2012ರ ದೆಹಲಿ ನಿರ್ಭಯ ಅತ್ಯಾಚಾರ ಪ್ರಕರಣದ ಅಪರಾಧಿ ಪವನ್ ಸಲ್ಲಿಸಿದ್ದ ಕ್ಷಮಾದಾನ ಮನವಿಯನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ತಿರಸ್ಕರಿಸಿದ್ದಾರೆ.
ಮಾರ್ಚ್ 2 ಸೋಮವಾರದಂದು ಮರಣದಂಡನೆಯನ್ನು ತಡೆಯಲು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು. ಅವರನ್ನು ನಿನ್ನೆ (ಮಂಗಳವಾರ) ಬೆಳಿಗ್ಗೆ 6 ಗಂಟೆಗೆ ಗಲ್ಲಿಗೇರಿಸಬೇಕಾಗಿತ್ತು.
ಜನವರಿ 22 ಮತ್ತು ಫೆಬ್ರವರಿ 1 ರಂದು ಮರಣದಂಡನೆಯನ್ನು ರದ್ದುಗೊಳಿಸುವಂತೆ ಅಪರಾಧಿಗಳು ಅರ್ಜಿಯನ್ನು ಸಲ್ಲಿಸಿದರು. ಫೆಬ್ರವರಿ 5ರಂದು ದೆಹಲಿ ಹೈಕೋರ್ಟ್ ರಾಷ್ಟ್ರಪತಿಗೆ ಕ್ಷಮಾದಾನದ ಅರ್ಜಿಗಳು ಸೇರಿದಂತೆ ಎಲ್ಲಾ ಕಾನೂನು ಪರಿಹಾರಗಳನ್ನು ಮುಗಿಸಲು ನಾಲ್ವರಿಗೂ ಒಂದು ವಾರವಿದೆ ಎಂದು ಆದೇಶಿಸಿತ್ತು. ಅಲ್ಲದೆ ಅವರನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸಲು ಸಾಧ್ಯವಿಲ್ಲ ಎಂದು ಕೂಡ ಹೇಳಿತ್ತು.
ಕ್ಷಮಾದಾನ ಮನವಿ ಬಾಕಿ ಇದೆ ಎಂಬ ಕಾರಣಕ್ಕೆ ಮರಣದಂಡನೆಯನ್ನು ನಿಲ್ಲಿಸುವಂತೆ ಕೋರಿ ಪವನ್ ಕೆಳ ನ್ಯಾಯಾಲಯಕ್ಕೆ ಹೊಸ ಅರ್ಜಿಯನ್ನು ಸಲ್ಲಿಸಿದ್ದರು. ಅದನ್ನು ನ್ಯಾಯಾಲಯ ಪುರಸ್ಕರಿಸಿತ್ತು.
ಮರಣ ದಂಡನೆಯಿಂದ ತಪ್ಪಿಸಲು ಅಪರಾಧಿಗಳ ಮುಂದೆ ಇದ್ದ ಎಲ್ಲಾ ದಾರಿಗಳು ಇಲ್ಲಿಗೆ ಮುಕ್ತಾಯವಾಯಿತು. ರಾಷ್ಟ್ರಪತಿ ಕ್ಷಮಾದಾನವನ್ನು ತಿರಸ್ಕರಿಸಿದರೆ, ಅಪರಾಧಿಯನ್ನು 14 ದಿನಗಳ ನಂತರ ಗಲ್ಲಿಗೇರಿಸಬಹುದು ಎಂದು ಕಾನೂನು ಹೇಳುತ್ತದೆ.
2012ರಲ್ಲಿ ಯುವತಿಯ ಮೇಲೆ ಚಲಿಸುವ ಬಸ್ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರದಲ್ಲಿ ಹದಿಹರೆಯದ ಬಾಲಕನನ್ನು ಸೇರಿಸಿ ಆರು ಮಂದಿಯನ್ನು ಬಂಧಿಸಲಾಗಿತ್ತು. ಮುಖ್ಯ ಆರೋಪಿಗಳಲ್ಲಿ ಒಬ್ಬರಾದ ರಾಮ್ ಸಿಂಗ್ ಈ ಹಿಂದೆ ಜೈಲಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಹದಿಹರೆಯದ ಬಾಲಕನನ್ನು ಮೂರು ವರ್ಷಗಳ ನಂತರ ಬಿಡುಗಡೆ ಮಾಡಲಾಗಿತ್ತು.


