Homeಮುಖಪುಟವಿಜ್ಞಾನ ಸಂಶೋಧನೆ ಮತ್ತು ಭಾರತದ ಜಾತಿ ವ್ಯವಸ್ಥೆ

ವಿಜ್ಞಾನ ಸಂಶೋಧನೆ ಮತ್ತು ಭಾರತದ ಜಾತಿ ವ್ಯವಸ್ಥೆ

- Advertisement -
- Advertisement -

ಕಳೆದ ವಾರ ನನ್ನ ಸ್ನೇಹಿತರೊಬ್ಬರು ಭಾರತದಲ್ಲಿನ ವಿಜ್ಞಾನ ಸಂಶೋಧನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇಲ್ಲಿನ ಬಹುತೇಕ ಸಂಶೋಧನೆಗಳು ಕಡತಗಳ ಹೊಟ್ಟೆ ತುಂಬಿಸುವುದಕ್ಕಾಗಿಯೇ ನಡೆಯುತ್ತವೆ, ಬಡ್ತಿ ಪಡೆಯಲು ಮಾಡಲಾಗುತ್ತದೆ ಮತ್ತು ನಮ್ಮ ದೇಶದ ಅಗತ್ಯಗಳಿಗೂ ಅವಕ್ಕೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದರು. ನನ್ನ ಸ್ನೇಹಿತ ಸ್ವತಃ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ, ದೊಡ್ಡ ಬಯೋಟೆಕ್ನಾಲಜಿ ಕಂಪನಿಯನ್ನು ನಡೆಸುತ್ತಿದ್ದಾರೆ. ಒಂದು ವಿಶೇಷ ರೀತಿಯ ಮೆಂಬ್ರೇನ್ ತಯಾರಿಕೆಯಲ್ಲಿ ಅವರ ಕಂಪನಿಯು ವಿಶ್ವದ ಮೂರು ದೊಡ್ಡ ಕಂಪನಿಗಳಲ್ಲಿ ಒಂದಾಗಿದೆ. ಗಾಂಧಿ ಕುಟುಂಬಕ್ಕೆ ಸೇರಿದವರು, ದೇಶಕ್ಕೆ ಸೇವೆ ಸಲ್ಲಿಸುವ ಮನೋಭಾವ ಮತ್ತು ರಾಷ್ಟ್ರೀಯ ಸ್ವಾಭಿಮಾನದ ಕಲ್ಪನೆ ಅವರಲ್ಲಿದೆ. ಹಾಗಾಗಿ ಅವರಿಗೂ ಟೀಕೆ ಮಾಡುವ ಹಕ್ಕು ಇದೆ. ಕೆಲ ಕಾಲ ಭಾರತದ ವಿಜ್ಞಾನಿಗಳು ವಿದೇಶಗಳ ನಕಲು ಮಾಡುವುದನ್ನು ಬಿಟ್ಟು ತಮ್ಮ ಆದ್ಯತೆಯ ವಿಷಯಗಳ ಕುರಿತು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಬೇಕು ಮತ್ತು ಭಾರತದ ಅಗತ್ಯಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ತಯಾರಿಸಬೇಕು, ನಮ್ಮ ಅಗತ್ಯಕ್ಕೆ ತಕ್ಕದಾದ ಆವಿಷ್ಕಾರಗಳನ್ನು ಮಾಡಬೇಕು ಎಂದರು.

ಕಾಕತಾಳೀಯವೆಂಬಂತೆ ಕಳೆದ ವಾರ ವಿಶ್ವದ ಪ್ರತಿಷ್ಠಿತ ವಿಜ್ಞಾನ ನಿಯತಕಾಲಿಕ ’ನೇಚರ್‌’ನಲ್ಲಿ ಭಾರತೀಯ ವಿಜ್ಞಾನದಲ್ಲಿ ಅಸ್ಪೃಶ್ಯತೆಯ ಕುರಿತು ಮಹತ್ವದ ಲೇಖನ ಪ್ರಕಟವಾಗಿತ್ತು. ಅಂಕುರ್ ಪಲಿವಾಲ್ ಅವರ ಈ ಲೇಖನದ ಶೀರ್ಷಿಕೆ ’ಭಾರತದ ಜಾತಿ ವ್ಯವಸ್ಥೆಯು ವಿಜ್ಞಾನದಲ್ಲಿ ವೈವಿಧ್ಯತೆಯನ್ನು ಹೇಗೆ ಮಿತಿಗೊಳಿಸುತ್ತದೆ’ ಎಂದಾಗಿತ್ತು. ಲೇಖನವನ್ನು ಆರು ಚಾರ್ಟ್‌ಗಳ ಸುತ್ತ ಹೆಣೆಯಲಾಗಿದೆ; ಇದು ಭಾರತದ ವೈಜ್ಞಾನಿಕ ಬೋಧನೆ ಮತ್ತು ಸಂಶೋಧನಾ ಸಂಸ್ಥೆಗಳ ಜಾತಿ ಸಂಯೋಜನೆಯ ಅಂಕಿಅಂಶಗಳನ್ನು ಪ್ರಸ್ತುತಪಡಿಸುತ್ತದೆ. ಇದನ್ನು ಭಾರತದ ವಿರುದ್ಧ ಪಾಶ್ಚಾತ್ಯರ ಪಿತೂರಿ ಎಂದು ಭಾವಿಸಬೇಡಿ. ಎಲ್ಲಾ ಅಂಕಿಅಂಶಗಳನ್ನು ಭಾರತ ಸರ್ಕಾರದ ಅಧಿಕೃತ ಮೂಲದಿಂದ ತೆಗೆದುಕೊಳ್ಳಲಾಗಿದೆ. ’ನೇಚರ್’ ನಿಯತಕಾಲಿಕವು ಪ್ರಪಂಚದಾದ್ಯಂತ ಪ್ರಮುಖ ದೇಶಗಳ ವಿಜ್ಞಾನಿಗಳ ಸಾಮಾಜಿಕ ಹಿನ್ನೆಲೆಯನ್ನು ಪರಿಶೋಧಿಸುವ ಸರಣಿಯ ಭಾಗವಾಗಿದೆ ಈ ಲೇಖನ. ಈ ಸರಣಿಯ ಅಡಿಯಲ್ಲಿ, ಅಮೆರಿಕ, ಯುರೋಪ್ ಮತ್ತು ಇತರ ದೇಶಗಳಲ್ಲಿ ವಿಜ್ಞಾನದಲ್ಲಿ ಕಪ್ಪು ವರ್ಣದವರು ಮತ್ತು ಅಲ್ಪಸಂಖ್ಯಾತರ ಕೊರತೆ ಇರುವುದೂ ಎದ್ದು ಕಾಣುತ್ತಿದೆ.

ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದಲಿತ, ಬುಡಕಟ್ಟು ಮತ್ತು ಇತರ ಹಿಂದುಳಿದ ಜಾತಿಗಳ ವಿಜ್ಞಾನಿಗಳು ಎಷ್ಟು ಕಡಿಮೆ ಸಂಖ್ಯೆಯಲ್ಲಿದ್ದಾರೆ ಎಂಬುದನ್ನು ಈ ಲೇಖನ ತೋರಿಸುತ್ತದೆ. ಭಾರತದ ಜನಸಂಖ್ಯೆಯಲ್ಲಿ ದಲಿತ ಸಮುದಾಯದ ಪ್ರಮಾಣ 16.6% ಮತ್ತು ಬುಡಕಟ್ಟು ಸಮುದಾಯದ ಪ್ರಮಾಣ 8.6%ರಷ್ಟಿದೆ. ಹಿಂದುಳಿದ ವರ್ಗಗಳು ಅಥವಾ ಒಬಿಸಿಗಳನ್ನು ಇದಕ್ಕೆ ಸೇರಿಸಿದರೆ, ಈ ಮೂರು ವಂಚಿತ ವರ್ಗಗಳ ಒಟ್ಟು ಜನಸಂಖ್ಯೆಯು ದೇಶದ 70ರಿಂದ 75% ರಷ್ಟಿದೆ. ಅಂದರೆ ಸಾಮಾನ್ಯ ವರ್ಗದ (ಮೇಲ್ಜಾತಿ ಹಿಂದೂಗಳು, ಮುಂದುವರಿದ ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರು ಇತ್ಯಾದಿ) ಜನಸಂಖ್ಯೆಯು 25ರಿಂದ 30%ಕ್ಕಿಂತ ಹೆಚ್ಚಿಲ್ಲ.

ಈಗ ಇದಕ್ಕೆ ಹೋಲಿಸಿ, ದೇಶದ ಪ್ರತಿಷ್ಠಿತ ವೈಜ್ಞಾನಿಕ ಸಂಸ್ಥೆಗಳ ಸ್ಥಿತಿಯನ್ನು ನೋಡಿ. ’ನೇಚರ್’ ನಿಯತಕಾಲಿಕದ ಈ ಲೇಖನವು ನಾವು ಉನ್ನತ ಶಿಕ್ಷಣದ ಮೆಟ್ಟಿಲುಗಳನ್ನು ಏರುತ್ತಿದ್ದಂತೆ ದಲಿತ, ಬುಡಕಟ್ಟು ಮತ್ತು ಹಿಂದುಳಿದ ಸಮುದಾಯಗಳ ಉಪಸ್ಥಿತಿಯು ಕುಗ್ಗುತ್ತಿದೆ ಎಂದು ತೋರಿಸುತ್ತದೆ. ಕಾಲೇಜುಗಳಲ್ಲಿನ ಎಲ್ಲಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಬಂಧಿತ ಕೋರ್ಸ್‌ಗಳಲ್ಲಿ (ಬಿಎಸ್‌ಸಿ, ಎಂಜಿನಿಯರಿಂಗ್ ಅಥವಾ ಡಾಕ್ಟರೇಟ್ ಇತ್ಯಾದಿ) ಒಬಿಸಿ ವಿದ್ಯಾರ್ಥಿಗಳ ಸಂಖ್ಯೆ ಅವರ ಜನಸಂಖ್ಯೆಗಿಂತ ಸ್ವಲ್ಪ ಕಡಿಮೆಯಿದ್ದರೆ, ದಲಿತ ಮತ್ತು ಆದಿವಾಸಿ ವಿದ್ಯಾರ್ಥಿಗಳ ಸಂಖ್ಯೆ ಅವರ ಜನಸಂಖ್ಯೆಯ ಅರ್ಧದಷ್ಟಿದೆ. ಸ್ನಾತಕೋತ್ತರ ಪದವಿಯಲ್ಲಿ (ಎಂಎಸ್‌ಸಿ ಮತ್ತು ಎಂಟೆಕ್ ಇತ್ಯಾದಿ) ಈ ಅನುಪಾತ ಇನ್ನಷ್ಟು ಕಡಿಮೆಯಾಗುತ್ತದೆ. ಆದರೆ ಈ ಡಿಗ್ರಿಗಳಿಂದ ಆಗುವುದು ಏನೂ ಇಲ್ಲವಾದರೂ, ವಿಜ್ಞಾನದಲ್ಲಿ ಸಂಶೋಧನೆ ಅಥವಾ ಬೋಧನೆಗೆ ಪಿಎಚ್‌ಡಿ ಅಗತ್ಯವಾಗಿದೆ. ದೇಶದ ಅತ್ಯಂತ ಹೆಸರಾಂತ ವಿಜ್ಞಾನ ಸಂಸ್ಥೆಗಳಲ್ಲಿ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಹಾಗೂ ಉನ್ನತ ರ್‍ಯಾಂಕಿಂಗ್ ಹೊಂದಿರುವ ಐಐಟಿ) ಇರುವ ಪಿಎಚ್‌ಡಿ ವಿದ್ಯಾರ್ಥಿಗಳ ಹಿನ್ನೆಲೆಯನ್ನು ನಾವು ನೋಡಿದರೆ, ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ಜಾತಿಗಳ ಅನುಪಾತವು ಅವರ ಜನಸಂಖ್ಯೆಗೆ ಇರಬೇಕಾದ ಪಾಲಿಗಿಂತ ಅರ್ಧ ಅಥವಾ ಅದಕ್ಕಿಂತ ಕಡಿಮೆಯಾಗುತ್ತದೆ. ಸಾಮಾನ್ಯ ಅಥವಾ ಮೇಲ್ವರ್ಗದ ಜಾತಿಗಳ ಅನುಪಾತವು ಅವರ ಜನಸಂಖ್ಯೆಗೆ ಇರಬೇಕಾದ ಪಾಲಿಗಿಂತ ಡಬಲ್ ಅಥವಾ 60 ಪ್ರತಿಶತಕ್ಕಿಂತ ಹೆಚ್ಚಿದೆ.

ಇಂತಹ ವೈಜ್ಞಾನಿಕ ಸಂಸ್ಥೆಗಳ ಪ್ರೊಫೆಸರ್ ಅಥವಾ ವಿಜ್ಞಾನಿಗಳ ಸ್ಥಾನಕ್ಕೆ ತಲುಪುತ್ತ ಈ ಅಸಮಾನತೆಯ ವಿಷಮತೆಯು ಇನ್ನಷ್ಟು ತೀವ್ರತೆಯನ್ನು ಮುಟ್ಟುತ್ತದೆ.

ಈ ಸಂಶೋಧನೆಯು ಆರ್‌ಟಿಐ ಮೂಲಕ ಎಲ್ಲಾ ಸಂಸ್ಥೆಗಳಿಂದ ಮಾಹಿತಿಯನ್ನು ಪಡೆದುಕೊಂಡು, ಉನ್ನತ ವೈಜ್ಞಾನಿಕ ಸಂಸ್ಥೆಗಳ ಬೋಧಕರ ಹುದ್ದೆಗಳಲ್ಲಿ ಶೇ.50ರಷ್ಟು ಮೀಸಲಾತಿ ಇದ್ದರೂ, ದಲಿತ, ಬುಡಕಟ್ಟು ಮತ್ತು ಹಿಂದುಳಿದ ವರ್ಗಗಳ ಪ್ರಮಾಣವು ಶೇ.10ಕ್ಕಿಂತ ಕಡಿಮೆ ಇದೆ ಎಂದು ಗುರುತಿಸಿದೆ. ಕೆಲವೆಡೆ ಉಪನ್ಯಾಸಕರ ಸಂಖ್ಯೆಗಳಲ್ಲಿ ಶೇ.10ಕ್ಕಿಂತ ಹೆಚ್ಚಿದ್ದರೂ ಪ್ರೊಫೆಸರ್‌ನಂತಹ ಉನ್ನತ ಹುದ್ದೆಗೆ ಏರುತ್ತಲೇ ದಲಿತರು, ಆದಿವಾಸಿಗಳು, ಹಿಂದುಳಿದವರ ಸಂಖ್ಯೆ ನಗಣ್ಯವಾಗುತ್ತದೆ. ಅಷ್ಟೇ ಅಲ್ಲ, ವಿಜ್ಞಾನದ ಫಂಡಿಂಗ್‌ನ ಪ್ರಮುಖ ಯೋಜನೆಗಳಲ್ಲಿಯೂ ಮೇಲ್ಜಾತಿ ಅಭ್ಯರ್ಥಿಗಳು 80% ಸೀಟುಗಳನ್ನು ಪಡೆಯುತ್ತಾರೆ. ಇದರರ್ಥ ವಿಜ್ಞಾನ ಕ್ಷೇತ್ರದಲ್ಲಿ, ದೇಶದ ಜನಸಂಖ್ಯೆಯ 80% ಜನರಿಗೆ 20% ಅಥವಾ ಅದಕ್ಕಿಂತ ಕಡಿಮೆ ಸ್ಥಾನ ಸಿಗುತ್ತದೆ ಹಾಗೂ 20% ಜನಸಂಖ್ಯೆಯು 80% ಸ್ಥಾನಗಳನ್ನು ಆಕ್ರಮಿಸಿಕೊಂಡಿದೆ. ದೇಶದ ವಂಚಿತ ಸಮಾಜಗಳ ಮೇಲೆ ಈ ಅಸಮಾನತೆಯ ಪರಿಣಾಮವು ಸ್ಪಷ್ಟವಾಗಿದೆ.

ಇದನ್ನೂ ಓದಿ: ಭಾರತದ ವಿಜ್ಞಾನ ಕ್ಷೇತ್ರದಲ್ಲಿ ದಲಿತರಿಗಿಲ್ಲ ಹೆಚ್ಚಿನ ಪ್ರಾತಿನಿಧ್ಯ: ‘ನೇಚರ್‌’ ವರದಿ

ಆದರೆ ಇದು ಭಾರತದ ವೈಜ್ಞಾನಿಕ ಸಂಶೋಧನೆಯ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತದೆಯೇ ಎಂಬುದು ನಿಜವಾದ ಪ್ರಶ್ನೆ. ಸಮಾಜದ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳ ಶೋಧವು ಸಮಾಜದ ಮೂರನೇ ಒಂದು ಭಾಗಕ್ಕೆ ಮಾತ್ರ ಸೀಮಿತವಾದಲ್ಲಿ, ನಿಸ್ಸಂಶಯವಾಗಿ ದೇಶವು ಶ್ರೇಷ್ಠ ಪ್ರತಿಭೆಗಳಿಂದ ವಂಚಿತವಾಗುತ್ತದೆ. ಅಷ್ಟೇ ಅಲ್ಲ, ಇಂದು ನಾವು ಯಾರನ್ನು ವಂಚಿತ ಸಮಾಜ ಎಂದು ಕರೆಯುತ್ತಿದ್ದೇವೆಯೋ, ಅವರು ನಮ್ಮ ಸಮಾಜದ ಎಲ್ಲಾ ರೀತಿಯ ಜ್ಞಾನದ ಮೂಲವಾಗಿದ್ದಾರೆ: ಕೃಷಿ ಜ್ಞಾನ, ಬಟ್ಟೆ ನೇಯ್ಗೆಯ ಜ್ಞಾನ, ಚರ್ಮದ ವಸ್ತುಗಳ ರಚನೆಯ ಜ್ಞಾನ, ಕರಕುಶಲ ಕೌಶಲ್ಯ, ಉಪಕರಣಗಳನ್ನು ತಯಾರಿಸುವ ಜ್ಞಾನ, ಔಷಧ ತಯಾರಿಕೆಯ ಜ್ಞಾನ, ಔಷಧೀಯ ಸಸ್ಯಗಳ ಜ್ಞಾನ ಇತ್ಯಾದಿ. ನಮ್ಮ ದೇಶದ ಇಂತಹ ಜ್ಞಾನವುಳ್ಳ ವರ್ಗವನ್ನು ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆಯಿಂದ ವಂಚಿತರನ್ನಾಗಿಸುವ ಮೂಲಕ ನಾವು ಅವರಿಗೆ ಮಾತ್ರವಲ್ಲದೆ ನಮ್ಮ ದೇಶ ಮತ್ತು ವಿಜ್ಞಾನಕ್ಕೂ ಹಾನಿ ಮಾಡಿದ್ದೇವೆ.

ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...