ಫೆಬ್ರವರಿ 4ರಂದು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ಸಂದರ್ಭದಲ್ಲಿ ತಾನು ಮಾಡಿದ್ದ ಭಾಷಣದ ಬಹುಪಾಲು ಅಂಶಗಳನ್ನು ಯಾವುದೇ ಸಮರ್ಪಕ ಕಾರಣ ನೀಡದೆ ರಾಜ್ಯಸಭೆಯ ಅಧಿಕೃತ ದಾಖಲೆಗಳಿಂದ ತೆಗೆದುಹಾಕಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದು ಸಂವಿಧಾನದ 105(1)ನೇ ವಿಧಿಯಡಿ ಸಂಸದರಿಗೆ ಖಾತರಿಪಡಿಸಿದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ ಎಂದಿರುವ ಖರ್ಗೆ, ತೆಗೆದುಹಾಕಲಾದ ಭಾಗಗಳನ್ನು ಪುನಃಸ್ಥಾಪಿಸುವುದನ್ನು ಪರಿಗಣಿಸುವಂತೆ ರಾಜ್ಯಸಭೆಯ ಅಧ್ಯಕ್ಷ ಹಾಗೂ ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ ಅವರನ್ನು ಒತ್ತಾಯಿಸಿದ್ದಾರೆ. ದಾಖಲೆಯಿಂದ ತೆಗೆಯುವಂತಹ ಯಾವುದೇ ಸಂಸತ್ತಿನ ವಿರೋಧಿ ಹೇಳಿಕೆಗಳನ್ನು ನಾನು ನೀಡಿಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ.
ಸಾರ್ವಜನಿಕವಾಗಿ ಲಭ್ಯವಿರುವ ಮಲ್ಲಿಕಾರ್ಜುನ ಖರ್ಗೆ ಅವರ ಫೆಬ್ರವರಿ 4ರ ಭಾಷಣದ ಅಧಿಕೃತ ಪ್ರತಿಗಳನ್ನು ಪರಿಶೀಲಿಸಿದಾಗ, ಹಲವು ಕಡೆಗಳಲ್ಲಿ ಭಾಷಣದ ಭಾಗಗಳನ್ನು “ದಾಖಲಾಗಿಲ್ಲ” (not recorded) ಎಂದು ಗುರುತಿಸಿರುವುದು ಕಂಡುಬಂದಿದೆ. ಈ ಬೆಳವಣಿಗೆಯ ಕುರಿತು ಆಡಳಿತ ಪಕ್ಷದ ಪರವಾಗಿ ಪ್ರತಿಕ್ರಿಯಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಖರ್ಗೆಯವರ ಆರೋಪಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ರಾಜ್ಯಸಭೆಯ ಅಧ್ಯಕ್ಷರ ತೀರ್ಮಾನವನ್ನು ಪ್ರಶ್ನಿಸುವ ಖರ್ಗೆಯವರ ನಡವಳಿಕೆಯು ಅವರಿಗೆ ತೋರುವ ಅಗೌರವ. ಇದು ಖರ್ಗೆಯವರ ಸ್ಥಾನಕ್ಕೆ ತಕ್ಕುದಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ವಿಷಯದಲ್ಲಿ ತನಗೆ ನ್ಯಾಯ ಸಿಗದಿದ್ದಲ್ಲಿ, ಅಧಿಕೃತವಾಗಿ “ದಾಖಲಾಗಿಲ್ಲ” ಎಂದು ಕೈಬಿಡಲಾದ ತನ್ನ ಭಾಷಣದ ಭಾಗಗಳನ್ನು ಸಾರ್ವಜನಿಕರ ಮುಂದೆ ಹಂಚಿಕೊಳ್ಳಲು ಅನಿವಾರ್ಯವಾಗಿ ಮುಂದಾಗಬೇಕಾಗುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ನೀಡಿದ್ದಾರೆ. ಸಂಸದೀಯ ಹಕ್ಕುಗಳ ರಕ್ಷಣೆಗಾಗಿ ಮತ್ತು ಜನರ ಮುಂದೆ ಸತ್ಯವನ್ನು ಇರಿಸಲು ಈ ಕ್ರಮ ಅನಿವಾರ್ಯ ಎಂದು ಅವರು ತಿಳಿಸಿದ್ದಾರೆ.
ಅಧ್ಯಕ್ಷ ರಾಧಾಕೃಷ್ಣನ್ ಅವರು ಈ ವಿಷಯವನ್ನು ಪರಿಶೀಲಿಸುವುದಾಗಿ ತಿಳಿಸಿದರಾದರೂ, ಅಧಿಕೃತ ದಾಖಲೆಗಳಿಂದ ಅಳಿಸಿಹಾಕಲಾದ ಯಾವುದೇ ಅಂಶಗಳನ್ನು ಸದನದ ಹೊರಗೆ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ರಾಧಾಕೃಷ್ಣನ್, “ನೀವು ಹಾಗೆ ಹೇಳಲು ಹೇಗೆ ಸಾಧ್ಯ? ಯಾವುದನ್ನು ದಾಖಲೆಗಳಿಂದ ತೆಗೆದುಹಾಕಲಾಗಿದೆಯೋ, ಅದನ್ನು ನೀವು ಹೊರಗೆ ಹೇಳುವಂತಿಲ್ಲ” ಎಂದು ಖರ್ಗೆಯವರ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ರಾಜ್ಯಸಭೆಯ ಕಲಾಪವನ್ನು ಮಾರ್ಚ್ 9ರವರೆಗೆ ಮುಂದೂಡಲಾಗಿದೆ. ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಶೂನ್ಯ ವೇಳೆಯಲ್ಲಿ ಸಭೆ ಸೇರಿ, ನಿಗದಿತ ಪ್ರಶ್ನೋತ್ತರ ಅವಧಿಯ ನಂತರ ಮಧ್ಯಾಹ್ನ 1 ಗಂಟೆಗೆ ಕಲಾಪ ಮುಂದೂಡಲ್ಪಟ್ಟಿತು.
ಪ್ರಶ್ನೋತ್ತರ ಅವಧಿ ಆರಂಭವಾಗುವ ಕೆಲವೇ ಕ್ಷಣಗಳ ಮೊದಲು ತನ್ನ ಭಾಷಣ ತೆಗೆದು ಹಾಕಿರುವ ವಿಷಯವನ್ನು ಪ್ರಸ್ತಾಪಿಸಿದ ಎಐಸಿಸಿ ಅಧ್ಯಕ್ಷರೂ ಆಗಿರುವ ಖರ್ಗೆ, “ರಾಜ್ಯಸಭೆಯ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾದ ನನ್ನ ಭಾಷಣದ ಅಧಿಕೃತ ಪ್ರತಿಯನ್ನು ಪರಿಶೀಲಿಸಿದಾಗ, ನನ್ನ ಭಾಷಣದ ಬಹುದೊಡ್ಡ ಭಾಗವನ್ನು ಯಾವುದೇ ಸರಿಯಾದ ಸಮರ್ಥನೆ ಅಥವಾ ಕಾರಣವಿಲ್ಲದೆ ತೆಗೆದುಹಾಕಲಾಗಿದೆ ಅಥವಾ ಅಳಿಸಿಹಾಕಲಾಗಿದೆ ಎಂಬುದು ಗಮನಕ್ಕೆ ಬಂದಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ನನ್ನ ಭಾಷಣದ ಯಾವ ಭಾಗಗಳನ್ನು ದಾಖಲೆಯಿಂದ ಕೈಬಿಡಲಾಗಿದೆಯೋ, ಅವುಗಳಲ್ಲಿ ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಸಂಸತ್ತಿನ ಕಾರ್ಯವೈಖರಿಯ ಬಗ್ಗೆ ನಾನು ಸತ್ಯಾಧಾರಿತವಾಗಿ ನೀಡಿದ್ದ ಅಭಿಪ್ರಾಯಗಳು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಕೆಲವು ನೀತಿಗಳ ಕುರಿತಾದ ಟೀಕೆಗಳಿದ್ದವು. ಈ ನೀತಿಗಳು ಭಾರತದ ಸಾರ್ವಜನಿಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ ಎಂದು ನಾನು ನಂಬಿರುವುದರಿಂದ, ಅವುಗಳನ್ನು ವಿಮರ್ಶಿಸುವುದು ವಿಪಕ್ಷ ನಾಯಕನಾಗಿ ನನ್ನ ಕರ್ತವ್ಯವೂ ಆಗಿದೆ” ಎಂದು ಖರ್ಗೆ ಹೇಳಿದರು.
ಖರ್ಗೆ ಅವರ ಮಾತಿಗೆ ಪ್ರತಿಕ್ರಿಯಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯಸಭೆಯ ಕಲಾಪಕ್ಕೆ ಸಂಬಂಧಿಸಿದ ನಿಯಮ 261 ಅನ್ನು ಉಲ್ಲೇಖಿಸಿದರು. ಭಾಷಣದ ಭಾಗಗಳನ್ನು ತೆಗೆದುಹಾಕುವ ವಿವೇಚನಾ ಅಧಿಕಾರ ಸಭಾಪತಿಗಳಿಗೆ ಇದೆ ಎಂದ ಅವರು, ವಿರೋಧ ಪಕ್ಷದ ನಾಯಕರು ಅಧ್ಯಕ್ಷರ ನಿರ್ಧಾರವನ್ನು ಪ್ರಶ್ನಿಸುವ ಮೂಲಕ ಅವರಿಗೆ ಅಗೌರವ ತೋರುತ್ತಿದ್ದಾರೆ ಎಂದರು.
ಖರ್ಗೆ ಅವರು ತಾನು ಯಾವುದೇ ಅಸಂಸದೀಯ ಅಥವಾ ಅಗೌರವದ ಮಾತುಗಳನ್ನಾಡಿಲ್ಲ ಎಂಬ ಸ್ವಯಂ ತೀರ್ಮಾನಕ್ಕೆ ಬಂದು, ಅಧ್ಯಕ್ಷರು ಆ ಮಾತುಗಳನ್ನು ತೆಗೆದುಹಾಕಿರುವ ಕ್ರಮವನ್ನು ಪ್ರಶ್ನಿಸುತ್ತಿದ್ದಾರೆ. ಪ್ರಧಾನಿಯನ್ನು ರಕ್ಷಿಸುವ ಉದ್ದೇಶದಿಂದ ಭಾಷಣದ ಭಾಗಗಳನ್ನು ಅಳಿಸಲಾಗಿದೆ ಎಂದು ಹೇಳುವುದು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸೂಕ್ತವಾದುದಲ್ಲ ಎಂದು ಸೀತಾರಾಮನ್ ಆಕ್ಷೇಪ ವ್ಯಕ್ತಪಡಿಸಿದರು.
ಸಭೆಯ ನಿಯಮ 261 ಅನ್ನು ಉಲ್ಲೇಖಿಸಿದ ಸೀತಾರಾಮನ್, ಚರ್ಚೆಯ ಸಂದರ್ಭದಲ್ಲಿ ಯಾವುದೇ ಸಚಿವರು ಅಥವಾ ಸದಸ್ಯರು ಬಳಸಿದ ಪದಗಳು ಮಾನಹಾನಿಕರ, ಅಸಭ್ಯ, ಅಸಂಸದೀಯ ಅಥವಾ ಘನತೆಗೆ ತಕ್ಕುದಲ್ಲದವು ಎಂದು ಸಭಾಪತಿಗಳು ಅಭಿಪ್ರಾಯಪಟ್ಟರೆ, ಅಂತಹ ಪದಗಳನ್ನು ಸದನದ ನಡಾವಳಿಗಳಿಂದ ತೆಗೆದುಹಾಕಲು ತಮ್ಮ ವಿವೇಚನಾ ಅಧಿಕಾರವನ್ನು ಬಳಸಿ ಆದೇಶಿಸಬಹುದು ಎಂದರು.


