Homeಕರ್ನಾಟಕಸ್ಮಶಾನಕ್ಕಾಗಿ ಹಾಡಿ ಜನರ ಆಗ್ರಹ: ಶವ ಇಟ್ಟು ಪ್ರತಿಭಟನೆ; ವಿಡಿಯೊ ವೈರಲ್‌‌

ಸ್ಮಶಾನಕ್ಕಾಗಿ ಹಾಡಿ ಜನರ ಆಗ್ರಹ: ಶವ ಇಟ್ಟು ಪ್ರತಿಭಟನೆ; ವಿಡಿಯೊ ವೈರಲ್‌‌

- Advertisement -
- Advertisement -

ಶವಸಂಸ್ಕಾರ ಮಾಡಲು ಸ್ಮಶಾನವಿಲ್ಲ ಎಂದು ಆರೋಪಿಸಿ ಶವವನ್ನಿಟ್ಟು ಪ್ರತಿಭಟನೆ ಮಾಡಿರುವ ಘಟನೆ ಸರಗೂರು ತಾಲೂಕಿನ ಬಿ. ಮಟಕೆರೆ ಗ್ರಾಮಪಂಚಾಯತಿ ವ್ಯಾಪ್ತಿಯ ಆಲನಹಳ್ಳಿ ಹಾಡಿಯಲ್ಲಿ ನಡೆದಿದೆ.

ಕಾಡು ಕುರುಬ ಜನಾಂಗದ ವ್ಯಕ್ತಿಯೊಬ್ಬರು ಗುರುವಾರ ತೀರಿಕೊಂಡಿದ್ದರು. ಆದರೆ ಶವ ಸಂಸ್ಕಾರ ಮಾಡಲು ಸರಿಯಾದ ಜಾಗವಿಲ್ಲದೆ ಪರದಾಡಿದರು. ಈ ಕುರಿತು ಮಾಡಿರುವ ವಿಡಿಯೊ ಈಗ ವೈರಲ್‌ ಆಗಿದೆ.

ತಾಲೂಕಿನ ಬಿ. ಮಟಕೆರೆ ಗ್ರಾಮಪಂಚಾಯತಿಯ ಸದಸ್ಯ ಬೆಟ್ಟಸ್ವಾಮಿ ಮಾತನಾಡಿರುವುದು ವಿಡಿಯೊದಲ್ಲಿ ದಾಖಲಾಗಿದ್ದು, “ಕಳೆದ ಮೂವತ್ತು ವರ್ಷಗಳಿಂದಲೂ ಇಲ್ಲಿ ಇದೇ ಸಮಸ್ಯೆಯನ್ನು ಹಾಡಿ ಜನರು ಎದುರಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

“ರಸ್ತೆ ಇಲ್ಲ. ಹೆಣ ಹೂಳಲು ಜಾಗವಿಲ್ಲ. ಬರೀ ಆಶ್ವಾಸನೆಗಳನ್ನಷ್ಟೇ ಅಧಿಕಾರಿಗಳು ನೀಡುತ್ತಾರೆ. ಹಾಡಿಯ ಜನರು ಅರಣ್ಯ ಒತ್ತುವರಿ ಜಾಗದಲ್ಲಿ ಶವಸಂಸ್ಕಾರ ಮಾಡಬೇಕಾಗಿದೆ. ಆದರೆ ಅರಣ್ಯ ಇಲಾಖೆಯವರು ತಂತಿ ಹಾಕಿದ್ದಾರೆ. ಹಾಡಿ ಜನರು ಅವುಗಳನ್ನು ದಾಟಿ ಹೋಗಬೇಕು. ಹೀಗಾಗಿ ಸರ್ಕಾರ ಈ ದೃಶ್ಯವನ್ನು ನೋಡಿಯಾದರೂ ಎಚ್ಚೆತ್ತುಕೊಳ್ಳಬೇಕು. ಈ ಕಾಡು ಕುರುಬ ಜನರಿಗೆ ಸ್ಮಶಾನ ಜಾಗವನ್ನು ನೀಡಿ, ಅಲ್ಲಿಗೆ ಸಮರ್ಪಕ ರಸ್ತೆ ನಿರ್ಮಿಸಿಕೊಡಬೇಕು” ಎಂದು ಬೆಟ್ಟಸ್ವಾಮಿ ಆಗ್ರಹಿಸಿದ್ದಾರೆ.

ಸ್ಮಶಾನ ಜಾಗವನ್ನು ನೀಡದಿದ್ದರೆ ಮುಂದಿನ ದಿನಗಳಲ್ಲಿ ತಹಶೀಲ್ದಾರ್‌ ಕಚೇರಿಯ ಮುಂದೆ ಶವವನ್ನಿಟ್ಟು ಪ್ರತಿಭಟನೆ ಮಾಡಲಾಗುವುದು. ಈ ದೃಶ್ಯವನ್ನು ನೋಡಿದ ಕೂಡಲೇ ತಹಶೀಲ್ದಾರ್‌‌ ಅವರು ಈ ಜಾಗವನ್ನು ಹದ್ದುಬಸ್ತು ಮಾಡಿ ಸರಿಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಹಾಡಿ ಮಹಿಳೆಯೊಬ್ಬರು ಮಾತನಾಡಿ, “ನಮಗೆ ಬಾಳ ತೊಂದ್ರಿ ಕೊಡ್ತಾರ. ಈ ಸೋಲರ್‌ ತಂತಿ ಇರಕೂಡದು ಇಲ್ಲಿ. ನಾವು ಹಿಂಗೆ ತಂದು ಮಡಿಕಂಡು, ಅವರು ತಗೀಗಂಟ ಹಿಂಗೆ ಕಾಯ್ಕೊಂಡು ನಿಂತಿರ್‍ಬೇಕು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹಾಡಿಯ ಪುರುಷರೊಬ್ಬರು ಮಾತನಾಡಿ, “ಹಿರಿಯರ ಕಾಲದಲ್ಲಿ ನಡೆದಂತೆಯೇ ಈಗಲೂ ನಡೆಯಬೇಕು. ಬರೋಕೆ ನಮಗೆ ಜಾಗ ಇಲ್ಲ. ಸರ್ಕಾರ ನಮಗೆ ಏನು ಮಾಡಿಕೊಟ್ಟಿದೆ?” ಎಂದು ಕೇಳಿದ್ದಾರೆ.

ಆಲನಹಳ್ಳಿ ಹಾಡಿಯಷ್ಟೇ ಅಲ್ಲದೇ ಸರಗೂರು ತಾಲ್ಲೂಕಿನ ಹಲವು ಹಾಡಿಗಳು ಇದೇ ಸಮಸ್ಯೆಯನ್ನು ಎದುರಿಸುತ್ತಿವೆ ಎಂದು ಮೂಲಗಳು ತಿಳಿಸಿದೆ.

ವಿಡಿಯೊ ವೈರಲ್‌ ಆದ ಬೆನ್ನಲ್ಲೇ ಸರಗೂರು ತಹಸೀಲ್ದಾರ್‌ ಚೆಲುವರಾಜು ಅವರನ್ನು ‘ನಾನುಗೌರಿ.ಕಾಂ’ ಸಂಪರ್ಕಿಸಿತು. ನಮ್ಮೊಂದಿಗೆ ಮಾತನಾಡಿದ ಅವರು, “ಆಲನಹಳ್ಳಿ ಹಾಡಿಗೆ ಇಂದು ಭೇಟಿ ನೀಡಿದ್ದೆನು. ಸ್ಮಶಾನಕ್ಕಾಗಿ ಜಾಗವನ್ನು ಗುರುತು ಮಾಡಿದ್ದೇವೆ. ಸರ್ಕಾರಕ್ಕೆ ಪ್ರಸ್ತಾವನೆ ಕಳಿಹಿಸಿದ್ದೇವೆ. ಸರ್ಕಾರ ಮಂಜೂರು ಮಾಡಿ ಕಳುಹಿಸಲಿದೆ” ಎಂದು ತಿಳಿಸಿದರು.

ಸರಗೂರು ತಾಲ್ಲೂಕಿನ ಉಳಿದ ಹಾಡಿಗಳಲ್ಲೂ ಇದೆ ಸಮಸ್ಯೆ ಇದೆ ಎಂಬುದರ ಬಗ್ಗೆ ಕೇಳಿದಾಗ, “ಸರ್ಕಾರಿ ಜಮೀನು ಎಲ್ಲಿದಿಯೋ ಅಲ್ಲಿ ಗುರುತು ಮಾಡಿ ಸಾರ್ವಜನಿಕ ಸ್ಮಶಾನಗಳನ್ನು ಮಾಡುತ್ತೇವೆ. ಹಾಡಿ ಜನರು ಅಲ್ಲಿಯೇ ಶವಸಂಸ್ಕಾರ ಮಾಡಬೇಕಾಗುತ್ತದೆ. ಸ್ಮಶಾನಕ್ಕೆ ಜಾಗವಿರದ ಕಡೆ ಭೂಮಿಯನ್ನು ಖರೀದಿಸುತ್ತಿದ್ದೇವೆ. ಸನ್ಮಾನದ ಸಮಸ್ಯೆ ತಲೆದೋರದಂತೆ ಕ್ರಮವಹಿಸಲಾಗುತ್ತಿದೆ” ಎಂದರು.


ಇದನ್ನೂ ಓದಿರಿ: ಪಾದಯಾತ್ರೆ ತಡೆಯಲು ಗೃಹ ಸಚಿವರು ಮತ್ತೊಮ್ಮೆ ಹುಟ್ಟಿ ಬರಬೇಕು: ಡಿ.ಕೆ ಶಿವಕುಮಾರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...