Homeಮುಖಪುಟಮಹಾರಾಷ್ಟ್ರ: ಮುಟ್ಟು ಪರೀಕ್ಷೆಗೆ 10 ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಶಾಲೆ; ಪ್ರಾಂಶುಪಾಲ, ಸಿಬ್ಬಂದಿ ಬಂಧನ

ಮಹಾರಾಷ್ಟ್ರ: ಮುಟ್ಟು ಪರೀಕ್ಷೆಗೆ 10 ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಶಾಲೆ; ಪ್ರಾಂಶುಪಾಲ, ಸಿಬ್ಬಂದಿ ಬಂಧನ

- Advertisement -
- Advertisement -

ಈ ಘಟನೆ ಮುಟ್ಟು ಕುರಿತು ಸಮಾಜದ ಕಾಯಿಲೆಯ ಪ್ರತಿಬಿಂಬ: ಪರಿಹಾರವೇನು?

ಥಾಣೆ, ಮಹಾರಾಷ್ಟ್ರ: ಶಾಲೆಯ ಶೌಚಾಲಯದಲ್ಲಿ ರಕ್ತದ ಕಲೆಗಳು ಕಂಡುಬಂದ ಕಾರಣಕ್ಕೆ, ಯಾರು ಋತುಮತಿಯಾಗಿದ್ದಾರೆಂದು ಪತ್ತೆಹಚ್ಚಲು ಸುಮಾರು 10 ವಿದ್ಯಾರ್ಥಿನಿಯರನ್ನು ಬಟ್ಟೆ ಬಿಚ್ಚಿಸಿ ಪರೀಕ್ಷೆ ನಡೆಸಿದ ಆಘಾತಕಾರಿ ಘಟನೆ ಥಾಣೆ ಜಿಲ್ಲೆಯ ಶಹಾಪುರದ ಆರ್.ಎಸ್. ದಮಾನಿ ಶಾಲೆಯಲ್ಲಿ ನಡೆದಿದೆ. ಈ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಶಾಲೆಯ ಪ್ರಾಂಶುಪಾಲ ಮತ್ತು ಮಹಿಳಾ ಸಿಬ್ಬಂದಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವಿವರ

ಮಂಗಳವಾರ ಶಾಲೆಯ ಶೌಚಾಲಯವೊಂದರಲ್ಲಿ ರಕ್ತದ ಕಲೆಗಳನ್ನು ಗಮನಿಸಿದ ಶಾಲಾ ಸಿಬ್ಬಂದಿ, ಈ ವಿಷಯವನ್ನು ಪ್ರಾಂಶುಪಾಲರು ಮತ್ತು ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ನಂತರ, 5 ರಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿನಿಯರನ್ನು ಶಾಲೆಯ ಸಭಾಂಗಣದಲ್ಲಿ ಒಟ್ಟುಗೂಡಿಸಲಾಗಿದೆ. ಅಲ್ಲಿ, ಶೌಚಾಲಯದಲ್ಲಿ ಕಂಡುಬಂದ ರಕ್ತದ ಕಲೆಗಳ ಚಿತ್ರಗಳನ್ನು ಪ್ರೊಜೆಕ್ಟರ್ ಮೂಲಕ ಪ್ರದರ್ಶಿಸಿ, ಯಾರು ಋತುಮತಿಯಾಗಿದ್ದೀರೆಂದು ಸ್ವಯಂಪ್ರೇರಿತವಾಗಿ ಮುಂದೆ ಬರುವಂತೆ ಸೂಚಿಸಲಾಗಿದೆ.

ಕೆಲವು ವಿದ್ಯಾರ್ಥಿನಿಯರು ತಾವು ಋತುಮತಿಯಾಗಿರುವುದಾಗಿ ಒಪ್ಪಿಕೊಂಡಾಗ, ಅವರಿಂದ ಹೆಬ್ಬೆಟ್ಟಿನ ಗುರುತು ಪಡೆಯಲಾಗಿದೆ. ಉಳಿದ ವಿದ್ಯಾರ್ಥಿನಿಯರನ್ನು ಶೌಚಾಲಯಕ್ಕೆ ಕರೆದೊಯ್ದು, ಮಹಿಳಾ ಸಿಬ್ಬಂದಿಯೊಬ್ಬರ ಮೇಲ್ವಿಚಾರಣೆಯಲ್ಲಿ ಬಟ್ಟೆ ಬಿಚ್ಚಿಸಿ ದೈಹಿಕವಾಗಿ ಪರೀಕ್ಷಿಸಲಾಗಿದೆ. 10 ರಿಂದ 12 ವರ್ಷದೊಳಗಿನ ವಿದ್ಯಾರ್ಥಿನಿಯರ ಒಳಉಡುಪುಗಳನ್ನು ಮುಟ್ಟಿ ಪರೀಕ್ಷಿಸುವಂತೆ ಪ್ರಾಂಶುಪಾಲರು ಮಹಿಳಾ ಸಿಬ್ಬಂದಿಗೆ ಸೂಚಿಸಿದ್ದರು ಎಂದು ಆರೋಪಿಸಲಾಗಿದೆ.

ಈ ವೇಳೆ, ವಿದ್ಯಾರ್ಥಿನಿಯೊಬ್ಬಳು ಸ್ಯಾನಿಟರಿ ಪ್ಯಾಡ್ ಧರಿಸಿದ್ದು ಕಂಡುಬಂದಿದೆ. ಆಗ ಪ್ರಾಂಶುಪಾಲರು, “ನೀನು ಋತುಮತಿಯಾಗಿಲ್ಲದಿದ್ದರೂ ಸ್ಯಾನಿಟರಿ ಪ್ಯಾಡ್ ಏಕೆ ಧರಿಸಿದ್ದೀಯ?” ಎಂದು ಗದರಿಸಿ, ಆಕೆಯನ್ನು ಸುಳ್ಳುಗಾರ್ತಿ ಎಂದು ನಿಂದಿಸಿ, ಬಲವಂತವಾಗಿ ಹೆಬ್ಬೆಟ್ಟಿನ ಗುರುತು ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಘಟನೆಯಿಂದ ವಿದ್ಯಾರ್ಥಿನಿಯು ಶಿಕ್ಷಕರು ಮತ್ತು ಇತರ ವಿದ್ಯಾರ್ಥಿಗಳಿಂದ ಅಪಮಾನಕ್ಕೊಳಗಾಗಿದ್ದಾಳೆ.

ಪೋಷಕರ ಆಕ್ರೋಶ ಮತ್ತು ಪೊಲೀಸ್ ಕ್ರಮ

ಈ ಆಘಾತಕಾರಿ ಘಟನೆಯಿಂದ ಮಾನಸಿಕವಾಗಿ ನೊಂದ ವಿದ್ಯಾರ್ಥಿನಿಯರು ಮನೆಗೆ ತೆರಳಿ ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಮರುದಿನ ಶಾಲೆಗೆ ಬಂದ ಪೋಷಕರು, ಶಾಲಾ ಆಡಳಿತ ಮಂಡಳಿಯ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಇದು ಶಾಲಾ ಆವರಣದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಯಿತು.

ಪೋಷಕರೊಬ್ಬರು ನೀಡಿದ ದೂರಿನ ಅನ್ವಯ, ಶಹಾಪುರ ಪೊಲೀಸರು ಶಾಲೆಯ ಪ್ರಾಂಶುಪಾಲ, ನಾಲ್ವರು ಶಿಕ್ಷಕರು, ಓರ್ವ ಮಹಿಳಾ ಸಿಬ್ಬಂದಿ ಹಾಗೂ ಇಬ್ಬರು ಟ್ರಸ್ಟಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 74 (ಮಹಿಳೆಯ ಮಾನಭಂಗ ಮಾಡುವ ಉದ್ದೇಶದಿಂದ ಹಲ್ಲೆ) ಮತ್ತು ಸೆಕ್ಷನ್ 76 (ಮಹಿಳೆಯನ್ನು ವಿವಸ್ತ್ರಗೊಳಿಸುವ ಉದ್ದೇಶದಿಂದ ಹಲ್ಲೆ) ಹಾಗೂ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಂಶುಪಾಲ ಮತ್ತು ಮಹಿಳಾ ಸಿಬ್ಬಂದಿಯನ್ನು ಬುಧವಾರ ಬಂಧಿಸಲಾಗಿದ್ದು, ಅವರನ್ನು ಇಂದು (ಗುರುವಾರ) ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಥಾಣೆ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.

ಸದ್ಯಕ್ಕೆ ನಾವು ಹೇಳಿಕೆಗಳನ್ನು ಸಂಗ್ರಹಿಸುತ್ತಿದ್ದೇವೆ ಮತ್ತು ಘಟನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದೇವೆ. ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಥಾಣೆ ಗ್ರಾಮಾಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಝಾಲ್ಟೆ ಹೇಳಿದ್ದಾರೆ.

ಥಾಣೆ ಘಟನೆ ಮುಟ್ಟಿನ ಬಗೆಗಿನ ನಮ್ಮ ಸಮಾಜದ ಕಾಯಿಲೆಯ ಪ್ರತಿಬಿಂಬ!

ಮಹಾರಾಷ್ಟ್ರದ ಥಾಣೆಯ ಶಾಲೆಯಲ್ಲಿ ನಡೆದ ವಿದ್ಯಾರ್ಥಿನಿಯರ ವಿವಸ್ತ್ರೀಕರಣ ಘಟನೆಯನ್ನು ಕೇವಲ ಒಂದು ಸ್ಥಳೀಯ ಅಪರಾಧವೆಂದು ಪರಿಗಣಿಸಿದರೆ ಅದು ನಮ್ಮ ದೊಡ್ಡ ತಪ್ಪಾಗುತ್ತದೆ. ವಾಸ್ತವದಲ್ಲಿ, ಇದು ನಮ್ಮ ಸಮಾಜದಲ್ಲಿ ಮುಟ್ಟಿನ (ಋತುಚಕ್ರ) ಬಗ್ಗೆ ಆಳವಾಗಿ ಬೇರೂರಿರುವ ಅಜ್ಞಾನ, ಮೂಢನಂಬಿಕೆ, ಮತ್ತು ಮಹಿಳಾ ವಿರೋಧಿ ಮನಸ್ಥಿತಿಯಾಗಿದೆ.

ಸಮಸ್ಯೆಯ ಮೂಲ ಎಲ್ಲಿದೆ?

ಋತುಚಕ್ರವು ಮಹಿಳೆಯ ದೇಹದಲ್ಲಿ ನಡೆಯುವ ಒಂದು ಸಹಜ ಮತ್ತು ಆರೋಗ್ಯಕರ ಜೈವಿಕ ಪ್ರಕ್ರಿಯೆ. ಆದರೆ ನಮ್ಮ ಸಮಾಜದಲ್ಲಿ ಅದನ್ನು ‘ಅಶುದ್ಧ’, ‘ಮೈಲಿಗೆ’ ಮತ್ತು ಮುಚ್ಚಿಡಬೇಕಾದ ವಿಚಾರವೆಂದು ಬಿಂಬಿಸಲಾಗಿದೆ. ಶಾಲೆಯ ಶೌಚಾಲಯದಲ್ಲಿ ರಕ್ತದ ಕಲೆ ಕಂಡಾಗ, ಅದನ್ನು ನೈರ್ಮಲ್ಯದ ಸಮಸ್ಯೆಯಾಗಿ ನೋಡುವ ಬದಲು, ಒಂದು ‘ಅಪರಾಧ’ ಎಂಬಂತೆ ನೋಡಿ, ‘ಅಪರಾಧಿ’ಯನ್ನು ಪತ್ತೆಹಚ್ಚಲು ಹೊರಟಿದ್ದೇ ಈ ಮನಸ್ಥಿತಿಯ ಫಲವಾಗಿದೆ.

ವಿಜ್ಞಾನವನ್ನು ಬೋಧಿಸಬೇಕಾದ ಶಾಲೆಯಲ್ಲೇ ಇಂತಹ ಅವೈಜ್ಞಾನಿಕ ಮತ್ತು ಅಮಾನವೀಯ ಘಟನೆ ನಡೆದಿದೆ ಎಂದರೆ, ನಮ್ಮ ಶಿಕ್ಷಣ ವ್ಯವಸ್ಥೆ ಎಲ್ಲಿ ಎಡವುತ್ತಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಲೈಂಗಿಕ ಶಿಕ್ಷಣ ಮತ್ತು ಮುಟ್ಟಿನ ಕುರಿತ ಆರೋಗ್ಯಕರ ಚರ್ಚೆಗಳು ಪಠ್ಯಕ್ರಮದ ಭಾಗವಾಗಿದ್ದರೂ, ಶಿಕ್ಷಕರಿಗೇ ಈ ಕುರಿತು ಸರಿಯಾದ ಜ್ಞಾನ ಇಲ್ಲದಿರುವುದು ಈ ಘಟನೆಯಿಂದ ಸ್ಪಷ್ಟವಾಗುತ್ತದೆ.

ಈ ಘಟನೆಯಲ್ಲಿ ಪ್ರಾಂಶುಪಾಲ ಮತ್ತು ಶಿಕ್ಷಕರು ತಮ್ಮ ಅಧಿಕಾರವನ್ನು ಬಳಸಿ, ಮಕ್ಕಳ ಮೇಲೆ ನಡೆಸಿದ ಈ ದೌರ್ಜನ್ಯವು ಪೋಕ್ಸೋ ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ. ಪೋಕ್ಸೋ ಕಾಯ್ದೆಯು ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸಲು ಇರುವ ಅತ್ಯಂತ ಕಠಿಣ ಕಾನೂನು ಆಗಿದೆ. ಮಕ್ಕಳ ಖಾಸಗಿತನವನ್ನು ಗೌರವಿಸುವುದು, ಅವರ ಘನತೆಗೆ ಧಕ್ಕೆ ತರದಂತೆ ನೋಡಿಕೊಳ್ಳುವುದು ಶಾಲೆಯ ಪ್ರಮುಖ ಜವಾಬ್ದಾರಿ. ಇಲ್ಲಿ ಆ ಜವಾಬ್ದಾರಿಯ ಸಂಪೂರ್ಣ ಉಲ್ಲಂಘನೆಯಾಗಿದೆ.

ಮುಂದೇನು?

ಆರೋಪಿಗಳ ಬಂಧನ ಮತ್ತು ಅವರಿಗೆ ಕಠಿಣ ಶಿಕ್ಷೆಯಾಗುವುದು ಕಾನೂನು ಪ್ರಕ್ರಿಯೆಯ ಒಂದು ಭಾಗವಷ್ಟೇ ಆಗಿದೆ. ಆದರೆ, ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಈ ಕೆಳಗಿನ ಕ್ರಮಗಳು ಅಗತ್ಯವಾಗಿದೆ.

ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಠ್ಯಕ್ರಮದ ಕಲಿಕೆಯಷ್ಟೇ ಮುಖ್ಯವಾಗಿ, ಮಾನಸಿಕ, ದೈಹಿಕ ಮತ್ತು ಸಾಮಾಜಿಕ ಅಂಶಗಳ ಬಗ್ಗೆ ಅರಿವು ಮೂಡಿಸುವುದು ಅತಿ ಅವಶ್ಯಕ. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಕರಿಗೆ ಮತ್ತು ಸಿಬ್ಬಂದಿಗೆ ಲಿಂಗ ಸಂವೇದನೆ ಮತ್ತು ಮುಟ್ಟಿನ ನೈರ್ಮಲ್ಯ (ಸ್ಯಾನಿಟರ್ ಪ್ಯಾಡ್‌) ನಿರ್ವಹಣೆ ಕುರಿತು ಕಡ್ಡಾಯವಾಗಿ ತರಬೇತಿ ನೀಡುವುದು ಅಗತ್ಯವಾಗಿದೆ.

ಈ ತರಬೇತಿಯು ಕೇವಲ ಮಾಹಿತಿ ನೀಡುವ ಕಾರ್ಯಕ್ರಮವಾಗಿರದೆ, ಶಿಕ್ಷಕರಲ್ಲಿ ಮತ್ತು ಸಿಬ್ಬಂದಿಯಲ್ಲಿ ಲಿಂಗ ಸಮಾನತೆ ಮತ್ತು ಮುಟ್ಟಿನ ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ತಿಳುವಳಿಕೆ ಮತ್ತು ಸಂವೇದನೆಯನ್ನು ಬೆಳೆಸುವ ಗುರಿ ಹೊಂದಿರಬೇಕು. ಲಿಂಗದ ಆಧಾರದ ಮೇಲೆ ಸಮಾಜದಲ್ಲಿ ಹಾಸುಹೊಕ್ಕಾಗಿರುವ ತಪ್ಪು ಕಲ್ಪನೆಗಳನ್ನು ನಿವಾರಿಸುವ ವಿಧಾನಗಳ ಬಗ್ಗೆ ಶಿಕ್ಷಕರಿಗೆ ಅರಿವು ಮೂಡಿಸುವುದು. ಮುಟ್ಟಿನ ಶಾರೀರಿಕ ಪ್ರಕ್ರಿಯೆ, ಶುಚಿತ್ವದ ಮಹತ್ವ, ಲಭ್ಯವಿರುವ ನೈರ್ಮಲ್ಯ ಉತ್ಪನ್ನಗಳು (ಸ್ಯಾನಿಟರಿ ಪ್ಯಾಡ್‌ಗಳು) ಮತ್ತು ಅವುಗಳ ಸರಿಯಾದ ವಿಲೇವಾರಿ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸುವುದು. ತುರ್ತು ಸಂದರ್ಭಗಳಲ್ಲಿ ವಿದ್ಯಾರ್ಥಿನಿಯರಿಗೆ ನೆರವಾಗುವ ವಿಧಾನಗಳ ಬಗ್ಗೆಯೂ ತಿಳಿಸುವಂತಹ ತರಬೇತಿಯನ್ನು ನೀಡಬೇಕಿದೆ.

ಶಾಲೆಗಳು ಕೇವಲ ಪಾಠ ಹೇಳುವ ಕೇಂದ್ರಗಳಾಗಿರದೆ, ವಿದ್ಯಾರ್ಥಿಗಳು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಮುಕ್ತವಾಗಿ ಚರ್ಚಿಸಲು, ಪ್ರಶ್ನೆ ಕೇಳುವ ಸುರಕ್ಷಿತ ಸ್ಥಳಗಳಾಗಿ ರೂಪುಗೊಳ್ಳಬೇಕು. ಮುಟ್ಟಿನ ಬಗ್ಗೆ ತಜ್ಞರು, ವೈದ್ಯರು ಅಥವಾ ನುರಿತ ಶಿಕ್ಷಕರಿಂದ ನಿಯಮಿತವಾಗಿ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ವಿಜ್ಞಾನ ಮತ್ತು ಆರೋಗ್ಯ ಶಿಕ್ಷಣ ಪಠ್ಯಕ್ರಮದಲ್ಲಿ ಮುಟ್ಟಿನ ನೈರ್ಮಲ್ಯ ಮತ್ತು ಲಿಂಗ ಸಂವೇದನಾ ವಿಷಯಗಳನ್ನು ಸಮಗ್ರವಾಗಿ ಸೇರಿಸಬೇಕು.

ಶಾಲೆಯಲ್ಲಿ ಮುಟ್ಟಿಗೆ ಸಂಬಂಧಿಸಿದ ತಮಾಷೆ ಅಥವಾ ಅವಮಾನವನ್ನು ನಿಷೇಧಿಸಬೇಕು. ಸ್ವಚ್ಛ ಮತ್ತು ಸುಲಭವಾಗಿ ಲಭ್ಯವಿರುವ ಶೌಚಾಲಯಗಳು, ಮುಟ್ಟಿನ ನೈರ್ಮಲ್ಯ ಉತ್ಪನ್ನ(ಸ್ಯಾನಿಟರಿ ಪ್ಯಾಡ್‌ಗಳು)ಗಳು ಮತ್ತು ಅವುಗಳ ವಿಲೇವಾರಿಗೆ ಸೂಕ್ತ ವ್ಯವಸ್ಥೆಗಳನ್ನು ಶಾಲೆಗಳಲ್ಲಿ ಕಡ್ಡಾಯವಾಗಿ ಒದಗಿಸಬೇಕು.

ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸಲು ಇರುವ ಪೋಕ್ಸೋ (POCSO – Protection of Children from Sexual Offences) ಕಾಯ್ದೆ-2012 ಕುರಿತು ಮಕ್ಕಳಿಗೆ ಸಂಪೂರ್ಣ ಅರಿವು ಮೂಡಿಸಬೇಕಾಗಿದೆ. ತಮ್ಮ ಹಕ್ಕುಗಳ ಕುರಿತು ಮತ್ತು ದೌರ್ಜನ್ಯ ನಡೆದಾಗ ಯಾರಿಗೆ ಮತ್ತು ಹೇಗೆ ದೂರು ನೀಡಬೇಕು ಎಂಬುದರ ಬಗ್ಗೆ ಮಕ್ಕಳಿಗೆ ಸ್ಪಷ್ಟವಾಗಿ ತಿಳಿಸಬೇಕು.

ಪೋಕ್ಸೋ ಕಾಯ್ದೆಯು ಜಟಿಲವಾದ ಕಾನೂನು ಭಾಷೆಯಲ್ಲಿದೆ. ಇದನ್ನು ಮಕ್ಕಳಿಗೆ ಅರ್ಥವಾಗುವ ಸರಳ ಭಾಷೆ, ಕಥೆಗಳು, ಚಿತ್ರಗಳು ಮತ್ತು ಸಣ್ಣ ನಾಟಕಗಳ ಮೂಲಕ ವಿವರಿಸಬೇಕು.

ಶಾಲೆಯಲ್ಲಿ ಯಾರನ್ನು ವಿಶ್ವಾಸದಿಂದ ಸಂಪರ್ಕಿಸಬಹುದು (ಉದಾ: ಪ್ರಾಂಶುಪಾಲರು, ಶಿಕ್ಷಕರು, ಸಲಹೆಗಾರರು) ಎಂಬ ಬಗ್ಗೆ ಮಕ್ಕಳಿಗೆ ತಿಳಿಸಬೇಕು. ಮಕ್ಕಳ ಸಹಾಯವಾಣಿ 1098ರ ಬಗ್ಗೆಯೂ ಮಾಹಿತಿ ನೀಡಬೇಕು. ದೂರು ನೀಡಿದಾಗ ಮಕ್ಕಳ ಗೌಪ್ಯತೆಯನ್ನು ಖಚಿತಪಡಿಸಲಾಗುವುದು ಎಂಬ ಭರವಸೆಯನ್ನು ನೀಡಬೇಕು.

ಈ ಪ್ರಮುಖ ಅಂಶಗಳನ್ನು ಶಾಲಾ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳುವ ಮೂಲಕ, ವಿದ್ಯಾರ್ಥಿಗಳಿಗೆ ಹೆಚ್ಚು ಸುರಕ್ಷಿತ, ಸಮಾನತೆ ಆಧಾರಿತ ಮತ್ತು ವೈಜ್ಞಾನಿಕ ಚಿಂತನೆಯ ವಾತಾವರಣವನ್ನು ನಿರ್ಮಿಸಲು ಸಾಧ್ಯ. ಇದು ಮಕ್ಕಳ ಒಟ್ಟಾರೆ ಬೆಳವಣಿಗೆಗೆ ಮತ್ತು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕುತ್ತದೆ.

ಸೌಜನ್ಯ ಪ್ರಕರಣ| ಹೈಕೋರ್ಟ್ ನ್ಯಾಯಮೂರ್ತಿ ದೇವದಾಸ್ ವಾಗ್ದಂಡನೆಗೆ ಒತ್ತಾಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...

ಬುರ್ಖಾ ಧರಿಸದ ಕಾರಣಕ್ಕೆ ಪತ್ನಿ-ಮಕ್ಕಳ ಕೊಲೆ; ಮನೆಯೊಳಗೆ ಹೂತುಹಾಕಿದ ವ್ಯಕ್ತಿ

ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಘೋರ ಘಟನೆಯಿಂದು ವರದಿಯಾಗಿದೆ, ತನ್ನ ಪತ್ನಿ ಮತ್ತು ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳನ್ನು ತ್ರಿವಳಿ ಕೊಲೆ ಮಾಡಿದ ಆರೋಪದ ಮೇಲೆ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿ ಫಾರೂಕ್ ಎಂದು...

ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ವಿಶೇಷ ಕಾರ್ಯಾಚರಣೆ: ಮೊಬೈಲ್ ಫೋನ್, ಗಾಂಜಾ ವಶ: ಡಿಜಿಪಿ ಅಲೋಕ್ ಕುಮಾರ್

ಕರ್ನಾಟಕದ ಕಾರಾಗೃಹಗಳಲ್ಲಿ 36 ಗಂಟೆಗಳ ಕಾಲ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಗಳು, ಚಾಕುಗಳು ಮತ್ತು ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಿದ್ದುಪಡಿ ಸೌಲಭ್ಯಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು...