Homeಅಂಕಣಗಳುಪ್ರಜಾಪ್ರಭುತ್ವ ವಿರೋಧಿ ಬ್ರೆಜಿಲ್ ಗಲಭೆಗಳಿಗೆ ಕಾರಣವಾದ ತೀವ್ರ ಧ್ರುವೀಕರಣ; ಜಗತ್ತಿಗೆ ಎಚ್ಚರಿಕೆಯ ಗಂಟೆ!

ಪ್ರಜಾಪ್ರಭುತ್ವ ವಿರೋಧಿ ಬ್ರೆಜಿಲ್ ಗಲಭೆಗಳಿಗೆ ಕಾರಣವಾದ ತೀವ್ರ ಧ್ರುವೀಕರಣ; ಜಗತ್ತಿಗೆ ಎಚ್ಚರಿಕೆಯ ಗಂಟೆ!

- Advertisement -
- Advertisement -

ಯುಎಸ್‌ಎನಲ್ಲಿ ಅಧ್ಯಕ್ಷೀಯ ಚುನಾವಣೆ ಸೋತ ತೀವ್ರ ಬಲಪಂಥೀಯ ಮುಖಂಡ-ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಫಲಿತಾಂಶವನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದ. ಇದು ಆತನ ಬೆಂಬಲಿಗ ಬಹುಸಂಖ್ಯಾತರನ್ನು ಎಷ್ಟು ಪ್ರಭಾವಿಸಿತ್ತೆಂದರೆ, ಇಡೀ ಚುನಾವಣೆಯನ್ನು ಟ್ರಂಪ್‌ನಿಂದ ಕಸಿಯಲಾಗಿದೆ ಎಂಬ ವಾದವನ್ನು ಸ್ವಲ್ಪವೂ ವಿವೇಚನೆಯಿಲ್ಲದೆ ಒಪ್ಪಿಕೊಂಡುಬಿಟ್ಟಿದ್ದರು. ಇದರ ಪರಿಣಾಮ ಜನವರಿ 6, 2021ರಂದು ಮತ ಎಣಿಕೆ ಪ್ರಕ್ರಿಯೆಯನ್ನು ಅಡ್ಡಿಪಡಿಸಲು ವಾಶಿಂಗ್ಟನ್‌ನ ಕ್ಯಾಪಿಟೊಲ್ ಭವನದ ಮೇಲೆ ನಡೆಸಿದ ದಾಳಿ. ಮಾರಕಾಸ್ತ್ರಗಳನ್ನು ಹಿಡಿದು ನಡೆಸಿದ ದಾಳಿ ಕೆಲ ಸಮಯದ ಮಟ್ಟಿಗೆ ಭಯಭೀತಿಯನ್ನು ಸೃಷ್ಟಿಸಿತ್ತು. ನಾಲ್ಕಾರು ಜನ ಮೃತಪಟ್ಟರೆ ನೂರಾರು ಜನ ಗಾಯಗೊಂಡರು. ಆ ಗಲಭೆಯನ್ನು ಶಮನ ಮಾಡಲಾಯಿತಾದರೂ, ಪ್ರಜಾಪ್ರಭುತ್ವದ ಬಗೆಗಿನ ನಂಬಿಕೆಯನ್ನು ಬುಡಮೇಲು ಮಾಡಲು ಬಿತ್ತಿರುವ ಸುಳ್ಳಿನ ನರೆಟಿವ್‌ಗೆ ಉಪಶಮನವೇನು? ಇದು ಈಗ ಬ್ರೆಜಿಲ್‌ನಲ್ಲಿ ಮರುಕಳಿಸಿದ್ದು, ಜಗತ್ತಿನಾದ್ಯಂತ ಸುಳ್ಳುಗಳ ಅಡಿಪಾಯದ ಮೇಲೆ ನಡೆದಿರುವ ಧ್ರುವೀಕರಣದ ದುರಂತವನ್ನು ಸೂಚಿಸುತ್ತಿದೆ. ನಾಗರಿಕ ಕದನ ಯಾವ ಸಮಯದಲ್ಲಾದರೂ ಸ್ಫೋಟಿಸಬಹುದಾದ ಅಪಾಯವನ್ನು ಜಗತ್ತಿನ ಹಲವು ದೇಶಗಳು ತಮ್ಮ ಒಡಲಲ್ಲಿ ಇಟ್ಟುಕೊಂಡು ಬೇಯುತ್ತಿವೆ!

ಬಲಪಂಥೀಯ ರಾಜಕಾರಣದ ಹುನ್ನಾರಕ್ಕೆ ಗುರಿಯಾಗಿ, ಜೈಲುವಾಸ ಅನುಭವಿಸಿ, ಆರೋಪಮುಕ್ತನಾಗಿ ಹೊರಬಂದಿದ್ದ ಯೂನಿಯನ್ ಲೀಡರ್ ಮತ್ತು ಎಡ ಪಕ್ಷವಾದ ವರ್ಕರ್ಸ್ ಪಾರ್ಟಿಯ ’ಲುಲಾ’ ಡಿ ಸಿಲ್ವಾ ಬ್ರೆಜಿಲ್‌ನಲ್ಲಿ ಅಕ್ಟೋಬರ್ 30ರಂದು ನಡೆದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಗೆಲುವು ಸಾಧಿಸಿದರು. ಆದರೆ ತೀವ್ರ ಬಲಪಂಥೀಯ ನಾಯಕ ಮತ್ತು ಟ್ರಂಪ್ ಗೆಳೆಯ ಅಂದು ಅಧ್ಯಕ್ಷನಾಗಿದ್ದ ಬೊಲ್ಸೊನಾರೊ ಚುನಾವಣೆಯನ್ನು ಫಿಕ್ಸ್ ಮಾಡಲಾಗಿದೆ ಮತ್ತು ಲೂಲಾ ಗೆದ್ದರೆ ಆ ಗೆಲುವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಪುನರುಚ್ಚರಿಸುತ್ತಲೇ ಚುನಾವಣೆಯುದ್ದಕ್ಕೂ ಪ್ರಚಾರ ಮಾಡಿಕೊಂಡುಬಂದಿದ್ದರು. ಸೋತ ನಂತರ ಪ್ರಭುತ್ವದ ಉಳಿದ ಸಂಸ್ಥೆಗಳು ತಮ್ಮ ಬೆಂಬಲಕ್ಕೆ ನಿಲ್ಲಲು ನಿರಾಕರಿಸಿದ ಕಾರಣ ತಮ್ಮ ವರಸೆಯನ್ನು ಸ್ವಲ್ಪಸ್ವಲ್ಪ ಬದಲಾಯಿಸುತ್ತಾ ಬಂದರು. ಆದರೆ ತನ್ನ ಬೆಂಬಲಿಗರಲ್ಲಿ ಬಿತ್ತಿದ್ದ ಪ್ರಜಾಪ್ರಭುತ್ವ ವಿರೋಧಿ ಫ್ಯಾಸಿಸ್ಟ್ ಚಿಂತನೆಗಳು ದೊಡ್ಡಮಟ್ಟದಲ್ಲಿ ಪಸರಿಸಿಯಾಗಿತ್ತು. ಲೂಲಾ ಅಧ್ಯಕ್ಷ ಪದವಿ ಸ್ವೀಕರಿಸುವುದಕ್ಕೆ ಮುಂಚಿತವಾಗಲೇ ಬೊಲ್ಸೊನಾರೊ ಯುಎಸ್‌ಎಗೆ ತೆರಳಿದ್ದರು. ಜನವರಿ 1, 2023ರಂದು ಲೂಲಾ ಪ್ರಮಾಣ ವಚನ ಸ್ವೀಕರಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಸಂಪುಟಕ್ಕೆ ಸೇರಿಸಿಕೊಂಡದ್ದು ಸೇರಿದಂತೆ, ಅಮೆಜಾನ್ ಕಾಡಿನ ಉಳಿವಿಗೆ ಹೋರಾಡಿದ್ದ ಕಾರ್ಯಕರ್ತೆಯನ್ನೂ ಸಂಪುಟಕ್ಕೆ ಸೇರಿಸಿಕೊಂಡಿದ್ದು ಧನಾತ್ಮಕ ಚರ್ಚೆಗೆ ಕಾರಣವಾಗಿತ್ತು. ಬೊಲ್ಸೊನಾರೊ ತಮ್ಮ ನಡುವೆ ಇರದಿದ್ದರೂ ಆತ ಬಿತ್ತಿದ ವಿಷಚಿಂತನೆ ಮಾತ್ರ ಬೆಂಬಲಿಗರ ತಲೆಯಿಂದ ಪರಾರಿಯಾಗಿರಲಿಲ್ಲ. ಜನವರಿ 8ನೇ ತಾರೀಕು ಬ್ರೆಜಿಲ್ ಪ್ರಜಾಪ್ರಭುತ್ವದ ಆಧಾರಸ್ಥಂಭಗಳೆಂದು ಕರೆಯಲಾಗುವ ರಾಜಧಾನಿ ಬ್ರೆಸಿಲಿಯಾದ ಕಾಂಗ್ರೆಸ್, ಸುಪ್ರೀಂ ಕೋರ್ಟ್ ಮತ್ತು ಅಧ್ಯಕ್ಷರ ಪ್ಯಾಲೆಸ್ ಮೇಲೆ ಬೊಲ್ಸೊನಾರೊ ಬೆಂಬಲಿಗರು ದಾಳಿ ನಡೆಸಿದರು. ನಂತರ ಈ ಗಲಭೆ ಅಥವಾ ದಂಗೆಯ ಪ್ರಯತ್ನವನ್ನು ತಹಬದಿಗೆ ತರಲಾಯಿತು. ಈಗ ಕಾಂಗ್ರೆಸ್ ಭವನದಲ್ಲಿ ಗ್ರೆನೇಡ್ ಮತ್ತಿತರ ಮಾರಾಕಾಸ್ತ್ರಗಳು ಸಿಕ್ಕಿರುವ ವರದಿಗಳಿವೆ. ಸುಮಾರು 1500ಕ್ಕೂ ಹಚ್ಚು ಜನರನ್ನು ಡೀಟೇನ್ ಮಾಡಲಾಗಿದ್ದು, ಸಾವಿರಾರು ಜನರ ಮೇಲೆ ಆರೋಪ ಹೊರಿಸುವ ಸಾಧ್ಯತೆಯಿದೆ. ಇಷ್ಟಾಗಿಯೂ ಜನರಲ್ಲಿ ಬಿತ್ತಲಾಗಿರುವ ಫ್ಯಾಸಿಸ್ಟ್ ವಿಷವನ್ನು ನಿವಾರಿಸದಂತೇನೂ ಆಗುವುದಿಲ್ಲ. ಅದು ಮುಂದೊಂದು ದಿನ ಬೇರೊಂದು ರೂಪದಲ್ಲಿ ಆಸ್ಫೋಟಿಸಲು ಕಾಯುತ್ತಲೇ ಇರುತ್ತದೆ.

ಅಮೆರಿಕ ಮತ್ತು ಬ್ರೆಜಿಲ್‌ನಲ್ಲಿ ನಡೆದ ಘಟನೆಗಳು ಭಾರತದಲ್ಲಿ ಘಟಿಸಲು ಸಾಧ್ಯವಿಲ್ಲ ಎನ್ನುವಂತಿಲ್ಲ. 2014ರ ನಂತರ ನಿರಂತರವಾಗಿ ನಡೆಯುತ್ತಿರುವ ಪೋಲರೈಸೇಷನ್ ಪ್ರಾಜೆಕ್ಟ್ ಭಾರತೀಯರನ್ನು ಧಾರ್ಮಿಕ ನೆಲೆಯಲ್ಲಿ ಒಡೆಯಲು ಪ್ರಯತ್ನಿಸುತ್ತಲೇ ಇದೆ. ಇಂದು ಸಂಘ ಪರಿವಾರ ಬಿತ್ತುತ್ತಿರುವ ವಿಷ ಬೀಜಗಳು ಟ್ರಂಪ್ ಮತ್ತು ಬೊಲ್ಸೊನಾರೊ ತಮ್ಮ ಬೆಂಬಲಿಗರಲ್ಲಿ ಬಿತ್ತಿದ ವಿಷಕ್ಕಿಂತಲೂ ಭಿನ್ನವಾಗೇನೂ ಇಲ್ಲ. ಇದು ತನ್ನ ರಾಜಕೀಯಕ್ಕೆ ಹಲವು ಬಾರಿ ಸಹಾಯ ಮಾಡಿರುವ ಹಿನ್ನೆಲೆಯಲ್ಲಿ ಮೋದಿ ಸರ್ಕಾರ ಇದನ್ನು ಉತ್ತೇಜಿಸುತ್ತಿದೆ. ಹಿಂದೆ ಹತ್ತುಹಲವು ಬಾರಿ ಇದರ ಬಗ್ಗೆ ಬರೆದಿದ್ದರೂ, ಹಿಂದೆಂದೂ ಕಾಣದಂತಹ ಗೋಡ್ಸೆ ಭಜನೆ, ಆತನ ದ್ವೇಷದ ಸಿದ್ಧಾಂತ ದಿನೇದಿನೇ ಪಸರಿಸುತ್ತಲೇ ಇದೆ. ಇದನ್ನು ಮುಸ್ಲಿಂ ದ್ವೇಷವಾಗಿ ಸಾಕಾರ ಮಾಡಿ ಬಲಪಂಥೀಯ ಪಕ್ಷಗಳು ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳುತ್ತಿವೆ. ಇಂತಹ ದ್ವೇಷದ ಸಿದ್ಧಾಂತವನ್ನು ಒಡೆಯಲು ಪ್ರಜ್ಞಾವಂತ ನಾಗರಿಕರು ಸಂವಿಧಾನ, ಅಂಬೇಡ್ಕರ್, ಪೆರಿಯಾರ್, ಕುವೆಂಪುರವರಂತಹ ವಿಚಾರಧಾರೆಗಳನ್ನು ಮುಂದುಮಾಡುತ್ತಿದ್ದಾರೆ.

ಈ ವಿದ್ಯಮಾನಕ್ಕೆ ಒಂದು ಮಟ್ಟದಲ್ಲಿ ಕನ್ನಡಿ ಹಿಡಿದಂತಹ ಒಂದು ಅನುಭವವನ್ನು ಹಂಚಿಕೊಳ್ಳುತ್ತೇನೆ. ಜನವರಿ 6ರಿಂದ 8ರ ನಡುವೆ ನಡೆದ ಹಾವೇರಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಮುಖ್ಯ ಆಕರ್ಷಣೆಯಾದ ಪುಸ್ತಕ ಮೇಳದಲ್ಲಿ ಈ ಬಾರಿ ಹಿಂದಿನ ಸಮ್ಮೇಳನಗಳಿಗಿಂತಲೂ, ಟೆರರಿಸ್ಟ್ ಗೋಡ್ಸೆ, ಹಿಂದೂ ಸುಪ್ರಿಮಿಸ್ಟ್‌ಗಳಾದ ಸಾವರ್ಕರ್, ಗೋಳ್ವಲ್ಕರ್ ಪುಸ್ತಕಗಳನ್ನು ಕೇಳಿಕೊಂಡು ಬರುವ ಮಂದಿ ಅತಿ ಹೆಚ್ಚಿದ್ದರು. ಹಿಂದೆಲ್ಲಾ ಗೋಡ್ಸೆಯನ್ನು ಆರಾಧಿಸುವ ಅಥವಾ ಗಾಂಧಿ ಕೊಲೆಯನ್ನು ಸಮರ್ಥಿಸುವ ಪುಸ್ತಕಗಳನ್ನು ಕೇಳುವಾಗ ಒಂದು ರೀತಿಯ ಅಂಜಿಕೆಯಿರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಆತನನ್ನು ಸಮರ್ಥಿಸುವುದನ್ನೇ ಧ್ಯೇಯವನ್ನಾಗಿಸುವತ್ತ ಹಲವು ಯುವಕ-ಯುವತಿಯರನ್ನು ಸಂಘ ಪರಿವಾರ ಪ್ರಭಾವಿಸುತ್ತಿರುವುದು ತಿಳಿಯದ ವಿಷಯವೇನಲ್ಲ. ಅದು ಇಂದಿನ ರಾಜಕೀಯ ವಾತಾವರಣದಲ್ಲಿ ಮುಸ್ಲಿಂ ಸಮುದಾಯದ ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧದ ದ್ವೇಷವಾಗಿ ಹಾಗೂ ಬ್ರಾಹ್ಮಣ್ಯದ ಶ್ರೇಷ್ಠತೆಯಾಗಿ ಆಕಾರ ಪಡೆದುಕೊಳ್ಳುತ್ತಿದೆ. ಇಂತಹ ದ್ವೇಷವನ್ನು ಕೌಂಟರ್ ಮಾಡಲು, ವಿಚಾರವಾದವನ್ನು ಬಿತ್ತುವ ಅಂಬೇಡ್ಕರ್, ಕುವೆಂಪು, ಪೆರಿಯಾರ್, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಅಂತಹವರ ಚಿಂತನೆಗಳ ಪುಸ್ತಕಗಳಿಗೂ ಪುಸ್ತಕ ಮೇಳದಲ್ಲಿ ಅಪಾರ ಬೇಡಿಕೆಯಿತ್ತು. ನಡುವೆ ಸುಳಿವ ಶುದ್ಧ ಸಾಹಿತ್ಯದ ಪ್ರತಿಪಾದಕರ ಪುಸ್ತಕಗಳ ಬಗ್ಗೆ ಒಂದು ರೀತಿಯ ತಿರಸ್ಕಾರ ಮೂಡಿರುವಂತೆ ಭಾಸವಾಯಿತು. ವಿಚಾರಹೀನತೆ-ಸುಳ್ಳು-ಜೀವವಿರೋಧಿ ಹಾಗೂ ವಿಚಾರವಾದ-ಸತ್ಯ-ಜೀವಪರತೆಯ ಚಿಂತನೆಯುಳ್ಳ ಪುಸ್ತಕಗಳ ನಡುವೆ ಸ್ಪರ್ಧೆ ಏರ್ಪಟ್ಟಿರುವುದು ಆ ಮೂರು ದಿನಗಳ ಪುಸ್ತಕ ವ್ಯಾಪಾರದ ಅನುಭವ ಸೂಚಿಸಿತು. (ಇದು ತೀರ ವೈಯಕ್ತಿಕವಾದದ್ದಾದರೂ, ಹಲವು ಪುಸ್ತಕ ಮಾರಾಟಗಾರರು ಮತ್ತು ಪ್ರಕಾಶಕರು ಸಹಮತವನ್ನು ವ್ಯಕ್ತಪಡಿಸಿದರು.) ಇದು ಈ ದೇಶದಲ್ಲಿಯೂ ವಿಚಾರಹೀನತೆ ಮತ್ತು ವಿಚಾರವಾದದ ನಡುವೆ ತೀವ್ರ ಮಟ್ಟದಲ್ಲಿ ಆಗಿರುವ-ಆಗುತ್ತಿರುವ ಧ್ರುವೀಕರಣವನ್ನು ಸೂಚಿಸುತ್ತದೆ. ಆದರೆ ಭಾರತದ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ವಿಚಾರಹೀನತೆಗೇ ಹೆಚ್ಚು ಸ್ಪೇಸ್ ದೊರಕುವುದರಿಂದ ಅದು ಹೆಚ್ಚು ಮಿಂಚುತ್ತಿರುವಂತೆ ಮತ್ತು ಬೆಳೆಯುತ್ತಿರುವಂತೆ ಕಾಣಿಸಿಕೊಳ್ಳುತ್ತದೆ. ಪ್ರಭುತ್ವದ ಬೆಂಬಲ ಅದಕ್ಕಿರುವುದರಿಂದ ಅದು ತನ್ನ ಉಗ್ರತ್ವವನ್ನು ಎಗ್ಗಿಲ್ಲದೆ ಪ್ರತಿಪಾದಿಸುತ್ತದೆ. ವಿಚಾರಹೀನತೆಯನ್ನು, ದ್ವೇಷವನ್ನು ತೀವ್ರತೆಗೆ ತೆಗೆದುಕೊಂಡು ಹೋದಷ್ಟೂ, ಯುಎಸ್‌ಎನ ಕ್ಯಾಪಿಟೊಲ್ ಭವನ ಅಥವಾ ಬ್ರೆಜಿಲ್‌ನ ಸಂಸತ್ ಕಟ್ಟಡದಲ್ಲಿ ಆದಂತಹ ಗಲಭೆಗಳ ಸಂಭವನೀಯತೆ ಹೆಚ್ಚುತ್ತಾ ಹೋಗುತ್ತದೆ.

ಈ ನಿಟ್ಟಿನಲ್ಲಿ ವಿಚಾರಹೀನತೆಯ-ಪ್ರಗತಿಹೀನತೆಯ ಕಡೆಗೆ ಎಳೆಯಲಾಗಿರುವವರನ್ನು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸುವ, ಮಾನವೀಯತೆಯನ್ನು ತುಡಿಯುವ, ಬಹುತ್ವವನ್ನು ಗೌರವಿಸುವ ವಿಚಾರಗಳತ್ತ ಕರೆತರುವುದೊಂದೇ ಈಗ ಉಳಿದಿರುವ ದಾರಿ. ಅಂತಹ ದಾರಿಗಳನ್ನು ಒರೆಗೆ ಹಚ್ಚುತ್ತಾ, ಅಗತ್ಯ ಬಿದ್ದಲ್ಲಿ ಕಾರ್ಯಶೈಲಿಯನ್ನು ಬದಲಾಯಿಸಿಕೊಳ್ಳುತ್ತಾ ಮತ್ತೆಮತ್ತೆ ಹೊಸದಾಗಿ ಶೋಧಿಸಿಕೊಳ್ಳಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...