೇನಾಧಿಕಾರಿಯ ಕೈಯಲ್ಲೆ ಘಟನೆಯ ಬಗ್ಗೆ ವಿವರಗಳನ್ನು ನೀಡುವಂತೆ ಮಾಡಿತು. ಇದೀಗ ಇಡೀ ದೇಶ ಈ ಮಹಿಳೆ ಯಾರು, ಅವರು ಏನಾಗಿದ್ದರು ಎಂದು ಹುಡುಕುತ್ತಾ, ಅವರ ಸಾಧನೆ, ಧೈರ್ಯ ಮತ್ತು ಅವರ ದೇಶಪ್ರೇಮವನ್ನು ಕೊಂಡಾಡುವಂತೆ ಭಾರತೀಯ ಸೇನೆ ಮಾಡಿದೆ. ಗಡಿಯೊಳಗಿನ ಕೋಮುವಾದಿಗಳಿಗೆ ಇದಕ್ಕಿಂತ ಹೆಚ್ಚಿನ ಉತ್ತರ ಏನು ಬೇಕು ಹೇಳಿ.
ಅಷ್ಟೆ ಅಲ್ಲದೆ, ನಮ್ಮ ಗಡಿ ಪ್ರವೇಶಿಸಿ, ತಮ್ಮ ಕುಟುಂಬದೊಂದಿಗೆ ವಿಹರಿಸುತ್ತಿದ್ದ ಪ್ರವಾಸಿಗರನ್ನು, ಮಹಿಳೆಯರ ಕಣ್ಣು ಮುಂದೆಯೆ ಅವರ ಪತಿಯರನ್ನು ಕೊಂದ ಭಯೋತ್ಪಾದರ ಕೇಂದ್ರಗಳನ್ನು ನಾಶ ಮಾಡಿ, ಆ ಸಾಧನೆಯನ್ನು ಇಬ್ಬರು ಮಹಿಳೆಯರು ವಿವರಿಸುವಂತೆ ಮಾಡಿ, ಭಾರತೀಯ ಸೇನೆ ಭಯೋತ್ಪಾದರಿಗೆ ನಾವು ಹೆದರಿಲ್ಲ, ನಾವು ಗಟ್ಟಿಯಾಗಿದ್ದೇವೆ ಎಂಬ ಸಂದೇಶ ರವಾನಿಸಿದೆ.
ಅಷ್ಟಾಗಿಯೂ, ಪಹಲ್ಗಾಮ್ ದಾಳಿ ನಡೆಯಲು ಕಾರಣವಾದ ಭದ್ರತಾ ಲೋಪಕ್ಕೆ ಯಾರು ಕಾರಣ? ಅದಕ್ಕೆ ಹೊಣೆ ಯಾರು? ಸೇನೆಯಲ್ಲಿ ನೇಮಕಾತಿ ಯಾಕೆ ಆಗುತ್ತಿಲ್ಲ? ಎಂಬ ಪ್ರಶ್ನೆಯನ್ನು ನಾವು ಕೇಳುತ್ತಲೆ ಇರಬೇಕು. ಜೊತೆಗೆ ಈ ದೇಶದ ಬ್ರಾತೃತ್ವದ ಪರಂಪರೆಯನ್ನು ಒಡೆಯಲು ಬರುವವರ ಹುನ್ನಾರವನ್ನು ನಾವು ಒಡೆಯುತ್ತಲೆ ಇರಬೇಕು. ಯಾಕೆಂದರೆ ಈ ದೇಶ ಎಲ್ಲರದೂ. ಅಲ್ಲವೆ? ಗಡಿಯಾಚೆಗಿನ ಭಯೋತ್ಪಾದಕರು
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಆಪರೇಷನ್ ಸಿಂಧೂರ | ಭಯೋತ್ಪಾದಕ ಗುಂಪುಗಳ ನಿರ್ಮೂಲನೆಗೆ ಭಾರತದ ಎಡಪಕ್ಷಗಳ ಒತ್ತಾಯ
ಆಪರೇಷನ್ ಸಿಂಧೂರ | ಭಯೋತ್ಪಾದಕ ಗುಂಪುಗಳ ನಿರ್ಮೂಲನೆಗೆ ಭಾರತದ ಎಡಪಕ್ಷಗಳ ಒತ್ತಾಯ


My Small Donation