Homeಅಂಕಣಗಳುದಮನಿತರಿಗೆ ಶಿಕ್ಷಣಕ್ರಮ ಹೇಗಿರಬೇಕು?: ಪಾಲೊ ಫ್ರೇರಿಯ 'ಪೆಡಗಾಗಿ ಆಫ್ ದಿ ಅಪ್ರೆಸ್ಡ್'

ದಮನಿತರಿಗೆ ಶಿಕ್ಷಣಕ್ರಮ ಹೇಗಿರಬೇಕು?: ಪಾಲೊ ಫ್ರೇರಿಯ ‘ಪೆಡಗಾಗಿ ಆಫ್ ದಿ ಅಪ್ರೆಸ್ಡ್’

ಶಿಕ್ಷಣದ ಮೂಲಕವೇ ವ್ಯಕ್ತಿಯು ತಾರ್ಕಿಕವಾಗಿ, ಬೌದ್ಧಿಕವಾಗಿ ತನ್ನ ಬಿಡುಗಡೆಯ ದಾರಿಯನ್ನು ತುಳಿಯಬೇಕಾಗಿರುವ ಅಗತ್ಯತೆಯನ್ನು ಫ್ರೇರಿ ಈ ಪುಸ್ತಕದಲ್ಲಿ ಒತ್ತಿ ಹೇಳುತ್ತಾರೆ.

- Advertisement -
- Advertisement -

ಯಾವ ಶಿಕ್ಷಣ ವ್ಯವಸ್ಥೆಯು ವ್ಯಕ್ತಿಗಳನ್ನು ಪೋಷಿಸುವ ಬದಲು ಶೋಷಿಸುತ್ತದೆಯೋ, ಪ್ರೇರೇಪಿಸುವ ಬದಲು ಪಳಗಿಸುತ್ತದೆಯೋ, ಸಶಕ್ತಗೊಳಿಸುವ ಬದಲು ದುರ್ಬಲಗೊಳಿಸುತ್ತದೆಯೋ ಆಗ ಯಾವುದೋ ಒಂದು ವರ್ಗದ ಹಿತಾಸಕ್ತಿ ಮಾತ್ರ ಸಮಾಜದಲ್ಲಿ ಶಿಕ್ಷಣದ ಮೇಲೆ ತನ್ನ ಅಧಿಪತ್ಯವನ್ನು ಸಾಧಿಸುತ್ತಿದೆ ಎಂದು ತಿಳಿಯಬೇಕು.

ಕಾರ್ಲ್ ಮಾರ್ಕ್ಸ್ ಒಂದೆಡೆ ದಾಖಲಿಸುವಂತೆ ‘ಆಳುವ ವರ್ಗದ ವಿಚಾರಗಳು ಆಳುವ ವಿಚಾರಗಳ ಸಮಯವನ್ನೇ ಸದಾ ಜೀವಂತವಾಗಿರಿಸಲು ಯತ್ನಿಸುತ್ತದೆ. ಅಂದರೆ, ಸಮಾಜವನ್ನು ಆಳುವ ಶಕ್ತಿಯಾಗಿರುವಂತ ವರ್ಗವು ತನ್ನದೇ ಬೌದ್ಧಿಕತೆಯನ್ನು ಜ್ಞಾನವನ್ನಾಗಿ ಮುಂದಿಡುತ್ತದೆ’ ಎನ್ನುತ್ತಾರೆ.

ಆಳುವ ವ್ಯವಸ್ಥೆಯು ತನಗೆ ಅನುಕೂಲಕರವಾದ ವಿಚಾರಗಳನ್ನೇ ಶಿಕ್ಷಣದ ಮುಖವಾಡದಲ್ಲಿ ಶಾಲೆಗಳಲ್ಲಿ ತರಬೇತಿ ನೀಡುವುದು. ಶಾಲೆಯಲ್ಲಿ ಕಲಿಕೆ ಎಂಬುದು ರಾಜಕೀಯ ವ್ಯವಸ್ಥೆಯ ಉದ್ದೇಶಪೂರ್ವಕವಾದ ಸಾಮಾಜಿಕ ತರಬೇತಿಯಾಗಿರುತ್ತದೆ. ರಾಜಕೀಯ ವ್ಯವಸ್ಥೆಯ ಸೂತ್ರವನ್ನು ಹಿಡಿದಿರುವ ವರ್ಗವು ತನಗೆ ಅನುಕೂಲಕರವಾದಂತಹ ಸಾಂಸ್ಕೃತಿಕ ಮತ್ತು ಸಾಮಾಜಿಕ ಉತ್ಪನ್ನಗಳನ್ನು ತಯಾರಿಸುವಂತಹ ಕಾರ್ಖಾನೆ ಈ ಶಾಲೆಗಳಾಗುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ವ್ಯಕ್ತಿಗಳಿಗೆ ಶಿಕ್ಷಣ ನೀಡುವ ಮೂಲಕ ಅವರ ಮನಸ್ಸು ಮತ್ತು ವರ್ತನೆಗಳನ್ನು ಪಳಗಿಸುತ್ತಾ ಇಡೀ ಸಮಾಜವನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳುವುದು. ಹೀಗೆ ವ್ಯಕ್ತಿಗಳ ಮೂಲಕ ಇಡೀ ಸಮಾಜವನ್ನು ಕೊಲ್ಲುವ ಯಂತ್ರವಾಗುವ ಈ ಶಿಕ್ಷಣವ್ಯವಸ್ಥೆಯು ಸಮಸಮಾಜದ ವಿರುದ್ಧವಾಗಿ ಪಿತೂರಿಯನ್ನು ಹೂಡುತ್ತದೆ.

ಫ್ರೇರಿ ಇಂತಹ ಪಿತೂರಿಯನ್ನು ಗಮನದಲ್ಲಿಟ್ಟುಕೊಂಡು Pedagogy of the Oppressed ಕೃತಿ ರಚನೆ ಮಾಡುತ್ತಾರೆ. ಅದರಲ್ಲಿ ಮುಕ್ತವಾದ ಮತ್ತು ಪ್ರಾಮಾಣಿಕವಾದ ಸಂವಾದ ನಡೆಸಲು ಸಾಧ್ಯತೆಯ ಶಿಕ್ಷಣವನ್ನು ಬಯಸುತ್ತಾರೆ. ಒತ್ತಡಕ್ಕೊಳಗಾಗಿ ದಮನಿತರಾಗುವ ಬದಲು ವ್ಯಕ್ತಿ, ಸಮುದಾಯಗಳು ಮತ್ತು ಸಮಾಜವು ಸ್ವಾತಂತ್ರ್ಯವನ್ನು ಪಡೆಯುವ ಗುರಿಯನ್ನು ಈ ಪರ್ಯಾಯ ಬೋಧನಾಕ್ರಮ ಅಥವಾ ಶಿಕ್ಷಣ ವ್ಯವಸ್ಥೆಯಲ್ಲಿ ಮುಂದಿಡುತ್ತಾರೆ.

ಕೃತಿಯು ಬೌದ್ಧಿಕವಾಗಿ ಕ್ರಾಂತಿಕಾರಕ ವಿಷಯಗಳನ್ನು ಒಳಗೊಂಡಿದೆ ಎನ್ನುವುದಕ್ಕಿಂತ, 1960ರಲ್ಲಿ ದಕ್ಷಿಣ ಅಮೆರಿಕೆಯ ವಯಸ್ಕ ರೈತರಿಗೆ ಫ್ರೇರಿ ತಾವೇ ಪಾಠ ಮಾಡುವ ಅನುಭವದಲ್ಲಿ ಕಂಡುಕೊಂಡ ವಿಷಯಗಳಿವು. ಸಮಸ್ಯೆ ಮತ್ತು ಪರಿಹಾರಗಳನ್ನು ಕೃತಿಯಲ್ಲಿ ತರ್ಕಿಸುತ್ತಾರೆ.

ಕಾರ್ಲ್ ಮಾರ್ಕ್ಸ್ ಅವರ ಸಮಾಜವಾದ ಮತ್ತು ಬೈಬಲ್ಲಿನಲ್ಲಿರುವ ಬಿಡುಗಡೆಯ ಪ್ರಧಾನವಾದ ತಾತ್ವಿಕ ಅಂಶಗಳು ಹದವಾಗಿ ಬೆರೆಯುತ್ತಾ ತನ್ನ ವಿಚಾರಗಳನ್ನು ಸಂವಾದಿಸುತ್ತದೆ.

ಜಗತ್ತಿನ ಯಾವುದೇ ಮೂಲೆಯಲ್ಲಿ ದಮನಿತರು ಅವರ ದೇಶ, ಧರ್ಮ, ಸಂಸ್ಕೃತಿಗಳನ್ನು ಮೀರಿ ಬರಿಯ ಶೋಷಿತ ಜೀವಿಗಳಷ್ಟೇ ಆಗಿರುತ್ತಾರೆ. ಅವರನ್ನು ಆ ಭೌಗೋಳಿಕ ಪ್ರದೇಶದಲ್ಲಿ ದಮನಿಸಲು ಜನಾಂಗವನ್ನೋ, ವರ್ಣವನ್ನೋ, ವರ್ಗವನ್ನೋ, ಧರ್ಮವನ್ನೋ, ಸಂಸ್ಕೃತಿಯನ್ನೋ, ಜಾತಿಯನ್ನೋ ಕಾರಣವಾಗಿಸಿಕೊಳ್ಳಬಹುದು. ಆದರೆ, ಪರಿಣಾಮ ಮಾತ್ರ ಶೋಷಿತರ ನೋವು, ಸ್ವಾತಂತ್ರ್ಯಹರಣ, ಅಸಮಾನತೆಯ ಕಾರಣದ ಸಂಘರ್ಷ. ಹಾಗಾಗಿ ಯಾವುದೇ ದೇಶದಲ್ಲಿ ನಡೆಯುವ ದಮನಿತರ ಪರವಾದ ಹೋರಾಟಗಳು, ಸಿದ್ಧಾಂತಗಳು, ಪ್ರೇರಣೆಗಳು ಮತ್ತಿನ್ನಾವುದೇ ಜಗತ್ತಿನ ಮೂಲೆಗೆ ಅನ್ವಯವಾಗಬಹುದು. ಕಮ್ಯುನಿಸ್ಟರ ಸಿದ್ಧಾಂತಗಳು, ಫ್ರೆಂಚರ ಕ್ರಾಂತಿ, ಅಮೆರಿಕೆಯ ವರ್ಣಭೇದ ನೀತಿಯ ವಿರುದ್ಧದ ಹೋರಾಟ ನಮ್ಮ ಭಾರತಕ್ಕೆ ಹೊಂದುವುದಿಲ್ಲ ಎನ್ನಲಾಗದು. ಯಾವುದೇ ಜೀವಪರವಾಗಿರುವ ಮತ್ತು ಸಮಾಜಮುಖಿಯಾಗಿರುವ ಹೋರಾಟಗಳು ಮತ್ತು ಸಿದ್ಧಾಂತಗಳು ಪ್ರೇರಣೆಗಳನ್ನು ನೀಡಲು ಸಾಧ್ಯ. ಪರಿಕರಗಳು, ಸಂಗತಿಗಳು ಮತ್ತು ಸನ್ನಿವೇಶಗಳಷ್ಟೇ ಬೇರೆ ಇರುತ್ತವೆ. ಆದರೆ ಆಶಯ ಜೀವಪರವಾದ ಮತ್ತು ಸಮಸಮಾಜಕ್ಕೆ ಮಿಡಿಯುವಂತದ್ದೇ ಆಗಿರುತ್ತದೆ.

ಫ್ರೇರಿ ಬಹಳ ನಾಜೂಕಾಗಿ ವಿಜ್ಞಾನದ ಸಂಸ್ಕೃತಿ ಮತ್ತು ಬಿಡುಗಡೆಯ ಭೀತಿಯನ್ನು ಮುನ್ನೆಲೆಗೆ ತರುತ್ತಾ ದಮನಿತರು ಎಂದರೆ ಯಾರು? ಅವರಿಗೆ ತಾವು ದಮನಿತರು ಎಂದು ಏಕೆ ತಿಳಿಯುವುದಿಲ್ಲ ಅಥವಾ ತಿಳಿದರೂ ‘ಇದೇ ನಮ್ಮ ಹಣೆಬರಹ’ ಎಂಬಂತೆ ಯಥಾಸ್ಥಿತಿಯನ್ನು ಒಪ್ಪಿಕೊಂಡು ಏಕೆ ಮೂಲೆಗೆ ಸೇರುತ್ತಾರೆ ಎಂಬುದನ್ನು ವಿವರಿಸುತ್ತಾರೆ. ತಾರ್ಕಿಕ ಸಾಮರ್ಥ್ಯ ಮತ್ತು ಸಂವಾದಶೀಲ ಶಿಕ್ಷಣವು ‘ಮುಕ್ತತೆಯನ್ನು ತರಬೇತುಗೊಳಿಸುವ’ ಸಾಧನವಾಗಿದೆ ಎಂದು ಬಲವಾಗಿ ಸಮರ್ಥಿಸುತ್ತಾರೆ. ತಾರ್ಕಿಕ ಸಾಮರ್ಥ್ಯದಿಂದ ಶೂನ್ಯವಾಗಿರುವ ಶಿಕ್ಷಣವನ್ನು ಪಡೆಯುವುದರಿಂದ ಬರಿಯ ಧಾರ್ಮಿಕ ಮೌಢ್ಯವನ್ನಷ್ಟೇ ಅಲ್ಲದೇ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯಗಳಲ್ಲಿಯೂ ವ್ಯಕ್ತಿಗಳು ಮತ್ತು ಸಮುದಾಯಗಳು ಮೂಢರಾಗುತ್ತಾರೆ. ಹೇರಿದ್ದನ್ನು ಹೊರುತ್ತಾರೆ. ಹಾಗಾಗಿ ಜನರಲ್ಲಿ ಜಾಗೃತಿಯನ್ನು ಉಂಟುಮಾಡುವುದು ಚಿಂತಕರ ಕೆಲಸ, ಬುದ್ಧಿಜೀವಿಗಳ ಜವಾಬ್ದಾರಿ.

ಬುದ್ಧಿಜೀವಿ ಎಂದರೆ, ಒಂದು ವಿಷಯವನ್ನು ಏಕಪ್ರಕಾರವಾಗಿ ಪ್ರಸ್ತುತಪಡಿಸುವ ಅಥವಾ ಸಾಂಪ್ರದಾಯಿಕ ಮಂಡನೆಯ ಆಯಾಮಗಳ ಹೊರತಾಗಿ ಇತರ ಆಯಾಮಗಳಿಂದ ತಾರ್ಕಿಕವಾಗಿ ಯೋಚಿಸಬಲ್ಲವನು. ಹೊರಿಸಿದ್ದನ್ನು ಹೊತ್ತು ಸಾಗುವ ಬದಲಿಗೆ ಕಾರಣ, ಪರಿಣಾಮ, ಇತಿಹಾಸ ಮತ್ತು ದೂರದೃಷ್ಟಿಗಳೆಲ್ಲದರ ಮೂಸೆಯಲ್ಲಿ ಸಂಗತಿಯನ್ನು ಬೇಯಿಸುವವನು. ಬುದ್ಧಿಜೀವಿಯ ಗುರುತರವಾದ ಈ ಜವಾಬ್ದಾರಿಯನ್ನು ಅವನು ನಿಭಾಯಿಸಲು ಯಥಾಸ್ಥಿತಿವಾದಿಗಳು ಮತ್ತು ಸಂಪ್ರದಾಯಸ್ಥರು ಬಿಡುವುದಿಲ್ಲ. ಏಕೆಂದರೆ ಅವರ ವರ್ಗಾಸಕ್ತಿ, ವರ್ಣಾಸಕ್ತಿ, ಜನಾಂಗೀಯಾಸಕ್ತಿಗಳ ಪಿತೂರಿಗಳು ಬಯಲಾಗುತ್ತವೆ. ಬುದ್ಧಿಜೀವಿಗಳನ್ನು ಅವಹೇಳನ ಮಾಡುವ ಮೂಲಕ ವಿಷ ಕಾರುತ್ತಾರೆಯೇ ಹೊರತು ತಾರ್ಕಿಕವಾಗಿ ವಾದಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ತಾರ್ಕಿಕವಾಗಿ ಎದುರಿಸಲಾಗದಾಗ ಸೈದ್ಧಾಂತಿಕವಾಗಿ ಸೋಲುತ್ತೇವೆಂಬ ಭಯವೇ ಅವರನ್ನು ಕ್ರೋಧಾವಿಷ್ಟರನ್ನಾಗಿ ಮಾಡುವುದು.

ಹೀಗಾಗಿ ಶಿಕ್ಷಣದ ಮೂಲಕವೇ ವ್ಯಕ್ತಿಯು ತಾರ್ಕಿಕವಾಗಿ, ಬೌದ್ಧಿಕವಾಗಿ ತನ್ನ ಬಿಡುಗಡೆಯ ದಾರಿಯನ್ನು ತುಳಿಯಬೇಕಾಗಿರುವ ಅಗತ್ಯತೆಯನ್ನು ಫ್ರೇರಿ ಒತ್ತಿ ಹೇಳುತ್ತಾರೆ.

ಇದು ಆದಾಗ ಮಾಡೋಣ ಎಂಬಂತಹ ವಿಷಯವಲ್ಲ. ಅತಿ ತುರ್ತಾದ ಅಗತ್ಯವೆಂದು ಫ್ರೇರಿ ಒತ್ತಾಯಿಸುತ್ತಾರೆ. ಏಕೆಂದರೆ, ಶಿಕ್ಷಣ ವ್ಯವಸ್ಥೆಯು ತನ್ನ ಪಠ್ಯಕ್ರಮದಲ್ಲಿ, ಬೋಧನಾ ಕ್ರಮದಲ್ಲಿ ಮಾಡುವಂತಹ ಹಡಾವಿಡಿಗಳನ್ನು ಈಗ ಅದರಿಂದ ಶಿಕ್ಷಣ ಪಡೆದು ಹೋದ ವಿದ್ಯಾರ್ಥಿಗಳಲ್ಲಿ ಸರಿಪಡಿಸಲು ಸಾಧ್ಯವಾಗುವುದಿಲ್ಲ. ಅವರೆಲ್ಲಾ ಸಮಾಜದಲ್ಲಿ ವಯಸ್ಕ ಪ್ರಜೆಗಳಾಗಿ ಬಹುಬೇಗ ರೂಪುಗೊಳ್ಳುತ್ತಾರೆ.

ಹಾಗಾದರೆ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಿಸಬಹುದಾದ ತುರ್ತಿನ ಕ್ರಮಗಳೇನು ಎಂಬುದನ್ನೂ ಅವರು ಚರ್ಚಿಸುತ್ತಾರೆ. ಏಕಮುಖಿ ಶಿಕ್ಷಣವನ್ನು ರೂಢಿಸಿಕೊಂಡಿರುವ ಶಿಕ್ಷಕ ತನ್ನ ಬೋಧನಾ ಕ್ರಮದಲ್ಲಿ ಮಾಡಿಕೊಳ್ಳಬೇಕಾದ ಮಾರ್ಪಾಡುಗಳೇನು ಎಂಬುದನ್ನೂ ಕೂಡಾ ಫ್ರೇರಿ ಸೂಚಿಸುತ್ತಾರೆ.

ಮನುಷ್ಯನ ಆರ್ಥಿಕ ಸಬಲೀಕರಣಕ್ಕೆ ತಡೆಯಾಗಿರುವುದೇನು? ಅದನ್ನು ದಾಟಿ ಮಾಡಬೇಕಾಗಿರುವುದೇನು ಎಂದು ವಿವರವಾಗಿ ನೋಡಬೇಕೆಂದರೆ ದಮನಿತರಿಗಾಗಿ ಶಿಕ್ಷಣಕ್ರಮವನ್ನು ಹೇಗೆ ರೂಪಿಸಿಕೊಳ್ಳಬೇಕೆಂಬುದನ್ನು ಓದಬೇಕು. ಇದರಿಂದ ಈಗ ಹೊಸ ಶಿಕ್ಷಣನೀತಿಯನ್ನು ಹೊಂದಿರುವ ಭಾರತದ ಸದ್ಯದ ಪರಿಸ್ಥಿತಿಗೆ ಸಿಗುವುದು ನಕಾಶೆಯಲ್ಲ. ಆದರೆ ಪ್ರೇರಣೆ. ಮತ್ತೊಂದು ಆಯಾಮದಿಂದ ವಿಚಾರ ಮಾಡಲು ಪ್ರಚೋದನೆ.


ಇದನ್ನೂ ಓದಿ: ದೇವಿಪ್ರಸಾದ್ ಚಟ್ಟೋಪಾಧ್ಯಾಯರ ’ಲೋಕಾಯತ’ವನ್ನು ಏಕೆ ಓದಬೇಕೆಂದರೆ.. : ಯೋಗೇಶ್ ಮಾಸ್ಟರ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...