Homeಮುಖಪುಟಪ್ರಜಾಪ್ರಭುತ್ವದ ಮೂಲತತ್ವಗಳನ್ನು ನೆನಪಿಸಿದ ಸುಪ್ರೀಂ ಕೋರ್ಟ್ ಪೆಗಸಸ್ ತೀರ್ಪು

ಪ್ರಜಾಪ್ರಭುತ್ವದ ಮೂಲತತ್ವಗಳನ್ನು ನೆನಪಿಸಿದ ಸುಪ್ರೀಂ ಕೋರ್ಟ್ ಪೆಗಸಸ್ ತೀರ್ಪು

- Advertisement -
- Advertisement -

ಸರ್ವೋಚ್ಚ ನ್ಯಾಯಾಲಯವು ಪೆಗಸಸ್ ಪ್ರಕರಣದಲ್ಲಿ ನೀಡಿರುವ ತೀರ್ಪಿನಲ್ಲಿ ಈಗಿನ ಡಿಜಿಟಲ್ ಯುಗದಲ್ಲಿ ಖಾಸಗಿತನಕ್ಕೆ ಇರಬೇಕಾದ ಮಹತ್ವವನ್ನು ಪುನರುಚ್ಚರಿಸಿದೆ ಹಾಗೂ ಸರಕಾರವು ಪೆಗಸಸ್ ಎಂಬ ಮ್ಯಾಲ್‌ವೇರ್‌ಅನ್ನು ಖರೀದಿಸಿತ್ತೆ ಮತ್ತು ಅದನ್ನು ಭಾರತೀಯ ನಾಗರಿಕರಿನ್ನು ಗುರಿ ಮಾಡಲು ಬಳಸಲಾಗಿತ್ತೆ ಎಂಬುದನ್ನು ಸ್ಪಷ್ಟಪಡಿಸಲು ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ರವೀಂದ್ರನ್ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿದೆ.

ಈ ಆದೇಶವನ್ನು ಹಿರಿಯ ವಕೀಲ ದುಷ್ಯಂತ್ ದವೆ ಸ್ವಾಗತಿಸುತ್ತ, ಅದನ್ನು ’ಅಸಾಮಾನ್ಯವಾದದ್ದು ಹಾಗೂ ಪ್ರಜಾಪ್ರಭುತ್ವಕ್ಕೆ ಅತ್ಯಂತ ಮಹತ್ವವಾದ ಆದೇಶವಾಗಿದೆ’ ಎಂದಿದ್ದಾರೆ. ಹಿರಿಯ ಪತ್ರಕರ್ತ ಎಂ.ಕೆ. ವೇಣು, ಭಾರತವು ಮತ್ತೆ ಪ್ರಜಾಪ್ರಭುತ್ವವನ್ನು ಉಸಿರಾಡಲು ಅನುವು ಮಾಡುವ ಸಾಮರ್ಥ್ಯವನ್ನು ಈ ಆದೇಶ ಹೊಂದಿದೆ ಎಂದಿದ್ದಾರೆ.

ಪೆಗಸಸ್ ಎಂಬುದು ಒಂದು ಸ್ಪೈವೇರ್, (ಒಂದು ರೀತಿಯ ಕಳ್ಳತನ ಮಾಡುವ ಸಾಫ್ಟ್‌ವೇರ್), ಇದನ್ನು ಜಗತ್ತಿನ ಯಾವುದೇ ಭಾಗದಿಂದ ಒಬ್ಬ ವ್ಯಕ್ತಿಯ ಫೋನ್‌ನಲ್ಲಿ ಅಥವಾ ಡಿಜಿಟಲ್ ಸಾಧನದಲ್ಲಿ ಅಳವಡಿಸಬಹುದಾಗಿದೆ. ಈ ಸಾಫ್ಟ್‌ವೇರ್‌ನಿಂದ ಆ ಡಿಜಿಟಲ್ ಸಾಧನದ ಎಲ್ಲಾ ಮಾಹಿತಿಯನ್ನು ನೋಡಬಹುದು ಹಾಗೂ ಪೆಗಸಸ್‌ಅನ್ನು ಅಳವಡಿಸಿ ಬೇಹುಗಾರಿಕೆ ಮಾಡುತ್ತಿರುವ ಸಂಸ್ಥೆಗೆ ಆ ಎಲ್ಲಾ ಮಾಹಿತಿಯನ್ನು ಕಳುಹಿಸಬಹುದು. ಈ ಅತ್ಯಂತ ಸಾಮರ್ಥ್ಯವುಳ್ಳ ಮಿಲಿಟರಿ ಮಟ್ಟದ ಸಾಫ್ಟ್‌ವೇರ್‌ಅನ್ನು ಇಸ್ರೇಲಿನ ಎನ್‌ಎಸ್‌ಒ ಗ್ರೂಪ್ ಸೃಷ್ಟಿಸಿದೆ ಹಾಗೂ ಈ ಎನ್‌ಎಸ್‌ಒ ಪ್ರಕಾರ ಈ ಸಾಫ್ಟ್‌ವೇರ್‌ಗಳನ್ನು ಸರಕಾರಗಳಿಗೆ ಮಾತ್ರ ಮಾರಾಟ ಮಾಡಲಾಗುತ್ತದೆ.

ಸಿಟಿಜನ್ ಲ್ಯಾಬ್ ಜೊತೆಗೂಡಿ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆಯು ಪೆಗಸಸ್ ಎಂಬ ಈ ಸಾಫ್ಟ್‌ವೇರ್ ಬಳಸಿ ವಿಶ್ವಾದ್ಯಂತ್ಯ 50,000ಕ್ಕೂ ಹೆಚ್ಚು ಫೋನ್‌ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಸುದ್ದಿಯನ್ನು ಬಯಲು ಮಾಡಿತು, ಅದರಲ್ಲಿ ಭಾರತೀಯರ ಹೆಸರುಗಳೂ ಇದ್ದವು. ಆಗ ಸ್ವಾಭಾವಿಕವಾಗಿಯೇ ಉದ್ಭವಿಸಿದ ಪ್ರಶ್ನೆಯೆಂದರೆ, ಭಾರತೀಯ ನಾಗರಿಕರ ಮೇಲೆ ಬೇಹುಗಾರಿಕೆ ಮಾಡುತ್ತಿರುವವರು ಯಾರು ಎಂಬುದು. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಆರೋಪಿಗಳಾಗಿರುವ ಕೆಲವರ ವ್ಯಕ್ತಿಗಳ ಫೋನ್‌ಗಳೂ ಈ ಬೇಹುಗಾರಕೆಗೆ ಒಳಗಾಗಿದ್ದವು. ಡಿಜಿಟಲ್ ವಿಧಿವಿಜ್ಞಾನದಿಂದ ನಮಗೆ ಈಗ ತಿಳಿದಿರುವುದೇನೆಂದರೆ, ರೋಣಾ ವಿಲ್ಸನ್ ಮತ್ತು ಸುರೇಂದ್ರ ಗಾಡ್ಲಿಂಗ್ ಅವರ ಕಂಪ್ಯೂಟರ್‌ಗಳನ್ನು ಹ್ಯಾಕ್ ಮಾಡಲಾಗಿತ್ತು ಹಾಗೂ ಅದರ ಮೂಲಕ ಆ ಕಂಪ್ಯೂಟರ್‌ಗಳಲ್ಲಿ ಫೈಲ್‌ಗಳನ್ನು ಇರಿಸಲಾಗಿತ್ತು. ಇದು ಸೂಚಿಸುವುದೇನೆಂದರೆ, ಈ ಕಾರ್ಯಾಚರಣೆ ಕೇವಲ ಬೇಹುಗಾರಿಕೆಯದ್ದಷ್ಟೇ ಅಲ್ಲದೇ, ಸುಳ್ಳು ಸಾಕ್ಷ್ಯಗಳನ್ನು ಕಂಪ್ಯೂಟರ್‌ಗಳಲ್ಲಿ ಮತ್ತು ಇತರ ಡಿಜಿಟಲ್ ಉಪಕರಣಗಳಲ್ಲಿ ಸೇರಿಸುವುದುಕ್ಕೂ ಬಳಸಲಾಗಿತ್ತು ಎಂಬುದು ಹಾಗೂ ಇದು ಭಾರತೀಯರೆಲ್ಲರೂ ಆತಂಕ ಪಡುವಂತೆ ಮಾಡಿತು.

ಈ ಸ್ಪೈವೇರ್‌ನಿಂದ ಗುರಿ ಮಾಡಲಾದ ವ್ಯಕ್ತಿಗಳು ಸರ್ವೋಚ್ಚ ನ್ಯಾಯಾಲಯದ ಕದ ತಟ್ಟಿ, ತಮ್ಮ ಖಾಸಗಿತನದ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಹೇಳಿದಾಗ, ಒಕ್ಕೂಟ ಸರಕಾರವು ಇದಕ್ಕೆ ಸರಿಯಾದ ಪ್ರತಿಕ್ರಿಯೆ ನೀಡಲಿಲ್ಲ. ಸರಕಾರವು ತನ್ನ ಮೇಲೆ ಹೊರಿಸಿದ ಆರೋಪವು ತಪ್ಪು ಎಂದು ನಿರಾಕರಿಸಲೂ ಇಲ್ಲ, ಒಪ್ಪಿಕೊಳ್ಳಲೂ ಇಲ್ಲ. ಪೆಗಸಸ್‌ಅನ್ನು ಸರಕಾರ ಖರೀದಿ ಮಾಡಿತ್ತೆ ಎಂಬ ಪ್ರಶ್ನೆಯನ್ನು ಪದೇಪದೇ ಕೇಳಿದಾಗ, ಸರಕಾರ ಅದೊಂದು ರಾಷ್ಟ್ರೀಯ ಭದ್ರತೆಯ ವಿಷಯವಾಗಿರುವುದರಿಂದ ವಿವರಗಳನ್ನು ಬಹಿರಂಗಪಡಿಸಲಾಗುವುದಿಲ್ಲ ಎಂದು ಉತ್ತರಿಸಿತು.

ಸರ್ವೋಚ್ಚ ನ್ಯಾಯಾಲಯವು ತನ್ನ ಆದೇಶದಲ್ಲಿ ಒಕ್ಕೂಟ ಸರಕಾರದ ’ರಾಷ್ಟ್ರೀಯ ಭದ್ರತೆ’ಯ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ’ರಾಷ್ಟ್ರೀಯ ಭದ್ರತೆ’ಯ ಭೀತಿಯನ್ನು ಮುಂದಿರಿಸಿ, ಸರಕಾರ ಪ್ರತಿ ಸಲ ’ಫ್ರೀ ಪಾಸ್’ ತೆಗೆದುಕೊಳ್ಳಲಿ ಆಗುವುದಿಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ. ಹಾಗೂ ’ಸರಕಾರವು ರಾಷ್ಟ್ರೀಯ ಭದ್ರತೆಯನ್ನು ಕೇವಲ ಉಲ್ಲೇಖಿಸುವುದರಿಂದ ನ್ಯಾಯಾಲಯವನ್ನು ಮೂಕಪ್ರೇಕ್ಷಕನನ್ನಾಗಿಸಲು ಆಗುವುದಿಲ್ಲ’ ಎಂತಲೂ ಹೇಳಿದೆ.

ಕಾನೂನನ್ನು ಈ ರೀತಿ ಒತ್ತಿ ಒತ್ತಿ ಹೇಳುವುದು ತುಂಬಾ ಮುಖ್ಯವಾಗಿದೆ. ಪ್ರಜಾಪ್ರಭುತ್ವದಲ್ಲಿ ಖಾಸಗಿತನ ಎಂಬುದು ಒಂದು ಅತ್ಯಗತ್ಯ ಹಕ್ಕು ಆಗಿದ್ದು, ಭಾರತದ ಎಲ್ಲಾ ನಾಗರಿಕರನ್ನು ಖಾಸಗಿತನದ ಉಲ್ಲಂಘನೆಯಿಂದ ರಕ್ಷಿಸಬೇಕು ಎಂದು ಕೋರ್ಟ್ ಹೇಳಿದೆ. ನಾಗರಿಕರಿಕರಿಗೆ ತಮ್ಮ ಖಾಸಗಿತನದ ಹಕ್ಕನ್ನು ರಕ್ಷಿಸಲಾಗಿದೆ, ಖಾತ್ರಿಪಡಿಸಲಾಗಿದೆ ಎಂದು ಗೊತ್ತಿದ್ದಾಗ ಮಾತ್ರ ಅವರು ತಮ್ಮ ’ಆಯ್ಕೆ ಮತ್ತು ಸ್ವಾತಂತ್ರದ’ ಹಕ್ಕನ್ನು ಚಲಾಯಿಸಬಹುದು.

ಆದರೆ ಅದರ ಜೊತೆಗೆ ನ್ಯಾಯಾಲಯವು ಇದನ್ನೂ ಹೇಳಿದೆ, ’ಮೂರು ಷರತ್ತುಗಳನ್ನು ಅನ್ವಯಿಸುವಂತೆ ನೋಡಿಕೊಂಡಾಗ ಪ್ರಭುತ್ವವು ಒಬ್ಬ ವ್ಯಕ್ತಿಯ ಖಾಸಗಿತನದ ಹಕ್ಕನ್ನು ನಿರ್ಬಂಧಿಸಬಹುದು. ಮೊದಲನೆಯದಾಗಿ, ಖಾಸಗಿತನದ ಹಕ್ಕಿನ ನಿರ್ಬಂಧನೆಯು ಕಾನೂನಿನಿಂದ ಸಮ್ಮತಿ ಪಡೆದಿರಬೇಕು, ಎರಡನೆಯದಾಗಿ ಅದು ಒಂದು ನ್ಯಾಯಸಮ್ಮತವಾದ ಉದ್ದೇಶ ಹೊಂದಿರಬೇಕು ಹಾಗೂ ಕೊನೆಯದಾಗಿ ಆ ನಿರ್ಬಂಧನೆಯು ಒಂದು ಸೂಕ್ತ ಪ್ರಮಾಣಕ್ಕೆ ಅನುಗುಣವಾಗಿರಬೇಕು.

ಈಗ ಆಗಿರುವುದನ್ನು ಮೂರು ಷರತ್ತುಗಳ ಪರೀಕ್ಷೆಗಳಿಗೆ ಅನ್ವಯಿಸಿದಾಗ ತಿಳಿಯುವುದೇನೆಂದರೆ, ಪೆಗಸಸ್ ಕಾನೂನಿನಿಂದ ಒಪ್ಪಿಗೆ ಪಡೆಯದೆ ಇರುವುದಷ್ಟೆ ಅಲ್ಲದೇ, ಇದು ಮಾಹಿತಿ ತಂತ್ರಜ್ಞಾನದ ಕಾಯಿದೆಯ ನಿಬಂಧನೆಗಳಿಗೆ ವಿರುದ್ಧವಾಗಿದೆ. ಮಾಹಿತಿ ತಂತ್ರಜ್ಞಾನದ ಕಾಯಿದೆ ಡಿಜಿಟಲ್ ಸಾಧನಗಳನ್ನು ಹ್ಯಾಕ್ ಮಾಡುವುದನ್ನು ಮತ್ತು ಯಾವುದೇ ವ್ಯಕ್ತಿಯ ಮಾಹಿತಿಯನ್ನು ಅಕ್ರಮವಾಗಿ ತಿದ್ದುವುದನ್ನು ನಿಷೇಧಿಸುತ್ತದೆ. ರಾಷ್ಟ್ರೀಯ ಭದ್ರತೆಯ ಕಾರಣದಿಂದ ರಾಜಕಾರಣಿಗಳ, ಕಾರ್ಯಕರ್ತರ, ವಿದ್ಯಾರ್ಥಿಗಳ ಮತ್ತು ಪತ್ರಕರ್ತರ ಸಾಧನಗಳನ್ನು ಹ್ಯಾಕ್ ಮಾಡಲಾಗಿತ್ತು ಎಂದು ಸಾಬೀತುಮಾಡಲು ಸರಕಾರಕ್ಕೆ ಕಷ್ಟವಾಗಲಿದೆ. ಕೊನೆಯದಾಗಿ, ಈ ವ್ಯಕ್ತಿಗಳ ಮೇಲೆ ಮಾಡಲಾದ ಆರ್ವೆಲಿಯನ್ (ಜಾರ್ಜ್ ಆರ್ವೆಲ್‌ನ ’1984’ ಎಂಬ ಕಾದಂಬರಿಯಿಂದ ಪ್ರೇರಿತವಾದ ನುಡಿಗಟ್ಟು) ಬೇಹುಗಾರಿಕೆ ಯಾವುದೇ ರೀತಿಯಲ್ಲಿ ಸೂಕ್ತ ಪ್ರಮಾಣದ ಪ್ರತಿಕ್ರಿಯೆ ಎಂದು ತೋರಿಸುವುದು ಸರಕಾರಕ್ಕೆ ಸುಲಭವಾಗುವುದಿಲ್ಲ.

ಈ ಎಲ್ಲ ಸಂಗತಿಗಳ ಕಾರಣದಿಂದ ನ್ಯಾಯಾಲಯವು ವಿನಂತಿಸಿದಂತೆ ವಿವರವಾದ ಅಫಿಡವಿಟ್ ಸಲ್ಲಿಸುವುದು ಬೇಡ ಎಂಬ ನಿರ್ಧಾರಕ್ಕೆ ಸರ್ಕಾರ ಬರುವಂತೆ ಮಾಡಿರಬಹುದು ಹಾಗೂ ಅದರ ಬದಲಿಗೆ ’ರಾಷ್ಟ್ರೀಯ ಭದ್ರತೆ’ಯ ಭಾಷೆಯ ಉದ್ಧಟತನವನ್ನು ಪ್ರದರ್ಶಿಸಿರಬಹುದು. ಅದೃಷ್ಟವಷಾತ್ ನ್ಯಾಯಾಲಯವು ಒಕ್ಕೂಟ ಸರಕಾರದ ವಾದವನ್ನು ಬೊಗಳೆ ಎಂದು ಪರಿಗಣಿಸಿದೆ.

ಇದರಿಂದ ತಪ್ಪಿಸಿಕೊಳ್ಳಲು ಸರಕಾರವು ತನ್ನ ಕೊನೆಯ ದಾರಿಯಾಗಿ, ಈ ವಿಷಯದ ವಿಚಾರಣೆ ಮಾಡಲು ತಾನೊಂದು ಸಮಿತಿಯನ್ನು ರಚಿಸುವ ಪ್ರಸ್ತಾಪವನ್ನು ನ್ಯಾಯಾಲಯದ ಎದುರು ಇಡುವ ಯೋಜನೆ ಮಾಡಿತ್ತು. ಆದರೆ ನ್ಯಾಯಾಲಯವು ಈ ಸಲಹೆಯನ್ನು ಸಾರಾಸಗಟಾಗಿ ತಿರಸ್ಕರಿಸಿ, ಸರಕಾರವು ರಚಿಸಿದ ಸಮಿತಿಯು ಇದರ ತನಿಖೆ ಮಾಡುವುದು ’ಪಕ್ಷಪಾತದ ವಿರುದ್ಧದ ನ್ಯಾಯಾಂಗವು ಇರಿಸಿದ ತತ್ವದ ಉಲ್ಲಂಘನೆ’ ಆಗುತ್ತದೆ ಎಂದು ಹೇಳಿದ್ದಲ್ಲದೆ, ’ನ್ಯಾಯ ಒದಗಿಸುವುದಷ್ಟೇ ಅಲ್ಲ ಆದರೆ ನ್ಯಾಯ ಒದಗಿಸಿದಂತೆ ಕಾಣಿಸಲೂಬೇಕು’ ಎಂದು ಹೇಳಿತು.

ಸರ್ವೋಚ್ಚ ನ್ಯಾಯಾಲಯವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಒಂದು ಸಮಿತಿಯನ್ನು ರಚಿಸಿದೆ. ಆ ಸಮಿತಿಗೆ ತನ್ನ ಸ್ವಾತಂತ್ರ್ಯ ಮತ್ತು ಬದ್ಧತೆಗೆ ಹೆಸರುವಾಸಿಯಾದ ಒಬ್ಬ ನ್ಯಾಯಾಧೀಶ ಜಸ್ಟೀಸ್ ರವೀಂದ್ರನ್ ಅವರನ್ನು ಮುಖ್ಯಸ್ಥರನ್ನಾಗಿಸಿ, ಐಪಿಎಸ್ ಅಧಿಕಾರಿ ಆಲೋಕ್ ಜೋಷಿ ಮತ್ತು ಸೈಬರ್ ಭದ್ರತೆಯ ತಜ್ಞ ಸಂದೀಪ್ ಒಬೆರಾಯ್ ಅವರನ್ನು ಆ ಸಮಿತಿಯಲ್ಲಿ ಸೇರಿಸಿದೆ. ಹಾಗೂ ಜಸ್ಟಿಸ್ ರವೀಂದ್ರನ್ ಅವರಿಗೆ ಕಾನೂನು ತಜ್ಞರ, ತಾಂತ್ರಿಕ ತಜ್ಞರ ಹಾಗೂ ಹಾಲಿ ಅಧಿಕಾರಿಗಳ ಸಹಾಯವನ್ನು ಪಡೆಯುವ ಸ್ವಾತಂತ್ರ್ಯ ನೀಡಲಾಗಿದೆ.

ನ್ಯಾಯಾಲಯವು ನೇಮಿಸಿದ ಸಮಿತಿಗೆ ಪೆಗಸಸ್ ಬಳಕೆಯ ಹಿಂದೆ ಯಾರಿದ್ದರು ಮತ್ತು ಯಾವ ಉದ್ದೇಶಕ್ಕಾಗಿ ಬಳಸಲಾಗಿತ್ತು ಎಂಬುದರ ಸತ್ಯಾಸತ್ಯತೆಯನ್ನು ಸಾಬೀತುಪಡಿಸುವ ಅಧಿಕಾರ ಮತ್ತು ಉದ್ದೇಶ ನೀಡಲಾಗಿದೆ. ಒಂದು ವೇಳೆ ಒಕ್ಕೂಟ ಸರಕಾರವು ತನಿಖೆಯದಾರಿ ಸುಗಮವಾಗಲು ಸಹಕಾರ ನೀಡದಿದ್ದರೆ, ಸಮಿತಿಯು ಪ್ರತಿಕೂಲ ತೀರ್ಮಾನಗಳನ್ನು ಅಂದಾಜಿಸಿ, ತನ್ನದೇ ಆದ ನಿರ್ಣಯಕ್ಕೆ ಬರಬಹುದು. ಹಾಗೂ ಈ ಸಮಿತಿಯು ಇತರ ತಜ್ಞರು ನೀಡುವ ಮಾಹಿತಿಯನ್ನು ಬಳಸಿಕೊಳ್ಳಬಹುದು, ಅದರಿಂದ ಒಕ್ಕೂಟ ಸರಕಾರದ ನಿಲುವು ಏನೇ ಆಗಿರಲಿ, ತನಿಖೆ ಮುಂದುವರೆಸಿ ಪೆಗಸಸ್ ಹಗರಣದ ಬುಡಕ್ಕೆ ತಲುಪಬಹುದು.

ಕಾನೂನುಬಾಹಿರ ಬೇಹುಗಾರಿಕೆಯ ಮತ್ತು ಸಾಕ್ಷ್ಯಗಳನ್ನು ಸಾಧನಗಳಲ್ಲಿ ತೂರಿಸುವ ಅಪರಾಧಗಳನ್ನು ಬಯಲಿಗೆಳೆಯುವ ಮತ್ತು ಒಕ್ಕೂಟ ಸರಕಾದಿಂದ ಉತ್ತರದಾಯಿತ್ವವನ್ನು ಅಪೇಕ್ಷಿಸುವ ಸಾಧ್ಯತೆ ಈಗ ನಮ್ಮ ಮುಂದೆ ಇದೆ. ನಾಗರಿಕ ಸಮಾಜವು ಈ ಸಮಿತಿಯೊಂದಿಗೆ ತೊಡಗಿಸಿಕೊಂಡು, ಪೆಗಸಸ್‌ಅನ್ನು ಬಳಸಿ ಭಾರತದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಸಾಧನವಾಗಿ ಬಳಸಿರುವ ಸತ್ಯವನ್ನು ಹೊರಗೆಳೆಯಲು ಈ ಸಮಿತಿಯ ಬಲವರ್ಧನೆ ಮಾಡಬೇಕಿದೆ.

(ಕನ್ನಡಕ್ಕೆ): ರಾಜಶೇಖರ್ ಅಕ್ಕಿ

ಅರವಿಂದ್ ನಾರಾಯಣ್

ಅರವಿಂದ್ ನಾರಾಯಣ್
ಸಂವಿಧಾನ ತಜ್ಞರು, ಪರ್ಯಾಯ ಕಾನೂನು ವೇದಿಕೆ (ಎಎಲ್‌ಎಫ್‌ನ) ಸ್ಥಾಪಕ ಸದಸ್ಯರು


ಇದನ್ನೂ ಓದಿ: ಪ್ರಜಾಪ್ರಭುತ್ವವನ್ನೇ ಪಣಕ್ಕಿಟ್ಟು ರಾಜಕೀಯ ವಿರೋಧಿಗಳನ್ನು ಮಣಿಸುವುದಕ್ಕೆ ಹಾರುವ ಕುದುರೆಯನೇರಿ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...