Homeಮುಖಪುಟಬಲಪಂಥೀಯತೆ ಯಾಕೆ ಗೆಲ್ಲುತ್ತಿದೆ? - ಶಿವ ವಿಶ್ವನಾಥನ್

ಬಲಪಂಥೀಯತೆ ಯಾಕೆ ಗೆಲ್ಲುತ್ತಿದೆ? – ಶಿವ ವಿಶ್ವನಾಥನ್

ಸ್ಪಷ್ಟವಾಗಿ ಹೇಳಬೇಕೆಂದರೆ ಹಿಂಸೆ ಮತ್ತು ಕೇಡನ್ನು ಸೃಷ್ಟಿಸುವ ವಿಚಾರದಲ್ಲಿ ಬಲಪಂಥೀಯರು ಪರಿಣಿತರಾಗಿದ್ದರು. ಹಿಂಸೆಯನ್ನು ‘ಇತಿಹಾಸ ಸ್ವಚ್ಚಗೊಳಿಸುವ ಡಿಟರ್ಜೆಂಟ್’ ಆಗಿ ಬಳಸುವ ಬಲಪಂಥೀಯರು ಅದನ್ನು ಭೂತಗನ್ನಡಿಯ ಮೂಲಕ ಸಾದಿಸುತ್ತಾರೆ.

- Advertisement -
- Advertisement -

ಬಲಪಂಥೀಯತೆ ಯಾಕೆ ಯಶಸ್ಸು ಗಳಿಸುತ್ತಿದೆ ಎನ್ನುವ ಪ್ರಶ್ನೆಯನ್ನು ಎಡಪಂಥೀಯತೆಯ ಕುರಿತ ಪ್ರಬಂಧದ ಮೂಲಕ ಪ್ರಾರಂಬಿಸಬೇಕಾಗುತ್ತದೆ, ಆದರೆ ಗತದ ರಮ್ಯತೆಯ ಹಳಹಳಿಕೆಯಿಂದಾಗಲೀ ಅಥವಾ ಎದೆ ತಟ್ಟಿಕೊಳ್ಳುವಿಕೆಯಿಂದಾಗಲಿ ಅಲ್ಲ. ಎಡಪಂಥೀಯತೆ ಮಾಡಿಕೊಂಡ ಸ್ವಯಂ ಗಾಯಗಳ ಕಾರಣದಿಂದಾಗಿ ಬಲಪಂಥೀಯತೆ ಗಟ್ಟಿಗೊಳ್ಳುವುದಕ್ಕೆ ಸಹಕಾರಿಯಾಯಿತು ಎಂಬುದು ಸರಿಯಾದ ವಿಶ್ಲೇಷಣೆ. ತೆವಳುತ್ತಿರುವ ಸ್ಟಾಲಿನ್‍ವಾದದ ಹೆಳವಂಡದಿಂದ ಹೊರಬರಲಾರದೆ ಎಡಪಂಥವು ಇಂದಿಗೂ ಯಾತನೆ ಪಡುತ್ತಿದೆ ಮತ್ತು ಒಂದು ಕಾಲದಲ್ಲಿ ಜನಜನಿತವಾದ ತನ್ನ ಭಿನ್ನಮತೀಯ-ಪ್ರತಿರೋಧದ ಪರಿಕಲ್ಪನೆಯನ್ನು ಅದು ಹಾಳು ಮಾಡುತ್ತಿದೆ. ತನ್ನ ರಾಜಕಾರಣ ಪುನಃ ಪ್ರಾರಂಬಿಸುವುದಕ್ಕಿಂತಲೂ ಮೊದಲು ಅದರೊಳಗಿನ ಈ ಭೂತೋಚ್ಚಾಟನೆಗೆ ಒಬ್ಬ ಮಂತ್ರವಾದಿಯ ಅಗತ್ಯವಿದೆ. ಇಂತಹ ವಿಶ್ಲೇಷಕ ಮಾತ್ರ ವರ್ಗ ಎನ್ನುವ ಪ್ರವರ್ಗವು ಇಂದು ಜಡಗೊಂಡಿದೆ ಮತ್ತು ಸ್ವಯಂಕೇಂದ್ರಿತ ನಂಬಿಕೆಗಳ ಆತ್ಮರತಿಯಲ್ಲಿ ತೊಡಗಿಕೊಂಡಿದೆ ಎಂದು ಎಡಪಂಥೀಯರಿಗೆ ಹೇಳಬಲ್ಲ. ನರ್ಮದಾ ಚಳುವಳಿ ಮತ್ತು ಕೇರಳದ ಮೀನುಗಾರರ ಚಳುವಳಿಗೆ ಎಡಪಂಥೀಯರ ಪ್ರತಿಕ್ರಿಯೆ ಕಂಡಾಗ ಅವರಿಗೆ ಅಂಚಿನಲ್ಲಿರುವ, ಜೀವನೋಪಾಯದ ಸಮತೋಲನ ವೈವಸ್ಥೆಯ ಕುರಿತು ಪ್ರಜ್ಞೆಯೇ ಇಲ್ಲ ಎನ್ನುವ ಭಾವನೆ ಮೂಡುತ್ತದೆ.

ಎಡಪಂಥೀಯರು ತಮ್ಮನ್ನು ತಾವು ನಾಶಪಡಿಸಿಕೊಳ್ಳುತ್ತಿರುವಾಗ ಬಲಪಂಥೀಯರು ರಾಷ್ಟ್ರ-ಪ್ರಭುತ್ವ ಮತ್ತು ಯುವಜನತೆಯ ವಿಚಾರ ಎನ್ನುವ ಎರಡು ಮಹತ್ವಾಕಾಂಕ್ಷೆಯ ವಲಯಗಳನ್ನು ಹುಡುಕಿಕೊಂಡರು. ಸಣ್ಣ ಗ್ರಾಮಗಳಲ್ಲಿ ವಾಸಿಸುತ್ತಿರುವವರ ಕನಸುಗಳನ್ನು ಬಂಡವಾಳ ಮಾಡಿಕೊಂಡು ಚಲನಶೀಲತೆಯ ಮಿಥ್ಯೆಗಳನ್ನು ಸೃಷ್ಟಿಸಲಾಯಿತು ಮತ್ತು ಇದರ ಮುಂದೆ ‘ವರ್ಗವು ಒಂದು ಬದಲಾವಣೆಯ ಆಶಾಕಿರಣ’ ಎನ್ನುವ ಸಿದ್ದಾಂತ ಯಾವ ಕ್ಷಣಕ್ಕಾದರೂ ಕರಗಬಲ್ಲ ಹಿಮಗಡ್ಡೆಯಂತೆ ಕಂಡುಬಂದಿತು. ಇದೆ ವೇಳೆಯಲ್ಲಿ ಯುವಜನತೆಯ ಮಹತ್ವಾಕಾಂಕ್ಷೆಯ ಅಭಿಮತಕ್ಕೆ ಮಾದರಿಯೊಂದನ್ನು ಸೃಷ್ಟಿಸುತ್ತಿದ್ದೇವೆ ಎಂದು ಸೋಗುಹಾಕಿದ ಬಲಪಂಥೀಯರಿಗೆ ರಾಷ್ಟ್ರ – ಪ್ರಭುತ್ವ ನಿರೂಪಣೆಯು ಸಮವಸ್ತ್ರದಲ್ಲಿ ಕವಾಯತು ನಡೆಸುವ ರೀತಿಯ ಏಕರೂಪತೆಗೆ ಅವಕಾಶ ಮಾಡಿಕೊಟ್ಟಿತು. ಎಡಪಂಥೀಯರು ಎಂದೂ ಕಲಿಯದ ಕಪಟತನದ ಮೂಲಕ ಬಲಪಂಥೀಯರು ಒಳಗಿನಿಂದಲೇ ಕನ್ನ ಹಾಕಿ ಪ್ರಜಾಪ್ರಭುತ್ವವನ್ನು ಟೊಳ್ಳುಗೊಳಿಸಿದರು.

ಸ್ಪಷ್ಟವಾಗಿ ಹೇಳಬೇಕೆಂದರೆ ಹಿಂಸೆ ಮತ್ತು ಕೇಡನ್ನು ಸೃಷ್ಟಿಸುವ ವಿಚಾರದಲ್ಲಿ ಬಲಪಂಥೀಯರು ಪರಿಣಿತರಾಗಿದ್ದರು. ಹಿಂಸೆಯನ್ನು ‘ಇತಿಹಾಸ ಸ್ವಚ್ಚಗೊಳಿಸುವ ಡಿಟರ್ಜೆಂಟ್’ ಆಗಿ ಬಳಸುವ ಬಲಪಂಥೀಯರು ಅದನ್ನು ಭೂತಗನ್ನಡಿಯ ಮೂಲಕ ಸಾದಿಸುತ್ತಾರೆ. ಗುಂಪು ಹತ್ಯೆ (mob lynch) ತುಕಡಿ ನಡೆಸುವ ಹಿಂಸೆಯು ಬಹುಸಂಖ್ಯಾತರಿಗೆ ಇತಿಹಾಸದಲ್ಲಿ ತಮ್ಮನ್ನು ತೊಡಗಿಕೊಳ್ಳುವ ಅವಕಾಶವನ್ನು ಬಲಪಂಥ ಕಲ್ಪಿಸಿತು ಮತ್ತು ಎಡಪಂಥೀಯರು ಇದನ್ನು ಒದಗಿಸಲು ಸಾಧ್ಯವಿಲ್ಲ. ಎಡಪಂಥೀಯರು ಭವಿಷ್ಯದ ಕನಸನ್ನು ಸೃಷ್ಟಿಸಿದರು ಆದರೆ ಅದೇ ಸಮಯದಲ್ಲಿ ಬಲಪಂಥೀಯರು ಲೈವ್ ಹಿಂಸೆಯ ಮೂಲಕ ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಗತವನ್ನು ಪುನರ್‌ ನಿರ್ಮಿಸುವ ಅವಕಾಶಗಳನ್ನು ಕಲ್ಪಿಸಿದರು. ನೀನು ಮುಸ್ಲಿಂನನ್ನು ಹತ್ಯೆ ಮಾಡುವ ಮೂಲಕ ರಾಣಾ ಪ್ರತಾಪ್ ಅಥವಾ ಪದ್ಮಿನಿಗೆ ಆದ ಅನ್ಯಾಯವನ್ನು ಸರಿಪಡಿಸಿದ್ದೀಯ ಎನ್ನುವ ಆತ್ಮಸಂತೃಪ್ತಿ ಮೂಡಿಸಲಾಯಿತು. ಬಲಪಂಥೀಯತೆಯು ಹೆಚ್ಚು ಅಮಾನುಷವಾಗಿದ್ದರೂ ಸಹ ಹಿಂಸೆಯು ಭೂತೋಚ್ಚಾಟನೆಗೆ ಸಂತೃಪ್ತಿಯ ಸಿದ್ಧಾಂತ ಎಂದು ನಂಬಿಸುವಲ್ಲಿ ಯಶಸ್ವಿಯಾಯಿತು

ಬಲಪಂಥೀಯರ ರಾಷ್ಟ್ರ-ಪ್ರಭುತ್ವದ ಆಯ್ಕೆಯು ತೋಳ್ಬಲದ ಸಾಮೂಹಿಕ ಪ್ರಜ್ಞೆ, ಸೌಂದರ್ಯಾತ್ಮಕ ಐಕ್ಯಮತ, ರೋಮಾಂಚನದ ರಮಣೀಯ ಕ್ಷಣಗಳನ್ನು ಒದಗಿಸಿತು. ಸಾಮಾಜ ಶಾಸ್ತ್ರದ ವಿಭಾಗವಾದ ವರ್ಗ ಸಿದ್ದಾಂತಗಳು ಇದನ್ನು ಒದಗಿಸಲು ಸಾಧ್ಯವಿರಲಿಲ್ಲ. ವರ್ಗ ಹೋರಾಟಕ್ಕಿಂತಲೂ ಜನಪ್ರಿಯ ರಾಜಕೀಯಕ್ಕೆ (ಪಾಪ್ಯುಲಿಸಂ) ಹೆಚ್ಚಿನ ಬೆಂಬಲ ದೊರಕಿತು. ತನ್ನೆಲ್ಲ ತಗಲೂಫಿತನಗಳೊಂದಿಗೆ ತೇಲಿ ಬಂದ ಮೋದಿಯ ‘ಚಾಯ್‍ವಾಲಾ’ ದುಡಿಯುವ ವರ್ಗದ ಘೋಷಣೆಗಿಂತಲೂ ಹೆಚ್ಚಿನ ಸಖ್ಯವನ್ನು ಬೆಸೆಯಿತು. ಈ ಜನಪ್ರಿಯ ರಾಜಕಾರಣಕ್ಕೆ ಯಾವ ಕಡೆಗಾದರೂ ಹೊರಳಿಕೊಳ್ಳುವ ನಮ್ಯತೆ ಇರುತ್ತದೆ ಮತ್ತು ಎಡಪಂಥೀಯರು ಇದನ್ನು ಅರಿಯುವಲ್ಲಿ ಸೋತರು. ಕಾರ್ಯಕತರು ಮುಖ್ಯ, ಆದರೆ ದೊಂಬಿಕೋರರಿಗೆ ಪೂರಕವಾಗಿ ಮಾತ್ರವೆಂದು ಬಲಪಂಥೀಯರು ಅರ್ಥ ಮಾಡಿಕೊಂಡಿದ್ದರು. ಬಲಪಂಥೀಯತೆಯು ‘ಗಲಭೆಕೋರರು ಮತ್ತು ಬಹುಸಂಖ್ಯಾತವಾದ’ ನಡುವೆ ಪ್ರಜಾಪ್ರಭುತ್ವವನ್ನು ಬರ್ಬರವಾಗಿ ಹತ್ತಿಕ್ಕಬಲ್ಲದು ಮತ್ತು ಎಡಪಂಥೀಯತೆ ಇದನ್ನು ಕನಸಿನಲ್ಲಿಯೂ ಊಹಿಸಲು ಸಾದ್ಯವಿಲ್ಲ. ರಾಷ್ಟ್ರ-ಪ್ರಭುತ್ವದ ಮೂಲಕ ಮತ್ತು ಜನಪ್ರಿಯ ರಾಜಕೀಯ ಬಳಸಿಕೊಂಡು ಸಾಂಕೇತಿಕವಾಗಿ ಮುನ್ನುಗ್ಗಿ ಪ್ರಚೋದಿತ ವಾತಾವರಣ ಸೃಷ್ಟಿಸಿ ಜನತೆಯ ಆಶಾಭಾವನೆಯನ್ನು ಕಬ್ಜಾ ಮಾಡಿಕೊಳ್ಳುವ ಬಲಪಂಥೀಯತೆಯ ತಂತ್ರಗಾರಿಕೆಯ ಮುಂದೆ ಎಡಪಂಥೀಯತೆ ಮಂಕು ಹಿಡಿದಂತೆ ನಿಷ್ಕ್ರಿಯವಾಗಿ ಗೋಚರಿಸುತ್ತದೆ.

ವಿಜ್ಞಾನ, ವೈಜ್ಞಾನಿಕ ಮನೋದರ್ಮ ಕುರಿತಾದ ಚರ್ಚೆ, ಸಂವಾದಗಳಲ್ಲಿ ಹಿಂದುಳಿದು ಹಳೆಯ ವಾದಗಳಿಗೆ ಹೊರಳುವ ಎಡಪಂಥೀಯತೆಯು ಬರ್ನಲ್ ಮತ್ತು ನೀಧಮ್ ಅವರನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದೆ. ಮಾಕ್ರ್ಸಿಸಂ ವೇಲ್ಸ್‍ನೊಂದಿಗೆ (ಇಂಗ್ಲೆಂಡ್‍ನ ಒಂದು ಪ್ರಾಂತ) ಸಂಭಾಷಣೆ ನಡೆಸಬೇಕೆಂದು ನೀಧಮ್ ಬಯಸುತ್ತಾನೆ. ಆತ ಪ್ರಾದೇಶಿಕತೆಯನ್ನು ಅರಿತುಕೊಂಡಷ್ಟು ಎಡಪಂಥೀಯರು ಅರಿತಿಲ್ಲ, ಮಹಾಶ್ವೇತದೇವಿಯವರನ್ನು ಹೊರತುಪಡಿಸಿ. ವಿಜ್ಞಾನ ಒಂದು ಸಿದ್ದಾಂತ ಎಂದು ಬಲಪಂಥೀಯತೆ ಯಾವತ್ತಿಗೂ ಆಸಕ್ತಿ ತೋರಲಿಲ್ಲ. ಅವರಿಗೆ ಅದೊಂದು ನಿಮಿತ್ತ ಮಾತ್ರ. ಅದು ಪ್ರಾಚೀನ ವಿಜ್ಞಾನವನ್ನು ಒಂದು ಸಾಧನವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಅವರಿಗೆ ವಿಜ್ಞಾನ ಒಂದು ತಂತ್ರಜ್ಞಾನ ಮತ್ತು ತಂತ್ರಜ್ಞಾನವು ರಾಜಕೀಯಕ್ಕೆ ಬದಲಿ ವಸ್ತು ಮಾತ್ರ. ಈ ಎರಡು ಮಾರ್ಪುಗಳೊಂದಿಗೆ ಬಲಪಂಥೀಯತೆಯು ವಿಜ್ಞಾನವನ್ನು ಕಬ್ಜಾ ಮಾಡಿಕೊಂಡಿತು.

ವಿಮೋಚನೆ ಧಾರ್ಮಿಕ ಸಿದ್ಧಾಂತ ಹೊರತುಪಡಿಸಿ ಧರ್ಮದ ಕುರಿತಾಗಿ ಎಡಪಂಥೀಯತೆಯು ಅರ್ಥಶೂನ್ಯತೆಯಿಂದ ವರ್ತಿಸಿತು. ಅದರ ಸೆಕ್ಯುಲರಿಸಂ ಬರಿದಾಗಿದೆ ಮತ್ತು ಸಂವಾದ ನಡೆಸುವ ಪ್ರಜ್ಞೆ ಅದಕ್ಕಿಲ್ಲ. ಧರ್ಮವನ್ನು ಎಡಪಂಥ ಅರ್ಥಮಾಡಿಕೊಳ್ಳುವುದಕ್ಕೆ ಸೋತಿರುವುದು, ಬಹುದೊಡ್ಡ ನಾಗರಿಕತೆಯ ಪರಿಕಲ್ಪನೆಯಿಂದ ತನ್ನನ್ನು ಬೇರ್ಪಡಿಸಿಕೊಳ್ಳುವಂತೆ ಮಾಡಿದೆ. ಇದರ ಫಲವಾಗಿ ಮೌಢ್ಯದ ಕುರಿತು ಪೆದ್ದುತನ, ವಿಜ್ಞಾನದ ಕುರಿತು ಅಜ್ಞಾನ ಪ್ರದರ್ಶಿಸಿದೆ. ಧಾರ್ಮಿಕ ಚಳುವಳಿ ಮತ್ತು ಎಡಪಂಥೀಯತೆ ನಡುವಿನ ಸಂವಾದವು ಪರಿವರ್ತನಾಶೀಲ ನಡೆಯಾಗುತ್ತಿತ್ತು. ಅದು ಭಕ್ತಿ ಮತ್ತು ಮಾಕ್ರ್ಸ್‍ವಾದವನ್ನು ಬೆಸೆದಿದ್ದರೂ ಸರಿಯೆ. ಎಡಪಂಥೀಯತೆಯು ದರ್ಮದ ಕುರಿತು ಪುಕ್ಕಲುತನ ನಿಲುವು ಹೊಂದಿರುವ ಕಾರಣಕ್ಕೆ ಅದು ಬಲಪಂಥೀಯತೆಯ ಕೋಮುವಾದವನ್ನು ಅರಿತುಕೊಳ್ಳಲು ದುರ್ಬಲವಾಗಿದೆ. ಬಲಪಂಥೀಯತೆಯು ದರ್ಮ ಮತ್ತು ಆಧ್ಯಾತ್ಮವನ್ನು ಒಂದು ಸಾಧನವಾಗಿ ಬಳಸಿಕೊಂಡರೆ ಎಡಪಂಥೀಯತೆಯು ನಿಶ್ಚಲತೆಯಿಂದ ಮಂಕು ಬಡಿದಂತೆ ನಿರುಕಿಸುತ್ತಿತ್ತು. ಬಲಪಂಥೀಯತೆಯು ಇತಿಹಾಸವನ್ನು ತನಗೆ ಬೇಕಾದಂತೆ ತಿರುಚುವ ಒಂದು ಪದ್ದತಿಯನ್ನು ರೂಢಿಸಿಕೊಂಡಿತು ಮತ್ತು ಎಡಪಂಥೀಯತೆ ಇದನ್ನು ಗ್ರಹಿಸುವಲ್ಲಿಯೂ ವಿಫಲವಾಯಿತು. ಕೆವಿಐಸಿ (ಖಾದಿ ಅಂಡ್ ವಿಲೇಜ್ ಇಂಡಸ್ಟ್ರೀಸ್ ಕಮಿಶನ್) ಕ್ಯಾಲೆಂಡರ್‍ನಲ್ಲಿ ಗಾಂಧಿ ಜೊತೆಗೆ ಸಮಾನವಾಗಿ ಗುರುತಿಕೊಳ್ಳುವ ಮೋದಿಯ ಪ್ರಯತ್ನ ಮತ್ತು ಆ ನಡೆಯನ್ನು ಎಡಪಂಥೀಯತೆಯು ಊಹಿಸಲೂ ಸಾದ್ಯವಿಲ್ಲ.

ಅಂತಿಮವಾಗಿ ಇದು ಎರಡು ಸಾಧಾರಣ ಮಟ್ಟಗಳ ತಿಳುವಳಿಕೆಗಳ ನಡುವಿನ ಸಂಘರ್ಷ ಎನ್ನಬಹುದಾದರೂ, ಬಲಪಂಥೀಯತೆಯು ತನ್ನ ಎರಡನೆ ದರ್ಜೆಯ ಗುಣವನ್ನು ನಿರಂಕುಶಪ್ರಭುತ್ವ ಮತ್ತು ಪ್ರಜಾಪ್ರಭುತ್ವದೊಂದಿಗೆ ಸಂಯೋಜಿಸಬಲ್ಲದು. ಅದು ಎಡಪಂಥಕ್ಕಿಂತಲೂ ಕೇಡಿನ ಜೊತೆಗೆ ತುಂಬಾ ಸಕ್ರಿಯವಾಗಿದೆ. ಎಲ್ಲವನ್ನೂ ತನ್ನ ಅಗತ್ಯಕ್ಕೆ ಅನುಗುಣವಾಗಿ ತಿರುಚುವ ತಂತ್ರಗಾರಿಕೆ, ಜನಪ್ರಿಯತೆ ಮತ್ತು ತೋಳ್ಬಲದ ಪ್ರದರ್ಶನವು ಅವರಿಗೆ ಅಧಿಕಾರ ತಂದುಕೊಟ್ಟಿದೆ. ಅದೇ ಸಂದರ್ಭದಲ್ಲಿ ಎಡಪಂಥೀಯರು ನಿಷ್ಕ್ರಿಯರಾಗಿ ತಮ್ಮ ಸೈದ್ಧಾಂತಿಕ ತಪ್ಪುಗಳನ್ನು ಸಂಕುಚಿತ ದೃಷ್ಟಿಕೋನದ ಮೂಲಕ ವಿಮರ್ಶೆಗೆ ಒಳಪಡಿಸುವಲ್ಲಿ ನಿರತರಾಗಿದ್ದಾರೆ.

ಬಹುಶಃ ನವೀಕರಿಸಿದ ಇಪ್ಟಾ (ಇಂಡಿಯನ್ ಪೀಪಲ್ ಥಿಯೇಟರ್ ಅಸೋಸಿಯೇಶನ್) ಎಡಪಂಥೀಯತೆಯ ನಿಷ್ಕ್ರಿಯತೆಯನ್ನು ಪ್ರತಿಫಲಿಸುವ ರಂಗಕಲೆಯನ್ನು ಪ್ರದರ್ಶಿಸಬಹುದು. ಬಲಪಂಥೀಯತೆ ಗೆ ಮಾಧ್ಯಮಗಳನ್ನು ಬಳಸಿಕೊಳ್ಳುವ ಕಲೆ ಕರಗತವಾಗಿದೆ ಮತ್ತು ಎಡಪಂಥೀಯರು ಅದನ್ನು ಊಹಿಸಲೂ ಸಾದ್ಯವಿಲ್ಲ. ಮೋದಿ ಸಾಧಾರಣ ಮತ್ತು ಮೊದ್ದು ರಾಜಕಾರಣಿಯಾಗಿರಬಹುದು ಆದರೆ ಕಾರಟ್‍ರವರು ಅಪ್ರಸ್ತುತ ಪಳೆಯುಳಿಕೆ ಪ್ರಾಣಿಯ ಮಾದರಿಯಾಗಿ ಕಾಣುತ್ತಾರೆ. ಅವರು ಮೋದಿಯ ಅಸಡ್ಡಾಳತನವನ್ನು ಎಂದಿಗೂ ಸರಿಗಟ್ಟಲು ಸಾಧ್ಯವಿಲ್ಲ.

  • ಶಿವ ವಿಶ್ವನಾಥನ್ ( ಭಾರತದ ಖ್ಯಾತ ಚಿಂತಕರು. ಒ.ಪಿ ಜಿಂದಾಲ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಅವರು ಹಲವು ಭಾರತೀಯ ನಿಯತಕಾಲಿಕೆಗಳಲ್ಲಿ ನಿರಂತರವಾಗಿ ಲೇಖನಗಳನ್ನು ಬರೆಯುತ್ತಿದ್ದಾರೆ)
  • ಅನುವಾದ: ಬಿ.ಶ್ರೀಪಾದ್ ಭಟ್

ಇದನ್ನು ಓದಿ: ಚಂದ್ರಶೇಖರ್ ಆಜಾದ್: ಮತ್ತೊಬ್ಬ ದಲಿತ ಸೂರ್ಯನ ಉದಯ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...