ಧಾರ್ಮಿಕ ಸ್ಥಳಗಳಲ್ಲಿ ಸಮೀಕ್ಷೆ ನಡೆಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಪರಿಗಣಿಸದಂತೆ ಮತ್ತು ಈಗಾಗಲೇ ನಡೆಯುತ್ತಿರುವ ಸಮೀಕ್ಷೆಗಳನ್ನು ನಿಲ್ಲಿಸುವಂತೆ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದೆ.
ಒಂದು ಧರ್ಮದ ಧಾರ್ಮಿಕ ಸ್ಥಳ ತಮಗೆ ಸೇರಿದ್ದು ಎಂದು ಇನ್ನೊಂದು ಧರ್ಮದ ಅನುಯಾಯಿಗಳು ಅರ್ಜಿ ಹಾಕಿದಾಗ ಸಮೀಕ್ಷೆಗೆ ಆದೇಶಿಸದೆ 1991ರ ಆರಾಧನಾ ಸ್ಥಳಗಳ ಕಾಯ್ದೆ ಪಾಲಿಸುವಂತೆ ಕೆಳ ನ್ಯಾಯಾಲಯಗಳಿಗೆ ನಿರ್ದೇಶನ ನೀಡಬೇಕು. ಸಮೀಕ್ಷೆ ನಡೆಸುವಂತೆ ನ್ಯಾಯಾಲಯಗಳು ನೀಡಿರುವ ಆದೇಶಗಳನ್ನು ಕಾರ್ಯಗತಗೊಳಿಸದಂತೆ ಸರ್ಕಾರಗಳಿಗೆ ಸೂಚಿಸಬೇಕು ಎಂದು ಅಲೋಕ್ ಶರ್ಮಾ ಮತ್ತು ಪ್ರಿಯಾ ಮಿಶ್ರಾ ಎಂಬವರು ಸಲ್ಲಿಸಿರುವ ಅರ್ಜಿಯಲ್ಲಿ ಕೋರಲಾಗಿದೆ.
ಹೈಕೋರ್ಟ್, ವಿಚಾರಣಾ ನ್ಯಾಯಾಲಯ ಸೇರಿದಂತೆ ಕೆಳ ನ್ಯಾಯಾಲಯಗಳು 1991ರ ಆರಾಧನಾ ಸ್ಥಳಗಳ ಕಾಯ್ದೆಯನ್ನು ಅನುಸರಿಸುವಂತೆ ಮತ್ತು ಸಮೀಕ್ಷೆ ಆದೇಶಿಸದಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಶಾಂತಿ, ಸೌಹಾರ್ದತೆಯನ್ನು ಕಾಪಾಡುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಬೇಕು. ಸಿವಿಲ್ ನ್ಯಾಯಾಲಯಗಳು ಸಮೀಕ್ಷೆಗೆ ಆದೇಶಿಸಿದ ತಕ್ಷಣ ತರಾತುರಿ ಮಾಡದೆ, ಪ್ರಕರಣ ಸಂಬಂಧ ಹೈಕೋರ್ಟ್, ಸುಪ್ರೀಂ ಕೋರ್ಟ್ಗೆ ಹೋಗಲು ಸಮಯ ನೀಡುವಂತೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಅಜ್ಮೀರ್ ದರ್ಗಾ ಷರೀಫ್, ಭೋಜಶಾಲಾ, ಸಂಭಾಲ್ ಜಾಮಾ ಮಸೀದಿ, ಮಥುರಾ ಶ್ರೀಕೃಷ್ಣ ಜನ್ಮಭೂಮಿ-ಶಾಹೀ ಈದ್ಗಾ ಮಸೀದಿ ಮತ್ತು ಜ್ಞಾನವಾಪಿಗೆ ಸಂಬಂಧಿಸಿದ ಪ್ರಕರಣಗಳು ದೇಶದ ಕೋಮು ವಾತಾವರಣವನ್ನು ಹಾಳು ಮಾಡುತ್ತಿದ್ದು, ಈ ಎಲ್ಲಾ ಪ್ರಕರಣಗಳಿಗೆ ಕಡಿವಾಣ ಹಾಕಲು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
1991ರ ಆರಾಧನಾ ಸ್ಥಳಗಳ ಕಾಯ್ದೆ, ದೇಶಕ್ಕೆ ಸ್ವಾಂತತ್ರ್ಯ ಬರುವಾಗ ಇದ್ದ ಹಾಗೆಯೇ ಧಾರ್ಮಿಕ ಸ್ಥಳ, ನಿರ್ಮಾಣಗಳು ಮುಂದುವರಿಸಬೇಕು. ಅದರ ಸ್ವರೂಪದಲ್ಲಿ ಬದಲಾವಣೆ ಮಾಡಬಾರದು ಎಂದು ಹೇಳುತ್ತದೆ. ಹೀಗಿರುವಾಗ, ಧಾರ್ಮಿಕ ಸ್ಥಳಗಳ ಹಕ್ಕು ಪ್ರತಿಪಾದಿಸಿ ಅರ್ಜಿ ಸಲ್ಲಿಸುವುದು. ಅದನ್ನು ಪರಿಗಣಿಸಿ ನ್ಯಾಯಾಲಯಗಳು ಸಮೀಕ್ಷೆಗೆ ಆದೇಶಿಸುವುದು ಸರಿಯಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ.
ಇದನ್ನೂ ಓದಿ : “ಮಸೀದಿಗಳ ಸಮೀಕ್ಷೆಗೆ ಅನುಮತಿಸುವ ಮೂಲಕ ‘ಸಂವಿಧಾನಕ್ಕೆ ಅಪಚಾರ’ವೆಸಗಿದ ನ್ಯಾ. ಚಂದ್ರಚೂಡ್” : ದುಷ್ಯಂತ್ ದವೆ


