ಕಾಂಗ್ರೆಸ್ನ ಹಿರಿಯ ದಲಿತ ಮುಖಂಡ, ಮಾಜಿ ಕೇಂದ್ರ ಸಚಿವ ಕೆ.ಎಚ್ ಮುನಿಯಪ್ಪನವರು ರಾಜ್ಯ ರಾಜಕಾರಣಕ್ಕೆ ಕಾಲಿಟ್ಟಿದ್ದು, ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರ ಸುದೀರ್ಘ ರಾಜಕೀಯ ಜೀವನದ ಇಣುಕು ನೋಟ ಇಲ್ಲಿದೆ.
ಕಂಬದಹಳ್ಳಿ ಹನುಮಪ್ಪ ಮುನಿಯಪ್ಪನವರು ಮಾರ್ಚ್ 07, 1948ರಂದು ಆಗಿನ ಕೋಲಾರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಕಂಬದಹಳ್ಳಿಯ ಹನುಮಪ್ಪ ಹಾಗೂ ವೆಂಕಟಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ದಲಿತ ಎಡಗೈ ಸಮುದಾಯದ ಕೆ.ಎಚ್. ಮುನಿಯಪ್ಪನವರು ವೃತ್ತಿಯಲ್ಲಿ ವಕೀಲರಾಗಿದ್ದ ಸಂದರ್ಭದಲ್ಲಿ 1969ರಲ್ಲಿ ಕೋಲಾರ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಕೋಶದ ಉಪಾಧ್ಯಕ್ಷರಾಗಿ ತಮ್ಮ ರಾಜಕೀಯವನ್ನು ಆರಂಭಿಸಿದರು.
ಈ ಹಿಂದೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸತತ ಮೂರು ಸಲ ಸಂಸದರಾಗಿ ಆಯ್ಕೆಯಾಗಿದ್ದ ಬ್ರಾಹ್ಮಣ ಸಮುದಾಯದ ವಿ.ಕೃಷ್ಣರಾವ್ರವರ ಆಪ್ತರಾಗಿದ್ದ ಮುನಿಯಪ್ಪನವರು ದೆಹಲಿಯ ಸಂಪರ್ಕ ಬೆಳೆಸಿಕೊಂಡಿದ್ದರು. ಇತ್ತ ಶಿಡ್ಲಘಟ್ಟದ ಅಂದಿನ ಶಾಸಕರಾಗಿದ್ದ ವಿ.ಮುನಿಯಪ್ಪನವರಿಗೂ ಹತ್ತಿರವಾಗಿದ್ದರು. ಅವಿಭಜಿತ ಕೋಲಾರ ಜಿಲ್ಲೆಯು ರಾಜ್ಯದಲ್ಲೇ ಅತ್ಯಂತ ಹೆಚ್ಚು ದಲಿತ ಸಮುದಾಯವಿರುವ ಜಿಲ್ಲೆಗಳಲ್ಲೊಂದು. ಹಾಗಾಗಿಯೇ ಕೋಲಾರ ಲೋಕಸಭಾ ಕ್ಷೇತ್ರವು ಎಸ್.ಸಿ. ಮೀಸಲು ಕ್ಷೇತ್ರವಾಗಿದೆ. ಆದರೆ ಅಲ್ಲಿಂದ ಆರಿಸಿ ಬರುತ್ತಿದ್ದವರೆಲ್ಲರೂ ದಲಿತರಲ್ಲಿನ ಸ್ಪೃಶ್ಯ ಸಮುದಾಯದವರೇ ಆಗಿದ್ದರು. ಹೆಚ್ಚಿನ ಜನಸಂಖ್ಯೆ ಇರುವ ಎಸ್ಸಿ ಅಸ್ಪೃಶ್ಯ ಸಮುದಾಯದವರು ಅಧಿಕಾರಕ್ಕೆ ಬರಬೇಕು ಎಂಬ ಕೂಗು ಎದ್ದಿತು. ಅಂದಿಗೆ, ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಯಾಗಿದ್ದ ಕಾರಣ ಕಾಂಗ್ರೆಸ್ ಪರ ಅಲೆಯೂ ಇತ್ತು. ಆ ಸಂದರ್ಭದಲ್ಲಿ ದೆಹಲಿಯ ಕಾಂಗ್ರೆಸ್ ಮುಖಂಡರ ಪರಿಚಯವಿದ್ದ ಮುನಿಯಪ್ಪನವರು ಕೋಲಾರದ ಟಿಕೆಟ್ ಗಿಟ್ಟಿಸಿ 1991ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಆನಂತರ 2019ರವರೆಗೂ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. 1996, 1998, 1999, 2004, 2009, 2014ರ ಚುನಾವಣೆಗಳಲ್ಲಿ ಸತತ ಏಳು ಬಾರಿ ಸಂಸದರಾಗಿ ಆಯ್ಕೆಯಾದ ಕೀರ್ತಿ ಅವರದ್ದು.

1991ರಲ್ಲಿ ಮೊದಲ ಬಾರಿಗೆ ಸಂಸದರಾದ ಅವರು ಇತ್ತ ರಾಜ್ಯದಲ್ಲಿ ಕೆಪಿಸಿಸಿ ಕಾನೂನು ಘಟಕದ ಸದಸ್ಯರಾಗುತ್ತಾರೆ. ತಾಲ್ಲೂಕು ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿಗಳಲ್ಲಿ ಸ್ಥಾನ ಪಡೆಯುತ್ತಾರೆ. 1994ರಲ್ಲಿ ಎಐಸಿಸಿಯ ಜಂಟಿ ಕಾರ್ಯದರ್ಶಿ ಆಗುತ್ತಾರೆ. 1999ರವರೆಗೂ ಕೈಗಾರಿಕೆ, ಉಕ್ಕು ಮತ್ತು ಅದಿರು, ಸಮಾಜ ಕಲ್ಯಾಣ ಮತ್ತು ಸಾಮಾಜಿಕ ನ್ಯಾಯದಂತಹ ಸಚಿವಾಲಯಗಳ ಸ್ಥಾಯಿ ಸಮಿತಿ, ಸಲಹಾ ಸಮಿತಿ ಸದಸ್ಯರಾಗಿ ಕೆಲಸ ನಿರ್ವಹಿಸಿದರು. 2004ರಲ್ಲಿ ಸಾಗಣೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ರಾಜ್ಯ ಸಚಿವರಾಗಿದ್ದ ಅವರು 2009ರಲ್ಲಿ ರೈಲ್ವೇ ಸಚಿವರಾದರು. ಆನಂತರ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಕೋಲಾರದಲ್ಲಿ ಬಣ ರಾಜಕೀಯ
ಸಂಸತ್ ಚುನಾವಣೆಗಳಲ್ಲಿ ಸತತ ಗೆಲ್ಲುತ್ತಿದ್ದ ಮತ್ತು ಸಚಿವರಾಗಿದ್ದ ಕೆ.ಎಚ್. ಮುನಿಯಪ್ಪನವರು ಕೋಲಾರ ಜಿಲ್ಲೆಯ ರಾಜಕಾರಣದಲ್ಲಿ ಬಲವಾದ ಹಿಡಿತ ಹೊಂದಿದ್ದರು. ಜನತಾ ಪರಿವಾರದ ನಾಯಕರಾಗಿದ್ದ ಎಚ್.ಡಿ ದೇವೇಗೌಡ ಮತ್ತು ಸಿ. ಭೈರೇಗೌಡರ ಜೊತೆ ಹೊಂದಾಣಿಕೆ ರಾಜಕೀಯದ ಕಾರಣದಿಂದಲೇ ಅವರು ಸತತವಾಗಿ ಗೆಲ್ಲುತ್ತಾರೆ ಎಂಬ ಮಾತುಗಳಿದ್ದವು. ಆದರೆ 2003ರಲ್ಲಿ ಸಿ.ಭೈರೇಗೌಡರ ನಿಧನದ ನಂತರ ಅವರ ಪುತ್ರ ಕೃಷ್ಣಭೈರೇಗೌಡ, ಕೋಲಾರದ ಕೆ.ಶ್ರೀನಿವಾಸ್ಗೌಡ, ಶ್ರೀನಿವಾಸಪುರದ ಕೆ.ಆರ್ ರಮೇಶ್ ಕುಮಾರ್ ಸೇರಿ ಒಂದು ಬಣವಾದರು. ತಮ್ಮನ್ನು ಕಡೆಗಣಿಸಿ ಮೂಲ ಕಾಂಗ್ರೆಸ್ಸಿಗರಿಗೆ ಮಾತ್ರ ಮಣೆ ಹಾಕುತ್ತಾರೆ ಎಂಬ ಆರೋಪವನ್ನು ಮುನಿಯಪ್ಪ ಎದುರಿಸುತ್ತಿದ್ದರು. ಅದು ನಂತರ ಮೂಲ ಕಾಂಗ್ರೆಸ್ಸಿಗರು (ಮುನಿಯಪ್ಪ ಬಣ) ಮತ್ತು ವಲಸಿಗ ಕಾಂಗ್ರೆಸ್ಸಿಗರು (ರಮೇಶ್ ಕುಮಾರ್ ಬಣ) ಎಂಬ ಎರಡು ಬಣಗಳಾಗಲು ಕಾರಣವಾಯಿತು.
ಇದನ್ನೂ ಓದಿ: ಸಿದ್ದರಾಮಯ್ಯ ಹತ್ಯೆಗೆ ಕರೆ: ಮಾಜಿ ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಎಫ್ಐಆರ್
ಮೊದಲ ಸೋಲು
ಮುನಿಯಪ್ಪನವರು ಕೋಲಾರದಲ್ಲಿ ಅನ್ಯ ಪಕ್ಷಗಳ ಎಂಎಲ್ಎ ಅಭ್ಯರ್ಥಿಗಳಿಂದ ಲೋಕಸಭಾ ಚುನಾವಣೆಗಳಿಗೆ ಬೆಂಬಲ ಪಡೆದು, ನಂತರದ ವಿಧಾನಸಭಾ ಚುನಾವಣೆಯಲ್ಲಿ ಸ್ವಪಕ್ಷೀಯರ ವಿರುದ್ಧವೇ ಕೆಲಸ ಮಾಡುತ್ತಾರೆ ಎಂಬ ಆರೋಪ ಬಲವಾಗಿ ಕೇಳಿಬಂದಿತ್ತು. ಹಾಗಾಗಿ ಮುನಿಯಪ್ಪನವರ ಮೇಲೆ ಕೋಪಗೊಂಡಿದ್ದ ಜಿಲ್ಲೆಯ ಕಾಂಗ್ರೆಸ್ ಶಾಸಕರು 2019ರ ಲೋಕಸಭಾ ಚುನಾವಣೆಯಲ್ಲಿ ಅವರ ವಿರುದ್ಧ ಕೆಲಸ ಮಾಡಿದ ಪರಿಣಾಮ ಮುನಿಯಪ್ಪನವರು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಎದುರು ಸೋತರು. ಜಿಲ್ಲೆಯಲ್ಲಿನ ರಮೇಶ್ ಕುಮಾರ್ ಬಣವೇ ಅದಕ್ಕೆ ಕಾರಣ ಎಂದು ಕೋಪಿಸಿಕೊಂಡಿದ್ದ ಅವರು ಪಕ್ಷ ತೊರೆಯುವ ಸೂಚನೆ ಸಹ ನೀಡಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಅವರನ್ನು ಸಮಾಧಾನ ಮಾಡಿತ್ತು. ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರ ಮನವೊಲಿಸಿ ಕಾಂಗ್ರೆಸ್ನಲ್ಲಿ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದ್ದರು. ಅದರ ಫಲವಾಗಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ದೇವನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಕಂಡ ಅವರು ಸಿದ್ದರಾಮಯ್ಯನವರ ಸಂಪುಟದ ಭಾಗವಾಗಿದ್ದಾರೆ.

ಮುನಿಯಪ್ಪನವರು ಸಚಿವರಾಗುವ ಮೂಲಕ ದೇವನಹಳ್ಳಿ ತಾಲ್ಲೂಕಿಗೆ ಮೊದಲ ಬಾರಿಗೆ ಮಂತ್ರಿ ಸ್ಥಾನ ದಕ್ಕಿದಂತಾಗಿದೆ. ಕೆ.ಎಚ್. ಮುನಿಯಪ್ಪನವರು ಸಿ.ಎಂ ಸಿದ್ದರಾಮಯ್ಯನವರನ್ನು ಹೊರತುಪಡಿಸಿ ಸದ್ಯಕ್ಕೆ ಸಚಿವ ಸಂಪುಟದಲ್ಲಿನ ಹಿರಿಯ ಮಂತ್ರಿಯಾಗಿದ್ದಾರೆ.


