Homeಮುಖಪುಟಬರ್ತ್‌ ಡೇ ಪಾರ್ಟಿಗೆ ನುಗ್ಗಿ ಮುಸ್ಲಿಂ ಯುವಕರಿಗೆ ಥಳಿತ: ಬಜರಂಗದಳದ ದುಷ್ಕರ್ಮಿಗಳಿಗೆ ರಕ್ಷಣೆ; ಸಂತ್ರಸ್ತರೇ ಅರೆಸ್ಟ್!

ಬರ್ತ್‌ ಡೇ ಪಾರ್ಟಿಗೆ ನುಗ್ಗಿ ಮುಸ್ಲಿಂ ಯುವಕರಿಗೆ ಥಳಿತ: ಬಜರಂಗದಳದ ದುಷ್ಕರ್ಮಿಗಳಿಗೆ ರಕ್ಷಣೆ; ಸಂತ್ರಸ್ತರೇ ಅರೆಸ್ಟ್!

- Advertisement -
- Advertisement -

ಜನವರಿ 21, ಶನಿವಾರದಂದು 100ಕ್ಕೂ ಹೆಚ್ಚು ಬಜರಂಗದಳದ ದುಷ್ಕರ್ಮಿಗಳ ಗುಂಪು ಮಧ್ಯಪ್ರದೇಶದ ಇಂದೋರ್‌ನಲ್ಲಿ ಬರ್ತ್ ಡೇ ಪಾರ್ಟಿಗೆ ನುಗ್ಗಿ ದಾಂಧಲೆ ಎಬ್ಬಿಸಿದೆ. ಕನಿಷ್ಠ ಐದು ಮುಸ್ಲಿಂ ಯುವಕರಿಗೆ ಥಳಿಸಲಾಗಿದೆ.

24 ವರ್ಷದ ಹಿಂದೂ ಯುವತಿಯು ತನ್ನ ಸ್ನೇಹಿತರೊಂದಿಗೆ ತನ್ನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾಗ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಆ ಯುವತಿಯ ಫ್ಲ್ಯಾಟ್‌ಗೆ ನುಗ್ಗಿ ಆಕೆಯ ಮುಸ್ಲಿಂ ಸ್ನೇಹಿತರಿಗೆ ಹೊಡೆಯಲಾಗಿದೆ. ಮುಸ್ಲಿಂ ಯುವಕರ ಮೇಲೆ ‘ಲವ್ ಜಿಹಾದ್’ ಆರೋಪ ಮಾಡಿರುವ ದುಷ್ಕರ್ಮಿಗಳು, ನಂತರ ಇಂದೋರ್‌ನ ಎಂಐಜಿ ಕಾಲೋನಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಸಂತ್ರಸ್ತರನ್ನೇ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಘಟನೆಯ ವಿಡಿಯೋಗಳು ಜನವರಿ 22ರ ಭಾನುವಾರದಂದು ವೈರಲ್ ಆಗಿವೆ.

ವೀಡಿಯೋ ಒಂದರಲ್ಲಿ- ಬಹುಮಹಡಿ ಕಟ್ಟಡದ ಮೆಟ್ಟಿಲುಗಳ ಮೇಲೆ ದೊಡ್ಡ ಜನಸಮೂಹವೇ ಹತ್ತುತ್ತಿರುವುದನ್ನು ಕಾಣಬಹುದು. ಮತ್ತೊಂದು ವೀಡಿಯೊದಲ್ಲಿ- ಖಾಸಗಿ ನಿವಾಸದೊಳಗೆ ಮುಸುಕುಧಾರಿ ವ್ಯಕ್ತಿಯೊಬ್ಬ ಯುವಕನೊಬ್ಬನಿಗೆ ಥಳಿಸುತ್ತಿರುವುದನ್ನು ಕಾಣಬಹುದು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಪೊಲೀಸರು ಏನು ಹೇಳುತ್ತಿದ್ದಾರೆ?

“ಕೆಲವು ಹುಡುಗರನ್ನು ಬಜರಂಗದಳದ ಸದಸ್ಯರು ಎಂಐಜಿ ಕಾಲೋನಿ ಪೊಲೀಸ್ ಠಾಣೆಗೆ ಕರೆತಂದರು, ನಂತರ ಅವರಲ್ಲಿ ಐವರನ್ನು ಐಪಿಸಿ ಸೆಕ್ಷನ್ 151ರ ಅಡಿಯಲ್ಲಿ (ಅಂದರೆ ಐದು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳು ನಡೆಸುವ ಯಾವುದೇ ಸಭೆ ಸಾರ್ವಜನಿಕ ಶಾಂತಿ ಕದಡುವ ಸಾಧ್ಯತೆ ಆರೋಪದಲ್ಲಿ) ಜೈಲಿಗೆ ಕಳುಹಿಸಲಾಗಿದೆ.

ಆದರೆ, ಖಾಸಗಿ ನಿವಾಸಕ್ಕೆ ನುಗ್ಗಿ ಯುವಕರನ್ನು ಥಳಿಸಿದ ಬಜರಂಗದಳದ ದುಷ್ಕರ್ಮಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

ಘಟನೆಯ ಕುರಿತು ‘ದಿ ಕ್ವಿಂಟ್’ ಜಾಲತಾಣಕ್ಕೆ ಪ್ರತಿಕ್ರಿಯಿಸಿರುವ ಎಂಐಜಿ ಸ್ಟೇಷನ್ ಇನ್‌ಚಾರ್ಜ್ ಅಜಯ್ ವರ್ಮಾ, “ಜಗಳ ಮತ್ತು ಹೆಚ್ಚಿನ ವಿವಾದವನ್ನು ತಪ್ಪಿಸಲು, ಐಪಿಸಿ ಸೆಕ್ಷನ್ 151 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಅವರೆಲ್ಲರನ್ನೂ ನಾಳೆಯೊಳಗೆ (ಅಂದರೆ ಭಾನುವಾರದೊಳಗೆ) ಬಿಡುಗಡೆ ಮಾಡಲಾಗುತ್ತದೆ” ಎಂದು ತಿಳಿಸಿದ್ದರು. ಆದರೆ ಜ.23ರಂದು ಈ ವರದಿಯನ್ನು ಪ್ರಕಟಿಸುವ ಸಮಯದವರೆಗೂ ಯುವಕರನ್ನು ಜೈಲಿನಿಂದ ಬಿಡುಗಡೆ ಮಾಡಿಲ್ಲ ಎಂದು ‘ದಿ ಕ್ವಿಂಟ್‌’ ತಿಳಿಸಿದೆ.

ಇದಕ್ಕೂ ಮೊದಲು, ಸಹಾಯಕ ಸಬ್ ಇನ್ಸ್‌ಪೆಕ್ಟರ್ ಸೀಮಾ ಶರ್ಮಾ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದು, “ಯುವಕ ಮತ್ತು ಯುವತಿಯರ ಗುಂಪು ಸ್ನೇಹಿತರ ಹುಟ್ಟುಹಬ್ಬವನ್ನು ಆಚರಿಸುತ್ತಿತ್ತು. ಈ ವಿಷಯದಲ್ಲಿ ಭಾಗಿಯಾಗಿರುವ ಹುಡುಗಿಯರು ಲವ್ ಜಿಹಾದ್‌ ಕುರಿತು ಯಾವುದೇ ದೂರು ದಾಖಲಿಸಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು” ಎಂದು ಹೇಳಿದ್ದಾರೆ.

ಬಜರಂಗದಳದ ಸದಸ್ಯರು ಏನು ಹೇಳುತ್ತಿದ್ದಾರೆ?

ಭಜರಂಗದಳದ ಜಿಲ್ಲಾ ಸಂಯೋಜಕ (ಜಿಲ್ಲಾ ಸಂಯೋಜಕ) ಎಂದು ಹೇಳಿಕೊಳ್ಳುವ ಮನೋಜ್ ಯಾದವ್, ಜನವರಿ 21ರಂದು ಘಟನೆ ಕುರಿತು ಪ್ರತಿಕ್ರಿಯಿಸಿದ್ದು, “ಅಪಾರ್ಟ್‌ಮೆಂಟ್‌ನಲ್ಲಿ ಶೋಧ ಕಾರ್ಯ ನಡೆಸಿದ್ದೇವೆ” ಎಂದು  ಮಾಹಿತಿ ನೀಡಿದ್ದಾನೆ.

ಇದನ್ನೂ ಓದಿರಿ: ಹಿಂದೂಗಳು ಮತ್ತು ಮುಸ್ಲಿಮರು ಏಕೆ ’ಹಸು ಬಲಿ’ ಕೊಡುತ್ತಾರೆ?

“ಇಂದೋರ್‌ನ ಶ್ರೀನಗರ ಪ್ರದೇಶದಲ್ಲಿ ಐವರು ಮುಸ್ಲಿಂ ಯುವಕರು ಮತ್ತು ಇಬ್ಬರು ಹಿಂದೂ ಯುವತಿಯರು ಒಟ್ಟಿಗೆ ಹಾಜರಾಗಿದ್ದಾರೆ ಎಂಬ ಮಾಹಿತಿ ಪಡೆದ ನಂತರ ನಾವು ಅಲ್ಲಿಗೆ ಹೋಗಿ ಅವರ ಕೊಠಡಿಗಳಲ್ಲಿ ಹುಡುಕಾಟ ನಡೆಸಿದ್ದೇವೆ. ಮದ್ಯದ ಬಾಟಲಿ ಸೇರಿದಂತೆ ಅಮಲು ಪದಾರ್ಥಗಳು ಪತ್ತೆಯಾಗಿವೆ. ನಾವು ಅವರನ್ನು ಎಂಐಜಿ ಕಾಲೋನಿ ಠಾಣೆಗೆ ಕರೆತಂದಿದ್ದು, ಮೇಲಧಿಕಾರಿಗಳಿಗೂ ದೂರು ನೀಡಿದ್ದೇವೆ” ಎಂದು ಮನೋಜ್ ಯಾದವ್ ಪ್ರತಿಕ್ರಿಯಿಸಿದ್ದಾನೆ.

ಹಲ್ಲೆ ಮಾಡಿದವರ ವಿರುದ್ಧ ವಿರುದ್ಧ ಕ್ರಮವೇನು?

ಸುಪ್ರೀಂ ಕೋರ್ಟ್‌ ವಕೀಲರಾದ ಎಹ್ತೇಶಾಮ್ ಹಶ್ಮಿಯವರು ಪೊಲೀಸರ ವರ್ತನೆಯನ್ನು ಖಂಡಿಸಿದ್ದು, “ಅತಿಕ್ರಮಣ, ಹಲ್ಲೆ, ಕ್ರಿಮಿನಲ್ ಬೆದರಿಕೆ ಮತ್ತು ಗುಂಪುಗಳ ನಡುವೆ ಧಾರ್ಮಿಕ ದ್ವೇಷವನ್ನು ಉತ್ತೇಜಿಸುವ ಭಜರಂಗದಳದವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಬೇರೆ ಧರ್ಮಕ್ಕೆ ಸೇರಿದ ತಮ್ಮ ಸ್ನೇಹಿತನ ಜನ್ಮದಿನವನ್ನು ಆಚರಿಸಿದ ಏಕೈಕ ತಪ್ಪಿಗೆ ಪೊಲೀಸರು ಐದು ಜನರನ್ನು ಜೈಲಿಗೆ ಹಾಕಿದ್ದಾರೆ. ಇದೊಂದು ಘೋರ ಕಾನೂನು ದುರ್ವರ್ತನೆಯಾಗಿದೆ” ಎಂದು ವಿಷಾದಿಸಿದ್ದಾರೆ.

ವರದಿ ಕೃಪೆ: ದಿ ಕ್ವಿಂಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...