Homeಅಂಕಣಗಳುಪ್ರಜಾಪ್ರಭುತ್ವ ವಿರೋಧಿ ಬ್ರೆಜಿಲ್ ಗಲಭೆಗಳಿಗೆ ಕಾರಣವಾದ ತೀವ್ರ ಧ್ರುವೀಕರಣ; ಜಗತ್ತಿಗೆ ಎಚ್ಚರಿಕೆಯ ಗಂಟೆ!

ಪ್ರಜಾಪ್ರಭುತ್ವ ವಿರೋಧಿ ಬ್ರೆಜಿಲ್ ಗಲಭೆಗಳಿಗೆ ಕಾರಣವಾದ ತೀವ್ರ ಧ್ರುವೀಕರಣ; ಜಗತ್ತಿಗೆ ಎಚ್ಚರಿಕೆಯ ಗಂಟೆ!

- Advertisement -
- Advertisement -

ಯುಎಸ್‌ಎನಲ್ಲಿ ಅಧ್ಯಕ್ಷೀಯ ಚುನಾವಣೆ ಸೋತ ತೀವ್ರ ಬಲಪಂಥೀಯ ಮುಖಂಡ-ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಫಲಿತಾಂಶವನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದ. ಇದು ಆತನ ಬೆಂಬಲಿಗ ಬಹುಸಂಖ್ಯಾತರನ್ನು ಎಷ್ಟು ಪ್ರಭಾವಿಸಿತ್ತೆಂದರೆ, ಇಡೀ ಚುನಾವಣೆಯನ್ನು ಟ್ರಂಪ್‌ನಿಂದ ಕಸಿಯಲಾಗಿದೆ ಎಂಬ ವಾದವನ್ನು ಸ್ವಲ್ಪವೂ ವಿವೇಚನೆಯಿಲ್ಲದೆ ಒಪ್ಪಿಕೊಂಡುಬಿಟ್ಟಿದ್ದರು. ಇದರ ಪರಿಣಾಮ ಜನವರಿ 6, 2021ರಂದು ಮತ ಎಣಿಕೆ ಪ್ರಕ್ರಿಯೆಯನ್ನು ಅಡ್ಡಿಪಡಿಸಲು ವಾಶಿಂಗ್ಟನ್‌ನ ಕ್ಯಾಪಿಟೊಲ್ ಭವನದ ಮೇಲೆ ನಡೆಸಿದ ದಾಳಿ. ಮಾರಕಾಸ್ತ್ರಗಳನ್ನು ಹಿಡಿದು ನಡೆಸಿದ ದಾಳಿ ಕೆಲ ಸಮಯದ ಮಟ್ಟಿಗೆ ಭಯಭೀತಿಯನ್ನು ಸೃಷ್ಟಿಸಿತ್ತು. ನಾಲ್ಕಾರು ಜನ ಮೃತಪಟ್ಟರೆ ನೂರಾರು ಜನ ಗಾಯಗೊಂಡರು. ಆ ಗಲಭೆಯನ್ನು ಶಮನ ಮಾಡಲಾಯಿತಾದರೂ, ಪ್ರಜಾಪ್ರಭುತ್ವದ ಬಗೆಗಿನ ನಂಬಿಕೆಯನ್ನು ಬುಡಮೇಲು ಮಾಡಲು ಬಿತ್ತಿರುವ ಸುಳ್ಳಿನ ನರೆಟಿವ್‌ಗೆ ಉಪಶಮನವೇನು? ಇದು ಈಗ ಬ್ರೆಜಿಲ್‌ನಲ್ಲಿ ಮರುಕಳಿಸಿದ್ದು, ಜಗತ್ತಿನಾದ್ಯಂತ ಸುಳ್ಳುಗಳ ಅಡಿಪಾಯದ ಮೇಲೆ ನಡೆದಿರುವ ಧ್ರುವೀಕರಣದ ದುರಂತವನ್ನು ಸೂಚಿಸುತ್ತಿದೆ. ನಾಗರಿಕ ಕದನ ಯಾವ ಸಮಯದಲ್ಲಾದರೂ ಸ್ಫೋಟಿಸಬಹುದಾದ ಅಪಾಯವನ್ನು ಜಗತ್ತಿನ ಹಲವು ದೇಶಗಳು ತಮ್ಮ ಒಡಲಲ್ಲಿ ಇಟ್ಟುಕೊಂಡು ಬೇಯುತ್ತಿವೆ!

ಬಲಪಂಥೀಯ ರಾಜಕಾರಣದ ಹುನ್ನಾರಕ್ಕೆ ಗುರಿಯಾಗಿ, ಜೈಲುವಾಸ ಅನುಭವಿಸಿ, ಆರೋಪಮುಕ್ತನಾಗಿ ಹೊರಬಂದಿದ್ದ ಯೂನಿಯನ್ ಲೀಡರ್ ಮತ್ತು ಎಡ ಪಕ್ಷವಾದ ವರ್ಕರ್ಸ್ ಪಾರ್ಟಿಯ ’ಲುಲಾ’ ಡಿ ಸಿಲ್ವಾ ಬ್ರೆಜಿಲ್‌ನಲ್ಲಿ ಅಕ್ಟೋಬರ್ 30ರಂದು ನಡೆದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಗೆಲುವು ಸಾಧಿಸಿದರು. ಆದರೆ ತೀವ್ರ ಬಲಪಂಥೀಯ ನಾಯಕ ಮತ್ತು ಟ್ರಂಪ್ ಗೆಳೆಯ ಅಂದು ಅಧ್ಯಕ್ಷನಾಗಿದ್ದ ಬೊಲ್ಸೊನಾರೊ ಚುನಾವಣೆಯನ್ನು ಫಿಕ್ಸ್ ಮಾಡಲಾಗಿದೆ ಮತ್ತು ಲೂಲಾ ಗೆದ್ದರೆ ಆ ಗೆಲುವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಪುನರುಚ್ಚರಿಸುತ್ತಲೇ ಚುನಾವಣೆಯುದ್ದಕ್ಕೂ ಪ್ರಚಾರ ಮಾಡಿಕೊಂಡುಬಂದಿದ್ದರು. ಸೋತ ನಂತರ ಪ್ರಭುತ್ವದ ಉಳಿದ ಸಂಸ್ಥೆಗಳು ತಮ್ಮ ಬೆಂಬಲಕ್ಕೆ ನಿಲ್ಲಲು ನಿರಾಕರಿಸಿದ ಕಾರಣ ತಮ್ಮ ವರಸೆಯನ್ನು ಸ್ವಲ್ಪಸ್ವಲ್ಪ ಬದಲಾಯಿಸುತ್ತಾ ಬಂದರು. ಆದರೆ ತನ್ನ ಬೆಂಬಲಿಗರಲ್ಲಿ ಬಿತ್ತಿದ್ದ ಪ್ರಜಾಪ್ರಭುತ್ವ ವಿರೋಧಿ ಫ್ಯಾಸಿಸ್ಟ್ ಚಿಂತನೆಗಳು ದೊಡ್ಡಮಟ್ಟದಲ್ಲಿ ಪಸರಿಸಿಯಾಗಿತ್ತು. ಲೂಲಾ ಅಧ್ಯಕ್ಷ ಪದವಿ ಸ್ವೀಕರಿಸುವುದಕ್ಕೆ ಮುಂಚಿತವಾಗಲೇ ಬೊಲ್ಸೊನಾರೊ ಯುಎಸ್‌ಎಗೆ ತೆರಳಿದ್ದರು. ಜನವರಿ 1, 2023ರಂದು ಲೂಲಾ ಪ್ರಮಾಣ ವಚನ ಸ್ವೀಕರಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಸಂಪುಟಕ್ಕೆ ಸೇರಿಸಿಕೊಂಡದ್ದು ಸೇರಿದಂತೆ, ಅಮೆಜಾನ್ ಕಾಡಿನ ಉಳಿವಿಗೆ ಹೋರಾಡಿದ್ದ ಕಾರ್ಯಕರ್ತೆಯನ್ನೂ ಸಂಪುಟಕ್ಕೆ ಸೇರಿಸಿಕೊಂಡಿದ್ದು ಧನಾತ್ಮಕ ಚರ್ಚೆಗೆ ಕಾರಣವಾಗಿತ್ತು. ಬೊಲ್ಸೊನಾರೊ ತಮ್ಮ ನಡುವೆ ಇರದಿದ್ದರೂ ಆತ ಬಿತ್ತಿದ ವಿಷಚಿಂತನೆ ಮಾತ್ರ ಬೆಂಬಲಿಗರ ತಲೆಯಿಂದ ಪರಾರಿಯಾಗಿರಲಿಲ್ಲ. ಜನವರಿ 8ನೇ ತಾರೀಕು ಬ್ರೆಜಿಲ್ ಪ್ರಜಾಪ್ರಭುತ್ವದ ಆಧಾರಸ್ಥಂಭಗಳೆಂದು ಕರೆಯಲಾಗುವ ರಾಜಧಾನಿ ಬ್ರೆಸಿಲಿಯಾದ ಕಾಂಗ್ರೆಸ್, ಸುಪ್ರೀಂ ಕೋರ್ಟ್ ಮತ್ತು ಅಧ್ಯಕ್ಷರ ಪ್ಯಾಲೆಸ್ ಮೇಲೆ ಬೊಲ್ಸೊನಾರೊ ಬೆಂಬಲಿಗರು ದಾಳಿ ನಡೆಸಿದರು. ನಂತರ ಈ ಗಲಭೆ ಅಥವಾ ದಂಗೆಯ ಪ್ರಯತ್ನವನ್ನು ತಹಬದಿಗೆ ತರಲಾಯಿತು. ಈಗ ಕಾಂಗ್ರೆಸ್ ಭವನದಲ್ಲಿ ಗ್ರೆನೇಡ್ ಮತ್ತಿತರ ಮಾರಾಕಾಸ್ತ್ರಗಳು ಸಿಕ್ಕಿರುವ ವರದಿಗಳಿವೆ. ಸುಮಾರು 1500ಕ್ಕೂ ಹಚ್ಚು ಜನರನ್ನು ಡೀಟೇನ್ ಮಾಡಲಾಗಿದ್ದು, ಸಾವಿರಾರು ಜನರ ಮೇಲೆ ಆರೋಪ ಹೊರಿಸುವ ಸಾಧ್ಯತೆಯಿದೆ. ಇಷ್ಟಾಗಿಯೂ ಜನರಲ್ಲಿ ಬಿತ್ತಲಾಗಿರುವ ಫ್ಯಾಸಿಸ್ಟ್ ವಿಷವನ್ನು ನಿವಾರಿಸದಂತೇನೂ ಆಗುವುದಿಲ್ಲ. ಅದು ಮುಂದೊಂದು ದಿನ ಬೇರೊಂದು ರೂಪದಲ್ಲಿ ಆಸ್ಫೋಟಿಸಲು ಕಾಯುತ್ತಲೇ ಇರುತ್ತದೆ.

ಅಮೆರಿಕ ಮತ್ತು ಬ್ರೆಜಿಲ್‌ನಲ್ಲಿ ನಡೆದ ಘಟನೆಗಳು ಭಾರತದಲ್ಲಿ ಘಟಿಸಲು ಸಾಧ್ಯವಿಲ್ಲ ಎನ್ನುವಂತಿಲ್ಲ. 2014ರ ನಂತರ ನಿರಂತರವಾಗಿ ನಡೆಯುತ್ತಿರುವ ಪೋಲರೈಸೇಷನ್ ಪ್ರಾಜೆಕ್ಟ್ ಭಾರತೀಯರನ್ನು ಧಾರ್ಮಿಕ ನೆಲೆಯಲ್ಲಿ ಒಡೆಯಲು ಪ್ರಯತ್ನಿಸುತ್ತಲೇ ಇದೆ. ಇಂದು ಸಂಘ ಪರಿವಾರ ಬಿತ್ತುತ್ತಿರುವ ವಿಷ ಬೀಜಗಳು ಟ್ರಂಪ್ ಮತ್ತು ಬೊಲ್ಸೊನಾರೊ ತಮ್ಮ ಬೆಂಬಲಿಗರಲ್ಲಿ ಬಿತ್ತಿದ ವಿಷಕ್ಕಿಂತಲೂ ಭಿನ್ನವಾಗೇನೂ ಇಲ್ಲ. ಇದು ತನ್ನ ರಾಜಕೀಯಕ್ಕೆ ಹಲವು ಬಾರಿ ಸಹಾಯ ಮಾಡಿರುವ ಹಿನ್ನೆಲೆಯಲ್ಲಿ ಮೋದಿ ಸರ್ಕಾರ ಇದನ್ನು ಉತ್ತೇಜಿಸುತ್ತಿದೆ. ಹಿಂದೆ ಹತ್ತುಹಲವು ಬಾರಿ ಇದರ ಬಗ್ಗೆ ಬರೆದಿದ್ದರೂ, ಹಿಂದೆಂದೂ ಕಾಣದಂತಹ ಗೋಡ್ಸೆ ಭಜನೆ, ಆತನ ದ್ವೇಷದ ಸಿದ್ಧಾಂತ ದಿನೇದಿನೇ ಪಸರಿಸುತ್ತಲೇ ಇದೆ. ಇದನ್ನು ಮುಸ್ಲಿಂ ದ್ವೇಷವಾಗಿ ಸಾಕಾರ ಮಾಡಿ ಬಲಪಂಥೀಯ ಪಕ್ಷಗಳು ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳುತ್ತಿವೆ. ಇಂತಹ ದ್ವೇಷದ ಸಿದ್ಧಾಂತವನ್ನು ಒಡೆಯಲು ಪ್ರಜ್ಞಾವಂತ ನಾಗರಿಕರು ಸಂವಿಧಾನ, ಅಂಬೇಡ್ಕರ್, ಪೆರಿಯಾರ್, ಕುವೆಂಪುರವರಂತಹ ವಿಚಾರಧಾರೆಗಳನ್ನು ಮುಂದುಮಾಡುತ್ತಿದ್ದಾರೆ.

ಈ ವಿದ್ಯಮಾನಕ್ಕೆ ಒಂದು ಮಟ್ಟದಲ್ಲಿ ಕನ್ನಡಿ ಹಿಡಿದಂತಹ ಒಂದು ಅನುಭವವನ್ನು ಹಂಚಿಕೊಳ್ಳುತ್ತೇನೆ. ಜನವರಿ 6ರಿಂದ 8ರ ನಡುವೆ ನಡೆದ ಹಾವೇರಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಮುಖ್ಯ ಆಕರ್ಷಣೆಯಾದ ಪುಸ್ತಕ ಮೇಳದಲ್ಲಿ ಈ ಬಾರಿ ಹಿಂದಿನ ಸಮ್ಮೇಳನಗಳಿಗಿಂತಲೂ, ಟೆರರಿಸ್ಟ್ ಗೋಡ್ಸೆ, ಹಿಂದೂ ಸುಪ್ರಿಮಿಸ್ಟ್‌ಗಳಾದ ಸಾವರ್ಕರ್, ಗೋಳ್ವಲ್ಕರ್ ಪುಸ್ತಕಗಳನ್ನು ಕೇಳಿಕೊಂಡು ಬರುವ ಮಂದಿ ಅತಿ ಹೆಚ್ಚಿದ್ದರು. ಹಿಂದೆಲ್ಲಾ ಗೋಡ್ಸೆಯನ್ನು ಆರಾಧಿಸುವ ಅಥವಾ ಗಾಂಧಿ ಕೊಲೆಯನ್ನು ಸಮರ್ಥಿಸುವ ಪುಸ್ತಕಗಳನ್ನು ಕೇಳುವಾಗ ಒಂದು ರೀತಿಯ ಅಂಜಿಕೆಯಿರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಆತನನ್ನು ಸಮರ್ಥಿಸುವುದನ್ನೇ ಧ್ಯೇಯವನ್ನಾಗಿಸುವತ್ತ ಹಲವು ಯುವಕ-ಯುವತಿಯರನ್ನು ಸಂಘ ಪರಿವಾರ ಪ್ರಭಾವಿಸುತ್ತಿರುವುದು ತಿಳಿಯದ ವಿಷಯವೇನಲ್ಲ. ಅದು ಇಂದಿನ ರಾಜಕೀಯ ವಾತಾವರಣದಲ್ಲಿ ಮುಸ್ಲಿಂ ಸಮುದಾಯದ ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧದ ದ್ವೇಷವಾಗಿ ಹಾಗೂ ಬ್ರಾಹ್ಮಣ್ಯದ ಶ್ರೇಷ್ಠತೆಯಾಗಿ ಆಕಾರ ಪಡೆದುಕೊಳ್ಳುತ್ತಿದೆ. ಇಂತಹ ದ್ವೇಷವನ್ನು ಕೌಂಟರ್ ಮಾಡಲು, ವಿಚಾರವಾದವನ್ನು ಬಿತ್ತುವ ಅಂಬೇಡ್ಕರ್, ಕುವೆಂಪು, ಪೆರಿಯಾರ್, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಅಂತಹವರ ಚಿಂತನೆಗಳ ಪುಸ್ತಕಗಳಿಗೂ ಪುಸ್ತಕ ಮೇಳದಲ್ಲಿ ಅಪಾರ ಬೇಡಿಕೆಯಿತ್ತು. ನಡುವೆ ಸುಳಿವ ಶುದ್ಧ ಸಾಹಿತ್ಯದ ಪ್ರತಿಪಾದಕರ ಪುಸ್ತಕಗಳ ಬಗ್ಗೆ ಒಂದು ರೀತಿಯ ತಿರಸ್ಕಾರ ಮೂಡಿರುವಂತೆ ಭಾಸವಾಯಿತು. ವಿಚಾರಹೀನತೆ-ಸುಳ್ಳು-ಜೀವವಿರೋಧಿ ಹಾಗೂ ವಿಚಾರವಾದ-ಸತ್ಯ-ಜೀವಪರತೆಯ ಚಿಂತನೆಯುಳ್ಳ ಪುಸ್ತಕಗಳ ನಡುವೆ ಸ್ಪರ್ಧೆ ಏರ್ಪಟ್ಟಿರುವುದು ಆ ಮೂರು ದಿನಗಳ ಪುಸ್ತಕ ವ್ಯಾಪಾರದ ಅನುಭವ ಸೂಚಿಸಿತು. (ಇದು ತೀರ ವೈಯಕ್ತಿಕವಾದದ್ದಾದರೂ, ಹಲವು ಪುಸ್ತಕ ಮಾರಾಟಗಾರರು ಮತ್ತು ಪ್ರಕಾಶಕರು ಸಹಮತವನ್ನು ವ್ಯಕ್ತಪಡಿಸಿದರು.) ಇದು ಈ ದೇಶದಲ್ಲಿಯೂ ವಿಚಾರಹೀನತೆ ಮತ್ತು ವಿಚಾರವಾದದ ನಡುವೆ ತೀವ್ರ ಮಟ್ಟದಲ್ಲಿ ಆಗಿರುವ-ಆಗುತ್ತಿರುವ ಧ್ರುವೀಕರಣವನ್ನು ಸೂಚಿಸುತ್ತದೆ. ಆದರೆ ಭಾರತದ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ವಿಚಾರಹೀನತೆಗೇ ಹೆಚ್ಚು ಸ್ಪೇಸ್ ದೊರಕುವುದರಿಂದ ಅದು ಹೆಚ್ಚು ಮಿಂಚುತ್ತಿರುವಂತೆ ಮತ್ತು ಬೆಳೆಯುತ್ತಿರುವಂತೆ ಕಾಣಿಸಿಕೊಳ್ಳುತ್ತದೆ. ಪ್ರಭುತ್ವದ ಬೆಂಬಲ ಅದಕ್ಕಿರುವುದರಿಂದ ಅದು ತನ್ನ ಉಗ್ರತ್ವವನ್ನು ಎಗ್ಗಿಲ್ಲದೆ ಪ್ರತಿಪಾದಿಸುತ್ತದೆ. ವಿಚಾರಹೀನತೆಯನ್ನು, ದ್ವೇಷವನ್ನು ತೀವ್ರತೆಗೆ ತೆಗೆದುಕೊಂಡು ಹೋದಷ್ಟೂ, ಯುಎಸ್‌ಎನ ಕ್ಯಾಪಿಟೊಲ್ ಭವನ ಅಥವಾ ಬ್ರೆಜಿಲ್‌ನ ಸಂಸತ್ ಕಟ್ಟಡದಲ್ಲಿ ಆದಂತಹ ಗಲಭೆಗಳ ಸಂಭವನೀಯತೆ ಹೆಚ್ಚುತ್ತಾ ಹೋಗುತ್ತದೆ.

ಈ ನಿಟ್ಟಿನಲ್ಲಿ ವಿಚಾರಹೀನತೆಯ-ಪ್ರಗತಿಹೀನತೆಯ ಕಡೆಗೆ ಎಳೆಯಲಾಗಿರುವವರನ್ನು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸುವ, ಮಾನವೀಯತೆಯನ್ನು ತುಡಿಯುವ, ಬಹುತ್ವವನ್ನು ಗೌರವಿಸುವ ವಿಚಾರಗಳತ್ತ ಕರೆತರುವುದೊಂದೇ ಈಗ ಉಳಿದಿರುವ ದಾರಿ. ಅಂತಹ ದಾರಿಗಳನ್ನು ಒರೆಗೆ ಹಚ್ಚುತ್ತಾ, ಅಗತ್ಯ ಬಿದ್ದಲ್ಲಿ ಕಾರ್ಯಶೈಲಿಯನ್ನು ಬದಲಾಯಿಸಿಕೊಳ್ಳುತ್ತಾ ಮತ್ತೆಮತ್ತೆ ಹೊಸದಾಗಿ ಶೋಧಿಸಿಕೊಳ್ಳಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...