ರಾಷ್ಟ್ರ ರಾಜಧಾನಿ ದೆಹಲಿ ಈಗ ವಿಷಪೂರಿತವಾಗಿದೆ. ವಾಯುಮಾಲಿನ್ಯ ಮಿತಿ ಮೀರಿದ್ದು, ಉಸಿರಾಟ ತೊಂದರೆ ಮತ್ತು ಅನಾರೋಗ್ಯದಿಂದ ಜನರನ್ನು ಬಳಲುವಂತೆ ಮಾಡಿದೆ. ದೆಹಲಿಯ ತುಂಬ ದಟ್ಟ ಹೊಗೆ ಆವರಿಸಿದೆ. ಈ ಸಂಬಂಧ ಸುಪ್ರೀಂಕೋರ್ಟ್ ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ದೆಹಲಿಯಲ್ಲಿ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಘೋಷಣೆಯಾಗಿದೆ. ವರ್ಷದಿಂದ ವರ್ಷಕ್ಕೆ ಜನ ತಮ್ಮ ಉಸಿರು ಕಳೆದುಕೊಳ್ಳುತ್ತಿದ್ದಾರೆ. ವಿಷಪೂರಿತ ವಾತಾವರಣದಲ್ಲಿ ಬದುಕುವುದು ಹೇಗೆ..? ಯಾವುದೇ ಸುಸಂಸ್ಕೃತ ದೇಶದಲ್ಲಿ ಈ ರೀತಿಯಾಗಲು ಸಾಧ್ಯವಿಲ್ಲ ಎಂದು ಹೇಳಿದೆ.
ಸುಪ್ರೀಂಕೋರ್ಟ್ ನ್ಯಾ. ಅರುಣ್ ಮಿಶ್ರಾ, ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣ ಪ್ರಾಧಿಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ತ್ಯಾಜ್ಯ ಮತ್ತು ಉದ್ಯಮ ಘಟಕಗಳಿಂದ ಬಿಡುವ ಹೊಗೆ ಸಾಕಷ್ಟು ಹಾನಿಯುಂಟು ಮಾಡುತ್ತಿದೆ. ಕೈಗಾರಿಕೆಗಳಿಂದ ಬಿಡಲಾಗುತ್ತಿರುವ ತ್ಯಾಜ್ಯ, ವಿಷಪೂರಿತ ಹೊಗೆ, ಕಸ ಸುಡುವುದರಿಂದ ಮಾಲಿನ್ಯದ ಪ್ರಮಾಣ ಹೆಚ್ಚುತ್ತಿದೆ. ಇಂಥ ವಾತಾವರಣದಲ್ಲಿ ಸಾರ್ವಜನಿಕರು ಬದುಕಲು ಸಾಧ್ಯವೇ..? ಇದು ಜನ ಬದುಕಲು ಇರುವ ಸರಿಯಾದ ಮಾರ್ಗವೂ ಅಲ್ಲ. ಹೀಗಾದರೆ ಮನೆಯಲ್ಲಿ ಇರುವವರು, ಹೊರಗೆ ಓಡಾಡುವವರಿಂದ ಹಿಡಿದು ಯಾರೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಇದನ್ನೂ ಓದಿ: ಮಾಲಿನ್ಯ ತಡೆಗಾಗಿ ಇಂದಿನಿಂದ ದೆಹಲಿಯಲ್ಲಿ ಬೆಸ-ಸಮ ನಿಯಮ ಜಾರಿ: ಬಿಜೆಪಿ ವಿರೋಧ
ದೆಹಲಿಯ ಸುತ್ತಮುತ್ತಲಿನ ನಗರಗಳಾದ ಪಂಜಾಬ್, ಹರ್ಯಾಣ, ಪಶ್ಚಿಮ ಉತ್ತರ ಪ್ರದೇಶ ಭಾಗದಲ್ಲಿನ ಬೆಳೆ, ಪೈರು ಕಟಾವಿನ ನಂತರ ತ್ಯಾಜ್ಯವನ್ನು ಸುಟ್ಟು, ಭೂಮಿಯನ್ನು ಮತ್ತೆ ಹದಗೊಳಿಸಲಾಗುತ್ತದೆ. ಇಂಥ ಸಮಯದಲ್ಲಿ ಮಾಲಿನ್ಯ ಪ್ರಮಾಣ ಮತ್ತಷ್ಟು ಹೆಚ್ಚುತ್ತದೆ. ಇದಕ್ಕೆ ವೈಜ್ಞಾನಿಕ ಮಾರ್ಗೋಪಾಯ ಕಂಡುಕೊಳ್ಳಲು ಸರ್ಕಾರಗಳು ಶ್ರಮಿಸಬೇಕು. ಪರಿಸರ ತಜ್ಞರು, ಐಐಟಿ ತಜ್ಞರನ್ನೂ ಕರೆಯಿಸಿ, ಸೂಕ್ತ ಸಮಾಲೋಚನೆ ನಡೆಸಿ, ವಾಯುಮಾಲಿನ್ಯ ಸಮಸ್ಯೆ ತಡೆಗೆ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರ ಪರಿಹಾರೋಪಾಯ ಕಂಡುಕೊಳ್ಳಬೇಕು. ಪ್ರತಿ ವರ್ಷ ಇದು ನಮ್ಮ ಮೂಗಿನ ನೇರಕ್ಕೆ ನಡೆಯುತ್ತಿದೆ. ಆದರೂ ಸರ್ಕಾರಗಳು ಎಚ್ಚೆತ್ತುಕೊಂಡಿಲ್ಲ. ದೆಹಲಿಗೆ ಬರಬೇಡಿ ಅಥವಾ ದೆಹಲಿ ಬಿಟ್ಟು ದೂರ ಹೋಗಿ ಎಂದು ಜನರಿಗೆ ಹೇಳುವಂಥಹ ಕೆಟ್ಟ ಸ್ಥಿತಿ ನಿರ್ಮಾಣವಾಗಿದೆ. ಜನರು ತಮ್ಮದೇ ರಾಜ್ಯದಲ್ಲಿ ಮತ್ತು ಪಕ್ಕದ ರಾಜ್ಯಗಳಲ್ಲಿ ಸಾಯುತ್ತಿದ್ದಾರೆ. ಇದನ್ನು ಸಹಿಸಿಕೊಳ್ಳುವುದು ಅಸಾಧ್ಯ ಎಂದು ಸುಪ್ರೀಂಕೋರ್ಟ್ ಹೇಳಿದೆ.
ದೆಹಲಿಯಲ್ಲಿ ಪ್ರತಿ ವರ್ಷ ವಾಯುಮಾಲಿನ್ಯ ಬೃಹತ್ ಸಮಸ್ಯೆಯಾಗಿ ಬೆಳೆಯುತ್ತಲೇ ಇದೆ. ಇದನ್ನು ತಡೆಗಟ್ಟಲು ನಾವು ಏನನ್ನೂ ಮಾಡುತ್ತಿಲ್ಲ. ಪ್ರತಿ ವರ್ಷ ಆಗುತ್ತಿರುವ ಸಮಸ್ಯೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಜನ ಉಸಿರಾಟಕ್ಕೆ ಒಳ್ಳೆಯ ಗಾಳಿ ಸಿಗದೇ ಉಸಿರು ಚೆಲ್ಲುತ್ತಿದ್ದಾರೆ. ಇಂಥ ಘಟನೆ ಸುಸಂಸ್ಕೃತ ರಾಷ್ಟ್ರದಲ್ಲಿ ನಡೆಯುವುದಿಲ್ಲ, ನಡೆಯಲೂಬಾರದು ಎಂದು ಹೇಳಿದೆ.
ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾಧಿಕಾರ ವರದಿ ನೀಡಿದ್ದು, 2010ರಿಂದ ಇಲ್ಲಿಯವರೆಗೆ ಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ. ಆದರೆ ನಗರದಲ್ಲಿ ಇನ್ನೂ ಶೇ. 65 ರಷ್ಟು ವಾಯುಮಾಲಿನ್ಯ ಕಡಿಮೆಯಾಗಬೇಕಿದೆ. ತ್ಯಾಜ್ಯ ಮತ್ತು ಕೈಗಾರಿಕೆಗಳಿಂದ ಹೊರಬರುವ ವಿಷಪೂರಿತ ಹೊಗೆ ಮತ್ತಷ್ಟು ಸಮಸ್ಯೆಯನ್ನು ಹೆಚ್ಚಿಸುತ್ತಿದೆ ಎಂದು ವರದಿ ನೀಡಿದೆ.
ಇತ್ತ ಹಿರಿಯ ವಕೀಲ ಅಪರಾಜಿತ್ ಸಿಂಗ್ ಮಾತನಾಡಿ, ಪಂಜಾಬ್ ನಲ್ಲಿ ತ್ಯಾಜ್ಯ ಸುಡುವ ಪ್ರಮಾಣ ಶೇ. 7ರಷ್ಟಿದೆ. ಹರ್ಯಾಣದಲ್ಲಿ ಶೇ. 17ರಷ್ಟಿದೆ ಎಂದು ಹೇಳಿದರು.