Homeಮುಖಪುಟಮತ ನಂಬಿಕೆ, ಜಾತ್ಯತೀತತೆ-ಮರುಕಟ್ಟಿಕೊಳ್ಳಬೇಕಾದ್ದು ಯಾವ ಭಾಷೆಯನ್ನು? -ಭಾಗ 2

ಮತ ನಂಬಿಕೆ, ಜಾತ್ಯತೀತತೆ-ಮರುಕಟ್ಟಿಕೊಳ್ಳಬೇಕಾದ್ದು ಯಾವ ಭಾಷೆಯನ್ನು? -ಭಾಗ 2

ಸೋತು ಸುಣ್ಣವಾದ ಜಾತ್ಯತೀತೆಯ ಮರುಕಟ್ಟುವಿಕೆಯಲ್ಲೇ ಹೊಸ ‘ಲೌಕಿಕ ಸಮಾನತೆಯ ಹೊಸ ಮತ’ಕ್ಕೆ ದಾರಿಯೂ ಕಾಣಬಹುದು. ಆತ್ಮಕ್ಕೆ ಸಾವಿಲ್ಲ ಎಂಬುದು ‘ಹಿಂದು ಮತ ನಂಬಿಕೆ’ಯಲ್ಲವೇ!

- Advertisement -
- Advertisement -

ಜಾತ್ಯತೀತತೆಯ ಸೋಲಿಗೆ ಕಾರಣಗಳೇನು?-ಮೂರು ಊಹಾ ಪ್ರಮೇಯಗಳು

ಜಾತ್ಯತೀತತೆ ‘ಶವವಾಗಿದೆ’ ಎಂದು ಯೋಗೇಂದ್ರ ಅವರು ಹೇಳುವಾಗ, ಅದು ಅವರಲ್ಲಿರುವ ಆತಂಕ-ಕಸಿವಿಸಿಯನ್ನು ತೋರಿಸುತ್ತದೆಯೇ ವಿನಹ ಅದು ಕುಹಕದ ಮಾತಲ್ಲ; ಅಂತಹ ಕಸಿವಿಸಿಗೆ ಒಳಗಾಗದೇ ಹೋದರೆ, ನಮ್ಮ ಸ್ವವಿಮರ್ಶೆ ಮೊಂಡಾಗಿ, ದೇಶಾವರಿ ಆಶಾವಾದಕ್ಕೆ ಬೀಳುತ್ತೇವೆ. ಜಾತ್ಯತೀತತೆ ನಿರ್ಜೀವಗೊಂಡಿರುವುದಕ್ಕೆ ಯೋಗೇಂದ್ರ ಅವರು ನೀಡಿರುವ ಕಾರಣಗಳು ತಕ್ಷಣದ ಊಹಾ ಪ್ರಮೇಯಗಳು (ಹೈಪೋಥಿಸೀಸ್); ಸದ್ಯಕ್ಕೆ ನಮ್ಮ ಬೌದ್ಧಿಕ ಹುಡುಕಾಟವು ಇಂತಹ ಊಹಾ ಪ್ರಮೇಯಗಳ ಮೂಲಕವೇ ಶುರುವಾಗಬೇಕು.

ಭಾರತದ ಉಪಖಂಡದಲ್ಲಿ, ಮತ ಹಾಗು ಪ್ರಭುತ್ವ ಅಧಿಕಾರಗಳ ಮೈತ್ರಿಯ ಇತಿಹಾಸವು ಎರಡು ಸಾವಿರ ವರ್ಷಗಳಿಗಿಂತ ಹೆಚ್ಚಿನದು; ಈ ನೆಲದಲ್ಲೇ ಹುಟ್ಟಿದ ಎರಡು ಮತಗಳು, ಅಲ್ಲೇ ನೆಯುಳಿಸಿಕೊಳ್ಳಲಾಗದಂತಾಗಿದೆ; ಮೂರನೇ ಮತವನ್ನು ಎದುರಾಳಿಯಾಗಿಸಿಕೊಂಡು ಅಧಿಕಾರ ಗಟ್ಟಿಗೊಳಿಸುವ ರಾಜಕೀಯ ತಂತ್ರವು ವಸಾಹತುಶಾಹಿ ಆಗಮನದ ಮೂರು ಶತಮಾನಗಳ ಕಾಲದಿಂದಲೂ ನಡೆಯುತ್ತಿದೆ. ಈ ಬಗೆಯ ಚಾರಿತ್ರಿಕ ಮತಾಧಿಕಾರದ ಎದಿರು ಹುಟ್ಟಿ ಸೆಣಸಿರುವ ‘ಆಧುನಿಕ ಜಾತ್ಯತೀತತೆ’ಯ ಪರಿಕಲ್ಪನೆಯ ವಯಸ್ಸು 150 ವರ್ಷಗಳು ಮಾತ್ರ. ಚಾರಿತ್ರಿಕವಾಗಿ ಸಂಚಯಿತವಾದ ಮತ-ಪ್ರಭುತ್ವ ಮೈತ್ರಿಯ ಯಜಮಾನಿಕೆಯ ಶಕ್ತಿಯನ್ನು ಆಧುನಿಕ ಜಾತ್ಯತೀತ ಪ್ರತಿರೋಧವು ಸರಿಯಾಗಿ ಅಂದಾಜಿಸದೇ, ಒಂದು ಹಂತದ ಮೇಲ್ಪದರದಲ್ಲಿ ಮೈಮರೆತಿದೆಯೇ?

Photo Credit: Jagra Josh

‘ಹಿಂದು’ ಎನ್ನುವುದು ಒಂದು ಮತವಲ್ಲ; ಹಲವಾರು ಮತ ಸಂಪ್ರದಾಯಗಳು ಆಚರಣೆಯಲ್ಲಿರುವ ಭೌಗೋಳಿಕ ಪ್ರದೇಶವನ್ನು ಗುರುತಿಸುವ ಒಂದು ವಿಧಾನ; ಪಶ್ಚಿಮದಿಂದ ಬಂದ ವಸಾಹತುಶಾಹಿ ಆಳರಸರಿಗೆ, ಆಡಳಿತಕ್ಕೋಸ್ಕರ ಜನರನ್ನು ‘ಒಂದು ಮತ’ದ ಅಡಿ ಒತ್ತಟ್ಟಿಗೆ ಸೇರಿಸುವ ತುರ್ತಲ್ಲಿ ಹಚ್ಚಿದ ಸಾಮಾನ್ಯ ಹಣೆಪಟ್ಟಿ; 1884ರಲ್ಲಿ ಮೊದಲ ಜನಗಣತಿಯು ನಡೆದಾಗ, ಎಲ್ಲರೂ ತಮ್ಮ ಜಾತಿಗಳ ಗುರುತನ್ನು ಹೇಳಿಕೊಳ್ಳುತ್ತಿದ್ದರು, ಇಲ್ಲ ವಿವಿಧ ಮತ ಸಂಪ್ರದಾಯಗಳ ಹೆಸರು ಹೇಳಿಕೊಂಡಿದ್ದರು; ಎಷ್ಟರ ಮಟ್ಟಿಗೆ ಎಂದರೆ, ಇಸ್ಲಾಂ ಹಾಗು ‘ಹಿಂದು’ ಮತ ಸಂಪ್ರದಾಯಗಳ ಸಂಕರದ ಪಂಥಗಳಲ್ಲೇ ಕೋಟ್ಯಂತರ ಜನ ತಮ್ಮನ್ನು ಗುರುತಿಸಿಕೊಳ್ಳುವ ವೈವಿಧ್ಯತೆಗೆ ವಸಾಹತುಶಾಹಿ ಆಡಳಿತವೇ ಬೆಚ್ಚಿತ್ತು- ಇದು ತೀರ ಹಳೆಯ ಇತಿಹಾಸವೇನೂ ಅಲ್ಲ. ಇಂತಿಪ್ಪ ನಾಡಲ್ಲಿ, ಎರಡು ಸಾವಿರ ವರ್ಷಗಳ ಸಾಮಾನ್ಯವೆಂದು ಗುರುತಿಸಬಹುದಾದ ಒಂದು ಸಂಗತಿ ಎಂದರೆ, ವೈದಿಕ ಮತಾಚಾರದ ಯಜಮಾನಿಕೆಯ ವಿರುದ್ಧ ಹಲವು ಮತ ಸಂಪ್ರಾದಯಗಳ ಭಿನ್ನಮತ! ಪ್ರತಿ ಪ್ರತಿರೋಧವನ್ನು ಹಿಂಸಾತ್ಮಕವಾಗಿ ದಮನಿಸಿದ ಅಥವ ಸಾಧ್ಯವಾಗದಾದಾಗ ಆ ಮತಸಂಪ್ರದಾಯಗಳ ಒಳಗೆ ನುಸುಳಿ, ತನ್ನ ಕೈಯ್ಯಾಳು ಮಾಡಿಕೊಂಡಿರುವ ವೈದಿಕಮತವು ತನ್ನ ಆಧ್ಯಾತ್ಮಿಕ ಜ್ಞಾನದ ವಿಶಿಷ್ಟತೆಗಿಂತ, ರಾಜಕೀಯ-ಸಾಮಾಜಿಕ ಕಾರ್ಯಾಚರಣೆಯ ತಂತ್ರಗಳ ಕಾರಣಕ್ಕೆ ‘ವೈದಿಕಶಾಹಿ’ ಎಂದೇ ಕುಖ್ಯಾತವಾಗಿದೆ. ಇಂತಾಗಿ ನಮ್ಮ ಭೂಖಂಡದಲ್ಲಿ ‘ಜಾತ್ಯತೀತತೆ’ಯ ಮುಖ್ಯ ಲಕ್ಷಣ ಎಂದರೆ ‘ವೈದಿಕಶಾಹಿ’ಯ ವಿರುದ್ಧದ ಲೌಕಿಕ ಪ್ರತಿರೋಧ. ಇಂತಹ ಪ್ರತಿರೋಧದ ‘ನೆನಪುಗಳ ಸಂಚಿತ ಭಂಡಾರ’ವನ್ನು, ತನ್ನ ವಿಶಿಷ್ಟ ವೈಚಾರಿಕ ಗುರುತುಧಾರಣೆಯಾಗಿ ಮಾಡಿಕೊಳ್ಳಲು ವಿಫಲವಾಗಿರುವುದು ‘ಜಾತ್ಯತೀತತೆ’ಯ ಸೋಲಿಗೆ ಮುಖ್ಯ ಕಾರಣ ಎಂಬುದು ಮೊದಲ ಊಹಾ ಪ್ರಮೇಯ.

ಈ, ಮೊದಲನೇ ಪ್ರಮೇಯದ ಸೋಲಿನ ಮುಖ್ಯ ಸೂಚನೆಗಳನ್ನು, 1970ರ ಹೊತ್ತಿಗೆ, ಬಲಪಂಥೀಯರಲ್ಲದ, ಆದರೆ ಎಡಪಂಥದ ಸಂಘಟನಾ ವ್ಯವಸ್ಥೆಗಳಾಚೆ ಇರುವ, ಭೌದ್ಧಿಕ ಸಮಾಜಶಾಸ್ತ್ರಜ್ಞರು ನೀಡತೊಡಗಿದ್ದರು. ‘ಜಾತ್ಯತೀತತೆ’ಯ ವೈಚಾರಿಕತೆಯು ನೆಹರು ಮಾದರಿಯ ಅಭಿವೃದ್ಧಿಗೆ ಪೂರಕವಾದ ‘ಪಶ್ಚಿಮದ ವೈಜ್ಞಾನಿಕ ಜ್ಞಾನಯುಗದ’ [ಎನ್‍ಲೈಂಟನ್ಮೆಂಟ್] ಮಾದರಿಯ ದಾರಿ ಹಿಡಿದಿದೆ; ಅದು ದಕ್ಷಿಣ ಏಶಿಯಾ ಭೂಖಂಡದ ‘ಜನಸಾಮಾನ್ಯ ನಂಬಿಕೆ’ಗಳಿಗೆ ವಿರುದ್ಧವಾಗಿದ್ದು, ಅದು ‘ಹಿಂಸಾತ್ಮಕ’ವಾಗಿದೆ ಎಂದು ಅವರು ಪ್ರಕಟಿಸತೊಡಗಿದ್ದರು. ನೆಹರು ಅವರು ‘ನೈತಿಕವಾಗಿಯೇ ಪ್ರಗತಿ’ ಎಂದು ನಂಬಿ ಆಚರಣೆಗೆ ತೊಡಗಿದ್ದ ‘ದೊಡ್ಡ ಕೈಗಾರಿಕೆ, ದೊಡ್ಡ ಆಣೆಕಟ್ಟುಗಳು’-ಇವುಗಳ ನಿರ್ಮಾಣ ಕೆಲಸದಲ್ಲಿ ತಮ್ಮ ಜೀವಾನಾಧರವನ್ನು ಕಳೆದುಕೊಂಡ ಜನರು, ತಮ್ಮ ಜೀವನಾಧರಗಳನ್ನು ಕಳೆದುಕೊಂಡದ್ದನ್ನು ತಮ್ಮ ‘ಅವೈಧಿಕ’ಭಾಷೆಗಳಲ್ಲಿ ತೋಡಿಕೊಳ್ಳುತ್ತಿದ್ದರ ಬಗ್ಗೆ ಅವರುಗಳು ಸೂಚಿಸುತ್ತಿದ್ದರು. ವಿಪರ್ಯಾಸವೆಂದರೆ, ಈ ಬಗೆಯಲ್ಲಿ ಜೀವನಾಧಾರ ಕಳೆದುಕೊಂಡ ಜನರ ಲೌಕಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದವರು ‘ನೆಹರು ಯುಗದ ಪ್ರಗತಿ’ಯ ಪರಿಕಲ್ಪನೆಯು ‘ವೈದಿಕಶಾಹಿ’ಯ ಲೌಕಿಕ ಹಿಡಿತವನ್ನು ನಿಶಸ್ತ್ರಗೊಳಿಸುವುದು ಎಂದೇ ನಂಬಿದವರಾಗಿದ್ದರು; ಪ್ರಗತಿಯ ಧನಾತ್ಮಕ ಸಂಪನ್ಮೂಲ ಉತ್ಪಾದನೆಯಲ್ಲಿ ಸಂಚಿತವಾದ ಸಂಪನ್ಮೂಲದ ಅಸಮ ಹಂಚಿಕೆಗೆ ಕಾರಣವಾದ ಅಧಿಕಾರಶಾಹಿಯ ಬಗ್ಗೆ ಅವರು ಮಾತನಾಡುತ್ತಿದ್ದರು. ‘ವೈದಿಕಶಾಹಿ’ಯನ್ನು ಎತ್ತಿ ಹಿಡಿಯುವ ಬಲಪಂಥಕ್ಕೆ ಪ್ರತಿರೋಧದ ‘ಅವೈದಿಕ’ಭಾಷೆಯು ಪಥ್ಯವಾಗಿರಲಿಲ್ಲ; ‘ಪ್ರಗತಿ’ಯಿಂದ ಸಂಚಿತವಾದ ಸಂಪನ್ಮೂಲದ ಸಿಂಹಪಾಲು ‘ವೈದಿಕಶಾಹಿ’ಯನ್ನು ಜತನವಾಗಿಡುವ ಜನ ವರ್ಗಗಳಿಗೆ ತಲುಪುವಂತೆ ‘ಅಧಿಕಾರಶಾಹಿ’ಯು ನೋಡಿಕೊಳ್ಳಲು ಅವರು ಸಹಕರಿಸಿ ಕಾರ್ಯಾಚರಿಸುತ್ತಿದ್ದರು; ಹಾಗಾಗಿ ಈ ಕಾಲದಲ್ಲಿ ನಡೆಯುತ್ತಿದ್ದ ‘ಸಮಾನ ಸಂಪನ್ಮೂಲ, ಸಾಮಾಜಿಕ ಪ್ರತಿನಿಧಿಕರಣ ಹಂಚಿಕೆ’ಗಾಗಿ ನಡೆಯುತ್ತಿದ್ದ ಹೋರಾಟಗಳನ್ನು ನಿಶಸ್ತ್ರಗೊಳಿಸುವ ಹೋರಾಟಗಳ ಕಡೆಗೆ ತಮ್ಮ ಶಕ್ತಿ ಕೇಂದ್ರೀಕರಿಸತೊಡಗಿದರು.

ಇದನ್ನು ಓದಿ: ಮತ ನಂಬಿಕೆ, ಜಾತ್ಯತೀತತೆ : ಮರುಕಟ್ಟಿಕೊಳ್ಳಬೇಕಾದ್ದು ಯಾವ ಭಾಷೆಯನ್ನು? ಭಾಗ: 1 – ಕೆ.ಫಣಿರಾಜ್

‘ಭೂಸುಧಾರಣ ಹೋರಾಟ’ಗಳು, ‘ಮೀಸಲಾತಿ ಚಳುವಳಿ’ಗಳನ್ನು ‘ವೈದಿಕಾಶಾಹಿ’ ಶಕ್ತಿ ಕೇಂದ್ರಗಳು ಹ್ಯಾಗೆ ಪ್ರತಿರೋಧಿಸಿದವು ಎಂಬುದರ ಕುರಿತ ಅಧ್ಯಯನಗಳು ಭೌದ್ಧಿಕ ವಲಯದಲ್ಲಿ ನಡೆದಿವಯೋ ಇಲ್ಲವೋ, ನಡೆದಿದ್ದರೂ ಅವುಗಳ ಪಾಠವನ್ನು ತಳಮಟ್ಟದ ‘ಜಾತ್ಯತೀತ ಹೋರಾಟಗಾರರಿಗೆ’ ತಲುಪಿಸುವ ಸಾಂಸ್ಥಿಕ ವ್ಯವಸ್ಥೆಯಂತೂ ಭಾರತದಲ್ಲಿ ಗೈರು ಹಾಜರಾಗಿತ್ತು. ಯೋಗೇಂದ್ರ ಅವರು ‘ಜಾತ್ಯತೀತರು ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವವರಾಗಿದ್ದಾರೆ’ ಎಂದಾಗ ಅವರು ಏನನು ಸೂಚಿಸುತ್ತಿದ್ದಾರೆ? ಅವರು ‘ನೆಹರು ಪ್ರಗತಿ’ಯ ಪರಿಕಲ್ಪನೆಯನ್ನು ತಳಮಟ್ಟದಲ್ಲಿ ಆ ಪ್ರಗತಿಯಿಂದ ಹೊರದೂಡಲ್ಪಟ್ಟ ಸಮುದಾಯಗಳ ಪರವಾಗಿ ಹೋರಾಟ ಮಾಡುತ್ತಿರುವವರಿಗೆ ದಾಟಿಸುತ್ತಿದ್ದ ಭೌದ್ಧಿಕತೆಯ ಬಗ್ಗೆ ಮಾತನಾಡುತ್ತಿದ್ದಾರೆ! ನೆಹರು ಅವರ ವೈಜ್ಞಾನಿಕ ಪ್ರಗತಿಯ ಕಲ್ಪನೆಯನ್ನೇ ‘ಜಾತ್ಯಾತೀತತೆ’ಯ ಗುರುತಾಗಿ ನಿರೂಪಿಸುವ ಭೌದ್ಧಿಕರು ಮತ್ತು ಅವರಿಗೆ ಭಿನ್ನಮತ ತೋರಿದ ಭೌದ್ಧಿಕರ ನಡುವಿನ ವಾಗ್ವಾದಗಳ ನೈಜತೆಯ ನ್ಯಾಯನಿರ್ಣಯವು, ‘ಪ್ರಗತಿ’ಯಿಂದ ನಿರಾಶ್ರಿತರಾದವರ ಪರವಾಗಿ ಹೋರಾಡುತ್ತಿರುವ ಹೋರಾಟಗಾರರು ಮಾಡಬೇಕಿತ್ತು; ತಾವು ಯಾವ ಜನರ ಪರವಾಗಿ ಹೋರಾಡುತ್ತಿದ್ದರೋ ಆ ಜನರಿಗೆ ಈ ವಾಗ್ವಾದಗಳು ನಿಮ್ಮ ಹೆಸರಲ್ಲಿ ನಡೆಯುತ್ತಿವೆ ಎಂಬ ವಾಸ್ತವವನ್ನು ತಿಳಿಸುವ ಒಂದು ಜೀವಂತ ಮಾಧ್ಯಮದ ಅವಶ್ಯಕತೆ ಇತ್ತು. ಆ ಮಾಧ್ಯಮವು- ಯಾವುದನ್ನು ಚಿಂತಕ ಮತ್ತು ಸಮಾಜವಾದಿ ಹೋರಾಟಗಾರ ಗ್ರಾಮ್ಷಿ – ಸಂಘಟಿತ ಭೌದ್ಧಿಕ ಭಿನ್ನಮತಗಳ ಚಿಂತನೆಯ ಸಂವಹನೆಗಳನ್ನು ಸಹಜವಾಗಿಸಿಕೊಂಡ ‘ಜನಾನುರಾಗಿ ಹೋರಾಟಗಳು’ [ನ್ಯಾಷನಲ್ ಪಾಪ್ಯುಲಾರ್] ಎಂದು ಕರೆದನೋ- ಅದು ಗೈರು ಹಾಜಾರಾಗಿರುವುದನ್ನು ನಾವು 1970-90ರ ನಡುವಿನ ಹೋರಾಟಗಳಲ್ಲಿ ಕಾಣಬಹುದು. ಇದು ‘ಜಾತ್ಯತೀತತೆಯ ಸೋಲಿಗೆ’ ಕಾರಣವಾದ ಎರಡನೇ ಊಹಾ ಪ್ರಮೇಯ.

ಸದರಿ ಬರಹಗಾರನ ಸೀಮಿತ ತಿಳುವಳಿಕೆಯಲ್ಲಿ, 1850-1950ರವರೆಗಿನ ಶತಮಾನದ ಕಾಲಾವಧಿಯಲ್ಲಿ, ಭಾರತದ ‘ಜಾತ್ಯತೀತತೆ’ಗೆ ಸಶಕ್ತವಾದ ಭೌದ್ಧಿಕತೆಯನ್ನು ಒದಗಿಸಿದ್ದು ಎರಡು ‘ಜ್ಞಾನ ವಿದ್ಯಮಾನ’ [ರಿನೈಸೆನ್ಸ್] ಗಳು: ಫುಲೇ ದಂಪತಿಗಳ ಚಿಂತನೆ-ಕಾರ್ಯಾಚರಣೆಗಳಿಂದ ಚೋದಿತವಾದ ‘ಮಹಾರಾಷ್ಟ್ರ ಜ್ಞಾನ ವಿದ್ಯಮಾನ’ ಹಾಗು ಈಶ್ವರಚಂದ್ರ ವಿದ್ಯಾಸಾಗರರಿಂದ ರವೀಂದ್ರನಾಥ ಟಾಕೂರರ ಚಿಂತನೆ ಮತ್ತು ಕಾರ್ಯಾಚರಣೆಗಳಿಂದ ಪ್ರೇರಿತವಾದ ‘ಬಂಗಾಳ ಭೌದ್ಧಿಕ ವಿದ್ಯಮಾನ’. ಎಂ.ಕೆ.ಗಾಂಧಿ-ಬಿ.ಆರ್.ಅಂಬೇಡ್ಕರ್ ಅವರ ನಡುವಿನ ಪ್ರಖರ ವಾಗ್ವಾದಗಳು ಈ ಎರಡು ಚಿಂತನೆ-ಆಚರಣೆಗಳ ಚೌಕಟ್ಟಲ್ಲಿ ನಡೆದವು. ಈ ಚಿಂತನೆಗಳು ಜೀವಂತವಾಗಿದ್ದ ಎರಡೂ ನಾಡುಗಳಿಂದ ಇವುಗಳಿಗೆ ‘ವೈದಿಕಶಾಹಿ’ ಪ್ರತಿಕ್ರಿಯೆಗಳೂ ಬಂದವು. ಅವುಗಳಲ್ಲಿ ಒಂದು ಮಹಾರಾಷ್ಟ್ರದಿಂದ ಹುಟ್ಟಿದ ’ಹಿಂದುತ್ವ ಬಹಸಂಖ್ಯಾತವಾದ’. 1920ರಲ್ಲೇ ಹುಟ್ಟಿಬಂದ ಈ ‘ವೈದಿಕಶಾಹಿ ಪ್ರತಿಕ್ರಾಂತಿ’ಯು ತಾನು 1950ರವರೆಗೆ ನಡೆಸಿದ ಕಾರ್ಯಾಚರಣೆಗಳಿಂದ ಸ್ವತಂತ್ರ ಭಾರತದ ಪ್ರಭುತ್ವದ ನೀತಿ ನಡಾವಳಿಗಳ ಮೇಲೆ ಹಿಡಿತ ಸಾಧಿಸಲು ವಿಫಲವಾದರೂ, ಸಮಾಜದಲ್ಲಿ ‘ಪ್ರತಿಕ್ರಾಂತಿಯ ಜ್ಞಾನ ಸಂವಹನೆ’ಯಲ್ಲಿ ಬಹು ಯಶಸ್ವ್ವಿಯಾಗಿದ್ದವು. ಸ್ವಾತಂತ್ರ್ಯೋತ್ತರ ಭಾರತದ ಜಾತ್ಯತೀತತೆಯ ವೈಚಾರಿಕತೆ ಹಾಗು ಕಾರ್ಯಾಚರಣೆಗಳಿಗೆ ‘ಮಹಾರಾಷ್ಟ್ರ –ಬಂಗಾಳ ಜ್ಞಾನ ವಿದ್ಯಮಾನ’ಗಳು ಬುನಾದಿಯಾಗಿ, ‘ಮಹಾರಾಷ್ಟ್ರ ವೈದಿಕಶಾಹಿ’ಯ ಕಾರ್ಯಾಚರಣಾ ತಂತ್ರಗಳು ಎಚ್ಚರಿಕೆಯಾಗಿ ಇರಬೇಕಾಗಿತ್ತು. ಇವರಡೂ ಬಗ್ಗಡವಾದ ಭೌದ್ಧಿಕತೆ ಹಾಗು ಕಾರ್ಯಾಚರಣೆಗಳಲ್ಲಿ ತೊಡಗಿದ ಜಾತ್ಯತೀತ ಚಳುವಳಿಗಳು ‘ವೈದೀಕಶಾಹಿ ಪ್ರತಿಕ್ರಾಂತಿ’ಯ ದಾಂಗುಡಿಯನ್ನು ಹಗುರದಲ್ಲಿ ಪರಿಗಣಿಸಿದವು. 100 ವರ್ಷಗಳಲ್ಲಿ ಹರಳುಗಟ್ಟಿದ ‘ವೈದಿಕಶಾಹಿ ವಿರೋಧಿ ಜಾತ್ಯತೀತತೆ’ಯ ಲೌಕಿಕ ಸಮಾನತೆಯ ಹೋರಾಟದಲ್ಲಿ ‘ಅವೈದಿಕಶಾಹಿ ಪ್ರತಿರೋಧ’ವು ತಾನೇ ತಾನಾಗಿ ಮಿಳಿತವಾಗಿತ್ತು. ಆ ಮಿಳಿತದ ಹೊರತಾಗಿ ಒಂದು ‘ವೈದಿಕಶಾಹಿ ವಿರೋಧಿ ಜಾತ್ಯತೀತ ಜನಾನುರಾಗಿ’ ಬೌದ್ಧಿಕ ನಿರೂಪಣೆಯು ಸಾಧ್ಯವಿಲ್ಲ ಎಂಬ ಅರಿವು ಜಾತ್ಯತೀತ ಬೌದ್ಧಿಕತೆ-ಕಾರ್ಯಾಚರಣೆಗಳಿಗೆ ಇಲ್ಲದ್ದೇಹೋಗಿದ್ದು ಆಧುನಿಕ ‘ಮಹಾರಾಷ್ಟ್ರ ವೈದಿಕಶಾಹಿ ಪ್ರತಿಕ್ರಾಂತಿ’ಯ ಪ್ರಗತಿಗೆ ವರವಾಯಿತು. ಇದು ಜಾತ್ಯತೀತ ಸೋಲಿಗೆ ಮೂರನೇ ಊಹಾ ಪ್ರಮೇಯ.

ಈ ಮೂರು ಊಹಾ ಪ್ರಮೇಯಗಳಿಗೆ ಉದಾಹರಣೆಯಾಗಿ ಹತ್ತು ಹಲವು ಕಾರ್ಯಾಚರಣೆಗಳನ್ನು, ಬದುಕಿನ ಕಥನಗಳನ್ನು ಮತ್ತು ಕಲಾ-ಸೃಜನಶೀಲ ಕೃತಿಗಳನ್ನು ನೀಡಬಹುದು. ಇಂದಿಗೂ ಪ್ರಸ್ತುತವಾದ ಉದಾಹರಣೆಗಳನ್ನು ನೀಡಬಹುದು. ಆ ಮೂಲಕ, ಯೋಗೇಂದ್ರ ಅವರು ಆಶಿಸುವ ‘ಮತ ಸಹಿಷ್ಣು ಜಾತ್ಯತೀತತೆ’ಯ ಹೊಸ ಕಾರ್ಯಸಾಧ್ಯ ಆದರ್ಶಗಳ ಬೀಜ ಕಾಣಬಹುದು. ಸೋತು ಸುಣ್ಣವಾದ ಜಾತ್ಯತೀತೆಯ ಮರುಕಟ್ಟುವಿಕೆಯಲ್ಲೇ ಹೊಸ ‘ಲೌಕಿಕ ಸಮಾನತೆಯ ಹೊಸ ಮತ’ಕ್ಕೆ ದಾರಿಯೂ ಕಾಣಬಹುದು. ಆತ್ಮಕ್ಕೆ ಸಾವಿಲ್ಲ ಎಂಬುದು ‘ಹಿಂದು ಮತ ನಂಬಿಕೆ’ಯಲ್ಲವೇ!

  • ಪ್ರೊ.ಕೆ.ಫಣಿರಾಜ್, (ಕೋಮು ಸೌಹಾರ್ದ ಚಳವಳಿಯಲ್ಲಿ ತಳಮಟ್ಟದ ಆಕ್ಟಿವಿಸ್ಟ್ ಥರಾ ಕೆಲಸ ಮಾಡುತ್ತಾ ಅದರ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಕೆ.ಫಣಿರಾಜ್ ಅವರ ಆಸಕ್ತಿಯ ಮತ್ತು ಕಾಳಜಿಯ ಕ್ಷೇತ್ರಗಳು ಹಲವು. ನಮ್ಮ ಕಾಲದ (ಗ್ರಾಮ್ಶಿ ಹೇಳಿದ) ಆರ್ಗಾನಿಕ್ ಇಂಟಲೆಕ್ಚುವಲ್‌ಗಳಲ್ಲಿ ಅವರೊಬ್ಬರು ಎಂದರೆ, ಗ್ರಾಮ್ಶಿ ಬಗ್ಗೆ ಪುಸ್ತಕ ಬರೆದ ಫಣಿರಾಜ್ ಅವರು ಮುನಿಸು ತೋರಬಹುದು.)

ಇದನ್ನೂ ಓದಿ: ಮೋದಿ ಎರಡನೆಯ ಬಾರಿಗೆ ಅಧಿಕಾರಕ್ಕೆ ಬರಲು ಯಾರು ಕಾರಣರು? – ಎಚ್‌.ಎಸ್ ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...