ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಕಾಂಗ್ರೆಸ್ ಕೇಂದ್ರ ನಾಯಕತ್ವದ ಮೇಲೆ ಒತ್ತಡಗಳು ಹೆಚ್ಚುವ ಸೂಚನೆಗಳು ದೊರೆತಿವೆ.
ಕಾಂಗ್ರೆಸ್ ಪಕ್ಷದ ನಾಯಕ ಸಚಿನ್ ಪೈಲಟ್ ತನ್ನದೇ ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ. ಭ್ರಷ್ಟಾಚಾರ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವಾಗಿ ಗುರುವಾರ ಅಜ್ಮೀರ್ನಿಂದ ‘ಜನಸಂಘರ್ಷ್ ಯಾತ್ರೆ’ ಆರಂಭಿಸಿರುವ ಸಚಿನ್, ಐದು ದಿನಗಳಲ್ಲಿ ಸುಮಾರು 125 ಕಿ.ಮೀ. ಕ್ರಮಿಸಲಿದ್ದಾರೆ.
ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಬಿಜೆಪಿ ನಡೆಸಿರುವ ಭ್ರಷ್ಟಾಚಾರಗಳ ಕುರಿತು ಯಾವುದೇ ಕ್ರಮವನ್ನು ಗೆಹ್ಲೋಟ್ ನೇತೃತ್ವದ ಸರ್ಕಾರ ಜರುಗಿಸಿಲ್ಲ ಎಂದು ಕಳೆದ ತಿಂಗಳು ಒಂದು ದಿನದ ಉಪವಾಸವನ್ನು ನಡೆಸಿ ಸಚಿನ್ ಗಮನ ಸೆಳೆದಿದ್ದರು.
ಗುರುವಾರ ಮಧ್ಯಾಹ್ನದ ಸುಮಾರಿಗೆ ಜೈಪುರ ರಸ್ತೆಯ ಅಶೋಕ್ ಉದ್ಯಾನ್ ಬಳಿ ಪೈಲಟ್ ಅವರು ರಾಜ್ಯ ರಾಜಧಾನಿ ಕಡೆಗೆ ಮೆರವಣಿಗೆಯನ್ನು ಪ್ರಾರಂಭಿಸುವ ಮೊದಲು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರು ಕಿಶನ್ಗಢದ ತೊಲಮಲ್ ಗ್ರಾಮದಲ್ಲಿ ರಾತ್ರಿ ತಂಗಲಿದ್ದಾರೆ.
ಗೆಹ್ಲೋಟ್ ಮತ್ತು ಪೈಲಟ್ ನಡುವೆ ತಿಕ್ಕಾಟ ತಾರಕಕ್ಕೇರುತ್ತಿದೆ. ಎರಡು ವರ್ಷಗಳಿಗೂ ಹೆಚ್ಚು ಕಾಲ ಸಾರ್ವಜನಿಕವಾಗಿ ಗುದ್ದಾಟ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡಬೇಕೆಂದು 2020ರಲ್ಲಿ ಸಚಿನ್ ಬಂಡಾಯ ತೋರಿದ್ದರು.
ಆದಾಗ್ಯೂ, ಗೆಹ್ಲೋಟ್ ಅಧಿಕಾರದಲ್ಲಿ ಮುಂದುವರಿಯುವಲ್ಲಿ ಯಶಸ್ವಿಯಾದರು. ಪೈಲಟ್ ಮತ್ತು ಅವರ ಕೆಲವು ನಿಷ್ಠರನ್ನು ನಂತರ ರಾಜ್ಯ ಕ್ಯಾಬಿನೆಟ್ನಿಂದ ಹೊರಹಾಕಲಾಯಿತು.
ಭಾನುವಾರ ಧೋಲ್ಪುರದಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಮುಖ್ಯಮಂತ್ರಿ, ಬಿಜೆಪಿ ನಾಯಕರಾದ ವಸುಂಧರಾ ರಾಜೇ ಮತ್ತು ಕೈಲಾಶ್ ಮೇಘವಾಲ್ ಅವರು ಹಣಬಲವನ್ನು ನೀಡಲಿಲ್ಲ. ಚುನಾಯಿತ ಸರ್ಕಾರವನ್ನು ಉರುಳಿಸುವ ಪಿತೂರಿಯನ್ನು ಬೆಂಬಲಿಸಲು ಅವರು ನಿರಾಕರಿಸಿದ್ದರಿಂದ 2020ರಲ್ಲಿ ಕೆಲವು ಕಾಂಗ್ರೆಸ್ ಶಾಸಕರ ಬಂಡಾಯ ಯಶಸ್ವಿಯಾಗಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಪೈಲಟ್ ಅವರು ಗೆಹ್ಲೋಟ್ ಹೇಳಿಕೆಗಳಿಗೆ ತಿರುಗೇಟು ನೀಡಿದ್ದಾರೆ. ಗೆಹ್ಲೋಟ್ ಅವರು ಆರೋಪಗಳು ನಿರಾಧಾರ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಇತ್ತೀಚೆಗೆ ಮಾತನಾಡಿದ್ದ ಫೈಲಟ್, “ನಮ್ಮ ಮಕ್ಕಳು ವರ್ಷಗಳ ಕಾಲ ಕಷ್ಟಪಟ್ಟಿರುತ್ತಾರೆ, ಪೋಷಕರು ಮಕ್ಕಳ ಟ್ಯೂಷನ್ ತರಗತಿಗಳಿಗಾಗಿ ಅರೆಹೊಟ್ಟೆ ಮಾಡಿಕೊಂಡಿರುತ್ತಾರೆ. ಅವರು ಪರೀಕ್ಷೆಗಳಿಗೆ ಹಾಜರಾಗುತ್ತಾರೆ, ಪತ್ರಿಕೆ ಸೋರಿಕೆಯಾಗುತ್ತದೆ, ರದ್ದುಗೊಳ್ಳುತ್ತದೆ. ಅದರ ಮೇಲೆ ಕ್ರಮ ಕೈಗೊಳ್ಳಲು ಏಕೆ ಇಷ್ಟು ಸಮಯ ಬೇಕಾಗುತ್ತದೆ? ನ್ಯಾಯ ಪಡೆಯುವುದು ಏಕೆ ಕಷ್ಟ?” ಎಂದು ಪ್ರಶ್ನಿಸಿದ್ದರು.
“ಉನ್ನತ ಹುದ್ದೆಯಲ್ಲಿರುವವರಿಗೆ ಶಿಕ್ಷಣಕ್ಕಾಗಿ ಖರ್ಚು ಮಾಡುವ ಸಾವಿರಾರು ರೂಪಾಯಿಗಳ ಮೌಲ್ಯ ತಿಳಿದಿಲ್ಲ. ಆದ್ದರಿಂದ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ತುಂಬಾ ಸಮಯ ತೆಗೆದುಕೊಳ್ಳಲಾಗುತ್ತದೆ” ಎಂದು ಆರೋಪಿಸಿದ್ದರು.