ಸಿಎಎ, ಎನ್ಆರ್ಸಿ ಮತ್ತು ಎನ್.ಪಿ.ಆರ್ ಸಂಬಂಧ ಚರ್ಚಿಸಲು ನವದೆಹಲಿಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಕರೆದಿರುವ ಸಭೆಯಲ್ಲಿ ಬಹುಜನ ಸಮಾಜ ಪಾರ್ಟಿ ಭಾಗವಹಿಸುವುದಿಲ್ಲ ಎಂದು ಹೇಳಿದ ಬೆನ್ನಲ್ಲೇ ಶಿವಸೇನೆ ಮತ್ತು ಆಮ್ ಆದ್ಮಿ ಪಾರ್ಟಿಯೂ ಕೂಡ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿವೆ. ಹೀಗಾಗಿ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಕಾಂಗ್ರೆಸ್ ಯತ್ನಕ್ಕೆ ಹಿನ್ನಡೆಯಾಗಿದೆ.
ರಾಜಸ್ಥಾನದಲ್ಲಿ ಪಕ್ಷದ ಎಲ್ಲಾ ಶಾಸಕರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರಿಂದ ಮುನಿಸಿಕೊಂಡಿರುವ ಬಿಎಸ್ಪಿ ಮುಖ್ಯಸ್ಥೆ ಮಾಯವತಿ, ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಕರೆದಿರುವ ಸಭೆಯಲ್ಲಿ ಪಾಲ್ಗೊಂಡರೆ ರಾಜಸ್ಥಾನದ ಪಕ್ಷದ ಕಾರ್ಯಕರ್ತರನ್ನು ನಿರಾಸೆಗೊಳಿಸದಂತಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ ಕುದುರೆ ವ್ಯಾಪಾರದ ಮೂಲಕ ತನ್ನ ಪಕ್ಷದ ಎಲ್ಲಾ ಶಾಸಕರನ್ನು ಸೆಳೆದುಕೊಂಡಿದೆ. ಇದರಿಂದ ಪಕ್ಷದ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ನಡೆಯುವ ಪ್ರತಿಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಆದರೆ ನಮ್ಮ ಪಕ್ಷ ಸಿಎಎ, ಎನ್ಆರ್ಸಿ ಮತ್ತು ಎನ್.ಪಿ.ಆರ್ ಅನ್ನು ಖಂಡಿಸುತ್ತದೆ ಮತ್ತು ವಿರೋಧಿಸುತ್ತದೆ ಎಂದು ಹೇಳಿದ್ದಾರೆ
ಈಗಲೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ವಿಭಜಕ ಮತ್ತು ಅಸಂವಿಧಾನಿಕ ಸಿಎಎ ಮತ್ತು ಎನ್ಆರ್ಸಿ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಮಾಯಾವತಿ ಅವರು ಟ್ವೀಟ್ ಮಾಡಿದ ಕೆಲ ಗಂಟೆಗಳಲ್ಲೇ ಆಮ್ ಆದ್ಮಿ ಪಾರ್ಟಿ ಮತ್ತು ಮಹಾರಾಷ್ಟ್ರ ಸರ್ಕಾರದ ಭಾಗವಾಹಿರುವ ಶಿವಸೇನೆ ನಮಗೆ ಇದುವರೆಗೆ ಆಹ್ವಾನ ಸ್ವೀಕರಿಸಿಲ್ಲ ಎಂದು ಹೇಳಿಕೊಂಡಿವೆ.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸಿರುವ ಶಿವಸೇನೆ ಪಕ್ಷದ ಮುಖ್ಯಸ್ಥ ಉದ್ದವ್ ಠಾಕ್ರೆ ಜೊತೆ ಚರ್ಚೆಸಿ ತೀರ್ಮಾನ ಮಾಡುತ್ತೇವೆ. ಸಭೆಯ ಆಹ್ವಾನವನ್ನು ಇದುವರೆಗೂ ಸ್ವೀಕರಿಸಿಲ್ಲ. ಆದರೆ ಆಹ್ವಾನ ಬಂದರೆ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಜೊತೆ ಚರ್ಚಿಸಿ ನಿರ್ಧರಿಸುತ್ತೇವೆ ಎಂದು ಶಿವಸೇನಾ ಸಂಸದ ವಿನಾಯಕ್ ರಾವುತ್ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ ಕೂಡ ನಮಗೆ ಆಹ್ವಾನ ಬಂದಿಲ್ಲ ಎಂದು ತಿಳಿಸಿದ್ದಾರೆ.