Homeಅಂಕಣಗಳುಪ್ರಜಾಪ್ರಭುತ್ವ ವಿರೋಧಿ ಬ್ರೆಜಿಲ್ ಗಲಭೆಗಳಿಗೆ ಕಾರಣವಾದ ತೀವ್ರ ಧ್ರುವೀಕರಣ; ಜಗತ್ತಿಗೆ ಎಚ್ಚರಿಕೆಯ ಗಂಟೆ!

ಪ್ರಜಾಪ್ರಭುತ್ವ ವಿರೋಧಿ ಬ್ರೆಜಿಲ್ ಗಲಭೆಗಳಿಗೆ ಕಾರಣವಾದ ತೀವ್ರ ಧ್ರುವೀಕರಣ; ಜಗತ್ತಿಗೆ ಎಚ್ಚರಿಕೆಯ ಗಂಟೆ!

- Advertisement -
- Advertisement -

ಯುಎಸ್‌ಎನಲ್ಲಿ ಅಧ್ಯಕ್ಷೀಯ ಚುನಾವಣೆ ಸೋತ ತೀವ್ರ ಬಲಪಂಥೀಯ ಮುಖಂಡ-ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಫಲಿತಾಂಶವನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದ. ಇದು ಆತನ ಬೆಂಬಲಿಗ ಬಹುಸಂಖ್ಯಾತರನ್ನು ಎಷ್ಟು ಪ್ರಭಾವಿಸಿತ್ತೆಂದರೆ, ಇಡೀ ಚುನಾವಣೆಯನ್ನು ಟ್ರಂಪ್‌ನಿಂದ ಕಸಿಯಲಾಗಿದೆ ಎಂಬ ವಾದವನ್ನು ಸ್ವಲ್ಪವೂ ವಿವೇಚನೆಯಿಲ್ಲದೆ ಒಪ್ಪಿಕೊಂಡುಬಿಟ್ಟಿದ್ದರು. ಇದರ ಪರಿಣಾಮ ಜನವರಿ 6, 2021ರಂದು ಮತ ಎಣಿಕೆ ಪ್ರಕ್ರಿಯೆಯನ್ನು ಅಡ್ಡಿಪಡಿಸಲು ವಾಶಿಂಗ್ಟನ್‌ನ ಕ್ಯಾಪಿಟೊಲ್ ಭವನದ ಮೇಲೆ ನಡೆಸಿದ ದಾಳಿ. ಮಾರಕಾಸ್ತ್ರಗಳನ್ನು ಹಿಡಿದು ನಡೆಸಿದ ದಾಳಿ ಕೆಲ ಸಮಯದ ಮಟ್ಟಿಗೆ ಭಯಭೀತಿಯನ್ನು ಸೃಷ್ಟಿಸಿತ್ತು. ನಾಲ್ಕಾರು ಜನ ಮೃತಪಟ್ಟರೆ ನೂರಾರು ಜನ ಗಾಯಗೊಂಡರು. ಆ ಗಲಭೆಯನ್ನು ಶಮನ ಮಾಡಲಾಯಿತಾದರೂ, ಪ್ರಜಾಪ್ರಭುತ್ವದ ಬಗೆಗಿನ ನಂಬಿಕೆಯನ್ನು ಬುಡಮೇಲು ಮಾಡಲು ಬಿತ್ತಿರುವ ಸುಳ್ಳಿನ ನರೆಟಿವ್‌ಗೆ ಉಪಶಮನವೇನು? ಇದು ಈಗ ಬ್ರೆಜಿಲ್‌ನಲ್ಲಿ ಮರುಕಳಿಸಿದ್ದು, ಜಗತ್ತಿನಾದ್ಯಂತ ಸುಳ್ಳುಗಳ ಅಡಿಪಾಯದ ಮೇಲೆ ನಡೆದಿರುವ ಧ್ರುವೀಕರಣದ ದುರಂತವನ್ನು ಸೂಚಿಸುತ್ತಿದೆ. ನಾಗರಿಕ ಕದನ ಯಾವ ಸಮಯದಲ್ಲಾದರೂ ಸ್ಫೋಟಿಸಬಹುದಾದ ಅಪಾಯವನ್ನು ಜಗತ್ತಿನ ಹಲವು ದೇಶಗಳು ತಮ್ಮ ಒಡಲಲ್ಲಿ ಇಟ್ಟುಕೊಂಡು ಬೇಯುತ್ತಿವೆ!

ಬಲಪಂಥೀಯ ರಾಜಕಾರಣದ ಹುನ್ನಾರಕ್ಕೆ ಗುರಿಯಾಗಿ, ಜೈಲುವಾಸ ಅನುಭವಿಸಿ, ಆರೋಪಮುಕ್ತನಾಗಿ ಹೊರಬಂದಿದ್ದ ಯೂನಿಯನ್ ಲೀಡರ್ ಮತ್ತು ಎಡ ಪಕ್ಷವಾದ ವರ್ಕರ್ಸ್ ಪಾರ್ಟಿಯ ’ಲುಲಾ’ ಡಿ ಸಿಲ್ವಾ ಬ್ರೆಜಿಲ್‌ನಲ್ಲಿ ಅಕ್ಟೋಬರ್ 30ರಂದು ನಡೆದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಗೆಲುವು ಸಾಧಿಸಿದರು. ಆದರೆ ತೀವ್ರ ಬಲಪಂಥೀಯ ನಾಯಕ ಮತ್ತು ಟ್ರಂಪ್ ಗೆಳೆಯ ಅಂದು ಅಧ್ಯಕ್ಷನಾಗಿದ್ದ ಬೊಲ್ಸೊನಾರೊ ಚುನಾವಣೆಯನ್ನು ಫಿಕ್ಸ್ ಮಾಡಲಾಗಿದೆ ಮತ್ತು ಲೂಲಾ ಗೆದ್ದರೆ ಆ ಗೆಲುವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಪುನರುಚ್ಚರಿಸುತ್ತಲೇ ಚುನಾವಣೆಯುದ್ದಕ್ಕೂ ಪ್ರಚಾರ ಮಾಡಿಕೊಂಡುಬಂದಿದ್ದರು. ಸೋತ ನಂತರ ಪ್ರಭುತ್ವದ ಉಳಿದ ಸಂಸ್ಥೆಗಳು ತಮ್ಮ ಬೆಂಬಲಕ್ಕೆ ನಿಲ್ಲಲು ನಿರಾಕರಿಸಿದ ಕಾರಣ ತಮ್ಮ ವರಸೆಯನ್ನು ಸ್ವಲ್ಪಸ್ವಲ್ಪ ಬದಲಾಯಿಸುತ್ತಾ ಬಂದರು. ಆದರೆ ತನ್ನ ಬೆಂಬಲಿಗರಲ್ಲಿ ಬಿತ್ತಿದ್ದ ಪ್ರಜಾಪ್ರಭುತ್ವ ವಿರೋಧಿ ಫ್ಯಾಸಿಸ್ಟ್ ಚಿಂತನೆಗಳು ದೊಡ್ಡಮಟ್ಟದಲ್ಲಿ ಪಸರಿಸಿಯಾಗಿತ್ತು. ಲೂಲಾ ಅಧ್ಯಕ್ಷ ಪದವಿ ಸ್ವೀಕರಿಸುವುದಕ್ಕೆ ಮುಂಚಿತವಾಗಲೇ ಬೊಲ್ಸೊನಾರೊ ಯುಎಸ್‌ಎಗೆ ತೆರಳಿದ್ದರು. ಜನವರಿ 1, 2023ರಂದು ಲೂಲಾ ಪ್ರಮಾಣ ವಚನ ಸ್ವೀಕರಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಸಂಪುಟಕ್ಕೆ ಸೇರಿಸಿಕೊಂಡದ್ದು ಸೇರಿದಂತೆ, ಅಮೆಜಾನ್ ಕಾಡಿನ ಉಳಿವಿಗೆ ಹೋರಾಡಿದ್ದ ಕಾರ್ಯಕರ್ತೆಯನ್ನೂ ಸಂಪುಟಕ್ಕೆ ಸೇರಿಸಿಕೊಂಡಿದ್ದು ಧನಾತ್ಮಕ ಚರ್ಚೆಗೆ ಕಾರಣವಾಗಿತ್ತು. ಬೊಲ್ಸೊನಾರೊ ತಮ್ಮ ನಡುವೆ ಇರದಿದ್ದರೂ ಆತ ಬಿತ್ತಿದ ವಿಷಚಿಂತನೆ ಮಾತ್ರ ಬೆಂಬಲಿಗರ ತಲೆಯಿಂದ ಪರಾರಿಯಾಗಿರಲಿಲ್ಲ. ಜನವರಿ 8ನೇ ತಾರೀಕು ಬ್ರೆಜಿಲ್ ಪ್ರಜಾಪ್ರಭುತ್ವದ ಆಧಾರಸ್ಥಂಭಗಳೆಂದು ಕರೆಯಲಾಗುವ ರಾಜಧಾನಿ ಬ್ರೆಸಿಲಿಯಾದ ಕಾಂಗ್ರೆಸ್, ಸುಪ್ರೀಂ ಕೋರ್ಟ್ ಮತ್ತು ಅಧ್ಯಕ್ಷರ ಪ್ಯಾಲೆಸ್ ಮೇಲೆ ಬೊಲ್ಸೊನಾರೊ ಬೆಂಬಲಿಗರು ದಾಳಿ ನಡೆಸಿದರು. ನಂತರ ಈ ಗಲಭೆ ಅಥವಾ ದಂಗೆಯ ಪ್ರಯತ್ನವನ್ನು ತಹಬದಿಗೆ ತರಲಾಯಿತು. ಈಗ ಕಾಂಗ್ರೆಸ್ ಭವನದಲ್ಲಿ ಗ್ರೆನೇಡ್ ಮತ್ತಿತರ ಮಾರಾಕಾಸ್ತ್ರಗಳು ಸಿಕ್ಕಿರುವ ವರದಿಗಳಿವೆ. ಸುಮಾರು 1500ಕ್ಕೂ ಹಚ್ಚು ಜನರನ್ನು ಡೀಟೇನ್ ಮಾಡಲಾಗಿದ್ದು, ಸಾವಿರಾರು ಜನರ ಮೇಲೆ ಆರೋಪ ಹೊರಿಸುವ ಸಾಧ್ಯತೆಯಿದೆ. ಇಷ್ಟಾಗಿಯೂ ಜನರಲ್ಲಿ ಬಿತ್ತಲಾಗಿರುವ ಫ್ಯಾಸಿಸ್ಟ್ ವಿಷವನ್ನು ನಿವಾರಿಸದಂತೇನೂ ಆಗುವುದಿಲ್ಲ. ಅದು ಮುಂದೊಂದು ದಿನ ಬೇರೊಂದು ರೂಪದಲ್ಲಿ ಆಸ್ಫೋಟಿಸಲು ಕಾಯುತ್ತಲೇ ಇರುತ್ತದೆ.

ಅಮೆರಿಕ ಮತ್ತು ಬ್ರೆಜಿಲ್‌ನಲ್ಲಿ ನಡೆದ ಘಟನೆಗಳು ಭಾರತದಲ್ಲಿ ಘಟಿಸಲು ಸಾಧ್ಯವಿಲ್ಲ ಎನ್ನುವಂತಿಲ್ಲ. 2014ರ ನಂತರ ನಿರಂತರವಾಗಿ ನಡೆಯುತ್ತಿರುವ ಪೋಲರೈಸೇಷನ್ ಪ್ರಾಜೆಕ್ಟ್ ಭಾರತೀಯರನ್ನು ಧಾರ್ಮಿಕ ನೆಲೆಯಲ್ಲಿ ಒಡೆಯಲು ಪ್ರಯತ್ನಿಸುತ್ತಲೇ ಇದೆ. ಇಂದು ಸಂಘ ಪರಿವಾರ ಬಿತ್ತುತ್ತಿರುವ ವಿಷ ಬೀಜಗಳು ಟ್ರಂಪ್ ಮತ್ತು ಬೊಲ್ಸೊನಾರೊ ತಮ್ಮ ಬೆಂಬಲಿಗರಲ್ಲಿ ಬಿತ್ತಿದ ವಿಷಕ್ಕಿಂತಲೂ ಭಿನ್ನವಾಗೇನೂ ಇಲ್ಲ. ಇದು ತನ್ನ ರಾಜಕೀಯಕ್ಕೆ ಹಲವು ಬಾರಿ ಸಹಾಯ ಮಾಡಿರುವ ಹಿನ್ನೆಲೆಯಲ್ಲಿ ಮೋದಿ ಸರ್ಕಾರ ಇದನ್ನು ಉತ್ತೇಜಿಸುತ್ತಿದೆ. ಹಿಂದೆ ಹತ್ತುಹಲವು ಬಾರಿ ಇದರ ಬಗ್ಗೆ ಬರೆದಿದ್ದರೂ, ಹಿಂದೆಂದೂ ಕಾಣದಂತಹ ಗೋಡ್ಸೆ ಭಜನೆ, ಆತನ ದ್ವೇಷದ ಸಿದ್ಧಾಂತ ದಿನೇದಿನೇ ಪಸರಿಸುತ್ತಲೇ ಇದೆ. ಇದನ್ನು ಮುಸ್ಲಿಂ ದ್ವೇಷವಾಗಿ ಸಾಕಾರ ಮಾಡಿ ಬಲಪಂಥೀಯ ಪಕ್ಷಗಳು ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳುತ್ತಿವೆ. ಇಂತಹ ದ್ವೇಷದ ಸಿದ್ಧಾಂತವನ್ನು ಒಡೆಯಲು ಪ್ರಜ್ಞಾವಂತ ನಾಗರಿಕರು ಸಂವಿಧಾನ, ಅಂಬೇಡ್ಕರ್, ಪೆರಿಯಾರ್, ಕುವೆಂಪುರವರಂತಹ ವಿಚಾರಧಾರೆಗಳನ್ನು ಮುಂದುಮಾಡುತ್ತಿದ್ದಾರೆ.

ಈ ವಿದ್ಯಮಾನಕ್ಕೆ ಒಂದು ಮಟ್ಟದಲ್ಲಿ ಕನ್ನಡಿ ಹಿಡಿದಂತಹ ಒಂದು ಅನುಭವವನ್ನು ಹಂಚಿಕೊಳ್ಳುತ್ತೇನೆ. ಜನವರಿ 6ರಿಂದ 8ರ ನಡುವೆ ನಡೆದ ಹಾವೇರಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಮುಖ್ಯ ಆಕರ್ಷಣೆಯಾದ ಪುಸ್ತಕ ಮೇಳದಲ್ಲಿ ಈ ಬಾರಿ ಹಿಂದಿನ ಸಮ್ಮೇಳನಗಳಿಗಿಂತಲೂ, ಟೆರರಿಸ್ಟ್ ಗೋಡ್ಸೆ, ಹಿಂದೂ ಸುಪ್ರಿಮಿಸ್ಟ್‌ಗಳಾದ ಸಾವರ್ಕರ್, ಗೋಳ್ವಲ್ಕರ್ ಪುಸ್ತಕಗಳನ್ನು ಕೇಳಿಕೊಂಡು ಬರುವ ಮಂದಿ ಅತಿ ಹೆಚ್ಚಿದ್ದರು. ಹಿಂದೆಲ್ಲಾ ಗೋಡ್ಸೆಯನ್ನು ಆರಾಧಿಸುವ ಅಥವಾ ಗಾಂಧಿ ಕೊಲೆಯನ್ನು ಸಮರ್ಥಿಸುವ ಪುಸ್ತಕಗಳನ್ನು ಕೇಳುವಾಗ ಒಂದು ರೀತಿಯ ಅಂಜಿಕೆಯಿರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಆತನನ್ನು ಸಮರ್ಥಿಸುವುದನ್ನೇ ಧ್ಯೇಯವನ್ನಾಗಿಸುವತ್ತ ಹಲವು ಯುವಕ-ಯುವತಿಯರನ್ನು ಸಂಘ ಪರಿವಾರ ಪ್ರಭಾವಿಸುತ್ತಿರುವುದು ತಿಳಿಯದ ವಿಷಯವೇನಲ್ಲ. ಅದು ಇಂದಿನ ರಾಜಕೀಯ ವಾತಾವರಣದಲ್ಲಿ ಮುಸ್ಲಿಂ ಸಮುದಾಯದ ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧದ ದ್ವೇಷವಾಗಿ ಹಾಗೂ ಬ್ರಾಹ್ಮಣ್ಯದ ಶ್ರೇಷ್ಠತೆಯಾಗಿ ಆಕಾರ ಪಡೆದುಕೊಳ್ಳುತ್ತಿದೆ. ಇಂತಹ ದ್ವೇಷವನ್ನು ಕೌಂಟರ್ ಮಾಡಲು, ವಿಚಾರವಾದವನ್ನು ಬಿತ್ತುವ ಅಂಬೇಡ್ಕರ್, ಕುವೆಂಪು, ಪೆರಿಯಾರ್, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಅಂತಹವರ ಚಿಂತನೆಗಳ ಪುಸ್ತಕಗಳಿಗೂ ಪುಸ್ತಕ ಮೇಳದಲ್ಲಿ ಅಪಾರ ಬೇಡಿಕೆಯಿತ್ತು. ನಡುವೆ ಸುಳಿವ ಶುದ್ಧ ಸಾಹಿತ್ಯದ ಪ್ರತಿಪಾದಕರ ಪುಸ್ತಕಗಳ ಬಗ್ಗೆ ಒಂದು ರೀತಿಯ ತಿರಸ್ಕಾರ ಮೂಡಿರುವಂತೆ ಭಾಸವಾಯಿತು. ವಿಚಾರಹೀನತೆ-ಸುಳ್ಳು-ಜೀವವಿರೋಧಿ ಹಾಗೂ ವಿಚಾರವಾದ-ಸತ್ಯ-ಜೀವಪರತೆಯ ಚಿಂತನೆಯುಳ್ಳ ಪುಸ್ತಕಗಳ ನಡುವೆ ಸ್ಪರ್ಧೆ ಏರ್ಪಟ್ಟಿರುವುದು ಆ ಮೂರು ದಿನಗಳ ಪುಸ್ತಕ ವ್ಯಾಪಾರದ ಅನುಭವ ಸೂಚಿಸಿತು. (ಇದು ತೀರ ವೈಯಕ್ತಿಕವಾದದ್ದಾದರೂ, ಹಲವು ಪುಸ್ತಕ ಮಾರಾಟಗಾರರು ಮತ್ತು ಪ್ರಕಾಶಕರು ಸಹಮತವನ್ನು ವ್ಯಕ್ತಪಡಿಸಿದರು.) ಇದು ಈ ದೇಶದಲ್ಲಿಯೂ ವಿಚಾರಹೀನತೆ ಮತ್ತು ವಿಚಾರವಾದದ ನಡುವೆ ತೀವ್ರ ಮಟ್ಟದಲ್ಲಿ ಆಗಿರುವ-ಆಗುತ್ತಿರುವ ಧ್ರುವೀಕರಣವನ್ನು ಸೂಚಿಸುತ್ತದೆ. ಆದರೆ ಭಾರತದ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ವಿಚಾರಹೀನತೆಗೇ ಹೆಚ್ಚು ಸ್ಪೇಸ್ ದೊರಕುವುದರಿಂದ ಅದು ಹೆಚ್ಚು ಮಿಂಚುತ್ತಿರುವಂತೆ ಮತ್ತು ಬೆಳೆಯುತ್ತಿರುವಂತೆ ಕಾಣಿಸಿಕೊಳ್ಳುತ್ತದೆ. ಪ್ರಭುತ್ವದ ಬೆಂಬಲ ಅದಕ್ಕಿರುವುದರಿಂದ ಅದು ತನ್ನ ಉಗ್ರತ್ವವನ್ನು ಎಗ್ಗಿಲ್ಲದೆ ಪ್ರತಿಪಾದಿಸುತ್ತದೆ. ವಿಚಾರಹೀನತೆಯನ್ನು, ದ್ವೇಷವನ್ನು ತೀವ್ರತೆಗೆ ತೆಗೆದುಕೊಂಡು ಹೋದಷ್ಟೂ, ಯುಎಸ್‌ಎನ ಕ್ಯಾಪಿಟೊಲ್ ಭವನ ಅಥವಾ ಬ್ರೆಜಿಲ್‌ನ ಸಂಸತ್ ಕಟ್ಟಡದಲ್ಲಿ ಆದಂತಹ ಗಲಭೆಗಳ ಸಂಭವನೀಯತೆ ಹೆಚ್ಚುತ್ತಾ ಹೋಗುತ್ತದೆ.

ಈ ನಿಟ್ಟಿನಲ್ಲಿ ವಿಚಾರಹೀನತೆಯ-ಪ್ರಗತಿಹೀನತೆಯ ಕಡೆಗೆ ಎಳೆಯಲಾಗಿರುವವರನ್ನು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸುವ, ಮಾನವೀಯತೆಯನ್ನು ತುಡಿಯುವ, ಬಹುತ್ವವನ್ನು ಗೌರವಿಸುವ ವಿಚಾರಗಳತ್ತ ಕರೆತರುವುದೊಂದೇ ಈಗ ಉಳಿದಿರುವ ದಾರಿ. ಅಂತಹ ದಾರಿಗಳನ್ನು ಒರೆಗೆ ಹಚ್ಚುತ್ತಾ, ಅಗತ್ಯ ಬಿದ್ದಲ್ಲಿ ಕಾರ್ಯಶೈಲಿಯನ್ನು ಬದಲಾಯಿಸಿಕೊಳ್ಳುತ್ತಾ ಮತ್ತೆಮತ್ತೆ ಹೊಸದಾಗಿ ಶೋಧಿಸಿಕೊಳ್ಳಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...