ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಹಾರಾಷ್ಟ್ರದ ಚುನಾವಣಾ ರ್ಯಾಲಿಯಲ್ಲಿ “batenge to katenge”(ವಿಭಜನೆಯಾದ್ರೆ, ಮುಗಿಸ್ತಾರೆ) ಎಂಬ ಘೋಷಣೆ ಪುನರುಚ್ಚರಿಸಿರುವುದಕ್ಕೆ ಬಿಜೆಪಿಯ ಮಿತ್ರಪಕ್ಷ ಎನ್ಸಿಪಿ ನಾಯಕ ಅಜಿತ್ ಪವಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಇಂತಹ ಹೇಳಿಕೆಗಳನ್ನು ನಮ್ಮ ರಾಜ್ಯದ ಜನರು ಇಷ್ಟಪಡುವುದಿಲ್ಲ” ಎಂದು ಹೇಳಿದ್ದಾರೆ.
ಪುಣೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು “ಮಹಾರಾಷ್ಟ್ರವು ಛತ್ರಪತಿ ಶಿವಾಜಿ ಮಹಾರಾಜ್, ರಾಜರ್ಷಿ ಶಾಹು ಮಹಾರಾಜ್ ಮತ್ತು ಮಹಾತ್ಮ ಫುಲೆ ಅವರಿಗೆ ಸೇರಿದೆ. ನೀವು ಮಹಾರಾಷ್ಟ್ರವನ್ನು ಇತರ ರಾಜ್ಯಗಳೊಂದಿಗೆ ಹೋಲಿಸಬೇಡಿ. ಮಹಾರಾಷ್ಟ್ರದ ಜನರು ಇಂತಹ ಹೇಳಿಕೆಗಳನ್ನು ಇಷ್ಟಪಡುವುದಿಲ್ಲ” ಎಂದು ಆದಿತ್ಯನಾಥ್ ಅವರ ಹೇಳಿಕೆ ಬಗ್ಗೆ ಅಜಿತ್ ಪವಾರ್ ಪ್ರತಿಕ್ರಿಯಿಸಿದ್ದಾರೆ.
ಸಮಾಜದ ಎಲ್ಲ ವರ್ಗದವರನ್ನು ಜೊತೆಯಲ್ಲಿ ಕೊಂಡೊಯ್ಯುವುದು ಶಿವಾಜಿ ಮಹಾರಾಜರ ಬೋಧನೆ. ಮಹಾರಾಷ್ಟ್ರದ ಜನರು ಸದಾ ಕೋಮು ಸೌಹಾರ್ದತೆಯನ್ನು ಕಾಪಾಡಲು ಶ್ರಮಿಸುತ್ತಿದ್ದಾರೆ ಎಂದಿದ್ದಾರೆ.
“ಬೇರೆ ರಾಜ್ಯಗಳ ಜನರು ಇಲ್ಲಿಗೆ ಬಂದಾಗ, ಅವರು ತಮ್ಮ ಜನರನ್ನು ಗಮನದಲ್ಲಿಟ್ಟುಕೊಂಡು ಮಾತನಾಡುತ್ತಾರೆ. ಆದರೆ, ಮಹಾರಾಷ್ಟ್ರವು ಅದನ್ನು ಎಂದಿಗೂ ಸ್ವೀಕರಿಸುವುದಿಲ್ಲ. ಇದು ಇಲ್ಲಿನ ಎಲ್ಲಾ ಚುನಾವಣೆಗಳ ಇತಿಹಾಸವಾಗಿದೆ” ಎಂದು ಅಜಿತ್ ಪವಾರ್ ಹೇಳಿದ್ದಾರೆ.
ನವೆಂಬರ್ 20ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಪ್ರಚಾರದ ಭಾಗವಾಗಿ ವಾಶಿಮ್ನಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಆದಿತ್ಯನಾಥ್ ಅವರು ತಮ್ಮ ಪ್ರಸಿದ್ಧ ಘೋಷಣೆ “batenge to katenge” ಅನ್ನು ಪುನರುಚ್ಚರಿಸಿದ್ದರು.
“ನಾನು ಛತ್ರಪತಿ ಶಿವಾಜಿ ಮಹಾರಾಜರಿಂದ ಸ್ಫೂರ್ತಿ ಪಡೆಯುತ್ತಿದ್ದೇನೆ. ವಿಭಜನೆಯಾಗದಂತೆ ನಿಮ್ಮಲ್ಲಿ ಮನವಿ ಮಾಡುತ್ತೇನೆ, ಏಕೆಂದರೆ ನಾವು ವಿಭಜನೆಯಾದಾಗಲೆಲ್ಲಾ ನಾವು ನಾಶವಾಗುತ್ತೇವೆ” ಎಂದು ಆದಿತ್ಯನಾಥ್ ಹೇಳಿದ್ದರು.
ಇದನ್ನೂ ಓದಿ : ಬ್ರಾಂಪ್ಟನ್ನ ಹಿಂದೂ ಸಭಾ ಪ್ರತಿಭಟನೆಯಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ಆರೋಪ; ಕೆನಡಾ ಪೊಲೀಸರಿಂದ ಓರ್ವನ ಬಂಧನ


